-->
ಅಕ್ಕನ ಪತ್ರ - 15 ಕ್ಕೆ  ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ - 15 ಕ್ಕೆ ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ - 15 ಕ್ಕೆ  
ಮಕ್ಕಳ ಉತ್ತರ : ಸಂಚಿಕೆ -1


        ಸೃಜನಶೀಲ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಮಕ್ಕಳ ಜಗಲಿಯಲ್ಲಿ ಬರೆಯುತ್ತಿರುವ ಅಕ್ಕನ ಪತ್ರ ಜಗಲಿಯ ಮಕ್ಕಳಿಗೆಲ್ಲಾ ಬಹಳ ಆಪ್ತವಾಗುತ್ತಿದೆ. ಬರವಣಿಗೆ ಸಾಮರ್ಥ್ಯವನ್ನು ವೃದ್ಧಿಸುವ ಸಲುವಾಗಿ ಬರೆಯುವ ಮತ್ತು ಮನದ ಭಾವನೆಗಳನ್ನು ವ್ಯಕ್ತಪಡಿಸುವ ಮಕ್ಕಳ ಉತ್ತರಗಳು ಜಗಲಿಯಲ್ಲಿ ವಿಶೇಷತೆಯಾಗಿದೆ... ಅಕ್ಕನ ಪತ್ರ -15ಕ್ಕೆ ಅನೇಕ ಮಕ್ಕಳು ಉತ್ತರ ಬರೆದು ಕಳುಹಿಸಿದ್ದಾರೆ. ಅವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.....



        ಅಕ್ಕ , ನಾನು ರಕ್ಷಿತ್ ನಾನು ಚೆನ್ನಾಗಿ ಇದ್ದೇನೆ. ನೀವು ಕೂಡ ಚೆನ್ನಾಗಿದ್ದೀರಿ ಅಲ್ವಾ?
ನನಗೆ ನೀವು ನೀವು ಬರೆದ, ಕಪ್ಪೆಗಳ ಕಥೆಯನ್ನು ಓದಿ ತುಂಬಾ ಇಷ್ಟ ಆಯಿತು. ನಮಗೆ ಎಷ್ಟೋ ಜನ ಗೆಳೆಯರು ಇರುತ್ತಾರೆ. ಆದರೆ ಅವರ ಮನಸ್ಸು ಹೇಗಿರುತ್ತದೆ ಎಂದು ನಮಗೆ ಗೊತ್ತಿರುವುದಿಲ್ಲ. ನಾವು ಕಷ್ಟದಲ್ಲಿ ಇರುವಾಗ ನಮಗೆ ಯಾರು ಸಹಾಯ ಮಾಡುತ್ತಾರೆಯೋ ಅವರು ನಿಜವಾದ ಗೆಳೆಯರು. ಕಷ್ಟದಲ್ಲಿ ಇರುವವರಿಗೆ ನಾವು ಸಹಾಯವನ್ನು ಮಾಡಿ ಸ್ಪೂರ್ತಿಯನ್ನು ತುಂಬಿ ಧೈರ್ಯವನ್ನು ಹೇಳಬೇಕು. ಒಳ್ಳೆಯ ಆಲೋಚನೆಗಳನ್ನು ತುಂಬುವವರ ಜೊತೆ ಬದುಕುವುದು ಸುಲಭ. ಎಂದು ಕಪ್ಪೆಗಳ ಕಥೆಯ ಮೂಲಕ ತಿಳಿಯಿತು. ಹೀಗೆಯೇ ಕಪ್ಪೆಯ ಗೆಳೆಯರು ಕೂಡ ಒಂದನೆಯ ಕಪ್ಪೆಗೆ ಧೈರ್ಯವನ್ನು ಹೇಳುತ್ತಿದ್ದರೆ ಕಪ್ಪೆಯ ಜೀವ ಉಳಿಯುತ್ತಿತ್ತು. ಎರಡನೆಯ ಕಪ್ಪೆಗೆ ಕಿವಿ ಕೇಳಿಸುತ್ತಿರಲಿಲ್ಲ. ಆದ್ದರಿಂದ ಗೆಳೆಯರ ಮೇಲಿನ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಧೈರ್ಯ ಬಂತು. ಹಾಗಾಗಿ ಅದು ಬದುಕಿ ಉಳಿಯಿತು. ಹೀಗೆಯೇ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಧೈರ್ಯದಿಂದ ಹಾಗೂ ಶಕ್ತಿಯಿಂದ ಎದುರಿಸಬೇಕು. ಯಾರ ಕೆಟ್ಟ ಪ್ರೇರೇಪಣೆಯನ್ನೂ ಕೇಳಿಸಿಕೊಳ್ಳಬಾರದು ಅಲ್ವಾ? ಧನ್ಯವಾದಗಳು ಅಕ್ಕ. ಮುಂದಿನ ಪತ್ರಕ್ಕಾಗಿ ಕಾಯುತ್ತೇನೆ.
.................................................. ರಕ್ಷಿತ್ ಕೆ 
7ನೇ ತರಗತಿ 
ದ.ಕ.ಜಿ.ಪ.ಉ.ಹಿ.ಪ್ರಾ ಶಾಲೆ ಗೋಳಿತ್ತಟ್ಟು.
ಪುತ್ತೂರು ತಾಲ್ಲೂಕು , ದ.ಕ.ಜಿಲ್ಲೆ
************************************************



