ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ..! - ಭಾಗ 3
Wednesday, May 8, 2024
Edit
ಲೇಖಕಿ : ಚಿತ್ರಾಶ್ರೀ ಕೆ ಎಸ್
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
ಈ ಸಸ್ಯಕಾಶಿಯನ್ನು ಬೆಳೆಸಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಪರೂಪದ ಕಾರ್ಯದಲ್ಲಿ ತೊಡಗಿರುವ ಡಾ. ರಾಮಮೂರ್ತಿ. ಅವರ ಮೊದಲ ಪ್ರಶ್ನೆಯೇ "ನಿಮಗೆ ಹೇಗೆ ಈ ಸ್ಥಳದ ಬಗ್ಗೆ ತಿಳಿಯಿತು?" ನಮಗೆ ವಿಚಿತ್ರವೆನಿಸಿತು! ಯಾವುದೋ park ಎಂದು ಭಾವಿಸಿ ತಿರುಗಾಡಲು ಬಂದವರೋ ಅಥವಾ ಪರಿಸರದ ಬಗೆಗೆ ಆಸಕ್ತಿಯಿಂದ ತಿಳಿಯಲು ಬಂದವರೋ ಎಂಬ ಅವರ ನೋಟದ ಕುತೂಹಲಕ್ಕೆ ಸಮಾಧಾನವಾಗುವಂತೆ ನಮ್ಮನ್ನು ನಮ್ಮ ಹವ್ಯಾಸಗಳ ಸಹಿತ ಪರಿಚಯಿಸಿಕೊಂಡ ತಕ್ಷಣ ಅವರ ಶಿಷ್ಯತ್ವ ದೊರೆಯಿತು! ಶಿಕ್ಷಕ ವೃತ್ತಿಯ ಬಗೆಗೆ ಸ್ವತಃ ಶಿಕ್ಷಕರಾದ ಅವರಿಗೆ ಇರುವ ಗೌರವಾದರ ಕಂಡು ಸಂತಸವಾಯ್ತು.
ಸಸ್ಯಗಳನ್ನು ಅವುಗಳ ವೈಜ್ಞಾನಿಕ ಹೆಸರು, ಸಾಮಾನ್ಯ ಹೆಸರು ಹಾಗೂ ಉಪಯುಕ್ತ ಗುಣಗಳ ಸಹಿತ ಪರಿಚಯಿಸುತ್ತಿದ್ದ ಅವರ ಅಗಾಧ ಜ್ಞಾನ ಸಮುದ್ರದಲ್ಲಿ ವಿಹರಿಸುವ ಭಾಗ್ಯ ನಮ್ಮದಾಗಿದ್ದಕ್ಕೆ ಅಚ್ಚರಿಪಡುತ್ತಾ ಜೊತೆಗೆ ಸಾಗಿದೆವು.
ಜುರಾಸಿಕ್ ಯುಗದ ಆದರೆ ಇಂದಿಗೂ ಬದಲಾಗದ ಸಸ್ಯವರ್ಗದ ಪರಿಚಯದೊಂದಿಗೆ ಆರಂಭವಾದ ವಿವರಣೆ "ಇದು ನೋಡಿ ಕರ್ಪೂರ ತುಳಸಿ, ಇದು ಲವಂಗ ತುಳಸಿ, ಮತ್ತಿದು ರುದ್ರ ತುಳಸಿ…" ಎಂದು ಆ ಗಿಡಗಳ ಒಂದೊಂದೇ ಎಲೆಯನ್ನು ಕಿತ್ತು ಕೈಗಿಟ್ಟು ಆಸ್ವಾದಿಸಿ ಅನುಭವಾತ್ಮಕ ಕಲಿಕೆ ಕಟ್ಟಿಕೊಟ್ಟರು. ತಾವು ಬೆಳೆಸಿದ ನಕ್ಷತ್ರ ಹಾಗೂ ರಾಶಿ ಆಧಾರಿತ ಸಸ್ಯಕ್ಷೇತ್ರದಲ್ಲಿ ನಮ್ಮ ಜನ್ಮ ನಕ್ಷತ್ರ- ಗ್ರಹಗಳ ಆಧಾರದಲ್ಲಿ ಮರಗಳನ್ನು ಹೆಸರಿಸಿ ಅದರೊಂದಿಗೆ ನಮ್ಮನ್ನು ನಿಲ್ಲಿಸಿ ಅದರ ಗುಣಗಳನ್ನು ಆಪ್ತವಾಗಿ ಪರಿಚಯಿಸಿದ್ದು ಅವುಗಳ ಬಗೆಗೆ ವಿಶೇಷ ಆಸಕ್ತಿ ಬೆಳೆಯುವಂತಿತ್ತು. ನನ್ನ ತಂದೆಯವರು ಹೆಸರಿಡುವಾಗಲೇ ನಕ್ಷತ್ರದ ಹೆಸರನ್ನೇ ನನಗಿಟ್ಟ ಕಾರಣ ನಕ್ಷತ್ರದ ಬಗೆಗೆ ಮೊದಲೇ ಪ್ರೀತಿ ಇತ್ತು.. ಅದಕ್ಕೆ ಬಿಲ್ವ ವೃಕ್ಷದ ಗುಣವನ್ನು ಹೊಂದಿಸಿ ಅವರ ವಿವರಣೆ ಕೇಳುವಾಗ ಆಹಾ! ಎಂತಹಾ ಭಾಗ್ಯವಿದು ಎನಿಸಿತು.
