ಪಯಣ : ಸಂಚಿಕೆ - 32 (ಬನ್ನಿ ಪ್ರವಾಸ ಹೋಗೋಣ)
Friday, February 28, 2025
Edit
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಶಿವನ ಆಲಯ ಮುರ್ಡೇಶ್ವರಕ್ಕೆ ಪಯಣ ಮಾಡೋಣ ಬನ್ನಿ.....
ಸಮುದ್ರದ ಅಂಚಿಗೇ ಇರುವ ಕಂದುಕಗಿರಿಯಲ್ಲಿ ತಪೋಭಂಗಿಯ ಶಿವನ ಮೂರ್ತಿಯು ಇಡೀ ವಿಶ್ವದಲ್ಲಿಯೇ ದೊಡ್ಡ ಮೂರ್ತಿ ಎಂಬ ಹೆಗ್ಗಳಿಕೆಯನ್ನು ಹಲವು ದಶಕದ ಹಿಂದೆಯೇ ಪಡೆದುಕೊಂಡಿದೆ. 123 ಅಡಿ ಎತ್ತರದ ಚತುರ್ಭುಜ ಶಿವನಿವ, ಮಂದಹಾಸದ ಈ ಮೂರ್ತಿಯ ಸೌಂದರ್ಯ ಅನುಪಮ. ಈ ಮೂರ್ತಿಯ ಪೀಠದ ಕೆಳಗಡೆ ಪಂಚಕ್ಷೇತ್ರದ ಆತ್ಮಲಿಂಗದ ದರ್ಶನವನ್ನು ತೋರಿಸುವ ವಿಗ್ರಹಗಳಿವೆ. ಶಿವನ ಎದುರುಗಡೆ 24 ಅಡಿಯ ನಂದಿ ವಿಗ್ರಹ ಸ್ಥಾಪಿಸಲಾಗಿದ್ದು, ಪೀಠದ ಕೆಳಗಡೆ ಶಿವಲಿಂಗ ಸ್ಥಾಪಿಸುವ ಮೂಲಕ ಮುರ್ಡೇಶ್ವರಕ್ಕೆ ಇನ್ನಷ್ಟು ಕಳೆಮೂಡಿಸಲಾಗಿದೆ. 
ಇಲ್ಲಿರುವ ದೇವಸ್ಥಾನ ಹಾಗೂ ಶಿವನ ಮೂರ್ತಿಗೆ ಕಳಸವಿಟ್ಟಂತೆ ಈ ರಾಜಗೋಪುರ ನಿರ್ಮಾಣವಾಗಿದೆ. ವಿಶ್ವದಲ್ಲಿಯೇ ಅತೀ ಎತ್ತರದ ಗೋಪುರ ನಿರ್ಮಿಸುವ ಮೂಲಕ ಉದ್ಯಮಿ ಆರ್.ಎನ್.ಶೆಟ್ಟಿ, ಮುರ್ಡೇಶ್ವರಕ್ಕೆ ಪ್ರವಾಸಿಗರನ್ನು ಕರೆಯಲು ತಮ್ಮ ಶ್ರದ್ಧೆ, ಶ್ರಮ ಹಾಗೂ ಸಂಪತ್ತು ವ್ಯಯಿಸಿರುವುದು ಎದ್ದು ಕಾಣುತ್ತಿದೆ. ಈ ರಾಜಗೋಪುರ ಕಂದುಕಗಿರಿಯ ಕೆಳಗಡೆಯೇ ಇದೆ. 1963ರಲ್ಲಿ ಶ್ರೀ ಕ್ಷೇತ್ರದ ದರ್ಶನಕ್ಕೆ ಬಂದಿದ್ದ ಶ್ರೀಧರ ಸ್ವಾಮಿಗಳು ಇಲ್ಲಿಯೇ ತಪಸ್ಸು ಮಾಡಿದ್ದರು. ಆ ಸಂದರ್ಭವೇ ದತ್ತ ಮಂದಿರ ನಿರ್ಮಾಣಕ್ಕೆ ನಾಂದಿಯಾಯಿತು. ಆನಂತರ ಈ ಕ್ಷೇತ್ರ ಅನಪಮ ದೈವಶಕ್ತಿಯ ತಾಣವಾಗಿ ರೂಪುಗೊಂಡು ರಾಜಗೋಪುರದಿಂದ ಕಂಗೊಳಿಸುತ್ತಿದೆ. 
ದೇಶದ ಇತಿಹಾಸದಲ್ಲಿಯೇ ದೊಡ್ಡದಾದ ಈ ರಾಜಗೋಪುರ 249 ಅಡಿ ಎತ್ತರವಿದ್ದು, ಲಿಫ್ಟ್ ವ್ಯವಸ್ಥೆ ಹೊಂದಿದೆ. ಹತ್ತು ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಿರುವ ಈ ಗೋಪುರ ತಂಜಾವೂರು, ಶ್ರೀರಂಗಂ, ಪುತ್ತೂರು ಹಾಗೂ ಶ್ರೀವಳ್ಳಿ ಸೇರಿದಂತೆ ಚರಿತ್ರೆಗೆ ಸೇರಿರುವ ನೂರಾರು ರಾಜಗೋಪುರಗಳಿಗಿಂತ ದೊಡ್ಡದು. ಈ ಗೋಪುರದಲ್ಲಿ ಮುರ್ಡೇಶ್ವರದ ಇತಿಹಾಸ ಹಾಗೂ ಪುರಾಣದ ಸ್ತಬ್ದ ಚಿತ್ರದ ದೃಶ್ಯಗಳನ್ನು ರೂಪಿಸಲಾಗಿದೆ. ಗೋಪುರ ವೈಭವ ಮಾತ್ರವಲ್ಲದೇ ಗೋಕರ್ಣಕ್ಕೆ ಸವಾಲೊಡ್ಡುವಂತೆ ಶಿವಲಿಂಗ ಪ್ರತಿಷ್ಠಾಪನೆಗೊಂಡಿದ್ದು ಜನತೆಯ ಹರ್ಷವನ್ನು ಇಮ್ಮಡಿಗೊಳಿಸಿದೆ. 