       ನಮಸ್ತೇ ಅಕ್ಕಾ. ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು.....
ನಿಮ್ಮ ಪತ್ರವನ್ನು ಓದಿದೆನು..... ಮೊದಲಿನ ಕಪ್ಪೆಯು ಗೆಳೆಯರ ಮಾತನ್ನು ಕೇಳಿ ತನ್ನಿಂದ ಸಾಧ್ಯವಿಲ್ಲ ಎಂದು ತಿಳಿದು ಶ್ರಮ ಪಡದೆ ಕೆಳಗೆ ಬಿದ್ದು ಪ್ರಾಣ ಕಳೆದು ಕೊಂಡಿತು.
     ಎರಡನೇ ಕಪ್ಪೆಯು ಅವರು ಹೇಳಿದ್ದು ಕೇಳಿಸದ ಕಾರಣ ತನ್ನ ಧೈರ್ಯದಿಂದ ಸತತವಾಗಿ ಪ್ರಯತ್ನ ಪಟ್ಟು ಮೇಲೆ ಬಂದು ಜೀವ ಉಳಿಸಿಕೊಂಡಿತು.ಇದರಿಂದ ತಿಳಿಯುವುದೇನಂದರೆ ನಮಗೆ ಅಸಾಧ್ಯವಾದ ವಿಷಯವು ಯಾವುದೂ ಇಲ್ಲ. ನಾವು ಕಷ್ಟಪಟ್ಟು ಸಾಧನೆ ಮಾಡಿದರೆ ಒಳ್ಳೆಯ ಗುರಿ ತಲುಪಬಹುದು. "ಸತತ ಪರಿಶ್ರಮವೇ ಕೊನೆಗೆ ಗೆಲ್ಲುವುದು, ಯಾವುದನ್ನೂ ಒಂದು ದಿನದಲ್ಲಿ ಸಾಧಿಸಲಾಗದು ". ಎಂಬುದನ್ನು ನೀವು ನಮಗೆಲ್ಲ ಅರ್ಥವಾಗುವ ರೀತಿಯಲ್ಲಿ ತಿಳಿಸಿರುವಿರಿ .
 ಧನ್ಯವಾದಗಳು ಅಕ್ಕಾ.....................
....................................ಸಾತ್ವಿಕ್ ಗಣೇಶ್ 
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
**********************************************


