![ಅಕ್ಕನ ಪತ್ರ - 16ಕ್ಕೆ ಮಕ್ಕಳ ಉತ್ತರ : ಸಂಚಿಕೆ -1 ಅಕ್ಕನ ಪತ್ರ - 16ಕ್ಕೆ ಮಕ್ಕಳ ಉತ್ತರ : ಸಂಚಿಕೆ -1](https://lh3.googleusercontent.com/-b8cDuHC_XH0/Yf8y2YYza-I/AAAAAAAAuQE/y_Ma4MXP6OMmR0Q-GVa8GO37geABZUthwCNcBGAsYHQ/s1600/1644114647787776-0.png)
ಅಕ್ಕನ ಪತ್ರ - 16ಕ್ಕೆ ಮಕ್ಕಳ ಉತ್ತರ : ಸಂಚಿಕೆ -1
Saturday, February 5, 2022
Edit
ಅಕ್ಕನ ಪತ್ರ - 16ಕ್ಕೆ
ಮಕ್ಕಳ ಉತ್ತರ : ಸಂಚಿಕೆ -1
ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ....... ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ...... ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಯಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಮಕ್ಕಳ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
ನಮಸ್ತೆ ಅಕ್ಕ . ನಾನು ನಿಮ್ಮ ಮಮತೆಯ ತಂಗಿ ಧೃತಿ. ನಿಮ್ಮ ಪ್ರತಿಯೊಂದು ಪತ್ರಗಳು ನಮಗೆ ಪ್ರೇರಣೆಯಾಗಿವೆ. ನೀವು ಬರೆಯುವ ಪತ್ರವು ಸಾಧನೆಯ ಹಾದಿಯನ್ನು ಸುಲಭವಾಗಿಸುತ್ತದೆ. ನೀವು ಹೇಳಿದ ಹಾಗೆ ನಾನು ನನ್ನ ಹುಟ್ಟು ಹಬ್ಬದ ದಿನದಂದು ನಾನು ಗಿಡವನ್ನು ನೆಟ್ಟಿದ್ದೇನೆ , ಹಾಗೂ ಇನ್ನು ಮುಂದೆ ಬರುವ ನನ್ನ ಹುಟ್ಟುಹಬ್ಬಕ್ಕೂ ನೆಡುತ್ತೇನೆ. ನಾವು ಕೇಕ್ ಕತ್ತರಿಸಿ ಆಚರಣೆ ಮಾಡುವುದರಿಂದ ನಮಗೆ ಕ್ಷಣಮಾತ್ರ ಖುಷಿ ಸಿಗಬಹುದು. ಆದರೆ ಆ ದಿನ ನಾವು ನೆಟ್ಟ ಗಿಡ ಒಂದು ದಿನ ಅದು ದೊಡ್ಡದಾಗಿ ಬೆಳೆದು ನಿಂತು ಫಲ ಕೊಟ್ಟಾಗ ಆಗುವ ಸಂತೋಷವನ್ನು ನಾವು ದಿನಾಲು ಪಡೆಯಬಹುದು. ಏಕೆಂದರೆ ನಾವು ಗಿಡವನ್ನು ನೋಡಿದಾಗಲೆಲ್ಲಾ ನಮ್ಮ ಹುಟ್ಟುಹಬ್ಬ ಆದ್ದರಿಂದ ನಾವೆಲ್ಲರೂ ಇನ್ನು ಮುಂದೆ ನಮ್ಮ ನಮ್ಮ ಹುಟ್ಟುಹಬ್ಬವನ್ನು ಸಡಗರದಿಂದ ಭೂಮಿತಾಯಿಯ ಮಡಿಲಿಗೆ ಒಂದು ಗಿಡವನ್ನು ನೆಟ್ಟು ಅದು ದೊಡ್ಡದಾಗಿ ಪುಟ್ಟ ಹಕ್ಕಿಗಳಿಗೆ ಮಾತ್ರವಲ್ಲದೆ, ಜನರಿಗೆ ಹಾಗೂ ಪ್ರಾಣಿಗಳಿಗೆ ಆಸರೆಯಾಗುತ್ತದೆ. ಧನ್ಯವಾದಗಳು ಅಕ್ಕ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಮಕ್ಕಳ ಜಗಲಿ...ಅಕ್ಕನ ಪತ್ರ --16
