-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 94

ಸ್ಫೂರ್ತಿಯ ಮಾತುಗಳು : ಸಂಚಿಕೆ - 94

ಸ್ಫೂರ್ತಿಯ ಮಾತುಗಳು : ಸಂಚಿಕೆ - 94
ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

              
     ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು 19.03.1998 -22.5.2004ರ ನಡುವೆ ಭಾರತದ ಪ್ರಧಾನಿಯಾಗಿದ್ದರು. ಭಾರತದ ಸಮರ್ಥ ಪ್ರಧಾನಿಗಳಲ್ಲಿ ಅವರೂ ನಿತ್ಯಸ್ಮರಣೀಯರು. ವಾಜಪೇಯಿಯವರು “ಭಾರತ ಪ್ರಕಾಶಿಸುತ್ತದೆ” (INDIA IS SHINING) ಎಂಬ ಘೋಷಣೆಯೊಂದಿಗೆ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಫಲಿತಾಂಶ ಹೊರ ಬಿದ್ದಾಗ ಅವರ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗಳಿಸಿದರೂ ಬಹುಮತದಿಂದ ಸ್ವಲ್ಪ ದೂರವುಳಿಯಿತು. ಅವರ ಉದ್ದೇಶದಂತೆ ಪ್ರಕಾಶಿಸುವ ಭಾರತ ನಮ್ಮೆಲ್ಲರ ಕನಸೂ ಹೌದು. ಆದರೆ ನನಸಾಗಲು ಇನ್ನೂ ಕಾಯಬೇಕಾಗಿದೆಯೆಂಬ ಆತಂಕ ನಿಚ್ಚಳವಾಗಿದೆ. ರಾಜಕೀಯ ಇಚ್ಛಾ ಶಕ್ತಿಯು ಪ್ರಬಲವಾಗುವ ತನಕ ಕನಸು ಕನಸಾಗಿಯೇ ಉಳಿಯುತ್ತದೆ ಎಂಬುದು ಪ್ರಾಂಜಲ ಸತ್ಯ. ಭಾರತ ಪ್ರಕಾಶಿಸಲು ದೇಶದ ಪ್ರತಿಯೊಬ್ಬರೂ ಉತ್ಕೃಷ್ಟವಾದ ಭೂಮಿಕೆಯನ್ನು ನಿರ್ವಹಿಸಬೇಕು.

    ಭಾರತ ಪ್ರಕಾಶಿಸಲು ಭಾರತೀಯರೆಲ್ಲರೂ ಕಂಕಣಿತರಾಗಬೇಕಾಗಿದೆ. “ಭಾರತ” ಇದರಲ್ಲಿರುವ ಅಕ್ಷರಗಳನ್ನು ವಿಮರ್ಶೆ ಮಾಡಿದರೆ “ಭಾ” ಎಂದರೆ ಜ್ಞಾನ. “ರತ” ಎಂದರೆ ರತಿಸು ಅಥವಾ ಅನುಭವಿಸು ಎಂದರ್ಥ. ಜ್ಞಾನವನ್ನು ಯಾವಾತ ಅನುಭವಿಸಿ ಆನಂದಿಸುವನೋ ಅವನೇ ಭಾರತೀಯ. ನಮ್ಮ ಪ್ರಮಾಣ ಪತ್ರಗಳಲ್ಲಿ ರಾಷ್ಟ್ರೀಯತೆಯನ್ನು ಭಾರತೀಯ ಎಂದೇ ದಾಖಲಿಸುತ್ತೇವೆ. ಯಾರನ್ನೇ ಆಗಲಿ, ಭಾರತೀಯ ಎನ್ನ ಬೇಕಾದರೆ ಆತ ಮತ್ತು ಆಕೆ ಇಲ್ಲಿನ ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅನುಸರಣೆ ಮಾಡಿರಬೇಕು. ಭಾರತೀಯ ಸಿದ್ಧಾಂತಗಳು ಮತ್ತು ಆಚರಣೆಗಳನ್ನು ಬದುಕಿನೊಂದಿಗೆ ಸಮನ್ವಯ ಮಾಡಬೇಕು. ನೈಜ ಅರ್ಥದ ಭಾರತೀಯರಾಗ ಬೇಕು. ನೈಜ ಭಾರತೀಯತೆಯ ಧಾರಕರಿಂದ ಬಾರತವು ಪ್ರಕಾಶಿಸುವಂತೆ ಮಾಡಲು ಖಂಡಿತ ಸಾಧ್ಯವಿದೆ.

