-->
ಮಳೆಯ ಫಜೀತಿ ಪ್ರಸಂಗ : ಸಂಚಿಕೆ - 3

ಮಳೆಯ ಫಜೀತಿ ಪ್ರಸಂಗ : ಸಂಚಿಕೆ - 3

ಮಳೆಯ ಫಜೀತಿ ಪ್ರಸಂಗ : ಸಂಚಿಕೆ - 3


ಜಗಲಿಯ ಮಕ್ಕಳು ಬರೆದ ಮಳೆಯ ಅನುಭವಗಳು ಇಲ್ಲಿವೆ.....



      ಎಲ್ಲರಿಗೂ ನಮಸ್ಕಾರಗಳು. ನನ್ನ ಹೆಸರು ಗ್ರೀಷ್ಮಾ. ಒಂದೆರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಜೋರು ಮಳೆ ಬರುವ ಮುನ್ಸೂಚನೆ ಪಡೆದ ಜಿಲ್ಲಾಧಿಕಾರಿ ಶಾಲಾ- ಕಾಲೇಜುಗಳಿಗೆ ಮುಂಜಾಗ್ರತೆಯ ಕ್ರಮವಾಗಿ ರಜೆ ನೀಡಿದ್ದರು. ನಮ್ಮೂರಿನ ಹತ್ತಿರದ ನದಿಯಾದ ನೇತ್ರಾವತಿಯಲ್ಲಿ ನೀರು ತುಂಬಿದ ಕಾರಣ ಅಲ್ಲಿನ ಅಣೆಕಟ್ಟಿನಿಂದ ನೀರು ಹೊರಬಿಟ್ಟಿದ್ದರು. ಈ ಕಾರಣದಿಂದ ನಮ್ಮೂರಿನ ಹತ್ತಿರದ ತೋಡಿನ ನೀರಿಗೆ ಸರಾಗವಾಗಿ ಹರಿಯಲು ಸಾಧ್ಯವಾಗದೆ, ಆ ನೀರೆಲ್ಲಾ ತೋಟ ತುಂಬಿ ರಸ್ತೆಗೆ ಇಳಿದು ರಸ್ತೆ ಬ್ಲಾಕ್ ಆಗಿ ವಾಹನಗಳು ಹೋಗದಾಯಿತು. ಆಗ ನಮ್ಮ ಮನೆಯ ಸ್ವಲ್ಪ ಕೆಳಗೆ ಗದ್ದೆಯ ಹತ್ತಿರದ ಮನೆಯೊಳಗೆ ನೀರು ತುಂಬಿತ್ತು. ನಾನು, ಅಕ್ಕ, ಗೆಳತಿಯರೆಲ್ಲಾ ಸೇರಿ ಅದನ್ನು ನೋಡಲು ಹೋದಾಗ ಜನರು ಗುಂಪು ನೋಡಿ ಗಾಬರಿಯಾದ ನಾವು ಗುಂಪಿನೊಳಗೆ ನುಗ್ಗಿಕೊಂಡು ಹೋಗಿ ನೋಡಿದಾಗ ಗದ್ದೆಯಲ್ಲಿ ತುಂಬಿದ ನೀರಿನಲ್ಲಿ ಮಕ್ಕಳು ದೊಡ್ಡವರು ಸೇರಿ ಈಜುವುದನ್ನು ಕಂಡು ನಾವೆಲ್ಲ ನಕ್ಕು ನಕ್ಕು ಸುಸ್ತಾದೆವು. ಧನ್ಯವಾದಗಳು
.................................................. ಗ್ರೀಷ್ಮಾ 
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



  ಜೂನಿನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳು ಮಳೆಗಾಲವಾಗಿದೆ. ಆಕಾಶದಲ್ಲಿ ಜೋತಾಡುವ ಮುಗಿಲುಗಳಿಗೆ ಶೀತಲ ವಾಯುವಿನ ಸ್ಪರ್ಶವಾದೊಡನೆ ಮಳೆಯೂ ಸುರಿಯಲಾರಂಭಿಸುತ್ತದೆ. ಆಕಾಶದಲ್ಲಿ ಗುಡುಗು ಸಿಡಿಲುಗಳ ಮೊಳಗತೊಡಗುತ್ತವೆ. ಕೋಲ್ಮಿಂಚು ಮಿಂಚುತ್ತದೆ, ಬಿರುಗಾಳಿ ಬೀಸುತ್ತದೆ ಮಳೆಯು ಜೊರ್ರನೆ ಸುರಿಯುತ್ತಾ ಇರುತ್ತದೆ. ಬೇಸಿಗೆಕಾಲದಲ್ಲಿ ಬಾಡಿ ಬಸವಳಿದ ಮರಗಿಡಗಳಿಗೆ ಆನಂದವೇ ಆನಂದ ಅವುಗಳೆಲ್ಲ ಮಳೆಯಿಂದ ತೊಯ್ದು ಚೇತರಿಸುತ್ತವೆ. ಬಣ್ಣ ಬಣ್ಣದ ಹೂಗಳಿಂದ ಮರಗಿಡಗಳು ಬಳ್ಳಿ ಪೊದರೆಗಳು ಕಣ್ಣಿಗೆ ಹಬ್ಬವಾಗುತ್ತದೆ. ಮನಸ್ಸಿಗೆ ಸಂತೋಷವಾಗುತ್ತದೆ. ಗುಡ್ಡಗಳ ತಪ್ಪಲು ಹಸಿರು ಹುಲ್ಲುಗಳಿಂದ ರಮ್ಯವಾಗಿ ಕಂಗೊಳಿಸುತ್ತದೆ. ರೈತರು ಮಳೆಗಾಲವನ್ನು ಕಾಯುತ್ತ ಇರುತ್ತಾರೆ. ಮಳೆಯು ಪ್ರಾರಂಭವಾದೊಡನೆ ಬೇಸಾಯಗಾರರು ನೊಗ, ನೇಗಿಲುಗಳನ್ನು ಹೆಗಲಲ್ಲಿ ಹೊತ್ತುಕೊಂಡು ಗದ್ದೆಗೆ ತೆರಳುತ್ತಾರೆ. ಹೊಲಗಳಲ್ಲಿ ನೀರು ಕಟ್ಟಿ ಉತ್ತು ಬಿತ್ತಿ ಬೆಳೆ ಬೆಳೆಸುತ್ತಾರೆ. 
.................................................. ವೈಶಾಲಿ
10ನೇ ತರಗತಿ
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ
ಸರಕಾರಿ ಪ್ರೌಢಶಾಲೆ ಶಂಭೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



     ನನ್ನ ಹೆಸರು ಸಂಪ್ರೀತಾ.... ನನಗೆ ಮಳೆಯಲ್ಲಿ ನೆನೆಯುವುದೆಂದರೆ ತುಂಬಾ ಇಷ್ಟ. ಈ ಬಾರಿ ಮಳೆ ಬಂದು ಶಾಲೆಗೆ ಕೆಲವು ದಿನ ರಜೆ ಸಿಕ್ಕಿತು ಆಗ ನಾನು ಮತ್ತು ನನ್ನ ತಮ್ಮಂದಿರ ಜೊತೆಗೆ ಹಳ್ಳದಲ್ಲಿ ಆಟವಾಡಲು ಹೋಗಿದ್ದೆವು. ನೀರಿನಲ್ಲಿ ಆಟವಾಡಬೇಕು ಎಂದಾಗ ಬಯ್ಯುತ್ತಿದ್ದ ಅಣ್ಣನವರು ಆ ದಿನ ನಮ್ಮೊಂದಿಗೆ ನೀರಿನಲ್ಲಿ ಆಟವಾಡಲು ಬಂದದ್ದು ತುಂಬಾ ಖುಷಿಯಾಯಿತು. ಜೋರಾದ ಮಳೆಗೆ ತುಂಬಾ ತೆಂಗಿನ ಕಾಯಿಗಳನ್ನು ಅಣ್ಣನವರು ಹಿಡಿಯಲು ಹೋದರು. ಆದರೆ ಸಿಕ್ಕಿದ್ದು ನಾಲ್ಕು ತೆಂಗಿನಕಾಯಿ. ಹಳ್ಳದ ಬಳಿ ದಂಡೆಯ ಮೇಲೆ ಅಣ್ಣನವರ ಜೊತೆಗೆ ಸಮಯವನ್ನು ಕಳೆದೆವು. ಈ ಘಟನೆ ನೆನಪಾದಾಗ ನಗೆ ಉಕ್ಕಿ ಬಂದಿತು. ಧನ್ಯವಾದಗಳು.      
.................................................. ಸಂಪ್ರೀತಾ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

