-->
ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 1

ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 1

ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 1

ಪ್ರಸಕ್ತ ಮಳೆಯಲ್ಲಿ ಜಗಲಿಯ ಮಕ್ಕಳ ವಿಶೇಷ ಅನುಭವ ಮತ್ತು ಎದುರಿಸಿದ ಫಜೀತಿ ಯ ಪ್ರಸಂಗಗಳು


      ನನ್ನ ಹೆಸರು ಅಕ್ಷತ್.... ನನಗೆ ಮಳೆಯಲ್ಲಿ ನೆನೆಯುವುದೆಂದರೆ ತುಂಬಾ ಆಸೆ. ಈ ಬಾರಿ ತುಂಬಾ ಮಳೆ ಬಂದು ಶಾಲೆಗೆ ಕೆಲವು ದಿನ ರಜೆ ಸಿಕ್ಕಿತು. ಆಗ ನಾನು ಒಂದು ದಿನ ನಮ್ಮ ಮನೆಯ ಪಕ್ಕದ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದೆನು. ಮೀನು ಹಿಡಿಯಲು ಹೋದಾಗ ನನ್ನ ಅಕ್ಕ ಕೆಲವೊಮ್ಮೆ ಬೇಡವೆಂದು ಬೈಯುತ್ತಾಳೆ. ಆದರೆ ಈ ಬಾರಿ ಅಕ್ಕನೂ ನನ್ನ ಜೊತೆ ಮೀನು ಹಿಡಿಯಲು ಬಂದದ್ದು ತುಂಬಾ ಖುಷಿಯಾಯಿತು. ತುಂಬಾ ಮಳೆಗೆ ಹಳ್ಳದಲ್ಲಿ ಸಾಕಷ್ಟು ನೀರು ತುಂಬಿತ್ತು. ಹಳ್ಳದ ಬಳಿ ಕೂತು ಅಕ್ಕನ ಜೊತೆ ಮಾತಾಡ್ತ ಸಮಯ ಹೋದದ್ದೇ ತಿಳೀಲಿಲ್ಲ. ತುಂಬಾ ಖುಷಿಯಿಂದ ಮೈಮರೆತು ಮೀನು ಹಿಡಿಯುತ್ತಿದ್ದೆ. ಅಷ್ಟರಲ್ಲಿ ನನ್ನ ಅಮ್ಮ ನನಗೂ.. ಅಕ್ಕನಿಗೂ ಬೆತ್ತ ಹಿಡಿದು ಬಂದರು. ಅಮ್ಮನ ಬೆತ್ತ ನೋಡಿದ್ದೇ ನಾನು ಹಿಡಿದ ಮೀನು ಮತ್ತು ಬಲೆ ಅಲ್ಲೇ ಬಿಟ್ಟು ಒಂದೇ ಸಮ ಓಡಿ ಮನೆಗೆ ತಲುಪಿದೆ. ತಕ್ಷಣ ಏನಾಯ್ತು ಎಂದು ಗೊತ್ತಾಗದ ಅಕ್ಕ.. ಅಲ್ಲೇ ನಿಂತಿದ್ದಳು. ನಂತರ ಅಮ್ಮ ಅಕ್ಕನಿಗೂ ಬೈಯ್ದು ಮನೆಗೆ ಕರೆದುಕೊಂಡು ಬಂದರು. ಈಗಲೂ ಕೆಲವೊಮ್ಮೆ ಈ ಪ್ರಸಂಗ ನೆನಪಾದರೆ ನಗೆ ಉಕ್ಕಿ ಬರುತ್ತದೆ.
................................................... ಅಕ್ಷತ್ 
7 ನೇ ತರಗತಿ 
ಸ. ಉ. ಪ್ರಾ.ಶಾಲೆ.ಹೊಕ್ಕಾಡಿಗೋಳಿ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ******************************************



       ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಅನನ್ಯ ಪ್ರಭು. ನಾವು ಆಷಾಢ ಏಕಾದಶಿ ಭಜನಾ ಕಾರ್ಯಕ್ರಮಕ್ಕೆ ಹೋಗಿದ್ದೆವು. ನಾವು ಕಾರ್ಯಕ್ರಮವನ್ನು ಆನಂದಿಸಿದೆವು. ಒಟ್ಟಿಗೆ ಊಟ ಮಾಡಿದೆವು. ಆಗ ಭಾರೀ ಮಳೆ ಶುರುವಾಯಿತು. ನಾವು ಮಳೆ ನಿಲ್ಲಲು ಕಾಯುತ್ತಿದ್ದೆವು. ಏಕೆಂದರೆ ಆ ರಸ್ತೆಯಲ್ಲಿ ನೀರು ತುಂಬಿತ್ತು. ನಮಗೆ ಸ್ಕೂಟರ್ ಓಡಿಸಲು ಸಾಧ್ಯವಾಗಲಿಲ್ಲ. ರಾತ್ರಿ 10 ಗಂಟೆಯವರೆಗೂ ನಾವು ಮಳೆ ನಿಲ್ಲಲು ಮತ್ತು ಮನೆಗೆ ಹೋಗಲು ಕಾಯುತ್ತಿದ್ದೆವು. ಆದರೆ ಭಾರೀ ಮಳೆ ಬಂದಿತು. ನಾವು 20 - 25 ಸದಸ್ಯರು ಅಲ್ಲಿ ಸಿಲುಕಿಕೊಂಡಿದ್ದೆವು. ಆದ್ದರಿಂದ ನಾವು ಹಾಲ್‌ನಲ್ಲಿ ಮಲಗಲು ನಿರ್ಧರಿಸಿದೆವು. ನಮ್ಮಲ್ಲಿ ಸಾಕಷ್ಟು ಹಾಸಿಗೆ, ಬೆಡ್‌ಶೀಟ್ ಮತ್ತು ದಿಂಬುಗಳಿದ್ದವು. ನಾವು ಸ್ವಲ್ಪ ಸಮಯ ಮಾತನಾಡುವ ಮೂಲಕ ಆನಂದಿಸಿದೆವು ಮತ್ತು ನಂತರ ಮಲಗಿದೆವು. ಬೆಳಿಗ್ಗೆ ಎದ್ದಾಗ ಎಲ್ಲಾ ಚೆನ್ನಾಗಿತ್ತು. ನಾವು ನಮ್ಮ ಮನೆಗೆ ಹೊರಟೆವು. ಮಳೆಯ ದಿನ ನಮಗೆ ಮರೆಯಲಾಗದ ಸಂತೋಷದ ದಿನವಾಯಿತು. 
............................................ಅನನ್ಯ ಪ್ರಭು 
7ನೇ ತರಗತಿ 
ಡಿವೈನ್ ಲೈಫ್ ಸ್ಕೂಲ್ 
ಅಹ್ಮದಾಬಾದ್ ಗುಜರಾತ್.
******************************************



     ಹರಿ ಓಂ... ನಾನು ಸ್ರಾನ್ವಿ ..... ಈ ಸಲ ಮಳೆಯ ಅನುಭವ ತುಂಬಾನೇ ಖುಷಿಯಾಗಿತ್ತು. ನಾನು ಬೆಳಗ್ಗೆ ಯೋಗ ಕ್ಲಾಸಿಗೆ ಹೋಗಲು ಅಲರಾಂ ಇಟ್ಟಿದ್ದೆ, ಅಲರಾಂ ಆದಾಗ ಅಮ್ಮ ಎಬ್ಬಿಸಿದರು. ಆದರೆ ಹೊರಗೆ ಜೋರಾದ ಮಳೆ ಅಮ್ಮನ ಒತ್ತಾಯಕ್ಕೆ ಎದ್ದು ಮುಖ ತೊಳೆಯಲೆಂದು ಹೊರಗೆ ಬಂದೆ. ನಮ್ಮ ಮನೆಯಲ್ಲಿ ಬಚ್ಚಲುಮನೆ ಹೊರಗಡೆ, ಮೊದಲೇ ಕತ್ತಲು. ನನಗೆ ಕತ್ತಲೆಂದರೆ ಭಯ , ನಾನು ಹೋಗುವಾಗ ಹಿಂದಿನಿಂದ ಯಾರಾದರೂ ಬರುವ ಹಾಗೆ, ಅದಕ್ಕೆ ಓಡುತ್ತಾ ಹೋದೆ, ಮಳೆ ಬಂದು ನೆಲ ಪಾಚಿ ಹಿಡಿದಿತ್ತು, ನಾನು ನನ್ನ ಕೊಡೆಯೊಟ್ಟಿಗೆ ಜಾರಿ ಬಿದ್ದೆ. ಈಗಲೂ ನೆನಪಿಸಿಕೊಂಡು ನಗು ಬರುತ್ತೆ, ಮತ್ತೆ ನಮ್ಮ ಶಾಲೆಯಲ್ಲಿ ಮಾತೃ ಭೋಜನ ಕಾರ್ಯಕ್ರಮ ಇತ್ತು ಅದು ಕೂಡ ಜೋರಾದ ಮಳೆಯ ಜೊತೆಗೆ ನಡೆದಿತ್ತು. ಒಟ್ಟು ಮಳೆಯ ಜೊತೆ ಮಜವಾಗಿತ್ತು. ಧನ್ಯವಾದಗಳು.
............................................ ಸ್ರಾನ್ವಿ ಶೆಟ್ಟಿ 
 9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



