-->
ಜೀವನ ಸಂಭ್ರಮ : ಸಂಚಿಕೆ - 191

ಜೀವನ ಸಂಭ್ರಮ : ಸಂಚಿಕೆ - 191

ಜೀವನ ಸಂಭ್ರಮ : ಸಂಚಿಕೆ - 191
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                  
               
              
ಮಕ್ಕಳೇ, ಈ ದಿನ ಆಸಕ್ತ ಕ್ರಿಯಾಶೀಲ ಶಿಕ್ಷಕರು, ಆಸಕ್ತ ಕ್ರಿಯಾಶೀಲ ಹಿರಿಯ ವಿದ್ಯಾರ್ಥಿಗಳು ಮತ್ತು ಆಸಕ್ತ ಗ್ರಾಮಸ್ಥರು ಇದ್ದರೆ, ಶಾಲೆ ಹೇಗೆ ಅಭಿವೃದ್ಧಿಯಾಗುತ್ತದೆ?. ಅನ್ನೋದನ್ನ ನೋಡೋಣ.... 

ನಾನು ದಿನಾಂಕ 12.05.2025 ರಂದು ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಶಾಲೆ ಮತ್ತು ಕಾಲೇಜು ಕಟ್ಟಡ ಉದ್ಘಾಟನೆ ಯಾದುದರಿಂದ ಶಾಲೆಗೆ ಭೇಟಿ ನೀಡಿದೆ. ಶಾಲೆ ಗ್ರಾಮಾಂತರ ಪ್ರದೇಶದಲ್ಲಿ, ಸುಂದರ ಪರಿಸರದಲ್ಲಿ ಇದೆ. ಈ ಶಾಲೆಯ ಪ್ರವೇಶ ದ್ವಾರ ನೋಡಿದಾಗಲೇ ನನಗೆ ಹಬ್ಬದ ವಾತಾವರಣ ಗೊಚರಿಸಿತು. ದ್ವಾರದಿಂದ ಸ್ವಲ್ಪ ಒಳಗೆ ಹೋದರೆ ಮೊದಲು ಇದ್ದ ಹಳೆ ಕಟ್ಟಡ ಕಾಣುತ್ತದೆ. ಅದನ್ನು ನೋಡಿದಾಗಲೇ ಅನಿಸಿತು ಸ್ವಚ್ಛ ನಿರ್ವಹಣೆ ಇದ್ದಿದ್ದು. ಅದರ ಪಕ್ಕದಲ್ಲಿ ಪೌಷ್ಟಿಕ ವನ, ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಹೂ, ಹಣ್ಣಿನ ಗಿಡಗಳ ನಿರ್ವಹಣೆ ಮನಸೆಳೆಯಿತು. ಅದರ ಹಿಂದೆ ಬೃಹತ್ ಶಾಮಿಯಾನ ಹಾಕಿ ಅದ್ದೂರಿಯಾಗಿ ವೇದಿಕೆ ನಿರ್ಮಿಸಿದ್ದರು. ನಾನು ಹೋಗುವ ವೇಳೆಗೆ ಉದ್ಘಾಟನೆ ಮುಗಿದು, ಶಾಸಕರ ಭಾಷಣ ಪ್ರಾರಂಭವಾಗಿತ್ತು. ವೇದಿಕೆ ಮುಂಭಾಗ ಶಾಲಾ ಮಕ್ಕಳು ಸೀರೆ ರವಿಕೆ ಧರಿಸಿ ಆಸನದಲ್ಲಿ ಕುಳಿತಿದ್ದರು. ಊರಿನ ಮಹಿಳೆಯರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಎಲ್ಲಾ ಇದ್ದುದರಿಂದ, ಸೀಟುಗಳು ಪೂರ್ಣ ಭರ್ತಿಯಾಗಿತ್ತು. ನೋಡುಗರ ಕಣ್ಣಿಗೆ ಅದು ಕೂಡ ಭಾರತೀಯ ಹಬ್ಬದ ಆಚರಣೆಯಂತೆ ಕಂಗೊಳಿಸುತ್ತಿತ್ತು. 

ಹಬ್ಬ ಎಂದರೆ ಮನೆ ಸ್ವಚ್ಛಗೊಳಿಸಿ, ಮೈ ಶುಚಿ ಮಾಡಿಕೊಂಡು, ಶುಭ್ರವಾದ ಬಟ್ಟೆ ಧರಿಸಿ, ವಿಶೇಷ ಅಡುಗೆ ಮಾಡಿ, ಪ್ರೀತಿ ಪಾತ್ರರೊಂದಿಗೆ ಹರಟುತ್ತಾ, ಉಂಡು ತಿಂದು, ಸಂತೋಷ ಪಡುವುದು. ಇದೆ ಎಲ್ಲಾ ಧರ್ಮೀಯರು ಮಾಡುವ ಹಬ್ಬ. ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಎಸ್‌.ಡಿ.ಎಂ.ಸಿ ಯವರ ಓಡಾಟ ನೋಡಿದೆ. ಎಲ್ಲರೂ ತಮ್ಮ ಮನೆಯ ಹಬ್ಬದಲ್ಲಿ ಓಡಾಡುವಂತೆ ಭಾಸವಾಗುತ್ತಿತ್ತು. ಇದನ್ನೆಲ್ಲ ನೋಡಿ ಸಂತೋಷ ತುಂಬಿ ಬಂದಿತ್ತು. 

ಇದು ಸಂಯುಕ್ತ ಪದವಿಪೂರ್ವ ಕಾಲೇಜು. ಕೆಳಗಿನ ಮಹಡಿಯಲ್ಲಿ ಪ್ರೌಢಶಾಲೆ, ಮೇಲಿನ ಅಂತಸ್ತು ಕಾಲೇಜು ವಿಭಾಗ ಉದ್ಘಾಟನೆಯಾಗಿತ್ತು. ಕಾಲೇಜು ವಿಭಾಗಕ್ಕೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ರವರ ನೇತೃತ್ವದಲ್ಲಿ ನಾಲ್ಕು ಕೊಠಡಿ ವಿವೇಕ ಯೋಜನೆಯಡಿಯಲ್ಲಿ ಮಂಜೂರಾಗಿದೆ. ಇದಕ್ಕಾಗಿ ಸರ್ಕಾರದ ವತಿಯಿಂದ ರೂ 1.02 ಕೋಟಿ ಬಿಡುಗಡೆಯಾಗಿದೆ. ಶಾಸಕರ ಶಿಫಾರಸಿನಂತೆ ಪ್ರೌಢಶಾಲಾ ವಿಭಾಗಕ್ಕೆ 63 ಲಕ್ಷ ಬಿಡುಗಡೆಯಾಗಿದೆ. ಮಹತ್ವದ ಸಂಗತಿ ಎಂದರೆ ಈ ಮುಂದಿನದು. 

ಈ ಪ್ರೌಢಶಾಲೆಗೆ ಶ್ರೀ ದೇವೇಂದ್ರ ಹೆಗಡೆ, ಬೆಂಗಳೂರಿನ ಉದ್ಯಮಿ, ಇದೇ ಗ್ರಾಮದ ನಿವಾಸಿ, ಅಷ್ಟೇ ಅಲ್ಲ ಇದೇ ಶಾಲೆಯ ಹಳೇ ವಿದ್ಯಾರ್ಥಿ. ಇವರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿದವರು. ಇವರಿಗೆ ಊರಿನ ಮೇಲೆ ಅಭಿಮಾನ. ಜೊತೆಗೆ ಶಾಲೆಯ ಮೇಲೆ ಅತಿ ಪ್ರೀತಿ. ಇವರ ನೇತೃತ್ವದಲ್ಲಿ ಕೆಲವೇ ಮಂದಿ ಹಿರಿಯ ವಿದ್ಯಾರ್ಥಿಗಳು ಸೇರಿ "ಸ್ಕೂಲ್ ಬೆಟರ್ ಮೆಂಟ್ ಕಮಿಟಿ" ಮಾಡಿ ನೋಂದಾಯಿಸಿದ್ದರು. ಈ ಸಮಿತಿಯ ಅಧ್ಯಕ್ಷರು ದೇವೇಂದ್ರ ಹೆಗ್ಡೆಯವರು. ಎಷ್ಟೋ ಊರುಗಳಲ್ಲಿ ದಾನಿಗಳು ಇರುತ್ತಾರೆ, ಆದರೆ ಶಿಕ್ಷಕರು ಅವರನ್ನು ಸಂಪರ್ಕಿಸುವುದಿಲ್ಲ. ಕೆಲವು ಕಡೆ ಆಸಕ್ತ ಶಿಕ್ಷಕರು ಇರುತ್ತಾರೆ, ದಾನಿಗಳು ಇರುವುದಿಲ್ಲ. ಇಲ್ಲಿ ಹಾಗೆ ಆಗಲಿಲ್ಲ. ಆಸಕ್ತ ಶಿಕ್ಷಕ ಸಮುದಾಯ, ಆಸಕ್ತ ಹಿರಿಯ ವಿದ್ಯಾರ್ಥಿಗಳು ಮತ್ತು ಆಸಕ್ತ ಎಸ್ ಡಿ ಎಂ ಸಿ ಹಾಗೂ ಗ್ರಾಮಸ್ಥರು ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಿಯಾಜ್ ಮತ್ತು ಶಿಕ್ಷಕ ತಂಡ, ಈ ಶಾಲೆಯಲ್ಲಿ ಹಿಂದೆ ಮುಖ್ಯ ಶಿಕ್ಷಕರಾಗಿದ್ದವರು, ಪ್ರಭಾರ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ತಂಡ ಬಹಳ ವರ್ಷಗಳಿಂದ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಈ ರೀತಿಯ ಯಶಸ್ಸಿಗೆ ಸಹಾಯವಾಯಿತು ಅನಿಸುತ್ತದೆ. ಹಿಂದೆ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರನ್ನು ಕರೆಸಿ, ಸನ್ಮಾನಿಸಿ, ಅವರ ಬಗ್ಗೆ ನುಡಿದ ಪ್ರೀತಿಯ ಮಾತುಗಳು, ಅವರು ವಿದ್ಯಾರ್ಥಿಗಳೊಂದಿಗೆ, ಗ್ರಾಮಸ್ಥರೊಂದಿಗೆ, ಹೇಗೆ ಸಂಬಂಧ ಹೊಂದಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಸುತ್ತದೆ.

