-->
ಜಗಲಿ ಕಟ್ಟೆ : ಸಂಚಿಕೆ - 61

ಜಗಲಿ ಕಟ್ಟೆ : ಸಂಚಿಕೆ - 61

ಜಗಲಿ ಕಟ್ಟೆ : ಸಂಚಿಕೆ - 61
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಬರದಿಹುದರೆಣಿನಿಕೆಯಲಿ 
ಬಂದಿಹುದ ಮರೆಯದಿರು ।
ಗುರುತಿಸೊಳಿತಿರುವುದನು 
ಕೇಡುಗಳ ನಡುವೆ ।।
ಇರುವ ಭಾಗ್ಯವ ನೆನೆದು 
ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।
    ಕೈಗೆ ಸಿಗದೇ ಇರುವುದರ ನಿರೀಕ್ಷೆಯಲ್ಲಿ ಕೈ 
ಯಲ್ಲಿರುವುದನ್ನು ಮರೆಯದಿರು. ನಮಗೆ ಗೋಚರಿಸುವ ಬಹಳಷ್ಟು ಕೇಡುಗಳ ಮದ್ಯೆ ಒಳ್ಳೆಯದನ್ನು ಗುರುತಿಸು. ಕೈಗೆ ಸಿಗುವುದಿಲ್ಲ ಎನ್ನುವ ಚಿಂತೆಯನ್ನು ಬಿಟ್ಟು ಕೈಯಲ್ಲೇ ಇರುವ ಭಾಗ್ಯವನ್ನು ತೃಪ್ತಿಯಿಂದ ಅನುಭವಿಸು. ಆನಂದಕ್ಕೆ, ಸಂತೋಷಕ್ಕೆ ಇದುವೇ ದಾರಿ ಎಂದು ಮಾನ್ಯ ಡಿ. ವಿ. ಜಿಯವರು ಹೇಳಿರುವ ಸಾಲು ನೆನಪಾಗಲು ಒಂದು ಕಾರಣ ಇದೆ. 
       ಕೆಲ ವರ್ಷಗಳ ಹಿಂದೆ ಮಕ್ಕಳ ಶಿಬಿರದಲ್ಲಿ ಸಿಕ್ಕಿದ್ದ ಹುಡುಗನೊಬ್ಬ ಕೆಲ ದಿನಗಳ ಹಿಂದೆ ಮತ್ತೆ ಒಂದು ಕಡೆ ಸಿಕ್ಕಿ ಮಾತನಾಡಲು ಶುರು ಮಾಡಿದ. ಬಹಳ ಗಂಭೀರ ಧ್ವನಿಯಲ್ಲಿ.... "ಸರ್ ದಾರಿಯಲ್ಲಿ ಹೋಗೋ ಕೆಲವು ಮಕ್ಕಳು, ನನ್ನನ್ನು ದಡ್ಡ, ಪೆದ್ದ ಅಂತಾರೆ... ಏನು ತೊಂದರೆ ಮಾಡದೆ ನನ್ನಷ್ಟಕ್ಕೇ ಹೋಗ್ತಿರುವಾಗ ಈ ರೀತಿ ಕೀಳು ಮಾಡುವುದು ಯಾಕೆ..? ಮನೆಯಲ್ಲಿ ಯಾಕೆ ಅವರಿಗೆ ಸಂಸ್ಕಾರ ಕಲಿಸಿಕೊಡಲ್ಲ... ? ಶಾಲೆಯಲ್ಲಿ ಯಾಕೆ ಅವರಿಗೆ ಬುದ್ಧಿ ಹೇಳಲ್ಲ...?" ಬಹಳ ಸಿಟ್ಟಿನಿಂದ ಮಾತು ಮುಂದುವರಿಸಿದ. "ಅಲ್ಲ ನನಗೆ ಅವರ ಮೇಲೆ ಕಂಪ್ಲೇಂಟ್ ಕೊಡೋಣ ಅನ್ನಿಸ್ತಿದೆ... ವಿಡಿಯೋ ಮಾಡಿ ದಾಖಲೆ ಇಟ್ಟು ಬೇರೆಯವರಿಗೆ ತಿಳಿಸಬೇಕು ಅಂತ ಅನಿಸ್ತಿದೆ..." ಹೀಗೆಲ್ಲ ತನ್ನ ವೇದನೆಯನ್ನು ಅಂತರಾಳದಿಂದ ಹೊರಹಾಕಿ ತನ್ನ ಅಸಹಾಯಕತೆಯನ್ನು ತೋರಿಸಿದ.