ಅದರ ನೈಸರ್ಗಿಕ ಬಣ್ಣ ಹಾಗೂ ಪರಿಮಳಗಳ ಜೊತೆಗೆ ಔಷಧೀಯ ಗುಣವೂ ಸೇರಿದ್ದು ಹಿಂದೆಲ್ಲ ಅದರ ರಸವನ್ನೇ ಶ್ರೀಮಂತರು ತಲೆಗೂದಲನ್ನು ತೊಳೆಯಲು ಬಳಸುವಷ್ಟು ಅದು ಪ್ರಸಿದ್ಧಿ ಪಡೆದಿತ್ತು.
ಇದು ರಕ್ತ ಚಂದನ, ಇದು ಶ್ರೀಗಂಧ ಎಂದು ಪರಿಚಯಿಸುತ್ತಾ ಮುಂದುವರಿದವರು ಶ್ರೀಗಂಧಕ್ಕೆ ಸಂಬಂಧಿಸಿದಂತೆ ಪೌರಾಣಿಕ ನಂಬಿಕೆಯೊಂದನ್ನು ಹಂಚಿಕೊಂಡರು- ಹಿರಣ್ಯ ಕಶ್ಯಪುವನ್ನು ಕೊಲ್ಲಲು ನರಸಿಂಹಾವತಾರ ತಳೆದ ದೇವರ ಉಗ್ರ ಕೋಪ ಶಮನವಾಗಲು ಪ್ರಹ್ಲಾದನು ಶ್ರೀಗಂಧವನ್ನು ನರಸಿಂಹ ದೇವರಿಗೆ ಲೇಪಿಸಿದನಂತೆ! ಶ್ರೀಗಂಧದ ತಂಪೆರೆಯುವ ಗುಣ ತಿಳಿಸುವ ಈ ಬಗೆಯ ಪೌರಾಣಿಕ ನಂಬಿಕೆಗಳ ಹಿಂದೆ ಸಸ್ಯಗಳ ಔಷಧೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಪೂರ್ವ ಆಲೋಚನೆ ಇರುವುದನ್ನು ನಾವು ಗುರುತಿಸಬೇಕಷ್ಟೇ!
ಮುಂದುವರಿದು ಸರ್ಪಗಂಧವನ್ನು ಪರಿಚಯಿಸುವಾಗ 'ಇದು ವಿಷವಿಲ್ಲದ ಹಾವಿನ ಕಡಿತಕ್ಕೆ ಬಳಕೆಯಾಗುವ ಪಾರಂಪರಿಕ ಮದ್ದು' ಎಂದು ಸ್ಪಷ್ಟಪಡಿಸಿದರು.
ನನ್ನ ಮಗಳಿಗೆ Picture Plant ಕೀಟಗಳನ್ನು ತಿನ್ನುವ ಸಸ್ಯವನ್ನು ಮುಟ್ಟಿನೋಡಲು ಅವಕಾಶ ಮಾಡಿಕೊಟ್ಟರು. ಸಸ್ಯಗಳನ್ನು ಬೆಳೆಸಿದವರು 'ಮುಟ್ಟಬೇಡಿ' ಎಂದು ದೂರ ತಳ್ಳುವುದನ್ನೇ ನೋಡಿದ್ದ ನಮಗೆ ಅವರು ಮರ-ಗಿಡಗಳನ್ನು ಮುಟ್ಟಿಯೇ ವಿವರಿಸುತ್ತಾ ಪ್ರಕೃತಿಯೊಂದಿಗೆ ಸಂಭಾಷಿಸುವ ಸಹಜ ವಿಧಾನವನ್ನು ಅನುಸರಿಸುತ್ತಾ ನಮಗೂ ಅನುಕರಿಸಲು ಅವಕಾಶ ಮಾಡಿಕೊಟ್ಟಿದ್ದನ್ನು ನೋಡಿ ಸಂತಸವಾಯ್ತು.