     ನನ್ನ ಹೆಸರು ಜೀವಿತಾ...... ಮಳೆಯ ಕುರಿತು ನನ್ನ ಅನುಭವ..... ಮೊನ್ನೆ ಮಳೆಯ ಪ್ರಯುಕ್ತ ಶಾಲೆಗೆ ರಜೆಯಿತ್ತು. ವರುಣನ ಆರ್ಭಟ ಜೋರಾಗಿತ್ತು. ಅದೊಂದು ಪ್ರಕೃತಿಯ ವಿಕೋಪವೆಂದು ನನಗನಿಸಿತು. ಚುಮುಚುಮು ಚಳಿಗೆ ದಿನ ಕಳೆಯಲು ಋಷಿಯಾಗುತಿತ್ತು. ಮಳೆಯಿಂದಾಗಿ ಶಾಲಾವಧಿಯನ್ನು ಸ್ಥಗಿತಗೊಳಿಸಲಾಗಿತ್ತು. ನಮ್ಮ ಶಾಲೆಯ ಸಮೀಪದ ಕಜೆಬೈಲು ಎಂಬಲ್ಲಿ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದು ಮೂವರು ವ್ಯಕ್ತಿಗಳು ಅಪಾಯಕ್ಕೊಳಗಾಗಿದ್ದರು. ಒಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ವಿಷಯ ಕೇಳಿ ನನಗನಿಸಿದ್ದೇನೆಂದರೆ-ಪ್ರಕೃತಿ ವಿಕೋಪವು ಪ್ರಕೃತಿದತ್ತವಾದದ್ದು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ...!! ಮನೆ 9ನೇ ತಾರೀಕು ಜೋರಾಗಿ ಮಳೆ ಸುರಿದಿದ್ದರಿಂದ ನಮ್ಮ ಮನೆಯ ಬಾವಿಯಲ್ಲಿ ನೀರು ತುಂಬಿ 4 ವರ್ಷದಿಂದ ಅದರಲ್ಲಿ ಇದ್ದ ಮುಗುಡು ಮೀನು ಬಾವಿಯಿಂದ ಹೊರಗೆ ಬಂದು ಅಂಗಳ ಸೇರಿತ್ತು. ಅಪ್ಪ ಕಷ್ಟ ಪಟ್ಟು ಆ ಮೀನನ್ನು ಹಿಡಿದರು.......  ಮಳೆಯಲ್ಲಿ ಒದ್ದೆಯಾದ ಕ್ಷಣ, ಅಂಗಳದಲ್ಲಿ ಬಿದ್ದ ಕ್ಷಣ, ನೆನಪಿನ ಹಚ್ಚ ಹಸಿರಿನ ಕ್ಷಣಗಳಾಗಿವೆ........... ಇಂದು ನನಗನಿಸುವುದೇನೆಂದರೆ...... ಪ್ರಕೃತಿ ಸೌಂದರ್ಯವನ್ನು ಅರಿತವವರಾರು? ಪ್ರಕೃತಿ ವಿಕೋಪವನ್ನು ತಡೆವವರಾರು?........ ಮಳೆ ಹನಿಗಳು ಭೂಮಿಗೆ ಬಿದ್ದಾಗ ಪ್ರಕೃತಿ ನವಚೈತನ್ಯವನ್ನು ಪಡೆದ ಕ್ಷಣಗಳಿವು................
.............................................. ಜೀವಿತಾ 
10ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************
 


