
ಎಳೆಯರ ಹಸಿರು ಪ್ರೀತಿ
Friday, June 4, 2021
Edit
ಮಲ್ಲೇಸ್ವಾಮಿ
ಉಪನಿರ್ದೇಶಕರು (ಆಡಳಿತ)
ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ
ಜೂನ್ - 5 ವಿಶ್ವ ಪರಿಸರ ದಿನ . ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸುವುದಕ್ಕೋಸ್ಕರ ಈ ದಿನಾಚರಣೆಯನ್ನು ಆಚರಿಸುತ್ತೇವೆ. ಸಾರ್ವತ್ರಿಕವಾಗಿ ಆಚರಣೆಯ ಮಹತ್ವವನ್ನು ಅರಿಯಬೇಕು ಮತ್ತು ಇದು ಒಂದು ದಿನದ ಆಚರಣೆಯಾಗದೆ ನಿಸರ್ಗವನ್ನು ಉಳಿಸುವ ನಿತ್ಯಕಾಯಕವಾಗಬೇಕೆಂಬುದು ಇದರ ಉದ್ದೇಶ.
ಇಂದು ಪರಿಸರ ನಾಶವಾಗುತ್ತಿರುವ ಕುರಿತು ವಿಶ್ವದೆಲ್ಲೆಡೆ ಕೂಗುಗಳು ಕೇಳಿ ಬರುತ್ತಿವೆ. ಮನುಷ್ಯನ ದುರಾಸೆಗಳಿಗೆ ಬಲಿಯಾಗಿ ಕಾಡು ನಾಶವಾಗುತ್ತಾ ಜರುಗುತ್ತಿರುವ ಪ್ರಾಕೃತಿಕ ವೈಪರೀತ್ಯಗಳನ್ನು ಪ್ರಪಂಚದಾದ್ಯಂತ ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಜಾಗೃತಿ ಸಮಾವೇಶಗಳು ನಡೆದರೂ ಮನುಷ್ಯನ ವರ್ತನೆಯ ಬದಲಾವಣೆಯಾಗದ ಹೊರತಾಗಿ ಸಾಧ್ಯವಾಗದು...!
ಹಾಗಾದರೆ ಬದಲಾವಣೆ ಎಲ್ಲಿಂದ ಸಾಧ್ಯ...? ನಾಳಿನ ಭವಿಷ್ಯವನ್ನು ರೂಪಿಸಬೇಕಾದ ಮಕ್ಕಳು ಇದರ ಬಾಧಕಗಳನ್ನು ಅರಗಿಸಿಕೊಂಡರೆ ಖಂಡಿತಾ ಸಾಧ್ಯವಿದೆ. ಮುಂದಿನ ಜನಾಂಗ ಈ ಭೂಮಿ ಮೇಲೆ ಉಸಿರಾಡಬೇಕಾದರೆ ಇಂದಿನ ಮಕ್ಕಳಲ್ಲಿ ಸಂಪೂರ್ಣ ಜಾಗೃತಿಯನ್ನು ಮೂಡಿಸಬೇಕಾದ ಅನಿವಾರ್ಯತೆ ಇದೆ.
*ಮಕ್ಕಳ ಜಗಲಿ* ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದು ಪ್ರಶಂಸನೀಯ. ಲಾಕ್ಡೌನ್ ಸಮಯದಲ್ಲಿ ಆರಂಭವಾದ ಈ ಆನ್ಲೈನ್ ಪತ್ರಿಕೆ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮೀರಿ ವ್ಯಾಪಿಸಿರುವ ಈ ಮಕ್ಕಳ ಜಗಲಿ ರಾಜ್ಯದ ಅನೇಕ ಮಕ್ಕಳಿಗೆ ವೇದಿಕೆಯಾಗಿದೆ.
ಅನೇಕ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಗಿಡಗಳನ್ನು ನೆಟ್ಟು ಗಿಡದ ಪರಿಚಯದ ಜೊತೆ ಮಾಹಿತಿಯನ್ನು ಜಾಲತಾಣದ ಮೂಲಕ ಹಂಚಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ಮೂಲಕ ತಮ್ಮ ಕೊಡುಗೆಯನ್ನು ಈ ಭೂಮಿಗೆ ನೀಡಿದ್ದಾರೆ. ಈ ಭೂಮಿ ಉಳಿದರೆ ನಾವು ಉಳಿದೇವು ಎಂಬ ನುಡಿಯಂತೆ ನಡೆದ ಮಕ್ಕಳು..... ಇವರು ಸಾಮಾನ್ಯ ಮಕ್ಕಳಲ್ಲ. ಇವರು ಹಸಿರು ಸೈನಿಕರು...!!! ಹೌದು ಇವರು ಹಸಿರು ಯೋಧರು ....!!!
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಸಿರು ವಂದನೆಗಳು.....
..................ಮಲ್ಲೇಸ್ವಾಮಿ
ಉಪನಿರ್ದೇಶಕರು (ಆಡಳಿತ)
ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