ಜೀವನ ಸಂಭ್ರಮ : ಸಂಚಿಕೆ - 194
Sunday, June 15, 2025
Edit
ಜೀವನ ಸಂಭ್ರಮ : ಸಂಚಿಕೆ - 194
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇದು ಬುದ್ಧನ ಕಾಲದಲ್ಲಿ ನಡೆದ ಘಟನೆ. ಒಮ್ಮೆ ಬುದ್ಧ ಆಮ್ರವನದಲ್ಲಿ (ಮಾವಿನ ತೋಪು) ಬಿಡಾರ ಹೂಡಿದ್ದನು. ಬೆಳಿಗ್ಗೆ ಸೂರ್ಯೋದಯದಲ್ಲಿ ಆತನ ಪ್ರವಚನ ಸಾಗುತ್ತಿತ್ತು. ತಂಪಾದ ಬೆಳಕು, ಹಸಿರು ವನಸಿರಿ, ಸುತ್ತಮುತ್ತ ಹರಡಿತ್ತು. ಬುದ್ಧನ ಪ್ರವಚನ ಶಾಂತವಾಗಿ ಹರಿದಿತ್ತು. ಅಲ್ಲಿಗೆ ಒಬ್ಬಳು ಮಹಿಳೆ ಬಂದಳು.
ಆಕೆ ಆ ಭಾಗದ ನರ್ತಕಿ ಮತ್ತು ಹಾಡುಗಾರ್ತಿ. ಆಕೆಯ ಹೆಸರು ವಿಶಾಖ. ಅಗರ್ಭ ಸಿರಿವಂತೆ. ಭವ್ಯವಾದ ಅರಮನೆಯಂತಹ ಮನೆ. ರಾಜ ಮಹಾರಾಜರು ಅನುಭವಿಸಬಹುದಾದ ಸೌಂದರ್ಯ. ವಿಶಾಖ ಹಾಡುತ್ತಿದ್ದರೆ, ಇಡೀ ಪಟ್ಟಣ ಹಾಡಿನಲ್ಲಿ ಮಗ್ನವಾಗುತ್ತಿತ್ತು. ಆಕೆ ನರ್ತಿಸುತ್ತಿದ್ದರೆ, ಇಡೀ ಪಟ್ಟಣ ನರ್ತಿಸುತ್ತಿತ್ತು. ಇಡೀ ಪಟ್ಟಣವೇ ಈಕೆಯ ಹಾಡು ಮತ್ತು ನರ್ತನಕ್ಕೆ ಹುಚ್ಚು ಹುಚ್ಚಾಗಿತ್ತು. ಆಕೆಯ ವಯಸ್ಸು ಸುಮಾರು 25 ರಿಂದ 30 ಇರಬಹುದು. ಮೈಯಲ್ಲಿ ಅದ್ಬುತ ಸೌಂದರ್ಯ. ಜನರನ್ನು ಹುಚ್ಚು ಗೊಳಿಸುವ ಮಧುರ ಧ್ವನಿ. ಆ ದಿನ ಅಲಂಕೃತವಾಗಿ ಬುದ್ಧನ ಮಾತು ಕೇಳಲು ಬಂದಿದ್ದಳು. ಬುದ್ದ ಶಾಂತವಾಗಿ ಕುಳಿತಿದ್ದಾನೆ. ಆಕೆ ಮುತ್ತು ರತ್ನಗಳಿಂದ ಕೂಡಿದ ಆಭರಣ ಧರಿಸಿ ಬಂದಿದ್ದಳು. ಅಲ್ಲಿ ನೂರಾರು ಜನ ಕುಳಿತಿದ್ದಾರೆ. ಪ್ರಶಾಂತ ವಾತಾವರಣ. ರಾಜ ಮಹಾರಾಜರು, ಮಂತ್ರಿಗಳು, ಸಿರಿವಂತರು, ಬಡವರು ಮತ್ತು ಭಿಕ್ಷುಕರು ಸೇರಿದಂತೆ ಎಲ್ಲರೂ ಕುಳಿತಿದ್ದಾರೆ. ಆದರೆ ಅಲ್ಲಿ ಯಾವುದೇ ತಾರತಮ್ಯವಿಲ್ಲದೆ, ಯಾರು ಎಲ್ಲಿ ಕುಳಿತಿದ್ದಾರೆ ಎನ್ನುವ ಭಾವವಿಲ್ಲದೆ, ಕೇಳುವಿಕೆಯಲ್ಲಿ ಮಗ್ನರಾಗಿದ್ದಾರೆ. ಬುದ್ಧನ ಸಮೀಪಕ್ಕೆ ಹೋದರೆ ಭೇದ ಮರೆಯಾಗಿ ಹೋಗುತ್ತಿತ್ತು. ಬುದ್ಧನ ಪ್ರವಚನ ಶಾಂತವಾಗಿ, ನದಿ ಹರಿದಂತೆ ಸಾಗಿದೆ. ಅವಸರವಿಲ್ಲ. ನಿಧಾನವಾಗಿ ಜುಳುಜುಳು ನಾದದಂತೆ, ಬುದ್ಧನ ಬಾಯಿಂದ ಶಬ್ದಗಳು ಹರಿಯುತ್ತಿತ್ತು.
