-->
ಜೀವನ ಸಂಭ್ರಮ : ಸಂಚಿಕೆ - 193

ಜೀವನ ಸಂಭ್ರಮ : ಸಂಚಿಕೆ - 193

ಜೀವನ ಸಂಭ್ರಮ : ಸಂಚಿಕೆ - 193
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                          
ಮಕ್ಕಳೇ, ಈ ದಿನ ಭಾವವಿಕಾಸದಲ್ಲಿ ಮಗ್ನತೆಯ ಪಾತ್ರದ ಬಗ್ಗೆ ತಿಳಿದುಕೊಳ್ಳೋಣ. ಭಾವ ವಿಕಸಿತವಾಗಬೇಕು. ಭಾವ ವಿಕಾಸವಾಗುವ ಸಾಧನಗಳ ಬಗ್ಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕರ್ಮ ಯೋಗದ ಪ್ರವಚನದಲ್ಲಿ ಹೇಳಿದ ಕಥೆ.

1. ಭಾವ ವಿಕಾಸವಾಗಬೇಕಾದರೆ ಬಂಧನವಿಲ್ಲದೆ, ಮುಕ್ತವಾಗಿ ಮನ ಹೊರಹರಿಯಬೇಕು.

2. ಬಲ್ಲವರ ಸತ್ಯದ ನುಡಿಗಳನ್ನು ಕೇಳಬೇಕು. 

3. ಒಳ್ಳೆಯದನ್ನು ನೋಡುವುದು.

 ಸೌಂದರ್ಯವನ್ನು ಆಸ್ವಾದಿಸುವುದು. ಏನೇನು ಒಳ್ಳೆದು ನೋಡಿದ್ದೀಯಲ್ಲ, ಕೇಳಿದ್ದೀಯಲ್ಲ, ಅವನ್ನು ನೆನಪು ಮಾಡಿಕೋ, ಮಲಗುವ ಮುಂಚೆ. ಮುಳ್ಳು ನೆನಪು ಮಾಡಿಕೊಳ್ಳಬೇಡ. ಹೂವಿನಂತೆ ಇರುವ ಒಳ್ಳೆಯದನ್ನು ನೆನಪಿಸಿಕೊ. ಒಳ್ಳೆಯ ಮಾತಿರಬಹುದು. ಒಳ್ಳೆಯ ಸೌಂದರ್ಯ ಇರಬಹುದು. ಅದನ್ನು ನೆನಪು ಮಾಡಿಕೋ. ಎದ್ದಾಗ ಶಿವನನ್ನು ನೆನೆಸಿಕೊ. ಶಿವ ಎಂದರೆ ಒಳ್ಳೆಯದು, ಸುಂದರವಾಗಿರುವುದು ಎಂದರ್ಥ. ಹಾಗೆ ಮಲಗಿದರೆ ನಿದ್ದೆ ಸವಿಯಾಗುತ್ತದೆ. ಎದ್ದಾಗ ಒಳ್ಳೆಯದನ್ನು ನೆನಸಿಕೊಂಡರೆ ಹಗಲು ಸವಿಯಾಗುತ್ತದೆ. ಆದರೆ ನಾವು, ನಮ್ಮ ಸುತ್ತಮುತ್ತ ಅಷ್ಟು ವಸ್ತುಗಳು ಇರುವಾಗ ಶಿವನ ನೆನಪೆಲ್ಲಿ?.

4. ಮಧುರ ಶಬ್ದಗಳನ್ನು ಕೇಳುವುದು. 

ಒಳ್ಳೆಯ ವಿಚಾರಗಳನ್ನು ಆಲಿಸುವುದು. ಏನು ಒಳ್ಳೆಯದು ನೋಡಿದ್ದೀ, ಕೇಳಿದ್ದೀ, ಅದರ ಬಗ್ಗೆ ಚಿಂತನೆ ಮಾಡು. ಮತ್ತೆ ಮತ್ತೆ ಮೆಲಕುಹಾಕು. ನೋಡಿದ್ದರಲ್ಲಿ, ಕೇಳಿದ್ದರಲ್ಲಿ, ಚಿಂತನೆಯಲ್ಲಿ ಮನಸ್ಸು ಮುಳುಗಬೇಕು. ಇದಕ್ಕೆ ಸಮಾಧಿ ಎನ್ನುವರು. ಯಾವುದೇ ಇರಲಿ, ಒಳ್ಳೆಯದರಲ್ಲಿ ಮುಳುಗಬೇಕು. ಅದಕ್ಕೆ ಭವ್ಯ ಜೀವನ ಎನ್ನುವರು.

