-->
ಜಗಲಿ ಕಟ್ಟೆ : ಸಂಚಿಕೆ - 42

ಜಗಲಿ ಕಟ್ಟೆ : ಸಂಚಿಕೆ - 42

ಜಗಲಿ ಕಟ್ಟೆ : ಸಂಚಿಕೆ - 42
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



     ಜಗಲಿಯ ಮಕ್ಕಳೆಲ್ಲಾ ಪರೀಕ್ಷಾ ಸಿದ್ಧತೆಯಲ್ಲಿದ್ದೀರಿ ಎಂದುಕೊಳ್ಳುತ್ತೇನೆ... ನೀವು ಈಗಾಗಲೇ ಕಳುಹಿಸಿ ಕೊಟ್ಟಿರುವ ಚಿತ್ರ, ಕಥೆ, ಕವನಗಳನ್ನು ಪ್ರಕಟಿಸುತ್ತಾ ಇದ್ದೇವೆ. ಮೊನ್ನೆ ಮೊನ್ನೆ ಒಬ್ಬಾಕೆ ವಿದ್ಯಾರ್ಥಿನಿ "ಪರೀಕ್ಷೆ ಮುಗಿದ ತಕ್ಷಣ ಜಗಲಿಗೆ ಚಿತ್ರ ಬರೆಯುತ್ತೇನೆ" ಅಂದಿದ್ದಳು. ಉಳಿದವರು ಕೂಡ ಪರೀಕ್ಷೆಯ ನಂತರ ಜಗಲಿಗೆ ಕಥೆ, ಕವನ, ಲೇಖನಗಳನ್ನು ಬರೆದು ಕಳುಹಿಸುವಿರೆಂದು ಭಾವಿಸುತ್ತೇನೆ. ಅಂತೂ ಇಂತೂ ನಿತ್ಯ ನಿರಂತರವಾಗಿ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಿಸುತ್ತಿದ್ದೇನೆ...
       ಇನ್ನು ಬೇಸಿಗೆ ರಜೆಗಳು ಆರಂಭವಾದ ಕೂಡಲೇ ನಿಮ್ಮೂರಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ನಡೆಯುತ್ತವೆ. ಸಾಧ್ಯವಾದರೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ. ಶಾಲಾ ವತಿಯಿಂದ ಅಥವಾ ಇತರ ಸಂಘ ಸಂಸ್ಥೆಗಳು ನಡೆಸುವಂತಹ ಬೇಸಿಗೆ ಶಿಬಿರಗಳು ನಮ್ಮ ಕಲಿಕೆಯ ಭಾಗವನ್ನು ವಿಸ್ತಾರಗೊಳಿಸುತ್ತದೆ. ಶಾಲಾ ಅವಧಿಯಲ್ಲಿ ಕೇವಲ ಪಠ್ಯ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರುತ್ತದೆ. ಆದರೆ ಬೇಸಿಗೆ ಶಿಬಿರಗಳಲ್ಲಿ ಯೋಗ, ಚಿತ್ರ, ಕ್ರಾಫ್ಟ್, ಬರವಣಿಗೆ, ಹಾಡು, ನೃತ್ಯ, ರಂಗಾಭಿನಯ ಹೀಗೆ ಸರ್ವವಿಧದ ವಿಷಯಗಳೂ ಅಲ್ಲಿರುತ್ತದೆ.
     ಬೇಸಿಗೆ ಶಿಬಿರಗಳು ಹೆಚ್ಚಾಗಿ ಪ್ರಾಯೋಗಿಕವಾಗಿರುತ್ತದೆ. ಇಲ್ಲಿ ಯಾವುದೇ ಭಾಷಣ, ಉಪನ್ಯಾಸ, ಉಪದೇಶಗಳು ಇರುವ ಅವಕಾಶಗಳು ಕಡಿಮೆ. ಇಲ್ಲಿ ನಮ್ಮ ಹಸ್ತ ಕೌಶಲ್ಯ, ಭಾವಾಭಿವ್ಯಕ್ತಿ, ಬೌದ್ಧಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಚಟುವಟಿಕೆಗಳು ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ, ಸೃಜನಶೀಲ ಗೊಳಿಸುವ ಪ್ರಕ್ರಿಯೆ ನಡೆಯುತ್ತದೆ.
      ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿವಿಧ ಕಲೆಗಳಲ್ಲಿ ಅನುಭವವಿರುವ ಸಂಪನ್ಮೂಲ ವ್ಯಕ್ತಿಗಳ ಪರಿಚಯವಾಗುತ್ತದೆ. ಅವರ ಸಾಧನೆ, ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು. ಅವರು ಹೇಳಿಕೊಟ್ಟ ಮಾದರಿಯಲ್ಲಿ ಇನ್ನು ಹೊಸತನ್ನು ನಾವು ಶೋಧನೆ ಮಾಡಬಹುದು. ಶಿಬಿರಗಳಲ್ಲಿ ಹೆಚ್ಚಾಗಿ ಆಸಕ್ತಿ ಇರುವ ವಿದ್ಯಾರ್ಥಿಗಳೇ ಭಾಗವಹಿಸುವುದರಿಂದ ವಿವಿಧ ಪ್ರತಿಭಾನ್ವಿತ ಮಕ್ಕಳ ಸಂಪರ್ಕ ದೊರೆಯುತ್ತದೆ. ಅವರಲ್ಲಿರುವ ಪ್ರತಿಭೆಗಳನ್ನು ಅರಿತು ನಾವು ಜೊತೆ ಸೇರಿ ಕಲಿಯಬಹುದು. 
     ಸ್ವರೂಪ ಅಧ್ಯಯನ ಸಂಸ್ಥೆ , ರಂಗಮನೆ ಸುಳ್ಯ ಹೀಗೆ ಬೇರೆ ಬೇರೆ ಕಡೆಗಳಲ್ಲಿ ನಡೆಸುವ ಶಿಬಿರದ ಮಾಹಿತಿಯನ್ನು ಇಲ್ಲಿ ಹಂಚಿದ್ದೇನೆ. ಅವಕಾಶವಿರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
         