       "ಹೌದು ನಾನು ಸಣ್ಣ ತರಗತಿಯಲ್ಲಿರುವಾಗ ತುಂಬಾ ಕಲಿತಿದ್ದೆ.. ತುಂಬಾ ಕಲಿತಿದ್ದುದೇ ತಪ್ಪು ಅನ್ನಿಸಿತು.. ಇನ್ನೂ ಓದು, ಮಾರ್ಕು ಇನ್ನೂ ಜಾಸ್ತಿ ಬರ್ಲಿ ಅಂದು ಆಟಕ್ಕೂ ಕಳಿಸದೆ, ಚಿತ್ರಕ್ಕೂ ಸೇರಿಸದೆ ಒಂದೇ ಸವನೆ ಪಾಠ ಪಾಠ ಎಂದು ಬಂಧಿಸಿಬಿಟ್ರು... ಪಂಜರದೊಳಗಿನ ಪಕ್ಷಿಯಾದೆ... ಮನಸೆಲ್ಲಾ ಕೀಳರಿಮೆಯೇ ತುಂಬ್ಕೊಂಡಿತು. ಆಲೋಚನೆಗಳೆಲ್ಲ ಋಣಾತ್ಮಕವೇ ಆಯಿತು. ಭಾವನೆಗಳೇ ಸತ್ತುಹೋದ ಹಾಗೆ... ಕಲಿಯುವ ಆಸಕ್ತಿ ಅಷ್ಟಕ್ಕಷ್ಟೇ... ಗಣಿತ ಕಬ್ಬಿಣದ ಕಡಲೆಯಾಯಿತು. ಶಾಲಾ ಶಿಕ್ಷಕರಿಂದ "ನೀನು ಎಲ್ಲಿ ಹೋದ್ರೂ ಉದ್ಧಾರ ಆಗಲ್ಲ ಅನ್ನುವ ಹಣೆಪಟ್ಟಿ. ಹೀಗೆಲ್ಲಾದರೂ ಸಹಿಸಿಕೊಂಡು ಮುಂದುವರಿಯುತ್ತಿದ್ದೇನೆ. ಕೆಲವೊಮ್ಮೆ ಸತ್ತು ಬಿಡೋಣ ಅನಿಸಿದ್ದೂ ಇದೆ....!!" ಹೀಗೆ ಆ ಬಾಲಕ ಹೇಳೋ ಭಾವನಾತ್ಮಕವಾದ ಮಾತುಗಳು ಒಂದು ಕ್ಷಣ ನನ್ನನ್ನು ಸ್ತಬ್ಧಗೊಳಿಸಿ ಮರುಕ ಹುಟ್ಟಿಸಿತು.
       ಆತನ ತಂದೆ ಡಾಕ್ಟರ್... ತಾಯಿ ಗೃಹಿಣಿ ಇಬ್ಬರೂ ಸರ್ಟಿಫಿಕೇಟ್ ವಿದ್ಯಾವಂತರು. ಮಗನ ಸಹಜ ನಡೆಗೆ ಸ್ಪಂದಿಸದೆ ತಮ್ಮ ಮೂಗಿನ ನೇರಕ್ಕೆ ಮಗುವನ್ನು ಬೆಳೆಸಲು ಹೊರಟವರು. ತಂದೆಯಂತೆ ಮಗ ಡಾಕ್ಟರ್ ಆಗಬೇಕು ಅನ್ನುವ ಕನಸು ಕಂಡು, ದೊಡ್ಡ ದೊಡ್ಡ ಕಲ್ಪನೆಗಳನ್ನು ಕಟ್ಟಿ ಮಗನನ್ನು ತಮ್ಮದೇ ದೃಷ್ಟಿ ಕೋನದಲ್ಲಿ ಕಾಣಲು ಬಯಸಿದರು.. 
