ನಾನು ಮೆಚ್ಚಿದ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 02
Tuesday, September 10, 2024
Edit
ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ - 2024
.................................. ಲಿಖಿತಾ ಆರ್ ಸಾಲ್ಯಾನ್
..................................................... ಕೃತಿಕಾ
................................................... ಶ್ರೇಯ

ನಾನು ಮೆಚ್ಚಿದ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 02
ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾ ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕೇವಲ ಒಂದೇ ದಿನದ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಜಗಲಿಯ ವಿದ್ಯಾರ್ಥಿಗಳು ಬರಹಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು...
ಎಲ್ಲಾ ಬರಹಗಳನ್ನು ಮಕ್ಕಳ ಜಗಲಿಯಲ್ಲಿ - ಸಂಚಿಕೆಗಳ ರೂಪದಲ್ಲಿ ಪ್ರಕಟಿಸುತ್ತೇವೆ... ದ್ವಿತೀಯ ಸಂಚಿಕೆಯ ಬರಹಗಳು ಇಲ್ಲಿವೆ.... ತಾರಾನಾಥ್ ಕೈರಂಗಳ
ಶೀರ್ಷಿಕೆ: ನನ್ನ ಗುರುಗಳು ಮಹೇಶ್ ವಿ ಕರ್ಕೇರ ಸರ್
ನಾನು ಲಿಖಿತಾ ಆರ್ ಸಾಲ್ಯಾನ್, 10ನೇ ತರಗತಿ.. ನನ್ನ ಶಿಕ್ಷಣ ಕ್ಷೇತ್ರದ ನೆಚ್ಚಿನ ಗುರು.. ನನ್ನ ಜೀವನ ಸಾಧನೆಯ ಸ್ಫೂರ್ತಿ… ಸದಾ ಹೊಸತನದ ಕನಸುಗಾರರು.. ಉತ್ತಮ ಮಾತುಗಾರರು …ಉತ್ತಮ ಭಾಷಣಕಾರರು... ನನ್ನಲ್ಲಿ ಪ್ರೌಢಶಾಲಾ ಹಂತದವರೆಗೆ ಯಾರು ಕಾಣದ ಪ್ರತಿಭೆಯನ್ನು ಗುರುತಿಸಿ ಕನಸುಗಳ ಸರಮಾಲೆಯನ್ನ ಕಟ್ಟಿಕೊಟ್ಟು… ಬೆಳೆಸಿದವರು.. ನನ್ನ ಗುರುಗಳು ಅವರೇ ಮಹೇಶ್ ವಿ ಕರ್ಕೇರ ಸರ್ ..
ನಾನು ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಮಾತುಗಾರಿಕೆಗೆಂದು ಯಾವುದೇ ವೇದಿಕೆ ಹತ್ತಿದವಳಲ್ಲ… ಆದರೆ ಎಂಟನೇ ತರಗತಿಗೆ ಬಂದ ಕೆಲವು ದಿವಸಗಳಲ್ಲಿ ನನ್ನೊಳಗಿದ್ದಂತಹ ಪ್ರತಿಭೆಯನ್ನು ಗುರುತಿಸಿ ಭಾಷಣ ಸ್ಪರ್ಧೆಯಲ್ಲಿ ಮೂರು ಬಾರಿ ರಾಜ್ಯ ಮಟ್ಟದ ವೇದಿಕೆ ಹತ್ತುವಂತೆ ಬಹುಮಾನಗಳನ್ನು ಗಳಿಸುವಂತೆ ಮಾಡಿದರು.. ಪ್ರಸ್ತುತ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ ಅನ್ನೋ ರೋಟರಿ ಪದವಿಗೂ ಆಯ್ಕೆಗೊಂಡಿದ್ದೇನೆ… ಇದ್ಯಾವುದು ನನ್ನ ಕನಸಾಗಿರಲಿಲ್ಲ.. ನನ್ನ ಗುರಿ ಇದ್ದದ್ದು ನನ್ನ ಗುರುಗಳ ಕನಸು ನನಸು ಮಾಡುವುದು…ಈಡೇರಿಸುತ್ತಿರೋ ಹೆಮ್ಮೆ ನನ್ನದು. ಪಠ್ಯಪುಸ್ತಕದಲ್ಲಿರೋದನ್ನ ತಲೆಗೆ ತುರುಕುವುದೊಂದೇ ಶಿಕ್ಷಣವಲ್ಲ. ಮಗುವಿನಲ್ಲಿರುವ ಪ್ರತಿಭೆಯನ್ನ ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಣ ಎಂಬುದನ್ನು ನಂಬಿದವರು ನಮ್ಮ ಗುರುಗಳು. ನನ್ನಂಥ ಎಷ್ಟೋ ವಿದ್ಯಾರ್ಥಿಗಳಿಗೆ ಅಹಲ್ಯ ರೂಪ ಕೊಟ್ಟ ಶಿಲ್ಪಿ ನನ್ನ ಗುರುಗಳು. ವಿವೇಕಾನಂದರ ಸ್ಪೂರ್ತಿ ಚಿಂತಕರಾದ ನನ್ನ ಗುರುಗಳು ನನ್ನ ಪಾಲಿಗೆ ರಾಮಕೃಷ್ಣರಂತಿಹರು. ಇವರಿಂದ ವಿದ್ಯಾರ್ಥಿಗಳಿಗಷ್ಟೇ ಕನಸು ಇರೋದಲ್ಲ. ಶಿಕ್ಷಕರಿಗೂ ಕನಸುಗಳು ಇರುತ್ತದೆ ಅನ್ನೋದನ್ನ ತಿಳಿದೆ. ಅದನ್ನ ಈಡೇರಿಸೋ ಜವಾಬ್ದಾರಿ ನಮ್ಮದು ಅನ್ನೋದನ್ನ ಅರಿತೆ. ಈ ನನ್ನ ಪೂಜ್ಯನೀಯ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು… ಈ ಲೇಖನ ಗುರುಗಳ ಚರಣಗಳಿಗೆ ಅರ್ಪಣೆ..
10ನೇ ತರಗತಿ
ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಶೀರ್ಷಿಕೆ: ಅರುಣ್ ಸರ್ ಮತ್ತು ರಮೇಶ್ ಸರ್...
ನಾನು ಕೃತಿಕಾ, ಪ್ರಥಮ ಪಿಯುಸಿ, ಕಲಾ ವಿಭಾಗ.... ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು. ಮೊದಲನೆಯದಾಗಿ ನನ್ನೆಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ನನಗೆ ಎಲ್ಲಾ ಶಿಕ್ಷಕರೂ ಕೂಡ ತುಂಬಾ ಇಷ್ಟ. ಆದರೆ ನಾನು ಮೆಚ್ಚಿದ ಶಿಕ್ಷಕರೆಂದರೆ ನಾನು ಪ್ರೌಢಶಾಲೆಯಲ್ಲಿರುವಾಗ ನನಗೆ ಸಿಕ್ಕ ಶಿಕ್ಷಕರಾದ ಅರುಣ್ ಸರ್ ಮತ್ತು ರಮೇಶ್ ಸರ್...
ನಾನು ಪ್ರೌಢಶಾಲೆಗೆ ಹೋದಾಗ ನನಗೆ ಪರಿಚಯವಾದ ಮೊದಲ ಶಿಕ್ಷಕರೆಂದರೆ ಅದು ರಮೇಶ್ ಸರ್... ನಮಗೆ ಮೊದಲು ಶಾಲೆಗೆ ಹೋದಾಗ ತುಂಬಾ ಭಯ ಇತ್ತು. ಆದರೆ ಆ ಭಯವನ್ನೆಲ್ಲ ಹೋಗಲಾಡಿಸಿದ್ದು ಇವರು. ಇವರು ನಮಗೆ ಕನ್ನಡ ಪಾಠವನ್ನು ಮಾಡುತಿದ್ದರು.
ಸಾಹಿತ್ಯ ಲೋಕವನ್ನು ನನಗೆ ಪರಿಚಯಿಸಿದವರು, ನಮ್ಮೊಳಗಿದ್ದ ಪ್ರತಿಭೆಯನ್ನು ಹೊರತಂದವರು, ನನಗೆ ತುಂಬಾ ಆತ್ಮೀಯರಾಗಿದ್ದವರು. ಮಕ್ಕಳಿಗೆ ಕೇವಲ ಪುಸ್ತಕದ ಪಾಠವಲ್ಲದೆ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಅಂಶಗಳನ್ನು ಹೇಳಿಕೊಟ್ಟವರು.