ಪ್ರೀತಿಯ ಅಕ್ಕ.... ನಾನು ಲಹರಿ ಜಿ.ಕೆ...... ನಿಮ್ಮ ಪತ್ರ ಓದಿ ಬಹಳ ಸಂತೋಷವಾಯಿತು. ನಿಮ್ಮ ಅಭಿಪ್ರಾಯ.... ಪರಿಸರ ಕಾಳಜಿ... ನಿಜಕ್ಕೂ ನಮಗೆಲ್ಲ ಮಾದರಿಯಾಗುವಂತಹುದು. ಹೌದು ಈಗಿನ ದಿನಗಳಲ್ಲಿ ಮರಗಳನ್ನು ಕಡಿದು ಪರಿಸರ ನಾಶಕ್ಕೆ ಮಾನವನೇ ಕಾರಣೀಕರ್ತನಾಗಿದ್ದಾನೆ. ನಾವು ಈಗಲೇ ಮರಗಿಡಗಳನ್ನು ಉಳಿಸಿ ಬೆಳೆಸದಿದ್ದರೆ ಮುಂದೊಂದು ದಿನ ನಾವೇ ಗಂಡಾಂತರಗೊಳಗಾಗುತ್ತೇವೆ...... ಅಲ್ವಾ.... ಅಕ್ಕ.... ನೀವಂದಂತೆ ನಾವು ನಮ್ಮ ಜನ್ಮದಿನದಂದು ಗಿಡವನ್ನು ನೆಟ್ಟರೆ ಬಹುಶಃ ಭೂಮಾತೆಗೆ ನಮ್ಮ ಕಿಂಚಿತ್ ಸೇವೆ ಮಾಡಿದಂತಾಗುವುದು. ನಿಮ್ಮ ಒಳ್ಳೆಯ ಸಲಹೆಗೆ ಧನ್ಯವಾದಗಳು ಅಕ್ಕ.... ಖಂಡಿತ ನಾನು ನನ್ನ ಜನ್ಮದಿನದಂದು ಒಂದು ಗಿಡ ನೆಡುವ ಅಭ್ಯಾಸ ವನ್ನು ಮಾಡುತ್ತೇನೆ. ನನ್ನ ಗೆಳತಿಯರಿಗೂ ತಿಳಿಸುತ್ತೇನೆ.... ವಂದನೆಗಳೊಂದಿಗೆ....
7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೇ ಅಕ್ಕ ........ ನಾನು ಬಿಂದುಶ್ರೀ ನನ್ನ ಹುಟ್ಟು ಹಬ್ಬದಂದು ನನಗೆ ಖುಷಿ. ಪ್ರತಿದಿನದ ತರ ಆ ಖುಷಿ ಇರುವುದಿಲ್ಲ. ಹುಟ್ಟು ಹಬ್ಬ ಎಂದರೆ ಎಲ್ಲರಿಗೂ ಖುಷಿ, ಸಡಗರ. ನಮ್ಮ ಹುಟ್ಟುಹಬ್ಬದ ದಿನದಂದು ನಾವು ಮೊದಲಿಗೆ ನಮಗೆ ಜನ್ಮ ಕೊಟ್ಟ ತಾಯಿಯ ಕಾಲಿಗೆ ಬಿದ್ದು ಅವರ ಆಶೀರ್ವಾದ ತೆಗೆದುಕೊಳ್ಳುವುದು, ಹಾಗೂ ಗುರು ಹಿರಿಯರಿಗೆ ನಮಸ್ಕರಿಸುವುದು. ಹಾಗೆ ಅಕ್ಕ ನೀವು ಹೇಳಿದ ತರ ನಮ್ಮ ಮನೆಯಲ್ಲಿ ಅಥವಾ ತೋಟದಲ್ಲಿ ನನ್ನ ಹುಟ್ಟು ಹಬ್ಬದ ದಿನದಂದು ಗಿಡವನ್ನು ನೆಡುತ್ತೇನೆ. ಈ ಕಾಲದಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗಿದೆ. ಹೆಚ್ಚು ಹೆಚ್ಚಾಗಿ ಗಿಡಗಳನ್ನು ಬೆಳೆಸೋಣ. .............................................. ಕೆ ಬಿಂದು ಶ್ರೀ
ತರಗತಿ :10
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಹಾಯ್ ಅಕ್ಕ... ನಾನು ನಿಮ್ಮ ತಂಗಿ ದಿಶಾ ನಾನು ಚೆನ್ನಾಗಿ ಇದ್ದೇನೆ , ನೀವು ಹೇಗಿದ್ದೀರಾ .....? ಈ ಪತ್ರದಲ್ಲಿರುವ ಅಂಶವೇನೆಂದರೆ ನಾವು ನಮ್ಮ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದರ ಬದಲು ಮನೆಯ ಅಕ್ಕ ಪಕ್ಕ ದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಬಹುದು. ಇದರಿಂದ ನಮಗೆ ಶುದ್ಧ ಗಾಳಿ ಮತ್ತು ನೆರಳು ಸಿಗುತ್ತದೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗುತ್ತದೆ. ಕೇಕ್ ಕತ್ತರಿಸುವುದ್ದರಿಂದ ಸಂತೋಷವಾದರೂ ಅದು ಕ್ಷಣಿಕ ಮಾತ್ರ . ಆದರೆ ಗಿಡಗಳನ್ನು ನೆಡುವುದರಿಂದ ನಮಗೆ ಉಪಯುಕ್ತವಾಗುತ್ತದೆ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ಅಕ್ಕನಿಗೆ...... ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು.