     ಆದರೆ ಮಗನ ನಿಲುವುಗಳೇ ಭಿನ್ನ. ಅಪ್ಪ ಅಮ್ಮ ಎಣಿಸಿದ ವೇಗಕ್ಕೆ ಸಾಗುವ ಧೈರ್ಯ ಸಾಲದೆ ಕುಬ್ಜನಾಗಿ ನಿಲ್ಲುವಂತಾಗಿದ್ದು ದುರಾದೃಷ್ಟಕರ. ಮಕ್ಕಳು ತನ್ನ ಹೆತ್ತವರನ್ನು ಪೂರ್ಣ ಅರ್ಥೈಸಿಕೊಳ್ಳುತ್ತಾರೆ. ಅಪ್ಪ ಅಮ್ಮನ ನಿರೀಕ್ಷೆಗೆ ತಕ್ಕುದಾದ ಮಗ ನಾನು ಅಲ್ಲ ಅನ್ನುವ ಪ್ರಜ್ಞೆಗೆ ತಂದೆ ತಾಯಿ ನೇರ ಹೊಣೆಯಾಗುತ್ತಿರುವುದನ್ನು ಕಂಡು ದುರಂತವೆನಿಸಿತು..!! 
       ಹೌದು ಆ ಬಾಲಕನ ಪ್ರತಿಯೊಂದು ಮಾತುಗಳ ಹಿಂದೆಯೂ ಆತ್ಮವಿಶ್ವಾಸದ ನಡೆಯಿತ್ತು. ಆ ಮಾತುಗಳಲ್ಲಿ ಪಕ್ವತೆ ಇತ್ತು. ಸಾಗುವ ದಾರಿಗೆ ತಂದೆ ತಾಯಿ ಬೆಂಗಾವಲಾಗಿ ಸದಾ ಇರಬೇಕೆನ್ನುವ ಹಂಬಲ ಬಲವಾಗಿತ್ತು. ಆದುದರಿಂದ ಮಕ್ಕಳ ಸಾಮರ್ಥ್ಯ, ಮಕ್ಕಳ ಅಭಿರುಚಿ, ಮಕ್ಕಳ ಕಾರ್ಯಕ್ಷೇತ್ರಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವಂತಹ ತಂದೆ ತಾಯಿಯರಾಗಬೇಕಾಗಿದೆ. ಪ್ರತಿಯೊಂದು ಮನೆಯ ಮಗು ಕೂಡಾ ಭಿನ್ನ ಹಾಗೂ ಶ್ರೇಷ್ಠ ಎಂದು ಬೆಳೆಸುವ ಮೂಲಕ ಮಕ್ಕಳ ನೆಮ್ಮದಿಗೆ ಕಾರಣರಾಗೋಣ.... ನಮಸ್ಕಾರಗಳು
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 60 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ರಮ್ಯಾ ಆರ್ ಭಟ್ - ಸಹ ಶಿಕ್ಷಕಿ, ಹಸೀನಾ ಮಲ್ನಾಡ್ ವಿಜ್ಞಾನ ಶಿಕ್ಷಕಿ, ಶ್ವೇತಾ ಹಳದೀಪುರ ಗಣಿತ ಶಿಕ್ಷಕಿ....... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಪ್ರಿಯ ಓದುಗರೇ ಎಲ್ಲರಿಗೂ ನನ್ನ ನಮಸ್ಕಾರಗಳು.. ಮಕ್ಕಳ ಜಗಲಿಯಲ್ಲಿ ಪ್ರತಿಯೊಬ್ಬ ಶಿಕ್ಷಕರು ನೀಡುವ ಮಾಹಿತಿ ಮತ್ತು ಸಲಹೆಗಳು, ತುಂಬಾ ಪ್ರಯೋಜನಕಾರಿ ಹಾಗೂ ಉತ್ತಮವಾಗಿವೆ. ದಿವಾಕರ ಶೆಟ್ಟಿ ಸರ್ ಅವರು ವಿಜ್ಞಾನದ ಬಗ್ಗೆ ನೀಡುತ್ತಿರುವ ವಿಷಯಗಳಂತು ಮಕ್ಕಳಿಗೆ ತುಂಬಾ ಸಹಾಯಕರವಾಗಿದೆ.. ಹೃದಯದ ಚಲನವಲನಗಳು, ಚಟುವಟಿಕೆಗಳ ಬಗೆಗಿನ ಅವರ ವಿಶ್ಲೇಷಣೆ ಅದ್ಭುತವಾಗಿದೆ... ಅದನ್ನು