-->
ಶಂಭೂರಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಶಂಭೂರಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಶಂಭೂರಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ


ಮಕ್ಕಳ ಕಲಾ ಲೋಕ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕವು 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಂಟ್ವಾಳ ತಾಲೂಕಿನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ದಿನಾಂಕ: 19.11.2024ರಂದು ಜರುಗಿಸಲಿದೆ. 

ಶೇಡಿಗುರಿಯಿಂದ ಹೊರಡಲಿರುವ ಮೆರವಣಿಗೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಉದ್ಘಾಟಿಸಲಿರುವರು. ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷಾ ಸರ್ವಾಧ್ಯಕ್ಷತೆ ವಹಿಸಲಿರುವರು. 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕಡೇಶಿವಾಲಯ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಸುವರ್ಣ ಸಮ್ಮೇಳನವನ್ನು ಉದ್ಘಾಟಿಸುತ್ತಾರೆ. 

ಮಕ್ಕಳ ಸ್ವರಚಿತ ಕೃತಿಗಳನ್ನು ಸಾಹಿತಿ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಬಿಡುಗಡೆ ಮಾಡುವರು. ಬೆಳ್ತಂಗಡಿ ವಾಣಿ ಪಿ.ಯೂ ಕಾಲೇಜಿನ ದ್ವಿತೀಯ ಪಿ.ಯು. ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ವಿಭಾ ಕೆ ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಗಣ್ಯರಾದ ಶ್ರೀಧರ ಶೆಟ್ಟಿ ಪುಳಿಂಚ ಮತ್ತು ರಾಧಾಕೃಷ್ಣ ಪುತ್ತೂರು ಉಪಸ್ಥಿತರಿರುತ್ತಾರೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾದ ಆನಂದ ಎ ಶಂಭೂರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.

ಪ್ರಾಥಮಿಕದಿಂದ ಪದವಿಪೂರ್ವ ಕಾಲೇಜು ತನಕದ ಸುಮಾರು ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಕಿರು ನಾಟಕ, ಕಲಾ ರಂಗ ಸಂಗಮ, ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಶಿಕ್ಷಕರು, ಪಾಲಕರು ಮತ್ತು ಸಾಹಿತ್ಯಾಭಿಮಾನಿಗಳು ಬರುವವರಿದ್ದಾರೆ. ಊರವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಒಟ್ಟು 1500 ಜನರು ಆಗಮಿಸುವ ನಿರೀಕ್ಷೆಯಿದೆ. 

ಸರ್ವರ ಸಹಯೋಗವನ್ನು ಸ್ವಾಗತ ಸಮಿತಿಯು ಅಪೇಕ್ಷಿಸಿದೆ. ಗ್ರಾಮಪಂಚಾಯತ್, ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರನ್ನು ಸಮ್ಮೇಳನದ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ದಿನವಿಡೀ ಜರಗುವ ಮಕ್ಕಳ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸ್ವಾಗತ, ನಿರೂಪಣೆ, ಧನ್ಯವಾದ, ಗೋಷ್ಠಿಯ ಅಧ್ಯಕ್ಷತೆಯನ್ನು ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ಹೇಳಿದರು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಸಹಕರಿಸುತ್ತಿದ್ದು ತಾಲೂಕಿನ ಶಿಕ್ಷಣ ಇಲಾಖೆಯ ಸಂಪೂರ್ಣ ಸಹಯೋಗವಿದೆ. ಉಪಾಧ್ಯಕ್ಷರಾಗಿ ರಾಜೇಶ್ ಶಾಂತಿಲ ಮತ್ತು ಹೆನ್ರಿ ಬುಕೆಲ್ಲೋ ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯರಾದ ಜಯರಾಮ ಡಿ ಪಡ್ರೆ ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು ಅವರ ಸಂಪೂರ್ಣ ಸಹಯೋಗವಿದೆ ಎಂದು ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು ವಿವರಿಸಿದರು. 

ಸಾಹಿತ್ಯ ರಚನೆಗೆ ವಿಷಯವನ್ನು ಸಮ್ಮೇಳನದ ದಿನ ಬೆಳಗ್ಗೆ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತ ಸಾಹಿತ್ಯ ಕ್ಷೇತ್ರದಲ್ಲಿ ಸ್ವರಚನೆ ಮಾಡುತ್ತಾರೆ. ಅಪರಾಹ್ನ ಜರಗುವ ಸಮಾರೋಪ ಸಮಾರಂಭದಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಹನ್ಸಿಕಾ ಎಸ್ ಡಿ ಪೂಜಾರಿ ಸಮಾರೋಪ ಬಾಷಣ ನೀಡಲಿರುವರು. ನಿವೃತ್ತ ಮುಖ್ಯ ಶಿಕ್ಷಕಿ ನೀಲಮ್ಮ ಮತ್ತು ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಸಚ್ಚಿದಾನಂದರು ಉಪಸ್ಥಿತರಿರುತ್ತಾರೆ. 

ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಓಜಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾಹಿತ್ಯ ತಾರೆ ಪ್ರಶಸಸ್ತಿಯನ್ನು ಹಾಗೂ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲಾ ಸಹಾಯಕ ಶಿಕ್ಷಕಿ ಸುಧಾ ನಾಗೇಶ್ ಇವರಿಗೆ ಬಾಲಬಂಧು ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದೂ ಬಾಯಾರ್ ತಿಳಿಸಿದರು.

ಸೂಚನೆ : ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳಿಂದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳ ಒಟ್ಟು ಸಂಖ್ಯೆಯನ್ನು ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮುಂಚಿತವಾಗಿ 9480575939 ಈ ಸಂಖ್ಯೆಗೆ ಕರೆ ಅಥವಾ ಸಂದೇಶದ ಮೂಲಕ ತಿಳಿಸಿ ವ್ಯವಸ್ಥೆಯಲ್ಲಿ ಸಹಕರಿಸಬೇಕು ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ಡಿ. ಪಡ್ರೆ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಸಮ್ಮೇಳನದ ಪ್ರಚಾರ ಸಮಿತಿಯ ಸಂಚಾಲಕ ಚಿನ್ನಾ ಕಲ್ಲಡ್ಕ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಂಭೂರಿನಲ್ಲಿ ಹದಿನೆಂಟನೇ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ....





Ads on article

Advertise in articles 1

advertising articles 2

Advertise under the article