          ನಮಸ್ತೆ ಅಕ್ಕ ... ನಾನು ವೈಷ್ಣವಿ.... ನಾನು ಚೆನ್ನಾಗಿ ಇದ್ದೇನೆ. ನೀವು ಚೆನ್ನಾಗಿ ಇದ್ದೀರಿ ಎಂದು ನಿಮ್ಮ ಪತ್ರದ ಮೂಲಕ ತಿಳಿಯಿತು. ನಮ್ಮ ಸುತ್ತ ಮುತ್ತಲಿನಲ್ಲಿರುವ ಎಲ್ಲರೂ ನಮ್ಮ ಗೆಳೆಯರು. ಆದರೆ ನಮ್ಮ ನೋವು-ನಲಿವಿನಲ್ಲಿ ಜೊತೆಗಿರುವವರು ಮಾತ್ರ ಆಪ್ತ ಗೆಳೆಯರಾಗಿರುತ್ತಾರೆ ಎಂದು ನಿಮ್ಮ ಪತ್ರದಲ್ಲಿ ಕಪ್ಪೆಗಳ ಕಥೆಯ ಮೂಲಕ ತಿಳಿಯಿತು. ನಮ್ಮ ಗೆಳೆಯರು ಕಷ್ಟದಲ್ಲಿರುವಾಗ ಅವರಿಗೆ ನಾವು ಸಹಾಯ ಮಾಡಬೇಕು. ಹಾಗೆಯೇ ಫ್ರೋತ್ಸಾಹ ಕೊಡಬೇಕು ಎಂದು ಕಥೆಯ ಮೂಲಕ ತಿಳಿದುಕೊಂಡೆ. ಕಷ್ಟದಲ್ಲಿರುವವರಿಗೆ ನಾವು ಧೈರ್ಯ ಹೇಳಬೇಕು ಮತ್ತು ಬದುಕುವ ಆಸಕ್ತಿ ತುಂಬಬೇಕು. ಹೀಗೆಯೇ ಕಪ್ಪೆಯ ಗೆಳೆಯರು ಒಂದನೇಯ ಕಪ್ಪೆಗೆ ಧೈರ್ಯವನ್ನು ಹೇಳುತ್ತಿದ್ದರೆ ಕಪ್ಪೆಯ ಜೀವ ಉಳಿಯುತ್ತಿತ್ತು. ಎರಡನೇಯ ಕಪ್ಪೆಗೆ ಕಿವಿ ಕೇಳದ ಕಾರಣ ಗೆಳೆಯರ ಮೇಲಿನ ಪ್ರೀತಿ, ವಿಶ್ವಾಸ , ನಂಬಿಕೆಯಿಂದ ಬದುಕಿತು. ಧನ್ಯವಾದಗಳು ಅಕ್ಕ. ಮುಂದಿನ ಪತ್ರಕ್ಕಾಗಿ ಕಾಣುತ್ತೇನೆ.
................................................... ವೈಷ್ಣವಿ 
7ನೇ ತರಗತಿ 
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಗೋಳಿತ್ತಟ್ಟು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


     ಪ್ರೀತಿಯ ಅಕ್ಕನಿಗೆ ಹಿತಾಶ್ರೀ. ಪಿ ಮಾಡುವ ನಮಸ್ತೆ....... ನನಗೆ ಈ ಕಥೆ ತುಂಬಾ ಇಷ್ಟವಾಯಿತು. ಈ ಕಥೆಯಲ್ಲಿ ನಮಗೆ ಅರ್ಥವಾಗುವುದೇನೆಂದರೆ ನಾವು ಯಾವಾಗಲೂ ಕಷ್ಟದಿಂದಿರುವಾಗ ಪ್ರತಿಯೊಬ್ಬರೂ ಧೈರ್ಯವನ್ನು ನೀಡಿ ಹುರಿದುಂಬಿಸಬೇಕು. ಯಾವುದೇ ಕಾರಣಕ್ಕೆ ಧೈರ್ಯವನ್ನು ಕಳೆದುಕೊಳ್ಳುವ ಮಾತುಗಳನ್ನು ಆಡಬಾರದು. ಈ ರೀತಿಯಾಗಿ ಮೊದಲನೇ ಕಪ್ಪೆಗೆ ಪ್ರೋತ್ಸಾಹ ನೀಡಲಿಲ್ಲ. ಈ ಕಾರಣದಿಂದ ಆ ಕಪ್ಪೆ ಧೈರ್ಯವನ್ನು ಕಳೆದುಕೊಂಡು ಪಾತಾಳಕ್ಕೆ ಬಿತ್ತು. ಎರಡನೇ ಕಪ್ಪೆ ಒಂದು ರೀತಿಯಲ್ಲಿ ಕಿವಿ ಕೇಳದ ಕಾರಣ ಹಾಗೂ ಸ್ವಪ್ರಯತ್ನದಿಂದ ಮೇಲೆ ಬಾರಲು ಸಾಧ್ಯವಾಯಿತು. ನಮಗೆ ಜೀವನದಲ್ಲಿ ಮುಂದುವರೆಯಲೂ ಧೈರ್ಯ ಮತ್ತು ಪ್ರೋತ್ಸಾಹ ಅಗತ್ಯ ಎಂದು ಈ ಕಥೆಯಲ್ಲಿ ತಿಳಿದು ಬರುತ್ತದೆ. ಧನ್ಯವಾದಗಳು ಅಕ್ಕ.
...............................................ಹಿತಶ್ರೀ ಪಿ
6ನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



        ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ಅಕ್ಕ ನೀವು ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದೀರಿ ಸಂತೋಷವಾಯಿತು. ನಾವೆಲ್ಲಾ ಚೆನ್ನಾಗಿದ್ದೇವೆ. ನೀವು ಸಹ ಚೆನ್ನಾಗಿರುವಿರಿ ಎಂದು ಭಾವಿಸುತ್ತೇವೆ. ನಾವು ಜೀವನದಲ್ಲಿ ಯಾವಾಗಲೂ ಸಾಧ್ಯವಾದಂತಹ ಕೆಲಸಗಳನ್ನು ಮಾಡಬೇಕು. ನನ್ನಿಂದ ಆಗುವುದಿಲ್ಲ ಎಂದು ಹಿಂದೆ ಸರಿಯಬಾರದು. ಗೆದ್ದರೆ ಗುರಿ ತಲುಪುತ್ತೇವೆ. ಸೋತರೆ ಅನುಭವ ಸಿಗುತ್ತದೆ. ನಾವು ಅಸಹಾಯಕರಾಗಿರುವಾಗ ಹುರಿದುಂಬಿಸಲು ಯಾರಾದರೂ ಇದ್ದರೆ ಖಂಡಿತಾ ಗೆಲುವನ್ನು ಸಾಧಿಸುತ್ತೇವೆ. ಇಲ್ಲಿ ಪ್ರಯತ್ನವು ಅಷ್ಟೇ ಮುಖ್ಯವಾಗಿರುತ್ತದೆ. 'ಸೋಲೇ ಗೆಲುವಿನ ಮೆಟ್ಟಿಲು' ಎಂಬ ಮಾತಿನಂತೆ ಆತ್ಮವಿಶ್ವಾಸದಿಂದ, ಎಂತಹ ಪರಿಸ್ಥಿತಿಗಳು ಬಂದರೂ ಎದುರಿಸಿ ಮುನ್ನಡೆಯೋಣ. ಇನ್ನೊಂದು ಕಪ್ಪೆಯು ಮತ್ತೊಂದು ಕಪ್ಪೆಯಂತೆ ಪ್ರಯತ್ನಪಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಮುಂದಿನ ಭವಿಷ್ಯ ಜೀವನದಲ್ಲೂ ನಾವು ಎಂತಹ ಕಠಿಣ ಪರಿಸ್ಥಿತಿಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯಲು ಸಿದ್ಧರಾಗಬೇಕು.
 .................. ಧನ್ಯವಾದಗಳೊಂದಿಗೆ .............
........................................ವೈಷ್ಣವಿ ಕಾಮತ್
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ.
*********************************************