ಮರುಭೂಮಿಯ ಕಳ್ಳಿ ಗಿಡಗಳ ನೂರಾರು ವಿಧಗಳನ್ನು ಬೆಳೆಸಿದಲ್ಲಿಗೆ ಕರೆದೊಯ್ದ ಅವರು ಅಲ್ಲಿದ್ದ ಹಲವು ಅಪರೂಪದ ಕಳ್ಳಿ ಗಿಡಗಳನ್ನು ಹೆಸರು ಮತ್ತು ವಿಶೇಷತೆಗಳೊಂದಿಗೆ ಪರಿಚಯಿಸಿ ಅವುಗಳ ಬಗೆಗೂ ಪ್ರೀತಿ ಹುಟ್ಟಿಸಿದರು! ಓಲ್ಡ್ ಮ್ಯಾನ್ ಎಂಬ ಕಳ್ಳಿ ಗಿಡದ ಮುಳ್ಳುಗಳು ಉದ್ದುದ್ದ ಬಿಳಿ ಕೂದಲುಗಳಂತೆ ಬೆಳೆದು ಗಿಡದ ಹೆಸರನ್ನು ಸಾರ್ಥಕಪಡಿಸಿದ್ದವು! ವ್ಯಾಲೆಂಟೈನ್ಸ್ ಹಾರ್ಟ್ ಎಂಬ ಪ್ರಬೇಧದ ಕಳ್ಳಿ ಗಿಡದ ಎಲೆ ಹೃದಯಾಕಾರದಲ್ಲಿತ್ತು! ದಟ್ಟ ಹಳದಿ, ಕೆಂಪು ವರ್ಣಗಳ ಕಿರೀಟ ಧರಿಸಿದ ಕಳ್ಳಿ ಸಸ್ಯಗಳೂ ಆಕರ್ಷಕವಾಗಿದ್ದವು.
LKG ಮಕ್ಕಳಿಂದ ಹಿಡಿದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳವರೆಗೆ ಬೋಧಿಸಿದ ವಿಶಾಲ ಅನುಭವವಿರುವ ಅವರು ಸಮುದ್ರ ತೀರದಲ್ಲಿ ಮೊಟ್ಟೆ ಇಡುವ ಕಡಲ ಆಮೆ ಸಂತತಿಯ ಸಂರಕ್ಷಣೆಯಲ್ಲಿ ಅಪೂರ್ವ ಶ್ರಮ ವಿನಿಯೋಗಿಸುತ್ತಿದ್ದಾರೆ. ತಮ್ಮ ಉದ್ಯಾನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಜ್ಞಾನಾರ್ಜನೆಯ ಅವಕಾಶ ನೀಡುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗೆಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ!
ಹಲವು ಪ್ರಬೇಧದ ಚಿಟ್ಟೆಗಳು, ಅವುಗಳ ಲಾರ್ವಾಗಳು, ಅಪರೂಪದ ಅಲಂಕಾರಿಕ ಸಸ್ಯಗಳನ್ನೂ ನಾವು ಕಣ್ತುಂಬಿಕೊಂಡೆವು. ಕೆರೆ-ಕೊಳದಲ್ಲಿ ಬೆಳೆಯುವ ಸಸ್ಯವರ್ಗವನ್ನೂ ಅವರು ಬೆಳೆಸಿದ್ದರು. ಸಮಯದ ಕೊರತೆಯಿಂದ ಅವಸರದಲ್ಲಿ ಬೀಳ್ಕೊಡುವ ಕ್ಷಣ ಬಂದಾಗಲೂ ಆತ್ಮೀಯತೆಯಿಂದ "ಮತ್ತೊಮ್ಮೆ ವಿದ್ಯಾರ್ಥಿಗಳ ಜೊತೆಗೆ ಬನ್ನಿ" ಎಂದ ಅವರ ಪ್ರೀತಿಯ ಆಗ್ರಹದ ದನಿಗೆ ಇಲ್ಲವೆನ್ನಲಾಗಲಿಲ್ಲ.
ಅಪರೂಪದ ಅನುಭವಗಳನ್ನು ತುಂಬಿಕೊಟ್ಟ ಈ ಸಸ್ಯೋದ್ಯಾನಕ್ಕೆ ವಿಶಾಖಪಟ್ಟಣದ ಕಡೆಗೆ ಪ್ರವಾಸ ಹೊರಡುವವರು ಅರ್ಧ ದಿನ ಮೀಸಲಿಡಿ! ನಮ್ಮ ಮಕ್ಕಳಿಗೆ ಮಳೆಕಾಡುಗಳಿಂದ ಆರಂಭಿಸಿ ಮರುಭೂಮಿಯವರೆಗೆ ಸುತ್ತಾಡಿ ಪರಿಚಯಿಸಬಹುದಾದ ಸಾವಿರಾರು ಪ್ರಬೇಧದ ಸಸ್ಯಸಂಪತ್ತನ್ನು ಅನುಭವಿಗಳಾದ ಡಾ. ರಾಮಮೂರ್ತಿಯವರ ಮೂಲಕ ಪ್ರೀತಿಯಿಂದ ಪರಿಚಯಿಸುವುದು ಅರಣ್ಯ ಸಂರಕ್ಷಣೆಯ ಪ್ರಥಮ ಪಾಠವಾಗಲಿ. ಸಸ್ಯ ಪ್ರಬೇಧಗಳ ಉಳಿವು, ಅವುಗಳ ಪ್ರಾಮುಖ್ಯತೆ ಅರ್ಥವಾದರೆ ಅರಣ್ಯ ರಕ್ಷಣೆಯ ಉದ್ದೇಶಕ್ಕೆ ಬಲ ತಾನಾಗಿಯೇ ಬರುತ್ತದೆ.