ನಾನು ಇನ್ನೋರ್ವ ಶಿಕ್ಷಕರ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ನನಗೆ ಆಂಗ್ಲ ಭಾಷಾ ಶಿಕ್ಷಕರಾಗಿ ಸಿಕ್ಕವರು ಅರುಣ್ ಸರ್. ಇವರ ಬಗ್ಗೆ ಹೇಳಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷ ಇದೆ. ಇವರು ನನ್ನ ನೆಚ್ಚಿನ ಶಿಕ್ಷಕರು. ಇವರು ಎಷ್ಟೇ ಕಷ್ಟ ಆದರೂ ನಮಗೆ ಪಾಠ ಮಾಡುತಿದ್ದರು, ಇವರು ಆಟದಲ್ಲೂ ಪಾಠದಲ್ಲೂ ನಮ್ಮ ಜೊತೆ ಇದ್ದವರು. ಸೋತಾಗ ಸಮಾಧಾನಿಸಿ ಗೆಲುವಿನ ಹಾದಿಯನ್ನು ತೋರಿಸಿದವರು. ಇವರು ನಮ್ಮ ಜೊತೆ ಶಿಕ್ಷಕರಂತೆ ಇರಲಿಲ್ಲ ಬದಲಾಗಿ ಸ್ನೇಹಿತರಂತೆ ಇದ್ದರು. ನಾನು ಈ ಇಬ್ಬರು ಶಿಕ್ಷಕರನ್ನು ಎಂದೂ ಮರೆಯುದಿಲ್ಲ... ಇವರಂತಹ ಶಿಕ್ಷಕರನ್ನು ಪಡೆಯಲು ನಾನು ತುಂಬಾ ಪುಣ್ಯ ಮಾಡಿದ್ದೆ... ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
ಪ್ರಥಮ ಪಿಯುಸಿ, ಕಲಾ ವಿಭಾಗ
ಶ್ರೀ ಮಹಾವೀರ ಕಾಲೇಜು
ಮೂಡಬಿದ್ರೆ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************
ಶೀರ್ಷಿಕೆ: ನಾನು ಮೆಚ್ಚಿದ ಶಿಕ್ಷಕರು
ನಾನು ಶ್ರೇಯ, ಪ್ರಥಮ ಪಿಯುಸಿ... ಅಂಗನವಾಡಿ ಶಾಲಾ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ನನ್ನ ಭವಿಷ್ಯವನ್ನು ಉತ್ತಮ ಪಥದತ್ತ ಸಾಗಿಸಲು ಮಾರ್ಗದರ್ಶನವನ್ನು ನೀಡಿರುತ್ತಾರೆ. ಮೊದಲನೆಯದಾಗಿ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಅಂಗನವಾಡಿ ಶಾಲೆಯ ಶಿಕ್ಷಕರು ಪುಟ್ಟ ಮಕ್ಕಳಾಗಿದ್ದಾಗ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಮೊದಲ ಅಕ್ಷರವನ್ನು ಕಲಿಸಿದ ಶಿಕ್ಷಕರು. ಪ್ರಾಥಮಿಕ ಶಾಲಾ ಶಿಕ್ಷಕರು ನನ್ನ ಜೀವನದಲ್ಲಿ ಮರೆಯಲಾಗದ ಯಶಸ್ಸನ್ನು ತಂದುಕೊಳ್ಳಲು ಸಹಕರಿಸಿದ ಶಿಕ್ಷಕರಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಾದ ಎನ್ ಎಂ ಎಂ ಎಸ್ ಗೆ ಉತ್ತಮವಾದ ತರಬೇತಿಯನ್ನು ನೀಡಿ ನಾನು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಇದು ನನ್ನ ಜೀವನದಲ್ಲಿ ಮೊದಲ ಯಶಸ್ಸಾಗಿದೆ. ಇದಕ್ಕೆ ಕಾರಣ ನನ್ನ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರು, ಅವರಿಗೆ ನನ್ನ ಮನದಾಳದಿಂದ ಧನ್ಯವಾದಗಳು.