      ಭಾರತೀಯ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದುದು ಗೌರವ, ಪ್ರೀತಿ ಮತ್ತು ಸಹಬಾಳ್ವೆ. ಈ ಮೂರೂ ಅಂಶಗಳನ್ನು ಚಾಚೂ ತಪ್ಪದೆ ತನ್ನೊಳಗೆ ಅಂತರ್ಗತಗೊಳಿಸಿಕೊಂಡವನು ನಿಜವಾದ ಭಾರತೀಯ. ಶಾಲಾ ಎಸ್ಸೆಂಬ್ಲಿಯಲ್ಲಿ ನಾವು ದಿನಾ ಹೇಳುವ ಪ್ರತಿಜ್ಞೆಯೊಂದಿದೆ- “ನನ್ನ ದೇಶ ಭಾರತ. ನಾನು ಭಾರತೀಯ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು......” ಹೀಗೆ ಸಾಗುವ ಪ್ರತಿಜ್ಞೆಯಲ್ಲೂ ಗೌರವ, ಪ್ರೀತಿ ಮತ್ತು ಸಹಬಾಳ್ವೆಯನ್ನು ಒತ್ತಿ ಹೇಳಲಾಗಿದೆ.  ಶಪಥವನ್ನು ಮಾಡುವ ರೂಢಿ  ಇಂದು ನಿನ್ನೆ ಆರಂಭಗೊಂಡಿರುವುದಲ್ಲ. ದಶಕಗಳಾಚೆಗೂ  ನಮ್ಮ ಹೆತ್ತವರೂ ಸೇರಿದಂತೆ ಎಲ್ಲರೂ ಪ್ರತಿಜ್ಞಾ ಮಾತುಗಳನ್ನು ಎದೆ ಮಟ್ಟಕ್ಕೆ ಕೈ ಚಾಚಿ ಆತ್ಮ ಸಾಕ್ಷಿಯಾಗಿ ಉಲಿಯುತ್ತಲೇ ಬಂದಿದ್ದಾರೆ. ಆದರೆ ಪ್ರತಿಜ್ಞೆ ಅಂತರಾಳದೊಳಗೆ ದಾಖಲಾಗಲಿಲ್ಲ. ಅದು ತುಟಿಗಳಿಗಷ್ಟೇ ಮೀಸಲಾಯಿತು. ಮಾಡುವ ಪ್ರತಿಜ್ಞೆಯು ಹೃದಯಾಂತರ್ಗತವಾದಾಗ ಭಾರತ ಪ್ರಕಾಶಿಸುವುದರಲ್ಲಿ ಸಂದೇಹವಿಲ್ಲ.  ಭಾರತೀಯರನ್ನು ಸೋದರ ಸೋದರಿಯರೆಂದು ತಿಳಿಯುತ್ತೇನೆ ಎನ್ನುವ ನಾವು ನಮ್ಮ ಹೆತ್ತವರ ಉದರದ ಮೂಲಕವೇ ಜನಿಸಿ ಬಂದ ಸಹೋದರ ಸಹೋದರಿಯರನ್ನಾದರೂ ಪ್ರೀತಿಸುತ್ತೇವೆಯೇ? ಗೌರವಿಸುತ್ತೇವೆಯೇ? ಎಂಬ ಪ್ರಶ್ನೆಗಳಿಗೆ ಬಹ್ವಂಶ ನಕಾರವೇ ಉತ್ತರವಾಗಿರುತ್ತದೆ. ಆದುದರಿಂದಲೇ ಕೌಟುಂಬಿಕ ಸಾಮರಸ್ಯ, ಸಾಮಾಜಿಕ ಸಾಮರಸ್ಯ ನಮ್ಮಲ್ಲಿ ಬೆಳೆದಿಲ್ಲ. ಇಂದಿನ ಮಕ್ಕಳು ಮುಂದಿನ ಜನಾಂಗ. ನಾವು ಎಲ್ಲರನ್ನೂ ಪ್ರೀತಿಸುವ, ಸಹಿಸುವ ಮತ್ತು ಗೌರವಿಸುವ ಪ್ರಾಜ್ಞರಾಗಬೇಕೆಂಬುದೇ ನಮ್ಮ ಹಿರಿಯಾಸೆಯಾದರೆ ಭಾರತ ಪ್ರಕಾಶಿಸಲಾರಂಭಿಸುತ್ತದೆ.

