-->
ಜೀವನ ಸಂಭ್ರಮ : ಸಂಚಿಕೆ - 192

ಜೀವನ ಸಂಭ್ರಮ : ಸಂಚಿಕೆ - 192

ಜೀವನ ಸಂಭ್ರಮ : ಸಂಚಿಕೆ - 192
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                  
                                          
ಮಕ್ಕಳೇ, ಈ ಕಥೆ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಈ ಕಥೆ ನಮಗೆ ಹೇಗೆ ಉಪಯೋಗವಾಗುತ್ತದೆ...? ಕೊನೆಯಲ್ಲಿ ತೀರ್ಮಾನಿಸಿ.

ಬಹಳ ಹಿಂದೆ ಒಬ್ಬ ಹುಡುಗ ಇದ್ದನು. ತಂದೆ ತೀರಿ ಹೋಗಿದ್ದನು. ಬಹಳ ಬಡವ. ತಂದೆ ಸಾಯುವಾಗ ಮನೆಯಲ್ಲಿ ಎರಡು ಸಣ್ಣ ಕರುಗಳು ಇದ್ದವು. ತಂದೆ ಹೇಳಿದ, ನನ್ನ ಆಸ್ತಿ ಈ ಎರಡು ಕರುಗಳು. ಬೇರೆ ಏನನ್ನು ಗಳಿಸಿಲ್ಲ. ಇದೆ ನನ್ನ ಆಸ್ತಿ ಎಂದು ಹೇಳಿ ಆ ಎರಡು ಕರುಗಳನ್ನು ಮಗನಿಗೆ ನೀಡಿ ಪ್ರಾಣಬಿಟ್ಟನು. ಆಗ ಹುಡುಗನಿಗೆ 15 ವರ್ಷ ವಯಸ್ಸು. ಊರಿನಲ್ಲಿ ಮನೆ ಇಲ್ಲ. ಭೂಮಿ ಇಲ್ಲ. ಏನು ಇಲ್ಲ. ಅಂತಹ ಬಡವ. ಆ ಹುಡುಗ ಎರಡು ದನದ ಕರುಗಳನ್ನು ಹಿಡಿದುಕೊಂಡು ಕೆಲಸಕ್ಕೆ ಹೊರಟನು. ಆ ದನಗಳು ಈ ಹುಡುಗನನ್ನು ಬಹಳ ಪ್ರೀತಿಸುತ್ತಿದ್ದರು. ಹಾಗಾಗಿ ಅವು ಮೈಮುರಿದು ದುಡಿಯುತ್ತಿದ್ದವು. ಏಕೆಂದರೆ ಈ ತರುಣ ನಮ್ಮ ಗೆಳೆಯ. ಈತ ಶ್ರೀಮಂತ ಆಗಬೇಕು. ಶ್ರೀಮಂತ ಆಗಬೇಕೆಂದು ವಿಪರೀತ ದುಡಿತ ಇದ್ದವು. ಅಷ್ಟೊಂದು ಪ್ರೀತಿಸುತ್ತಿದ್ದವು ಆ ದನಗಳು. ಮುಂದೆ 10 -15 ವರ್ಷಗಳ ನಂತರ ತರುಣ ಶ್ರೀಮಂತನಾಗಿದ್ದನು. ಜಮೀನುದಾರನಾಗಿದ್ದನು ಹುಡುಗ. ಅನೇಕ ಎಕರೆ ಜಮೀನು ಖರೀದಿಸಿ ಮಾಲೀಕನಾಗಿದ್ದನು. ಸಾಕಷ್ಟು ಸಂಪತ್ತು ಮನೆಗೆ ಬರುತ್ತಿತ್ತು. ಮನೆಯಲ್ಲಿ ಈಗ ಎರಡು ದನಗಳು ಇರಲಿಲ್ಲ. 20, 30 ದನಗಳು ಇದ್ದು ದುಡಿಯುತ್ತಾ ಇದ್ದವು. ಒಂದು ಸುಂದರ ಮನೆ ಕಟ್ಟಿದ್ದನು. ಮನೆ ತುಂಬಾ ಕಾಳು ಕಡ್ಡಿ ತುಂಬಿತ್ತು. ವಸ್ತ್ರ ಒಡವೆಗಳು ಇದ್ದವು. ತರುಣ ಈಗ ವಯಸ್ಕನಾಗಿದ್ದನು. ಈಗ ಈತನಿಗೆ ಊರಿನಲ್ಲಿ ಮಾನ, ಮರ್ಯಾದೆ, ಗೌರವ ಎಲ್ಲಾ ಸಿಗುತ್ತಿತ್ತು. ಆ ಸಮಯದಲ್ಲಿ ಈ ಎರಡು ಹಸುಗಳು ಮುಪ್ಪಾಗಿದ್ದವು. ಅವು ದುಡಿಯಲು ಅಸಮರ್ಥವಾಗಿದ್ದವು. ಇವುಗಳನ್ನು ತಂದು ಬೇರೆ ಕಡೆ ಕಟ್ಟಿ ಹಾಕಿದ. ಆ ಜಾಗ ಹೇಗಿತ್ತೆಂದರೆ ದವಣಿ ಸರಿ ಇರಲಿಲ್ಲ. ಹೆಂಚ್ಚು ಹೊಡೆದಿದ್ದು, ನೆಲಹಾಸಿಗೆ ಕಲ್ಲು ಎದ್ದು ಚುಚ್ಚುತ್ತಿದ್ದವು. ಅಂತಹ ಬೇಡವಾದ ಜಾಗದಲ್ಲಿ ಕಟ್ಟಿ ಹಾಕಿದ್ದನು. ಬೇರೆ ದುಡಿಯುವ ದನಗಳು ತಿಂದು ಉಳಿದಿದ್ದನ್ನು, ಬೇಡವಾದುದ್ದನ್ನು ತಂದು ಇವುಗಳಿಗೆ ಹಾಕುತ್ತಿದ್ದನು. ಯಾವ ಎತ್ತುಗಳು ದುಡಿದು ಈತನನ್ನು ಶ್ರೀಮಂತನನ್ನಾಗಿ ಮಾಡಿದ್ದವೋ?. ಯಾವ ಎತ್ತುಗಳು ದುಡಿದು ಈ ಮನೆ ಸುಂದರಗೊಳಿಸಿದ್ದವೋ?. ಯಾವ ಎತ್ತುಗಳು ದುಡಿದು ಈತನಿಗೆ ಊರಿನಲ್ಲಿ ಮಾನ, ಮರ್ಯಾದೆ ದೊರೆಯುವಂತೆ ಮಾಡಿದ್ದವು? ಅಂತಹ ಎತ್ತುಗಳ ಪರಿಸ್ಥಿತಿ ಏನಾಗಿತ್ತು ಅಂದರೆ ಆ ದನಗಳ ಹಲ್ಲು ಬಿದ್ದಿದ್ದವು. ತಿನ್ನಲು ಹಲ್ಲು ಇರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಮಾಲೀಕ ಬೇರೆ ದನಗಳು ತಿಂದು ಉಳಿದಿದ್ದನ್ನು ಬೇಡವಾದದ್ದನ್ನು ತಂದು ಹಾಕುತ್ತಿದ್ದನು. ಅವುಗಳನ್ನು ಕಚ್ಚಿ ತಿನ್ನುವಾಗ ದವಡೆಯಿಂದ ರಕ್ತ ಬಂದು ನೋವಾಗುತ್ತಿತ್ತು. ನಿಲ್ಲುವ ಶಕ್ತಿ ಕಡಿಮೆ ಇತ್ತು. ಇಂತಹ ಹೀನಾಯ ಸ್ಥಿತಿಯಲ್ಲಿ ಬದುಕಿಕೊಂಡಿದ್ದವು. 

