-->
ಜಗಲಿಯ ಮಕ್ಕಳ ಕವನಗಳು

ಜಗಲಿಯ ಮಕ್ಕಳ ಕವನಗಳು

ಜಗಲಿಯ ಮಕ್ಕಳ ಕವನಗಳು : ಸಂಚಿಕೆ - 3
       ಜಗಲಿಯ ಮಕ್ಕಳು  ತಮ್ಮ ಮನದ ಭಾವನೆಗಳನ್ನು ಕವಿತೆಯ ರೂಪದಲ್ಲಿ ಬರೆದು ಕಳುಹಿಸಿದ್ದಾರೆ..... ಭವಿಷ್ಯದ ಉತ್ತಮ  ಬರಹಗಾರರಾಗುವ ಪ್ರತಿಭೆಯುಳ್ಳ  ಈ  ಮಕ್ಕಳು ಬರೆದಿರುವ ಕವನಗಳನ್ನು  ಇಲ್ಲಿ  ಪ್ರಕಟಿಸಲಾಗಿದೆ.




     ನಮ್ಮಯ ಹೆಮ್ಮೆಯ ಸರಕಾರಿ ಶಾಲೆ - ಕವನ
    -------------------------------------------
ವಿದ್ಯಾ ದೇಗುಲದಿ ಅಕ್ಷರ ಕಲಿವ..
ಭಾಗ್ಯವ ಕಲ್ಪಿಸಿ..
ಸುಂದರ ಪ್ರಕೃತಿಯೊಳು
ಸರಸ್ವತಿಯ ಪೂಜಿಸಿ
ಕೈ ಹಿಡಿದು ನಡೆಸುವ ಶಾಲೆ 
ನಮ್ಮಯ ಹೆಮ್ಮೆಯ ಸರಕಾರಿ ಶಾಲೆ.
      ಮಕ್ಕಳ ಚಿಲಿಪಿಲಿ ಕಲರವದಿ
      ಆಟಪಾಠಗಳ ಹೊಂಗಿರಣದಿ
      ಅಕ್ಷರವ ಕಲಿಸಿ ಸಂಸ್ಕಾರಕೊಟ್ಟ ಶಾಲೆ
      ನಮ್ಮಯ ಹೆಮ್ಮೆಯ ಸರಕಾರಿ ಶಾಲೆ..
ಅ ಆ ಇ ಈ ಅಕ್ಷರ ಕಲಿಸಿ...
ಒಂದೊಂದ್ಲೊಂದದ ಮಗ್ಗಿಯ ಗುಣಿಸಿ..
ಇತಿಹಾಸಗಳ ಪುಟಗಳ ತಿರುವಿ..
ಹಂಪೆ ಬೇಲೂರ ವಿಶೇಷತೆಗಳ ಅರುಹಿ..
ವಿಜ್ಞಾನದಿ ಜ್ಞಾನವ ಗಳಿಸಿದ ಶಾಲೆ..
ನಮ್ಮಯ ಹೆಮ್ಮೆಯ ಸರಕಾರಿ ಶಾಲೆ..
     ಸಾಂಸ್ಕೃತಿಕ ರಂಗದಿ ಬೆಳಗಿದ ಶಾಲೆ..
     ಆಟೋಟ ಕೋಲಾಟಗಳಲ್ಲಿ ನಲಿದಿಹ ಶಾಲೆ..
     ನಮ್ಮಯ ಹೆಮ್ಮೆಯ ಸರಕಾರಿ ಶಾಲೆ..
ಸಂಬಂಧಗಳ ಬೆಲೆಯನ್ನು ತಿಳಿಸಿ..
ಜೀವನದ ಹಾದಿಯ ಸುಗಮವೆನಿಸಿ
ಎಡವಿದರೆ ಹಿಡಿದೆತ್ತುತ್ತಾ..
ಬೆಳೆದರೆ ಹರಸುತ್ತಾ..
ಮಕ್ಕಳ ಏಳಿಗೆಗೆ ಶ್ರಮಿಸುವ ಶಾಲೆ
ನಮ್ಮಯ ಹೆಮ್ಮೆಯ ಸರಕಾರಿ ಶಾಲೆ.
    ತಂದೆ ತಾಯಿಯಂತೆ ಸಲಹುವ ಗುರುಗಳು..
    ನಮ್ಮ ಏಳಿಗೆಗಾಗಿ ಹಗಲಿರುಳು ಶ್ರಮಿಸುವರು
    ನಮ್ಮ ಕನಸುಗಳ ಅವರ ಕನಸೆಂದು ಭಾವಿಸಿ
    ನೀಡುವರು ಮಾರ್ಗದರ್ಶನವ ಹಗಲಿರುಳು..
ಅದೋ ಪ್ರೀತಿ ಮಮತೆ ತುಂಬಿದ ನೋಟ...
ಸಾವಿರ ಕನಸು ಹೊತ್ತ ಕಂಗಳಿಗೆ 
ಬೆಳಕು ನೀಡಿದ ಗುರುವಿನ ಪಾಠ
ಭಯವೆಂಬುದ ಹೊಡೆದೋಡಿಸಿ 
ಕರಹಿಡಿದು ನಡೆಸಿ...
ವಿಶ್ವಾಸವೆಂಬ ಮಂತ್ರವ ತುಂಬಿದ ಶಾಲೆ 
ನಮ್ಮಯ ಹೆಮ್ಮೆಯ ಸರಕಾರಿ ಶಾಲೆ...
...................................................ಲಾವಣ್ಯ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು , ಕಾಡುಮಠ 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*******************************************


