-->
ಶಿಬಿರಕ್ಕೆ ಸೈಕಲ್ ಪ್ರಯಾಣ : ಬರಹ : ಅಭಿನವ್. ಪಿ.ಎನ್, 7ನೇ ತರಗತಿ

ಶಿಬಿರಕ್ಕೆ ಸೈಕಲ್ ಪ್ರಯಾಣ : ಬರಹ : ಅಭಿನವ್. ಪಿ.ಎನ್, 7ನೇ ತರಗತಿ

ಬೇಸಿಗೆ ಶಿಬಿರದ ಅನುಭವ : ಶಿಬಿರಕ್ಕೆ ಸೈಕಲ್ ಪ್ರಯಾಣ.
ಬರಹ : ಅಭಿನವ್. ಪಿ.ಎನ್ 
7ನೇ ತರಗತಿ
ಸ.ಉ.ಹಿ.ಪ್ರಾ ಶಾಲೆ ಮುಂಡೂರು.
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ

            
ಕಳೆದ ವರ್ಷದಂತೆ ಈ ವರ್ಷವೂ ಅರಿವು ಕೇಂದ್ರ ನರಿಮೊಗರು ಗ್ರಾಮ ಪಂಚಾಯತ್ ನಲ್ಲಿ ಬೇಸಿಗೆ ಶಿಬಿರ ಇದೆ ಎಂದು ಅರಿವು ಕೇಂದ್ರದ ಮೇಲ್ವಿಚಾರಕರಾದ ವರುಣ್ ಸರ್ ತಿಳಿಸಿದರು. ಈ ಸಮಯದಲ್ಲಿ ಬೇರೆ ಬೇರೆ ಬೇಸಿಗೆ ಶಿಬಿರಗಳಿದ್ದವು, ಆದರೂ ಅದನ್ನೆಲ್ಲ ಬಿಟ್ಟು ನನಗೆ ಇಷ್ಟವಾದ ಈ ಶಿಬಿರಕ್ಕೆ ಹೋಗಲು ತಯಾರಾದೆನು. ಅದರ ಜೊತೆಗೆ ನನ್ನ ನೆರೆಹೊರೆಯ ಸ್ನೇಹಿತರನ್ನು ಸೇರಿಸಿದೆ. ‌ಜೊತೆಗೆ ನಮ್ಮ ಮನೆಗೆ ಬಂದಂತಹ ಅಕ್ಕ-ತಮ್ಮಂದಿರನ್ನು ಈ ಶಿಬಿರಕ್ಕೆ ಕರೆದು ಕೊಂಡು ಹೋಗಿ ಅವರನ್ನು ಸೇರಿಸಿದೆನು. ಮೇ 3ರಿಂದ ನನ್ನ ಸೈಕಲ್ ಪ್ರಯಾಣ ಆರಂಭವಾಯಿತು. ನಾನು ಮತ್ತು ನನ್ನ ಸೈಕಲ್ ಶಿಬಿರಕ್ಕೆ ಹೋಗಲು ಸಿದ್ದರಾಗಿದ್ದೆವು. ಸೈಕಲಲ್ಲಿ ಪ್ರಯಾಣಿಸುವ ಮಜವೇ ಬೇರೆ. ಸುತ್ತ ಮುತ್ತಲಿನ ಪರಿಸರವನ್ನು ನೋಡುತ್ತಾ, ಆನಂದಿಸುತ್ತಾ ಹೋಗೋದು ನನಗೆ ತುಂಬಾ ಖುಷಿ. ಹೋಗುವ ಮದ್ಯದಲ್ಲಿ ಒಂದು ರೈಲ್ವೆ ಗೇಟನ್ನು ದಾಟುವುದು ಬಹಳ ಸಾಹಸದ ವಿಷಯ. ರೈಲು ಬರುವುದಕ್ಕಿಂತ ಮೊದಲು ನಾನು ತಲುಪಬೇಕೆಂದು ಎಷ್ಟು ಬೇಗ ಹೊರಟರೂ ಕೆಲವೊಂದು ಸಲ ರೈಲು ಸಿಗುತ್ತಿತ್ತು. ರೈಲು ಪಟ್ಟಿಯ ಆಚೆ ಬದಿ ಮತ್ತು ಈಚೆ ಬದಿ ಹನುಮಂತನ ಬಾಲದ ಹಾಗೆ ವಾಹನಗಳ ಸಾಲುಗಳು ಇರುತ್ತಿದ್ದವು. ಇವು ನನಗೆ ಯುದ್ಧಕ್ಕೆ ನಿಂತ ಸೈನಿಕರ ಹಾಗೆ ಕಾಣುತ್ತಿದ್ದವು. ಏಕೆಂದರೆ ಆ ಕಡೆಯಿಂದ ಮತ್ತೆ ಈ ಕಡೆಯಿಂದ ಗಾಡಿಗಳು ರೈಲು ಹೋದ ತಕ್ಷಣ ವಾಹನಗಳ ಚಾಲಕರು ತಾ ಮುಂದು ತಾ ಮುಂದು ಎಂಬಂತೆ ಹೋಗಲು ಸಿದ್ದರಾಗುತ್ತ ಡ್ರೂನ್ ಡ್ರೂನ್ ಎಂದು ಶಬ್ದ ಮಾಡುತ್ತಾ ಹೋಗಲು ತಯಾರಾಗುತ್ತಿದ್ದರು. ನಾನು ಸಹ ಸೈಕಲ್ ಅನ್ನು ವೇಗವಾಗಿ ತುಳಿಯುತ್ತಾ ರೈಲು ಪಟ್ಟಿಯನ್ನು ದಾಟಿ ನರಿಮೊಗರು ಗ್ರಾಮ ಪಂಚಾಯಿತಿಯ ಅರಿವು ಕೇಂದ್ರಕ್ಕೆ ಬಂದು ತಲುಪುತ್ತಿದ್ದೆನು. ಮೊದಲನೆ ದಿನ ಶಿಬಿರವು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಹರಿಣಿ ಮೇಡಂ ರವರಿಂದ ಉದ್ಫಾಟನೆಗೊಂಡಿತು.

ನಂತರ ಪಕ್ಷಿ ಪ್ರಪಂಚ ಎನ್ನುವ ಆಟವನ್ನು ವರುಣ್ ಸರ್ ರವರು ಆಡಿಸಿದರು. ಇದರಿಂದ ಎಲ್ಲರ ಜೊತೆ ಬೆರೆಯಲು ಅವಕಾಶವಾಯಿತು. ಹೊಸ ಸ್ನೇಹಿತರ ಪರಿಚಯವಾಯಿತು. ನಂತರ ಮರುದಿವಸ ನಮಗೆ ನರಿಮೊಗರು ಗ್ರಾಮ ಪಂಚಾಯಿತಿಯ ಪೋಸ್ಟ್ ಮಾಸ್ಟರ್ ಆದ ಆತ್ಮೀ ರೈ ಮೇಡಂ, ಬಂದಿದ್ದರು. ಅವರು ನಮಗೆ ಪೋಸ್ಟ್ ಬಾಕ್ಸ್ ಮತ್ತು ಲೆಟರ್ ಬರೆಯಲು ಹೇಳಿಕೊಟ್ಟರು. ನಮಗೆ ತುಂಬಾ ಖುಷಿಯಾಯಿತು.

ಮರು ದಿವಸ ನಮಗೆ ವಿಜ್ಞಾನ ಪ್ರಯೋಗಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಪ್ರಫುಲ್ಲ ಗಣೇಶ್ ರವರು ಮಾಡಿ ತೋರಿಸಿದರು. ವಿಜ್ಞಾನ ಪ್ರಯೋಗಗಳಲ್ಲಿ ಮೊದಲೇ ಆಸಕ್ತಿ ಇದ್ದ ನನಗೆ ಈ ಚಟುವಟಿಕೆಯು ನನ್ನ ಆಸಕ್ತಿಯನ್ನು ಇಮ್ಮಡಿಗೊಳಿಸಿತು. ಮರು ದಿವಸ ನಮಗೆ ಸೀಸನಲ್ ವಾಚ್ ಇತ್ತು. ಅದರಲ್ಲಿ ನಾವು ಹಾಲೆಮರದ ಬಗ್ಗೆ ತಿಳಿದುಕೊಂಡೆವು. ಹಾಲೆಮರದ ಸಂಸ್ಕೃತ ಹೆಸರು ಸಪ್ತವರ್ಣಿ ಎಂಬುದನ್ನು ತಿಳಿದುಕೊಂಡೆವು. ಅಲ್ಲಿಂದ ಬಂದ ನಂತರ ನಮಗೆ ಮರಗಳ ಬಗ್ಗೆ ನಮ್ಮದೇ ಆದಂತಹ ಕಥೆ ಕವನಗಳನ್ನು ಬರೆಯಲು ಹೇಳಿದರು. ನಾನು ಸಹ ಬರೆದೆ. ಮರುದಿನ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಂದು ನಾವು ಮೊದಲು ಪಂಚಾಯಿತಿಗೆ ಹೋದೆವು. ಅಲ್ಲಿ ವರುಣ್ ಸರ್ ನಮಗೆ ಎಲ್ಲರ ಹೆಸರು ಮತ್ತು ಹುದ್ದೆಗಳನ್ನು ತಿಳಿಸಿದರು. ಅಲ್ಲಿಂದ ನಾವು ಅಲ್ಲೇ ಇರುವ ಅಂಚೆ ಕಚೇರಿಗೆ ಹೋದೆವು. ಅಲ್ಲಿ ನಮಗೆ ಪತ್ರಗಳ ವಿಧಗಳನ್ನು ತಿಳಿಸಿದರು.

