-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 106

ನಿಷ್ಪಾಪಿ ಸಸ್ಯಗಳು : ಸಂಚಿಕೆ - 106

ನಿಷ್ಪಾಪಿ ಸಸ್ಯಗಳು : ಸಂಚಿಕೆ - 106
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

    
ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಬಿರುಸಾಗಿ ಸುರಿಯುತ್ತಿದ್ದ ಮಳೆ ಕೆಲದಿನಗಳ ವಿರಾಮದಲ್ಲಿದೆ. ಇಂದು ಮೂರ್ತಿ ಸರ್ ಮನೆಯಲ್ಲಿ ವೀಳ್ಯದೆಲೆ ಬಳ್ಳಿ ನೆಡುವ ಕೆಲಸ ನಡೆಯುತ್ತಿದೆ.. ನಾವೆಲ್ಲರೂ ಅವರ ಮನೆಗೆ ಹೋಗೋಣವೇ?

ಕಾರ್ತಿಕ್ : ಸರಿ ಗುರುಗಳೇ, ಹೇಗೂ ಇಂದು ರಜಾ ದಿನ.

ಗುರುಗಳು: ಸರಿ. ವಿಮಲಾ, ಸೋನಿ ನೀವೂ ಬನ್ನಿ. ರಾಜೇಶ್ ಮತ್ತು ಹೆನ್ರಿ ಈಗಾಗಲೇ ಸಿದ್ಧರಾಗಿದ್ದಾರೆ.

ವಿಮಲಾ: ಸರಿ ಸರ್. ಮೂರ್ತಿ ಸರ್ ಮನೆಯಲ್ಲಿ ಬೇರೆ ಬೇರೆ ರೀತಿಯ ತರಕಾರಿ ಗಿಡಗಳನ್ನೂ ನೆಡುತ್ತಾರೆ. ಅವನ್ನು ನೋಡೋದೂ ಒಂದು ಖುಷಿ.

ಗುರುಗಳು: ಅಷ್ಟು ಮಾತ್ರವಲ್ಲ ವಿಮಲಾ, ಅವರು ಮಿಶ್ರ ಬೆಳೆಗಳನ್ನು ಬೆಳೆಯುತ್ತಾರೆ. ವೀಳ್ಯದೆಲೆ ಬೆಳೆಸುವುದರಿಂದಲೂ ಉಪ ಸಂಪಾದನೆ ಗಳಿಸುತ್ತಾರೆ.

ಸೋನಿ: ಗುರುಗಳೇ, ಮೂರ್ತಿ ಸರ್ ಕೆಲಸಗಾರರ ಜೊತೆಗೇ ಕಾಣಿಸ್ತಿದ್ದಾರೆ ನೋಡಿ.. ಅಲ್ಲೇ ಗುಡ್ಡದ ಬದಿಯಲ್ಲಿ ಕಾಣಿಸ್ತಿದ್ದಾರೆ!

ಹೆನ್ರಿ: ಗುರುಗಳೇ, ಅವರು ವೀಳ್ಯದೆಲೆ ನೆಡುವ ಕೆಲಸ ಮಾಡ್ತಾ ಇಲ್ಲ. ಯಾವುದೋ ಗಿಡಗಳನ್ನು ಕತ್ತರಿಸುತ್ತಿದ್ದಾರೆ.

ಗುರುಗಳು: ಹೌದಲ್ಲವೇ! ಆದರೆ ನಿನ್ನೆ ಸಿಕ್ಕಾಗ ವೀಳ್ಯದೆಲೆ ಬಳ್ಳಿ ನೆಡುವ ಬಗ್ಗೆ ಹೇಳಿದ್ದರು. ನೋಡೋಣ, ಅವರಲ್ಲೇ ವಿಚಾರಿಸೋಣ ಬನ್ನಿ.

ಮಕ್ಕಳು: ಸರ್ ನಮಸ್ತೆ.

ಮೂರ್ತಿ ಸರ್: ಓಹೋಹೋ., ಮಕ್ಕಳೇ ನಮಸ್ತೆ.