      ತಂದೆ - ತಾಯಿ ದೇವರು (ಕವನ)
      ----------------------------------  
ಸಾಕಿ ಸಲಹೋ ಪ್ರೀತಿ ಕೊಡುವ 
ತಂದೆ ನನ್ನ  ದೇವರು
ಪ್ರೇಮದಿಂದ ಮಮತೆ ಕೊಡುವ 
ತಾಯಿ ನನ್ನ ದೇವರು
ಮನದ ಮೇಲೆ ಮರದ ಕೆಳಗೆ 
ಎಲ್ಲಿ ಹೋದರು ತಾಯಿ-ತಂದೆ
ದೇವರೆಂದು ನೆನಪು ಬರುವುದು                                   
ತಾಯಿ ಎಂದು ಹೇಳುವುದು 
ಸಾವಿರ ಮಾತಿಗೆ
ಅಪ್ಪ ಎಂದು ಹೇಳುವುದು 
ಲಕ್ಷ ಮಾತಿಗೆ
ಅಪ್ಪ ಎಂದು ಹೇಳೋಕೆ ಇಷ್ಟವು 
ಅಮ್ಮ ಎಂದರೆ ನನಗೆ ಎಷ್ಟು ಸಂತೋಷವು
ಸಾಕಿ ಸಲಹೋ ಪ್ರೀತಿ ಕೊಡುವ 
ತಂದೆ ನನ್ನ ದೇವರು
ಪ್ರೇಮದಿಂದ ಮಮತೆ ಕೊಡುವ 
ತಾಯಿ ನನ್ನ ದೇವರು
.................................. ರಿಧಾ .ಮು. ಡೋರಳ್ಳಿ
2ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ 
ಹುಬ್ಬಳ್ಳಿ ,  ಧಾರವಾಡ ಜಿಲ್ಲೆ
*******************************************