       ಶರಾಬು ಅಂಗಡಿಗಳನ್ನು ಮುಚ್ಚಿ ಬಡವರ ಹಣವು ಕುಟುಂಬದ ಬೆಳವಣಿಗೆಯಲ್ಲಿ ಬಳಕೆಯಾಗುವಂತೆ ನಿಯಮ ರೂಪಿಸುವ ಮನೋಗುಣ ಸರಕಾರಕ್ಕಿರಬೇಕು. ಆದರೆ ಸರಕಾರವು ತನ್ನ  ಆದಾಯ ವರ್ಧನೆಗೆ ಶರಾಬನ್ನು ಆಧಾರವಾಗಿರಿಸಿ, ಬಡವರನ್ನು ಬಡವರನ್ನಾಗಿಯೇ ಉಳಿಸುವ, ಮತ್ತೂ ಬಡವರನ್ನಾಗಿಸುವ ಹುನ್ನಾರ ಮಾಡಿದರೆ ಹೇಗೆ? ಕುಡಿತ ರಹಿತ ದೇಶ ಪ್ರಕಾಶಿಸುವುದರಲ್ಲಿ ಸಂಶಯವಿಲ್ಲ. ಸರಕಾರವೇ ರಾಜ್ಯಗಳನ್ನು ಕುಡುಕರ ತೋಟಗಳನ್ನಾಗಿ ಬದಲಿಸುವ, ಕುಡುಕರೇ ಆದಾಯದ ಮೂಲವಾಗುವಂತೆ ಶರಾಬನ್ನೇ ಜನರ ಹತ್ತಿರ ತರುವ ಉದ್ದೇಶ ಹೊಂದಿರುವುದು ದೇಶವನ್ನು ಮಬ್ಬಾಗಿಸುತ್ತದೆ.
ಸಭೆಯಲ್ಲಿ ಭಾಗವಹಿಸುವವರನ್ನು ಸಭಾಸದ ಎನ್ನುತ್ತೇವೆ. ಸಭ್ಯ ಎಂಬ ಪದವೂ ಸಭೆ ಎಂಬ ಪದದಿಂದಲೇ ಜನಿಸಿದೆ. ಸಭಾಸದರು ಸಭ್ಯರಾಗಿದ್ದರೆ ಅದು ಸಭೆ. ಇಂದಿನ ಬಹುತೇಕ ಸಭೆಗಳು ಸಭ್ಯರ ಸಮಾವೇಶದಂತೆ ಕಾಣುವುದೇ? ಅಲ್ಲಿ ಸಭಾಸದರಿಂದ ಆಲಿಸುವ, ಗಮನಿಸುವ, ಶಿಸ್ತಿನಿಂದ ಕುಳಿತುಕೊಳ್ಳುವ ಗುಣ ಪ್ರತಿಫಲನವಾಗುವುದೇ? ಆಲಿಸಿದುದರ ಅನುಸರಣೆ ಆಗುತ್ತಿದೆಯೇ? ಉತ್ತಮ ವಿಚಾರಗಳ ಆಲಿಸುವಿಕೆ ಮತ್ತು ಅನುಪಾಲನೆಗಳಾದರೆ ದೇಶದ ಪ್ರವರ್ಧಮಾನಕ್ಕೆ  ಅವಕಾಶಗಳು ತೆರೆದು ಕೊಳ್ಳುತ್ತವೆ. ದೇಶ ಪ್ರಕಾಶಿಸುತ್ತದೆ.