ಗುರುಗಳು: ಸರ್ ನಮಸ್ತೆ. ನೀವು ವೀಳ್ಯದೆಲೆ ಬಳ್ಳಿ ನೆಡುವ ಕೆಲಸ ಮಾಡೋದನ್ನು ನೋಡಲೆಂದು ಬಂದೆವು. ಆದರೆ ನೀವು ಗಿಡಗಳನ್ನು ಕಡಿಯುವ‌ ಕೆಲಸ ಮಾಡುತ್ತಿರುವಿರಿ!

ಮೂರ್ತಿ ಸರ್: ನಮಸ್ತೆ ಸರ್. ನಾವು ನಿಜವಾಗಿಯೂ ಅದೇ ಕೆಲಸ ಮಾಡ್ತಿದ್ದೇವೆ. ವೀಳ್ಯದೆಲೆ ಬಳ್ಳಿ ನೆಡಲು ಒಂದು ಆಧಾರ ಬೇಕಲ್ವೆ. ಅದಕ್ಕಾಗಿ ಈ ಗಿಡದ ಗೆಲ್ಲುಗಳನ್ನು ತಯಾರಿಸ್ತಿದ್ದೇವೆ.

ಕಾರ್ತಿಕ್: ಒಂದೇ ಜಾತಿಯ ಗಿಡದ ಗೆಲ್ಲುಗಳನ್ನು ಕಡಿಯುತ್ತಿದ್ದೀರಾ ಸರ್? 

ಸೋನಿ: ಆಧಾರಕ್ಕಾಗಿ ನೆಡುವ ಕೋಲು ಇದೇ ಗಿಡದ್ದಾಗಬೇಕೆ ಸರ್?

ಮೂರ್ತಿ ಸರ್: ಹೌದು ಹೌದು. ಈ ಗಿಡದ್ದೇ ಆಧಾರ ಬಳಸ್ತೇವೆ. ಬಳ್ಳಿ ಜೀವ ಹಿಡಿದು ಮೇಲೇರಲು ಅನುಕೂಲವಾಗುತ್ತದೆ.

ವಿಮಲಾ: ಆದರೆ ಇದರ ಮೈತುಂಬಾ ಮುಳ್ಳು ಗಳಿವೆ. ಜಾಗ್ರತೆಯಾಗಿ ಹಿಡಿಯಬೇಕಷ್ಟೆ.
ಸೋನಿ: ಸರ್ ಈ ಗಿಡದ ಹೆಸರೇನು?

ಮೂರ್ತಿ ಸರ್: ಹೌದು ಹೌದು.. ಇದರ ಮೈತುಂಬಾ ಮುಳ್ಳು ಗಳಿವೆ. ಇದನ್ನು ಕನ್ನಡದಲ್ಲಿ ಹೊಂಗಾರದ ಮರ, ಹಾಲಿವಾನ, ಹಾಲುವಾನ ಮರ ಎನ್ನುವರು.. ಹೆಮ್ಮುರುಕ ಅಂತಲೂ ಕರೀತಾರೆ. ಇಂಗ್ಲೀಷಲ್ಲಿ ಇಂಡಿಯನ್ ಕೋರಲ್ ಟ್ರೀ, ಸಂಸ್ಕೃತ ದಲ್ಲಿ ಪರಿಭದ್ರಾ ಎಂಬ ಹೆಸರುಗಳಿವೆ.

ಗುರುಗಳು: ಸರ್.. ತುಳು ಭಾಷೆಯಲ್ಲಿ ಪೊಂಗಾರ್ದ ಮರ ಅಂದ್ರೆ‌ ಇದೇ ಅಲ್ವಾ?

ಮೂರ್ತಿ ಸರ್: ಹೌದು ಸರ್ ಇದೇ. ಸಸ್ಯಶಾಸ್ತ್ರೀಯ ಹೆಸರು ಎರಿಥ್ರಿನಾ ಸ್ಡ್ರಿಕ್ಟ (Erithrina stricta). 1832 ರಲ್ಲಿ ವಿಲಿಯಂ ರಾಕ್ಸ್ ಬರ್ಗ್ ಗುರುತಿಸಿದ ಫ್ಯಾಬೇಸಿ ಕುಟುಂಬದ ಸಸ್ಯವಿದು. ಎರಿಥ್ರಿನಾ ಇದರ ಕುಲನಾಮ.