                              


      ನನ್ನ ಹೆಸರು ದೇಶಿತಾ.... ಮಳೆಗಾಲ ಶುರುವಾಯಿತು ಅಂದರೆ ಎಲ್ಲೇ ನೋಡಿದ್ರು ಎಲ್ಲರ ಕೈಯಲ್ಲೂ ಬಣ್ಣ ಬಣ್ಣದ ಛತ್ರಿಗಳನ್ನು ಕಾಣಬಹುದು. ಮಳೆಗಾಲದಲ್ಲಿ ಹಳ್ಳ -ಕೊಳ್ಳಗಳು ರಭಸವಾಗಿ ತುಂಬಿ ತುಳುಕುತ್ತ ಇರುತ್ತವೆ. ಅದರಲ್ಲೂ ಸೇತುವೆಗಳು ಬಗ್ಗೆ ಹೇಳುವುದೆ ಬೇಡ. ಈ ಸೇತುವೆಗಳ ಬಗ್ಗೆ ಹೇಳುವಾಗ ನನಗೆ ಒಂದು ವಿಷಯ ನೆನಪಾಗುತ್ತದೆ..... ನಮ್ಮ ಮನೆ ಪಕ್ಕ ಒಂದು ಹೊಳೆ ಇದೆ. ಆ ಹೊಳೆಗೆ ಒಂದು ಸುಂದರವಾದ ಸೇತುವೆಯನ್ನು ಕಟ್ಟಲಾಗಿದೆ. ಪ್ರತಿ ವರ್ಷ ಆ ಹೊಳೆ ನೀರಿನಿಂದ ತುಂಬಿ ಹರಿಯುತ್ತಿರುತ್ತವೆ. ಹೊಳೆಯಲ್ಲಿ ನೀರು ಬರುವುದರಿಂದ ತೆಂಗಿನಕಾಯಿಗಳು ತೇಲುತ್ತಾ ಬರುತ್ತಿರುತ್ತವೆ. ಆ ತೆಂಗಿನಕಾಯಿಗಳನ್ನು ಹಿಡಿಯಲು ನನ್ನ ಅಪ್ಪ ಒಂದು ಬಲೆಯನ್ನು ತಾವೇ ಸ್ವಂತವಾಗಿ ತಯಾರಿಸಿದ್ದಾರೆ. ಯಾವಾಗ ಹೊಳೆಯಲ್ಲಿ ನೀರು ಸ್ವಲ್ಪ ತುಂಬಾ ಬರುವಾಗ ನಾವು ಎಲ್ಲರು ಸೇತುವೆ ಮೇಲೆ ಒಂದು ಕೊಡೆಯನ್ನು ಹಿಡಿದು ಸೊಳ್ಳೆಗಳನ್ನು ಕಚ್ಚಿಸಿಕೊಂಡು ನಿಲ್ಲುತ್ತೇವೆ. ಆ ಗಳಿಗೆಯಲ್ಲಿ ತೆಂಗಿನಕಾಯಿಗಳು ನೀರಿನಲ್ಲಿ ತೇಲುತ್ತಾ ಬರುತ್ತಿರುತ್ತವೆ. ತೆಂಗಿನಕಾಯಿ ದೂರದಲ್ಲಿ ಬರುತ್ತಿದ್ದರೆ ನಾವು "ಪೊಪ್ಪ ಕಾಯಿ ಬಾತ್ , ಕಾಯಿ ಬಾತ್" ಅಂತ ಕಿರುಚುತ್ತಾ ಇರುತ್ತೇವೆ. ನಂತರ ತೆಂಗಿನಕಾಯಿಗಳನ್ನು ಹಿಡಿದು ಇನ್ನೊಂದು ತೆಂಗಿನಕಾಯಿ ಬರಬಹುದು ಎಂದು ಸ್ವಲ್ಪ ಹೊತ್ತು ಅಲ್ಲೇ ನಿಂತಿರುತ್ತೇವೆ..... 
       ಹಾಗೆ ಮಳೆಗಾಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಏನೋ ಸಿಗುತ್ತದೆ. ಆದರೆ ಮೊದಲು ಬರುವ ಮಳೆಗೆ ಅಲ್ಲ. ನಾನು ಶಾಲೆಗೆ ನಡೆದುಕೊಂಡು ಹೋಗುವಾಗ ನಾನು ಧರಿಸಿದ್ಧ ಬಟ್ಟೆ ಈ ಮಳೆಗೆ ಸಂಪೂರ್ಣವಾಗಿ ಒದ್ಧೆಯಾಗಿರುತದೆ. ಒಮ್ಮೆ ಜೋರಾಗಿ ಗಾಳಿ ಬಂದಾಗ ನನ್ನ ಕೊಡೆ ಅಣಬೆಯಾಗಿ ಬಿಡುತ್ತದೆ. ಅದನ್ನು ಸರಿ ಮಾಡುವುದೆಂದರೆ ಇನ್ನೂ ಖುಷಿ. ಈ ಒದ್ಧೆಯಾದ ಬಟ್ಟೆ ಮಾತ್ರ ಎಷ್ಟು ಕಿರಿ ಕಿರಿ ಅಂತ ಶಾಲೆ ಮಕ್ಕಳಾದ ನಮಗೆ ಮಾತ್ರ ಗೊತ್ತು. ಈ ಒದ್ಧೆಯಾದ ಬಟ್ಟೆಯಲ್ಲಿ ಹೋಗಿ ಬೆಂಚಲ್ಲಿ ಕುಳಿತುಕೊಂಡರೆ ಅದರ ಕಷ್ಟ ಯಾರಿಗೂ ಹೇಳಲಸಾಧ್ಯ. ಯಾವಾಗ ಈ ಬಟ್ಟೆ ಒಣಗುತ್ತದೆ ಎಂದು ಕಾಯುತ್ತಾ ಇರುತ್ತೇನೆ. ನಮ್ಮ ರಸ್ತೆ ಅಂತೂ ಹೇಳುವುದೇ ಬೇಡ. ಎಲ್ಲಿ ನೋಡಿದರೂ ಹೊಂಡ-ಗುಂಡಿ. ಹೀಗೆ ನಾನು ಒಮ್ಮೆ ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ಮುಂದಿನಿಂದ ಒಂದು ಜೀಪು ಬಂತು. ಹಾಗೆ ಪಕ್ಕದಲ್ಲಿ ನೋಡಿದ್ರೆ ಒಂದು ಗುಂಡಿ....! ಆ ಗುಂಡಿಯಲ್ಲಿ ಈ ಮಳೆನೀರು ತುಂಬಿದ ಕೊಳಚೆ ನೀರು ಇತ್ತು. ಈ ಜೀಪಿನವರು ಬಂದ ರಭಸಕ್ಕೆ ಆ ಹೊಂಡದಲ್ಲಿದ್ದ ನೀರು ಎಲ್ಲ ನನ್ನ ಮೈಮೇಲೆ....!ಜೋರಾಗಿ ಅತ್ತೆ , ಮುಂದೆ ಅತ್ತರೆ ಸಾಧ್ಯವಿಲ್ಲ ಅಂತ ನನ್ನ ಬಾಟಲಿಯಲ್ಲಿದ್ದ ನೀರನ್ನು ಹಾಕಿ ಬಟ್ಟೆಯನ್ನು ಚೆನ್ನಾಗಿ ಉಜ್ಜಿ ಮುಂದೆ ಶಾಲೆಯ ದಾರಿಯನ್ನು ಹಿಡಿದೆ......
........................................ ದೇಶಿತಾ ಹೆಚ್ ಆರ್
ಪ್ರಥಮ ಪಿಯುಸಿ
ಪದವಿಪೂರ್ವ ಕಾಲೇಜು ಅರಂತೋಡು
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ******************************************