ಕಳೆದ ಸಂಚಿಕೆಯ ಜಗಲಿಕಟ್ಟೆ - 41 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


     ನಮಸ್ತೆ ಸರ್... ಕಳೆದ ವಾರ ಜಗಲಿಯಲ್ಲಿ ಶ್ರಾನ್ವಿಯ ಚಿತ್ರ ಸಂಚಿಕೆ: 390 ಮರು ಪ್ರಕಟಗೊಂಡಾಗ ಒಮ್ಮೆ ನೋಡಿ, ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆನಿಸಿತು. ಆ ಮುದ್ದುಮುಖ ಅವಳಲ್ಲಿದ್ದ ಆಸಕ್ತಿ, ಆ ಕಣ್ತುಂಬಾ ಇದ್ದ ನೂರಾರೂ ಕನಸುಗಳು...... ಶಿಶಿರನ ಕನಸುಗಳು ಹಾಗೆಯೇ ತಾನೇ. ದೈವೀಚ್ಛೆಯಂತೆ ಎಲ್ಲವೂ ನಡೆಯುವುದು. ಶಾಲೆಯೇ ತನ್ನ ಉಸಿರು, ಇಷ್ಟದ ಚಟುವಟಿಕೆಯ ತಾಣ ಎಂದು ತಿಳಿದಿದ್ದ ಶಿಶಿರ್ ಆಕಸ್ಮಾತ್ ಅನಾರೋಗ್ಯದಿಂದ ಶಾಲೆಗೆ ಹೋಗಲು ಕಷ್ಟವಾದಾಗ.. ನನಗೆ ಯಾಕೆ ಹೀಗೆ ? ಎಂದು ದುಖಿಸುತ್ತಿದ್ದಾಗ ನೆನಪಾದದ್ದೇ ಜಗಲಿ, ಅವನು ಸಂಭ್ರಮಿಸುತ್ತಿದ್ದ ಮಕ್ಕಳ ಜಗಲಿ. ನಿಮಗೆ ಫೋನ್ ಮಾಡಿದಾಗ ನಿಮ್ಮಿಂದ ಸಿಕ್ಕ ಸ್ಪಂದನೆ.. ಬಂಟ್ವಾಳದ ಶಿಕ್ಷಣಾಧಿಕಾರಿಯಾಗಿದ್ದ ಜ್ಞಾನೇಶ್ ಸರ್ ಭೇಟಿ ಅವರ ಜೀವನ ಸಂಭ್ರಮಿಸುವ ಮನೋಸ್ಥೖರ್ಯ ತುಂಬಿದ ಮಾತುಗಳು, ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುವ ಆವಕಾಶ. ಅಲ್ಲಿ ಜಗಲಿಯ ಸಹೃದಯಿ ಶಿಕ್ಷಕರನ್ನು ಭೇಟಿ ಮಾಡಿದ್ದು... ಮುಂದೆ ತನ್ನ ಮಹದಾಶೆಯ ಎಸ್.ಎಸ್. ಎಲ್. ಸಿ. ಪರೀಕ್ಷೆಯನ್ನು ಬರೆಯಲು ಸಾಧ್ಯವಾಯಿತು. ಕಾಲೇಜು ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದ್ದಿದ್ದಾಗ ಮುಂದೇನು? ಎಂಬ ಚಿಂತೆಯಲ್ಲಿ ನಾವಿದ್ದಾಗ ಬದುಕಿನ ಪ್ರೀತಿಯ ಶಿಕ್ಷಣ ನೀಡುತ್ತಿರುವ ಗೋಪಾಡ್ಕರ್ ಸರ್ ಭೇಟಿಗೂ ಕಾರಣವಾಯಿತು. 
ಜಗಲಿಯಿಂದ ಸಿಕ್ಕ ಪ್ರೇರಣೆಯಿಂದ ನಂತರ ಅವನು ಕೊರಗಿದ್ದೇ ಇಲ್ಲ. ದಿನದ ಒಂದೊಂದು ಕ್ಷಣವನ್ನು ಧನಾತ್ಮಕವಾಗಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂತೋಷದಿಂದ ಕಳೆದ ಆ ದಿನಗಳು... ಅಕ್ಕನ ಪತ್ರ ನೀಡಿದ ಹುಮ್ಮಸ್ಸು, ವಾರದ ಕೊನೆಯಲ್ಲಿ ಅಕ್ಕನಿಗೆ ಪತ್ರ ಬರೆಯಬೇಕು ಏನು ಬರೆಯಲಿ, ಹೇಗೆ ಬರೆಯಲಿ ಎಂಬುದು ಪುಸ್ತಕಗಳ ಓದುವ ಖುಷಿಗೆ ಕಾರಣವಾಯಿತು. ಇವತ್ತು ಶ್ರಾನ್ವಿ, ಶಿಶಿರ್ ಇಲ್ಲ ಆದರೂ ಅವರು ಕಷ್ಟದಲ್ಲೂ ಜಗಲಿಯಲ್ಲಿ ಸಂತೋಷದಿಂದ ಸಂಭ್ರಮಿಸಿದ ಸುಂದರ ದಿನಗಳ ನೆನಪುಗಳು ಇದೆಯಲ್ಲಾ ಸಾಕು ನಮ್ಮನ್ನು ನಾವು ಸಂತೖಸಿಕೊಳ್ಳಲು..... ಮಕ್ಕಳ ಆಸಕ್ತಿ ತೆರೆದುಕೊಳ್ಳಲು ಪ್ರೀತಿಯ ಸ್ಪಂದನೆ, ಅವಕಾಶ... ನಮ್ಮ ಮಕ್ಕಳ ಜಗಲಿ. ಈ ವಾರ ಜಗಲಿಯಲ್ಲಿ ಪ್ರಕಟವಾದ ಮಕ್ಕಳ ಚಿತ್ರಗಳು ಕಥೆಗಳು, ಕವನಗಳನ್ನು ಓದಿ ತುಂಬಾ ಸಂತೋಷವಾಯಿತು. ಎಲ್ಲಾ ಮಕ್ಕಳಿಗೂ ಪ್ರೀತಿಯ ಅಭಿನಂದನೆಗಳು. 'ಗೆಲ್ಲಲು ಹೊರಟವಳು' ಯಾಕೂಬ್ ಸರ್ ಬರೆದ ಹೃದಯದ ಮಾತು ಲೇಖನ ಇಷ್ಟವಾಯಿತು. ಧನ್ಯವಾಗಳು.
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



