![ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 2 ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 2](https://lh3.googleusercontent.com/-5M5_TSO07fE/YnjP1925vNI/AAAAAAAA1To/RJCj-ijkr8Ak6BXIsaaP7PxQ6iBGUhQswCNcBGAsYHQ/s1600/1652084691455844-0.png)
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 2
Monday, May 9, 2022
Edit
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 2
ಮೇ -08 ರಂದು * ವಿಶ್ವ ತಾಯಂದಿರ ದಿನ *
ಜಗಲಿಯ ಮಕ್ಕಳು - ತಮ್ಮ ಅಮ್ಮನನ್ನು ಖುಷಿ ಪಡಿಸಿದ ವಿಶೇಷ ಸಂದರ್ಭಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.... ತಮ್ಮ ಮುದ್ದಿನ ಅಮ್ಮನ ಪ್ರೀತಿಯ ಬಗ್ಗೆ ಮುದ್ದುಮುದ್ದಾದ ಮಾತುಗಳಲ್ಲಿ ಪ್ರಕಟವಾಗಿದೆ......
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ನಾನು ಅನುಶ್ರೀ ಕೋಟ್ಯಾನ್..... ಅಮ್ಮ ಈ ಪದವೇ ಅಮೃತ. ಅಮ್ಮ ಎಂದರೆ ಸಂಜೀವಿನಿ. ಅಮ್ಮನ ಮಾತು ಜೇನಿಗಿಂತಲು ಸಿಹಿ. ಈ ಜಗತ್ತಿನಲ್ಲಿ ದೇವರಿಗಿಂತ ಮಿಗಿಲಾದ ಶಕ್ತಿ ಎಂದರೆ ಅಮ್ಮ ಮಾತ್ರ. ನಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರಿ ಮಾತಲ್ಲ ಅದು ನಿಜ ಕೂಡ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ.ಕಷ್ಟ ಬಂದಾಗ ಸಂತೈಸಿದರು ಅಮ್ಮ .. ಮಕ್ಕಳ ಹಾದಿಗೆ ಸದಾ ಕಾವಲು ಆಗಿರುವವರು ಅಮ್ಮ. ಎಡವಿ ಬಿದ್ದಾಗ ಕೈಕೊಟ್ಟು ಮೇಲೆತ್ತುವವರು , ಕಣ್ಣೀರಿಟ್ಟಾಗ ಪ್ರೀತಿಯ ಮಳೆಗರೆದು ಕಣ್ಣೀರು ಒರೆಸುವವರು ಅಮ್ಮ.. ನಮ್ಮ ಎಲ್ಲಾ ಕೆಲಸದಲ್ಲೂ ಕೈ ಜೋಡಿಸುವವರು ಅಮ್ಮ. ಸಾಧನೆ ಮಾಡಿದಾಗ ಹಿರಿಹಿರಿ ಹಿಗ್ಗಿ ಖುಷಿಪಡುವವರು ಅಮ್ಮ ಮಾತ್ರ. ತಾನು ಅರೆಹೊಟ್ಟೆಯಲ್ಲಿ ಇದ್ದರೂ ಮಕ್ಕಳು ಹಸಿವಿರಬಾರದು ಎಂದು ಕಷ್ಟಪಡುವವರು ಅಮ್ಮ.. ಕಷ್ಟಕಾಲದಲ್ಲಿ ದುಃಖ ಕಾಲದಲ್ಲಿ ಯಾರಾದರೂ ಬಂದು ನಾನಿದ್ದೇನೆ ಹೆದರಬೇಡ ಎಂದು ಹೇಳುವವರು ಅಮ್ಮ. ನನ್ನ ಅಮ್ಮ ನನ್ನ ಎಲ್ಲಾ ಕೆಲಸದಲ್ಲೂ ಜೊತೆಯಾಗಿರುತ್ತಾರೆ. ನಾವು ಬಿದ್ದಾಗ ಮೊದಲು ಕರೆಯುವ ಶಬ್ದ ಎಂದರೆ ಅಮ್ಮ... ಮೇ - 08 ಅಮ್ಮಂದಿರ ದಿನ. ತಾಯಿಗಾಗಿ ಮೀಸಲಾದ ದಿನ. ಪ್ರೀತಿಗೆ ಗೌರವ ಸಲ್ಲಿಸುವ ದಿನ. ನನ್ನ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು........