ಕಾರ್ತಿಕ್: ಈ ಹೊಂಗಾರೆ ಮರದ ವಿಶೇಷತೆ ಏನು ಸರ್?

ಮೂರ್ತಿ ಸರ್: ಮಕ್ಕಳೇ, ಈ ಗಿಡದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ. ನಾವು ಇಲ್ಲಿ ನಿಂತು ಮಾತನಾಡಿ ಮುಗಿಯದು. ಬನ್ನಿ ಮನೆಗೆ ಹೋಗೋಣ. ರುಚಿಯಾದ ಕಷಾಯ ಕುಡಿಯೋಣ.

ಗುರುಗಳು: ಹಾಗೇ ಆಗಲಿ ಸರ್. ಹೊರಡೋಣ.
ಮಕ್ಕಳೇ .. ಓ ಅಲ್ಲಿ ಕಾಣುತ್ತಿರುವುದೇ ಮೂರ್ತಿ ಸರ್ ಮನೆ. ಬನ್ನಿ ಹೋಗೋಣ.

ಹೆನ್ರಿ: ನನಗೆ ಈ ಗಿಡದ ಪರಿಚಯ ಇದೆ ಕಾರ್ತಿಕ್. ನನಗೀಗ ನೆನಪಾಯ್ತು.

ಕಾರ್ತಿಕ್: ಹೌದಾ! ನಿಮ್ಮ ಮನೇಲಿ ಈ ಗಿಡ ಇದೆಯಾ?

ಹೆನ್ರಿ: ಹೌದು ಕಾರ್ತಿಕ್. ನನ್ನ ಅಣ್ಣನ ಕಾಲಿಗೆ ಒಮ್ಮೆ ಮುಳ್ಳು ಚುಚ್ಚಿತ್ತು. ಚುಚ್ಚಿದ ಮುಳ್ಳನ್ನು ತೆಗೆಯಲಾಗದೆ ಕಾಲಲ್ಲೆ ಉಳಿದು ನೋವು ಆರಂಭವಾದಾಗ ಈ ಹೊಂಗಾರೆ ಮರದ ಎಲೆಯ ಕಡ್ಡಿಯನ್ನು ಬಿಸಿಮಾಡಿ ಬಿಸಿಬಿಸಿ ನೀರನ್ನು ಗಾಯಕ್ಕೆ ಬಿಟ್ಟಾಗ ನೋವು ಕಡಿಮೆಯಾದದ್ದೇ ಅಲ್ಲದೆ ಮುಳ್ಳೂ ಹೋಗಿತ್ತು.

ಕಾರ್ತಿಕ್: ಹೌದಾ!
ಮೂರ್ತಿ ಸರ್: ಬನ್ನಿ ಮಕ್ಕಳೇ ಕುಳಿತುಕೊಳ್ಳಿ. 

ಗುರುಗಳು: ಬನ್ನಿ ಮಕ್ಕಳೇ ಕುಳಿತುಕೊಂಡು ಮಾತನಾಡೋಣ. ಈ ಮಳೆಗಾಲಕ್ಕೆ ತಕ್ಕುದಾದ ಕಷಾಯ... ತುಂಬಾ ಹಿತವಾಗಿದೆ ಸರ್.. 

ವಿಮಲಾ: ನಮಗೆ ಈ ಹೊಂಗಾರೆ ಮರದ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತು ಸರ್. ಇದನ್ನು ಮಲ್ಲಿಗೆ ಬಳ್ಳಿ ಹಬ್ಬಿಸಲು ಕೂಡ ನೆಡುವರಲ್ಲವೆ? ನಮ್ಮ ಮನೆಯಲ್ಲಿ ಮಲ್ಲಿಗೆ ಇದೇ ಮರದಲ್ಲಿ ಇದೆಯೆನಿಸ್ತದೆ.

