ವಿದ್ಯಾರ್ಥಿಗಳ ಅನಿಸಿಕೆಗಳು - ಸಂಚಿಕೆ - 2 : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು
Wednesday, November 20, 2024
Edit
ವಿದ್ಯಾರ್ಥಿಗಳ ಅನಿಸಿಕೆಗಳು - ಸಂಚಿಕೆ - 2 : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಪ್ರಶಸ್ತಿ ವಿಜೇತರು
◾ ರಾಮಚರಣತೇಜ ಹೆಗಡೆ
◾ಶ್ರೇಯಾ ಆರ್ ನಾಯ್ಕ
◾ ನಿನಾದ್ ಕೈರಂಗಳ
◾ಚಶ್ಮಿ
◾ ವಿಸ್ಮಿತ ಎಂ

ಮತ್ತು
ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ - 2024
ಪ್ರಶಸ್ತಿ ಪಡೆದ ಹಾಗೂ ಮೆಚ್ಚುಗೆ ಬಹುಮಾನ ವಿಜೇತ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ...
ವಿದ್ಯಾರ್ಥಿಗಳು ನೀಡಿರುವ ಪ್ರತಿಯೊಂದು ಅನಿಸಿಕೆಗಳು ಕೂಡ ಬೆಳೆಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಮಕ್ಕಳ ಜಗಲಿಯಿಂದ ನೀಡಲಾಗುವ ಪ್ರಶಸ್ತಿಗಳಲ್ಲಿ ಪ್ರಥಮ ಅಥವಾ ದ್ವಿತೀಯ ಎನ್ನುವುದಾಗಿರುವುದಿಲ್ಲ. ಅವು ಸಮಾನ ಪ್ರಶಸ್ತಿಗಳು. ಹಾಗೂ ಪ್ರತಿಭಾವಂತ ಎಲ್ಲಾ ಸಾಹಿತ್ಯ ಪ್ರತಿಭೆಗಳಿಗೆ ಈ ಪ್ರಶಸ್ತಿಗಳು ಹಂಚಿ ಹೋಗಬೇಕೆನ್ನುವ ದೃಷ್ಟಿಯಿಂದ ಒಂದು ಬಾರಿ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಅದೇ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.... ಅವರ ಉತ್ತಮ ಕೃತಿಗಳನ್ನು ಮೆಚ್ಚುಗೆ ಬಹುಮಾನಕ್ಕೆ ಮಾತ್ರ ಪರಿಗಣಿಸಲಾಗುತ್ತದೆ...
ಹಾಗೂ ಮಕ್ಕಳ ಜಗಲಿಯ ಉದ್ದೇಶ ಕೇವಲ ಸ್ಪರ್ಧೆಗಾಗಿ ಮಾತ್ರ ಪ್ರೇರೇಪಿಸುವುದಲ್ಲ... ಬದಲಾಗಿ ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಕಥೆ ಕವನಗಳನ್ನು ಕಳುಹಿಸಿಕೊಟ್ಟು ತಮ್ಮ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ ಬಳಸಿಕೊಳ್ಳಬೇಕೆನ್ನುವುದಾಗಿದೆ... ಇಲ್ಲಿ ಪ್ರಶಸ್ತಿ ಗಳಿಸಿರುವ ಎಷ್ಟೋ ವಿದ್ಯಾರ್ಥಿಗಳು ಮಕ್ಕಳ ಜಗಲಿ ಆರಂಭವಾದಾಗಿನಿಂದ ನಿರಂತರವಾಗಿ ಭಾಗವಹಿಸುತ್ತಾ ಬಂದಿರುವವರಾಗಿರುವುದು ಹೆಮ್ಮೆಯ ಸಂಗತಿ...
ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಎಲ್ಲಾ ಪೋಷಕರಿಗೆ ಹಾಗೂ ಶಿಕ್ಷಕರಿಗೆ... ಮತ್ತು ಮಕ್ಕಳ ಜಗಲಿಯ ಹಿಂದೆ ಬೆನ್ನೆಲುಬಾಗಿರುವ ಮಕ್ಕಳ ಜಗಲಿ ಬಳಗಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು...