ಓದುತ್ತಿದ್ದರೆ ನನಗೆ ನಾನು ಶಾಲೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ಅನುಭವವಾಯಿತು... ಧನ್ಯವಾದಗಳು ಸರ್. ಜಗಲಿಯ ಮಕ್ಕಳ ಕವನಗಳನ್ನು ಓದಿದೆ.... ಆ ಕವನಗಳನ್ನು ಓದಿದ ನನಗೆ, ನನ್ನದೇ ಬಾಲ್ಯ ನೆನಪಾಯಿತು.... ನನ್ನ ವಿದ್ಯಾರ್ಥಿ ಜೀವನದಲ್ಲಿ ಕವನ ಬರೆಯುವ ಹವ್ಯಾಸ ನನಗೂ ಇತ್ತಾದರೂ, ಅದನ್ನು ಪ್ರೋತ್ಸಾಹಿಸುವವರು ಯಾರೂ ಇರಲಿಲ್ಲ. ಅದನ್ನು ಪ್ರಸ್ತುತ ಪಡಿಸುವ ರೀತಿ ನಮಗೆ ತಿಳಿದಿರಲೂ ಇಲ್ಲ. ಆಗೆಲ್ಲ ಗೀಚಿದ ಕವನಗಳು ಅದೆಷ್ಟೋ ಒಲೆಯಲ್ಲಿ ಸುಟ್ಟು ಬೂದಿಯಾಗಿ, ಈಗ ಅವು ನೆನಪು ಮಾತ್ರ. ಆದರೆ ಈಗಿನ ಮಕ್ಕಳು ತುಂಬಾ ಪುಣ್ಯವಂತರು. ತಮ್ಮ ಕಲೆಯನ್ನು, ವಿದ್ಯಾವಂತಿಕೆಯನ್ನು, ಕೌಶಲ್ಯತೆಗಳನ್ನು, ಪ್ರಸ್ತುತ ಪಡಿಸಲು ಅನೇಕ ವೇದಿಕೆಗಳನ್ನು ಹೊಂದಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ಅವರ ಪೋಷಕರಷ್ಟೇ ಅಲ್ಲದೆ ಅವರ ಶಿಕ್ಷಕರು ಬೆನ್ನ ಹಿಂದಿರುತ್ತಾರೆ. ಅದುವೇ ತುಂಬಾ ಸಂತೋಷದ ವಿಚಾರ. ಇಂದಿನ ಪೋಷಕರು ತಮ್ಮ ಕಷ್ಟಗಳನ್ನು ಮಕ್ಕಳ ಗಮನಕ್ಕೆ ತಾರದೇ, ಮಕ್ಕಳ ಏಳ್ಗೆಗಾಗಿ ದಿನ ರಾತ್ರಿ ಕಷ್ಟಪಡುತ್ತಾರೆ. ಅದನ್ನು ಅರಿತು ನಡೆವ ಮಕ್ಕಳೇ, ಪೋಷಕರ ಹೆಮ್ಮೆ. ಈಗಿನ ತಂತ್ರಜ್ಞಾನ ಯುಗದ ಅನುಕೂಲಗಳನ್ನು ಸಕಾರತ್ಮಕವಾಗಿ ಬಳಸಿಕೊಂಡು ಮುನ್ನಡೆಯುವವರಿಗೆ ಜೀವನ ಸುಖಕರವಾದ ಪಯಣವಾಗಿರುತ್ತದೆ ಎಂದು ಹೇಳಲಿಚಿಸುತ್ತೇನೆ. ಹಾಗೆ ಮಕ್ಕಳ ಜಗಲಿಯಲ್ಲಿ ಮಕ್ಕಳು ಬರೆದಿರುವ ಕವನಗಳು ಅತೀ ಅದ್ಭುತವಾಗಿವೆ. ಒಂದೊಂದು ಕವನಗಳು ಅನೇಕ ಭಾವನೆಗಳನ್ನು ವಕ್ತಪಡಿಸುತ್ತವೆ. ಕವನ ಎರಡೇ ಸಾಲಾದರೂ ಅರ್ಥ ಮಾತ್ರ ಪದಗಳಿಗೆ ಮೀರಿದ್ದು. ಇದರಿಂದ ಅವರ ಭಾವನೆಗಳು, ಚಿಂತನೆಗಳು ಮಾತ್ರ ತಿಳಿವುದಲ್ಲದೆ, ಅವರ ಪದಜೋಡಣೆ ಬಗ್ಗೆ ಹೆಚ್ಚು ಖುಷಿಕೊಡುತ್ತದೆ. ನಿಮ್ಮ ಈ ಹವ್ಯಾಸಗಳು ಹೀಗೆ ಉಲ್ಬಣಗೊಳ್ಳಲಿ ಎಂದು ಇಚ್ಚಿಸುವ ಮಕ್ಕಳ ಜಗಲಿಯ ಅಭಿಮಾನಿ ನಾನು...
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************


ಎಲ್ಲರಿಗೂ ನಮಸ್ಕಾರಗಳು,
     ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ಪತಂಜಲಿ ಮಹರ್ಷಿಯ ಎರಡನೇ ಅಂಶ ನಿಯಮ ಹಾಗೂ ಅದರ ಐದು ಅಂಶಗಳಲ್ಲಿ ಮೊದಲನೇ ಭಾಗ ಶೌಚದ ಕುರಿತಾದ ವಿವರಣಾತ್ಮಕ ಲೇಖನ ಸೊಗಸಾಗಿತ್ತು.
     ಶಿಕ್ಷಣ ಇಲಾಖೆಯ, ಎಲ್ಲರನ್ನೂ ಉತ್ತೀರ್ಣಗೊಳಿಸುವ ಹಾಗೂ ಕೃಪಾಂಕಗಳನ್ನು ನೀಡುವ ಎಡವಟ್ಟಿನಿಂದಾಗಿ ಇಂದಿನ ಶಿಕ್ಷಣ ಪದ್ಧತಿ ಯಾವ ರೀತಿ ಹದಗಟ್ಟಿದೆ ಎನ್ನುವುದರ ಕುರಿತು ಬೆಳಕು ಚೆಲ್ಲುವ ಲೇಖನ ರಮೇಶ್ ಸರ್ ರವರಿಂದ.
     ರಕ್ತ ಪರಿಚಲನೆಯಲ್ಲಿ ಇಮ್ಮಡಿ ಪರಿಚಲನೆ, ಹಿಮೋಗ್ಲೋಬಿನ್ ನ ಕಾರ್ಯ, ಹೃದಯಾಘಾತಕ್ಕೆ ಕಾರಣ ಇವೆಲ್ಲವನ್ನೂ ಸರಳವಾಗಿ ದಿವಾಕರ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
     ವಿಜಯಾ ಮೇಡಂರವರ ಈ ವಾರದ ಸಂಚಿಕೆಯಲ್ಲಿ ಅಳಿವಿನಂಚಿನಲ್ಲಿರುವ ಅತ್ಯುಪಯುಕ್ತ ನೆಲಕಂಚಿ ಸಸ್ಯದ ಪರಿಚಯ ಉತ್ತಮವಾಗಿತ್ತು. ಅಳಿವಿನಂಚಿನಲ್ಲಿರುವ ಸಸ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಧನ್ಯವಾದಗಳು ಮೇಡಂ.
      ನೈಜವಾಗಿ ನಡೆಯುವ ಪರೀಕ್ಷೆಗಳನ್ನು ಸ್ವಸಾಮರ್ಥ್ಯದಿಂದ ಎದುರಿಸಿದಾಗಿ ಮಾತ್ರ
ಜೀವನವೆಂಬ ಪರೀಕ್ಷೆಯನ್ನು ಗೆಲ್ಲಲು ಸಾಧ್ಯ ಎನ್ನುವುದನ್ನು ಮಂಜುಳಾ ಮೇಡಂರವರು ಬಹಳ ಸೊಗಸಾಗಿ ತಮ್ಮ ವಿಶೇಷ ಲೇಖನದಲ್ಲಿ ತಿಳಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಿಗೆ ಕಿವಿ ಮಾತಿನಂತಿದೆ ಈ ಲೇಖನ.