ಮೂರ್ತಿ ಸರ್ : ಹೌದು ಹೌದು. ಮಲ್ಲಿಗೆ ಬಳ್ಳಿಗೂ ಈ ಹೊಂಗಾರೆಯನ್ನು ಆಧಾರವಾಗಿ ನೆಡುವರು.ಅದು ಅಲ್ಲೇ ಚಿಗುರಿ ಮರವಾಗಿ ಬೆಳೆಯುತ್ತದೆ. ಮರ ತುಂಬಾ ಎತ್ತರವೇನೂ ಆಗೋದಿಲ್ಲ.ಬೂದಿ ಬಣ್ಣದ ಕಾಂಡವಿರುತ್ತದೆ. ಮರ ದಪ್ಪವಾಗುತ್ತಿದ್ದಂತೆ ಮುಳ್ಳು ಗಳು ವಿರಳವಾಗುತ್ತವೆ.

ಗುರುಗಳು: ಸರ್ ಇದರಲ್ಲಿ ಎರಡು ವಿಧವಿದೆಯಲ್ವಾ

ಮೂರ್ತಿ: ಹೌದು ಸರ್. ಬಿಳಿ ಹೂವಿನ ಹೊಂಗಾರಕ ಹಾಗೂ ಕೆಂಪು ಹೂವಿನ ಹೊಂಗಾರಕ. ಕೆಂಪು ಬಣ್ಣದ ಹೂಗಳಿಂದಾಗಿ ಹವಳದ ಮರ ಎಂದೂ ಹೆಸರಿದೆ.

ಸೋನಿ: ಇದರ ಎಲೆಗಳೂ ವಿಶಿಷ್ಟವಾಗಿವೆ. ಗಾಳಿಪಟದಂತಹ ಮೂರು ಮೂರು ಎಲೆಗಳು ಒಂದೇ ತೊಟ್ಟಿಗೆ ಜೋಡಣೆಗೊಂಡು ಮೋಹಕ ಹಸಿರಾಗಿ ಬಿಸಿಲಿಗೆ ಹರಡಿಕೊಂಡಿರುತ್ತವೆ.

ಮೂರ್ತಿ ಸರ್: ಹೌದು.ಅಲ್ಲದೆ ತರಗೆಲೆಗಳನ್ನು ರಾಶಿ ಮಾಡಿ ಬೆಂಕಿಕೊಟ್ಟು ಅದರ ನಡುವೆ ಮಣ್ಣಿನ ಹೊಸ ಮಡಿಕೆಗಳನ್ನು ಇಟ್ಟು ಮಡಿಕೆಗಳ ಕೆಂಪು ಬಣ್ಣವು ಕಪ್ಪಾದ ಮೇಲೆ ಜಜ್ಜಿದ ಹೊಂಗಾರೆ ಎಲೆಯಿಂದ ಉಜ್ಜುತ್ತಿದ್ದರು. ಆ ಮೇಲೆ ಆ ಪಾತ್ರೆಗಳನ್ನು ಬಳಕೆಗೆ ಯೋಗ್ಯವೆಂದು ಪರಿಗಣಿಸಲಾಗುತ್ತಿತ್ತು.

ಸೋನಿ: ಹೋ!

ಮೂರ್ತಿ ಸರ್: ಇದರ ಎಲೆಗಳಿಗೆ ಹಿಟ್ಟು ಹಚ್ಚಿ ಕಡುಬು ಮಾಡಿದರೆ ಭಾರೀ ಪರಿಮಳ!. ಹಿಂದೆ ಹಳ್ಳಿಗಳಲ್ಲಿ ಮಾರಿ ಓಡಿಸುವ ಕ್ರಮವಿತ್ತು. ಆಗ ಬಳಸುತ್ತಿದ್ದ ಗೊಂಬೆಗೆ ಹೊಂಗಾರೆ ಮರವೇ ಆಗಬೇಕಿತ್ತು.