     ನಮಸ್ತೇ ಅಕ್ಕ , ನಾನು ನಿಮ್ಮ ಪ್ರೀತಿಯ ತಮ್ಮ ಭವಿತ್ ಕುಲಾಲ್ ಮಾಡುವ ನಮಸ್ಕಾರಗಳು..... ನಿಮ್ಮ ಪತ್ರ ಓದಿ ನನಗೆ ಆನಂದವಾಯಿತು ಅಕ್ಕ..... ನಾನು ಕ್ಷೇಮ ನೀವು ಕೂಡಾ ಕ್ಷೇಮ ಎಂದು ನಂಬಿರುತ್ತೇನೆ .....
ಅಕ್ಕ..... ನೀವು ಬರೆದ ಕಥೆ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ. ನನಗೆ ಕಥೆ ಓದಿ ಖುಷಿಯಾಯಿತು. ನಾನು ಒಂದು ಕಥೆಯನ್ನು ಎರಡು ಮೂರು ಸಾರಿ ಓದಿ ಅದರ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳುತ್ತೇನೆ. ನನಗೆ ಸರಿಯಾಗಿ ಗೊತ್ತಿಲ್ಲದ್ದನ್ನು ಅಮ್ಮನ ಬಳಿ ಕೇಳಿ ತಿಳಿದು ಕೊಳ್ಳುತ್ತೇನೆ. ಕಪ್ಪೆಯ ಕಥೆ ತುಂಬಾ ಚೆನ್ನಾಗಿತ್ತು ಅಕ್ಕ. ಕಥೆಯಿಂದ ನನಗೆ ತಿಳಿದು ಬಂದ ಅಂಶ ಏನೆಂದರೆ ಒಂದನೇಯ ಕಪ್ಪೆ ಪ್ರಯತ್ನ ಪಟ್ಟು ಜಿಗಿದು ದಡ ಸೇರಬಹುದಿತ್ತು. ಆದರೆ ಗೆಳೆಯರ ಮಾತು ಕೇಳಿ ನನ್ನಿಂದ ಸಾಧ್ಯವಾಗದು ಎಂದು ಭಾವಿಸಿ ತಪ್ಪುತಿಳಿದು ಕೆಳಗೆ ಬಿದ್ದು ಪ್ರಾಣ ಬಿಟ್ಟಿತ್ತು. ಆದರೆ ಇನ್ನೊಂದು ಕಪ್ಪೆ ಪ್ರಯತ್ನದಿಂದ ದಡ ಸೇರಿತು. ನಾವು ಯಾರಿಗೆ ಆದರೂ , ಸೋತಾಗ ನಾವು ಅವರನ್ನು ಬೆಂಬಲಿಸಿ ಧೈರ್ಯ ತುಂಬಬೇಕು. ಸಾಧಿಸಿದರೆ ಕಬ್ಬಿಣ ಕೂಡ ನುಂಗಬಹುದು ಎಂಬುದು ಈ ಎರಡನೆಯ ಕಪ್ಪೆ ತೋರಿಸಿತು . ಮುಂದಿನ ಕಥೆಗೆ ಕಾಯುತ್ತಿರುತ್ತೇನೆ ಅಕ್ಕ. ಧನ್ಯವಾದಗಳು
.......................................... ಭವಿತ್ ಕುಲಾಲ್ 
6ನೇ ತರಗತಿ 
ದ. ಕ. ಜಿ. ಪಂಚಾಯತ್ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
********************************************