READ

ರಿಯಾಜ್ ಪ್ರಭಾರ ಮುಖ್ಯ ಶಿಕ್ಷಕ ಹಾಗೂ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಇವರು ಮತ್ತು ಶಿಕ್ಷಕರ ತಂಡ, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅವರು ಎಲ್ಲ ಸೇರಿ ಪ್ರೌಢಶಾಲಾ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸುತ್ತಾರೆ. ಸ್ಕೂಲ್ ಬೆಟರ್ ಮೆಂಟ್ ಕಮಿಟಿ ಅಧ್ಯಕ್ಷರಾದ ದೇವೇಂದ್ರ ಹೆಗಡೆ ರವರು ರೂ5.30 ಲಕ್ಷ ದೇಣಿಗೆ ನೀಡುತ್ತಾರೆ. ಇದರ ಜೊತೆಗೆ ಅದೇ ಊರಿನ ಜಗದೀಶ್ ಹೆಗಡೆ ರವರು 5 ಲಕ್ಷ ದೇಣಿಗೆ ನೀಡುತ್ತಾರೆ. ಬೇರೆ ಊರಿನ ಉದ್ಯಮಿ ಉಮೇಶ್ ಚಂದ್ರ ಭಟ್ ರವರು ರೂ 5 ಲಕ್ಷ ದೇಣಿಗೆ ನೀಡುತ್ತಾರೆ.1994-96 ರ ನಡುವಿನ ಹಳೆ ವಿದ್ಯಾರ್ಥಿಗಳು ಸೇರಿ 5 ಲಕ್ಷ ದೇಣಿಗೆ ನೀಡುತ್ತಾರೆ. ಇನ್ನೊಂದು ವಿಶೇಷತೆ ಎಂದರೆ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಶಿಕ್ಷಣ ಅಭಿಮಾನಿ ಆದುದರಿಂದ, ಶಾಲೆಗೆ ಗ್ರಾಮ ಪಂಚಾಯತಿ ವತಿಯಿಂದ ರೂ 10 ಲಕ್ಷ ನೀಡುತ್ತಾರೆ. ಶಿಕ್ಷಕ ಮತ್ತು ಹಳೆ ವಿದ್ಯಾರ್ಥಿಗಳ ತಂಡ ಎಂ.ಎಲ್.ಸಿ ಗಳಾದ ಶ್ರೀಯುತ ಬೋಜೇಗೌಡ ಮತ್ತು ಶ್ರೀಯುತ ಆಯನೂರು ಮಂಜುನಾಥ್ ರವರನ್ನು ಸಂಪರ್ಕಿಸುತ್ತಾರೆ. ಅವರು ಸಹ ಕ್ರಮವಾಗಿ ರೂ 5 ಲಕ್ಷ ಮತ್ತು ರೂ 4ಲಕ್ಷ ನೀಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ 2.00 ಲಕ್ಷ ದೊರಕುತ್ತದೆ. ಇದಲ್ಲದೆ ಸ್ಥಳಿಯರು, ಗ್ರಾಮಸ್ಥರು ರೂ 1000.00, ರೂ2000.00, ರೂ5000.00, ರೂ10000.00, ರೂ15000.00 ದಂತೆ ನೀಡಿ ಒಟ್ಟು 45 ಲಕ್ಷವನ್ನು ಸಂಗ್ರಹಿಸುತ್ತಾರೆ. 