     ನಮಸ್ತೇ.... ಪೂರಕ, ರೇಚಕ, ಕುಂಭಕ ಇವು ಪ್ರಾಣಾಯಾಮದ ಪ್ರಮುಖ 3 ಹಂತಗಳು. ಅಂದರೆ ಉಸಿರನ್ನು ಒಳ ತೆಗೆದುಕೊಳ್ಳುವಿಕೆ, ಹೊರಬಿಡುವಿಕೆ ಹಾಗೂ ಹಿಡಿದಿಟ್ಟುಕೊಳ್ಳುವಿಕೆ ಎಂಬ ಮೂರು ಆಯಾಮಗಳನ್ನು ಹೊಂದಿದೆ. ಹಾಗೆಯೇ ಒಳ್ಳೆಯ ವಿಚಾರಗಳನ್ನು ಸ್ವೀಕರಿಸಿ ಕೆಟ್ಟ ವಿಚಾರಗಳನ್ನು ಹೊರಬಿಡಬೇಕೆನ್ನುವ ಉತ್ತಮ ಸಂದೇಶವನ್ನು ಸಾರುವ ಲೇಖನ ತುಂಬಾ ಇಷ್ಟವಾಯಿತು ಸರ್. ಧನ್ಯವಾದಗಳು ಸರ್.
    ಯಶಸ್ಸು ಎಲ್ಲರಿಗೂ ದಕ್ಕಲಾರದು. ಪರಿಶ್ರಮ ಪ್ರಯತ್ನವಿದ್ದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ. ಅನೇಕರು ಅನೇಕ ವಿಚಾರಗಳಲ್ಲಿ ಸಿದ್ಧ ಹಸ್ತರಾಗಲು ಇಂತಹ ಅವಿರತ ಶ್ರಮ ಖಂಡಿತವಾಗಿಯೂ ಇರುತ್ತದೆ. ರಮೇಶ್ ಬಾಯರ್ ಅವರಿಂದ ಸಿದ್ಧ ಹಸ್ತರು ಎಂಬ ವಿಷಯದ ಕುರಿತಾದ ಸೊಗಸಾದ ಲೇಖನ.   
    ವೈಜ್ಞಾನಿಕ ಲೇಖನದಲ್ಲಿ ದಿವಾಕರ ಶೆಟ್ಟಿ ಸರ್ ರವರು ಜೀವಕೋಶದ ರೈಬೋಸೋಮ್ ಗಳಲ್ಲಿ ಪ್ರೊಟೀನ್ ಸಂಶ್ಲೇಷಣಾ ವಿಧಾನವನ್ನು ಅಡುಗೆ ಮಾಡುವ ವಿಧಾನದಂತೆ ವಿವರಿಸಿದ ಪರಿ ಬಹಳ ಸೊಗಸಾಗಿತ್ತು.
     ಅರವಿಂದರವರ ಹಕ್ಕಿ ಕಥೆಯಲ್ಲಿ ಕಂದು ತಲೆ ನೆಲಸಿಳ್ಳಾರ ಹಕ್ಕಿಯ ಪರಿಚಯ ಛಾಯಾಚಿತ್ರದೊಂದಿಗೆ ಸೊಗಸಾಗಿ ಮೂಡಿ ಬಂದಿದೆ.
     ಸಪೂರವಾದ ಬಳ್ಳಿಯಂತೆ ಹಬ್ಬುವ ಹಾಡೆ ಬಳ್ಳಿ ಸಸ್ಯದ ಪರಿಚಯದ ಜೊತೆಗೆ ಅದರ ಉಪಯುಕ್ತತೆಯನ್ನು ಸುಂದರವಾಗಿ ತಿಳಿಸಿದ್ದಾರೆ ವಿಜಯ ಮೇಡಂರವರು.
    ಹೆಣ್ಣು ಅಬಲೆಯಲ್ಲ ಯಾವುದೇ ಕಷ್ಟಗಳು ಎದುರಾದರೂ ಧೈರ್ಯದಿಂದ ಎದುರಿಸಬಲ್ಲರು ಎಂಬುದನ್ನು ಸಾರುವ ಸೊಗಸಾದ ಲೇಖನ ಯಾಕೂಬ್ ಸರ್ ರವರಿಂದ. ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸಕಾಲಿಕ ಲೇಖನ.
