ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 72
Saturday, May 31, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 72
ಲೇಖಕರು : ಸುಪ್ರಿಯಾ
ಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ!!
ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು. ಯಾಕಪ್ಪಾ ಇಷ್ಟೊಂದು ಮಾತಾಡ್ತಾರೆ! ಅಂತ ಮನಸ್ಸಿನಲ್ಲೇ ಗೊಣಗಿಕೊಂಡು ತರಾತುರಿಯಲ್ಲಿ ತರಗತಿಯೊಳಗೆ ಹೋದೆ.
ನಾನು ತರಗತಿಗೆ ಬಂದರೂ, ನನ್ನನ್ನು ಗಮನಿಸುವ ಸ್ಥಿತಿಯಲ್ಲಿ ಮಕ್ಕಳಿರಲಿಲ್ಲ! ತಪ್ಪು ನನ್ನದೇ, ಹಾಗಾಗಿ ಮಕ್ಕಳಿಗೆ ಜೋರು ಮಾಡುವುದಕ್ಕೆ ಹೋಗದೆ, ಸಾಮಾನ್ಯವಾಗಿ ಟೀಚರ್ಸ್ ಉಪಯೋಗಿಸುವ ಸ್ಟ್ರಾಟಜಿ ’ಸುಮ್ಮನೆ ಕೈ ಕಟ್ಟಿ ನಿಂತುಕೊಳ್ಳೋದು!’ ನಾನೂ ಅದನ್ನೇ ಪ್ರಯೋಗಿಸಿದೆ. ಆದರೆ ನಾನು ಕೈ ಕಟ್ಟಿನಿಂತು ಒಂದು ನಿಮಿಷ ಆದರೂ ಮಕ್ಕಳ ಗಲಾಟೆ ಮಾತ್ರ ಕಮ್ಮಿಯಾಗಲಿಲ್ಲ! ಕೇವಲ ಎದುರು ಬೆಂಚಿನ ನಾಲ್ಕು ಹುಡುಗಿಯರು ಮಾತು ನಿಲ್ಲಿಸಿ ನನ್ನನ್ನೇ ನೋಡತೊಡಗಿದರು!. ಆದರೆ ಉಳಿದ ಮಕ್ಕಳ ಕಥೆ ಯಥಾ ಸ್ಥಿತಿ ಮುಂದುವರಿದಿತ್ತು. ಇನ್ನೇನು ಮಾಡೋದು ನನ್ನ ಬತ್ತಳಿಕೆಯಲ್ಲಿನ ಅಸ್ತ್ರಗಳನ್ನು ಪ್ರಯೋಗಿಸಲು ಶುರು ಮಾಡಿದೆ. ಯಾವುದೂ ಪರಿಣಾಮ ಬೀರಲಿಲ್ಲ! ಕೊನೆಗೆ ನಾನೇ ಶಸ್ತ್ರತ್ಯಾಗ ಮಾಡಿ, ಇನ್ನೇನು ಮಾಡೋದು ಅಂತಾ ಯೋಚಿಸ್ತಾ ಇರಬೇಕಾದ್ರೆ, ಒಂದು ಹುಡುಗಿ ಎದ್ದು ಬಂದು. "ಮಾಮ್ ನಿಮ್ಗೆ ಕೋಪ ಬರ್ತಾ ಇಲ್ವಾ?! ಮಕ್ಕಳೆಲ್ಲ ಎಷ್ಟು ಜೋರು ಗಲಾಟೆ ಮಾಡ್ತಿದ್ದಾರೆ ನೋಡಿ ಮ್ಯಾಮ್!" ಅಂತ ಅಂದ್ಲು. ಆ ಕ್ಷಣಕ್ಕೆ ನಂಗೊಂದು ಉಪಾಯ ಹೊಳೆಯಿತು. ಕೇವಲ ನಾಲ್ಕು ಹುಡುಗಿಯರಿಗೆ ಮಾತ್ರ ಕೇಳುವ ಹಾಗೆ, "ನನಗೆ ಇವತ್ತು ಕೋಪ ಬರ್ತಾ ಇಲ್ಲ, ಯಾಕೆ ಗೊತ್ತಾ? ಮನೆಯಲ್ಲಿ ಇವತ್ತು ಬೆಳಗ್ಗೆನೇ ನಾನೊಂದು ಒಳ್ಳೆ ಕೆಲಸ ಮಾಡಿದೆ ಹಾಗಾಗಿ ಖುಷಿಯಿಂದ ಇದ್ದೇನೆ" ಅಂದೆ. ತಕ್ಷಣ ಆ ಹುಡುಗಿ, "ಮಿಸ್ ಏನಾಯ್ತು ಮಿಸ್ ನಮಗೂ ಹೇಳಿ" ಅಂತ ಕೇಳಿದ್ಲು. ಆಗ ನಾನು ಪಿಸು ಧ್ವನಿಯಲ್ಲಿ ನಮ್ಮನೇಲಿ ಏನಾಯ್ತು ಅಂತ ಹೇಳೋಕೆ ಶುರು ಮಾಡಿದೆ. ಅಷ್ಟೊತ್ತಿಗಾಗಲೇ ಅಕ್ಕಪಕ್ಕದಲ್ಲಿರುವವರಿಗೂ ಟೀಚರ್ ಕಥೆ ಹೇಳುತ್ತಾರೆ ಎಂದು ಗೊತ್ತಾಯಿತು. ಹಾಗಾಗಿ ಅವರೂ ಕೂಡ ತಮ್ಮ ಅಕ್ಕಪಕ್ಕದವರಿಗೆ ಸುಮ್ಮನಿರುವಂತೆ ಸೂಚಿಸಿ ನನ್ನ ಕಡೆ ನೋಡ್ಲಿಕ್ಕೆ ಶುರು ಮಾಡಿದರು. ಅಷ್ಟೇ, ಇಡೀ ಕ್ಲಾಸಿಗೆ ಸುದ್ದಿ ತಲುಪಿತ್ತು. "ಮಾಮ್!, ಮಾಮ್! ಏನಾಯ್ತು?! ಜೋರಾಗಿ ಹೇಳಿ ನಮಗೆ ಕೇಳಿಸ್ತಾ ಇಲ್ಲ" ಅಂತ ಕೊನೇ ಬೆಂಚಿನ ಹುಡುಗರೂ ನನ್ನ ದಾರಿಗೆ ಬಂದರು. (ಅವರ ಗಲಾಟೆಯ ಬಗ್ಗೆ ಯಾವುದೇ ಚಕಾರವೆತ್ತದೆ! ನನ್ನ ಕಥೆ ಶುರು ಮಾಡಿದೆ...)
ನಾನು, ಇವತ್ತು ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ಕೈ ಮುಗಿದು, ಹಲ್ಲು ಉಜ್ಜೋಕೆ ಅಂತ ಸಿಂಕ್ ಹತ್ರ ಲೈಟ್ ಹಾಕಿ ಬ್ರಷ್ ಅನ್ನ ತೊಳಿಬೇಕು ಅಂತ ಬಗ್ಗಿ ನೋಡಿದಾಗ ಪುಟಾಣಿ ಕೀಟವೊಂದು (ಈ ದೀಪ, ಲೈಟ್ ಗೆಲ್ಲಾ ಬರುತ್ತಲ್ವಾ ಅದು) ಸಿಂಕಲ್ಲಿ ಬೋರಲಾಗಿ ಬಿದ್ದುಕೊಂಡು ಅದರ ರೆಕ್ಕೆ ಸಿಂಕಿಗೆ ಅಂಟಿಕೊಂಡಿತ್ತು. ಪಾಪ ಮೇಲೆ ಬರಕ್ಕಾಗದೆ ಕೈ ಕಾಲ್ ಬಡಿಯುತ್ತಾ ಇತ್ತು. ಆ ಪುಟಾಣಿ ಕೀಟ ಅದರ ಅಮ್ಮನನ್ನು ನೆನಿಸಿಕೊಂಡು ನನ್ನ ಹತ್ರ ಹೆಲ್ಪ್ ಮಾಡಿ ಅಂತ ಕೈ ಮುಗಿಯುವ ಹಾಗೆ ನನಗೆ ಕಂಡಿತು. ಒಂದು ವೇಳೆ ನಾನು ಟ್ಯಾಪ್ ನೀರು ಆನ್ ಮಾಡ್ತಿದ್ರೆ ಏನಾಗ್ತಿತ್ತು ಮಕ್ಕಳೇ? ಹಾಂ, ಅದು ಚರಂಡಿ ಹೆಣವಾಗುತ್ತಿತ್ತು ಅಲ್ವಾ?