ಗುರುಗಳು: ಯಕ್ಷಗಾನದಲ್ಲಿ ಬಳಸುವ ಕಿರೀಟಗಳು, ಮಣಿಗಳು, ಆಭರಣಗಳು, ಮಕ್ಕಳ ಆಟದ ಗೊಂಬೆಗಳ ತಯಾರಿಗೂ ಇದೇ ಮರದ ಬಳಕೆ ಅಲ್ವೇ ಸರ್?

ಮೂರ್ತಿ ಸರ್: ಹೌದು ಹೌದು. ಈ ಸಾರಣೆ ಕೆಲಸ ಮಾಡುವವರ ಕೈಯಲ್ಲಿ ಬುರ್ನಾಸ್ ಎಂಬ ಸಲಕರಣೆಯೊಂದು ಇರುತ್ತದೆ ನೋಡಿದ್ದೀರಾ? ಅದೂ ಇದೇ ಮರದ್ದು. ಜಾನುವಾರುಗಳಿಗೆ ಇದರ ಸೊಪ್ಪು ಬಹಳ ಪ್ರಿಯವಾದುದು. ಚೆನ್ನೆಮಣೆ ಆಟದಲ್ಲಿ ಇದರ ಕಾಯಿಯನ್ನು ಬಳಸುತ್ತಾರೆ.

ಹೆನ್ರಿ: ಸರ್ ನಮ್ಮಣ್ಣ ಇದರ ಬೀಜವನ್ನು ಸಿಮೆಂಟ್ ನೆಲಕ್ಕೆ ಉಜ್ಜಿ ಬಿಸಿ ಮಾಡಿ ನಂಗೆ ಕಾಯಿಸಿ ಇಡ್ತಾನೆ.

ಗುರುಗಳು: ಹ್ಹ ಹ್ಹ ಹ್ಹ...ಹೌದಾ! ಬಾವಿ ತೋಡುವಾಗ ಹೊಂಗಾರೆ ಮರದ ಚೌಕ ಮಾಡಿ ಬಳಸ್ತಾರೆ... ಅಂತ ಹೇಳ್ತಾರೆ.