       ಜೈ ಶ್ರೀರಾಮ್..... ಈ ಸಲದ ಮಳೆ ತುಂಬಾ ಜೋರಾಗಿತ್ತು. ಮಳೆ ಬಂದರೆ ನಿಲ್ಲುವುದು ಕಾಣಿಸುತ್ತಿರಲಿಲ್ಲ...! ಎಷ್ಟು ಹೊತ್ತಿಗೂ ಮಳೆಯೇ...! ನಮ್ಮ ಮನೆಯ ಅಂಗಳ ಪಾಚಿ ಹಿಡಿದು ಹೋಗಿತ್ತು. ನಾನು ಮತ್ತು ತಮ್ಮ ಆಟವಾಡುವಾಗ ನಾನು ಜಾರಿಬಿದ್ದು ಕಾಲಿಗೆ ನೋವಾಗಿತ್ತು. ಮನೆಯ ತಾರೆಸಿಯ ಮೇಲೆ ಅಮ್ಮ, ಅಜ್ಜಿ, ತಮ್ಮ ಎಲ್ಲರೂ ಜಾರಿ ಬಿದ್ದು ನೋವಾಗಿತ್ತು. ಮಳೆ ಸ್ವಲ್ಪ ಬಿಟ್ಟಾಗ ನಾನು ಅಂಗಳಕ್ಕೆ ಇಳಿಯುತಿದ್ದೆ... ಆಚೆ ಹೋದ ತಕ್ಷಣ ಮಳೆ ಜೋರು ಬರುತಿತ್ತು. ಅಂಗಳದಲ್ಲಿ ಹೋಗುವ ನೀರಿನಲ್ಲಿ ನಾನು ಮತ್ತು ತಮ್ಮ ಸೇರಿ ಬಣ್ಣದ ದೋಣಿ ಮಾಡಿ ನೀರಿನಲ್ಲಿ ಬಿಟ್ಟು ಖುಷಿ ಪಟ್ಟೆವು. ನಮ್ಮ ಮನೆಯ ಪಕ್ಕದಲ್ಲಿ ಕೊಡ್ಯಮಲೆ ಕಾಡಿದೆ. ಅದರಿಂದ ಹರಿದು ಬರುವ ಮಳೆನೀರು ನಮ್ಮ ಮನೆಯ ಹಿಂದೆ ಸಣ್ಣ ತೋಡಿನಲ್ಲಿ ಹರಿಯುತ್ತದೆ. ಅದರ ಜುಳುಜುಳು ಶಬ್ದ ಕೇಳಿಸುತ್ತದೆ. ಶಾಲೆಗೆ ರಜೆ ಸಿಕ್ಕಿ ಮೊದಲಿಗೆ ಖುಷಿ ಅನ್ನಿಸಿತು. ನಂತರ ಬೇಸರ ಅನ್ನಿಸಿತು. ಒಟ್ಟಿನಲ್ಲಿ ಮಳೆಯಿಂದ ಖುಷಿಯೂ ಬೇಸರವೂ ಉಂಟಾಯಿತು. ಕೊನೆಗೂ ಶಾಲೆ ಪ್ರಾರಂಭ ವಾಗುತ್ತಿದೆ. ಶುಭವಾಗಲಿ ಎಲ್ಲರಿಗೂ....
.............................................. ತೃಪ್ತಿ ವಗ್ಗ
6ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
      

       ಮಳೆಯ ಫಜೀತಿ ; ನನ್ನ ಹೆಸರು ಮನೋಜ ಐಹೊಳೆ..... ಮಳೆ ಬಂದ ಕಾರಣ ನನಗೆ ತುಂಬಾ ಖುಷಿಯಾಗಿದೆ. ರೈತರ ಬೆಳೆಗೆ ನೀರು ಸಿಕ್ಕಿತು. ಮಳೆಯಾದ ಕಾರಣ ರೈತನು ಖುಷಿಯಾಗಿರುವನು. ನಮ್ಮ ಶಾಲೆಯಲ್ಲಿ ಆಟಗಳಿವೆ. ಆದರೆ ಇದೆ ರೀತ ಅತಿ ಮಳೆಯಾದರೆ ರಾಯನಾಳ ಶಾಲೆಯಲ್ಲಿ ನಡೆಯುವ ಆಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಗುವದಿಲ್ಲ. ಅಲ್ಲಿ ನಡೆಯುವ ಆಟಗಳಲ್ಲಿ ನಮ್ಮ ಪರಸಾಪುರದ ಮಕ್ಕಳು ಸೇರಬೇಕು ಎನ್ನುವದು ನನ್ನ ಆಸೆ. ಆದರೆ ಪ್ರಯತ್ನ ಮಾಡದೆ ಯಾವುದು ಆಗುವದಿಲ್ಲ. ಅದರಲ್ಲಿ ನಾವು ಹೈ ಜಂಪ್ , ಲಾಂಗ್ ಜಂಪ್, ಗುಂಡು ಎಸೆತ, ರಿಲೆದಲ್ಲಿ ಸೇರಿದ್ದೇವೆ. ಆದರೆ ಅತೀ ಮಳೆಯ ಕಾರಣ ಪ್ರಾಕ್ಟಿಸ್ ಮಾಡಲು ಆಗುತ್ತಿಲ್ಲ. ಆದ್ದರಿಂದ ಈ ಮಳೆಯಿಂದ ನಮ್ಮ 2 ವರ್ಷದಿಂದ ನಿಂತ ಕ್ರೀಡೆಗಳು ಈ ವರ್ಷವು ನಿಲ್ಲುವಂತಾಗುತ್ತದೆ. ಈ ರೀತಿ ನನಗೆ ಮಳೆಯು ಫಜೀತಿ ತಂದಿದೆ.
.................................... ಮನೋಜ ಐಹೊಳೆ
7ನೇ ತರಗತಿ 
HPS ಪರಸಾಪುರ.
ತಾ/ಹುಬ್ಬಳ್ಳಿ ಗ್ರಾಮೀಣ ಜಿ/ ಧಾರವಾಡ
******************************************

Ads on article

Advertise in articles 1

advertising articles 2

Advertise under the article