ಜೀವನ ಸಂಭ್ರಮ : ಸಂಚಿಕೆ - 236
Tuesday, April 7, 2026
Edit
ಜೀವನ ಸಂಭ್ರಮ : ಸಂಚಿಕೆ - 236
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಒಬ್ಬ ಸಿರಿವಂತ, ಚೆಂಡು ಹೂವಿನ ತೋಟ ಮಾಡಿದ್ದನು. ನೂರಾರು ಜನರು ನಿತ್ಯ ಬಂದು ಹೂ ನೋಡಿ ಸಂತೋಷ ಪಡುತ್ತಿದ್ದರು. ಆ ಊರಿನ ಸಭೆ ಸಮಾರಂಭ, ಪೂಜೆಗೆ ಸೊಗಸಾದ ಪುಷ್ಪಗಳು ಈ ಹೂತೋಟದಿಂದ ಹೋಗುತ್ತಿದ್ದವು. ಸುತ್ತ ಹಳ್ಳಿಗೆ ಈ ಹೂದೋಟ ಹೆಸರುವಾಸಿಯಾಗಿತ್ತು. ಇದನ್ನು ಕಂಡು ಸಹಿಸಲಾಗದ ಒಬ್ಬ ಮನುಷ್ಯ, ಯಾರು ಇಲ್ಲದ ಸಮಯದಲ್ಲಿ ಈ ಹೂ ತೋಟಕ್ಕೆ ಬಂದು ಚೆಂಡು ಹೂ ಗಿಡಗಳನ್ನೆಲ್ಲ ಕಿತ್ತುಹಾಕಿ ಕಾಣದಂತೆ ಹೊರಟು ಹೋದನು. ಆತ ಹೋದ ನಂತರ ತೋಟದ ಮಾಲಿಕ ಸಿರಿವಂತ, ಹೂ ತೋಟಕ್ಕೆ ಬಂದನು. ನೋಡಿದ ಮನಸ್ಸು ತುಂಬಾ ನೋವಾಯಿತು. ಸಿರಿವಂತ ಹೂಗಂಟಿಗಳಿಗೆ ಹೇಳಿದ "ನಿಮ್ಮನ್ನು ಕಂಡು ನನಗೆ ದುಃಖವಾಗುತ್ತದೆ. ಯಾರು ನಿಮ್ಮನ್ನು ಕಿತ್ತು ಹಾಕಿದವರು". ಎಂದು ಕೇಳಿದ. ಹೂ ಗಂಟೆಗಳು ಹೇಳಿದವು, "ನೋವೇಕೆ ನಾವು ಮತ್ತೆ ಹುಟ್ಟುತ್ತೇವೆ ಮತ್ತು ಹೂವು ಕೊಡುತ್ತೇವಲ್ಲ". ಆಗ ಸಿರಿವಂತ ಹೇಳಿದ, "ನಿಮ್ಮನ್ನು ಕಿತ್ತು ಹಾಕಿದವನನ್ನು ಕಂಡುಹಿಡಿಯುವುದು ಹೇಗೆ"?. ಹೂ ಗಂಟೆಗಳು ಹೇಳಿದವು, "ಸುಲಭವಿದೆ, ಅವನು ಎಲ್ಲೇ ಹೋದರು ಅವನ ಸುತ್ತ ನಮ್ಮ ಸುಗಂಧ ಹರಡಿರುತ್ತದೆ". ತೋಟದ ಹತ್ತಿರದಲ್ಲಿ ಒಬ್ಬ ವ್ಯಕ್ತಿ ಠೀವಿಯಿಂದ ನಡೆದು ಹೋಗುತ್ತಿದ್ದನು. ಸಿರಿವಂತ ಮಾಲೀಕನಿಗೆ ಸಂಶಯ ಬಂದು ಅವನ ಹತ್ತಿರ ಬಂದ, ಚೆಂಡು ಹೂವಿನ ವಾಸನೆ ಘಮ್ಮೆಂದಿತು. ಸಿರಿವಂತನಿಗೆ ಸಿಟ್ಟು ನೆತ್ತಿಗೇರಿತು. ಅವನ ಮೇಲೆ ಹಲ್ಲೆ ಮಾಡಲು ಹೋದ. ಆಗ ಅಲ್ಲೇ ಇದ್ದ ಹೂ ಗಂಟಿಗಳು ಹೇಳಿದವು. "ಸಿರಿವಂತನೇ ನೀನೇಕೆ ನೊಂದುಕೊಳ್ಳುವೆ?. ನಮ್ಮನ್ನು ಕೊಂದವರನ್ನು ಸುಗಂಧಗೊಳಿಸುವುದೇ ನಮ್ಮ ಧರ್ಮ. ನಮ್ಮನ್ನು ಸಾಕಿ ಸಲಹಿದ ನೀನು ಅದೇ ಧರ್ಮ ಪಾಲಿಸಿದರೆ ನಮಗೂ ಸಂತೋಷ". ತಕ್ಷಣ ಸಿರಿವಂತ ಮಾಲೀಕನಿಗೆ ಜ್ಞಾನೋದಯವಾಯಿತು. ತಕ್ಷಣ ಹೂ ಕಿತ್ತ ಮನುಷ್ಯನಿಗೆ ಸಿರಿವಂತ ಹೇಳಿದ, "ಮತ್ತೊಮ್ಮೆ ಹೂ ಬೆಳೆಯಲು ಅವಕಾಶ ಮಾಡಿಕೊಟ್ಟ ನಿನಗೆ ಧನ್ಯವಾದಗಳು". ಈ ಮಾತು ಕೇಳಿ ಹೂ ಕಿತ್ತಿದ್ದವನು ಸಿರಿವಂತನಿಗೆ ಕ್ಷಮೆ ಕೇಳಿ ಹೂವಿನ ಹೃದಯದವನಾಗಿ ಹೊರಟು ಹೋದನು.
ಹೂಗಂಟಿಗಳ ಭಾವ ನೈಜ ಪ್ರೇಮ. ನೈಜ ಪ್ರೇಮ ಎಂದರೆ ಇದರ ಅರ್ಥ ಸಂತೋಷ ಪಡುವುದು. ಮಕ್ಕಳೇ ನಾವು ನೈಜ ಪ್ರೇಮವಂತರಾಗಬೇಕು. ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************