ಎಲ್ಲಾ ನೋಡುವುದಕ್ಕೆ ಸಿಗುತ್ತದೆ. ಎಲ್ಲಾ ಕೇಳುವುದಕ್ಕೆ ಸಿಗುತ್ತದೆ. ಆದರೆ ನಾವು ಆಯ್ಕೆ ಮಾಡಿಕೊಳ್ಳಬೇಕು. ಯಾವುದು ಒಳ್ಳೆಯದೊ?. ಸತ್ಯ ಇದೆಯೋ ? ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಿಂದ ಮನಸ್ಸನ್ನು ಅರಳಿಸಬೇಕು. ಆಗ ಭಾವವಿಕಾಸವಾಗುತ್ತದೆ. 
ಒಬ್ಬ ವ್ಯಕ್ತಿ, ಹೂವಿನ ತೋಟದಲ್ಲಿ, ಕಿರು ದಾರಿಯಲ್ಲಿ ಹೋಗುತ್ತಿದ್ದನು. ಅದು ಸುಂದರವಾದ ಹೂತೋಟ. ಸೌಂದರ್ಯ ತುಂಬಿತ್ತು. ಸುವಾಸನೆ ಎಲ್ಲಾ ಕಡೆ ಹರಡಿತ್ತು. ಕಿರು ದಾರಿಯಲ್ಲಿ ಹೋಗುವಾಗ, ಆ ಕಿರುದಾರಿಯ ಆ ಕಡೆ, ಈ ಕಡೆ ಗುಲಾಬಿ ಗಿಡ ಇತ್ತು. ಅದರ ಮುಳ್ಳು ಆತನಿಗೆ ತರಚಿತ್ತು. ಆಗ ಆ ವ್ಯಕ್ತಿ ಹೇಳಿದ, "ಏನು ಮುಳ್ಳು" ಅಂದನು. ಆಗ ಗುಲಾಬಿ ಹೇಳಿತು, "ಏ ಮನುಷ್ಯನೇ, ನೀನು ಎರಡು ಮುಳ್ಳಿನ ಮೇಲೆ ಲಕ್ಷ್ಯ ಕೊಟ್ಟಿದ್ದೀಯಲ್ಲ, ಮುಳ್ಳಿನ ಮೇಲೆ ಎಂತಹ ಸೌಂದರ್ಯ ತುಂಬಿದೆ ? ನೋಡು. ನಾವು ತರಚಿದ್ದು, ನಮ್ಮ ಕಡೆ ನೋಡಲಿ ಅಂತ. ಮುಳ್ಳಿನ ಕಡೆ ನೋಡಲಿ ಅಂತ ಅಲ್ಲ". ಈ ತೋಟದ ತುಂಬಾ ಮುಳ್ಳಿದೆ ಏನು?. ತೋಟದ ತುಂಬಾ ಹೂವಿದೆ. ಆ ಹೂವನ್ನು ನೋಡು. ಸೌಂದರ್ಯ ತುಂಬಿದೆ ಹಾಗೆ ಜಗತ್ತಿನಲ್ಲಿ ಸೌಂದರ್ಯ ತುಂಬಿದೆ. ಎಂತಹ ವಸ್ತುಗಳು, ಹಳ್ಳಕೊಳ್ಳ, ಬೆಟ್ಟ, ಶಿಖರಗಳು, ನದಿಗಳು, ವನಸಿರಿ, ಪಕ್ಷಿ, ಪ್ರಾಣಿಗಳು ನೋಡು. ಅದರಲ್ಲಿ ಎಲ್ಲೋ ಒಬ್ಬ ಮುಳ್ಳಿನಂತ ಮನುಷ್ಯ ಅಷ್ಟೇ. 