ಪ್ರೌಢಶಾಲಾ ಶಿಕ್ಷಕರು ಉತ್ತಮವಾದ ಶಿಕ್ಷಣವನ್ನು ನೀಡಿ ನಾನು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನು ಗಳಿಸಲು ಪ್ರೌಢ ಶಾಲೆಯ ಎಲ್ಲಾ ಶಿಕ್ಷಕರು ಕಾರಣಕರ್ತರಾಗಿದ್ದಾರೆ. ಎಲ್ಲಾ ಶಿಕ್ಷಕರು ಉತ್ತಮವಾದ ಶಿಕ್ಷಣ, ಪ್ರತಿಭೆಗಳಿಗೆ ಪ್ರೋತ್ಸಾಹ, ಜೀವನಕ್ಕೆ ಬೇಕಾದ ಮೌಲ್ಯಾಧಾರಿತ ವಿಷಯ ಹಾಗೂ ನಾವು ಜೀವನದಲ್ಲಿ ಪಾಲಿಸಬೇಕಾದ ಶಿಸ್ತನ್ನು ಹೇಳಿಕೊಟ್ಟಿದ್ದಾರೆ. ಶಿಕ್ಷಕರು ನಮ್ಮೊಂದಿಗೆ ಸ್ನೇಹಿತರಂತೆ ಇದ್ದು ನಮ್ಮ ತಪ್ಪುಗಳನ್ನು ತಿದ್ದಿ , ಬುದ್ದಿ ಹೇಳಿ ನಮ್ಮನ್ನು ಉತ್ತಮ ದಾರಿಯತ್ತ ಸಾಗಿಸಿದ್ದಾರೆ. ನನಗೆ ಶಿಕ್ಷಣವನ್ನು ನೀಡಿದ ಎಲ್ಲಾ ಶಿಕ್ಷಕರಿಗೂ ಶಿರಭಾಗಿ ನಮಿಸುತ್ತಾ, ಹಿಂದೆ ಗುರುವಿರಬೇಕು ಮುಂದೆ ಗುರಿ ಇರಬೇಕು.
ನಮ್ಮ ಹಿಂದೆ ಗುರುಗಳಿದ್ದಾರೆ ಅವರ ಮಾರ್ಗದರ್ಶನಗಳೊಂದಿಗೆ ನಾವು ನಮ್ಮ ಗುರಿಗಳತ್ತ ಸಾಗುವ ಎಂದು ಹೇಳುತ್ತಾ
ಕೊನೆದಾಗಿ ಮತ್ತೊಮ್ಮೆ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಅಳದಂಗಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಶೀರ್ಷಿಕೆ: ನನ್ನ ನೆಚ್ಚಿನ ಶಿಕ್ಷಕ ನರೇಂದ್ರ ಕುಮಾರ್ ಸರ್
ಎಲ್ಲರಿಗೂ ನಮಸ್ಕಾರ... ನಾನು ನಿಮ್ಮ ಶರ್ಮಿಳಾ ಕೆ.ಎಸ್. ಶಿಕ್ಷಕರ ದಿನಾಚರಣೆಯ ಈ ದಿನದಲ್ಲಿ ನಮ್ಮ ಶಿಕ್ಷಕರ ಕುರಿತು ಬರೆಯಲು ಸಂತಸವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಮೊದಲ ಗುರು ತಾಯಿ. ತಾಯಿಯಿಂದ ಕಲಿತ ಪಾಠ ಜೀವನದಲ್ಲಿ ಕನಸು ಕಾಣಲು ಕಲಿಸಿದರೆ, ತಂದೆಯಿಂದ ಕಲಿತ ಪಾಠವು ಆ ಕನಸನ್ನು ನನಸಾಗಿಸಲು ಸ್ಪೂರ್ತಿ ನೀಡುತ್ತದೆ.