       ನಮ್ಮ ಹೆಮ್ಮೆಯ ಕನ್ನಡ ಶಾಲೆ - ಕವನ
        ----------------------------------------------
ಹಸಿರು ಮಲೆಯಲ್ಲಿ ಮಿಂಚುವ ಶಾಲೆ
ಶಾರದೆಯೇ ಮನದೊಳು ನೆಲೆಸಿದ ಶಾಲೆ
ಏಕತೆಯೇ ಪ್ರೀತಿಯ ಸಂಕೇತವೆಂದ ಶಾಲೆ
ಅದೇ ನಮ್ಮ ಹೆಮ್ಮೆಯ 
ನಲಿಕಲಿದಾಡುವ ಕನ್ನಡ ಶಾಲೆ....
     ಕಣ ಕಣದಲ್ಲಿ ಖುಷಿ ಚಿಮ್ಮಿಸುವ ಶಾಲೆ
     ಕನಸಿಗೆ ಹೊಸ ಹುರುಪು ಕೊಟ್ಟ ಶಾಲೆ
     ಸಾಧಕರ ಕಂಪು ಸಾಧನೆಗದು 
     ಇಂಪು ಎಂದ ಶಾಲೆ
     ಸಾಧಕರ ಮನದಲ್ಲಿ ರಾರಾಜಿಸುವ ಶಾಲೆ
     ಅದೇ ನಮ್ಮ ಹೆಮ್ಮೆಯ 
     ನಲಿಕಲಿದಾಡುವ ಕನ್ನಡ ಶಾಲೆ.
ಬಿದ್ದಾಗ ಕೈ ಹಿಡಿದ್ದೇಬ್ಬಿಸಿದ ಶಾಲೆ
ಗೆದ್ದಾಗ ಬೆನ್ನ ತಟ್ಟಿ ನಡೆಸಿದ ಶಾಲೆ
ಆಟವೆ ಕಾರಂಜಿ ಪಾಠವೆ 
ಅಪರಂಜಿ ಎಂದ ಶಾಲೆ
ಎಂದೂ ಸೋತು ತೆಲೆಬಾಗದ ಶಾಲೆ
ಅದೇ ನಮ್ಮ ಹೆಮ್ಮೆಯ 
ನಲಿಕಲಿದಾಡುವ ಕನ್ನಡ ಶಾಲೆ.
     ಗುರುಗಳ ಮಮತೆಗೆ 
     ಬೆಲೆಕಟ್ಟಲಾಗದ ಶಾಲೆ
     ಅವರ ಸಿಹಿ ಮಾತಿನ ಲಹರಿಗೆ 
     ಮನಸೋತ ಶಾಲೆ
     ನಾಟ್ಯ ನಾದರಂಗವೆಂದ ಶಾಲೆ
     ರಾಗ ಭಾವರಂಗವೆಂದ ಶಾಲೆ
     ಅದೇ ನಮ್ಮ ಹೆಮ್ಮೆಯ 
     ನಲಿಕಲಿದಾಡುವ ಕನ್ನಡ ಶಾಲೆ.
ಬರೆದರೆ ಮುಗಿಯದ 
ಸಾರವಿದು ಈ ಶಾಲೆ              
ಹೇಳಿದರೆ ಎಂದೂ 
ಕೊನೆಯಾಗದ ಕಥೆ ಈ ಶಾಲೆ
ನಮ್ಮ ಜೀವನದ ನೌಕೆಯಲ್ಲಿ 
ಮರೆಯಲಾಗದ ಶಾಲೆ
ಕೊನೆಯುಸಿರೆಳೆದರೂ ನಮ್ಮ ಮನದಲ್ಲಿ ರಾರಾಜಿಸುವುದೊಂದೇ ಈ ಕನ್ನಡ ಶಾಲೆ
ಈ ನಮ್ಮ ಹೃನ್ಮನದಲ್ಲಿ ಅಭಿಮಾನವ ಬಿತ್ತಿ ಮನದೊಳಿರುವ ಮಾತನ್ನು 
ಕವಿತೆಯಾಗಿ ಹೊರ ಚಿಮ್ಮಿಸಿದ 
ಈ ನಮ್ಮ ಹೆಮ್ಮೆಯ 
ನಲಿಕಲಿದಾಡುವ ಕನ್ನಡ ಶಾಲೆ.....
..................................... ರಂಜಿತಾ ಶೇತಸನದಿ
ಹತ್ತನೇ ತರಗತಿ.
ಶಾಲೆ :ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ
ತಾ/ಜಿ /ಹಾವೇರಿ. ದೇವಗಿರಿ ಗ್ರಾಮ
*******************************************



                   ಚಿಟ್ಟೆ
                 ----------
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಮೇಲೆಲ್ಲ ಹಳದಿ ಬಟ್ಟೆ
ಹಿಡಿಯಲು ಬಂದರೆ ಓಡುವ ಚಿಟ್ಟೆ
ಅಂದದ ಚಂದದ ಬಣ್ಣದ ಚಿಟ್ಟೆ
*******************************************
                     ಮಗು
                    ----------
 ಪುಟ್ಟ ಮಗು ಮನೆಯೊಳಗಿರಲು
 ಕಾಲ್ಗೆಜ್ಜೆ ನಾದದ ಸಪ್ಪಳ ಕೇಳಲು
 ತುಂಟ ದನಿಯಲ್ಲಿ ನಗಲು
 ದಿನವಿಡೀ ತುಂಟಾಟ ಆಡುವಳು
................................................ ಸುಮನಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ 
*******************************************