ಬುದ್ಧನ ಮಾತು ಕೇಳಲು ವಿಶಾಖ ಬಂದಿದ್ದಳು. ಮುಂದೆ ಬಂದು ಬುದ್ದನಿಗೆ ವಂದಿಸಿ, ಬುದ್ಧನನ್ನು ನೋಡಿದಳು. ಏನು ಪ್ರಶಾಂತ?. ಸುತ್ತ ಮುತ್ತ ನೋಡಿದಳು. ಆಕೆಗೆ ಏನೋ ಮುಜುಗರ ಅನಿಸಿದಂತೆ ಆಯಿತು. ಆಕೆ ಮುಂದೆ ಕುಳಿತು, ತನ್ನ ಆಭರಣವನ್ನೆಲ್ಲ ತೆಗೆದು, ಒಂದು ಚೀಲದಲ್ಲಿ ಹಾಕಿ, ಪಕ್ಕದಲ್ಲಿ ಇಟ್ಟು ಪ್ರವಚನ ಆಲಿಸುವಿಕೆಯಲ್ಲಿ ಮಗ್ನಳಾದಳು. ಬುದ್ಧ ನಿರ್ವಾಣದ ಮಾತುಗಳನ್ನು ಆಡುತ್ತಿದ್ದನು. ಬುದ್ಧನ ಮಾತನ್ನು ಕೇಳುತ್ತಿದ್ದ ವಿಶಾಖ, ನಾನು ಗಣಿಕೆ, ವೇಶ್ಯೆ ಅನ್ನುವುದನ್ನು ಮರೆತಳು. ತಾನು ನರ್ತಕಿ, ಸಂಗೀತಗಾರ್ತಿ ಅನ್ನುವುದನ್ನು ಮರೆತಳು. ಬುದ್ಧ ಹೇಳುತ್ತಿದ್ದ ನಿರ್ವಾಣ ರಾಜ್ಯದೊಳಗೆ, ಶಾಂತಿಯ ರಾಜ್ಯದೊಳಗೆ, ಎಲ್ಲರಿಗೂ ಪ್ರವೇಶವಿದೆ. ಕೈ, ಮನಸ್ಸು, ದೇಹ ಹೊಲಸಿದ್ದವರಿಗೂ ಪ್ರವೇಶ. ದೇಹ ಮನಸ್ಸು ಸ್ವಚ್ಛ ಇದ್ದವರಿಗೂ ಪ್ರವೇಶ ಇದೆ. ಆದರೆ ಪ್ರವೇಶ ಮಾಡಬೇಕೆನ್ನುವ ಒಲವು ಇರಬೇಕಷ್ಟೇ. ಮನಸ್ಸು ಮಾಡಿದರೆ ಇದೇ ಕ್ಷಣ ಮೈ ಸ್ವಚ್ಚವಾಗುತ್ತದೆ. ಮನಸ್ಸು ಸ್ವಚ್ಛವಾಗುತ್ತದೆ. ಕಣ್ಣು ಸ್ವಚ್ಛವಾಗುತ್ತದೆ. ಎಷ್ಟು ವರ್ಷದ ಹೊಲಸಿದ್ದರೇನು? ಹೊಲಸು ಹಚ್ಚುವ ಆಸೆ ಬಿಟ್ಟರೆ ಇಂದೇ ಸ್ವಚ್ಛವಾಗುತ್ತದೆ ಎಂದನು. ಆಗ ದೇಹ ಮನಸ್ಸು ಸ್ವಚ್ಛವಾಗುತ್ತದೆ. ಅದಕ್ಕೆ ಮಾಡಬೇಕಾದದ್ದೇನೆಂದರೆ ಆಸೆ ತ್ಯಾಗ ಮಾಡಿದರೆ, ಇಂದೇ ನಿರ್ವಾಣವಾಗುತ್ತದೆ ಎಂದು ಹೇಳಿದನು. ಆ ಮಾತು ವಿಶಾಖಳ ತಲೆಯೊಳಗೆ ಹೊಕ್ಕಿತು.
ವಿಶಾಖಳ ಸೌಂದರ್ಯ ವರ್ಣಿಸುವವರು ಬೇಕಾದಷ್ಟು ಜನ ಇದ್ದರು. ಆಕೆಯ ಧ್ವನಿ ವರ್ಣಿಸಿದವರು ಸಾವಿರಾರು ಜನ. ಆದರೆ ನಿರ್ವಾಣದ ಒಂದು ಮಾತು ವಿಶಾಖಳ ಕಿವಿಗೆ ಬಿದ್ದಿರಲಿಲ್ಲ. ವಿಶಾಖ ಪ್ರವಚನದಲ್ಲಿ ಮಗ್ನಳಾಗಿದ್ದಾಳೆ. ಆಕೆ ಅಂದಳು ಇಂದು ನನ್ನ ಕೈ, ಕಣ್ಣು, ಮನ ಸ್ವಚ್ಛವಾಯಿತು. ಈಗ ನಾನು ವಿಶಾಖ ಅಲ್ಲ. ವಿಶಾಂತ ಅಂತ ಅಂದಳು. ಕಣ್ಣು ಶಾಂತ. ನೋಡಬೇಕೆನ್ನುವ ಕಾಮ ಕಣ್ಣಿನಲ್ಲಿ ಇಲ್ಲ. ಏನಾದರೂ ಹಿಡಿಯಬೇಕು ಎನ್ನುವ ಒಲವು ಕೈಯಲ್ಲಿ ಇಲ್ಲ. ಗಳಿಸಬೇಕೆನ್ನುವ ಇಚ್ಚೆ ಮನಸ್ಸಿನಲ್ಲಿ ಇಲ್ಲ. ಈಗ ಎಲ್ಲವೂ ಶಾಂತ. ವಿಶಾಂತ ಅನಿಸಿತ್ತು. ವಿಶಾಖ, ವಿಶಾಖ ಆಗಿರಲಿಲ್ಲ ವಿಶಾಂತ ಆಗಿದ್ದಳು. ಆ ಪ್ರವಚನ ಕಾಲದಲ್ಲಿ ಅಷ್ಟು ನಿರ್ವಾಣ ಹೊಂದಿದ್ದಳು. ಪ್ರವಚನ ಮುಗಿದಿತ್ತು, ಬುದ್ದ ನಕ್ಕ. ಎಲ್ಲರೂ ತಮ್ಮ ತಮ್ಮ ಮನೆ ಕಡೆ ಹೊರಟರು. ವಿಶಾಖಳು ತಮ್ಮ ಮನೆ ಕಡೆ ಹೊರಟಳು. ತನ್ನ ಆಭರಣದ ಬಾನ ಇಲ್ಲದೆ ಮರೆತು ಮನೆಗೆ ಹೋಗಿದ್ದಳು.
