-->
2022 ರಲ್ಲಿ ನನ್ನ ಯೋಚನೆ-ಯೋಜನೆ : ಸಂಚಿಕೆ -2

2022 ರಲ್ಲಿ ನನ್ನ ಯೋಚನೆ-ಯೋಜನೆ : ಸಂಚಿಕೆ -2


      ಮಕ್ಕಳ ಜಗಲಿಯ ಎಲ್ಲರಿಗೂ 2022 ರ ಶುಭಾಶಯಗಳು. ನಮಗೆಲ್ಲ ಪ್ರತಿದಿನ ಹೊಸದೇ..... ಮಕ್ಕಳ ಜಗಲಿಯ ಮೂಲಕ  "2022 -ನನ್ನ ಯೋಚನೆ-ಯೋಜನೆ" ಮಕ್ಕಳಿಗಾಗಿ ಆಯೋಜಿಸಲಾದ ಈ ಚಟುವಟಿಕೆಯಲ್ಲಿ ಜಗಲಿಯ ಅನೇಕ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳ ಮನದಾಳದ ಜಾಗೃತಿಯ ಮಾತುಗಳನ್ನು ಇಲ್ಲಿ ಪ್ರಕಟಿಸಿದ್ದೇವೆ...... 


                2022 ರಲ್ಲಿ 
       ನನ್ನ ಯೋಚನೆ-ಯೋಜನೆ
                ಸಂಚಿಕೆ : 2


ಜೈ ಶ್ರೀ ರಾಮ್ ......... ಶ್ರೀಮಾನ್ ನಿಮಗೆ ತೃಪ್ತಿ ಮಾಡುವ ನಮಸ್ಕಾರಗಳು....... 2022 ನೇ ಇಸವಿಯಲ್ಲಿ ನಾನು ಮಕ್ಕಳ ಜಗಲಿಗೆ ಇನ್ನಷ್ಟು ಉತ್ತಮ ಚಿತ್ರಗಳನ್ನು, ಕಥೆ-ಕವನಗಳನ್ನು ಮಾಡಿ ಕಳುಹಿಸಬೇಕೆಂದು ಯೋಚನೆ ಮಾಡಿಕೊಂಡಿರುವೆ. ಸಾಧ್ಯವಾದಷ್ಟು ಇತರರಿಗೆ ಉಪಕಾರವನ್ನೇ ಮಾಡುತ್ತಾ ಇರಬೇಕೆಂದು ಬಯಸುತ್ತೇನೆ. ಐದನೇ ತರಗತಿಯ ಕೊನೆಯ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಬೇಕೆಂದು ನನ್ನ ಕನಸು. ಈ ವರ್ಷ ಶಾಲೆಗೆ ಹೋದಾಗಿನಿಂದ ನಡೆದ ಪ್ರತಿ ಸ್ಪರ್ಧೆ ಗಳಲ್ಲಿಯೂ ನಾನು ಭಾಗವಹಿಸಿದ್ದೇನೆ. ಮುಂದಕ್ಕೆ ನಡೆಯುವ ಸ್ಪರ್ಧೆಗಳಲ್ಲಿಯೂ ಭಾಗವಹಿಸಬೇಕೆಂದು ನನ್ನ ಯೋಚನೆ. ಸಾಧ್ಯವಾದಷ್ಟು ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕು. ಅಮ್ಮನಿಗೆ ಹೆಚ್ಚು ಶ್ರಮ ಕೊಡಬಾರದು ಎನ್ನುವುದು ನನ್ನ ಯೋಚನೆ.
ಈಗಾಗಲೇ ಕೂಡಿಟ್ಟ ಹಣದ ಜೊತೆಗೆ ಇನ್ನಷ್ಟು ಕೂಡಿಸಿಡಬೇಕು ಅನ್ನುವ ಯೋಜನೆ ಇದೆ. 
 2022 ರಲ್ಲಿ ಬರುವ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು. ನಮ್ಮೂರ ಜಾತ್ರೆಯಲ್ಲಿ ಹೆಚ್ಚು ಸಂಭ್ರಮಿಸಬೇಕು ಎನ್ನುವ ಕನಸಿದೆ.
ನಮ್ಮ ಮನೆಯಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತೇವೆ. 2022 ಎಲ್ಲರಿಗೂ ಶುಭ ತರಲಿ. ರಾಮ್ ರಾಮ್
 .......................................................ತೃಪ್ತಿ ವಗ್ಗ
5ನೇ ಭರತ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳತಾಲೂಕು , ದಕ್ಷಿಣ ಕನ್ನಡ ಜಿಲ್ಲೆ  
*********************************************