            ಮಂಚಿ ಶಾಲೆ - ಕವನ
            ---------------------------
ನಮ್ಮ ಶಾಲೆ ನಮ್ಮ ಹೆಮ್ಮೆ
ಸಾಧಕರನು ಕೊಟ್ಟ ಗರಿಮೆ
ಸರಕಾರಿ ಶಾಲೆ ಎಂಬ ಹಿರಿಮೆ 
     ಕಂಡ ಕನಸಿಗೆ ದಾರಿದೀಪ ಗುರುಗಳು 
     ಹೇಳಿಕೊಟ್ಟ ಜ್ಞಾನ ರೂಪ ಸಿಗಲು
     ತಿದ್ದಿ ತೀಡಿ ಸಾಕ್ಷರರಾಗಲು          
     ಅಜ್ಞಾನದ ಸ್ವರೂಪ ಕಳೆಯಲು
ಗುರುಗಳು ಕಲಿಸಿದ ಅಕ್ಷರ ಮಂತ್ರ 
ಇದುವೆ ಸುಂದರ ಜೀವನ ತಂತ್ರ 
ದೇವರು ಬೆಸೆದ ಗುರು-ಶಿಷ್ಯರ ಬಂಧ
ಅದು ನಿಷ್ಕಲ್ಮಶ ಸಂಬಂಧ
     ಇಲ್ಲಿ ಕಟ್ಟುವೆ ಸ್ನೇಹದ ಗೂಡು 
     ಅದು ಸಿಹಿಯಾದ ಜೇನುಗೂಡು 
     ಇದು ಮಾನವೀಯತೆಯ ನೆಲೆಬೀಡು
     ಇಲ್ಲಿ ತುಂಬಿದೆ ಸಂಸ್ಕೃತಿಯ ಸೊಗಡು 
 ................................................... ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************




         ಹೆತ್ತವರಿಗೆ ಹೆಗ್ಗಣ ಮುದ್ದು
         --------------------------------
ರಾಜುವು ಗೋಪಿಯ ಮನೆಗೆ ಅನುದಿನ 
ಆಟವ ಆಡಲು ಹೋಗುವನು 
ಗೋಪಿಯ ಆಟಿಕೆಯ ಕದ್ದು 
ತನ್ನ ಜೇಬಿಗೆ ಇಳಿಸಿದನು ||೧||
    ಅಮ್ಮನು ಮರುದಿನ ಬಟ್ಟೆಯ ಒಗೆಯುವ         
    ಸಮಯದಿ ಕಂಡಳು ಆಟಿಕೆಯ ಹೊಸದೀ       
    ಆಟಿಕೆ, ಹೇಗೆ ಬಂದಿದೆ? 
    ಕರೆದು ಕೇಳಿದಳು ರಾಜುವನ ||೨||
ರಾಜುವು ನುಡಿದ ಹಾದಿಯ ನಡುವೆ 
ಸಿಕ್ಕಿತು ಈ ಹೊಸ ಆಟಿಕೆಯು 
ಯಾರದು ಎಂದು ನಾಳೆ ಕೇಳಲು 
ಜೇಬಲಿ ಇರಿಸಿದನು ||2||
       ತಾಯಿಯು ತನ್ನಯ ಕೆಲಸದಲಿರಲು       
       ಗೋಪಿಯ ಅಳುವು ಜೋರಾಯ್ತು 
       ಬೆಲೆ ಬಾಳುವ ಆಟಿಕೆ ಇಲ್ಲೆಂದು 
       ಅಮ್ಮನಿಂದ ಏಟು ಬೀಳುತಿತ್ತು ||೪||
ಅನುಮಾನ ಬಂದ ರಾಜುವಿನ ತಾಯಿ 
ಬಳಿ ಹೋಗಿ ಗೋಪಿಯ ಕೇಳಿದಳು 
ತನ್ನ ಮಗನೇ ಕದ್ದಿರಬಹುದು ಎಂದು 
ಅರಿತು ಮೌನವಹಿಸಿದಳು ||೫|| 
     ಮಗನ ತಪ್ಪನ್ನು ತಿದ್ದಲು ಹೋಗದೇ 
     ತಾಯಿಯು ತಪ್ಪು ಮಾಡಿದಳು 
     ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ 
     ಮೋಹದ ಪೊರೆಯಲಿ ಸಿಲುಕಿದಳು ||೬||
................................ಪೂರ್ಣಿಮ ಕೋಟ್ಯಾನ್
10 ನೇ  ತರಗತಿ
ಹೋಲಿ ರೋಸರಿ ಪ್ರೌಢಶಾಲೆ, ಮೂಡುಬಿದಿರೆ
ಮಂಗಳೂರು ತಾಲ್ಲೂಕು , ದಕ್ಷಿಣಕನ್ನಡ ಜಿಲ್ಲೆ
*******************************************



