ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 02
Sunday, August 4, 2024
Edit
ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 02
..................................................... ಪೂರ್ತಿ
........................................... ಪ್ರಣಮ್ಯ.ಜಿ
....................................... ಸಾತ್ವಿಕ್ ಗಣೇಶ್
........................................ ಅಕ್ಷರ ಪಟವಾಲ್
ಮಕ್ಕಳ ಜಗಲಿಯ ಬಳಗಕ್ಕೆ ಜನನಿ ಮಾಡುವ ನಮಸ್ಕಾರಗಳು. ವಿಪರೀತ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮನೆಯಲ್ಲೇ ಇರುವುದರಿಂದ ನನ್ನ ಮಳೆಯ ಅನುಭವಗಳನ್ನು ಮಕ್ಕಳ ಜಗಲಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲ ಒಂದು ವಾರ ಮಳೆಗೆ ರಜೆ ಸಿಕ್ಕಿದಾಗ ಸಂತೋಷವಾಯಿತು. ಆದರೆ ಇನ್ನೂ ಹೆಚ್ಚು ರಜೆಗಳನ್ನು ನೋಡಿದಾಗ ಚಿಂತೆ ಪ್ರಾರಂಭವಾಗಿದೆ. ಒಂದು ರೀತಿಯಲ್ಲಿ ಮಳೆಯೆಂದರೆ ಸಂತೋಷವೂ ಹೌದು. ಏಕೆಂದರೆ, "ದಕ್ಷಿಣ ಕಾಶಿ" ಎಂದೇ ಪ್ರಸದ್ಧಿಯಾದ ನಮ್ಮ ನೆರೆಯ ಊರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿದಿಯಲ್ಲಿ ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಸಂಗಮವಾಯಿತು. ಆ ದಿನದಂದು ದೇವರಿಗೆ ವಿಶೇಷ ಪೂಜೆಯು ನಡೆಯಿತು. ಇನ್ನೊಂದು ರೀತಿಯಲ್ಲಿ ಬೇಸರವೂ ಹೌದು. ಏಕೆಂದರೆ ದೂರದರ್ಶನದಲ್ಲಿ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು, ಮಕ್ಕಳು, ವೃದ್ಧರು, ವಯಸ್ಕರು ಇಂತಹ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಇವುಗಳನ್ನೆಲ್ಲಾ ವೀಕ್ಷಿಸಿದಾಗ ಬೇಸರವಾಗುತ್ತದೆ. ಪಕ್ಷಿಗಳಿಗೆ ಕಾಳುಗಳನ್ನು ಹುಡುಕಲು ಗೂಡಿನಿಂದ ಹೊರಗೆ ಹೋಗಲು ಸಾಧ್ಯಗಾಗುತ್ತಿಲ್ಲ. ಹಳ್ಳಗಳು, ನದಿಗಳೆಲ್ಲಾ ತುಂಬಿ ಹರಿಯುತ್ತಿದೆ.