ಊರ ಹೊರಗೆ, ಸುಂದರ ವನದೊಳಗೆ, ಎರಡು ಸಣ್ಣ ಕುಟೀರ ಇತ್ತು. ವನವೆಲ್ಲ ಹಸಿರಿನಿಂದ, ಹೂವು ಹಣ್ಣಿನಿಂದ ಫಲಫಲಿಸುತ್ತಿತ್ತು. ಆ ಒಂದು ಕುಟೀರದಲ್ಲಿ ಒಬ್ಬ ತರುಣ ಇದ್ದನು. ಆತನ ಹೆಸರು ವಿದ್ಯಾ ವಾಚಸ್ಪತಿ ಮಿಶ್ರ. ಇನ್ನೊಂದು ಕುಟೀರದಲ್ಲಿ ಆತನ ತಂದೆ ತಾಯಿಗಳು ಇದ್ದರು. ಆತನ ವಯಸ್ಸು ಸುಮಾರು 24. ಆತ ಅರಿತವ. ಚಿಂತನೆಯಲ್ಲಿ ಅಭಿರುಚಿ ಉಳ್ಳವನಾಗಿದ್ದನು. ಆತನಿಗೆ ಲಗ್ನ ಆಯಿತು. ಹೆಂಡತಿಗೆ 20 ವರ್ಷ. ಮದುವೆಯಾಗಿ ಗಂಡನ ಮನೆಗೆ ಬಂದಳು. ಹೆಂಡತಿ ಬಂದ ದಿನದಂದು ಆತ ತಲೆಯೊಳಗೆ ಒಂದು ಯೋಚನೆ ಶುರು ಮಾಡಿದನು. ಅದು ಏನು ಅಂದರೆ ಋಷಿಗಳ ವಾಕ್ಯ ಕುರಿತು ಚಿಂತನೆ.

ಜಗತ್ತಿನ ಜೀವದ ಕುರಿತು ಚಿಂತನೆ. ಏನು ಚಿಂತನೆ ಮಾಡುತ್ತಿದ್ದ ಅದನ್ನೇ ಬರೆಯುತ್ತಿದ್ದನು. ಅದರಲ್ಲೇ ಮುಳುಗಿ ಹೋಗಿದ್ದನು. ಹೆಂಡತಿ, ತಂದೆ ತಾಯಿಗಳನ್ನು ಮರೆತನು. ಇದು ಭಾರತ ದೇಶದಲ್ಲಿ ನಡೆದ ಘಟನೆ. ಏನು ಹೊಳೆಯುತ್ತಿತ್ತೋ?. ಅದನ್ನು ಬರೆಯುವುದರಲ್ಲಿ ಮಗ್ನ. ಚಿಂತನೆ ಮಾಡುವಾಗ ಚಿಂತನೆಯಲ್ಲಿ ಮಗ್ನ. ಹೀಗಾಗಿ ಎಲ್ಲರನ್ನು ಮರೆತಿದ್ದನು. ವರುಷಗಳೇ ಹೋಯಿತು. ಗ್ರಂಥ ಚಿಂತನೆ ಮುಗಿಯುವ ಹಂತಕ್ಕೆ ಬಂದಿತ್ತು. ಇನ್ನೇನು ಕೊನೆಯ ಸಾಲುಗಳನ್ನು ಬರೆಯಬೇಕಾಗಿತ್ತು. ಚಿಂತನ ಪ್ರವಾಹ ಅದ್ಭುತವಾಗಿ ಹರಿದು ಬಂದಿತ್ತು. ಮುಗಿಯುವುದರಲ್ಲಿ ಇತ್ತು. ರಾತ್ರಿಯ ಸಮಯ ಮೈಭಾನ ಇಲ್ಲ. ಆತನ ಕಣ್ಣಿನ ಎದಿರು ಅದೇ ಚಿಂತನೆಗಳು. ಮನಸ್ಸಿನೊಳಗೆಲ್ಲ ವಿಶ್ವ ಚಿಂತನ. ಎದಿರು ಉರಿಯುತ್ತಿದ್ದ ದೀಪ ಆರಿತು. ಲಕ್ಷ್ಯ ಬದಲಾಯಿತು. ತತ್ ಕ್ಷಣ ಒಬ್ಬರು ಬಂದು, ದೀಪ ಹಚ್ಚಿದರು. ಆ ದೀಪ ಹಚ್ಚಿದವರು ಬೇರಾರು ಅಲ್ಲ ಆತನ ಪತ್ನಿ. 

