-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 167

ಸ್ಫೂರ್ತಿಯ ಮಾತುಗಳು : ಸಂಚಿಕೆ - 167

ಸ್ಫೂರ್ತಿಯ ಮಾತುಗಳು : ಸಂಚಿಕೆ - 167
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
               

ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ ಮಾಡಬೇಕಿತ್ತು. ಹೆಚ್ಚು ಕೆಲಸ, ಕಡಿಮೆ ಪಾಠ ಪ್ರತೀ ನಿತ್ಯ ನಡೆಯುತ್ತಾ ಇತ್ತು.

ಒಂದು ದಿನ ಅದೇ ಗುರುವಿನ ಬಳಿಗೆ ಇನ್ನೊಬ್ಬ ಶಿಷ್ಯನು ಬಂದನು. ಅವನಿಗೂ ಗುರು ಪಾಠ ಹೇಳಲು ಆರಂಭಿಸಿದರು. ಆದರೆ ಎರಡನೇ ಶಿಷ್ಯನಿಗೆ ಹೆಚ್ಚು ಪಾಠ ಮಾಡುತ್ತಿದ್ದರು, ಕಡಿಮೆ ಕೆಲಸ ಕೊಡುತ್ತಿದ್ದರು. ಹೀಗೆ ದಿನಗಳುರುಳುತ್ತಿರಲು ಮೊದಲ ಶಿಷ್ಯನಿಗೇಕೋ ಸಂದೇಹವೇಳಲಾರಂಭಿಸಿತು. “ನನಗೆ ಕಡಿಮೆ ಪಾಠ, ಅವನಿಗೆ ಹೆಚ್ಚು ಪಾಠ, ನನಗೆ ಹೆಚ್ಚು ಕೆಲಸ, ಅವನಿಗೆ ಬಹಳ ಕಡಿಮೆ ಕೆಲಸ. ಗುರು ಯಾಕೆ ಹೀಗೆ ಮಾಡುತ್ತಾ ಇದ್ದಾರೆ?” ಎಂಬುದಾಗಿ ಯೋಚಿಸುತ್ತಾ ಕೆಲವು ಕಾಲ ಸಂದಿತು. ಗುರುವಿನ ವರ್ತನೆಯಲ್ಲಿ ಬದಲಾವಣೆ ಕಾಣಲಿಲ್ಲ.

ಒಂದು ದಿನ ಮೊದಲ ಶಿಷ್ಯನು ಗುರುಗಳನ್ನು ಭೇಟಿ ಮಾಡಿ, “ಸ್ವಾಮಿ, ನಾನು ಬಹಳ ಸಮಯದಿಂದ ಗಮನಿಸುತ್ತಾ ಇದ್ದೇನೆ, ತಾವು ನಿಮ್ಮ ಎರಡನೇ ಶಿಷ್ಯನಿಗೆ ನನಗಿಂತ ಕಡಿಮೆ ಕೆಲಸ ನೀಡಿ ಹೆಚ್ಚು ಪಾಠ ಹೇಳಿಕೊಡುವಿರಲ್ಲಾ! ಯಾಕೆ ಎಂದು ತಿಳಿಸಬಹುದೇ ?” ಆಗ ಗುರು ಒಂದು ಕಥೆ ಹೇಳಲಾರಂಭಿದರು.

ಓರ್ವನು ಕಾಡಿನ ದಾರಿಯಾಗಿ ತನ್ನ ಊರಿಗೆ ಹೋಗುತ್ತಿದ್ದನು. ಬಿಸಿಲಿನ ಝಳ, ಏರು ತಗ್ಗು, ದುರ್ಗಮ ಹಾದಿ. ಬಲು ದೂರ ಸಾಗಿದ ಆತನಿಗೆ ಬಹಳ ಆಯಾಸವೆನಿಸಿತು, ಬಾಯಾರಿಕೆಯೂ ಆಯಿತು. ನೀರಿಗಾಗಿ ಹುಡುಕಾಡಿದನು. ದಾರಿಯ ಪಕ್ಕದಲ್ಲೊಂದು ಕೆರೆಯನ್ನು ನೋಡಿದನು. ಕೆರೆಯ ತಳದಲ್ಲಿ ಶುಭ್ರವಾದ ನೀರಿತ್ತು. ಆದರೆ ಕೆರೆಗಿಳಿಯಲು ಮೆಟ್ಟಿಲುಗಳಿರಲಿಲ್ಲ. ಪಕ್ಕದಲ್ಲೊಂದು ಕೊಡವಿತ್ತು. ಕೊಡ ಇಳಿಸಿ ನೀರೆತ್ತೋಣ ಎಂದರೆ ಹಗ್ಗವಿರಲಿಲ್ಲ. ಎಷ್ಟು ಯೋಚಿಸಿಯೂ ಪ್ರಯೋಜನವಾಗದೆ, ನೀರು ಕುಡಿಯದೆಯೇ ಪ್ರಯಾಣ ಮುಂದುವರಿಸಿದನು.

