-->
ಬದಲಾಗೋಣವೇ ಪ್ಲೀಸ್ - 76

ಬದಲಾಗೋಣವೇ ಪ್ಲೀಸ್ - 76

ಬದಲಾಗೋಣವೇ ಪ್ಲೀಸ್ - 76

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
            
         ಸತತ ಸೋಲಿನಿಂದ ಕಂಗೆಟ್ಟ 28ರ ಹರೆಯದ ಯುವಕನೋರ್ವ "ಮನೆಯ ಗೋಡೆಯ ಮೇಲೆ ಉದಯಿಸುತ್ತಿರುವ ಸೂರ್ಯ ಹಾಗೂ ಓಡುತ್ತಿರುವ ಕುದುರೆಯ ಚಂದದ ಚಿತ್ರವನ್ನು ಹಾಕಿದರೆ ಯಶಸ್ಸು ಖಂಡಿತಾ ಸಿಗುತ್ತದೆ" ಎಂಬ ಗೆಳೆಯನ ಸಲಹೆಯಂತೆ ಮನೆಯ ಗೋಡೆಯ ಮೇಲೆ ಸೂರ್ಯ ಹಾಗೂ ಕುದುರೆಯ ಚಿತ್ರ ಹಾಕಿದ. ಆ ದಿನದಿಂದ ದಿನಾಲೂ ಆ ಚಿತ್ರವನ್ನು ನೋಡಿ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ. ಈ ರೀತಿ ನೂರಾರು ದಿನ ಹೊರಟರೂ ಸೂರ್ಯ ಹಾಗೂ ಕುದುರೆಯ ತರಹ ಯಶಸ್ಸು ಮಾತ್ರ ಸಿಗಲಿಲ್ಲ. ಮತ್ತದೇ ಪರಿಸ್ಥಿತಿ ಹಾಗೂ ಕತೆ. ಒಮ್ಮೆ ಅಚಾನಕ್ ಆಗಿ ಆ ಮನೆಗೆ ಭೇಟಿ ನೀಡಿದ ಊರ ಹಿರಿಯರು ಈ ಬಗ್ಗೆ ತಿಳಿದು "ಮಗ.. ಕೇವಲ ಫೋಟೋ ಹಾಕಿದರೆ ಯಶಸ್ಸು ಸಿಗಲ್ಲ. ಸೂರ್ಯನಂತೆ ಆಗಬೇಕಾದರೆ ಸೂರ್ಯೋದಯಕ್ಕಿಂತ ಮೊದಲು ಎದ್ದು ಶ್ರಮ ಪಡಬೇಕು. ಕುದುರೆಯಂತಾಗಬೇಕಾದರೆ ಕುದುರೆಯಂತೆ ಏಕಾಗ್ರವಾಗಿ ವೇಗವಾಗಿ ಓಡಲು ಕಲಿಯಬೇಕು. ಕೇವಲ ಫೋಟೋ ನೋಡಿದರೆ ಯಶಸ್ಸು ದೊರೆಯುವುದಿಲ್ಲ.." ಎಂದರು. ಅವನಿಗೆ ಯಶದ ಗುಟ್ಟು ಸಿಕ್ಕಿತ್ತು.
      ಹೌದು ಯಶಸ್ವಿ ಜನರ ಗೆಲುವನ್ನು ಕಂಡು ಮಾತಾಡುತ್ತೇವೆ ಆದರೆ ಅವರಂತೆ ಕೆಲಸ ಮಾಡುವುದಿಲ್ಲ. ಅವರಂತೆ ಕನಸು ಕಾಣುತ್ತೇವೆ. ಆದರೆ ನನಸಾಗಿಸುವಲ್ಲಿ ಆರಂಭ ಶೂರರಾಗುತ್ತೇವೆ. ಗೆಲುವಿಗೆ ಕೇವಲ ಅಡ್ಡದಾರಿ ಹುಡುಕುತ್ತೇವೆಯೇ ಹೊರತು ಅರ್ಹತೆಯ ದಾರಿ ಹುಡುಕುವುದಿಲ್ಲ. ಸೂರ್ಯನಂತೆ ನಿರಂತರ ಕ್ರಿಯಾಶೀಲತೆ ಹಾಗೂ ಕರ್ತವ್ಯಪರತೆ ಬೆಳೆಸಿದರೆ ಶಕ್ತಿ ಸಂಚಯವಾಗುತ್ತದೆ. ಕುದುರೆಯಂತೆ ಏಕಾಗ್ರತೆ ಮೂಲಕ ಪ್ರಗತಿಯ ಓಟ ಓಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಬನ್ನಿ ಗೆಲುವಿನ ದಾರಿಗಾಗಿ ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99802 23736
********************************************



Ads on article

Advertise in articles 1

advertising articles 2

Advertise under the article