.................................................. ಜನನಿ ಪಿ
...................................... ಫಾತಿಮತ್ ಶಿಫಾನ
...................................... ಧನ್ವಿ ರೈ ಕೋಟೆ
ಮಕ್ಕಳ ಅನುಭವ ಬರಹಗಳ ಸಂಚಿಕೆ
ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಮಳೆಯ ಬಗ್ಗೆ ಜಗಲಿಯ ಮಕ್ಕಳ ಅನುಭವದ ಬರಹಗಳು
ಅನುಭವ ಬರಹ ರಚಿಸಿರುವ ವಿದ್ಯಾರ್ಥಿಗಳು :
◾ ಪೂರ್ತಿ, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ
◾ ಪ್ರಣಮ್ಯ.ಜಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
◾ ಸಾತ್ವಿಕ್ ಗಣೇಶ್, 10ನೇ ತರಗತಿ
◾ ಅಕ್ಷರ ಪಟವಾಲ್, 8ನೇತರಗತಿ
◾ ಜನನಿ ಪಿ, 8ನೇ ತರಗತಿ
◾ ಫಾತಿಮತ್ ಶಿಫಾನ, ದ್ವಿತಿಯ ಪಿಯುಸಿ
◾ ಧನ್ವಿ ರೈ ಕೋಟೆ, 9ನೇ ತರಗತಿ
◾ ಶ್ರುತಿಕಾ, 8ನೇ ತರಗತಿ
◾ ಚೈತನ್ಯ ಬಿ ಎನ್, 9ನೇ ತರಗತಿ
◾ ಶ್ರಾವ್ಯ, 10ನೇ ತರಗತಿ
◾ ಸಾಕ್ಷಿ,, ಪ್ರಥಮ ಪಿಯುಸಿ
◾ ಅಖ್ಯಾತ್. ರೈ, 9ನೇ ತರಗತಿ
◾ ಲಕ್ಷಣ್ಯ ಜಿ ಕೆ, 8ನೇ ತರಗತಿ
◾ ಆಶಿತಾ ರೈ, 9ನೇ ತರಗತಿ
ಮಳೆ, ಮಳೆ, ಮಳೆ ಎಲ್ಲೆಂದರಲ್ಲಿ ಮಳೆ... ಅತ್ತ ರೋಡಿನಲ್ಲಿ ಮಳೆಯ ಹೊಳೆ... ಇತ್ತ ತೋಡಿನಲ್ಲಿ ಸಮುದ್ರದ ಅಲೆ... ದೂರದರ್ಶನ, ರೇಡಿಯೋ, ಅಂತರ್ಜಾಲ, ದಿನಪತ್ರಿಕೆ, ಜನರ ಬಾಯಲ್ಲಿ ಎಲ್ಲೆಂದರಲ್ಲಿ ಮಳೆರಾಯನದೇ ಸುದ್ದಿ ಸುಲೇಖ...!
ಹೀಗೆ ಮೊನ್ನೆ ಮೊನ್ನೆಯಷ್ಟೇ ಎಂದಿನಂತೆ ಸಂಜೆ ಹೊತ್ತಲ್ಲಿ ನಾವು (ಅಮ್ಮ, ಅಕ್ಕ, ನಾನು) ಹುಲ್ಲಿಗೆಂದು ಕತ್ತಿ, ಗೋಣಿ, ಹಗ್ಗವನ್ನು ಹಿಡ್ಕೊಂಡು ಅಮ್ಮ ಮತ್ತು ಅಕ್ಕ ರೈನ್ ಕೋಟ್ ಧರಿಸಿ ಹೊರಟರೆ... ನಾನು ಕೊಡೆ ಹಿಡಿದುಕೊಂಡು ಅವರ ಹಿಂದೆಯೇ ಹೆಜ್ಜೆ ಹಾಕಿದೆ.... ನಮ್ಮ ಜೊತೆಗೆ ಮಳೆರಾಯನು ಸಹ ಮೆಲ್ಲಗೆ ಬರುತ್ತಿದ್ದ. ಹುಲ್ಲು