-->
ಸ್ಫೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                     
            “ಫ್ರೀ.. ಫ್ರೀ.. ಫ್ರೀ..” ಎಂದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಿಡುವರು. “ಫ್ರೀ” ಈ ಪದದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲವನ್ನೂ ಮೀರಿಸಿದೆ. “ಫ್ರೀ” ಎಂಬ ಮಾರುಕಟ್ಟೆಯ ಅಯಸ್ಕಾಂತೀಯ ತಂತ್ರದ ಹಿಂದೆ ಶೀಘ್ರವಾಗಿ ಹಣ ಮಾಡುವ ಮತ್ತು ತಮಗಾಗಬಹುದಾದ ನಷ್ಟವನ್ನು ಗ್ರಾಹಕರ ತಲೆಗೆ ಕಟ್ಟುವ ಮೋಸದ ಜಾಲವೂ ಇಲ್ಲದಿಲ್ಲ. ಒಂದು ಕೊಂಡರೆ ಇನ್ನೊಂದನ್ನು ಪುಕ್ಕಟೆಯಾಗಿ ನೀಡುವ ಮಾರುಕಟ್ಟೆದಾರರೂ ಇದ್ದಾರೆ. ಯಾವುದೇ ವ್ಯವಹಾರದಲ್ಲಿ ಮಾರುವ ಬೆಲೆಯು ಕೊಂಡ ಬೆಲೆಗಿಂದ ಕಿಂಚಿತ್ತಾದರೂ ಅಧಿಕವಿರಲೇ ಬೇಕಾದುದು ಸಹಜ. ಅಧಿಕಗೊಳಿಸಿ ನಿಗದಿಸಿರುವ ಮಾರುವ ಬೆಲೆಯಲ್ಲಿ ಲಾಭದ ಶೇಕಡಾವಾರು ದರವು ವ್ಯಾಪಾರಿಯಿಂದ ವ್ಯಾಪಾರಿಗೆ ಭಿನ್ನವಾಗಿರುತ್ತದೆ. ಗ್ರಾಹಕನಿಗೆ ಒಂದಕ್ಕೊಂದು ಉಚಿತವಾಗಿ ನೀಡುವಾಗ ವಸ್ತುಗಳ ಒಟ್ಟು ಬೆಲೆಯು ಆ ವ್ಯಾಪಾರಿಯು ಕೊಂಡ ಬೆಲೆಗಿಂತ ಅಧಿಕವಾಗಿರಲೇ ಬೇಕು. ನಷ್ಟ ಮಾಡಿಕೊಂಡು ವ್ಯವಹಾರ ಮಾಡಲು ಯಾರೂ ಕೈ ಹಾಕುವುದಿಲ್ಲ. ಸಂಬಂಧಿಗಳಿಗೇ ಕೊಡುವುದಿದ್ದರೂ ಅಸಲು ಮೊಬಲಗಿನಲ್ಲಿ ಕಡಿತವಾಗದಂತೆ ವ್ಯಾಪಾರಿಗಳು ಜಾಣ್ಮೆಯನ್ನು ಮೆರೆಯುತ್ತಾರೆ ಎಂಬುದು ಮುಕ್ತ ಸತ್ಯ. ಒಂದು ಕೊಳ್ಳುವಾಗ ಇನ್ನೊಂದು ಉಚಿತವೆಂದು ನೀಡುವ ವಸ್ತುಗಳನ್ನು ಗ್ರಾಹಕ ತನಗೆ ಅಗತ್ಯವಿರದೇ ಇದ್ದರೂ ಕೊಳ್ಳಬೇಕಾಗುತ್ತದೆ. ಹೀಗೆ ಹಲವು ಉಚಿತಗಳ ಕಾರಣದಿಂದ ಮನೆಯು ಗೋಡೌನ್ ಆಗಿ ಮಾರ್ಪಡುವ ಭಯವು ಇಲ್ಲದೇ ಇಲ್ಲ. ಕೊಳ್ಳು ಬಾಕರಂತೂ ಉಚಿತಕ್ಕೇ ಹೆಚ್ಚಿನ ಶ್ರದ್ಧೆ ನೀಡುತ್ತಾರೆ. ಮನೆಯನ್ನು ಸಂತೆಯನ್ನಾಗಿ ಮಾರ್ಪಡಿಸುತ್ತಾರೆ.