ಕೆಲವು ದಿನಗಳ ನಂತರ ಇನ್ನೊಬ್ಬ ಯಾತ್ರಿಕ ಅದೇ ಕಾಡಿನ ದಾರಿಯಾಗಿ ಅವನ ಊರಿಗೆ ನಡೆಯುತ್ತಿದ್ದನು. ಸೆಖೆ, ಮಂದಗಾಳಿ, ಮುರುಕು ದಾರಿ. ಅವನೂ ಬಾಯಾರಿ ಕುಡಿಯುವ ನೀರನ್ನು ಹುಡುಕಲಾರಂಭಿಸಿದನು, ಹಿಂದಿನ ಪ್ರಯಾಣಿಕ ನೋಡಿದ್ದ ಅದೇ ಕೆರೆಯ ಬಳಿಗೆ ಬಂದನು. ನೀರೆತ್ತಲು ಅವನಿಗೂ ಕೊಡ ಹೊರತು ಇನ್ನೇನೂ ಕಾಣಿಸಲಿಲ್ಲ. ನೀರು ಕುಡಿಯಲೇ ಬೇಕಿತ್ತು. ಒಂದು ಮರಕ್ಕೆ ಕೆಲವು ಬಳ್ಳಿಗಳು ಹತ್ತುತ್ತಿರುವುದನ್ನು ನೋಡಿದನು. ಅವನಿಗೆ ನೀರೆತ್ತುವ ಉಪಾಯ ಹೊಳೆಯಿತು.

ಮರವನ್ನು ಏರುತ್ತಿದ್ದ ಬಳ್ಳಿಗಳಿಂದ ಐದಾರು ಬಳ್ಳಿಗಳನ್ನು ಕಿತ್ತನು. ಅವನ್ನು ಒಂದಕ್ಕೊಂದು ಜೋಡಿಸಿ ಉದ್ದಗೊಳಿಸಿದನು. ಉದ್ದಗೊಳಿಸಿದ ಬಳ್ಳಿಗಳಿಗೆ ಉಳಿದ ಬಳ್ಳಿಗಳನ್ನು ಹೆಣೆದು ಬಲವಾದ ಹಗ್ಗ ಸಿದ್ಧಗೊಳಿಸಿ ಅದಕ್ಕೆ ಉರುಳು ಮಾಡಿ ಕೊಡ ಸಿಕ್ಕಿಸಿ ಬಾವಿಗಿಳಿಸಿ ನೀರೆತ್ತಿದನು. ಬೇಕಾದಷ್ಟು ನೀರನ್ನು ಕುಡಿದನು. ತೃಷೆಯಳಿಯಿತು. ನವಚೇತರಿಕೆ ಬಂದ ಆ ಯುವಕ ಪ್ರಯಾಣ ಮುಂದುವರಿಸಿದನು. 
ಈಗ ಗುರುಗಳು ಮೊದಲನೇ ಶಿಷ್ಯನನ್ನು ಪ್ರಶ್ನಿಸಿದರು, “ಕಂದಾ, ಮೊದಲ ಯಾತ್ರಿಗೂ ಬಾಯಾರಿಕೆ ಆಗಿತ್ತು. ಅವನಿಗೂ ಮರವೇರುತ್ತಿದ್ದ ಬಳ್ಳಿಗಳು ಕಾಣಿಸಿರಬಹುದು. ಆದರೆ ಅವನು ಬಾಯಾರಿಕೆಯಾದರೂ ಹಗ್ಗ ಮಾಡಿ ನೀರು ಸೇದಿ ಯಾಕೆ ಕುಡಿಯುವ ಪ್ರಯತ್ನ ಮಾಡಿಲ್ಲ ಎಂದೇನಾದರೂ ನಿನಗೆ ಅರ್ಥವಾಯಿತೇ?” ಶಿಷ್ಯನು, “ಅವನಿಗೆ ಬಾಯಾರಿಕೆ ಆಗಿರಬಹುದು. ಆದರೆ ಬಹಳ ಬಾಯಾರಿಕೆ ಆಗಿರದು. ಎರಡನೇಯವನಿಗೆ ಅತಿಯಾದ ತೃಷೆಯಾಗಿರಬಹುದು. ಅದಕ್ಕಾಗಿ ಬಹಳ ಪ್ರಯತ್ನ ಪಟ್ಟು ಹಗ್ಗ ತಯಾರಿಸಿ ನೀರು ಸೇದಿ ಕುಡಿದಿರಬಹುದು.” ಎಂದನು .