ದ್ವಿತೀಯ ಪಿಯುಸಿ
ಪದವಿಪೂರ್ವ ಕಾಲೇಜು , ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನಾನು ನಿಭಾ...... ತಾಳ್ಮೆ, ವೈಶಾಲ್ಯತೆ, ಸಹೃದಯತೆ, ಸಹಿಷ್ಣುತೆ, ವೈಚಾರಿಕತೆ, ಮನೆಯೊಡತಿ, ಮಕ್ಕಳ ಗೆಳತಿ, ಕೈತುತ್ತುಣಿಸುವ ಅನ್ನಪೂರ್ಣೇ, ತ್ಯಾಗಮಯಿ, ಭುವಿಯಲ್ಲಿ ನೆಲೆಸಿರುವ ದೇವತೆ - ಅವಳೇ ಅಮ್ಮ. ಹೇಳಬೇಕೆಂದರೆ ಅಮ್ಮಂದಿರ ದಿನ ಒಂದು ನೆಪವಷ್ಟೇ, ನಮಗೆ ದಿನವೂ ಅಮ್ಮಂದಿರ ದಿನವೇ. ದಿನವೂ ನಾವು ನಮ್ಮ ಅಮ್ಮನ ಜೊತೆ ಖುಷಿಯಾಗಿ ಕಾಲ ಕಳೆಯುತ್ತೇವೆ. ಅಮ್ಮನೊಂದಿಗಿನ ಒಡನಾಟವನ್ನು ಮಾತಲ್ಲಿ ವಿವರಿಸಲು ಸಾಧ್ಯವಿಲ್ಲ. ಅಮ್ಮ ನಮ್ಮನ್ನು ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಅಮ್ಮನೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಇಂತಹ ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು
9ನೇ ತರಗತಿ ಸರಕಾರಿ ಪದವಿಪೂರ್ವ
ಕಾಲೇಜು ಕೊಂಬೆಟ್ಟು,
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು... ನಾನು ನಂದನ್ ಹೆಚ್.ಕೆ....... ಅಮ್ಮ ಎಂದರೆ ಮಮತೆ. ಪ್ರಪಂಚದಲ್ಲಿ ಮಗುವಿಗಾಗಿ ಮಗುವಿನಿಂದ ಅನುಭವಿಸುವ ಖುಷಿ ತಾಯಿ ಹೊರತು ಬೇರೆ ಯಾರೂ ಇರಲು ಸಾಧ್ಯವಿಲ್ಲ. ನನ್ನಮ್ಮನೂ ಹಾಗೆ. ನಾವು ಮಾಡುವ ಪುಟ್ಟ ಪುಟ್ಟ ಕೆಲಸಗಳಲ್ಲಿಯೂ ದೊಡ್ಡ ಖುಷಿ ಕಾಣುತ್ತಾರೆ.. ಅವರು ಹೇಳಿ ಮಾಡಿದ ಕೆಲಸಗಳಿಗೆ ಹೊರತಾಗಿ ನಾವಾಗಿಯೇ ಮಾಡಿದ ಯಾವುದೇ ಕೆಲಸವಿರಲಿ ಅದನ್ನು ಕಂಡು ಅತ್ಯಂತ ಸಂತಸ ಪಡುತ್ತಾರೆ... ಪರೀಕ್ಷೆಯಲ್ಲಿ ಅಂಕ.. ಸಂಗೀತ , ಕಥೆ , ಚಿತ್ರ ಹೀಗೆ ಪ್ರತಿಯೊಂದರಲ್ಲೂ ಸಹ ನಾವು ಭಾಗವಹಿಸಿ ಖುಷಿಪಡಬೇಕು ಎಂಬುದು ಅವರ ಆಸೆ. ಕೋರೋನಾ ಸಮಯದಲ್ಲಿ ನಮ್ಮ ಶಾಲೆಗೆ ಹೋಗುತ್ತಿದ್ದರು. ಸಂಜೆ ಅವರು ಬರುವ ವೇಳೆಗೆ ನಾನು ಮತ್ತು ತಂಗಿ ಸೇರಿ ಮನೆ ಶುಚಿಯನ್ನು ಮಾಡುತ್ತಿದ್ದೆವು.. ಅಡುಗೆ ಬಿಸಿಮಾಡಿ ಮಾಡುತ್ತಿದ್ದೆವು... ಈ ಕೆಲಸದಲ್ಲಿ ಅವರಿಗೆ ಬಹಳಷ್ಟು ಖುಷಿ ಕೊಟ್ಟಿತ್ತು. ಅವರಿಗೆ ಆಸೆ ನಾನು ವೇದಿಕೆಯಲ್ಲಿ ಚೆನ್ನಾಗಿ ಹಾಡಬೇಕು ಎನ್ನುವುದು. ಗಾನಸಿರಿ ಕಲಾ ಕೇಂದ್ರ ವಿದ್ಯಾರ್ಥಿಯಾದ ನಾನು ಮೊದಲ ಬಾರಿ ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡನ್ನು ಬಹಳ ಚೆನ್ನಾಗಿ ಹಾಡಿದ್ದೆ... ಜೋಶ್ ತುಂಬಿದ ಹಾಡು ಎಲ್ಲರಿಗೂ ಖುಷಿ ಕೊಟ್ಟಿತ್ತು. ಆ ದಿನ ಅಮ್ಮನ ಮುಖದಲ್ಲಿ ಹೇಳತೀರದ ಸಂತಸವನ್ನು ನಾನು ಕಂಡೆ... ಬಹುಶಃ ಎಲ್ಲಾ ಅಮ್ಮಂದಿರಿಗೂ ಅವರ ಮಕ್ಕಳು ಮಾಡುವ ಪ್ರತಿಯೊಂದು ಚಟುವಟಿಕೆಗಳು ಸಹ ದೊಡ್ಡಮಟ್ಟದ ಖುಷಿಯನ್ನು ತಂದುಕೊಡುತ್ತದೆ ಎಂದು ನನ್ನ ಅಭಿಪ್ರಾಯ. ತಾಯಿ ದೇವರು . ಇವರ ಆಸೆ-ಹಾರೈಕೆ ಯಂತೆ ನಾವು ಸಹ ಉತ್ತಮ ಮಕ್ಕಳಾಗಿ ಬೆಳೆಯಬೇಕು.
8ನೇ ತರಗತಿ
ದ ಕ ಜಿ ಪಂ ಹಿ ಪ್ರಾಶಾಲೆ ಕುದ್ಮಾರು
ಪುತ್ತೂರು ತಾಲೂಕು , ದ.ಕ. ಜಿಲ್ಲೆ.
**********************************************
ಎಲ್ಲರಿಗೂ ಪ್ರೀತಿಯ ವಂದನೆಗಳು...... ನಾನು ಅಕ್ಷತ ಪೈ. ನನ್ನ ಅಮ್ಮ ಎಂದರೆ ನನಗೆ ತುಂಬಾ ಪ್ರೀತಿ. ಅಮ್ಮ ಯಾವಾಗಲೂ ನನ್ನನ್ನು ಪ್ರೀತಿ ಮಾಡುತಾರೆ. ಅಮ್ಮ ಎಂದರೆ ದೇವರು. ಈ ಜಗತ್ತಿನಲ್ಲಿ ನನ್ನ ಅಮ್ಮ ತುಂಬಾ ಶ್ರೇಷ್ಟರು. ನಾನು ಅಮ್ಮನ ಮಾತು ಕೇಳಿದರೆ ಅವರಿಗೆ ತುಂಬಾ ಸಂತೋಷವಾಗುತ್ತದೆ. ನಾನು ಹುಟ್ಟುವಾಗಲೆ ಅಮ್ಮನಿಗೆ ತುಂಬಾ ಸಂತೋಷವಾಗಿತ್ತು. ನಾನು ಅಮ್ಮನ ಮುದ್ದಿನ ಮಗಳು. ನಾನು ತಪ್ಪು ಮಾಡಿದಾಗ ಅಮ್ಮ ನನ್ನನು ತಿದ್ದುವಳು. ನನ್ನ ಅಮ್ಮನೆ ನನ್ನ ಜಗತ್ತು. ನನ್ನ ಸರ್ವಸ್ವ. ನಾನು ದೊಡ್ಡವಳಾದ ಮೆಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವೆನು. ಅಮ್ಮಾ ಐ ಲವ್ ಯು
4ನೇ ತರಗತಿ
ಎಸ್ .ವಿ . ಎಸ್. ಇಂಗ್ಲಿಷ್ ಸ್ಕೂಲ್.