ನಮಸ್ತೆ, ನಾನು ನಿಮ್ಮ ಪ್ರೀತಿಯ ಅದಿತಿ.ಕೆ,ಕೊಕ್ಕಡ.
     2021ನೇ ವರ್ಷವನ್ನು ಮುಗಿಸಿ 2022ನೇ ಹೊಸ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹೊಸವರುಷದ ಶುಭಾಶಯಗಳು........ ಕಳೆದ ವರ್ಷದಂತೆ ಈ ಸಲ ನಮಗೆ ಶಾಲಾ ದಿನಗಳು ಕಣ್ಮರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ಹೊಸ ವರುಷವು ಹೊಸ ಹರುಷದಿಂದ ಆರಂಭವಾದಂತೆ ಕೊನೆಯವರೆಗೂ ಉಲ್ಲಾಸಮಯವಾಗಿರಲಿ.
         ನಾನು ಈ ವರ್ಷ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು, ಒಳ್ಳೆಯ ಗುಣಗಳನ್ನು ಮತ್ತಷ್ಟು ಕಲಿಯಬೇಕು, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯಬೇಕು, ಚಿತ್ರಕಲೆಯಲ್ಲಿ ಸಾಧನೆ ಮಾಡಬೇಕು ಎಂಬ ಮಹದಾಸೆಯನ್ನು ಹೊಂದಿದ್ದೇನೆ. ಹಾಗೆಯೇ ಕಷ್ಟದಲ್ಲಿರುವವರಿಗೆ ಇನ್ನಷ್ಟು ಸಹಾಯ ಮಾಡಬೇಕು ಎಂಬ ಆಸೆ ಇದೆ. ಮಕ್ಕಳ ಜಗಲಿಯು ನಮ್ಮಂತ ಪುಟಾಣಿಗಳಿಗೆ ಉತ್ತಮ ವೇದಿಕೆ ನೀಡಿದ್ದು ಈ ವೇದಿಕೆ ಇನ್ನಷ್ಟು ಬೆಳೆಯಲಿ ಎಂಬ ಆಶಯದೊಂದಿಗೆ ಮಕ್ಕಳ ಜಗಲಿಯು ನನ್ನ ಪ್ರೀತಿಯ ಗೆಳತಿ ಇದ್ದಂತೆ ಎಂದು ಭಾವಿಸಿದ್ದೇನೆ. ಅವಕಾಶಕ್ಕಾಗಿ ವಂದನೆಗಳು........
.............................................ಅದಿತಿ.ಕೆ 
5 ನೇ ತರಗತಿ
ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಕೊಕ್ಕಡ ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************