ನಮಸ್ತೆ ಅಕ್ಕ... ನಾನು ಕೌಶೀಲ .....
ಹಾ... ನಾನು ಚೆನ್ನಾಗಿ ಇದ್ದೇನೆ......
ಹೌದು ನಮ್ಮ ಸುತ್ತ ಮುತ್ತ ಇರುವ ಗೆಳೆಯರು ಒಟ್ಟಾಗಿ ಪಾಠ ಕಲಿತು....ಆಟ ಆಡಿಕೊಂಡು.... ಸಮಯ... ಉಪಯೋಗ ಮಾಡುತ್ತೇವೆ...
      ಹೌದು ಒಳ್ಳೆಯ ನೀತಿ ಇರುವ ಕಥೆಯನ್ನು ಬರೆದಿದ್ದೀರಿ... ಅದರಿಂದ ನಮಗೆ ಒಳ್ಳೆಯ ಪಾಠ ಕಲಿಯಲು ಮತ್ತು... ಜೀವನ ನಡೆಸಲು ಅವಶ್ಯಕತೆ ಇರುವ ಕಥೆಯಾಗಿದೆ....
ಹಲವಾರು ಗೆಳೆಯರು ಇದ್ದರೂ..
ನಮಗೆ ಸಹಾಯಕ್ಕೆ ಸಿಗುವುದು ಕೆಲವರು ಮಾತ್ರ..... ನಮ್ಮ ಕಷ್ಟ ದಲ್ಲಿಯೂ ಸುಖದಲ್ಲಿಯೂ ನಮಗೆ ಸಹಾಯಕ್ಕೆ ಸಿಗುವವರು ನಮ್ಮ ನಿಜವಾದ ಗೆಳೆಯರು...
ಇದರಲ್ಲಿ ಒಂದು ಕಪ್ಪೆರಾಯ ಪ್ರಾಣ ಬಿಟ್ಟಿತು ಆದ್ರೆ ಇನೊಂದು ಕಪ್ಪೆರಾಯ ಪ್ರಾಣ ಬಿಡದೆ.. ಜೀವವನ್ನು ಉಳ್ಳಿಸಿತು.... ಆದ್ರೆ ನಮ್ಮ ಜೀವನದಲ್ಲಿ.... ನಮ್ಮ ಬದುಕು ನಮಗೆ ಮುಖ್ಯ ... ಬೇರೆಯವರ ಮಾತಿಗೆ ಬೆಲೆ ಕೊಡದೆ.. ಅವಶ್ಯಕತೆ ಇರುವವರ ಮಾತಿಗೆ ಮಾತ್ರ ಬೆಲೆ ಕೊಡಬೇಕು.
................................................... ಕೌಶೀಲ 
9ನೇ ತರಗತಿ 
ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



     ನಮಸ್ತೆ ಅಕ್ಕ ನನ್ನ ಹೆಸರು ಗೀತಾಲಕ್ಷ್ಮಿ........ ಕಥೆಯಲ್ಲಿ ನನಗೇನು ಅರ್ಥ ಆಯಿತೆಂದರೆ ಇನ್ನೊಬ್ಬರ ಮಾತು ಕೇಳಬಾರದು. ನಮ್ಮ ಪ್ರಯತ್ನ ನಾವು ಮಾಡಿದರೆ ನಮ್ಮ ಗುರಿ ಮುಟ್ಟಲು ಸಾಧ್ಯ. ನಾವು ಒಬ್ಬರಿಗೆ ಪ್ರೋತ್ಸಾಹ ನೀಡಬೇಕು ಹೊರತು ಅವರಲ್ಲಿ ಇದ್ದ ದೈರ್ಯ ವನ್ನೂ ಕಳೆದುಕೊಳ್ಳುವ ಹಾಗೆ ಮಾಡಬಾರದು. ಒಂದನೆಯ ಕಪ್ಪೆ ಗೆಳೆಯರ ಮಾತು ಕೇಳಿ ತನ್ನಲ್ಲಿದ್ದ ದೈರ್ಯವನ್ನು ಕಳೆದುಕೊಂಡು ಬಿದ್ದು ಪ್ರಾಣ ಕಳೆದುಕೊಂಡಿತು. ಎರಡನೆಯ ಕಪ್ಪೆಗೆ ಕಿವಿ ಕೇಳದ ಕಾರಣ ತನ್ನಲ್ಲಿದ್ದ ಆತ್ಮ ವಿಶ್ವಾಸದಿಂದ ಪ್ರಯತ್ನ ಮಾಡಿ ಅಪಾಯದಿಂದ ಪಾರಾಯಿತು .
........................................................ಗೀತಾಲಕ್ಷ್ಮಿ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಶಾಲೆ ಮುರುವ ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