       ನನ್ನ ಹೆಸರು ಸ್ನೇಹ. ನನಗೆ ಒಂದು ವಾರ ರಜೆಯಲ್ಲಿ ನಾನು ಒಂದು ದಿನ ಅಮ್ಮನ ಕಣ್ಣು ತಪ್ಪಿಸಿ ಆಟವಾಡಲು ಹೋಗಿದ್ದೆ. ಅದಕ್ಕೆ ಅಮ್ಮ ಬೈದ್ರು. ನಾನು ಅಂದಿನಿಂದ ಮಳೆಯಲ್ಲಿ ಆಟವಾಡಲು ಹೋಗಲಿಲ್ಲ. ಕೆಲವೊಮ್ಮೆ ಅಮ್ಮನಿಗೆ ಹೇಳದೆ ಮಕ್ಕಳ ಜೊತೆ ಸೇರಿ ಹೋಗಿದ್ದೆವು. ನಮ್ಮ ಮನೆಯ ಹತ್ತಿರದಲ್ಲೇ ಒಂದು ತೋಡು ಇದೆ ಅದರಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಮತ್ತೆ ನಾವು ತೋಡಿನಲ್ಲಿ ಮೀನು, ಏಡಿ, ಹಾವು ಮುಂತಾದುವುಗಳನ್ನು ನೋಡಿದೆವು.
.................................................. ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ, ಕೊಳ್ನಾಡು.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ******************************************
 