ತಾರಾನಾಥ್ ಕೈರಂಗಳ
5, 6, 7, 8ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಕವನ ಸಿರಿ ಪ್ರಶಸ್ತಿ - 2024
◾ ರಾಮಚರಣತೇಜ ಹೆಗಡೆ, 8ನೇ ತರಗತಿ
ಮರೆಯೊಳಿಹ ಪ್ರತಿಭೆಗಳ ಗುರುತಿಸಿ
ತರಳರನು ಮುನ್ನೆಲೆಗೆ ತರುತಲಿ
ಹಿರಿಯ ಕಾರ್ಯವ ಮಾಡಿಹಿರಿ ಸಾಹಿತ್ಯ ಕ್ಷೇತ್ರದಲಿ
ಸರುವರಿಗು ವೇದಿಕೆಯ ನೀಡುತ
ಕಿರಿಯ ಲೇಖನಿಗಳನು ಬೆಳೆಸಿಹ
ಸಿರಿಯ ಸಂಸ್ಥೆಯಿದಹುದು ಮಕ್ಕಳ ಜಗುಲಿಯದು ತಾನು//
ಮಾನ್ಯರೇ, ಯಾವುದೇ ಒಂದು ಗೃಹಕ್ಕೆ ಜಗುಲಿಯೇ ಪ್ರಥಮ ಪ್ರವೇಶ ತಾಣ. ಅಂತೆಯೇ ಸಾಹಿತ್ಯ ಲೋಕ ಎಂಬುದೊಂದು ಮನೆ ಎಂದಾದಲ್ಲಿ ಕಿರಿಯ ಸಾಹಿತಿಗಳು ಅದರೊಳಗೆ ದಾಪುಗಾಲಿಡಲು ಮಕ್ಕಳ ಜಗುಲಿಯು ಅತಿ ಪ್ರಶಸ್ತವೆನಿಸಿದೆ. ಹೀಗೆ ರಾಜ್ಯದ ಮೂಲೆ ಮೂಲೆಯಲ್ಲಿನ ಪ್ರತಿಯೊಬ್ಬ ಬಾಲ ಸಾಹಿತ್ಯ ಪ್ರೇಮಿಗೂ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸಿದ್ದೀರಿ. ಇಂತಹ ಸಾವಿರಾರು ಸಾಹಿತ್ಯ ತಾರೆಗಳಲ್ಲಿ ಒಬ್ಬನಾಗಿ ಮಿನುಗಲು ನನಗೂ ದಾರಿ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಮುಂದೆಯೂ ಸಾಹಿತ್ಯ ಕ್ಷೇತ್ರದ ಅಭ್ಯುದಯಕ್ಕೆ ಸಹಕರಿಸಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸುವಿರೆಂದು ಆಶಿಸುತ್ತಾ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ನಾನು ನನ್ನ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿದ ತಮಗೆ ಅನಂತಾನಂತ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ.
ಕವನ ಸಿರಿ ಪ್ರಶಸ್ತಿ - 2024
8ನೇ ತರಗತಿ
ಶ್ರೀ ಗಜಾನನ ಸೆಕೆಂಡರಿ ಸ್ಕೂಲ್, ಹೆಗಡೆಕಟ್ಟಾ
ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಭೂಮಿ - ಬಾನು
*********************************************
9, 10,11,12ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ
◾ಶ್ರೇಯಾ ಆರ್ ನಾಯ್ಕ, 10ನೇ ತರಗತಿ
ಶ್ರೀ ಗುರುಭ್ಯೋ ನಮಃ ಪ್ರಥಮವಾಗಿ ಗುರುಗಳಿಗೆ ವಂದಿಸುತ್ತಾ ನನ್ನ ಒಂದೆರಡು ಅನಿಸಿಕೆಗಳನ್ನು ಹೇಳ ಬಯಸುತ್ತೇನೆ.