ಸರ್ಕಾರದಿಂದ ಬಿಡುಗಡೆಯಾದ 63 ಲಕ್ಷ ಸೇರಿದ್ದು ಒಟ್ಟು ಎಂಟು ಕೊಠಡಿಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಹಳೆ ವಿದ್ಯಾರ್ಥಿಗಳು ನಾಲ್ಕು ಕೊಠಡಿಯನ್ನು ನಿರ್ಮಿಸುತ್ತಾರೆ. ಸರ್ಕಾರದ ನಾಲ್ಕು ಮತ್ತು ಹಳೆ ವಿದ್ಯಾರ್ಥಿಗಳದ್ದು ನಾಲ್ಕು ಒಟ್ಟು ಪ್ರೌಢಶಾಲೆಗೆ ಎಂಟು ಕೊಠಡಿಗಳು, ಕಾಲೇಜು ವಿಭಾಗಕ್ಕೆ ನಾಲ್ಕು ಕೊಠಡಿಗಳು ಸೇರಿ 12 ಕೊಠಡಿಗಳ ಉದ್ಘಾಟನೆಯಾಗಿತ್ತು. ಇದಕ್ಕೆ ಸರ್ಕಾರದ್ದು ಮತ್ತು ದಾನಿಗಳದ್ದು ಎಲ್ಲ ಸೇರಿ ಸುಮಾರು ರೂ 2.5 ಕೋಟಿ ವೆಚ್ಚವಾಗಿತ್ತು. ಕಟ್ಟಡವು ಹಳೆ ವಿದ್ಯಾರ್ಥಿಗಳು ಸ್ಥಳೀಯರ ಮುತುವರ್ಜಿಯಿಂದಾಗಿ ಸುಂದರವಾಗಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಇದರಿಂದ ಮೂಲಭೂತ ಸೌಕರ್ಯದ ಕೊರತೆ ಕಡಿಮೆಯಾಗಿದೆ. 