ಮೂರ್ತಿಸರ್: ಹೌದು ಸರ್. ಇದು ಬಾರೀ ಉಪಯುಕ್ತವಾದ ಮರ ಎಂದು ನಿಮಗೀಗ ಅರ್ಥವಾಗಿದೆಯಲ್ವಾ ಮಕ್ಕಳೇ? ಆದರೆ ಇದಕ್ಕಿಂತಲೂ ಹೆಚ್ಚಾಗಿ ಹೊಂಗಾರೆ ಒಂದು ಔಷಧೀಯ ಸಸ್ಯವೆಂದು ನಮಗೆ ತಿಳಿದಿರಬೇಕು. ಅಕಾಲಿಕವಾಗಿ ಜನಿಸುವ ಶಿಶುಗಳ ಸಂರಕ್ಷಣೆಗೆ ಈಗ ಸಾಕಷ್ಟು ಆಧುನಿಕ ಸಾಧನಗಳು, ತಂತ್ರಜ್ಞಾನಗಳಿವೆ. ಆದರೆ ಹಿಂದೆ ಇಂತಹ ಶಿಶುವಿನ ದೇಹದಾದ್ಯಂತ ಮೊಟ್ಟೆಯ ಬಿಳಿಯನ್ನು ಹಚ್ಚಿ ಈ ಹೊಂಗಾರಕದ ಎಲೆಗಳಿಂದ ಮುಚ್ಚುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೇನೆ. ಎಳೆಯ ಶಿಶುಗಳನ್ನು ಸ್ನಾನ ಮಾಡಿಸಲು ಈಗಲೂ ಇದರ ಸೊಪ್ಪಿನ ಕಷಾಯ ಬಳಸತ್ತಾರೆ. ಕಫ, ವಾತದೋಷದ ಸಮತೋಲನ, ಜೀರ್ಣಕ್ರಿಯೆ ಸುಧಾರಣೆ, ಕೊಲೆಸ್ಟರಾಲ್ ಕಡಿಮೆ ಮಾಡಲು, ಬೊಜ್ಜು ನಿವಾರಣೆಗೆ, ಯಕೃತ್ತಿನ ಕಾಯಿಲೆಗೆ, ಉರಿಯೂತ, ಜ್ವರ ನಿವಾರಣೆ, ಸಂಧಿವಾತ, ಕಿವಿನೋವು, ನಂಜು ನಿರೋಧಕ, ಗರ್ಭಾಶಯಕ್ಕೆ ಉತ್ತಮ ಟಾನಿಕ್ ಆಗಿಯೂ ಪಾರಂಪರಿಕ ಔಷಧಿಯಾಗಿ ಬೆಳೆದುಬಂದಿದೆ. ರಕ್ತ ಹೆಪ್ಪು ಕಟ್ಟುವಿಕೆಗೆ , ಉತ್ತಮ ರಕ್ತ ಪರಿಚಲನಾ ವ್ಯವಸ್ಥೆಗೂ ಸಹಕಾರಿಯಾಗಿದೆ. ಇದರ ತೊಗಟೆ, ಎಲೆ, ಹೂ, ಬೀಜಗಳೂ ಉಪಯುಕ್ತವಾಗಿವೆ. ಮೂತ್ರಪಿಂಡದಾಕಾರದಲ್ಲಿರುವ ಇದರ ಕಂದು ಬೀಜಗಳ ಸಾರಕ್ಕೆ ಸಾಮಾನ್ಯವಾಗಿ ಕೆ.ಜಿಗೆ ಅಂದಾಜು 4600.00 ರೂ, ಎಣ್ಣೆಗೆ 3700.00 ರೂಗಳಿದ್ದರೆ ಪುಡಿಗೆ 2000.00 ರೂಪಾಯಿಗಳಿಗೂ ಹೆಚ್ಚು ಕ್ರಯವಿದೆಯೆಂದು ಎನ್ನುವರು. ನಾನೇನು ಮಾರಾಟ ಮಾಡಿಲ್ಲ. ನಾವು ವೀಳ್ಯದೆಲೆ ಮತ್ತು ಕರಿಮೆಣಸಿನ ಬಳ್ಳಿ ನೆಡಲು ಬಳಸುತ್ತೇವೆ. ಭಾರತ, ನೇಪಾಳ, ಮ್ಯಾನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ, ಚೀನ ದಲ್ಲಿ ಹಬ್ಬಿರುವ ಹೊಂಗಾರಕ ಪತನಶೀಲ ಕಾಡಿನ ಸಸ್ಯವಾಗಿದೆ. ಪಾಲಾಶ ಮರವನ್ನು ಹೋಲುತ್ತದೆಯಾದರೂ ಇದರಲ್ಲಿ ಮುಳ್ಳುಗಳಿವೆ. ಆದರೆ ಮುಳ್ಳು ಇಲ್ಲದ ಹೊಂಗಾರೆಯೂ ಇದೆ. ಹೊಂಗಾರ‌ 60 ಅಡಿಗಳೆತ್ತರ ಬೆಳೆಯಬಲ್ಲದು ಎನ್ನುವರಾದರೂ ನಮ್ಮಲ್ಲಿ ಅಷ್ಟೆತ್ತರ ಬೆಳೆಯುವುದಿಲ್ಲ. ವಕ್ರವಕ್ರವಾಗಿ ಇದರ ಕೊಂಬೆಗಳಿತ್ತವೆ. ಬೇಸಿಗೆಯಲ್ಲಿ ರಕ್ತವರ್ಣದ ಮೋಹಕ ಹೂಗಳು ಗುಚ್ಛಗಳಾಗಿ ಅರಳುತ್ತವೆಯಾದರೂ ಆಗ ಬೋಳು ಮರವಿರುತ್ತದೆ. 