ನನಗೆ ಕಥೆ, ಕವನ ಬರೆಯುವ ಹವ್ಯಾಸ 6ನೇ ತರಗತಿಯಿಂದ ಆರಂಭವಾಯಿತು. ಈ ಒಂದು ಹವ್ಯಾಸಕ್ಕೆ ಸ್ಪೂರ್ತಿ ನನ್ನ ತಂದೆ, ತಾಯಿ ಆಗಿದ್ದಾರೆ. ನಾನು ಚಿಕ್ಕವಳಾಗಿದ್ದಾಗಿನಿಂದ ನನ್ನ ತಂದೆ ತಾಯಿ ಕಥೆ, ಕವನ ಬರೆಯುವುದನ್ನು ನೋಡುತ್ತಿದ್ದೆ. ಅದರಿಂದ ಪ್ರಭಾವಿತಳಾಗಿ ನಾನು ಕೂಡ 6ನೇ ತರಗತಿಯಲ್ಲಿ ಚುಟುಕು ಕವನಗಳನ್ನು ಬರೆಯಲು ಆರಂಭಿಸಿದೆ. ಬರೆದ ಕಥೆ ಕವನಗಳನ್ನು ತಂದೆ ತಾಯಿಗೆ ತೋರಿಸಿ ಅದರಲ್ಲಿ ಏನಾದರೂ ತಪ್ಪಿದ್ದರೆ ಅವರು ಸರಿ ಮಾಡುತ್ತಿದ್ದರು. ಹೀಗೆ ನನ್ನ ಈ ಕಥೆ ಕವನ ಬರೆಯುವ ಹವ್ಯಾಸ ನಿರಂತರವಾಗಿ ಮುಂದುವರಿಯುತ್ತಾ ಹೋಯಿತು. ಈ ಹವ್ಯಾಸದಿಂದಲೇ ಇಂದು ನಾನು 'ಕವನ ಸಿರಿ 2024ರ ಮೆಚ್ಚುಗೆ ಬಹುಮಾನವನ್ನು ಪಡೆದಿರುತ್ತೇನೆ. ಈ ಒಂದು ಬಹುಮಾನವನ್ನು ಪಡೆಯಲು ನನಗೆ ಸಹಾಯ ಮಾಡಿದ ನನ್ನ ತಂದೆ, ತಾಯಿಗಳಿಗೆ ನನ್ನ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. ಮೆಚ್ಚುಗೆ ಪ್ರಶಸ್ತಿ ಬಂದಾಗ ನನಗೆ ತುಂಬಾ ಖುಷಿಯಾಯಿತು. ಕೊಂಚ ಬೇಸರವೂ ಆಯಿತು. ಪ್ರಥಮ ಬಹುಮಾನ ನನ್ನದಾಗಲಿಲ್ಲಎಂಬ ಬೇಸರ. ನಂತರ ಸ್ಪರ್ಧೆ ಎಂದ ಮೇಲೆ ಯಾರಾದರೂ ಒಬ್ಬರು ಪ್ರಥಮ ಸ್ಥಾನ ಪಡೆದುಕೊಳ್ಳಲೇಬೇಕು. ಮುಂದೆ ನಾನು ಆ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತೇನೆ. ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ನನಗೆ ಅವಕಾಶ ನೀಡಿದ ಮಕ್ಕಳ ಜಗಲಿಯ ಸರ್ವ ಗುರು ವೃಂದದವರಿಗೂ, ಗುರುಗಳಾದ ತಾರಾನಾಥ್ ಕೈರಂಗಳ್ ಇವರಿಗೂ ಧನ್ಯವಾದಗಳು.