ಈ ಶಾಲೆಯ ಶೈಕ್ಷಣಿಕ ಪ್ರಗತಿ ನೋಡಿದಾಗ ಹೆಚ್ಚು ಫಲಿತಾಂಶ ದಾಖಲಿಸಿರುವುದನ್ನು ಗಮನಿಸಿದೆ. ಸುಮಾರು ವರ್ಷಗಳಿಂದಲೂ ಹೆಚ್ಚು ಬಾರಿ ಶೇಕಡಾ ನೂರು ಫಲಿತಾಂಶ ಬಂದಿದೆ. ಆದರೆ ಪ್ರತಿ ಬಾರಿಯೂ 90 ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿರುತ್ತದೆ. ಈ ಬಾರಿ ಶೇಕಡ 96.3 ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಿದೆ. 2017-18 ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯಮಟ್ಟದ ಸ್ವಚ್ಛತಾ ಶಾಲಾ ಪ್ರಶಸ್ತಿ ಬಂದಿದೆ. ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಪ್ರಯತ್ನ ಸುಮಾರು ವರ್ಷಗಳಿಂದಲೇ ಚಾಲ್ತಿಯಲ್ಲಿದೆ. ಸಹಪಠ್ಯ ಚಟುವಟಿಕೆಯಲ್ಲೂ ಈ ಶಾಲೆ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ನಮ್ಮ ಸರ್ಕಾರಿ ಶಾಲೆ ಈ ರೀತಿ ಇರುವುದು ಅಭಿಮಾನದ ಸಂಕೇತ ಅಲ್ಲವೇ. ಒಂದು ಭಾಷಣದಲ್ಲಿ ಕೇಳಿದ ನೆನಪು "ಯಮನನ್ನು ನಚಿಕೇತ ಪ್ರಶ್ನಿಸುತ್ತಾನೆ. ಮನುಷ್ಯ ಶಾಶ್ವತವಾಗಿ ಇರಲು ಸಾಧ್ಯವಿಲ್ಲವೇ ಎಂದು. ಯಮ, ನಚಿಕೇತನಿಗೆ ಹೇಳುತ್ತಾನೆ, "ಈ ದೇಹದಿಂದ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಆದರೆ ಶಾಶ್ವತವಾಗಿ ಇರಬಹುದು. ಅದು ಅವರು ಮಾಡುವ ಕರ್ಮದಿಂದ ಶಾಶ್ವತವಾಗಿರಬಹುದು". ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಇವರು ತಮ್ಮ ಕೆಲಸದಿಂದಾಗಿ ಇಂದಿಗೂ ಅಜರಾಮರಾಗಿದ್ದಾರೆ. ಆದರೆ ಅವರ ದೇಹ ಇಲ್ಲ. ಬಲ್ಲವರು ಹೇಳುತ್ತಾರೆ "ಬದುಕು ಹೂವಿನಂತೆ ಇರಬೇಕು" ಎಂದು. ಹೂವು ಸುಂದರವಾಗಿ ಅರಳಿ ತನ್ನ ಸುತ್ತಮುತ್ತ ಸೌಂದರ್ಯದಿಂದ ಕಂಗೊಳಿಸುತ್ತದೆ. ನೋಡಿದವರ ಮನಸ್ಸು ತುಂಬಿ ಮನಸ್ಸು ಹೂವಾಗುತ್ತದೆ. ತನ್ನ ಸನಿಹ ಬಂದವರಿಗೆ ಸುಗಂಧ ಬೀರಿ, ಮನಸ್ಸನ್ನು ಸುಗಂಧ ಮಾಡುತ್ತದೆ. ಜೇನುನೊಣಕ್ಕೆ ಮಕರಂದ ನೀಡಿ, ಜೇನು ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ. ಅದು ಇರುವುದು ಒಂದೇ ದಿನವಾದರೂ, ಸುಂದರ ಮಧುರ ಮತ್ತು ಸವಿಯಾದ ಬದುಕನ್ನು ಸಾಗಿಸುತ್ತದೆ. ಅದರ ಕೆಳಗೆ ತಿಪ್ಪೆ ಇದ್ದರೂ ತಿಪ್ಪೆಯನ್ನು ತಿರಸ್ಕರಿಸದೆ, ಬೈಯದೆ ಅದರಲ್ಲಿ ಬೆಳೆದ ಹೂವಿನ ರಸ ಹೀರಿ ಜಗತ್ತನ್ನು ಸುಂದರಗೊಳಿಸುತ್ತದೆ. ಹಾಗೆ ಮಕ್ಕಳೆ ನಾವು ಬದುಕಿರುವ ಕಾಲಾವಧಿಯೊಳಗೆ ನಾವು ವಾಸಿಸುವ ಸ್ಥಳವನ್ನು ಸುಂದರಗೊಳಿಸಿ, ಮಧುರ ಗೊಳಿಸಿ, ಸವಿಗೊಳಿಸಿ ಹೋಗಬೇಕು.

ವೈಯಕ್ತಿಕಕಾಗಿ ಕೇಳುವುದು ಬಿಕ್ಷೆ. ಸಮುದಾಯದ ಸುಂದರ ಕೆಲಸಕ್ಕೆ ಕೇಳುವುದು ದೇಣಿಗೆ. ಹೀಗೆ ತಮ್ಮ ಆದಾಯದ ಹಣ, ದೇಣಿಗೆಯಿಂದ ಬಂದ ಹಣದಿಂದ ಊರಿನ ಮಕ್ಕಳ ಹಿತಕ್ಕಾಗಿ ಮಾಡಿರುವ ಕಾರ್ಯ ಅಜರಾಮರವೆ, ಸುಂದರವೆ. ಮಧುರವೆ.... ಇಂತಹ ಒಳ್ಳೆಯ ಕಾರ್ಯಗಳಿಗೆ ತಮ್ಮ ಕೈಲಾದ ದೇಣಿಗೆ ನೀಡುವ ಮಂದಿ ಸಾಕಷ್ಟು ಮಂದಿ ಇದ್ದಾರೆ. ಅವರನ್ನು ಭೇಟಿ ಮಾಡಿ ಯೋಜನೆ ರೂಪಿಸಿದರೆ ಖಂಡಿತ ಯಶಸ್ಸು ಸಾಧ್ಯ, ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Related Posts

Ads on article

Advertise in articles 1

advertising articles 2

Advertise under the article