    ಆರ್ಟ್ ಗ್ಯಾಲರಿಯಲ್ಲಿ ಕೌಶಿಕ್ ಹೆಗಡೆಯವರ ಕಲಾ ಕೃತಿಗಳ ಪರಿಚಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    'ಮಕ್ಕಳಿಗಾಗಿ ಗಾಂಧೀಜಿ' ಎನ್ನುವ ಗಾಂಧೀಜಿಯವರ ಚಿಂತನೆಗಳನ್ನು ಒಳಗೊಂಡಿರುವ ಉಪಯುಕ್ತ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
    ಪರೀಕ್ಷೆಯಲ್ಲಿ ಅಂಕ ಗಳಿಸಲು ಅಂದವಾದ ಬರಹ ಕೂಡ ಮುಖ್ಯ. ಅಂದವಾದ ಬರಹ ಹೇಗಿರಬೇಕು ಎಂಬುದನ್ನು ಬಹಳ ಸೊಗಸಾಗಿ ಅಂಬಿಕಾ ಮೇಡಂರವರು ತಿಳಿಸಿದ್ದಾರೆ.
     ಮಕ್ಕಳ ಕತೆಗಳ ಹಾಗೂ ಕವನಗಳ ಸಂಚಿಕೆ ತುಂಬಾ ಚೆನ್ನಾಗಿತ್ತು. ಮಹಾಶಿವರಾತ್ರಿ ಕುರಿತಾಗಿ ಮಕ್ಕಳ ಲೇಖನಗಳು ಸೊಗಸಾಗಿವೆ. ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ಮಕ್ಕಳ ಎಲ್ಲಾ ಚಿತ್ರಗಳು ತುಂಬಾ ಸೊಗಸಾಗಿವೆ. ಕಥೆ, ಕವನ ಮತ್ತು ಲೇಖನ ಬರೆದ ಮಕ್ಕಳಿಗೆ ಹಾಗೂ ಚಿತ್ರ ಬಿಡಿಸಿದ ಮಕ್ಕಳಿಗೆ ಅಭಿನಂದನೆಗಳು.
     ರಮೇಶ್ ಉಪ್ಪುಂದರವರ ಈ ವಾರದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
    ತಾರಾನಾಥ್ ಸರ್ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಈ ಪತ್ರಿಕೆಯನ್ನು ಅವಿರತವಾಗಿ ನಡೆಸುತ್ತಿದ್ದು ಅನೇಕ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರತರಲು ಕಾರಣಕರ್ತರಾಗಿದ್ದಾರೆ. ಸರ್ ತಮಗೆ ನನ್ನ ಹೃತ್ಪೂರ್ವಕ ನಮನಗಳು.
    ಈ ವಾರದ ಜಗಲಿಯಲ್ಲಿ ಲೇಖನಗಳನ್ನು ಬರೆದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************