ನೀವು ಜನ್ಮದಿನದ ನೆನಪಿಗೆ ಒಂದು ಗಿಡ ನೆಡುವ ಬಗ್ಗೆ ಸಲಹೆ ನೀಡಿದ್ದು, ಬಹಳ ಸಂತೋಷದ ವಿಚಾರ. ನಾನು ನನ್ನ ಜನ್ಮದಿನದ ನೆನಪಿಗೆ ಒಂದು ಗಿಡವನ್ನು ನೆಟ್ಟು ಪೋಷಿಸುತ್ತಾ ಬಂದಿದ್ದೇನೆ. ಹೀಗೆ ನೆಟ್ಟ ಗಿಡಗಳಿಂದ ಪರಿಸರವು ಸುಂದರವಾಗಿರುತ್ತದೆ. ಗಿಡಗಳಿಂದ ಸ್ವಚ್ಛ ಗಾಳಿ ಸಿಗುತ್ತದೆ ಮತ್ತು ಪ್ರಕೃತಿಯ ಸೌಂದರ್ಯವು ಹೆಚ್ಚಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನದ ನೆನಪಿಗೆ ವಿದೇಶಿ ಸಂಸ್ಕೃತಿ ಆದ ಕೇಕ್ ಕತ್ತರಿಸುವ ಬದಲು ಗಿಡನೆಟ್ಟು ಪರಿಸರವನ್ನು ಸಂರಕ್ಷಿಸುವುದು ಒಳ್ಳೆಯದು. ನಾವೇ ಗಿಡಗಳನ್ನು ನೆಟ್ಟಾಗ ಅದರ ಬಗ್ಗೆ ಕಾಳಜಿಯೂ ಹೆಚ್ಚಾಗುತ್ತದೆ ಮತ್ತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ನಮ್ಮ ಪರಿಸರವನ್ನು ನಾವೆಲ್ಲರೂ ಪ್ರೀತಿಯಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಧನ್ಯವಾದಗಳೊಂದಿಗೆ,
ಐದನೇ ತರಗತಿ,
ಶ್ರೀರಾಮ ವಿದ್ಯಾಕೇಂದ್ರ,
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ಅಕ್ಕ.. ನಾನು ನಿಮ್ಮ ಪ್ರೀತಿಯ ತಂಗಿ ರಕ್ಷಾ. ನಮಗಂತೂ ಜನ್ಮದಿನ ಯಾವಾಗ ಬರುತ್ತೆ ಎಂಬ ಕಾತುರ ಇದ್ದೇ ಇರುತ್ತದೆ. ಜನ್ಮದಿನ ಬಂದರೆ ಸಾಕು ಸಂತೋಷ , ಸಡಗರದಿಂದ ಇರುತ್ತೇವೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಿಸಿಕೊಳ್ಳೋಣ. ಇದರಿಂದ ಪರಿಸರ ಅಂದವಾಗಿ ಬೆಳೆಯುತ್ತದೆ. ಮಾನವನು ಇಂದು ತನ್ನ ಸ್ವಾರ್ಥಕ್ಕಾಗಿ ಅಂದವಾಗಿರುವ ಪರಿಸರವನ್ನು ನಾಶ ಮಾಡುತ್ತಾನೆ. ಹಸಿರೇ ಉಸಿರು ಎಂಬ ಗಾದೆ ಮಾತಿನಂತೆ ನಮ್ಮ ಪರಿಸರವನ್ನು ಹಚ್ಚ ಹಸಿರಾಗಿ ಮಾಡೋಣ. ಎಲ್ಲರೂ ಗಿಡ ನೆಟ್ಟು ಬೆಳೆಸೋಣ. ಧನ್ಯವಾದಗಳೊಂದಿಗೆ,
9ನೇ ತರಗತಿ.