    ನನ್ನ ಹೆಸರು ಚೈತನ್ಯ ಬಿಎನ್. ಎಲ್ಲರಿಗೂ ನಮಸ್ಕಾರ.... ಮಳೆಯಲ್ಲಿ ನನಗಾದ ಅನುಭವದ ಬಗ್ಗೆ ಸಣ್ಣ ವಿವರಣೆ. ಜೋರಾದ ಮಳೆಯಿಂದಾಗಿ ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿ ಎದುರಾಯಿತು. ಮನೆಯ ಒಳಗೆ ಕುಳಿತುಕೊಳ್ಳಬೇಕಾಯಿತು. ಶಾಲೆಗೆ ಹೋಗದೇ ಗೆಳೆಯರ ಸಂಪರ್ಕದಿಂದ ದೂರ ಉಳಿಯಬೇಕಾಯಿತು. ವಿಶೇಷವಾಗಿ ಮಳೆಯಿಂದಾಗಿ ಬೆಳಗೆದ್ದು ಸಂಜೆ ತನಕ ಸೂರ್ಯನನ್ನು ನೋಡದೇ ಇರುವುದೇ ದೊಡ್ಡ ಬೇಸರದ ಸಂಗತಿ..... ವರುಣನ ಆರ್ಭಟಕ್ಕೆ ಭೂಮಿಯೇ ಮೆದುವಾಗಿ ಹೋಗಿದೆ ಕೆಲವೆಡೆ ಕೆಲವು ಅನಾಹುತಗಳನ್ನು ಕೇಳುವಾಗ ಮನ ತುಂಬಾ ನೋವಾಗುತ್ತದೆ. ಮುಖ್ಯವಾಗಿ ಶಾಲೆಗೆ ಹೋಗದೆ ಮನೆಯಲ್ಲಿ ಕೂತು ತುಂಬಾ ಬೋರಾಗಿದೆ. ಒಟ್ಟಿನಲ್ಲಿ ವರುಣನ ಅವಾಂತರಕ್ಕೆ ಊರಿಗೆ ಊರೇ ಮನೆಯ ಒಳಗಡೆ ಕೂತು ಕೊಳ್ಳುವಂತಾಯಿತು.....
.......................................... ಚೈತನ್ಯ ಬಿ. ಎನ್
7ನೇ ತರಗತಿ
ಸರಕಾರಿ ಮಾದರಿ ಉನ್ನತ ಹಿರಿಯ 
ಪ್ರಾಥಮಿಕ ಶಾಲೆ ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ******************************************
 


       ನನ್ನ ಹೆಸರು ಭವಿಕ್ ಎಸ್.ಪಿ. ನನಗೆ ಮಳೆ ಎಂದರೆ ತುಂಬಾ ಇಷ್ಟ. ನಾನು ಒಂದು ದಿನ ಶಾಲೆಯಿಂದ ಮನೆಗೆ ಹೋಗುವಾಗ ಬಸ್ ಸ್ಟ್ಯಾಂಡಲ್ಲಿ ಕುಳಿತುಕೊಂಡು ಇರುವಾಗ ನನ್ನ ಕ್ಲಾಸ್ ಮೇಟ್ ಕೊಡೆ ಜೋರಾಗಿ ಗಾಳಿ ಬೀಸುವಾಗ ಅವಳ ಕೈಯಿಂದ ಕೊಡೆ ಹಾರಿ ದೂರ ತನಕ ಹೋಯಿತು. ಅದನ್ನು ನೋಡಿ ಅಮ್ಮನ್ನಲ್ಲಿ ಹೇಳಿ ಜೋರಾಗಿ ನಗಾಡಿದೆನು. ಈ ಸಲದ ಮಳೆ ತುಂಬಾ ಜೋರಾಗಿತ್ತು. ತುಂಬಾ ದಿನ ರಜೆ ಸಿಕ್ಕಿ ಖುಷಿ ಆಯಿತು. 
.......................................... ಭವಿಕ್ ಎಸ್.ಪಿ. 
4ನೇ ತರಗತಿ. 
ದ. ಕ. ಉ ಹಿರಿಯ ಪ್ರಾಥಮಿಕ ಶಾಲೆ ಕಾವು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ******************************************