ವಿದ್ಯಾಗಿರಿ , ಬಂಟ್ವಾಳ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು. ನಾನು ಸಾನ್ವಿ ಸಿ.ಎಸ್. ನನಗೆ ಕೊರೊನ ಸಮಯದಲ್ಲಿ ಶಾಲೆಗೆ ರಜೆ ಸಿಕ್ಕಿದಾಗಿನಿಂದ ಮನೆಯಲ್ಲಿ ಕೂತು ಕೂತು ತುಂಬಾ ಉದಾಸೀನವಾಗತೊಡಗಿತು. ಆದ್ದರಿಂದ ನಾನು ಅಂತರ್ಜಾಲದ ಮೂಲಕ ಭಗವದ್ಗೀತೆ ಕಲಿಯತೊಡಗಿದೆ. ಆಗ ನನ್ನ ಕುಟುಂಬದವರು ಮುಖ್ಯವಾಗಿ ಅಮ್ಮ ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ ಒಟ್ಟು 700 ಶ್ಲೋಕಗಳಿವೆ. ಪರೀಕ್ಷೆ ಮೈಸೂರಿನಲ್ಲಿತ್ತು. ಆದರೆ ಕೊರೊನ ಇದ್ದುದರಿಂದ ಅಂತರ್ಜಾಲದ ಮೂಲಕ ಪರೀಕ್ಷೆಯನ್ನು ನಡೆಸಿದರು. ಪರೀಕ್ಷೆಯಲ್ಲಿ ಪರೀಕ್ಷಕರು ಶ್ಲೋಕಗಳನ್ನು ಮಧ್ಯದಿಂದ ಕೇಳುತ್ತಿದ್ದರು. ನನ್ನ ಶಿಕ್ಷಕಿಯಂತೂ ನನಗೆ ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ಅವರನ್ನೂ ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಕೆಲವು ದಿನಗಳಲ್ಲಿ ಫಲಿತಾಂಶ ಪ್ರಕಟವಾಯಿತು. ನನಗೆ ಚಿನ್ನದ ಪದಕ ಲಭಿಸಿತು. ನನಗೆ ಪ್ರಶಸ್ತಿಯನ್ನು ಕೊಡಲು ಮೈಸೂರಿಗೆ ಆಹ್ವಾನಿಸಿದ್ದರು. ಮೈಸೂರಿನಲ್ಲಿ ನಾನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಬಳಿ ಪ್ರಶಸ್ತಿ ತೆಗೆದುಕೊಂಡೆ. ಇದು ನನ್ನ ಅಮ್ಮನಿಗಾದ ಸಂತೋಷದ ಕ್ಷಣ.