     ಎಲ್ಲರಿಗೂ ಆತ್ಮೀಯ ಶುಭ ನಮನಗಳು....
ನನ್ನ ಹೆಸರು ಪ್ರಿಯ. ಮೊದಲನೆಯದಾಗಿ ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಹರ್ಷದಿಂದ ತಿಳಿಸಲು ಇಚ್ಛಿಸುತ್ತೇನೆ.  ನಾವೆಲ್ಲರೂ ಇಂದು 2021 ಕ್ಕೆ ಮಂಗಳ ಹಾಡಿ 2022 ರ ಹೊಸ ವರ್ಷದ ಅಂಗಳಕ್ಕೆ ಕಾಲಿಡುತ್ತಿದ್ದೇವೆ. ಎಷ್ಟು ವಿಚಿತ್ರ ಅಲ್ವಾ..!! ತುಸು ಬೇಗನೆ 2021 ಕಳೆದು 2022 ನೇ ವರ್ಷ ಬಂದೇ ಬಿಟ್ಟಿದೆ..!! ನಾನೂ ಕೂಡ ಹೊಸ ವರ್ಷದಲ್ಲಿ ನನ್ನದೇ ಆದ ಕೆಲವು ಯೋಜನೆ - ಯೋಚನೆಗಳನ್ನು ಇಟ್ಟುಕೊಂಡಿದ್ದೇನೆ. ಹೊಸ ವರ್ಷವೆಂದರೆ ಎಲ್ಲರ ಮೊಗದಲ್ಲೂ ಒಂದು ಸಣ್ಣ ಕಿರುನಗೆ, ಸಂತೋಷ, ಸಡಗರ - ಸಂಭ್ರಮದ ಕಿರು ನೋಟವಿರುತ್ತದೆ. ನಮ್ಮೆಲ್ಲರಲ್ಲೂ ಹೊಸ - ಹೊಸ ಚಿಂತನೆಗಳ ಹಾಗೂ ಮೈಯೊಳಗೊಂದು ಪ್ರಕಾಶ ಮಾನವಾದ ಬೆಳಕು ಥಟ್ಟನೇ ಹೊಳಪಿನಿಂದ ಕಂಗೊಳಿಸಿದಂತೆ ಭಾಸವಾಗುತ್ತದೆ. ಹೊಸ ವರ್ಷದ ನನ್ನ ಯೋಚನೆಯೆಂದರೆ, ಹೊಸ ವರುಷವು ಹರುಷದಿಂದ ನಮ್ಮಲ್ಲಿಗೆ ಬಂದಾಗ ನಾವೂ ಅದನ್ನು ಹೊಸ - ಹೊಸ ರೀತಿಯಲ್ಲಿ ಮುಂದುವರಿಸೋಣ ಎಂಬುದು. ಹೊಸ ವರುಷದ ಈ ರಂಗಿನರಮನೆಯಲ್ಲಿ ನಾವೆಲ್ಲರೂ ಸಹ ಹೊಸ - ಹೊಸ ಬಣ್ಣ - ಬಣ್ಣದ ಕನಸನ್ನು ನನಸಾಗಿಸುವ ಬಗ್ಗೆ ತಿಳಿಯೋಣ. ನಾನೂ ಕೂಡಾ ಹೊಸ ವರ್ಷದಲ್ಲಿ ನನ್ನಲ್ಲಿ ಹೊಸ - ಹೊಸ ಚಿಂತನೆ, ಹವ್ಯಾಸ ಗಳನ್ನು ಬೆಳೆಸಿಕೊಳ್ಳಲು ಇಷ್ಟ ಪಡುತ್ತೇನೆ. ನಾನೂ ಸಹ 10 ನೆ ತರಗತಿಯ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಹಾಗೂ ಅಂಕ ಗಳಿಸಬೇಕು, ಹೊಸ - ಹೊಸ ಚಿಂತನೆಗಳ ಮೂಲಕ ಹೊಸ - ಹೊಸ ವಿಷಯಗಳ ಬಗ್ಗೆ ಅಭ್ಯಸಿಸಿ ಪ್ರಗತಿಯನ್ನು ಸಾಧಿಸಬೇಕು. ನನ್ನ ಸಾಧನೆಯ ಕನಸುಗಳನ್ನು ನನಸಾಗಿಸಿ, ಸುತ್ತಲಿನ ಅಂಧಕಾರದಲ್ಲಿ ಪ್ರಕಾಶ ಮಾನವಾಗಿ ಹೊಳೆಯುವ ನಕ್ಷತ್ರದ ರೀತಿಯಾಗಬೇಕು ಎಂಬ ಹಲವಾರು ಯೋಜನೆಗಳನ್ನು ಇಟ್ಟುಕೊಂಡಿದ್ದೇನೆ. "ಪ್ರಯತ್ನo ಸರ್ವ ಸಿದ್ದಿ ಸಾಧನಮ್" - ಪ್ರಯತ್ನ ಪಟ್ಟರೆ ಎಲ್ಲವನ್ನೂ ಜೈಸಬಹುದು ಎಂಬ ನಂಬಿಕೆ ನನ್ನಲ್ಲಿದೆ. ಈ ಹೊಸ ವರ್ಷವು ಸುತ್ತಲೂ ಆವರಿಸಿದ ಅಂಧಕಾರವನ್ನು ಹೋಗಲಾಡಿಸಿ, ಉಜ್ವಲವಾದ ಬೆಳಕನ್ನು ನಮ್ಮೆಲ್ಲರ ಜೀವನದಲ್ಲಿ ತೋರಲಿ ಎಂದು ನಾನು ಆಶಿಸುತ್ತೇನೆ.
........ಧನ್ಯವಾದಗಳು........
....................................................ಪ್ರಿಯ 
10 ನೇ ತರಗತಿ .
ಸರಕಾರಿ ಪ್ರೌಢ ಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ, 
*********************************************


