-->
ನನ್ನ ಕನಸಿನ ಕರ್ನಾಟಕ

ನನ್ನ ಕನಸಿನ ಕರ್ನಾಟಕ

ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ 
ಬೈಂದೂರು ತಾಲೂಕು , ಉಡುಪಿ ಜಿಲ್ಲೆ

                
       ಅಂದು 1956ನೇ ನವೆಂಬರ್ 1 ಮೈಸೂರು ರಾಜ್ಯ ನಿರ್ಮಾಣವಾಯಿತು. ರಾಜ್ಯಗಳ ಪುನರ್‌ ವಿಂಗಡನೆ ಕಾಯಿದೆಯ ಮೇರೆಗೆ ಜನ್ಮತಳೆದ ನವ ರಾಜ್ಯವು ಕೇವಲ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿರಲಿಲ್ಲ. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಜನತೆಯ ಹೃದಯವನ್ನು ಅದು ಒಂದುಗೂಡಿಸಿತು. ಮೈಸೂರು ರಾಜ್ಯವನ್ನು ಕರ್ನಾಟಕವೆಂಬ ಹೆಸರಿನಿಂದ ಕರೆಯಬೇಕೆಂದು ತೀವ್ರವಾದ ಚರ್ಚೆಯು 1972ರ ಜುಲೈಯಲ್ಲಿ ಆರಂಭವಾಗಿ, ಅದಕ್ಕೆ ಕರ್ನಾಟಕ ಎಂದು ನಾಮಕರಣವನ್ನು ಮಾಡುವಂತೆ ಮೈಸೂರು ವಿಧಾನಸಭೆಯು ಸರ್ವಾನುಮತದಿಂದ ಇತ್ಯರ್ಥ ಮಾಡಲಾಯಿತು. ಆದರೆ ಹೆಸರಿನಲ್ಲಿ ಏನಿದೆ? ಎಂಬ ಪ್ರಶ್ನೆಯು ಬಹು ಮುಖ್ಯವಾದುದು.
        ಕರ್ನಾಟಕ ಎಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿದೆ. ಕರ್ನಾಟ ಎಂಬುವುದನ್ನು ಕರ್ನಾಟಕ ಎಂದು ಕರೆಯುವುದು ರೂಢಿಯಲ್ಲಿದೆ. ಕರ್ನಾಟಕತ್ವವೆಂದರೆ ಕರ್ನಾಟಕದ ಬಗ್ಗೆ ಅಭಿಮಾನವನ್ನು ತಾಳುವುದೇ ಕರ್ನಾಟಕತ್ವ.
       ಇಂತಹ ಉಜ್ವಲ ಅಭಿಮಾನವನ್ನು ವ್ಯಕ್ತಪಡಿಸಿದವರಲ್ಲಿ ಕರ್ನಾಟಕದ ಅಭಿಮಾನಿಗಳಲ್ಲಿ ಆಲೂರು ವೆಂಕಟರಾಯರು ಅಗ್ರಗಣ್ಯರು.
         1973 ನವೆಂಬರ್ 1ರಂದು ರಾಜ್ಯೋದಯದ ದಿನ. ಮೈಸೂರು ಎಂಬ ಹೆಸರಿನ ಬದಲಿಗೆ ಕರ್ನಾಟಕವೆಂದು ಅಧಿಕೃತವಾಗಿ ನಾಮಕರಣ ಮಾಡಿದ ದಿನ.       
           ಅನುಭವಕ್ಕೆ, ಪದವಿಗಿಂತ ಪ್ರಾಮುಖ್ಯತೆಯನ್ನು ನೀಡಿದರೆ ಭಾರತದಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡಬಹುದು. ಮೀಸಲಾತಿಯನ್ನು ರದ್ದುಪಡಿಸಬೇಕು, ಇಂದು ಅನೇಕ ಪ್ರತಿಭಾವಂತರು ಮೀಸಲಾತಿಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ.         