ಮುಂದೆ ನಾವು ಬಿಂದು ಫ್ಯಾಕ್ಟರಿಗೆ ಹೋದೆವು. ಅಲ್ಲಿ ನಾವು ಜ್ಯೂಸ್ ನ್ನು ಹೇಗೆ ತಯಾರಿಸುವುದೆಂದೂ, ಸಿದ್ಧ ನೀರನ್ನು ಹೇಗೆ ತಯಾರಿಸಿ ಇಟ್ಟುಕೊಳ್ಳುವುದೆಂಬುದರ ಬಗ್ಗೆ ನೋಡಿ ತಿಳಿದುಕೊಂಡೆವು. ನಮಗೆ ಅಲ್ಲಿ ಜ್ಯೂಸ್ ಕೊಟ್ಟರು ಎಲ್ಲರಿಗೂ ತುಂಬಾ ಖುಷಿಯಾಯಿತು. ಅಲ್ಲಿಂದ ನಾವು ಲೈಬ್ರರಿಗೆ ವಾಪಸ್ ಬಂದೆವು.

ಮರು ದಿವಸ ನಮಗೆ ಯೋಗಾಸನಗಳನ್ನು ಕಲಿಸಲು ಯೋಗ ಶಿಕ್ಷಕರಾದಂತಹ ಅಶೋಕ್ ಸರ್ ಇವರು ಬಂದಿದ್ದರು. ಅವರ ನಮಗೆ ಯೋಗಾಸನಗಳನ್ನು ಕಲಿಸಿದರು. ಜೊತೆಗೆ ನಮಗೆ ಆಟವನ್ನು ಆಡಿಸಿದರು. ನಂತರ, ಸಮಾರೋಪ ಸಮಾರಂಭಕ್ಕೆ ವರುಣ್ ಸರ್ ಸಿದ್ಧತೆಗಳನ್ನು ಮಾಡಿದರು. ನನಗೆ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನೀಡಿದ್ದರು. ನನ್ನ ಸ್ನೇಹಿತರಿಗೂ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಯನ್ನು ನೀಡಿದ್ದರು.

ಶಿಬಿರದ ಕೊನೆಯ ದಿನ ಬಂದೇ ಬಿಟ್ಟಿತು. ನಮಗೆ ಮೊದಲು ಪರೀಕ್ಷೆಯನ್ನು ಮಾಡಿದರು. ಯಾರಿಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸಿಗುತ್ತದೋ ಮತ್ತು ಶಿಬಿರದಲ್ಲಿ ಯಾರು ಚುರುಕಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೋ ಅವರನ್ನು ಅತ್ಯುತ್ತಮ ಶಿಬಿರಾರ್ಥಿ ಎಂದು ಗುರುತಿಸಲಾಗುವುದೆಂದು ತಿಳಿಸಿದರು.