ಗುರುಗಳು ಹೇಳಿದರು, “ಕಂದಾ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇ?”. ಶಿಷ್ಯನು ಹೇಳಿದನು, “ಹೌದು ಗುರುಗಳೇ ತೃಷೆಯಿದ್ದರೆ ಸಾಲದು, ನೀರನ್ನು ಪಡೆಯುವ ಶ್ರಮ ಬೇಕು. ಅಂತೆಯೇ ಕಲಿಯುವ ಅಥವಾ ಜ್ಞಾನಗಳಿಸುವ ಬಯಕೆ ಸಾಲದು, ಪಡೆಯುಲು ಪ್ರಯತ್ನ ಮಾಡಬೇಕು. ಬಾವಿಯೊಳಗೆ ನೀರಿರುತ್ತದೆ. ತೃಷೆಯಡಗಲು ಬಲವಾದ ಬಳ್ಳಿ ಬೇಕು. ಗುರುವಿನಲ್ಲಿ ಅಪಾರ ಜ್ಞಾನವಿರುತ್ತದೆ. ತನ್ನ ಜ್ಞಾನ ತೃಷೆಯನ್ನು ಶಮನಗೊಳಿಸಲು ಮನಸ್ಸೆಂಬ ಬಳ್ಳಿಯನ್ನು ಚೆನ್ನಾಗಿ ಹೆಣೆದು ಬಲಗೊಳಿಸಿ ಗುರುವಿನಲ್ಲಿರುವ ಜ್ಞಾನವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಬೇಕು. ಜ್ಞಾನಗಳಿಸುವ ಪಿಪಾಸೆ ಮತ್ತು ಅದನ್ನು ವಶಪಡಿಸುವ ಪ್ರಯತ್ನ ನಮ್ಮಲ್ಲಿ ನಿರಂತರವಾಗಿರಬೇಕು. ಜ್ಞಾನವೇ ಬದುಕಿನಲ್ಲಿ ಶಿಖರಪ್ರಾಯವಾದುದು. ಜ್ಞಾನದ ಶಿಖರವೇರುವ ಸಂದರ್ಭದಲ್ಲಿ ನಮಗೆ ಬಹಳ ಅಡೆತಡೆಗಳು ಎದುರಾಗುತ್ತವೆ. ಕಾಮನೆಗಳು ನಮ್ಮನ್ನು ಬಲಿ ಪಡೆಯುತ್ತವೆ. ಸೌಮ್ಯ ಗುರು ಕಾರ್ಲೆಯವರ ಮುಕ್ತಕವೊಂದು ಹೀಗೆ ಹೇಳುತ್ತದೆ:
ಹಠಮಾರಿ ಮನಸನ್ನು ವಾಂಛೆಗಳ ಸುಳಿ ಸೆಳೆಯೆ 
ತಟದೆಡೆಗೆ ತರುವಂತ ಯತ್ನವಂ ಮಾಡು
ಕಟುದಿಟವು ಕಹಿಯಲ್ಲ ಅಪರಿಮಿತ ಸುಖವಿಹುದು
ಸೆಟೆದು ನಿಲ್ಲುತ ಸೆಣಸು ಭಾವಲತೆಯೇ