        ನಮಸ್ತೇ..... ನಾನು ದೀಕ್ಷಾ ಕುಲಾಲ್. ಮಳೆಯ ಫಜೀತಿ ಪ್ರಸಂಗ ಏನಪ್ಪಾ ಅಂದರೆ ನಾನು ಮತ್ತು ನನ್ನ ಅಣ್ಣ ಮಳೆಗೆ ಸ್ವಲ್ಪ ನೆನೆದು ಶೀತ ಆಯಿತು. ಕೊಡೆ ಇದ್ದರೂ ತುಂತುರು ಮಳೆಹನಿಯಲ್ಲಿ ಆಟ ಆಡುವುದೆಂದರೆ ನನಗೆ ತುಂಬಾ ಇಷ್ಟ. ಆದರೆ ಇಷ್ಟ ಪಟ್ಟು ಆಡಿ ಮತ್ತೆ ಶುರು ಆಯಿತು , ಜ್ವರ , ನೆಗಡಿ. ನನ್ನ ಅಮ್ಮ ನಮಗೆ ಇಬ್ಬರಿಗೂ ಗುನುಗುತ್ತಾ ಎಂಥ ಮಳೆ. ಈ ಮಳೆ ಕಡಿಮೆ ಆಗಬಾರದ, ಒಮ್ಮೆ ಶಾಲೆ ಸುರುವಾಗಬೇಕು ಅನ್ನುತ್ತಿದ್ದರು. ಅಮ್ಮನ ಮಾತುಗಳನ್ನು ಕೇಳಿ ನಮಗೆ ಮನದಲ್ಲಿ ನಗು ಬರುತ್ತಿತ್ತು. ಹೌದು ನಿಜ ಹೇಳಬೇಕೆಂದರೆ ಶಾಲೆಗೆ ರಜೆ ಸಿಕ್ಕಾಗ ನಮಗೆ ಖುಷಿ ಆಯ್ತು. ಆದರೆ ಒಂದು ದಿನ ಅಥವಾ ಎರಡು ದಿನ ಪುನಃ ರಜೆ ಸಿಕ್ಕಾಗ ಮನೆಯಲ್ಲಿ ಕೂತು ಬೋರ್ ಆಯಿತು. ಅಯ್ಯೋ ಈ ಮಳೆ ನಿಲ್ಲಬಾರದ ಅನಿಸುತ್ತಿತ್ತು. ಹೌದು ಶಾಲೆಯಲ್ಲಿ ಶಿಕ್ಷಕ -ಶಿಕ್ಷಕಿಯ ರೊಂದಿಗೆ ಹಾಗೂ ಗೆಳೆಯ -ಗೆಳತಿರೊಂದಿಗೆ ಆಟ-ಪಾಠ, ಮಾತು ನಗು ತುಂಬಾನೇ ಖುಷಿ ಆಗುತ್ತಿತ್ತು. ಆದರೆ ಈ ಮಳೆಯಿಂದ ಶಾಲೆ ಇಲ್ಲದಂತಾಯಿತು. ನಮ್ಮ ಮನೆಯ ಹತ್ತಿರ ಚಿಕ್ಕದಾದ ತೋಡು. ಮಳೆ ಬಂದರೆ ತೋಡಿನಲ್ಲಿ ತುಂಬಾನೇ ನೀರು ಹೋಗುತ್ತಿತ್ತು. ಸ್ವಲ್ಪ ಮಳೆ ನಿಂತರೆ ನೀರು ಕಡಿಮೆ ಆಗುತ್ತಿತ್ತು. ನಾನು ಮತ್ತು ಅಣ್ಣ ತೋಡಿನಲ್ಲಿ ಮೀನುಗಳನ್ನು ನೋಡಲು ಹೋದೆವು. ಮೀನುಗಳನ್ನು ನೋಡಿ ಹಿಡಿಯಲು ಆಸೆ ಆಯಿತು. ನಾನು ಮತ್ತು ಅಣ್ಣ ಮೀನು ಹಿಡಿಯಬೇಕೆಂದು ತೋಡಿಗೆ ಮೆಲ್ಲನೆ ಇಳಿದೆವು. ಆ ಸಂದರ್ಭದಲ್ಲಿ ನನ್ನ ಅಮ್ಮ ಬಂದು ಒಂದು ಬೆತ್ತದಲ್ಲಿ ನನಗೂ ನನ್ನ ಅಣ್ಣನಿಗೂ ಪೆಟ್ಟು ಕೊಟ್ಟರು. ಅಯ್ಯೋ ಎಂದು ಓಡಿ ಬಂದು ಸುಮ್ಮನೆ ಮನೆಯೊಳಗೆ ಕೂತೆವು. ಮಳೆಯನ್ನು ಕಿಟಕಿಯ ಮೂಲಕ ನೋಡಿ ಸಂಭ್ರಮಿಸಿದೆವು. ಧನ್ಯವಾದಗಳು.
.......................................... ದೀಕ್ಷಾ ಕುಲಾಲ್ 
6ನೇ ತರಗತಿ 
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


