
ಜಿಪುಣ (ಕಥೆ)
Tuesday, April 5, 2022
Edit
ಗುರುಕೃಪಾ ಸೆಂಟ್ರಲ್ ಸ್ಕೂಲ್
ಬಲ್ಯೋಟ್ಟು ಹೊಸ್ಮಾರ್ , ನಾರಾವಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಆತ
ಮಹಾ ಜಿಪುಣ. ತಾನು ಗಳಿಸಿದ ಹಣ ಯಾರಾದರೂ ತೆಗೆದುಕೊಂಡು ಹೋದಾರು ಎಂಬ ಭಯದಿಂದ ತನ್ನೆಲ್ಲಾ ಸಂಪತ್ತನ್ನು ಊರಾಚೆ ಇರುವ ಬನ್ನಿ ಮರದ ಕೆಳಗೆ ಹುದುಕಿಸಿಡುತ್ತಾನೆ. ಪ್ರತಿನಿತ್ಯ ಕಂದೀಲು ಹಿಡಿದು ಆ ಸ್ಥಳಕ್ಕೆ ಬಂದು ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಹೋಗುತ್ತಾನೆ. ಇದೇ ಸಂದರ್ಭದಲ್ಲಿ ತನ್ನ ಬಳಿ ಸಾಲ ತೆಗೆದುಕೊಂಡಿದ್ದ ಬಡವನಿಗೆ ಹಣ ಹಿಂದಿರುಗಿಸುವಂತೆ ಶ್ರೀಮಂತ ದಂಬಾಲು ಬೀಳುತ್ತಾನೆ. ಕೊಟ್ಟ ಹಣವೇನಾದರೂ ಹಿಂದಿರುಗಿಸದಿದ್ದರೆ ಮನೆಯನ್ನು ಹರಾಜು ಹಾಕುವೆ ಎಂದು ಬೆದರಿಸುತ್ತಾನೆ. ಇದರಿಂದ ಬಡವ ತೀರಾ ನೋಯುತ್ತಾನೆ. ತನ್ನ ಸ್ಥಿತಿಗೆ ಬೇಸತ್ತು ನಡುಕತ್ತಲಲ್ಲಿ ಊರಾಚೆ ಇರುವ ಬನ್ನಿಮರದ ಬಳಿ ಬರುತ್ತಾನೆ. ಸಾಯಲು ನಿರ್ಧರಿಸುತ್ತಾನೆ. ಅಷ್ಟುಹೊತ್ತಿಗೆ ಕಂದಲು ಹಿಡಿದುಕೊಂಡು ವ್ಯಕ್ತಿಯೋರ್ವ ಅಲ್ಲಿಗೆ ಬರುತ್ತಿರುವುದನ್ನು ನೋಡುತ್ತಾನೆ. ಬಡವ ಮರದ ಹಿಂದೆ ಅಡಗಿ ಕುಳಿತು ಮುಂದೇನಾಗುತ್ತದೆ ಎಂದು ಕುತೂಹಲದಿಂದ ನೋಡುತ್ತಿರುತ್ತಾನೆ.
ಎಂದಿನಂತೆ ಶ್ರೀಮಂತ ಮರದ ಕೆಳಗೆ ಮಣ್ಣು ಅಗೆದು ಬಚ್ಚಿಟ್ಟಿದ್ದ ದುಡ್ಡು, ಒಡವೆಗಳನ್ನೆಲ್ಲಾ ಕಣ್ಣಿಗೊತ್ತಿಕೊಂಡು ಮತ್ತೆ ಮರಳಿ ಅಲ್ಲಿಯೇ ಇರಿಸಿ ಮನೆಗೆ ತೆರಳುತ್ತಾನೆ. ಶ್ರೀಮಂತ ಹೋದನಂತರ ಬಡವ ನಿಧಾನವಾಗಿ ಹಣವನ್ನು ಬಚ್ಚಿಟ್ಟಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿ ಅವಿತಿಟ್ಟಿದ್ದ ಅಪಾರ ಸಂಪತ್ತನ್ನು ತೆಗೆದುಕೊಂಡು ಮನೆಗೆ ತೆರಳುತ್ತಾನೆ. ಮರುದಿನ ಶ್ರೀಮಂತನ ಮನೆಗೆ ಬಂದು ಅವನು ಕೊಟ್ಟ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ನೀಡುತ್ತಾನೆ. ಬಂದ ಹಣದಲ್ಲಿ ತನಗೆ ಬೇಕಾದಷ್ಟನ್ನು ಇಟ್ಟುಕೊಂಡು ಇನ್ನುಳಿದುದ್ದನ್ನು ಬಡವರಿಗೆ ದಾನ ಮಾಡಿ, ರಾತ್ರಿ ಹಳ್ಳಿಯನ್ನು ಬಿಟ್ಟು ಮತ್ತೊಂದು ಊರಿಗೆ ತೆರಳುತ್ತಾನೆ. ಅದೇ ರಾತ್ರಿ ಎಂದಿನಂತೆ ಶ್ರೀಮಂತ ಬನ್ನಿ ಮರದ ಕೆಳಗೆ ಅಗೆದು ನೋಡಿದರೆ ಅಲ್ಲಿ ಏನೂ ಇರುವುದಿಲ್ಲ, ಯಾರೊಂದಿಗೂ ಹೇಳಿಕೊಳ್ಳಲಾಗದೆ ಗೋಳಾಡುತ್ತಾನೆ. ಅದಕ್ಕೆ ಹಿರಿಯರು ಹೇಳೋದು "ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ "..
7 ನೇ ತರಗತಿ
ಗುರುಕೃಪಾ ಸೆಂಟ್ರಲ್ ಸ್ಕೂಲ್
ಬಲ್ಯೋಟ್ಟು ಹೊಸ್ಮಾರ್ , ನಾರಾವಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*****************************************