ಆಕೆ ಹೆಸರು ಭಾಮತಿ. ಕಣ್ಣು ತೆರೆದಿದ್ದ. ನೋಡಿದ. ನೀವು ಯಾರು? ಅಂದನು. ಆಗ ಆಕೆ ಹೇಳಿದಳು, ನಾನು ನಿಮ್ಮ ಧರ್ಮಪತ್ನಿಯಂದಳು. ಲಗ್ನ ಯಾವಾಗ ಆಯ್ತು?. ಅಂದನು. ಆಕೆ ಹೇಳಿದಳು, ಲಗ್ನ ಆಗಿ 30 ವರ್ಷ ಆಯ್ತು ಎಂದಳು. ಆಗ ಆತ ಕೇಳಿದ. ಉಪಜೀವನಕ್ಕೆ ನೀನು ಏನು ಮಾಡುತ್ತಿದ್ದಿ?. ಎಂದನು. ಅದಕ್ಕೆ ಆಕೆ ಹೇಳಿದಳು, ನಾನು ಬಹಳ ಸಂತೋಷದಿಂದ ಹಣ್ಣು ತಂದಿದ್ದೀನಿ, ಹಾಲು ಕರೆದಿದ್ದೇನೆ, ನಿಮ್ಮ ತಾಯಿ ತಂದೆಯರನ್ನು ರಕ್ಷಿಸಿದ್ದೇನೆ. 30 ವರ್ಷಗಳ ಕಾಲ ನಿಮ್ಮ ಚಿಂತನೆ ಒಡೆಯದಂತೆ ನೋಡಿಕೊಂಡಿದ್ದೇನೆ. ನಿಮ್ಮ ಲಕ್ಷ್ಯ ಬೇರೆ ಕಡೆ ಹರಿಯಬಾರದು, ಏಕೆಂದರೆ ವಿಶ್ವ ಚಿಂತಕ ನನ್ನ ಪತಿ ಎನ್ನುವ ಅಭಿಮಾನ ನನಗೆ. ವಿಶ್ವ ಚಿಂತೆಯಲ್ಲಿ ಮುಳುಗಿ ಹೋದರಲ್ಲ ನೀವು, ನಿಮ್ಮನ್ನು ಎಬ್ಬಿಸಬೇಕು ಅಂತ ಅನಿಸಿಲಿಲ್ಲ ನನಗೆ. ಇಂದು ನಿಮ್ಮ ಎಬ್ಬಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ ಅಂದಳು. ಆತ ಹೇಳಿದ, ನಾನು ನಿನ್ನನ್ನು ಕ್ಷಮಿಸುವುದಲ್ಲ. ನೀನು ನನ್ನನ್ನು ಕ್ಷಮಿಸಬೇಕು ಅಂದನು. ಲಗ್ನ ಆಗಿ 30 ವರ್ಷ ಆದರೂ, ನಿನ್ನ ಕಡೆ ಲಕ್ಷ್ಯ ಕೊಟ್ಟಿಲ್ಲವಲ್ಲ ಅದಕ್ಕೆ. ನೀನು ನನ್ನನ್ನು ಕ್ಷಮಿಸಬೇಕು ಅಂದನು. ನೀನು ಸಾಕ್ಷಾತ್ ಸರಸ್ವತಿ ದೇವಿ. ನಾನು ಚಿಂತನೆಯಲ್ಲಿ ಮಗ್ನ , ಆದರೆ ನೀನು ಸೇವೆಯಲ್ಲಿ ಮಗ್ನಳಾಗಿದ್ದೀಯಲ್ಲ , ಅದು ಮಹಾನ್ ಅದ್ಭುತ. ತಾಯಿ ತಂದೆ ಎಲ್ಲಿ ? ಅಂದನು. ಆಗ ಆಕೆ ಹೇಳಿದಳು, ಅವರೆಲ್ಲ ದೇಹ ಬಿಟ್ಟು ಈಗ 10 ವರ್ಷ ಆಯ್ತು ಅಂದಳು. ಆಗ ಆತ ಕೇಳಿದ ನನಗ್ಯಾಕೆ ಎಬ್ಬಿಸಲಿಲ್ಲ?. ಅಂದನು. ಅದಕ್ಕೆ ಆಕೆ ಹೇಳಿದಳು ನೀವು ಮಲಗಿರಲಿಲ್ಲ, ನೀವು ಜ್ಞಾನ ಚಿಂತನೆಯಲ್ಲಿದ್ದವರನ್ನು