    ಪ್ರೀತಿಯ ಪುಸ್ತಕ ಶೀರ್ಷಿಕೆಯಡಿಯಲ್ಲಿ ಮಕ್ಕಳ ಓದಿಗೆ ಸಂಬಂಧಿಸಿ ಅಪರೂಪದ ನೂರು ಪುಸ್ತಕಗಳನ್ನು ಪರಿಚಯಿಸಿರುವ ವಾಣಿಯಕ್ಕನವರಿಗೆ ಅಭಿನಂದನೆಗಳು.
            ಎಲ್ಲ ನೂರು ಪುಸ್ತಕಗಳ ಶಿರ್ಷೀಕೆಗಳೂ ನಮ್ಮನ್ನು ಅಚ್ಚರಿಯಲ್ಲಿ ಕೆಡಹಿವೆ. ನಾವು ಈ ಮೊದಲು ಮಕ್ಕಳ ಪುಸ್ತಕಗಳೆಂದರೆ ಅಂದುಕೊಂಡಿರುವುದು ಅಕ್ಬರ್ - ಬೀರಬಲ್ ಕಥೆಗಳು, ತೆನಾಲಿರಾಮನ ಕಥೆಗಳು, ಈಸೋಪನ ನೀತಿಕತೆಗಳು, ದಿನಕ್ಕೊಂದು ಕಥೆ.. ಇವಿಷ್ಟು ಮಾತ್ರ. ಆದರೆ ಮಕ್ಕಳ ಓದಿಗೇ ಸಂಬಂಧಿಸಿ ಅದೂ ವಿವಿಧ ವಿಷಯಗಳಿಗೂ ಸಂಬಂಧಿಸಿ ಎಷ್ಟೆಲ್ಲ ವೈವಿಧ್ಯ ಪುಸ್ತಕಗಳಿವೆ ಎಂದು ತಿಳಿದೂ ಅಚ್ಚರಿಯಾಯಿತು. ಈ ಎಲ್ಲ ಪುಸ್ತಕಗಳ ಹೆಸರುಗಳನ್ನೂ ನಾವು ಮೊದಲು ಕಣ್ಣಿಂದ ಕಂಡಿದ್ದಿಲ್ಲ.. ಕಿವಿಯಿಂದ ಕೇಳಿದ್ದಿಲ್ಲ.. ಅಷ್ಟೂ ಅತ್ಯಪರೂಪದ ಪುಸ್ತಕಗಳನ್ನು ಪರಿಚಯಿಸಿದ್ದೀರಿ ವಾಣಿಯಕ್ಕ. ಗ್ರಾಹಕರ ಹಕ್ಕುಗಳನ್ನು ಮಕ್ಕಳಿಗೆ ತಿಳಿಸುವ ಪುಸ್ತಕ ಇರಬಹುದು, ಪರಿಸರದ ಬಗೆಗಿನ ಪುಸ್ತಕ ಇರಬಹುದು ಇನ್ನೂ ಎಷ್ಟೋ ಕ್ಲಿಷ್ಟ ಸಂಗತಿಗಳನ್ನೂ ಮಕ್ಕಳಿಗೆ ಸರಳವಾಗಿ, ಆಸಕ್ತಿಕರವಾಗಿ ತಿಳಿಸುವ ಪುಸ್ತಕಗಳನ್ನು ಪರಿಚಯಿಸಿದ್ದೀರಿ ವಾಣಿಯಕ್ಕ. ಇಂಥಹುದೆಲ್ಲ ಪುಸ್ತಕಗಳು ಕನ್ನಡದಲ್ಲಿ ಇವೆಯೆಂದು ನಮಗೆ ತಿಳಿದಿರಲಿಲ್ಲ. ಅದೂ ಅಲ್ಲದೇ ನಾವು ನೋಡಿದ್ದ ಕೆಲವಾರು ಮಕ್ಕಳ ಕಥೆ ಪುಸ್ತಕಗಳೇ ಹೆಚ್ಚು ಅಂದುಕೊಂಡಿದ್ದೆವು. ಮಕ್ಕಳ ಪುಸ್ತಕಗಳ ಬಗ್ಗೆ ನಾವು ತಿಳಿದಿದ್ದೇವೆ ಎಂಬ ನಮ್ಮೊಳಗಿನ ಸಣ್ಣ ಅಹಂನ ಪೊರೆ ಕೂಡ ಈ ಪುಸ್ತಕ ಪರಿಚಯದಿಂದ ಕಳಚಿತು. ಥ್ಯಾಂಕ್ಯೂ ವಾಣಿಯಕ್ಕ. ಈ ಮಕ್ಕಳ ಪುಸ್ತಕ ಪರಿಚಯವನ್ನು ನೀವು ಇನ್ನೂ ಮುಂದುವರಿಸಲಿರುವಿರಿ ಎಂದು ತಿಳಿದೂ ಮತ್ತೂ ಸಂತೋಷವಾಯಿತು. ಮಕ್ಕಳ ಜಗಲಿಯಲ್ಲಿ ಇಂಥಹದೊಂದು ಉಪಯುಕ್ತ ಅಪರೂಪದ ಪುಸ್ತಕಗಳ ಪರಿಚಯ ನೂರರ ಸಂಚಿಕೆ ತಲುಪಿರುವುದಕ್ಕೆ ಜಗಲಿಗೂ ಅಭಿನಂದನೆಗಳು.
........................................... ವಿದ್ಯಾ ಕಾರ್ಕಳ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಕ್ಕಾಡಿಗೋಳಿ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ,ಕವಿತಾ ಶ್ರೀನಿವಾಸ ದೈಪಲ, ವಿದ್ಯಾ ಕಾರ್ಕಳ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಸ್ವರೂಪ ಅಧ್ಯಯನ ಕೇಂದ್ರದ ಈ ವರ್ಷದ ಮೆಮೊರಿ ಕ್ಯಾಂಪ್ ಇನ್ನಷ್ಟು ಫಲಿತಾಂಶದ ಮಾದರಿಯಾಗಿದೆ. 12 ದಿನಗಳ ಕ್ಯಾಂಪ್ 12 ತಿಂಗಳಿಗೆ ವಾರದ DEVELOPMENT EDUCATION10×10 ಅಂದರೆ ಡೈಲಿ ಡೆವಲಪ್ಮೆಂಟ್ ಶೋ ಆಗಿ ಮುಂದುವರಿಯಲಿದೆ.






Ads on article

Advertise in articles 1

advertising articles 2

Advertise under the article