ಒಂದು ದಿನ ಈ ಎರಡು ಹಳೆ ದನಗಳು ಮಲಗಿಕೊಂಡು ಭಗವಂತನಲ್ಲಿ ಪ್ರಾರ್ಥನೆ ಮಾಡಿದವು. ಸಾಕಪ್ಪ ದೇವರೇ, ನಮಗೆ ತಿನ್ನುವುದಕ್ಕೆ ಆಗೋಲ್ಲ. ನಿಲ್ಲುವುದಕ್ಕೆ ಆಗುವುದಿಲ್ಲ. ಇನ್ನು ನಮ್ಮನ್ನು ಕರೆದುಕೊಂಡು ಹೋಗು ಎಂದು. ಆಗ ಸಾಕ್ಷಾತ್ ಭಗವಂತ ಇಳಿದು ಬಂದು ಇವುಗಳ ಪರಿಸ್ಥಿತಿ ನೋಡಿದ. ಆಗ ಭಗವಂತ ಹೇಳಿದ. "ಏನು ನಿಮ್ಮ ಮಾಲೀಕ ಎಂತಹ ಕ್ರೂರ ಇದ್ದಾನೆ?. ನಿಮ್ಮ ದುಡಿಮೆಯ ಮೇಲೆ ಆತ ಶ್ರೀಮಂತ ಆಗಿದ್ದು. ಇಷ್ಟೆಲ್ಲ ಅಪಾರ ಶ್ರೀಮಂತಿಕೆ ಕೊಟ್ಟ ನಿಮಗೆ, ಒಳ್ಳೆಯ ಆಹಾರ ಹಾಕುವುದಿಲ್ಲ ಅಂದಮೇಲೆ, ಆತ ಎಂಥ ಕ್ರೂರಿ ಇರಬೇಡ?. ಹೇಳಿ ಆತನಿಗೆ ಏನು ಶಾಪ ಕೊಡಬೇಕು?. ಆತನಿಗೆ ಅದೇ ಶಾಪ ಕೊಡುತ್ತೀನಿ" ಅಂದನು. ಆಗ ಆ ಎರಡು ಎತ್ತುಗಳು ಎದ್ದುನಿಂತು, ಭಗವಂತನಿಗೆ ವಂದಿಸಿ, ಹೇಳಿದವು. "ದಯಮಾಡಿ ಶಾಪ ಕೊಡಬೇಡಿ. ಏಕೆಂದರೆ ನಾವು ಆತನನ್ನು ಪ್ರೀತಿಸುತ್ತೇವೆ. ಆತ ನಮ್ಮನ್ನು ಕಡೆಗಣಿಸಿರಬಹುದು. ನಾವು ಆತನನ್ನು ಪ್ರೀತಿಸುತ್ತಿದ್ದೇವೆಯಲ್ಲ ನಿನಗೇನಾದರೂ ಕೊಡೊ ಇಚ್ಛೆ ಇದ್ದರೆ, ನಮಗೆ ಸಮಾಧಾನ ಪಡಿಸಬೇಕೆಂದು ಇಚ್ಛೆ ಇದ್ದರೆ, ನೋಡಿ ನಮ್ಮ ಮಾಲೀಕನ ಆಸೆ ಸಂಪೂರ್ಣ ಗೊಳಿಸಿ" ಎಂದು ಬೇಡಿಕೊಂಡವು. ನಾವಂತೂ ಇಂದಲ್ಲ ನಾಳೆ ಸಾಯುತ್ತೇವೆ. ಪ್ರಶ್ನೆ ಇಲ್ಲ. ನಮ್ಮ ಬಗ್ಗೆ ನಾವು ವಿಚಾರ ಮಾಡುತ್ತಾ ಇಲ್ಲ. ಹುಡುಗ ಕಲಿಯುವಾಗ ಸಣ್ಣ ಹುಡುಗ ಇದ್ದ. ಈಗ ದೊಡ್ಡವನಾಗಿದ್ದಾನೆ. ಶ್ರೀಮಂತನಾಗಿದ್ದಾನೆ. ಆದರೆ ಆತನಲ್ಲಿ ಇನ್ನಷ್ಟು ಆಸೆ ಇದೆ. ಆ ಆಸೆ ಪೂರೈಸಿದರೆ ನಮಗೆ ಸಮಾಧಾನ ಆಗುತ್ತದೆ ಅಂದವು ಎತ್ತುಗಳು. ಭಗವಂತನೇ ಅಷ್ಟು ಕರುಣಿಸು ಎಂದು ಬೇಡಿಕೊಂಡವು. ಎಂತಹ ಹೃದಯ ಆ ಎತ್ತುಗಳಲ್ಲಿ. ಈಗ ಎತ್ತುಗಳಲ್ಲಿ ಶಕ್ತಿ ಇಲ್ಲ. ಆಸೆ ಇಲ್ಲ. ಸಾಕ್ಷಾತ್ ಭಗವಂತ ಬಂದು, ಏನು ಬೇಕು?. ಎಂದಾಗ, ನಮ್ಮ ಮಾಲೀಕನ ಆಸೆ ಪೂರೈಸಿ ಎಂದವು.

ಈ ಕಥೆ ವಿಶ್ಲೇಷಣೆ ಮಾಡಿದರೆ, ಆ ಎತ್ತುಗಳು ನಮ್ಮ ತಂದೆ ತಾಯಿಗಳು. ಆ ಯುವಕ ನಾವೇ. ಆ ತಂದೆ ತಾಯಿಗಳು ವಯಸ್ಸಾದಾಗ ನಾವು ಹೇಗೆ ನೋಡಿಕೋಬೇಕು?. ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಮನಸ್ಸಿಗೆ ಹೇಗಾಗುತ್ತದೆ? ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article