-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 168

ಸ್ಫೂರ್ತಿಯ ಮಾತುಗಳು : ಸಂಚಿಕೆ - 168

ಸ್ಫೂರ್ತಿಯ ಮಾತುಗಳು : ಸಂಚಿಕೆ - 168
ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     

ಮನುಷ್ಯರಲ್ಲಿ ಆಸ್ತಿಕರು ಮತ್ತು ನಾಸ್ತಿಕರೆಂದು ಆಧ್ಯಾತ್ಮಿಕ ವಿಂಗಡಣೆಯನ್ನು ಓದುತ್ತೇವೆ. ಧರ್ಮ ಸಿದ್ಧಾಂತ, ಕರ್ಮ ಸಿದ್ಧಾಂತ, ಯೋಗ ಸಿದ್ಧಾಂತ ಮೊದಲಾದ ಸನಾತನ ಆಚಾರ ವಿಚಾರಗಳನ್ನು ನಂಬಿ ಆಚರಣೆ ಮಾಡುವವರನ್ನು ಆಸ್ತಿಕರೆನ್ನುತ್ತೇವೆ. ಇವರು ಭಗವಂತನ ಅಸ್ತಿತ್ವದಲ್ಲಿ ನಂಬುಗೆ ಮತ್ತು ಶ್ರದ್ಧೆಯನ್ನು ಹೊಂದಿರುತ್ತಾರೆ. ನಾಸ್ತಿಕರೆಂದರೆ ಆಸ್ತಿಕರ ನಂಬುಗೆ ಮತ್ತು ಸಿದ್ಧಾಂತಗಳನ್ನು “ನಾಸ್ತಿ” ಎನ್ನುವವರು, ಎಂದರೆ ದೇವರನ್ನು ನಂಬದವರು ಯಾ ಒಪ್ಪದವರು ಎನ್ನಬಹುದೇನೋ.

ಭಾರತೀಯತೆಯಲ್ಲಿ ಆಸ್ತಿಕತೆಗೆ ಹೆಚ್ಚು ಮಹತ್ವವಿರುವುದರಿಂದ ಆಸ್ತಿಕತೆಯ ಪ್ರಮಾಣಗಳನ್ನಾಧರಿಸಿದಾಗ ನಮ್ಮಲ್ಲಿ ಬ್ರಹ್ಮಚಾರಿಗಳು, ಗೃಹಸ್ಥರು, ಸಂತರು, ಸಾಧುಗಳು, ಸನ್ಯಾಸಿಗಳು, ಮುನಿಗಳು, ಋಷಿಗಳು ಮುಂತಾದ ವಿವಿಧ ಸ್ತರಗಳನ್ನೂ ನೋಡುತ್ತೇವೆ. ಅವರಲ್ಲಿರುವ ಆಧ್ಯಾತ್ಮಿಕತೆಯ ನೆಲೆಗಟ್ಟು, ಜೀವನ ಕ್ರಮಗಳು, ಧ್ಯೇಯಗಳು ಮುಂತಾದ ಸೈದ್ಧಾಂತಿಕ ಆದರ್ಶಗಳನ್ನಾಧರಿಸಿ ಈ ವಿಂಗಡಣೆಯನ್ನು ಮಾಡಿಕೊಂಡಿರಬಹುದು. ನಾಸ್ತಿಕರಲ್ಲೂ ಒಂದು ನಂಬುಗೆಯಿದೆ. ಆ ನಂಬಿಕೆಗಳನ್ನೂ ಜನಸಾಮಾನ್ಯರಾದ ನಾವು ಹೀಗಳೆಯುವಂತಿಲ್ಲ. ಅವರ ತತ್ವ ಸಿದ್ದಾಂತಗಳನ್ನೂ ಗೌರವಿಸಬೇಕು. ಪ್ರಪಂಚದಲ್ಲಿ ಅವರವರ ಚಿಂತನೆಯಲ್ಲಿ ಬದುಕು ಕಟ್ಟಲು ಪ್ರತಿಯೊಬ್ಬರಿಗೂ ಹಕ್ಕಿದೆ. ಪ್ರಕೃತಿಯ ಸಕಲವನ್ನೂ ಆಸ್ತಿಕರಿರಲಿ ನಾಸ್ತಿಕರಿರಲಿ ಎಲ್ಲರೂ ಸಮಾನವಾಗಿ ಅನುಭವಿಸಬಹುದು.