ಮನಸ್ಸಿನ ಬಿಗಿ ಹಿಡಿತ ನಮ್ಮ ಕೈಯಲ್ಲಿರಬೇಕು. ಹಲವು ಬಾರಿ ಜಿಗಿದರೂ ದ್ರಾಕ್ಷಿ ಪಡೆಯಲಾಗದ ನರಿ ಅದು ಹುಳಿಯೆಂದು ದೂರ ಸರಿಯುತ್ತದೆ. ಅಲ್ಪ ಪ್ರಯತ್ನ ಮಾಡಿ ಸೋಲುಂಡ ನರಿಯೊಂದರ ಕಥೆಯೂ ನಮಗೆ ಜೀವನ ದರ್ಶನ ಮಾಡುತ್ತದೆ ಜ್ಞಾನವಾಂಛೆಯುಳ್ಳವನು ಇತರ ಲೌಕಿಕ ವಾಂಛೆಗಳ ವಶನಾಗಿ ದಾರಿ ತಪ್ಪಬಾರದು. ಪ್ರಯತ್ನದಲ್ಲಿ ಹಿಮ್ಮುಖನಾಗುವ ನರಿ ಬುದ್ಧಿಯೂ ಇರಬಾರದು, ಮನಸ್ಸು ಎತ್ತೆತ್ತಲೋ ಓಡುತ್ತದೆ. ಕಾಮನೆಗಳ ಸುಳಿಯೊಳಗೆ ಸಿಲುಕಿ ಹೊರ ಬರಲಾಗದೆ ಒದ್ದಾಡುತ್ತದೆ. ಅದನ್ನು ಬಲಿಷ್ಠವಾದ ಏಕಾಗ್ರತೆಯೆಂಬ ಹಗ್ಗದಿಂದ ಬಿಗಿದು ದಡದಲ್ಲಿಯೇ ಬಲವಾಗಿ ಕಟ್ಟಿ ಹಾಕ ಬಲ್ಲ ಸಮರ್ಥನಿಗೆ ಜ್ಞಾನ ಸಾಗರದಲ್ಲಿ ಈಜುವುದೆಂದರೆ ಸಿಹಿಯಾದ ಅನುಭವ. ಅದರಿಂದಲೇ ಸುಖದ ಅನುಭವ. ಜ್ಞಾನಗಳಿಕೆಯಲ್ಲಿ ಆಕಸ್ಮಿಕ ಸೋಲುಗಳೆದುರಾದರೂ ಮತ್ತೆ ಧೈರ್ಯದಿಂದ ಸೆಟೆದು ನಿಲ್ಲಬಲ್ಲ ಮತ್ತು ವೀರಾಗ್ರಣಿಯಾಗಿ ಸೆಣಸ ಬಲ್ಲವನಿಗೆ ಜ್ಞಾನ ಗಳಿಕೆ ಅತ್ಯಂತ ಸುಲಭ.

ಮಕ್ಕಳೇ ನಮ್ಮ ಸಮಯ ಹಣ ಶಕ್ತಿಗಳು ನಮ್ಮ ಉದ್ಧಾರಕ್ಕಾಗಿ ಬಳಕೆಯಾಗಬೇಕು. ಬಳಕೆ ಸಮರ್ಪಕವೂ ಆಗಿರಬೇಕು. ಬಹಳಷ್ಟು ಜನರ ಸಮಯ, ಹಣ, ಶಕ್ತಿಗಳು.. ಮೊಬೈಲು, ಟಿ.ವಿ ಮತ್ತು ಹಾಳು ಹರಟೆಗಳಲ್ಲಿ ನಷ್ಟಗೊಳಿಸಿ ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಶಾಲಾ ಜೀವನದಲ್ಲಿ ಮಕ್ಕಳ ಕರ್ತವ್ಯ ಜ್ಞಾನ ಸಂಪಾದನೆ. ಅದಕ್ಕಾಗಿಯೇ ನಮ್ಮ ಶ್ರಮವಿರಲಿ. ನಿಮ್ಮ ಜ್ಞಾನ ಪಿಪಾಸೆ ಅತ್ಯಂತ ಬಲವಾಗಿರಲಿ. ಅದನ್ನು ಗಳಿಸಲು ಮನಸ್ಸು ಗಟ್ಟಿಯಾಗಿರಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article