ಗುರುಗಳು: ಈ ಮರಕ್ಕೊಂದು ತುಳುವಲ್ಲಿ ಗಾದೆ ಮಾತೂ ಇದೆ ಸರ್. "ಮುಳ್ಳಿತ್ತಿ ಪೊಂಗಾರ್ ಬಡ್ತ್ ದ್ ಮುಳ್ಳಿಜ್ಜಂದಿ ಪೊಂಗಾರ್ ಡೆ ಜತ್ತಲ್ ಗೆ" ಅಂತ. ಅಂದರೆ ಮುಳ್ಳು ಇರುವ ಹೊಂಗಾರೆಯಲ್ಲಿ ಹತ್ತಿ ಮುಳ್ಳಿರದ ಹೊಂಗಾರೆಯಲ್ಲಿ ಇಳಿದಳಂತೆ" ಎಂದು. 
ಮೂರ್ತಿ ಸರ್: ಓ ಹೌದಾ! ನನಗದು ಗೊತ್ತಿರಲಿಲ್ಲ. ಈ ಮರದ ಬಗ್ಗೆ ಅತ್ಯಂತ ಬೇಸರದ ವಿಚಾರ ವೆಂದರೆ ಇತ್ತೀಚಿನ ದಿನಗಳಲ್ಲಿ ಮರಗಳೇ ನಶಿಸುತ್ತಿರುವುದು. ಹಿಂದೆ ಪ್ರತಿ ಮನೆಯಲ್ಲಿಯೂ ಇರುತ್ತಿದ್ದ ಹೊಂಗಾರೆ ಮರ ಈಗ ಅಪರೂಪಕ್ಕೆ ಕಾಣಿಸಿಕೊಂಡರೂ ಎಲೆಗಳು ಸುಕ್ಕು ಗಟ್ಟಿರುತ್ತವೆ. ಚಿಗುರುಗಳಲ್ಲಿ ಲವಲವಿಕೆಯಿಲ್ಲ. ಬಾಡಿದ ಮುಖದ ಗಿಡಗಳಷ್ಟೇ ಉಳಿದುಕೊಂಡಿವೆ. ಜನಸಾಮಾನ್ಯರು ಇದಕ್ಕೆ ಮೊಬೈಲ್ ಟವರ್ ಗಳು, ಅಸೀಮ ತರಂಗಾಂತರಗಳೇ ಕಾರಣವೆನ್ನುತ್ತಾರೆ. ಸಂಶೋಧಕರು ಈ ನಿಷ್ಪಾಪಿ ಸಸ್ಯದ ಮರಣೋತ್ತರ ಸಮೀಕ್ಷೆ ನಡೆಸುವಾಗ ಬಹುಶ: ಚಿತ್ರಗಳಷ್ಟೇ ಉಳಿದಿರುತ್ತವೇನೋ! ಬಲು ಸೂಕ್ಷ್ಮ ನಿಸರ್ಗವನ್ನು ಸ್ವಾರ್ಥಿ ಮನುಜ ಬಳಸುವುದರ ಜೊತೆಗೆ ಬೆಳೆಸಲೂ ಬಯಸಬೇಕಲ್ಲವೇ? ನೀವಾದರೂ ಒಂದು ಗೆಲ್ಲು ನೆಟ್ಟು ಪರಂಪರೆಗೆ ನೆರವಾಗುವಿರಾ?

ವಿಮಲ: ಹೌದು ಸರ್. ನಾವು ಆ ಪ್ರಯತ್ನ ಖಂಡಿತವಾಗಿಯೂ ಮಾಡಲಿದ್ದೇವೆ.

ಗುರುಗಳು: ಸರಿ ಮಕ್ಕಳೇ, ಮೂರ್ತಿ ಸರ್ ರವರಿಂದ ನಾವಿಂದು ಹೊಂಗಾರೆ ಮರದ ಬಗ್ಗೆ ಬಹಳಷ್ಟು ಮಾಹಿತಿ ಪಡೆದೆವು. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ. ಮೂರ್ತಿ ಸರ್.. ತಮಗೆ ಧನ್ಯವಾದಗಳು.

ಮೂರ್ತಿ ಸರ್: ಸರಿ ಸರ್. ಇನ್ನೊಮ್ಮೆ ಬನ್ನಿ. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article