      ನಮಸ್ತೆ ಅಕ್ಕ.. ನಾನು ರಕ್ಷಾ . ಈ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಪ್ರಯತ್ನ ಮಾಡದೆ ನಮ್ಮ ಗುರಿ ಸಾಧಿಸಲು ಸಾಧ್ಯವಿಲ್ಲ. ಮೊದಲಿನ ಕಪ್ಪೆಗೆ ಸಾಧನೆಯ ಛಲ ಇಲ್ಲದಿರುವುದರಿಂದ ಕಪ್ಪೆಯು ದುರ್ಬಲ ವಾಯಿತು. ಎರಡನೇ ಕಪ್ಪೆಯು ಪ್ರಯತ್ನ ಮಾಡಿತು. ನನ್ನಿಂದ‌ ಆಗುತ್ತೆ ಎಂಬ ಭರವಸೆ ಆ ಕಪ್ಪೆ ಗಿತ್ತು. ನಾವು ಕೂಡ ಪ್ರಯತ್ನ ಮಾಡಿದರೆ . ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಧನ್ಯವಾದಗಳು ಅಕ್ಕ..............
  .................................................... ರಕ್ಷಾ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


           ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ತಂಗಿ ಧೃತಿ. ಈ ಕತೆಯ ಅರ್ಥವೇನೆಂದರೆ ನಾವು ಪ್ರಯತ್ನ ಪಡಬೇಕು. ಅದು ಯಾವ ವಿಷಯದಲ್ಲಾದರೂ ಸರಿ‌ , ಅದು ನಮ್ಮ ಕಲಿಕೆಯ ವಿಷಯದಲ್ಲಾದರೆ ನಾವು ಗುರುಗಳು ಹೇಳಿ ಕೊಟ್ಟ ಒಳ್ಳೆಯ ಮಾತನ್ನು ಕೇಳಿದರೆ ನಾವು ಸಹ ಎರಡನೇ ಕಪ್ಪೆಯ ಹಾಗೆ ದಡ ತಲುಪುತ್ತೇವೆ. ನಾವು ಒಂದನೇ ಕಪ್ಪೆಯಂತೆ ಅಂದರೆ ನಾವು ಪೂರ್ತಿಯಾಗಿ ದಡಕ್ಕೂ ಸೇರದೆ ಹಾಗೆ ಹಿಂದೆ ಉಳಿದು ಬಿಡುತ್ತೇವೆ. ಅವರು ಗುರುಗಳೇ ಆಗಬೇಕೆಂದೇನು ಇಲ್ಲ , ಅವರ ಸ್ಥಾನದಲ್ಲಿ ನಮ್ಮ ಹಿರಿಯರು ಹೇಳಿದ ಒಳ್ಳೆಯ ಮಾತನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಬೇಕು. ಜೀವನದಲ್ಲೂ ಸಹ ನಾವು ನಿಂದಿಸುವವರ ಮಾತುಗಳನ್ನು ಕೇಳದೆ ಗಣನೀಯವಾಗಿ ಪ್ರಯತ್ನ ಮಾಡಿ ಜೀವನದ ಗುರಿಯನ್ನು ಸಾಧಿಸಬೇಕು. ನಾವು ಒಳ್ಳೆಯ ದಾರಿಯನ್ನು ಹಿಡಿಯಬೇಕು. ನಾವು ಅದನ್ನು ನಮ್ಮ ವಿದ್ಯಾರ್ಥಿ ಜೀವನದಲ್ಲೇ ಆ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಧನ್ಯವಾದಗಳೊಂದಿಗೆ,
.......................................................ಧೃತಿ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


