-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 83

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 83

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 83
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ನಾನು ಮುಂದಿನ ವಾರ ಏನನ್ನು ಬರೆಯಬೇಕು ಎಂದು ಯೋಚಿಸುತ್ತಾ ವಿಷಯ ಸಂಗ್ರಹಿಸುತ್ತಿರುವಾಗಲೇ ಮಂಗಳವಾರ ಕಳೆದು ಬುಧವಾರ ಸೂರ್ಯ ಆಗಲೇ ಮಾರುದ್ದ ಮೇಲೆ ಬಂದಿರುತ್ತಾನೆ. ಆಗ ನಿಮ್ಮ ತಾರಾನಾಥ ಸರ್ ಅವರ "ಸರ್ ಲೇಖನ" ಎಂಬ ಸಂದೇಶ ನನ್ನನ್ನು ಎಚ್ಚರಿಸುತ್ತದೆ. ಆಗಲೇ ನಾನು ವಾಸ್ತವ್ಯಕ್ಕೆ ಬರುವುದು. ಗಡಿ ಬಿಡಿ ಯಲ್ಲಿ ಬರೆಯಲು ಆರಂಭಿಸುತ್ತೇನೆ. ಆದ್ದರಿಂದ ನಾನು ಬರೆಯುತ್ತಿಲ್ಲ ನಿಮ್ಮ ತಾರಾನಾಥ ಸರ್ ಬರೆಸುತ್ತಾರೆ. ಈ ವಾರದ ಲೇಖನಕ್ಕೆ ಒಂದು ಹಂತದ ವರೆಗೆ ಸಿದ್ಧ ಮಾಡಿಕೊಂಡಿದ್ದೆ. ಈ ಮಕ್ಕಳ ಜಗಲಿಯಲ್ಲಿ ಪ್ರಕಟಗೊಳ್ಳುವ ಎಲ್ಲ ಲೇಖನಗಳನ್ನು ಆಸಕ್ತಿಯಿಂದ ಮತ್ತು ಆಸ್ಥೆಯಿಂದ ಓದಿ ಜಗಲಿ ಕಟ್ಟೆಗೆ ಪ್ರತಿವಾರವೂ ಬರೆಯುವ ಶ್ರೀ ಶ್ರೀರಾಮ ಮೂರ್ತಿ ಸರ್ ಮುಂದಿನ ವಾರ ರಾಮನ್ ಚದುರುವಿಕೆಯ ಲೇಖನ ಬರಬಹುದೇ ಎಂದು ಕೇಳಬಹುದು.‌ ರಾಮನ್ ಪರಿಣಾಮದ ಬಗ್ಗೆ ಬರೆಯಬೇಕು ಎಂದರೆ ಪಕ್ಕಾ ಭೌತಶಾಸ್ತ್ರದ ವಿದ್ಯಾರ್ಥಿಯಾಗಿರಬೇಕು. ಆದರೆ ನಾನೋ ಜೀವಶಾಸ್ತ್ರದ ವಿದ್ಯಾರ್ಥಿ. ಹಾಗೆ ತಪ್ಪುಗಳು ಬರಬಹುದು.