     ಎಲ್ಲರಿಗೂ ನಮಸ್ತೆ .... ನನ್ನ ಹೆಸರು ವೈಷ್ಣವಿ ಕಾಮತ್.... 2022 ಕ್ಯಾಲೆಂಡರ್ ವರ್ಷಕ್ಕೆ ಸ್ವಾಗತ.
ಹೊಸ ವರುಷವನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತಿದ್ದೇನೆ. ಹೊಸವರುಷವು ಎಲ್ಲರಿಗೂ ಶುಭವನ್ನುಂಟುಮಾಡಲಿ. ಹೊಸವರುಷದಲ್ಲಿ ನನಗೆ ಹೊಸ ಹೊಸ ಕನಸುಗಳಿವೆ. ಆ ಕನಸುಗಳೆಲ್ಲಾ ಈಡೇರಲಿ ಎಂಬುವುದೇ ನನ್ನ ಕೋರಿಕೆ. ಈ ಕೊರೋನಾ ಎಂಬ ಮಹಾಮಾರಿ ಕೊನೆಯಾಗಲಿ. ಅದರ ರೂಪಾಂತರಿ  ವೈರಸ್ ಗಳು ನಾಶವಾಗಲಿ. ಎಲ್ಲವೂ ಮೊದಲಿನಂತೆ ಖುಷಿಯಿಂದ ಇರುವಂತೆ ಆಗಲಿ. ಶಾಲೆಯಲ್ಲಿ ನಮಗೆ ಕ್ರೀಡೋತ್ಸವ ಪ್ರತಿಭಾ ದಿನೋತ್ಸವಗಳು ಮೊದಲಿನಂತೆ ನಡೆಯುವಂತಾಗಲಿ. ದೇಶದ ಆರ್ಥಿಕತೆಯು ಸುಧಾರಿಸಲಿ. ಇತ್ತೀಚಿನ ಎರಡು ವರ್ಷಗಳಲ್ಲಿ ಜನರು ಅನುಭವಿಸಿದ ತೊಂದರೆಗಳು ಹೇಳಹೆಸರಿಲ್ಲದೆ ಮಾಯವಾಗಲಿ. ವಿದ್ಯಾ ದೇಗುಲಗಳಲ್ಲಿ ಮಕ್ಕಳಿಗೆ ಸಂಭ್ರಮದ ದಿನಗಳು ಮರುಕಳಿಸುವಂತಾಂಗಲಿ. ಇನ್ನಾದರೂ ನಮ್ಮ ಈ ಯೋಚನೆಗಳೆಲ್ಲ ಈಡೇರುವಂತೆ ಆಗಲಿ ಎಂಬುದೇ ಭಗವಂತನಲ್ಲಿ ನಮ್ಮೆಲ್ಲರ ಪ್ರಾರ್ಥನೆ. "ಹೊಸ ವರುಷವು ಹೊಸ ಹರುಷವನ್ನು" ಎಲ್ಲರ ಬಾಳಿನಲ್ಲೂ ತರುವಂತಾಗಲಿ.
           ಧನ್ಯವಾದಗಳೊಂದಿಗೆ
........................................ ವೈಷ್ಣವಿ ಕಾಮತ್ 
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ.  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*********************************************


          ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.... ನನ್ನ ಹೆಸರು ನಾಗರಾಜ. ಹೊಸ ವರ್ಷದ ಪ್ರಾರಂಭದಲ್ಲಿ ನಾವು ಸಾಮಾನ್ಯವಾಗಿ ಕ್ಯಾಲೆಂಡರ್ ಮಾತ್ರ ಬದಲಾಯಿಸುತ್ತೇವೆಯೆ? ಹೊಸ ವರ್ಷಕ್ಕೆ ಉಡುಗೊರೆಯಾಗಿ ಬಂದ ಸಿಹಿ ತಿಂಡಿಗಳನ್ನು ಮಾತ್ರ ತಿನ್ನುತ್ತೇವೆಯೆ? ಅಥವಾ ಹೊಸ ವರ್ಷದ ಪ್ರಾರಂಭದಲ್ಲಿ ಹೊಸ ಗುಣಗಳನ್ನು ಹೊಸ ಹವ್ಯಾಸಗಳನ್ನು ಶಿಸ್ತನ್ನು ಮತ್ತು ಪ್ರಾಮಾಣಿಕ ಜೀವನವನ್ನು ಅಳವಡಿಸುತ್ತೇವೆಯೆ? ಎಲ್ಲ ನಮ್ಮ ಯೋಚನೆಯಲ್ಲಿ ಅಡಗಿವೆ. ಇದೋ ಹೊಸ ವರ್ಷ ಹತ್ತಿರ ಬರುತ್ತಿದೆ. ನಾನಂತೂ ಹೊಸ ಗುಣಗಳನ್ನು ಹೊಸ ಶಿಸ್ತನ್ನು ಅಳವಡಿಸಬೇಕೆಂದು ಇದ್ದೇನೆ. ಕಾಯುತ್ತಿದ್ದೇನೆ. 2022 ಎಂದರೆ  ಇದು ಒಂದು ಹೊಸ ಬದುಕಿನ ಬಾಗಿಲು . ಈ ವರ್ಷ ಹೇಗೆಯೋ ಕಳೆದು ಹೋಯಿತು . ಆದರೆ ಈಗ ನಾವೆಲ್ಲ ನಮ್ಮಲ್ಲಿ ಹೊಸ ಬದಲಾವಣೆ ತರುವ ಸಮಯ. ನಾನು ನನ್ನಲ್ಲಿ ಕೆಲವು ಬದಲಾವಣೆ ತರಬೇಕೆಂದು ಇದ್ದೇನೆ . ಈ ಕೊರೋನದ ಸಂದರ್ಭದಲ್ಲಿ ಆರೋಗ್ಯವೂ ತುಂಬಾ ಮುಖ್ಯ. ನಾನು ಆರೋಗ್ಯವಾಗಿರಲು ಬೆಳಗ್ಗೆ ವ್ಯಾಯಾಮ ಮಾಡುವ ಗುಣ ತರಲಿದ್ದೇನೆ . ಕೆಟ್ಟ ತಿನಿಸುಗಳನ್ನು ತಿನ್ನದೆ ಒಳ್ಳೆಯ ಸ್ವಚ್ಛ ಆಹಾರ ಸೇವಿಸಬೇಕು ಎಂದು ಇದ್ದೇನೆ. ಈ ಹೊಸ ವರ್ಷದಲ್ಲಿ ನನ್ನ ಕಲಿಕೆಯಲ್ಲಿ ನಾನು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಇದ್ದೇನೆ. ನಾನು ನನ್ನ ಶಾಲೆಯ ಉಪಮುಖ್ಯಮಂತ್ರಿ ಪದವಿ ಗೆ ಆಯ್ಕೆಯಾಗಿದ್ದೇನೆ. ಪದವಿಯನ್ನು ಚೆನ್ನಾಗಿ ನಿಭಾಯಿಸಬೇಕು ಶಾಲೆಯಲ್ಲಿ ಶಿಸ್ತು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು ಹಾಗೂ ನಾನು ನನ್ನ ಶಿಕ್ಷಕರಿಗೆ ಒಳ್ಳೆಯ ವಿದ್ಯಾರ್ಥಿಯಾಗಿರಬೇಕು. ಈ ಹೊಸ ವರ್ಷದ ಸಡಗರದಲ್ಲಿ ನಾವು ನಮ್ಮಲ್ಲಿ ಹೊಸ ಗುಣ ಮತ್ತು ಒಳ್ಳೆಯ ಯೋಚನೆಯನ್ನು ತರೋಣ, ಇದು ನನ್ನ ಹೊಸ ವರ್ಷದ ಸಡಗರದ ಮಾತು.  
...................................ನಾಗರಾಜ್ B S 
9 ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************




      ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಬಿಂದುಶ್ರೀ...... ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಾವು ಈ ವರಗೆ ಮಾಡಿದ ಕಾರ್ಯಗಳನ್ನು ಒಮ್ಮೆ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ. ನಮಗೆ ಸಹಾಯ ಮಾಡಿದ ಎಲ್ಲರನ್ನು ನಾವು ಮೊದಲಾಗಿ ನೆನಪಿಸಬೇಕು. ಹಾಗೆ ನಮ್ಮ ಜೊತೆ ಇಲ್ಲಿಯವರೆಗೆ ಇದ್ದ ಈಗೂ ನಮ್ಮ ಜೊತೆ ಇರುವ ನಮ್ಮ ಗೆಳತಿಯರಿಗೂ ತುಂಬಾ ಧನ್ಯವಾದಗಳನ್ನು ೩ಹೇಳಲು ಇಷ್ಟ ಪಡುತ್ತೇನೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ಗುರುಗಳು , ಹಿರಿಯರು, ಅಪ್ಪ, ಅಮ್ಮನಿಗೂ ಧನ್ಯವಾದಗಳು. ಇನ್ನು ಮುಂದಿನ ನಮ್ಮ ಎಲ್ಲರ ಜೀವನ ಖುಷಿಯಾಗಿರಲಿ, ಹಾಗೂ ಮುಂದಿನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳು ಗಳಿಸಬೇಕೆಂಬ ಆಕಾಂಕ್ಷೆ ಇದೆ. ಎಲ್ಲರಿಗೂ ಹೊಸ ವರ್ಷದ ಶಭಾಶಯಗಳು.
............................................... ಕೆ ಬಿಂದುಶ್ರೀ  
10ನೇ ತರಗತಿ 
ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



ನಾನು ಶೌರ್ಯ.ಎಸ್.ವಿ. 7ನೇ ತರಗತಿ. ಮಕ್ಕಳ ಜಗಲಿಯಲ್ಲಿ ಹೊಸ ವರ್ಷಕ್ಕೆ ಇನ್ನೂ ಹೆಚ್ಚು ಜಗಲಿಯ ಮಕ್ಕಳಿಗೆ ಚಟುವಟಿಕೆಗಳನ್ನು ಕೊಡಬೇಕು. ಅಂದ್ರೆ ಡಾನ್ಸ್ and song ಹೇಳಿ ವಿಡಿಯೋ ಮಾಡಿ ಕಳಿಸುವಂತೆ. ಯೋಗ ಇನ್ನಿತರ ಹೆಚ್ಚು ಹೆಚ್ಚು ಚಟುವಿಕೆ ಮಾಡ್ಬೇಕು ಅಂತ ನನ್ನಲ್ಲಿ ಉಂಟು. ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಹಾಗೆ ಕ್ರಾಫ್ಟ್ works ಎಲ್ಲ ಕಲಿಯಬೇಕು ಎಂದುಕೊಂಡಿದ್ದೇನೆ. ಛದ್ಮವೇಷ ಅಭಿನಯಗೀತೆ, ಇನ್ನಿತರ ಚಟುವಟಿಕೆ ಮಾಡಬೇಕು ಅಂತ ನನ್ನ ಮನದಲ್ಲಿ ಉಂಟು. ಅವಕಾಶಕ್ಕಾಗಿ ಧನ್ಯವಾದಗಳು.
.....................................ಶೌರ್ಯ ಎಸ್.ವಿ.  
7 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕನ್ಯಾಡಿ - 2 ಧರ್ಮಸ್ಥಳ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


       ನಮಸ್ತೆ
ನಾನು ಅಪೂರ್ವ ರೈ, 
ನನಗೆ ಬರುವ ವರುಷ ನವೋದಯ ಶಾಲೆಗೆ ಪರೀಕ್ಷೆ ಬರೆಯಬೇಕು.. ಭರತನಾಟ್ಯದ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಬೇಕು.. ಧನ್ಯವಾದಗಳು
........................................... ಅಪೂರ್ವ ರೈ, 
4ನೇ ತರಗತಿ , 
ಶಾಲೆ ಶ್ರೀ ಗಜಾನನ ಆಂಗ್ಲ ಮಾಧ್ಯಮ,
ಮನೆ- ನೆಟ್ಟಣಿಗೆ , ಮುಳ್ಳೇರಿಯ..
*********************************************

Ads on article

Advertise in articles 1

advertising articles 2

Advertise under the article