ಈ ಪ್ರವಾಸದ ಕನಸಿಗೆ ಜೀವ ತುಂಬಿದವರು ನನ್ನ ಅಕ್ಕನಂತಿರುವ ಅತ್ತಿಗೆ ಶ್ರೀಮತಿ ಅನುಪಮಾ ಪಂಡಿತ್. ವೃತ್ತಿಯಿಂದ ಭೌತಶಾಸ್ತ್ರ ಬೋಧಕರಾದರೂ ಚಾರಣ ಹಾಗೂ ಪ್ರವಾಸಗಳ ಬಗ್ಗೆ ಅಪರೂಪದ ಆಸಕ್ತಿ ಇರುವವರು. ಈ ವಿಚಾರದಲ್ಲಿ ನನ್ನ ಸ್ಫೂರ್ತಿಯೂ ಹೌದು. ಅತ್ತಿಗೆಯ ಆಸಕ್ತಿಗಳಿಗೆ ಜೊತೆಯಾಗಿ ನಿಲ್ಲುವ ಭಾವ ಶ್ರೀ ಸಂಜಯ ಜೋಶಿಯವರು ಹಾಗೂ ನನ್ನ ಪ್ರವಾಸದ ಕನಸುಗಳಿಗೆ ಜೀವ ತುಂಬುವ ನನ್ನವರಾದ ಶ್ರೀ ಅರವಿಂದ ಪಂಡಿತ್ ಇವರಿಬ್ಬರೂ Software Engineers. ತಮ್ಮ ವೃತ್ತಿಯ ಜೊತೆಗೆ ಆರೋಗ್ಯಕರ ಪ್ರವೃತ್ತಿಯಾಗಿ ಪ್ರವಾಸ ಹಾಗೂ ಚಾರಣಗಳಲ್ಲಿ ಆಸಕ್ತರಾಗಿರುವುದು ನಮ್ಮ ಭಾಗ್ಯ! ಅವರ ಮಗ ಮಂದಾರ್ ಜೋಶಿ ಹಾಗೂ ನಮ್ಮ ಮಗಳು ಧೃತಿ ಇಬ್ಬರೂ ಸಣ್ಣ ವಯಸ್ಸಿನಿಂದಲೂ ನಮ್ಮೊಡನೆ ಪ್ರಕೃತಿಯ ಮಡಿಲಿನಲ್ಲಿ ಅತೀವ ಕುತೂಹಲದಿಂದ ಅನ್ವೇಷಕ ಮನೋಭಾವದೊಂದಿಗೆ ಬೆಳೆಯುತ್ತಿರುವವರು. ಚಾರಣ ಹಾಗೂ ಪ್ರವಾಸಗಳ ಸಂದರ್ಭದಲ್ಲಿ ಅವರ ಪ್ರಶ್ನೆಗಳು ನಮ್ಮ ಜ್ಞಾನದ ಮೂಲದ್ರವ್ಯ! ದಣಿವರಿಯದ ಉತ್ಸಾಹ, ಅಪರಿಮಿತ ಆಸಕ್ತಿ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಗುಣದ ಈ ತಂಡದ ಸಹಚರ್ಯ ಪೂರ್ವ ಕರಾವಳಿಯ ಪ್ರವಾಸವನ್ನು ಅಪೂರ್ವವಾಗಿಸಿದೆ.
(ಈ ಸರಣಿಯ ಬರಹವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದ ಓದುಗ ಮಿತ್ರರಿಗೆ, ಸ್ಫೂರ್ತಿ ತುಂಬಿಕೊಂಡ ಕಿರಿಯರಿಗೆ, ಅಕ್ಷರಗಳಿಗೆ ಅಕ್ಕರೆಯ ವೇದಿಕೆಯನ್ನೊದಗಿಸಿದ ಮಕ್ಕಳ ಜಗಲಿಗೆ ಆತ್ಮೀಯ ನಮನಗಳು.)
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob : 9449946810
********************************************