       ನಮಗೆ ಪೂರೈಕೆದಾರರು ಬಹಳಷ್ಟು ಮಂದಿಯಿದ್ದಾರೆ. ಆದರೆ ಉತ್ಪಾದಕರು ಬಹಳ ಕಡಿಮೆಯೇ ಸರಿ. ಉತ್ಪಾದನೆಯಾದುದನ್ನು ಜನರಿಗೆ ಪೂರೈಸುವವರು ಮಧ್ಯವರ್ತಿಗಳು. ಅವರಿಗೆ ಪರಿಶ್ರಮ ಬಹಳ ಕಡಿಮೆ. ಆದರೆ ಉತ್ಪಾದಕರಿಗೆ ಪರಿಶ್ರಮ ಅಧಿಕ, ಗಳಿಕೆ ತುಂಬಾ ಕಡಿಮೆ. ರೈತರು, ಕೃಷಿಕರು, ಮೀನುಗಾರರು, ಹೈನೋದ್ಯಮಿಗಳು, ಕರಕುಶಲಿಗಳು ಪರಿಸರ ಮತ್ತು ಭೂ ಆಧಾರಿತರು. ಅವರ ಪರಿಶ್ರಮ ಮತ್ತು ವ್ಯಯಗಳು ಉತ್ಪಾದಿತ ವಸ್ತುಗಳ ಮಾರಾಟದಿಂದ ತೃಪ್ತಿಕರವಾಗಿ ಸರಿದೂಗಲ್ಪಟ್ಟರೆ ಅವರ ಬದುಕು ನಿರಾಳ. ಆದರೆ ಮಧ್ಯವರ್ತಿಗಳಿಂದಾಗಿ ಉತ್ಪಾದಕರು ಬವಣೆಗಳಿಗೊಳಗಾಗುತ್ತಿದ್ದಾರೆ. ಕಮಿಷನ್ ಆಧಾರಿತ ಪೂರೈಕೆಯ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ಭಾರತ ಪ್ರಕಾಶಿಸಲು ಉತ್ಪಾದಕನೇ ಗರಿಷ್ಠ ಫಲವನ್ನು ಪಡೆಯುವಂತಾಗಬೇಕು. ಮಧ್ಯವರ್ತಿಗಳ ವಿಕೃತಿಯನ್ನು ಅಂತ್ಯಗೊಳಿಸಿ,  ಕೃಷಿಕರ ಸಮಸ್ಯೆಗೆ ಪರಿಹಾರ ಮತ್ತು ನ್ಯಾಯ ಒದಗಿಸುವ ಸಾಧ್ಯತೆಗಳೇ ದೇಶವನ್ನು ಬೆಳಗಿಸುತ್ತದೆ.

      ಹಾಲಿನ ಆಯುಷ್ಯ ಕಡಿಮೆ. ಅದೇ ಹಾಲಿನೊಳಗೆ ದೀರ್ಘಾಯುಷಿಯಾದ ತುಪ್ಪವೂ ಇದೆ. ಹಾಲು ಪ್ರಕೃತಿ. ಇದಕ್ಕೆ ಸಂಸ್ಕಾರ ನೀಡಿದಾಗ ಅದು ವಿಕೃತವಾಗದೆ ಪ್ರಕೃತಿಯಾಗಿಯೇ ಉಳಿಯುವುದು. ತುಪ್ಪದ ರೂಪದಲ್ಲಿ ದೀರ್ಘಾಯುಷಿಯೂ ಆಗುವುದು. ಅದೇ ರೀತಿ ವಿಕೃತಿಗೊಳಗಾಗುವ ಪ್ರತಿಯೊಂದನ್ನೂ ಪ್ರಕೃತಿ ಸ್ವರೂಪದಲ್ಲಿಯೇ ಉಳಿಸಲು ಸಂಸ್ಕರಣೆಗೊಳಿಸುತ್ತಲೇ ಇರಬೇಕಾಗುತ್ತದೆ. ಕತ್ತಿಯು ನಿರಂತರ ಹರಿತವಾಗುಳಿಯಲು ಅದನ್ನು ಹರಿತಗೊಳಿಸುವ ಪ್ರಕ್ರಿಯೆ ನಿರಂತರವಾಗಿರಬೇಕು. ಅದೇ ರೀತಿ ಪ್ರತಿಯೊಬ್ಬ ಭಾರತೀಯನೂ ನಿರಂತರ ಜ್ಞಾನ, ಧ್ಯಾನಗಳ ಮೂಲಕ ಧರ್ಮಭೀರುವಾಗಿರುವಂತೆ ಕಾಪಿಡುವ ಹೊಣೆ ನಮ್ಮೆಲ್ಲರದು.  ಭಾರತ ಪ್ರಕಾಶಿಸಲು ಎಲ್ಲ ರಂಗಗಳಲ್ಲೂ ಧನಾತ್ಮಕ ಅಂಶಗಳೇ ಹೊಳೆಯಾಗಿ ಹರಿಯಬೇಕು ಎಂಬ ಸೂತ್ರದ ಅನುಪಾಲನೆಯಾಗುತ್ತಿರಲಿ.
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 




Ads on article

Advertise in articles 1

advertising articles 2

Advertise under the article