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಅಕ್ಕನ ಪತ್ರ 16
ನಮಸ್ತೆ ಅಕ್ಕ, ನಾನು ಪ್ರಣವ್ ......
ನಿಮ್ಮ ಪತ್ರ ಓದಿದ ನಂತರ ತಿಳಿಯಿತು, ಹುಟ್ಟುಹಬ್ಬದ ದಿನದಂದು ಗಿಡ ನೆಟ್ಟು ಸಂತೋಷ ಪಡಬೇಕು, ಸರಿ ಅಕ್ಕ ಮುಂದಿನ ಹಬ್ಬದಂದು ನಾನು ಗಿಡ ನೆಟ್ಟು ಬೆಳೆಸಿ ಒಂದು ಉದ್ಯಾನವನ ಮಾಡಿ ಸಂತೋಷ ಪಡುತ್ತೇನೆ... ವಂದನೆಗಳು,
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು - ದ.ಕ ಜಿಲ್ಲೆ
*******************************************
ನಮಸ್ತೆ ಅಕ್ಕ...... ನಾನು ರಕ್ಷಾ....... ಈ ಪತ್ರದ ಮೂಲಕ ನಾವು ನಮ್ಮ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಿಸಬೇಕೆಂದು ತಿಳಿದುಕೊಂಡೆ. ಕೇಕ್ ಕತ್ತರಿಸಿ ಆಚರಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಕೃತಿಯಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯುವ ನಾವು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಪ್ರಕೃತಿಯ ಋಣವನ್ನು ತೀರಿಸಬೇಕಾಗಿದೆ. ನಮ್ಮ ಜನ್ಮದಿನದಲ್ಲಿ ಪ್ರಯುಕ್ತ ಮನೆಯ ಅಥವಾ ಶಾಲೆಯ ಅಕ್ಕ ಪಕ್ಕ ಒಂದು ಗಿಡ ನೆಟ್ಟರೆ ಎಲ್ಲರಿಗೂ ಆಸರೆಯಾಗುತ್ತದೆ. ಆಗ ನಮ್ಮ ಜನ್ಮದಿನ ಹೆಚ್ಚು ಅರ್ಥಪೂರ್ಣವಾಗುತ್ತದೆ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ, ನಾನು ಧೀರಜ್...... ಈ ಸಲದ ಅಕ್ಕನ ಪತ್ರವನ್ನು ಓದಿ ನನಗೆ ತುಂಬಾ ಸಂತೋಷವಾಯಿತು. ನನಗೂ ಅರ್ಥವಾಯಿತು. ಅದು ಏನೆಂದರೆ ನಾವು ನಮ್ಮ ಹುಟ್ಟುಹಬ್ಬದ ದಿನದಂದು ಗಿಡ ನೆಡಬೇಕು. ಅದರ ಪಾಲನೆ, ಪೋಷಣೆ ಮಾಡಬೇಕು. ಇದರಿಂದ ಪರಿಸರದ ಅವನತಿಯ ಪ್ರಮಾಣ ಕ್ರಮೇಣ ಕ್ಷೀಣಿಸುತ್ತದೆ ಹಾಗೂ ಜೀವ ಸಂಕುಲದ ಅಭಿವೃದ್ಧಿಯಾಗುತ್ತದೆ. ನಮ್ಮ ಜನ್ಮದಿನದಂದು ಮಾಡುವ ಒಂದು ಕೆಲಸದಿಂದ ಪ್ರಪಂಚದ ಜೀವಸಂಕುಲಕ್ಕೆ ಒಳಿತಾಗುತ್ತದೆ ಎಂದ ಮೇಲೆ ನಾವು ಅದನ್ನು ಮಾಡಲೇಬೇಕಾಗುತ್ತದೆ ಹಾಗೂ ಅದು ನಮ್ಮ ಕರ್ತವ್ಯವಾಗಿರುತ್ತದೆ. ನಾನೂ ಸಹ ನನ್ನ ಈ ಸಲದ ಹುಟ್ಟುಹಬ್ಬದಂದು ಗಿಡವನ್ನು ನೆಟ್ಟು ಸಂತಸಪಡುತ್ತೇನೆ..... ಅಕ್ಕಾ ನಾನು ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
ಧನ್ಯವಾದಗಳು.....
9ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ
ಮಾಧ್ಯಮ ಪ್ರೌಢ ಶಾಲೆ ರಾಮಕುಂಜ
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************