ಪ್ರಸಕ್ತ ಮಳೆಯ ವಿಶೇಷ : ನಮಸ್ತೇ.... ನಾನು ಜನನಿ. ಪಿ. ಪ್ರಸಕ್ತ  ಮಳೆಯು ನಮ್ಮನ್ನೆಲ್ಲಾ  ಭಯಭೀತರನ್ನಾಗಿಸಿದೆ. ನಿರಂತರ ಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿದರು.  ರಜೆಯಲ್ಲಿ ನಾನು ಶಿಕ್ಷಕರು ಕೊಟ್ಟ ದಿನನಿತ್ಯದ ಶಾಲೆಯ  ಚಟುವಟಿಕೆಗಳನ್ನು ಮುಗಿಸಿದೆನು. ಬಿಡುವಿನ ವೇಳೆಯಲ್ಲಿ ಕ್ರಾಫ್ಟ್, ಚಿತ್ರ ಕಲೆಯನ್ನು ಮಾಡಿದೆನು.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅತೀ ಹೆಚ್ಚು ಮಳೆ ದಾಖಲಾಗಿರುತ್ತದೆ. ಹವಾಮಾನ    ಪರಿಸ್ಥಿತಿಯನ್ನು ನೋಡಿ  ಜಿಲ್ಲಾ ವಿಪತ್ತು ನಿರ್ವಹಣಾಪ್ರಾಧಿಕಾರವು  ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಮಕ್ಕಳು ಕೆರೆ, ಹೊಳೆ, ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು ಮುಖ್ಯ.  ನಮ್ಮ ಮನೆಯ ಸಮೀಪವಿರುವ ಕುಮಾರಾಧಾರ ನದಿ ನೀರು ಉಕ್ಕಿ ಹರಿಯುವುದನ್ನು ನೋಡಲು  ಅಪ್ಪ, ಅಮ್ಮ, ತಮ್ಮನ ಜೊತೆ ಹೋಗಿ ನೀರನ್ನು ನೋಡಿ ಆಶ್ಚರ್ಯಪಟ್ಟೆನು. ಮಳೆಯ ನೀರಿನಲ್ಲಿ ಅದೆಷ್ಟು ಜಿಲ್ಲೆಯಲ್ಲಿ ಮನೆಗಳು ಮನುಷ್ಯನ  ದೇಹಗಳು ಅದೆಷ್ಟು ನೀರುಪಾಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಡಲ್ಗೊರೆತ ಉಂಟಾಗಿದೆ. ಅಬ್ಬಾ. ಪ್ರಸಕ್ತ ಮಳೆಯು ನಮ್ಮನ್ನೆಲ್ಲಾ ಎಷ್ಟೊಂದು ಭಯಭೀತರನ್ನಾಗಿಸಿದೆ ಎಂಬುದನ್ನು ಹೇಳಲು ಅಸಾಧ್ಯ. ಧನ್ಯವಾದಗಳು

..............................................ಜನನಿ. ಪಿ
6ನೇ ತರಗತಿ
ದ. ಕ. ಜಿ. ಪ. ಉ. ಹಿ. ಪ್ರಾಥಮಿಕ ಶಾಲೆ 
ಕೊಯಿಲ ಕೆ. ಸಿ ಫಾರ್ಮ್  , ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

******************************************

Ads on article

Advertise in articles 1

advertising articles 2

Advertise under the article