ಆದರೆ ಯಾಕೋ ನನಗೆ ಆ ರೀತಿ ಮಾಡಲು ಮನಸ್ಸಾಗಲಿಲ್ಲ ಮೆಲ್ಲನೆ ನನ್ನ ಕೈ ಬೆರಳನ್ನು ಅದರ ಕಾಲಿನ ಹತ್ರ ಹಿಡಿದೆ, ಆಗ ಅದು ನನ್ನ ಕೈ ಬೆರಳನ್ನು ಗಟ್ಟಿಯಾಗಿ ಹಿಡ್ಕೊಂಡು ನಿದಾನಕ್ಕೆ ಮೇಲೆ ಬಂತು. ಸ್ವಲ್ಪ ಹೊತ್ತು ನನ್ನ ಕೈ ಬೆರಳಲ್ಲೇ ಕೂತು ನಂತರ ಹಾರಿ ಹೋಯಿತು, ಆಗ ಎದುರಿಗಿರುವ ಕನ್ನಡಿ ಯಲ್ಲಿ ನನ್ನ ಮುಖವನ್ನು ನಾನೇ ನೋಡಿಕೊಂಡಾಗ ನನ್ನ ಪ್ರತಿಬಿಂಬ ನನಗೇ 'ವೆರಿ ಗುಡ್' ಎಂದಂತೆ ಭಾಸವಾಯಿತು. ನನ್ನಿಂದಾಗಿ ಅನಾವಶ್ಯಕವಾಗಿ ಒಂದು ಪುಟ್ಟ ಜೀವಿಯ ಪ್ರಾಣ ಹೋಗೋದು ತಪ್ಪಿತಲ್ವಾ, ಅನ್ನುವ ಖುಷಿ ಯಿಂದಲೇ ಇವತ್ತು ನಿಮ್ಮ ಕ್ಲಾಸ್ ಗೆ ಬಂದಿದ್ದು. ಹಾಗಾಗಿ ಇವತ್ತು ನೀವು ಎಷ್ಟೇ ಗಲಾಟೆ ಮಾಡಿದ್ರೂ ನನಗೆ ಕೋಪ ಬರಲಿಲ್ಲ! ಎಂದು ಹೇಳಿ ಕಥೆ ಮುಗಿಸಿದೆ. ಮಕ್ಕಳು ಖುಷಿಯಿಂದ ಆ ದಿನದ ಪಾಠಕ್ಕೆ ತಯಾರಾದ್ರು. ಆದರೆ ಈ ಕಥೆ ಇಲ್ಲಿಗೇ ಮುಗಿಯುಲಿಲ್ಲ....
ಮಾರನೇ ದಿನದಿಂದ ಸತತವಾಗಿ 3 ದಿನ ಮಕ್ಕಳಿಗೆ 'ಮಳೆಯ ಪ್ರಯುಕ್ತ ರಜೆ ಇತ್ತು. ರಜೆ ಮುಗಿಸಿ ಬಂದ ದಿನವೂ ಮೊದಲನೇ ಅವಧಿ ನನಗೆ ಮತ್ತೆ ಅದೇ 4ನೇ ತರಗತಿ ಗೆ ಪಾಠ!.. ಅವತ್ತು ಮಾತ್ರ ಮಕ್ಕಳು ನಾನು ಬಂದ ತಕ್ಷಣವೇ ನನಗೆ ಗುಡ್ ಮಾರ್ನಿಂಗ್ ಹೇಳಿ ಜಾಸ್ತಿ ಗಲಾಟೆ ಇಲ್ಲದೇ ಕುಳಿತಿದ್ದರು. ಹೇಗಾಯಿತು 3 ದಿನದ ರಜಾ ಮಕ್ಕಳೇ? ಅಂದಾಗ ಕೆಲವರು ಗಮ್ಮತಾಯಿತು ಮಿಸ್, ನಾನು ಮಳೆಯಲ್ಲಿ ಆಟ ಆಡಿದೆ, ನಾನು ಅಜ್ಜಿ ಮನೆಗೆ ಹೋಗಿದ್ದೆ ಅಂದರೆ, ಇನ್ನು ಕೆಲವರು, ರಜೆ ತುಂಬಾ ಬೋರಾಯಿತು ಮಾಮ್, ಬರೀ ಮನೆ ಒಳಗೇ ಇದ್ದದ್ದು! "ಮಾಮ್ , ಮಾಮ್, ಮೊನ್ನೆ ಜೋರು ಮಳೆಯಲ್ಲಿ ನಮ್ಮ ಮನೆ ಪಕ್ಕದಲ್ಲಿರುವ ಚರಂಡಿಯಲ್ಲಿ ಒಂದು ಪುಟ್ಟ ನಾಯಿಮರಿ ಇತ್ತು ಅದನ್ನು ನಾನು ಎತ್ತಿಕೊಂಡು ಬಂದು ಮನೆಯಲ್ಲಿ ಸಾಕಿದೆ." ಅಂತ ಒಬ್ಬ ಹುಡುಗ ಹೇಳಿದ!.