ಎಲ್ಲಾ ಹೋದ ಬಳಿಕ ಬುದ್ಧ ಆ ಗಂಟನ್ನು ನೋಡಿದ, ತನ್ನ ಶಿಷ್ಯ ಆನಂದನನ್ನು ಕರೆದು, ಆ ಗಂಟು ಬಿಚ್ಚು ಎಂದನು. ಆನಂದ ಗಂಟು ಬಿಚ್ಚಿದನು. ಒಳಗೆಲ್ಲಾ ಆಭರಣ ಮತ್ತು ರತ್ನದಿಂದ ಕೂಡಿದ ಆಭರಣ. ಬುದ್ಧ ನಕ್ಕು ನುಡಿದ, "ಎಲ್ಲವನ್ನು ಮರೆಸಿತಲ್ಲ ಮಾತು" ಎಂದನು. ಇದು ಯಾರದು ಎಂದನು ಬುದ್ಧ. ಆನಂದ ನೋಡಿ ಹೇಳಿದ ಇದು ಶ್ರೇಷ್ಠ ನರ್ತಕಿ ವಿಶಾಖಳದ್ದು ಎಂದನು. ಆಗ ಬುದ್ಧ ಹೇಳಿದನು ಆಕೆಗೆ ಕೊಟ್ಟು ಬನ್ನಿ ಎಂದನು. ಒಬ್ಬ ಭಿಕ್ಷುವನ್ನು ಕರೆದು ಮನೆಗೆ ತಲುಪಿಸಲು ಹೇಳಿದ. ಒಬ್ಬ ಭಿಕ್ಷು ಆ ಆಭರಣದ ಗಂಟನ್ನು ತೆಗೆದುಕೊಂಡು ವಿಶಾಖಳ ಮನೆಗೆ ಬಂದನು. ಆಗ ವಿಶಾಖಳು ಹೇಳಿದಳು. ಈಗ ವಿಶಾಖಳೆ ಉಳಿದಿಲ್ಲ ಎಂದ ಬಳಿಕ ಆಭರಣ ಎಲ್ಲಿ ಉಳಿಯುತ್ತದೆ. ನಾನು ಅಲ್ಲೇ ವಿಶಾಖಳನ್ನು ಬಿಟ್ಟು ಬಂದಿದ್ದೇನೆ ಮತ್ತು ಆಭರಣವನ್ನು ಅಲ್ಲೇ ಬಿಟ್ಟು ಬಂದಿದ್ದೇನೆ. ಈಗ ಇರುವುದು ವಿಶಾಖ ಅಲ್ಲ ಬುದ್ಧನ ಶಿಷ್ಯೆ ವಿಶ್ರಾಂತ ಎಂದಳು. ಬುದ್ಧ ನೋಡಿದ, ಸ್ಪರ್ಶಿಸಿದ, ಆ ಪವಿತ್ರ ಆಭರಣಗಳನ್ನು ಧರಿಸಲು ಆಗುವುದಿಲ್ಲ. ಇದನ್ನು ಬುದ್ಧನಿಗೆ ಸಮರ್ಪಿಸು ಎಂದಳು.
ಆ ಬಿಕ್ಷು ಆ ಆಭರಣ ತೆಗೆದುಕೊಂಡು ವಾಪಸ್ಸು ಬುದ್ದನಲ್ಲಿಗೆ ಬಂದನು. ಆಗ ಬುದ್ಧ ಹೇಳುತ್ತಾನೆ, ನಾನು ಬುದ್ಧ. ಬುದ್ಧ ಅಂದರೆ ಏನು ಬೇಕಿಲ್ಲ. ಹಾಗಾಗಿ ನನಗೂ ಬೇಕಿಲ್ಲ ಎಂದನು. ಆ ಆಭರಣ ತೆಗೆದುಕೊಂಡು ನಾನೇನು ಮಾಡಲಿ. ಮಾತು ಕೇಳಿ, ಅವರೇ ತಿರಸ್ಕರಿಸಿದ ಬಳಿಕ, ಮಾತು ಹೇಳಿದ ನಾನು, ಹೇಗೆ ಸ್ವೀಕರಿಸಲಿ ಎಂದನು ಬುದ್ದ. ಇದು ಗುರು ಶಿಷ್ಯರ ಸಂಬಂಧ. ಆಗ ಆನಂದ ಹೇಳಿದ, ನೀವು ಸ್ವೀಕರಿಸುವುದಿಲ್ಲ. ಹಾಗೆಯೇ ಸ್ವೀಕರಿಸುವುದಿಲ್ಲ. ಆಕೆಯನ್ನು