ಭಾರತದ ಭೌತ ವಿಜ್ಞಾನಿ ಭಾರತ ರತ್ನ ಸರ್ ಸಿ ವಿ ರಾಮನ್ ಯಾರಿಗೆ ಗೊತ್ತಿಲ್ಲ ಅಲ್ಲವೇ? ಹೌದು ಭಾರತಕ್ಕೆ ಭೌತ ಶಾಸ್ತ್ರದಲ್ಲಿ ನೊಬೆಲ್ ಗೌರವ ತಂದವರು ಅವರು. ಎಲ್ಲರೂ ಅವರನ್ನು ಸರ್ ಸಿ ವಿ ರಾಮನ್ ಎಂದು ಕರೆಯುವುದು ರೂಢಿ. ಬ್ರಿಟನ್ ನಲ್ಲಿ ನೈಟ್ ಹುಡ್ (Knighthood) ವಿಶೇಷವಾಗಿ ಪುರುಷರಿಗೆ ನೀಡುವ ಒಂದು ವೈಯಕ್ತಿಕ ನಾಗರಿಕ ಪ್ರಶಸ್ತಿ. ನೈಟ್ ಹುಡ್ ಪದವಿ ಪಡೆದವರನ್ನು "ಸರ್" ಎಂದು ಕರೆಯುತ್ತಾರೆ. ಗುರುದೇವ ರವೀಂದ್ರನಾಥ ಠಾಕೂರರೂ ಕೂಡಾ ನೈಟ್ ಹುಡ್ ಪದವಿ ಪುರಸ್ಕೃತರು. ಆದರೆ ಗುರುದೇವ ಅವರು 1919 ರಲ್ಲಿ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ನಡೆಸಿದ ಜಲಿಯನ್ ವಾಲಾಬಾಗ್ ನರಮೇಧವನ್ನು (ನಮ್ಮ ಚರಿತ್ರೆಯ ಪುಸ್ತಕಗಳಲ್ಲಿ ಇದು ಜಲಿಯನ್ ವಾಲಾ ಬಾಗ್ ದುರಂತ ಎಂದು ದಾಖಲಾಗಿದೆ ಅಲ್ಲವೇ) ಅತ್ಯುಗ್ರವಾಗಿ ಖಂಡಿಸಿದರು. ಅವರು ಖಂಡಿಸಿದ್ದು ಮಾತ್ರವಲ್ಲ ಬ್ರಿಟಿಷ್ ಅರಸೊತ್ತಿಗೆ ನೀಡಿದ್ದ ನೈಟ್ ಹುಡ್ ಪದವಿಯನ್ನು "ನೀವೂ ಬೇಡ ನಿಮ್ಮ ಪದವಿಯೂ ಬೇಡ" ಎಂದು ಹಿಂದಿರುಗಿಸಿದ್ದರು. ಆದ್ದರಿಂದ ನಾವು ರವೀಂದ್ರನಾಥ ಠಾಕೂರರನ್ನು ಸರ್ ಎಂದು ಕರೆಯುವುದಿಲ್ಲ. ಎಂ. ವಿಶ್ವೇಶ್ವರಯ್ಯ, ಭಾರತ ರತ್ನ ಡಾ| ರಾಧಾಕೃಷ್ಣನ್ ಕೂಡಾ ಸರ್ ಗಳೇ. 1954 ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ, ಡಾ| ರಾಧಾಕೃಷ್ಣನ್ ಅವರೊಂದಿಗೆ ಸಿ. ವಿ. ರಾಮನ್ ಅವರನ್ನು ಕೂಡಾ ಭಾರತ ರತ್ಙ ಎಂದು ಗೌರವಿಸಲಾಯಿತು. ಆದ್ದರಿಂದ ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ನಮಗೆ ಎಲ್ಲಕ್ಕಿಂತ ದೊಡ್ಡದು ಆದ್ದರಿಂದ ಅವರನ್ನು ಭಾರತರತ್ನ ಎಂದೇ ಕರೆಯೋಣ.

ಈ ಭಾರತರತ್ನ ಸರ್ ಸಿ ವಿ ರಾಮನ್ ಅವರು 1930 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಬೆಳಕಿನ ಚದುರುವಿಕೆಯ ಆಧಾರದ ಮೇಲೆ ರಾಸಾಯನಿಕ ವಸ್ತುಗಳ ಗುಣಗಳ ಬಗ್ಗೆ ತಿಳಿಸಬಹುದು ಎಂಬ ಇವರ ಸಂಶೋಧನೆ ಆಗ ಪರಿಣಾಮಕಾರಿ ಮೈಲಿಗಲ್ಲಾಗಿತ್ತು. ಈ ಪ್ರಕ್ರಿಯೆಯನ್ನು ರಾಮನ್ (Raman scattering) ಚದುರುವಿಕೆ ಅಥವಾ ರಾಮನ್ ಪರಣಾಮ (Raman effect) ಎನ್ನುವರು. 
ಈ ರಾಮನ್ ಚದುರುವಿಕೆ ಎಂದರೇನು, ಇದು ರೇಲಿ ಚದುರುವಿಕೆಗಿಂತ (Rayliegh scattering) ಹೇಗೆ ಭಿನ್ನ ಮತ್ತು ರಾಮನ್ ಪರಿಣಾಮದ ಉಪಯೋಗಗಳೇನು ಎಂಬ ಬಗ್ಗೆ ಮುಂದಿನ ವಾರ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article