10ನೇ ತರಗತಿ
ಸಂದೀಪನ ಆಂಗ್ಲ ಮಾಧ್ಯಮ ಶಾಲೆ ನಾಗೂರು
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಒಲವಿನ ಹಣತೆ
*********************************************
5,6,7,8ನೇ ತರಗತಿ ವಿಭಾಗದ ಕಥಾ ಸ್ಪರ್ಧೆಯಲ್ಲಿ ಕಥಾ ಸಿರಿ ಪ್ರಶಸ್ತಿ - 2024
◾ ನಿನಾದ್ ಕೈರಂಗಳ, 7ನೇ ತರಗತಿ
ಕಥಾಸಿರಿ ಪ್ರಶಸ್ತಿ ಈ ವರ್ಷ ನನಗೆ ಬಂದದ್ದು ತುಂಬಾ ಖುಷಿಯಾಗುತ್ತಿದೆ. ಇದಕ್ಕೆ ಕಾರಣ ನನ್ನ ತಂದೆ ತಾಯಿಯ ಪ್ರೇರಣೆ ಹಾಗೂ ಶಾಲೆಯಲ್ಲಿನ ಮಾತಾಜಿ ಶ್ರೀಮಾನ್ ರವರ ಪ್ರೋತ್ಸಾಹ ನನ್ನನ್ನು ಇಷ್ಟರವರೆಗೆ ಬೆಳೆದು ನಿಲ್ಲಿಸಿದೆ. ನನಗೆ ಕಥೆ ಕವನದ ಅಭಿರುಚಿ ಹೇಗೆ ಮೂಡಿತು ಎಂದರೆ ಮೊದಲ ಬಾರಿಗೆ ನನಗೆ ಅವಕಾಶ ನೀಡಿದ್ದು ಚಿಗುರಲೆ ಸಾಹಿತ್ಯ ಪರಿಷತ್ತಿನಲ್ಲಿ ನಾರಾಯಣ ಕುಂಬ್ರ ಸರ್... ಈ ಬಳಗ ನೀಡಿದ ವೇದಿಕೆಯಲ್ಲಿ ನನ್ನ ಮೊದಲ ಕವನ ವಾಚನ ನಡೆಯಿತು... ಮತ್ತೆ ನಾನು ತುಂಬಾ ಕವನ ವಾಚನಕ್ಕೆ ಹೋಗಿ ಅನುಭವ ಸಿಕ್ಕಿತು. ನಂತರ ಸಣ್ಣ ಸಣ್ಣ ಕಥೆ ಬರೆಯತೊಡಗಿದೆ. ಅಮ್ಮ ಅಪ್ಪ, ಕಥೆಬರಿ ಚಿತ್ರ ಬಿಡಿಸಿ ಕೊಡು ಜಗಲಿಗೆ ಹಾಕುವ ಅನ್ನುತ್ತಿದ್ದರು. ಹೀಗೆ ಕಥೆಯ ಹವ್ಯಾಸ ಬೆಳೆಸಿಕೊಂಡೆ. ಹಾಗೂ ಮಕ್ಕಳ ಜಗಲಿಯಲ್ಲಿ ನಾನು ತುಂಬಾ ಚಿತ್ರ-ಕಥೆಗಳನ್ನು ಬರೆಯುತ್ತಿದ್ದೆ. ಇದರಿಂದ ಹಲವಾರು ಜನರು ಕಥೆಯನ್ನುಓದಿ ಕಥೆ ಚೆನ್ನಾಗಿದೆ ಎಂದು ಹೇಳುತ್ತಿದ್ದರು. ಇದು ಇನ್ನಷ್ಟು ಬರೆಯಲು ನನಗೆ ಪ್ರೇರಣೆ ನೀಡುತ್ತಿತ್ತು. ಹಾಗೆಯೆ ನನಗೆ, ಕವನ , ಕಥೆ, ಭಾಷಣ , ಚಿತ್ರಗಳಲ್ಲಿ ಸಿಕ್ಕಿದ ಹಲವಾರು ಬಹುಮಾನಗಳಲ್ಲಿ ಪ್ರಶಸ್ತಿ ಅಂತ ಸಿಕ್ಕಿರುವುದು ಇದೇ ಮೊದಲು. ಅದುವೇ ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ. ಮುಂದೆ ಸಮಯ ಸಿಕ್ಕಾಗಲೆಲ್ಲಾ ಒಳ್ಳೆಯ ಕಥೆಗಳನ್ನು ಓದುತ್ತಾ ಇನ್ನಷ್ಟು ಕಥೆ ಕವನಗಳನ್ನು ಬರೆದು ನಿರಂತರವಾಗಿ ಮಕ್ಕಳ ಜಗಲಿಯಲ್ಲಿ ಪ್ರಕಟಗೊಳಿಸುತ್ತಾ ಇರಬೇಕೆಂಬುದು ನನ್ನ ಆಸೆ.