ಗೃಹ ಎಂದರೆ ಮನೆ. ಗೃಹವನ್ನು ಹೊಂದಿದವನೇ ಗೃಹಸ್ಥ. ಗೃಹಿಣಿ ಮತ್ತು ಮಕ್ಕಳು ಮತ್ತು  ಬಂಧುಗಳ ಜೊತೆ ಬೆರೆತು ಬಾಳುವವನು ಗೃಹಸ್ಥ. ಗೃಹಸ್ಥ ಎನ್ನುವಾಗ ನಾಸ್ತಿಕ ಮತ್ತು ಆಸ್ತಿಕ ಎಂದು ವಿಂಗಡಣೆ ಬೇಡ. ಎರಡೂ ಬಗೆಯ ಗೃಹಸ್ಥರಿರುತ್ತಾರೆ. ಬ್ರಹ್ಮಚಾರಿ ಎಂದರೆ ಗೃಹಿಣಿ ಮತ್ತು ಮಕ್ಕಳನ್ನು ಹೊಂದಿರದವರೆಂದಷ್ಟೇ ತಿಳಿದರೆ ಸಾಕು. ಆದರೆ ಅವರಲ್ಲಿ ನಾಸ್ತಿಕತೆ ಬಹಳ ಕಡಿಮೆ.  ಆಸ್ತಿಕತೆಯೇ ಬ್ರಹ್ಮಚರ್ಯಕ್ಕೆ ತಳಹದಿ.

ಋಷಿ ಎಂಬ ಪದವು, “ಋಷ” ಅಥವಾ “ದೃಷ್ಟ” ಎಂಬ ಸಂಸ್ಕೃತ ಪದದಿಂದಾಗಿದೆ. ಋಷ ಅಥವಾ ದೃಷ್ಟ ಎಂದರೆ “ನೋಡಿದವನು”  ಎಂದರ್ಥ. ಋಷಿಯಾದವನಿಗೆ ಮನೋ ದರ್ಶನ ಶಕ್ತಿಯಿರುತ್ತದೆ. ಋಷಿಯು ತನ್ನ ದಿವ್ಯ ದೃಷ್ಟಿಯಿಂದ ನೋಡಿದುದೇ ದೃಷ್ಠ. ದೃಷ್ಟಾರರೆಂದು ನಾವು ಋಷಿಗಳಿಗೆ ಹೇಳುತ್ತೇವೆ. ಋಷಿಗಳು ಬಹಳ ಏಕಾಗ್ರತೆಯಿಂದ ಧ್ಯಾನ ಮಾಡುತ್ತಾರೆ.  ಅವರ ಒಳಗಣ್ಣಿಗೆ ಕಾಣಿಸಿದುದನ್ನು ದಾಖಲಿಸಿದ್ದಾರೆ. ಅವುಗಳನ್ನು ಶ್ರುತಿಗಳು, ವೇದಗಳು, ಪುರಾಣಗಳು. ಸ್ಮೃತಿಗಳು…. ಮುಂತಾಗಿ ಕರೆಯುತ್ತಾರೆ. ಇವೆಲ್ಲವುಗಳಿಗೆ ವಿಶೇಷವಾದ ಗೂಢಾರ್ಥವಿರುತ್ತದೆ. ಈ ಗೂಢ ಅರ್ಥ ಅರಿತವರ ಕಲ್ಯಾಣವಾಗುತ್ತದೆ. ಋಷಿಗಳು ಮಂತ್ರವನ್ನು ನೋಡಿದವರೇ ಹೊರತು ರಚಿಸಿದವರಲ್ಲ, ಮಂತ್ರಗಳನ್ನು ರಚಿಸಿದವರು “ಭಗವಂತ” ನೆಂದೇ ಹೇಳುತ್ತೇವೆ.