         ಸೋಲು - ಗೆಲುವು
      ------------------------------
ಜೀವನದಲ್ಲಿ ಸೋಲು ಗೆಲುವು 
ಜೀವನದ ಉದ್ದಕ್ಕೂ ಆರಂಭ
   ಹಾಗೆಂದು ನೀ ಹೆದರಬೇಡ ಸೊಲಿಗೆ
   ಹುಡುಕು ನೀ ನಿತ್ಯ ಗೆಲುವಿಗೆ
ತಪ್ಪಿ ಸೋಲನ್ನು ಅನುಭವಿಸಿದರೆ 
ಗೆಲುವಿನ ಪಾಠವನು ಅದು ತಿಳಿಸುತ್ತದೆ..
     ಯಾವಾಗ ನೀ ಗೆಲ್ಲಲು ಹೊರಡವೆಯೋ 
     ಅದಕ್ಕೂ ಮುನ್ನ ನಿನ್ನನ್ನು ನೀನು ಗೆಲ್ಲು ....
ಏನೇ ಸಾಧಿಸಲು ಹೊರಟಾಗ ಅಡ್ಡಿ ನೂರಾರು 
ಛಲ ಬಿಡದೆ ಸಾಗು ಸಿಗುವ ಅನುಭವ ಗೆಲುವು!
..................................................... ಗಣೇಶ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*******************************************
                       
             

              ಮೂರಕ್ಷರದ ನಂಬಿಕೆ
               --------------------------
ನಂಬಿಕೆ ಇದು ಮೂರಕ್ಷರದ ಪದವಾಗಿ
ಮೂರು ಲೋಕದ ರೀತಿ ಇರುವ ಒಂದು ಗೂಡು
     ಹಿಡಿಯ ಬೇಡ ತಪ್ಪು ದಾರಿಯ 
     ಮೂರು ಮನೆಯಿಂದಲೂ ಕಾಯುತ್ತಿರುವರು
ನಿನ್ನಯ ತಪ್ಪಿನ ಅರಿವನು ಹುಡುಕಲು
ಮೊದಲು ನಿನ್ನಲ್ಲಿಡು ಆ ನಂಬಿಕೆ
     ಗೊತ್ತಿದ್ದರೂ ಮಾಡದಿರು ತಪ್ಪನು
     ನೂರು ಬಾರಿ ಪ್ರಶ್ನಿಸು ನಿನ್ನ ಕಾಯಕವನು
ನೀ ಹೆದರ ಬೇಡ ಜಗಕೆ
ಒಳ್ಳೆಯ ಮಾಡು ಜನಕೆ
ಆಗ ಮೂಡುವುದು ನಂಬಿಕೆ
..................................................... ಗಣೇಶ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*******************************************



               ಆಕಾಶ  ಭೂಮಿ
            ------------------------
ಆಕಾಶದಲ್ಲಿ ಹಾರಡುವ ಹಕ್ಕಿಗೂ
ಭೂಮಿಯಲ್ಲಿ ಹಾರಾಡುವ ಮಾನವನಿಗೂ
ವ್ಯತ್ಯಾಸ ಒಂದೇ 
ಹಾರಾಡುವ ಹಕ್ಕಿಗೆ ತನ್ನ ಕುಲದ ಚಿಂತೆ
ಮಾನವನಿಗೆ ತನ್ನ ಹಣ ಕಾಸಿನ ಚಿಂತೆ
    ಆಕಾಶ ಭೂಮಿಯ ಅರ್ಥವೇನು
    ಹಕ್ಕಿಗಳು ಜೀವನ ಸಾಗಿಸಲು ಹಾರಡುವುದು
    ಮಾನವ ಜಗ ಮೆರೆಯಲು ಹಾರಾಡುವುದು
ಒಂದು ಪ್ರಾಣಿಯ ಬುದ್ದಿ ಮಾನವನಿಗೆಲ್ಲಿ
ಸಹಕಾರ ಜೀವನ ಬಂದರೆ ಒಳಿತಿಲ್ಲಿ
      ಮೊದಲು ಕಲಿ ನೀ ಸಂಸ್ಕಾರವ
      ಆಗಬೇಕು ನೀ ಆಕಾಶ ಭೂಮಿಯವ...!,
..................................................... ಗಣೇಶ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article