'' ಶಿಕ್ಷಕರು ಕಲಿಯುವುದನ್ನು ಕಲಿಸುತ್ತಾನೆ. ಅವನೊಬ್ಬ ಈಜುಕೊಳ ಇದ್ದಂತೆ, ಒಮ್ಮೆ ಈಜು ಬಂದರೆ, ಭುಜದಲ್ಲಿ ಶಕ್ತಿ ಬಂದರೆ ಜಗತ್ತಿನಲ್ಲಿನ ಸಮುದ್ರವೆಲ್ಲಾ ನಿಮ್ಮದೇ'' ಎಂಬ ಶ್ರೇಷ್ಠ ಸಾಹಿತಿ ಡಾ. ಗುರುರಾಜ್ ಕರಜಗಿ ಅವರ ಮಾತಿನಂತೆ ತಂದೆ ತಾಯಿಯಿಂದ ಕನಸು-ನನಸು ಆದರೆ ಅದರಲ್ಲಿರುವ ಏರಿಳಿತದ ಕಾಠಿಣ್ಯತೆಯ ದಾರಿಯನ್ನು ಸರಳವಾಗಿಸುವವರೇ ಶಿಕ್ಷಕರು. ನನ್ನ ಪ್ರಕಾರ ಯಾವ ವ್ಯಕ್ತಿಗೂ ಕೇವಲ ಒಬ್ಬ ಗುರುವಿರಲು ಸಾಧ್ಯವಿಲ್ಲ. ಜಗತ್ತಿನಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ಚರಾಚರ ವಸ್ತು, ವ್ಯಕ್ತಿ ಕೂಡಾ ಗುರುವೇ. ಏಕೆಂದರೆ ''ಶಿಕ್ಷಕರೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರೊಂದು ಶಕ್ತಿ ಇದ್ದಂತೆ''. ಶಿಕ್ಷಕರೆಂದರೆ ಜ್ಞಾನದ ಪೂರ. ಶಿಕ್ಷಕರು ತಮ್ಮಲ್ಲಿರುವ ಜ್ಞಾನದ ಸಾರವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಾರೆ. ನನ್ನ ಪ್ರಕಾರ ಅದೊಂದು ಪುಣ್ಯದ ಕೆಲಸ, ಪುಣ್ಯದ ಹುದ್ದೆ. ಗುರು ಸ್ಥಾನದ ಮಹಿಮೆ ಅಪಾರವಾದುದು ಅದು ಅಂಗುಲಿಮಾಲನಂತಹ ರಾಕ್ಷಸನನ್ನೇ ಗೌತಮ ಬುದ್ಧರ ಜ್ಞಾನದಿಂದಾಗಿ ಸನ್ಮಾರ್ಗದತ್ತ ತರಲಿಲ್ಲವೇ...? ಹಾಗೆಯೇ ಹೇಳಬೇಕೆಂದರೆ ನಾನು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕ್ರೈಸ್ತರ ಶಾಲೆಯಲ್ಲಿ ಮಾಡಿದೆ. ನಾನು ಮೆರಿನೋಲ್ ಪ್ರಾಥಮಿಕ ಶಾಲೆ, ಬಾರ್ಕೂರಿಗೆ ಸೇರಿದಾಗ ಸ್ವಲ್ಪ ನನ್ನ ಪ್ರಪಂಚ ಬೇರೆಯಾಗಿತ್ತು. ಕ್ರೈಸ್ತರ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ತಿಳಿಯುವ ಹಂಬಲವಿತ್ತು. ಎಲ್ಲಾ ಶಾಲೆಗಳಲ್ಲಿ ಊಟದ ಮೊದಲು ಅನ್ನಪೂರ್ಣೆಯ ಪ್ರಾರ್ಥನೆಯಿದ್ದರೆ. ನಮ್ಮ ಶಾಲೆಯಲ್ಲಿ ಕ್ರೈಸ್ತರ ''ಪರಲೋಕದಲ್ಲಿರುವ ನಮ್ಮ ತಂದೆಯೇ'' ಪ್ರಾರ್ಥನೆ ಇರುತಿತ್ತು. ಅದೇನೇ ಇರಲಿ, ಅಲ್ಲಿ ನನ್ನ ನೆಚ್ಚಿನ ಶಿಕ್ಷಕಿಯರೆಂದರೆ ಮಾರ್ಗರೇಟಾ ಸಿಸ್ಟರ್, ಜೋಯ್ಸ್ ಟೀಚರ್ ಹಾಗೂ ರಕ್ಷಿತಾ ಟೀಚರ್, ಸುಮ ಟೀಚರ್. ಅವರು ನೀಡಿದ ಪ್ರಥಮ ಬೆಂಬೆಲವೇ ನನ್ನಲ್ಲಿನ ಬಲ, ಛಲವನ್ನು ಅಚಲವಾಗಿಸಿತು. ನಂತರ ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟಕ್ಕೆ ಬಂದೆ. ನನ್ನ ಜೀವನದ ದಿಕ್ಕನ್ನು ಬದಲಿಸಿದ್ದೇ ನನ್ನ ವಿವೇಕ ಶಾಲೆ. ಅಲ್ಲಿ ನನ್ನ ನೆಚ್ಚಿನ ಶಿಕ್ಷಕ ಎಂದರೆ ನರೇಂದ್ರ ಕುಮಾರ್ ಸರ್. ಅವರ ಭೋಧನಾ ಶೈಲಿ, ಅವರ ಧ್ವನಿಯಂತೂ ನನಗೆ ತುಂಬಾ ಇಷ್ಟ. ಈಗ ನಾನು ಮೊದಲ ತೊದಲು ಎನ್ನುವಂತೆ ಕಥೆ, ಕವನ, ಲೇಖನ, ಪ್ರಬಂಧ, ಚುಟುಕು ಬರೆಯುತ್ತಿರುವುದೆಲ್ಲಾ ಅವರ ಸ್ಪೂರ್ತಿ. ಅವರಂತೆಯೇ ನಾನಾಗಬೇಕೆಂಬುದು ನನ್ನ ಬಹುದೊಡ್ಡ ಕನಸು. ಯಾವುದೇ ವ್ಯಕ್ತಿಯೇ ಆದರೂ ಇನ್ನೊಬ್ಬರಿಗೆ ಆದರ್ಶವಾದಾಗಲೇ ಅವರು ಸಾರ್ಥಕತೆಯನ್ನು ಹೊಂದುವುದು. ಅಂತಹ ಸಾರ್ಥಕ ವ್ಯಕ್ತಿ, ಅಸ್ಖಲಿತ ಮಾತುಗಾರ, ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತರಾದ ನನ್ನ ನರೇಂದ್ರ ಕುಮಾರ್ ಸರ್. ಕೇವಲ ಅವರೊಬ್ಬರೇ ಅಲ್ಲ ನನಗೆ ಸದಾ ಬೆಂಬಲ ಕೊಡುವ ಮಹಾಲಕ್ಷ್ಮಿ ಮೇಡಂ, ಸುಮಂಗಲ ಮೇಡಂ, ಮಮತಾ ಮೇಡಂ, ನಾಗರತ್ನ ಮೇಡಂ, ಪುಷ್ಪಲತಾ ಮೇಡಂ, ವಿಜಯಲಕ್ಷ್ಮಿ ಮೇಡಂ, ಕುಸುಮಾ ಮೇಡಂ, ರಾಧಾಕೃಷ್ಣ ಭಟ್ ಸರ್, ಗಣೇಶ್ ಶೆಟ್ಟಿಗಾರ್ ಸರ್ ಹಾಗೂ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸರ್, ನನ್ನ ಪ್ರಾಥಮಿಕ ಶಾಲಾ ಶಿಕ್ಷಕರು. ಒಟ್ಟಿನಲ್ಲಿ ನನಗೆ ಜ್ಞಾನ ತುಂಬಿದ ಪ್ರತಿಯೊಬ್ಬ ಶಿಕ್ಷಕ-ಶಿಕ್ಷಕರಿಗೆ ನನ್ನ ಹೃದಯಂತರಾಳದ ಅಭಿನಂದನೆಗಳು...
ಶಿಕ್ಷಕರು ವಿದ್ಯಾರ್ಥಿಯ ಬದುಕಿನ ದಾರಿದೀಪ... ವಿದ್ಯಾರ್ಥಿಯ ಜ್ಞಾನಕ್ಕೆ ಕೊಡುತ್ತಾರೆ ಒಂದು ರೂಪ. ಆ ರೂಪವೇ ಮುಂದಿನ ಬದುಕಿಗೆ ದಾರಿದೀಪ...