        ಕರ್ನಾಟಕದಲ್ಲಿ ನಮ್ಮ ಬೆನ್ನೆಲುಬು ಆಗಿರುವಂತಹ ರೈತರ ಆತ್ಮಹತ್ಯೆಗಳಾಗದಂತೆ ಕಾಪಾಡಬೇಕು. ರೈತರಿಗೆ ಉಚಿತ ವೈಜ್ಞಾನಿಕ ತಂತ್ರಜ್ಞಾನ ಸೇರಿಕೊಂಡು ಆರ್ಥಿಕ ವ್ಯವಸ್ಥೆಗೆ ಯಥೇಚ್ಛ ಕೊಡುಗೆಯನ್ನು ನೀಡುವಂತಾಗಬೇಕು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆಯನ್ನು ಕಲ್ಪಿಸಿ, ನೇರವಾಗಿ ಸರ್ಕಾರವೇ ರೈತರು ಬೆಳೆದ ಬೆಳೆಗಳನ್ನು ಖರೀದಿಸಿ, ಮಧ್ಯವರ್ತಿ ಹಾವಳಿಯಿಂದ ರೈತ ಸಮುದಾಯವನ್ನು ಕಾಪಾಡಬೇಕು.
          ಭ್ರಷ್ಟ ಅಧಿಕಾರಿಗಳು ತಮ್ಮ ಬತ್ತಳಿಕೆ ತುಂಬಲು ಮಾತ್ರ ಯೋಚಿಸದೆ ರಾಜ್ಯವನ್ನು ಉತ್ತುಂಗಕ್ಕೆ ಏರಿಸುವಲ್ಲಿ ಪ್ರಯತ್ನ ಮಾಡಬೇಕು. ನಮ್ಮ ರಾಜ್ಯ, ನಮ್ಮ ಜನರು, ನಮ್ಮವರು ಅನ್ನುವ ಭಾವನೆಯಿಂದ ಅಭಿವೃದ್ಧಿ ಕೆಲಸವನ್ನು ಮಾಡಿ, ಲಂಚ ಸ್ವೀಕರಿಸದೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.
          ಮಾನವನ ಹದಯದಲ್ಲಿ ಮನುಷ್ಯತ್ವ ಅರಳಿದರೆ ಮಾತ್ರವೇ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ. ಸಮಾಜ ಇಷ್ಟು ಮುಂದುವರಿದರೂ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಹೆಣ್ಣಿನ ಕೂಗಿಗೆ ಸಮಾಜದ ಪ್ರತಿಯೊಬ್ಬರೂ ಧ್ವನಿಗೂಡಿಸಬೇಕು.
ಹೆಣ್ಣು ಹೆತ್ತವರು ನೊಂದು ಕೊರಗಲು ಕಾರಣವಾದ ಅತ್ಯಾಚಾರ ಪ್ರಕರಣಗಳು ಮೊದಲು ಗತಿ ಕಾಣಬೇಕು. ಹೆಣ್ಣು ಹೆತ್ತವರು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡವರಂತೆ ಬದುಕುವ ದಿನಗಳು ಅಂತ್ಯವಾಗಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದರೊಂದಿಗೆ ಮುಂದೆಂದೂ ಇಂತಹ ಪ್ರಕರಣಗಳು ನಡೆಯದಂತೆ ತಡೆಯಬೇಕು. ಪುರುಷರು ಪರನಾರಿಯವರನ್ನು ಸಹೋದರಿಯಂತೆ ನೋಡಬೇಕು.