     ರಮೇಶ ಉಪ್ಪುಂದರವರು ಈ ಸಲದ ಪಯಣ ಸಂಚಿಕೆಯಲ್ಲಿ ಜೋಗದ ಕುರಿತಾದ ಲೇಖನ ಬಹಳ ಅದ್ಭುತವಾಗಿತ್ತು. ಧನ್ಯವಾದಗಳು ಸರ್.
     ವಾಣಿಯಕ್ಕ ನವರಿಂದ 'ಸಬ್ರಿಯ ಬಣ್ಣಗಳು' ಎನ್ನುವ ಚೆಂದದ ಪುಸ್ತಕದ ಪರಿಚಯ ಸೊಗಸಾಗಿತ್ತು.
      ಮಗುವಿಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿ, ಕಾಳಜಿಯ ಕುರಿತಾದ ತಮ್ಮ ಅನುಭವವನ್ನು ಶಿಕ್ಷಕರ ಡೈರಿಯಲ್ಲಿ ಗೋಪಾಲಕೃಷ್ಣ ಸರ್ ರವರು ಬಹಳ ಸುಂದರವಾಗಿ ಹಂಚಿಕೊಂಡಿದ್ದಾರೆ.
     ಬತ್ತದ ಗದ್ದೆಯಲ್ಲಿ ನೇಜಿ ನಟ್ಟು ಕೃಷಿ ಮಾಡಿ ಖುಷಿ ಪಟ್ಟಅನುಭವವವನ್ನು ಸಾನ್ವಿರವರು ಚೆನ್ನಾಗಿ ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಸಾನ್ವಿ. ಅಕ್ಷರ ಹಾಗೂ ವೈಷ್ಣವಿರವರ ಚಿತ್ರಗಳು ಅದ್ಭುತವಾಗಿವೆ.
ದರೆಗುಡ್ಡೆ ಶಾಲೆಯ ಮಕ್ಕಳ ಕವನಗಳು ಸೊನಸಾಗಿವೆ. ಚಿತ್ರಬಿಡಿಸಿದ ಹಾಗೂ ಕವನ ರಚಿಸಿದ ಮಕ್ಕಳಿಗೆ ಅಭಿನಂದನೆಗಳು.
     ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ.
     ಜಗಲಿಯ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ನಮಸ್ತೇ.. ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರ ಜೀವನ ಸಂಭ್ರಮ ಲೇಖನ ಸರಣಿ150ನೇ ಸಂಚಿಕೆಗೆ ತಲುಪಿದೆ. ಪ್ರತಿ ಸರಣಿಯಲ್ಲೂ ಹೊಸ ವಿಷಯಗಳ ಮೂಲಕ ಹೊಸತನವನ್ನು ನೀಡಿ ಜೀವನ ಸಂತೋಷ ವಾಗಿರಲು ದಾರಿದೀಪವಾದ ಸಂಚಿಕೆಗಳು. ತಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳೊಂದಿಗೆ ಹಾರ್ಧಿಕ ಅಭಿನಂದನೆಗಳು ಸರ್. ಈ ಸಲ ಪತಂಜಲಿ ಮಹರ್ಷಿಯ ಅಂಶವಾದ ಸಂತೋಷದ ಕುರಿತಾಗಿ ಸರಳವಾಗಿ ಎಲ್ಲರಿಗೂಅರ್ಥವಾಗುವ ರೀತಿಯಲ್ಲಿತ್ತು ಈ ಸಲದ ಸಂಚಿಕೆ.
      ಆಟಿಯ (ಆಷಾಢ) ಮಾಸದ ಕುರಿತಾದ ವಿವರವಾದ ಮಾಹಿತಿಯೊಂದಿಗೆ ಭಾರತೀಯ ಕಾಲಮಾನಗಳನ್ನು ರಮೇಶ್ ಬಾಯಾರ್ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ಬಹಳ ಸುಂದರವಾಗಿ ತಿಳಿಸಿದ್ದಾರೆ.