ಕಥಾ ಸಿರಿ ಪ್ರಶಸ್ತಿ - 2024
7ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಘಮಿಸಿದ ಹಳದಿ ಹಲಸು
**********************************************
9, 10,11,12ನೇ ತರಗತಿ ವಿಭಾಗದ ಕಥಾ ಸ್ಪರ್ಧೆಯಲ್ಲಿ ಕಥಾ ಸಿರಿ ಪ್ರಶಸ್ತಿ - 2024
◾ಚಶ್ಮಿ, 9ನೇ ತರಗತಿ
ಮಕ್ಕಳ ಜಗಲಿ ಎಂಬ ವೇದಿಕೆ ನನಗೆ ಸುಮಾರು ಮೂರು ವರ್ಷಗಳಿಂದ ನನ್ನ ಕುಟುಂಬದ ಹಾಗೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಪ್ರೇರೇಪಿಸಿಕೊಂಡು ಬಂದಿದೆ. ಮಾನ್ಯ ಗುರುಗಳಾದ ತಾರಾನಾಥ್ ಕೈರಂಗಳ್ ಸರ್ ರವರಿಗೆ ಮತ್ತು ತುಳಸಿ ಕೈರಂಗಳ್ ಮೇಡಂ ರವರಿಗೆ ಅನಂತ ವಂದನೆಗಳು. ನಾನು ಮಕ್ಕಳ ಜಗಲಿಯಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ಮೊನ್ನೆಯಷ್ಟೇ ನಡೆದ ಮಕ್ಕಳ ಜಗಲಿಯ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ಭಾಗವಹಿಸಿ, ನನಗೆ ಕಥೆಯಲ್ಲಿ ಕಥಾ ಸಿರಿ ಪ್ರಶಸ್ತಿ ಲಭಿಸಿದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಮನೆಯವರಿಗೂ ಸಂತೋಷವನ್ನು ತಂದು ಕೊಟ್ಟಿದೆ. ಹೀಗೆ ಇನ್ನೂ ಮುಂದೆಯೂ ಮಕ್ಕಳ ಜಗಲಿ ವೇದಿಕೆಯು ಹೆಚ್ಚು ಹೆಚ್ಚು ಮುಂದುವರೆಯುತ್ತಾ ಹೋಗಲಿ ಎಂದು ನಾವು ಆಶಿಸುತ್ತೇವೆ. ಧನ್ಯವಾದಗಳು...
ಕಥಾ ಸಿರಿ ಪ್ರಶಸ್ತಿ - 2024
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ ವಾಮದಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಸಂಭ್ರಮದ ದೀಪಾವಳಿ
*********************************************
5,6,7,8ನೇ ತರಗತಿ ವಿಭಾಗದ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ - 2024
◾ ವಿಸ್ಮಿತ ಎಂ, 8ನೇ ತರಗತಿ