ಕೆಲವು ವ್ಯಾಪಾರಿಗಳು ಅಮೋಘ ದರಕಡಿತದ ಮಾರಾಟ ಎಂಬ ಜಾಹೀರಾತು ನೀಡುತ್ತಾರೆ. ಈ ತರಹದ ವ್ಯಾಪಾರವು, “ಒಂದು ಕೊಂಡರೆ ಒಂದು ಉಚಿತ” ಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲೂ ಮಾರಾಟಗಾರ ತನಗೆ ನಷ್ಟವನ್ನು ಮಾಡಿಕೊಳ್ಳುವುದಿಲ್ಲ. ತಾನು ಕೊಂಡ ಬೆಲೆಯನ್ನು ಬಹಳಷ್ಟು ಏರಿಸಿಯೇ ಮಾರುವ ಬೆಲೆಯನ್ನು ನಿಗದಿಸುತ್ತಾನೆ. ಖರೀದಿದಾರರ ಜೊತೆಗೆ ಸೋಡಿ ಅಥವಾ ರಿಯಾಯಿತಿಯ ಹೆಸರಿನಲ್ಲಿ ವ್ಯವಹರಿಸುತ್ತಾನೆ. 
                 ಉದಾಹರಣೆಗೆ 150 ರೂಪಾಯಿಗಳಿಗೆ ಕೊಂಡ ಗಡಿಯಾರವನ್ನು ಶೇಕಡಾ 60ರಷ್ಟು ಅಧಿಕಗೊಳಿಸಿ 240 ರೂಪಾಯಿ ಎಂದು ಮಾರುವ ಬೆಲೆ ನಿಗದಿಸುತ್ತಾರೆ, ನಂತರ ಶೇಕಡಾ ಮೂವತ್ತು ಸೋಡಿಯ ಹೆಸರಿನಲ್ಲಿ ಖರೀದಿದಾರನಿಗೆ 63 ರೂಪಾಯಿ ಕಡಿತಗೊಳಿಸಿ 177ರೂಗಳಿಗೆ ಮಾರುತ್ತಾನೆ. ಆಗ ವ್ಯಾಪಾರಿಗೆ ಇಪ್ಪತ್ತೇಳು ರೂಪಾಯಿಗಳ ಲಾಭವಾಗುವುದು ಶತಃಸಿದ್ಧ. ಕೊಂಡ ವಸ್ತುವನ್ನು ಕಡಿಮೆ ಲಾಭವಿರಿಸಿ ತಕ್ಷಣದಲ್ಲಿ ಮಾರುವುದರಿಂದ ಮೂಲ ಭಂಡವಾಳವನ್ನು ಹಲವು ಬಾರಿ ತೊಡಗಿಸಿ ಹೆಚ್ಚು ಲಾಭ ಮಾಡಲು ಸಾಧ್ಯವಿದೆ ಎಂಬ ಜಾಣ ತಂತ್ರವು ಸೋಡಿ ವ್ಯವಹಾರದಲ್ಲಿ ಅಡಗಿದೆ. ದರ ಕಡಿತದ ಮಾರಾಟ ಎಂಬ ಜಾಹೀರಾತಿಗೆ ಮರುಳರಾದ ಗೃಹಸ್ಥರೊಬ್ಬರು ಮನೆ ಮಂದಿಗೆಲ್ಲಾ ಉಡುಪುಗಳನ್ನು ಕೊಂಡುಕೊಂಡರು. ಖರೀದಿಸುವಾಗ ಅವರಿಗೆ ಬಹಳ ಖುಷಿಯಾಯಿತು. ಆದರೆ ಅವರು ಕಸಿವಿಸಿಗೊಂಡದ್ದು ತಾನು ತಂದ ಪ್ಯಾಂಟ್ ಮತ್ತು ಷರ್ಟ್ ಗಳನ್ನು ಧರಿಸಿದಾಗಲೇ. ದರಕಡಿತದಿಂದ ಖರೀದಿಸಿದ ಉಡುಪು ಅವರ ಮೈಯನ್ನು ಕಡಿಯಲಾರಂಭಿಸಿತು. ತುರಿಕೆಯೆಂದು ತನ್ನ ಮೈಯನ್ನೆಲ್ಲಾ ಪರಚಿಕೊಂಡರು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೂ ತುರಿಕೆ ನಿಲ್ಲಲಿಲ್ಲ. ವೈದ್ಯರ ದರ್ಶನ ಮಾಡಿ ಇನ್ನಷ್ಟು ಖರ್ಚು ಮಾಡಿದ ನಂತರ ತುರಿಕೆ ಕಡಿಮಾಯಾಯಿತು. ಹೇಗೂ ಹಣ ಕೊಟ್ಟು ಕೊಂಡಾಗಿದೆ. ಬಿಸಿ ನೀರಲ್ಲಿ ಹಾಕಿ ತೊಳೆದು ಬಳಸೋಣವೆಂದು ಹೊರಟರೆ, ಆ ಉಡುಪುಗಳು. ಬಣ್ಣ ಬಿಟ್ಟು ನಿಸ್ತೇಜವಾದುವು. ಒಣಗಿದ ನಂತರ ಅವು ಧರಿಸಲು ಬಹಳ ಸಣ್ಣದಾಗಿ ಹೋಗಿದ್ದುವು. ದರ ಕಡಿತ ಏನನ್ನೆಲ್ಲಾ ಕಡಿತಗೊಳಿಸಿತು ನೋಡಿ. ಉಳಿದ ಉಡುಪುಗಳನ್ನು ಮರಳಿಸೋಣ ಎಂದು ಬಟ್ಟೆ ಅಂಗಡಿಗೆ ಬಿಲ್ಲು ಮತ್ತು ಉಡುಪು ಸಮೇತ ಹೋದರೆ, ಮಾಲಕನು ಬಿಲ್ಲಿನ ಪಾದದಲ್ಲಿದ್ದ ಟಿಪ್ಪಣಿಯನ್ನು ತೋರಿಸಿದನು. ಅಲ್ಲಿ ಬರೆದಿತ್ತು; “Goods sold once will not be taken back. Check your purchased materials before leaving the Shop. The shop is not responsible for manufacture defects. ”ಹೇಗಿದೆ ಕರಾಮತ್ತು ಅಲ್ಲವೇ?
             ಹಲವು ವರ್ಷಗಳ ಹಿಂದಿನ ಸ್ವಾನುಭವವೊಂದು ನೆನಪಾಗುತ್ತಿದೆ. 1980ನೇ ಇಸವಿಯ ಸುತ್ತಮುತ್ತ ಆ ಘಟನೆ ಜರಗಿತು. ಬಿ.ಸಿ. ರೋಡ್ ಬಸ್ ನಿಲ್ದಾಣದ ಬಳಿ ಗೃಹಬಳಕೆಯ ವಸ್ತುಗಳನ್ನು ಮಾರುವ ತಂಡವೊಂದು ಬಂದಿತ್ತು. ಅವರು 100 ರೂ ಪಾವತಿಸಿದವರಿಗೆ 27ದಿನಗಳ ನಂತರ 200ರೂ ಮುಖ ಬೆಲೆಯ ಗೃಹೋಪಯೋಗೀ ವಸ್ತುವನ್ನು ಮಾರುತ್ತಿದ್ದರು. ನಮ್ಮ ರೂ ನೂರನ್ನು ಅವರು ವ್ಯವಹಾರದಲ್ಲಿ ತೊಡಗಿಸಿ ಲಾಭಗಳಿಸಿಕೊಂಡು ಗ್ರಾಹಕರಿಗೆ ಪ್ರಯೋಜನ ಒದಗಿಸುವುದಾಗಿ ಪ್ರಚಾರಗಳೂ ನಡೆದುವು. ನಂತರದಲ್ಲಿ ಗ್ರಾಹಕರು ಹೆಚ್ಚಿದಂತೆ 27ದಿನಗಳನ್ನು 45ದಿನಗಳಿಗೆ ಹೆಚ್ಚಿಸಿ ಸರಕುಗಳನ್ನು ಸರಬರಾಜು ಮಾಡುತ್ತಿದ್ದರು. ನನಗೂ ಆಸೆ ಚಿಗುರಿತು. ರೂ 100.00ಕೊಟ್ಟೆ. 45ದಿನಗಳ ನಂತರ ಇಡ್ಲೀ ಪಾತ್ರೆ ಕೊಂಡೆ. ಅಂದಿನ ಮಾರುಕಟ್ಟೆಯ ದರದಲ್ಲಿ ನನಗೆ ಸಣ್ಣ ಲಾಭ ಗೋಚರಿಸಿತು. ಈ ಬಾರಿ 200.00ರೂ ತೊಡಗಿಸಿದೆ. ಬೇಗ ಬೇಗನೆ ಮನೆ ತುಂಬಿಸುವ ಆಸೆ ಯಾರನ್ನೂ ಬಿಡದು. 45ದಿನ ಕಳೆದು ಹೋದರೆ ಅಂಗಡಿ ತೆರೆದಿರಲಿಲ್ಲ. ದೊಡ್ಡದಾಗಿ ಸೂಚನಾ ಫಲಕ ಕಾಣಿಸಿತು: “ಮಾಲಕರ ಅನುಕೂಲಕ್ಕಾಗಿ ಈ ಅಂಗಡಿಯನ್ನು ಸ್ಥಳಾಂತರಿಸಿದೆ. ನಮಸ್ಕಾರ”. ನಾನೋ ಇಂಗು ತಿಂದ ಮಂಗನಂತಾದೆ. ಎಲ್ಲಿಗೆ ಸ್ಥಳಾಂತರ ಎಂಬ ಮಾಹಿತಿಯೇ ಇಲ್ಲ. ಸಾವಿರಾರು ಮಂದಿಗೆ ಸಹಸ್ರಾರು ರೂಪಾಯಿಗಳ ಪಂಗನಾಮ. ನನಗಾದರೋ ರೂ 200 ಎಂಬ ಸಮಾಧಾನ. ಅಂಗಡಿ ಮುಚ್ಚಿದ ವರದಿಗಳು ಪತ್ರಿಕೆಗಳಲ್ಲಿ ಬಂದಿದ್ದುವಂತೆ. ನಾನು ಪತ್ರಿಕೆಯಲ್ಲಿ ಗಮನಿಸದಿದ್ದುದರಿಂದ ಖರೀದಿಗೆ ಹೋದ ಪ್ರಯಾಣದ ವೆಚ್ಚವೂ ನಷ್ಟವಾಯಿತು. ವ್ಯಾಪಾರಗಳು ನಡೆಯುವುದರಿಂದಲೇ ಸಮಾಜವು ಉಳಿಯುತ್ತದೆ. ವ್ಯಾಪಾರಿಗಳಿರದೇ ಇದ್ದರೆ ಮನುಜನ ಬದುಕು ಕಷ್ಟಕರವಾದುದು. ವ್ಯಾಪಾರಿಯ ಜೀವನ ನಿರ್ವಹಣೆಗೆ ಕಿಂಚಿತ್ ಲಾಭ ಬೇಕೇ ಬೇಕು. ವ್ಯಾಪಾರದಲ್ಲಿ ಕಳಪೆಯೂ ಸಲ್ಲದು, ಮೋಸವೂ ಸಲ್ಲದು. ಗುಣ ಮಟ್ಟ ಪ್ರಮಾಣಿತವಾದ ವ್ಯಾಪಾರಗಳು ಸುಂದರ ಸಮಾಜದ ಆಸ್ತಿಯೆಂಬುದಂತೂ ಸತ್ಯ. ಅಮೋಘ ದರ ಕಡಿತ, ಒಂದರೊಡನೊಂದು ಪುಕ್ಕಟೆ, ಸೋಡಿ ಬಿಟ್ಟು ಮಾರಾಟ, ಸ್ಟಾಕ್ ಖಾಲಿ ಮಾಡಲು ಮಾರಾಟ ಮುಂತಾದ ಹೆಸರಿನಲ್ಲಿ ನಡೆಯುವ ವ್ಯಾಪಾರಗಳೂ ಪ್ರಾಮಾಣಿಕತೆಯಿಂದಲೇ ಕೂಡಿರಬೇಕು. ಮಕ್ಕಳು ನಮ್ಮ ಭಾವೀ ಸಮಾಜ. ಮೋಸಗಳಿಗೆ ಇತರರನ್ನು ಬಲಿಗೊಳಿಸದಿರುವುದು ಮತ್ತು ಮೋಸಗಳಿಗೆ ತಾವೂ ಬಲಿಯಾಗದಿರುವುದು ನಮ್ಮ ನಡೆಯಾಗಿರಲಿ; ನಮ್ಮ ಜೀವನ ಧರ್ಮವಾಗಿರಲಿ. ನಮಸ್ಕಾರ
...ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************



Ads on article

Advertise in articles 1

advertising articles 2

Advertise under the article