ತಕ್ಷಣ ಇನ್ನೊಬ್ಬ ಹುಡುಗ, “ನನ್ನ ಮನೆಯ ಗೇಟಿನಲ್ಲಿ ಕೂತಿದ್ದ ಚಿಟ್ಟೆಯನ್ನು ಹಿಡಿಯಲು ನನ್ನ ಮನೆಯ ಬೆಕ್ಕು ಕಾಯುತಿತ್ತು, ಆಗ ನಾನು ಬೆಕ್ಕನ್ನು ಓಡಿಸಿ ಚಿಟ್ಟೆಯನ್ನು ಬದುಕಿಸಿ ಬಿಟ್ಟೆ ಮಾಮ್” ಅಂದ!.
“ನಾನು ಇವತ್ತು ಸ್ಕೂಲಿಗೆ ಬರುವಾಗ ಮೆಟ್ಟಿಲಲ್ಲಿ ಒಂದು ಹುಳ ಇತ್ತು ಅದನ್ನ ಒಂದು ಎಲೆಯಿಂದ ಮೆಲ್ಲನೆ ಎತ್ತಿ ಗಿಡದ ಬಳಿ ಹಾಕಿದೆ ಟೀಚರ್” ! ಅಂತ ಇನ್ನೊಬ್ಬ!!
‘ಏನ್ ಇವತ್ತು ಎಲ್ಲರೂ ಒಂದೇ ತರಹದ ಕಥೆ ಹೇಳ್ತಾ ಇದ್ದೀರಲ್ಲ ಏನು ವಿಶೇಷ’? ಎಂದು ಕೇಳಿದೆ. ಆಗ ಒಬ್ಬಳು ಹುಡುಗಿ ನೆನಪು ಮಾಡಿದ್ಲು, “ಮೇಡಂ ಮೊನ್ನೆ ನೀವು ಕೀಟದ ಕಥೆ ಹೇಳಿದ್ರಲ್ವಾ? ಅದನ್ನೇ ನೆನಪಿಟ್ಟುಕೊಂಡು ಇವರುಗಳು ಇವಾಗ ಹೇಳ್ತಿರೋದು! "ಮಾಮ್, ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿದರೆ ನಾವು ಖುಷಿಯಾಗಿರುತ್ತೇವೆ ಅಂದ್ರಲ್ವಾ, ಅದು ನಿಜ ಮೇಡಂ ನಾನು ಆವತ್ತು ನಾಯಿಮರಿಗೆ ಹೆಲ್ಪ್ ಮಾಡಿ ನನಗೆ ತುಂಬಾ ಖುಷಿಯಾಗಿತ್ತು..."
ಹೀಗೇ ಮಕ್ಕಳ ಕಥೆಗಳು ಮುಂದುವರೆಯುತ್ತಲೇ ಇತ್ತು. ನನಗೋ ಇಷ್ಟು ಪುಟ್ಟ ಮಕ್ಕಳೂ ಸಹ ನಾನು ಹೇಳಿದ ಕಥೆ ಯನ್ನು ನೆನಪಿನಲ್ಲಿಟ್ಟುಕೊಂಡು ತಮ್ಮದೇ ರೀತಿಯಲ್ಲಿ ಪರೋಪಕಾರ ವನ್ನು ಮಾಡುವ ಇವರ ಪ್ರಯತ್ನವನ್ನು ಕಂಡು ಹೃದಯ ತುಂಬಿ ಬಂತು.
ಆ ಕ್ಷಣಕ್ಕೆ ಅನ್ನಿಸ್ತು ಮಕ್ಕಳಿಗೆ ಉದ್ದುದ್ದ ಭಾಷಣ, ಉಪದೇಶ ಮಾಡುವುದಕ್ಕಿಂತ ಮಕ್ಕಳಿಗೆ ಉದಾಹರಣೆಗಳನ್ನ ನೀಡುತ್ತಾ ಹೋದ್ರೆ ಖಂಡಿತವಾಗಿಯೂ ಮುಂದಿನ ಪೀಳಿಗೆ ಹೃದಯವಂತ ಪೀಳಿಗೆಯಾಗಿ ಬೆಳೆಯೋದಕ್ಕೆ ಸಾಧ್ಯ.
ಇಂತಹ ಮುಗ್ಧ ಮಕ್ಕಳೇ ನನ್ನಲ್ಲಿ 'ಶಿಕ್ಷಕ ವೃತ್ತಿ'ಯನ್ನು ಪ್ರೀತಿಸುವ ಮನಸ್ಸನ್ನು ಸದಾ ಜೀವಂತವಿರಿಸುತ್ತಿರುವುದು.
ಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
*******************************************