5 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ತಾಯಂದಿರ ದಿನದ ಹಾರ್ಧಿಕ ಶುಭಾಶಯಗಳು ಅಮ್ಮ ....... ನಾನು ಶೌರ್ಯ.ಎಸ್.ವಿ. ಮಗು ತನ್ನ ಜೀವನದಲ್ಲಿ ಮೊದಲು ಹೇಳುವ ಪದ ಅಮ್ಮ. ನಮ್ಮ ಪ್ರೀತಿಯ ಮೊದಲ ದೇವರು ಅಮ್ಮ. ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ತ್ಯಾಗಮಯಿ ಯಾರೂ ಇಲ್ಲ. ತನಗಾಗಿ ಏನನ್ನು ಬಯಸದವಳು. ನಾವು ಸೋತಾಗ ಸದಾ ನಮ್ಮ ಜೊತೆ ನಿಂತವಳು. ನಾವು ಗೆದ್ದಾಗ ನಮಿಗಿಂತ ಹೆಚ್ಚು ಖುಷಿ ಪಟ್ಟವಳು. ಮನೆಯಲ್ಲಿ ಹಬ್ಬ ಹರದಿನಗಳಲ್ಲಿ ಅವಳು ಹಳೆ ಸೀರೆ ತೊಟ್ಟು ಮಕ್ಕಳಿಗೆ ಹೊಸ ಬಟ್ಟೆ ತೊಡಿಸುವವಳು. ಮಕ್ಕಳ ಖುಷಿಯಲ್ಲೆ ತನ್ನ ಕುಶಿ ಕಂಡವವಳು. 9 ತಿಂಗಳು ಗರ್ಭದಲ್ಲಿ ಹೊತ್ತು ಸಾಕಿದವಳು. ನೀವು ಎಷ್ಟೇ ಶ್ರೀಮಂತ ಆಗಿರಬಹುದು ಆದ್ರೆ ನಾನು ನಿಮಗಿಂತ ಶ್ರೀಮಂತೆ ಏಕೆಂದರೆ ನನಲ್ಲಿ ಬೆಲೆ ಕಟ್ಟಲಾಗದ ತಾಯಿ ಇದ್ದಾರೆ. ನಾನು ಬಿದ್ದಾಗ ಕಣ್ಣೀರು ಒರೆಸಿ ಸಮಾಧಾನ ಪಡಿಸಿದ ಏಕೈಕ ವ್ಯಕ್ತಿ ತಾಯಿ. ನನಗೆ ನನ್ನ ತಾಯಿಯೇ ಮೊದಲ ದೇವರು.
8 ನೇ ತರಗತಿ.
ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ 2
ಧರ್ಮಸ್ಥಳ ಗ್ರಾಮ , ಬೆಳ್ತಂಗಡಿ ತಾಲೂಕು
**********************************************
ದೀಕ್ಷಾ ಕುಲಾಲ್ ಮಾಡುವ ನಮಸ್ಕಾರಗಳು. ವಿಶ್ವ ತಾಯಂದಿರ ದಿನದ ಶುಭಾಶಯಗಳು. ನನ್ನ ಅಮ್ಮ ನನಗೆ ಬಹಳ ಇಷ್ಟ. ನನ್ನ ಅಮ್ಮನ ಮುಖದಲ್ಲಿ ನಾನು ಕಂಡ ಸಂತೋಷ ಏನೆಂದರೆ ನಾನು ಕಲಿಕೆಯಲ್ಲಿ ಪ್ರಥಮ ಬಂದಾಗ , ನನಗೆ ಬಹುಮಾನ ಸಿಕ್ಕಿದಾಗ ನನ್ನ ಅಮ್ಮನ ಮುಖದಲ್ಲಿ ಸಂತೋಷವನ್ನು ನಾನು ಕಂಡೆ. ನನ್ನ ಕಲಿಕೆಗೆ ಸಂಪೂರ್ಣವಾಗಿ ನನ್ನ ಅಮ್ಮ ಸಹಾಯ ಮಾಡುತ್ತಾರೆ. ನನ್ನ ಅಮ್ಮ ಶ್ರೀ ಕೃಷ್ಣನ ಜನ್ಮಷ್ಟಾಮಿ ಹಬ್ಬದಂದು ನನಗೆ ರಾಧೆ ವೇಷ ಧರಿಸಿದರು. ಅಂದು ನಾನು ಅಮ್ಮನ ಮುಖದಲ್ಲಿ ಸಂತಸವನ್ನು ನಾನು ಕಂಡೆ. ನನಗೆ ನನ್ನ ಅಮ್ಮ ಸಂಸ್ಕೃತಿ, ಸಂಪ್ರದಾಯ ನನಗೆ ಕಲಿಸಿಕೊಡುತ್ತಾರೆ. ಅಮ್ಮ ಪ್ರತಿಯೊಂದು ವಿಷಯದಲ್ಲಿ ನನಗೆ ಉತ್ತೇಜನ ನೀಡುತ್ತಾರೆ. ನನಗೆ ಅಮ್ಮನನ್ನು ಕಂಡರೆ ತುಂಬಾ ಪ್ರೀತಿ. ಧನ್ಯವಾದಗಳು.
6ನೇ ತರಗತಿ
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
**********************************************