ಋಷಿಗಳ ಜ್ಞಾನ ಪ್ರೌಢಿಮೆ ವೈದಿಕ ಅಥವಾ ಧಾರ್ಮಿಕ ವಿಚಾರಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ವೈದ್ಯಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಖಗೋಳ ಶಾಸ್ತ್ರ, ಗಣಿತ ಶಾಸ್ತ್ರ, ಭಾಷಾ ಶಾಸ್ತ್ರ... ಹೀಗೆ ವಿವಿಧ ಜ್ಞಾನ ಶಾಖೆಗಳ ಮೂಲಗಳನ್ನು ರಚಿಸಿದ ಮಹಾ ಜ್ಞಾನಿಗಳಾಗಿದ್ದರು. ಋಷಿಗಳು ತಮ್ಮ ಜ್ಞಾನವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿದ್ದರು. ಋಷಿಗಳಲ್ಲಿ ಮಹರ್ಷಿ, ರಾಜರ್ಷಿ, ಬಹರ್ಷಿ ಹೀಗೆ ಹಂತಗಳಿವೆ. ಬ್ರಹ್ಮರ್ಷಿಯೆಂಬುದು ಉನ್ನತ ಹಂತವಾಗಿದೆ. ಜ್ಞಾನ ಚಕ್ಷು ಪ್ರಾಪ್ತವಾದರೆ ಋಷಿ, ದಿವ್ಯ ಚಕ್ಷು (ದೃಷ್ಟಿ) ಪ್ರಾಪ್ತವಾದರೆ ಮಹರ್ಷಿ, ಪರಮ ಚಕ್ರ ಪ್ರಾಪ್ತವಾದರೆ ಬಹರ್ಷಿ ಎಂದು ಹೇಳುವರು. ನಮಗೆ ಈ ಹಂತಗಳನ್ನು ಪಡೆಯಬಹುದೇ? ಹೌದು ಖಂಡಿತಾ ಪಡೆಯಬಹುದು. ನಾವು ಲೌಕಿಕ ಚಿಂತನೆ ಮಾಡಬಾರದು, ಪಾರಮಾರ್ಥೀಕತೆಯೇ ಮುಖ್ಯವಾದ ಚಿಂತನೆಯಾಗಿರಬೇಕು. ಅರಿಷಡ್ವರ್ಗವನ್ನು ಪೂರ್ಣ ಜಯಿಸಿರಬೇಕು. ಲೋಕದ ಹಿತ ಚಿಂತನೆಯಿಂದ ಎಲ್ಲ ಕರ್ಮಗಳನ್ನು ಮಾಡಬೇಕು. ಯಾವುದೇ ಅಪೇಕ್ಷೆಗಳಿರದ ನಿಸ್ವಾರ್ಥಿಗಳಾಗಿರಬೇಕು. ಸದಾ ದೇವರ ಬಳಿಯೇ ಇರಬೇಕು; ಎಂದರೆ ದೇವರ ಮೇಲೆಯೇ ಅವಲಂಬಿತರಾಗಿರಬೇಕು. ಈ ಬೇಕುಗಳನ್ನು ಈಡೇರಿಸುವುದು ಒಂದು ಮಹಾ ಯಜ್ಞವೇ ಆಗಿದೆ.

ಕೆಲವು ಮಹರ್ಷಿಗಳನ್ನು ಗಮನಿಸೋಣ.
ಮಹರ್ಷಿಗಳಾದ  ಪಾತಂಜಲಿ, ಕಣಾದ, ವಸಿಷ್ಠ, ವಾಲ್ಮೀಕಿ, ಜಮದಗ್ನಿ, ವಿಶ್ವಾಮಿತ್ರ, ಭಾರದ್ವಾಜ, ಪರಶುರಾಮ…. ಹೀಗೆ ಹಲವರನ್ನು ಗುರುತಿಸಬಹುದು. ಅವರೆಲ್ಲರೂ ಜಗದೊಳಿತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಓದಿ ತಿಳಿಯಿರಿ.
…..ಮುಂದುವರಿಯುತ್ತದೆ.
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article