ಮಕ್ಕಳ ಜಗಲಿ ವೇದಿಕೆಯ ಕವನ ಸಿರಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತೇನೆ. ಈ ಕವನಸಿರಿ ಸ್ಪರ್ಧೆಯಲ್ಲಿ ಮೆಚ್ಚುಗೆಯ ಕವನಗಳಲ್ಲಿ ನನ್ನ ಕವನವೂ ಒಂದು. ನನಗೆ ತುಂಬಾ ಅಂದರೆ ತುಂಬಾ ಖುಷಿಯಾಯಿತು. ನಾನು ಕನಸಲ್ಲೂ ಊಹಿಸಿರಲಿಲ್ಲ. ಇದಕ್ಕೆ ಕಾರಣ ನನ್ನ ಸಾಹಿತ್ಯದ ಮೇಲಿನ ಪ್ರೀತಿ ಮತ್ತು ಆಸಕ್ತಿ. ನಾನು ಕವನಗಳನ್ನು ಬರೆಯುವುದಕ್ಕೆ ಪ್ರಾರಂಭ ಮಾಡಿ 4 ವರ್ಷಗಳಾಯಿತು. ಆದರೆ ಸರಿಯಾಗಿ ಬರೆಯಲು ಪ್ರಾರಂಭ ಮಾಡಿ ಕೇವಲ 2 ವರ್ಷವಾಯಿತು. ನನಗೆ ಕವನ ಬರೆಯಲು ತುಂಬಾ ಅಂದರೆ ತುಂಬಾ ಪ್ರೋತ್ಸಾಹ ಮಾಡಿದವರು ಯಾರು ಅಂದ್ರೆ ಅವರು ನನ್ನ ಅಮ್ಮ. ನಾನು 4 ನೇ ತರಗತಿಯಲ್ಲಿರುವಾಗಲೇ ನೀನು ಕವನ ಬರೆಯಲು ಆರಂಭ ಮಾಡು ನಾನು ಪ್ರೋತ್ಸಾಹ ನೀಡುತ್ತೇನೆ ಅಂದವರು. ಹಾಗೆಯೇ ನನ್ನ ಮೊದಲ ಗುರು ಅಮ್ಮ. ನಂತರದ ಗುರು ಜನಾರ್ಧನ ದುರ್ಗಾ ಎಂಬವರು. .ಅದರ ನಂತರ ವಿದ್ಯಾಶ್ರೀ (ಶ್ರೀನಿವಾಸವಿ ತುಳುನಾಡ್) ಎಂಬವರು. ಅವರ ಪ್ರೋತ್ಸಾಹದಿಂದಲೇ ನಾನು ಹಲವಾರು ಕವನಗಳನ್ನು ಬರೆದಿದ್ದೇನೆ. ಹಾಗೆಯೇ ಶಾಲೆ, ಶಾಲೆಯಲ್ಲಿ ನನಗೆ ನನ್ನ ಎಲ್ಲಾ ಗುರುಗಳು ಕೂಡ ತುಂಬಾ ಪ್ರೋತ್ಸಾಹ ನೀಡುತ್ತಾರೆ. ನನಗೆ ಈ ಪ್ರಶಸ್ತಿ ದೊರೆತಾಗ ನನಗೆ ಎಂದೂ ಆಗದ ಖುಷಿ ಆಯ್ತು. ನನಗೆ ಪ್ರಶಸ್ತಿ ದೊರೆತಾಗ ನನ್ನ ನಲ್ಮೆಯ ಗೆಳತಿ ವಿನ್ಯಶ್ರೀ ಎಂಬವಳು ನನಗೆ ರಾತ್ರಿಯೇ ಕಾಲ್ ಮಾಡಿ ಅಭಿನಂದನೆ ತಿಳಿಸಬೇಕೆಂದಿದ್ದಳು ಆದರೆ ಸಿಡಿಲು ಮಿಂಚು ಬರುತ್ತಿತ್ತು. ಅದಕ್ಕಾಗಿ ನಾನು ಕಾಲ್ ಕಟ್ ಮಾಡಿದೆ. ಮರುದಿನ ಶಾಲೆಯಲ್ಲಿ ಸಿಕ್ಕಾಗ ಅವಳು ಮತ್ತು ನನ್ನ ಎಲ್ಲಾ ಗೆಳೆಯರು ಅಭಿನಂದನೆಯನ್ನು ತಿಳಿಸಿದರು. ನನಗೆ ತುಂಬಾ ಖುಷಿಯಾಯಿತು. ನನ್ನ ಈ ಸಾಹಿತ್ಯ ಬೆಳವಣಿಗೆಗೆ ನನ್ನ ಅಮ್ಮ ಮತ್ತು ನನ್ನ ಎಲ್ಲಾ ಗುರುಗಳು ಮತ್ತು ಗೆಳೆಯರು ಕಾರಣವಾಗಿದ್ದಾರೆ. ತಮಗೆಲ್ಲರಿಗೂ ಈ ಮೂಲಕ ತುಂಬು ಹೃದಯದ ಧನ್ಯವಾದಗಳನ್ನೂ ಹೇಳಲು ಬಯಸುತ್ತೇನೆ. ಹಾಗೂ ಮಕ್ಕಳ ಜಗಲಿ ವೇದಿಕೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು..........