ಕರೆದು ತರುತ್ತೇವೆ ಮುಂದೆ ತೀರ್ಮಾನ ಮಾಡಿ ಎಂದನು. ಹೋಗಿ ವಿಶಾಖಳನ್ನು ಕರೆದರು. ವಿಶಾಖಳಿಗೆ ಎಲ್ಲಿಲ್ಲದ ಆನಂದ. ಬುದ್ಧ ಕರೆಯುತ್ತಾರೆ, ಎಂದ ಮೇಲೆ ಸಂತೋಷದಿಂದ ಬಂದಳು. ಬಂದವಳೇ ಹೇಳಿದಳು ಇದಷ್ಟೇ ಸಂಪತ್ತಲ್ಲ, ನನ್ನ ಎಲ್ಲಾ ಸಂಪತ್ತು ಬುದ್ಧನ ಸೇವೆಗಾಗಿ ಮೀಸಲು ಎಂದು ತಲೆಬಾಗಿಸಿದಳು. ಬುದ್ಧ ಹೇಳಿದ ನನ್ನ ಮನಸ್ಸು ಖಾಲಿ ಇದೆ ಯಾವಾಗಲೂ ಖಾಲಿ ಇರುತ್ತದೆ. ಮುಂದೆಯೂ ಖಾಲಿ ಇರುತ್ತದೆ ಎಂದೆಂದಿಗೂ ಖಾಲಿ ಇರುತ್ತದೆ ಇಂತಹ ಖಾಲಿ ಮನಸ್ಸಿನಲ್ಲಿ ಇಂತಹ ವಸ್ತುಗಳನ್ನು ತುಂಬಲು ಆಗುವುದಿಲ್ಲ. ಬುದ್ಧ ಭಗವಂತನೇ ನಿನ್ನ ಮಾತು ಖಾಲಿ. ನಿನ್ನ ಮನಸ್ಸು ಖಾಲಿ. ನಿನ್ನ ಮಾತು ಕೇಳಿದ ನನ್ನ ಹೃದಯವು ಖಾಲಿಯಾದ. ಬಳಿಕ ಇದನ್ನು ಹೇಗೆ ಪಡೆಯುವುದಕ್ಕೆ ಆಗುತ್ತದೆ ಅಂದಳು ವಿಶಾಖ. ನೀವು ಸ್ವೀಕರಿಸಿ ಬಿಡಿ ನಾನಂತೂ ಇದನ್ನು ತ್ಯಜಿಸಿದವಳು ಎಂದಳು.
ಆನಂದ ಹೇಳಿದ... ನೀವಿಬ್ಬರೂ ಸ್ವೀಕರಿಸಬೇಡಿ. ಈ ಸಂಪತ್ತನ್ನು ಇಲ್ಲಿ ಒಂದು ಸುಂದರ ವನಸಿರಿ ಬೆಳೆಸಲು ಬಳಸೋಣ ಎಂದನು. ಆಮೇಲೆ ವಿಶಾಖವನ ಎಂದು ಶುರು ಮಾಡಿದರು. ಸಾವಿರ ಸಾವಿರ ಮರ. ಎಲ್ಲಿ ಸಾವಿರ ಮಂದಿ ಉಪನ್ಯಾಸ ಕೇಳಿ ಶಾಂತಿ ಅನುಭವಿಸಿದ್ದರೋ ಅಲ್ಲಿ ವಿಶಾಖವನ ನಿರ್ಮಿಸಿದ್ದರು. ಇದು ಬುದ್ಧವನ ಈ ಸ್ಥಳದಲ್ಲಿ ಬುದ್ಧನ ಮಾತು ಕೇಳಿ ಪರಿವರ್ತನೆಗೊಂಡ ಸ್ಥಳ.
ಈ ಕಥೆಯ ಉದ್ದೇಶ ಏನೆಂದರೆ ಒಬ್ಬ ಗುರುವಿನ ಸಂಗ, ಬಲ್ಲವರ ಸಂಗ ಮಾಡಿದರೆ ಭಾವ ವಿಕಾಸವಾಗುತ್ತದೆ. ಈ ವಿಕಾಸ ಭಾವವೇ ಸುಂದರ ಬದುಕಿನ ಜೀವಾಳ. ಅಲ್ಲವೇ ಮಕ್ಕಳೇ..
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************