     ಸಸ್ಯಗಳಲ್ಲಿ ಸಾಗಾಣಿಕಾ ವ್ಯವಸ್ಥೆಯ ಕುರಿತಾಗಿ ಬಹಳ ಸೊಗಸಾಗಿ, ಅರ್ಥವತ್ತಾಗಿ ದಿವಾಕರ ಸರ್ ರವರು ತಮ್ಮ ಈ ವಾರದ ಸಂಚಿಕೆಯಲ್ಲಿ ತಿಳಿಸಿದ್ದಾರೆ.  
      ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಬೂಬಕರ್ ಸಿದ್ದೀಕ್ ರವರಿಂದ ಉತ್ತಮ ಹಾಗೂ ಸಕಾಲಿಕ ಲೇಖನ.
      ಕಮಲ ಪುಷ್ಪದ ಕುರಿತಾದ ಉಪಯುಕ್ತ ಹಾಗೂ ಪರಿಪೂರ್ಣ ಮಾಹಿತಿ ಈ ಸಲದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ವಿಜಯಾ ಮೇಡಂರವರಿಂದ.
     ಪ್ರಮುಖ ಪ್ರವಾಸಿ ತಾಣ ನೇತ್ರಾಣಿ ಗುಡ್ಡದ ಕುರಿತಾದ ಲೇಖನ ಸೊಗಸಾದ ವರ್ಣಚಿತ್ರಗಳೊಂದಿಗೆ ತುಂಬಾ ಸೊಗಸಾಗಿತ್ತು. ಸಂಚಿಕೆ ಆಸಕ್ತಿಕರವಾಗಿ ಮೂಡಿ ಬರುತ್ತಿದೆ. 
     ಆರ್ಟ್ ಗ್ಯಾಲರಿಯಲ್ಲಿ ಎಸ್ ಎಂ ಲೋಹಾರ್ ರವರ ಪರಿಚಯದೊಂದಿಗೆ ಅವರ ಅದ್ಭುತ ಕಲಾ ಕೃತಿಗಳನ್ನು ಕಾಣುವಂತಾಯಿತು.
     ವಾಣಿಯಕ್ಕನವರಿಂದ ಥೇಲಿಸ್ ಕಥೆ ಮತ್ತು ನಾಟಕಗಳು ಪುಸ್ತಕದ ಪರಿಚಯ ಚೆನ್ನಾಗಿತ್ತು. 
     ಶಿಕ್ಷಕರ ಡೈರಿಯಲ್ಲಿ ಹಸೀನಾ ಮೇಡಂರವರು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕಂಡು ಹಿಡಿಯಲಾಗದೆ ಕೊನೆಗೆ ಕೆಲ ದಿನಗಳ ನಂತರ ಆತ ತಪ್ಪನ್ನು ಕೊನೆಗೊ ಒಪ್ಪಿಕೊಂಡ ಕುರಿತಾದ ತಮ್ಮ ಅನುಭವವನ್ನು ಸುಂದರವಾಗಿ ಹಂಚಿಕೊಂಡಿದ್ದಾರೆ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ.
      ಮಕ್ಕಳ ಕವನಗಳಲ್ಲಿ ಧನ್ವಿತಾ ಕಾರಂತ್ ಹಾಗೂ ಕೌಶೀಲಾರವರ ಕವನಗಳು ಚೆನ್ನಾಗಿವೆ. ಅಭಿನಂದನೆಗಳು ಮಕ್ಕಳಿಗೆ. ಹಾಗೆ ಪುನರ್ವ ಕಾರ್ಲೆಯವರ ಚಿತ್ರಗಳೂ ಕೂಡ ಸೊಗಸಾಗಿವೆ ಅಭಿನಂದನೆಗಳು ಪುನರ್ವರವರಿಗೆ.
     ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ರಮ್ಯಾ ಆರ್ ಭಟ್ - ಸಹ ಶಿಕ್ಷಕಿ, ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************