          ಪ್ರತಿಯೊಂದು ಖರೀದಿಗೂ ತೆರಿಗೆ ವಿಧಿಸುವ ಸರ್ಕಾರ ಉಚಿತ ಶಿಕ್ಷಣವನ್ನು ನೀಡುವಲ್ಲಿ ಸಮರ್ಪಕವಾಗಿಲ್ಲ. ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸಿ ರೈತರ ಮಕ್ಕಳು, ಬಡ ವ್ಯಾಪಾರಿಗಳ ಮಕ್ಕಳು, ಕಾರ್ಮಿಕರ ಮಕ್ಕಳು ಮುಂತಾದವರಿಗೆ ಉಚಿತ ಶಿಕ್ಷಣವನ್ನು ಪಡೆದು 100% ಸಾಕ್ಷರತಾ ರಾಜ್ಯವಾಗಬೇಕು ನಮ್ಮ ಕರ್ನಾಟಕ.
      ನಮ್ಮ ಕರ್ನಾಟಕದಲ್ಲಿ ಜಾತಿ ಮತ ಧರ್ಮಗಳ ನಡುವಿನ ಹೋರಾಟ ಮತ್ತು ರಾಜಕೀಯ ನಾಯಕರುಗಳು ಪಕ್ಷದ ಹೆಸರಿನಲ್ಲಿ ಹೊಡೆದಾಡುವುದನ್ನು ನಿಲ್ಲಿಸಬೇಕು. ಗಾದೆಮಾತೊಂದರಂತೆ ಜಗಳವಾಡಿದರೆ ಗಂಧದ ಜೊತೆಗೆ ಜಗಳವಾಡಬೇಕಂತೆ ಇದರರ್ಥ ಏನೆಂದರೆ ಲಾಭವಾಗದಿದ್ದರೂ ಸುಮ್ಮನೆ ಅನಗತ್ಯವಾದ ಚರ್ಚೆಗೆ ಹೋಗಬಾರದು.
       ರಾಜಕೀಯ ವ್ಯವಸ್ಥೆಗೆ ಕೆಲವು ನೀತಿ ರೂಪಿಸಬೇಕು ವೈದ್ಯಕೀಯ ಶಿಕ್ಷಣ ಸಚಿವ ಒಬ್ಬ ವೈದ್ಯನಾಗಿರಬೇಕು, ಕಾನೂನು ಮಂತ್ರಿ ಒಬ್ಬ ಕಾನೂನು ಪದವೀಧರನಾಗಿರಬೇಕು, ವಾರ್ತಾ ಸಚಿವರು ಒಬ್ಬ ಪದವೀಧರ ಪತ್ರಕರ್ತ ನಾಗಿರಬೇಕು.
         ನಮ್ಮ ಕರ್ನಾಟಕದಲ್ಲಿ ಮನೆಯಲ್ಲಿ ಗಂಡು ಹುಟ್ಟಬೇಕು ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟ ಬೇಕು ಎಂಬಂತೆ ಗಂಡು-ಹೆಣ್ಣಿನ ತಾರತಮ್ಯ ಇರಬಾರದು. ಮತ್ತು ವೇತನ ಪದ್ಧತಿಯಲ್ಲಿಯೂ ಕೂಡ ಸಮಾನ ಎಂದು ಪರಿಗಣಿಸಬೇಕು.
        ನಮ್ಮ ಕರ್ನಾಟಕ ಅನ್ನೋದು ಅಷ್ಟು ಸುಲಭವಾದ ಮಾತಲ್ಲ ಸಹಸ್ರಾರು ಸಮಸ್ಯೆಗಳಿವೆ ನಿಜ. ಆದರೆ ಇವುಗಳನ್ನೆಲ್ಲ ಸವಾಲಿನಂತೆ ಸ್ವೀಕರಿಸಿ ಅವುಗಳನ್ನು ಎದುರಿಸಿ ನಮ್ಮ ಕರ್ನಾಟಕವನ್ನು ನಿರ್ಮಿಸಬೇಕು. ಇದು ಸ್ವಹಿತ ಬಯಸುವ ಯಾವ ರಾಜಕಾರಣಿಗಳಿಂದಲೂ ಸಾಧ್ಯವಿಲ್ಲ. ಇದು ಕೇವಲ ನಮ್ಮ-ನಿಮ್ಮೆಲ್ಲರಿಂದ ಮಾತ್ರ ಸಾಧ್ಯ.
........................ ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಬೈಂದೂರು ತಾಲೂಕು
ಉಡುಪಿ ಜಿಲ್ಲೆ
**********************************************




Ads on article

Advertise in articles 1

advertising articles 2

Advertise under the article