8ನೇ ತರಗತಿ
ದ ಕ ಜಿ ಪಂ ಉ ಹಿ ಪ್ರಾಥಮಿಕ ಶಾಲೆ ಬಡಗನ್ನೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮುಸ್ಸಂಜೆ ಮತ್ತು ನಾನು
*********************************************
5,6,7,8ನೇ ತರಗತಿ ವಿಭಾಗದ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ
◾ಬೃಂದಾ ಎನ್ ಕಾಂಚನ್, 7ನೇ ತರಗತಿ
ಬಾಲ್ಯದಲ್ಲೇ ಅಪ್ಪ ನಮಗೆ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಹಾಗೆ ಕಥೆ ಹೇಳಿ ಮುಗಿದು ಹೋದಾಗ ಅವರೇ ಸ್ವತಹ ಅನೇಕ ಕಥೆಗಳನ್ನು ರಚಿಸಿ ನಮ್ಮ ಮುಂದೆ ಹೇಳುತ್ತಿದ್ದರು. ಮೊದ ಮೊದಲು ನಾವು ಅದನ್ನು ಸತ್ಯ ಎಂದು ಅಂದುಕೊಳ್ಳುತ್ತಿದ್ದೆವು... ಕೊನೆಗೆ ಅಪ್ಪನೇ ಕಥೆಯನ್ನು ಕಟ್ಟಿದ್ದಾರೆಂದು ತಿಳಿಯುತ್ತಿತ್ತು. ಆವಾಗ ನಮಗೆ ಸಂತೋಷವಾಗುತ್ತಿತ್ತು. ನಾನು ಮತ್ತು ನನ್ನ ತಮ್ಮ ಕೂಡ ಅದೇ ರೀತಿ ಕಥೆಗಳನ್ನು ಕಟ್ಟುವ ಪ್ರಯತ್ನವನ್ನು ಮಾಡಿ ಅಪ್ಪನಿಗೆ ಪುನಃ ಹೇಳುತ್ತಿದ್ದೆವು. ಅಪ್ಪ ತುಂಬಾ ಪ್ರೋತ್ಸಾಹಿಸು ತ್ತಿದ್ದರು. ಅಷ್ಟೇ ಅಲ್ಲದೆ ನಾವು ದಿನ ಒಂದು ಕಥೆ ಸೃಷ್ಟಿಸಿ ಹೇಳಿ 10 ರೂಪಾಯಿಯನ್ನು ಅಪ್ಪನಿಂದ ವಸೂಲಿ ಮಾಡುತ್ತಿದ್ದೆವು. ಹಾಗೆ ಶಾಲೆಯಲ್ಲಿಯೂ ಕೂಡ ಗ್ರಂಥಾಲಯದ ಕಥೆ ಪುಸ್ತಕಗಳನ್ನು ನಾನು ಪಡೆದುಕೊಳ್ಳುತ್ತಿದ್ದೆ. ನನ್ನ ಅಧ್ಯಾಪಕರಿಗೆ ಅಚ್ಚುಮೆಚ್ಚಿನವಳಾದ ಕಾರಣ ಒಳ್ಳೆಯ ಪುಸ್ತಕಗಳನ್ನು ಆಯ್ದುಕೊಡುತ್ತಿದ್ದರು. ಆ ಪುಸ್ತಕಗಳಿಗೆ review ಬರೆಯುತ್ತಿದ್ದೆ. ಇದೆಲ್ಲವೂ ನನಗೆ ಪೂರಕ ಪ್ರೇರಕವಾಯಿತು. ನನ್ನ ಪ್ರಥಮದ ಕಥೆಗೆ ಈ ರೀತಿಯ ಒಂದು ಪುರಸ್ಕಾರ ಸಿಗುವುದು ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಇದು ನನಗೆ ಮರೆಯಲಾರದ ಘಟನೆ. ನನ್ನ ಹೆಮ್ಮೆಯ ಕ್ಷಣ ಈ ಪುರಸ್ಕಾರ ಸಿಕ್ಕ ಮೇಲೆ ನನಗೂ ನನ್ನ ತಂದೆ ತಾಯಿಯರಿಗೂ ಸಹಪಾಠಿಗಳಿಗೂ, ಶಾಲೆಯವರೆಗೂ ಶಬ್ದಗಳಲ್ಲಿ ಹೇಳಲು ಅಸಾಧ್ಯವಾದ ಖುಷಿಯಾಯಿತು.