ಹಿಡಿದು ತರಲಿಕ್ಕೆ ಆಗಲಿಲ್ಲ. ನನಗೆ ಅಭಿಮಾನ ಇತ್ತು. ಇಂತಹ ಪತಿ ಸಿಕ್ಕಿದ್ದಾನಲ್ಲ ಅಂತ. ಪ್ರಾಪಂಚಿಕ ಸೌಖ್ಯ ಬೇರೆ ಯಾವುದಾದರೂ ಜನ್ಮದಲ್ಲೂ ಪಡೆಯಬಹುದು. ಇಂತಹ ಮಹಾನುಭಾವನ ಸೇವೆ ಮಾಡುವ ಸೌಭಾಗ್ಯ ಸಿಕ್ಕಿತಲ್ಲ ಅದಕ್ಕೆ ಮೌನವಾಗಿದ್ದೆ ಅಂದಳು. ಆಗ ಆತ ಹೇಳಿದ ನಾನೇನು ಇಲ್ಲಿ ಬರೆದಿದ್ದೇನಲ್ಲಾ, ಅದೊಂದು ನಿರ್ಜೀವ ವೇದಾಂತ. ನೀನೇನು ಬದುಕಿದೆಯಲ್ಲ ಅದು ಸಜೀವ ವೇದಾಂತ. ಅದಕ್ಕಾಗಿ ಈ ಗ್ರಂಥಕ್ಕೆ ಬೇರೆ ಹೆಸರು ಬೇಡ ಅಂತ ಹೇಳಿ ಆ ಗ್ರಂಥಕ್ಕೆ ಭಾಮತಿ ಎಂದು ಹೆಸರಿಟ್ಟನು. ಕ್ಷಮೆ ಬೇಡುವಂತಹ ಪತಿ, ಸೇವೆಯಲ್ಲಿ ಮಗ್ನಳಾದ ಪತ್ನಿ, ಎಂತಹ ಅನುಬಂಧ. ಎಂತಹ ತನ್ಮಯತೆ. ಸಾಕ್ಷಾತ್ ಸರಸ್ವತಿಯೇ ಎದುರಿಗಿದ್ದಾಗ, 30 ವರ್ಷ ತನ್ಮಯನಾಗಿ ಮರೆತನಲ್ಲ ಎಂದು ತಲೆಬಾಗಿಸಿದ್ದನು. ಪರಸ್ಪರರನ್ನು ನೋಡುವ ಭಾವ ಎಷ್ಟು ಅದ್ಭುತ. ಆತ ಚಿಂತನೆಯಲ್ಲಿ ಮಗ್ನ. ಆಕೆ ಸೇವೆಯಲ್ಲಿ ಮಗ್ನ. ಇದೇ ಕರ್ಮ ಯೋಗ. ಆಕೆಯ ದೃಷ್ಟಿಯಲ್ಲಿ ಆತ ಕರ್ಮ ಯೋಗಿ. ಆತನ ದೃಷ್ಟಿಯಲ್ಲಿ ಆಕೆ ಶ್ರೇಷ್ಠ ಕರ್ಮ ಯೋಗಿ.
ಒಳ್ಳೆಯದರಲ್ಲಿ ಮಗ್ನವಾಗಬೇಕು. ಜಗಳದಲ್ಲಿ ಅಲ್ಲ. 

ನಾವು ಯೋಗಿಗಳೇ, ಆದರೆ ನಾವು ಮುಳುಗಿರುವುದೇ ಬೇರೆ, ಜಗಳದಲ್ಲಿ ಮುಳುಗಿದ್ದೇವೆ, ಹೋರಾಟದಲ್ಲಿ ಮುಳುಗಿದ್ದೇವೆ, ಎಣಿಸುವುದರಲ್ಲಿ ಮುಳುಗಿದ್ದೇವೆ, ಇನ್ನೊಬ್ಬರ ದೋಷ ಹುಡುಕೋದ್ರಲ್ಲಿ ಮುಳುಗಿದ್ದೇವೆ, ಆಯುಷ್ಯ ಹೋದದ್ದೇ ಗೊತ್ತಾಗುತ್ತಿಲ್ಲ. ಹೀಗೆ ಆಯುಷ್ಯ ಯಾವುದರಲ್ಲೋ ಮುಳುಗುವ ಬದಲು ಒಳ್ಳೆಯ ಶಬ್ದದಲ್ಲಿ, ಒಳ್ಳೆಯ ಸೌಂದರ್ಯದಲ್ಲಿ, ಮುಳುಗುವುದು ಒಳ್ಳೆಯದಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article