        ನಮಸ್ತೆ ........... ನಾನು ಧೀರಜ್ ..... ಅಕ್ಕನ ಪತ್ರ ಓದಿ ಸಂತೋಷವಾಯಿತು. ಕಥೆ ತುಂಬಾ ಅರ್ಥಪೂರ್ಣವಾಗಿತ್ತು. ನಮ್ಮಲ್ಲಿ ಆತ್ಮ ವಿಶ್ವಾಸ ಒಂದಿದ್ದರೆ ಗುರಿ ತಲುಪಲು ಸಾಧ್ಯ. ಪ್ರಯತ್ನ ಪಡದೆ ಫಲ ದೊರಕಲು ಸಾಧ್ಯವೇ ಇಲ್ಲ. ಆದ್ದರಿಂದ ನಾವು ಯಾವುದೇ ಕಷ್ಟದ ಪರಿಸ್ಥಿತಿ ಎದುರಿಸಿದಾಗ ಮೊದಲು ತಾಳ್ಮೆ ಮುಖ್ಯ. ತದ ನಂತರ ಪ್ರಯತ್ನ ಪಡಬೇಕು. ಜೀವನದಲ್ಲಿ ನಾವು ಎಷ್ಟೋ ಸಮಸ್ಯೆ, ತೊಂದರೆ, ಅಡಚಣೆಗಳನ್ನು ಎದುರಿಸಬೇಕು. "ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ". ಈ ಕಥೆಯಲ್ಲಿಯೂ ಒಂದು ಕಪ್ಪೆ ಪಾಪ ನನ್ನಿಂದ ಮೇಲೇಳಲು ಸಾಧ್ಯವೇ ಇಲ್ಲ ಅಂದುಕೊಂಡು ತನ್ನ ಜೀವವನ್ನೇ ಬಲಿ ಕೊಟ್ಟಿದೆ. ಎರಡನೇ ಕಪ್ಪೆಯಂತೆ ಪ್ರಯತ್ನ ಪಡುತ್ತಿದ್ದರೇ ಜಿಗಿದು ಮೇಲೇರುತ್ತಿತ್ತು.... ಅಕ್ಕಾ.. ಹೀಗೆ ಒಳ್ಳೊಳ್ಳೆ ಕಥೆಯನ್ನು ಪ್ರಕಟಿಸಿ.. ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ... ಧನ್ಯವಾದಗಳು 
.......................................... ಧೀರಜ್ ಕೆ ಆರ್ 
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



             ನಮಸ್ತೇ ಅಕ್ಕ. ನನ್ನ ಹೆಸರು ಕೃತಿಕಾ ಕೆ. ನಾನು ನಿಮ್ಮ ಪತ್ರವನ್ನು ಎಷ್ಟೋ ಸಾರಿ ಓದಿದ್ದೇನೆ. ಆದರೆ ನಿಮ್ಮ ಪತ್ರಕ್ಕೆ ಮೊದಲ ಬಾರಿ ಉತ್ತರಿಸುತ್ತಿದ್ದೇನೆ. ಈ ಬಾರಿ ನೀವು ಬರೆದ ಪತ್ರದಲ್ಲಿ ಬಹಳ ಅರ್ಥಪೂರ್ಣವಾದ ವಿಷಯವಿತ್ತು. ಕಪ್ಪೆಗಳ ಕಥೆ. ಈ ಪತ್ರದಲ್ಲಿ ನನಗೇನನ್ನಿಸಿತೆಂದರೆ  ನಾವು ಯಾವುದೇ ಕಷ್ಟದ ಪರಿಸ್ಥಿತಿ ಒದಗಿಬಂದರೂ ಅದನ್ನು ಎದೆಗುಂದದೆ ಎದುರಿಸಬೇಕು ಎಂಬುದು ಈ ಪತ್ರದಲ್ಲಿ ಕಲಿಯಬೇಕಾದ ವಿಷಯ. ಈ ರೀತಿಯ ಇನ್ನೂ ಹೊಸತಾದ ಪತ್ರವನ್ನು ಕಳುಹಿಸುತ್ತಿರಿ ಅಕ್ಕ. ಇನ್ನು ನಮ್ಮಿಬ್ಬರ ಭೇಟಿ ಮುಂದಿನ ಪತ್ರದಲ್ಲಿ. ವಂದನೆಗಳು.
................................................... ಕೃತಿಕಾ. ಕೆ
9ನೇ ತರಗತಿ
ಸರಕಾರಿ. ಪ್ರೌಢಶಾಲೆ  ಮಂಚಿ  ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************




        

Ads on article

Advertise in articles 1

advertising articles 2

Advertise under the article