ನಾನು ತುಂಬಾ ಆಸಕ್ತನಾಗಿದ್ದೆನು. ಆಮೇಲೆ ಸಭಾ ಕಾರ್ಯಕ್ರಮ ಶುರುವಾಯಿತು. ನಾನು ನಿರೂಪಣೆಯನ್ನು ಮಾಡಿದೆನು. ಶಿಬಿರಾರ್ಥಿಗಳಾದ ರಿತ್ವಿ, ಚಾರ್ವಿ, ಪ್ರಾಪ್ತಿ ಪ್ರಾರ್ಥಿಸಿದರು. ಸಾನ್ವಿ ಎಲ್ಲರನ್ನು ಸ್ವಾಗತಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕ ರಾದ ವರುಣ್ ಕುಮಾರ್ ಎಸ್. ಇವರು ಕಾರ್ಯ ಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿದ್ದ ರವಿಚಂದ್ರ ಯು ಸರ್ (PDO) ನರಿಮೊಗರು ಗ್ರಾಮ ಪಂಚಾಯತ್ ಇವರು ಈ ಕಾರ್ಯ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿದ್ದ ನರಿಮೊಗರು ಗ್ರಾಮದ ಪಂಚಾಯತ್ ನ ಸದಸ್ಯರಾಗಿದ್ದ ಸುಧಾಕರ್ ಕುಲಾಲ್ ಸರ್ ರವರು ಈ ಶಿಬಿರದ ಬಗ್ಗೆ ಸಂತೋಷ ವನ್ನು ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಾದ ಜನಿತ್, ಶಮಂತ್, ಅಖಿಲ್, ಅಭಿನವ್ ತಮ್ಮ ಅನುಭವವನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಕೊನೆಗೆ ಟ್ರೋಫಿ ಸಿಗುವ ಸಮಯ ಬಂದೇಬಿಟ್ಟಿತು. ನಾವೆಲ್ಲರೂ ಆಸಕ್ತರಾಗಿದ್ದೆವು. ಆಗ ವರುಣ್ ಸರ್ ನನ್ನ ಹೆಸರು ಹೇಳಿದರು. ನನಗೆ ತುಂಬಾ ಖುಷಿಯಾಯಿತು. ನನ್ನನ್ನು ಅತ್ಯುತ್ತಮ ಶಿಬಿರಾರ್ಥಿ ಎಂದು ಗುರುತಿಸಿ ನನಗೆ ಕಪ್‌ ಸಿಕ್ಕಿದಾಗ ತುಂಬಾ ಖುಷಿಯಾಯಿತು. 

ನನ್ನನ್ನು ಗುರುತಿಸಿದಕ್ಕಾಗಿ ಶಿಬಿರದ ಆಯೋಜಕರಾದ ಅರಿವು ಕೇಂದ್ರದ ಮೇಲ್ವಿಚಾರಕರಾದ ವರುಣ್ ಸರ್, ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಹರಿಣಿ ಮೇಡಮ್, ಪಂಚಾಯತ್ ಸದಸ್ಯರಾದ ಸುಧಾಕರ್ ಕುಲಾಲ್ ಸರ್, ಪಂಚಾಯತ್ PDO ರವರಾದ ರವಿಚಂದ್ರ ಯು.ಸರ್, ಪಂಚಾಯತ್ ಕಾರ್ಯದರ್ಶಿಯಾದ ಶೇಖ್ ಖಲಂದರ್ ಅಲಿ ಸರ್ ರವರಿಗೆ ಈ ಸಂದರ್ಭದಲ್ಲಿ ಧನ್ಯವಾದ ವನ್ನು ಹೇಳುತ್ತಿದ್ದೇನೆ. ಶಿಬಿರಾರ್ಥಿ ಆರುಶ್ ಇವರ ಧನ್ಯವಾದದೊಂದಿಗೆ ಕಾರ್ಯ ಕ್ರಮ ಮುಕ್ತಾಯಗೊಂಡಿತು.

ಬಹಳಷ್ಟು ಖುಷಿಯಿಂದ ಸೈಕಲ್ ಹತ್ತಿ ಮನೆಕಡೆ ಹೊರಟೆನು. ಮನೆ ತಲುಪಿದ ಕೂಡಲೆ ನನ್ನ ಸಂತಸದ ವಿಷಯವನ್ನು ಅಮ್ಮನ ಜೊತೆ ಹಂಚಿಕೊಂಡೆನು. ಪ್ರಶಸ್ತಿ ಪತ್ರ ಮತ್ತು ಅತ್ತ್ಯುತ್ತಮ ಶಿಬಿರಾರ್ಥಿ ಎಂಬ ಕಪ್ ನ್ನು ಮನೆಯವರಿಗೆಲ್ಲ ತೋರಿಸಿದೆನು. ಮನೆಯವರೆಲ್ಲ ತುಂಬಾ ಸಂತೋಷ ಪಟ್ಟರು. ಶಿಬಿರ ಮುಗಿದರೂ ನೆನಪಾದಾಗಲೆಲ್ಲ ನನ್ನ ಇಷ್ಟದ ಸ್ಥಳವಾದ ನರಿಮೊಗರು ಗ್ರಂಥಾಲಯ ಕ್ಕೆ ಸೈಕಲ್ ಹತ್ತಿ ಹೋಗುತ್ತಿರುತ್ತೇನೆ.      
.................................... ಅಭಿನವ್ ಪಿ.ಎನ್ 
7ನೇ ತರಗತಿ
ಸ.ಉ.ಹಿ.ಪ್ರಾ ಶಾಲೆ ಮುಂಡೂರು.
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article