ಕೊಯ್ಯಲು ತೋಟಕ್ಕೆ ಹೋಗುವ ಮುನ್ನ ಒಂದು ಹೊಲ ಸಿಗುತ್ತದೆ. ಆ ಹೊಲದ ದಡದ ನಡುವೆ ನಾವು ಸಾಗಿದಂತೆ.... ಮಳೆರಾಯನ ಜೊತೆಗೆ ವಾಯು ದೇವನು ಬರುವುದೇ...!!! ರಭಸವಾಗಿ ಬೀಸುವ ಗಾಳಿಗೆ ನನ್ನ ಕೊಡೆ ಅಣಬೆಯಂತೆ ಅರಳಿತು....!!! ಮತ್ತೆ ಅಮ್ಮ ಕೊಡೆ ಸರಿಪಡಿಸಿದರು. ಅಮ್ಮ ಮತ್ತು ಅಕ್ಕ ಹುಲ್ಲು ಕೊಯ್ಯಲು ಶುರು ಮಾಡಿದರು... ನಾನು ಅವರಿಗೆ ಹುಲ್ಲಿನ ಕಟ್ಟವನ್ನು ತಲೆಗೆ ತುಂಬಿಸಲು ಹೋದ ಕಾರಣ ಮಳೆಗೆ ಕೊಡೆ ಹಿಡಿದುಕೊಂಡು ತೋಟದ ವೀಕ್ಷಣೆಯಲ್ಲಿ ತೊಡಗಿದ್ದೆ. ಆ ಗಾಳಿಯ ರಭಸಕ್ಕೆ ಹಲವು ಅಡಿಕೆ ಮರಗಳು ನೆಲಕ್ಕಪ್ಪಳಿಸಿದ್ದವು. ರಭಸವಾಗಿ ಬೀಸುವ ಗಾಳಿಗೆ ಆಕಾಶದತ್ತ ತಲೆ ಮಾಡಿದಾಗ ಮರಗಳು ಅಲುಗಾಡುತ್ತಿರುವುದನ್ನು ಕಂಡಾಗ ನಮ್ಮ ಮೇಲೆಯೇ ಈಗ ಬೀಳುತ್ತವೆಂಬ ಪುಳಕ ಭಾವ... ಹೇಗೋ ಮಳೆಗೆ ಒದ್ದೆಯಾದ ಹುಲ್ಲಿನ ಅಡಿ ಗೆ ಗೋಣಿಯಿಟ್ಟು ಕಟ್ಟ ಕಟ್ಟಿದರು. ನಾನು ಮತ್ತು ಅಕ್ಕ ಇಬ್ಬರು ಸೇರಿ ಅಮ್ಮನಿಗೆ ಹುಲ್ಲಿನ ಕಟ್ಟವನ್ನು ತಲೆಗೀರಿಸಲು ತಯಾರಾದೆವು. ಮಳೆಗೆ ನೀರನ್ನು ಹೀರಿಕೊಂಡು ಆ ಹುಲ್ಲಿನ ಕಟ್ಟವಂತೂ ಮಣ ಭಾರವಾಗಿತ್ತು...! ಹೇಗೋ ಪೇಚಾಡಿ ಅಮ್ಮನ ತಲೆಗೆ ತುಂಬಿಸಿದೆವು. ನಂತರ ಅಕ್ಕನಿಗೆ ಹುಲ್ಲಿನ ಕಟ್ಟವನ್ನ ನಾನು ತಲೆಗೆ ತುಂಬಿಸಿದೆ. ಹೀಗೆ ಅಮ್ಮ ಮತ್ತು ಅಕ್ಕ ಹುಲ್ಲಿನ ಕಟ್ಟವನ್ನು ತುಂಬಿಕೊಂಡು ಹೋಗುತ್ತಿದ್ದಂತೆ ಧೋ..!! ಮಳೆ ಸುರಿಯಲಾರಂಭಿಸಿತು. ನಾವು ಸೇತುವೆ ದಾಟುವ ತವಕದಲ್ಲಿರುವಾಗ ದೊಡ್ಡ ಸೇತುವೆಯ ಸಂಪೂರ್ಣ ಮುಳುಗಡೆಗೆ ಕ್ಷಣಗಣನೆ ಬಾಕಿ ಇತ್ತು. ಆದಷ್ಟು ಬೇಗ ಆ ಸೇತುವೆಯನ್ನು ದಾಟಿ ಮುಂದೆ ಬಂದೆವು. ಅಲ್ಲೊಂದು ವಿಸ್ಮಯ ನಮ್ಮನ್ನು ಭಯಬುರುಕರನ್ನಾಗಿಸಿತು. ಅಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು...!!! ಏನು ಮಾಡಬೇಕೆಂದು ತೋಚಲಿಲ್ಲ ... ಬೇರೆ ದಾರಿಯೇನಾದ್ರು ಇದೆಯಾ ಎಂದರೆ ಅದು ಕೂಡಾ ಇಲ್ಲ, ಮಳೆ ನಿಲ್ಲುವ ಸೂಚನೆಯೇ ಇಲ್ಲ... ಅದು ಅಲ್ಲದೆ ಸ್ವಲ್ಪ ನೀರು ಕಡಿಮೆಯಾದ ಮೇಲೆ ಸೇತುವೆ ದಾಟೋಣವೆಂದರೆ ಕತ್ತಲೆ ಆಗ್ತಾ ಬರ್ತ್ತಿದೆ. ಅಮ್ಮ ಹೇಗೋ ದೇವರ ಮೇಲೆ ಭಾರ ಹಾಕಿ ಮೆಲ್ಲಗೆ ಆ ಸೇತುವೆ ಇರುವ ಅಂದಾಜಿನ ಅಳತೆಯಲ್ಲಿ ದಾಟಿ ಹುಲ್ಲಿನ ಕಟ್ಟವನ್ನು ದಡಕ್ಕೆ ಹಾಕಿ ನಮ್ಮಿಬ್ಬರನ್ನು ಕೈ ಹಿಡಿದು ಮೆಲ್ಲಗೆ ಸೇತುವೆ ದಾಟಿಸಿದರು. ನಂತರ ಹುಲ್ಲಿನ ಕಟ್ಟವನ್ನು ಪುನಃ ಅಮ್ಮನ ತಲೆಗೆ ನಾವು ತುಂಬಿಸಿದೆವು. ಆ ಮಳೆಗೆ ಹುಲ್ಲಿನ ಕಟ್ಟವನ್ನು ಹಿಡಿದುಕೊಂಡು ಬರುವಾಗ ಕೆಸರಿಗೆ ಸ್ವಲ್ಪ ಕಾಲು ಜಾರಿದರೆ ಕೈ ಕಾಲಿನ ಮೂಳೆ ಮುರಿಯುವುದರಲ್ಲಿ ಬೇರೆ ಮಾತಿಲ್ಲ.!! ಮಣ್ಣಿನ ಮಾರ್ಗದುದ್ದಕ್ಕೂ ನೀರು ಹೊಳೆಯಂತೆ ರಭಸವಾಗಿ ಹರಿದು ಬರುತ್ತಿತ್ತು. ಅಂತೂ ಇಂತೂ ಮಳೆಯನ್ನೆದುರಿಸಿ ಮನೆಗೆ ಬಂದು ದನದ ಕೊಟ್ಟಿಗೆಯ ಎದುರುಗಡೆ ಹುಲ್ಲಿನ ಕಟ್ಟವನ್ನು ಹಾಕಿದಾಗ ಪಶುಗಳ ಆ ಮುಗ್ಧ ಮುಖ ಕಂಡಾಗ ಎಷ್ಟು ಸುಸ್ತಾಗಿ ಬಂದರು ಸುಸ್ತು ಎನಿಸುವುದಿಲ್ಲ. ನಂತರ ಅಮ್ಮ ದನಗಳಿಗೆ ಮಲಗಲು ಅವುಗಳ ಅಡೀ ಗೆ ಸೊಪ್ಪು ಹಾಕಿದರು. ನಂತರ ಅವುಗಳಿಗೆ ಬೈ ಹುಲ್ಲಿನ ಜೊತೆ ಹುಲ್ಲನ್ನು ಹಾಕಿ ಕೈ ಕಾಲು ತೊಳೆದು ಮನೆಯೊಳಗೆ ನಡೆದರು. ಆಗ ಸಮಯ ಸಂಜೆ 7:00 ಆಗಿತ್ತು. ನಂತರ... ನಾನು, ಅಕ್ಕ ಕೈ ಕಾಲುಗಳನ್ನು ತೊಳೆದು ಪೂರ್ತಿ ಒದ್ದೆಯಾಗಿದ್ದ ಕಾರಣ ಚಳಿ ಕಾಯಿಸಿಕೊಳ್ಳುತ್ತ ಒಲೆಯ ಹತ್ತಿರ ಕುಳಿತೆವು. ನಂತರ ಅಮ್ಮ ಬಿಸಿ ಬಿಸಿ ಕಷಾಯ ಮಾಡಿ ಕೊಟ್ಟರು. ಅಲ್ಲೇ ಕುಳಿತು ಯೋಚಿಸಿದಾಗ ನನಗನಿಸಿತು ನಾವೇನಾದರೂ ಮಳೆ ನಿಲ್ಲಲಿ ಎಂದು ಕಾದು ಅಲ್ಲೇ ಕುಳಿತಿದ್ದರೆ ಅಲ್ಲೇ ಉಳಿಯಬೇಕಿತ್ತೆಂದು. ನಮ್ಮಲ್ಲಿ ಧೈರ್ಯ, ಹಾಗೂ ನಂಬಿಕೆಯೊಂದಿದ್ದರೆ ಎಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆದ್ದು ಬರುತ್ತೇವೆ. ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸಿವೆ. ಇನ್ನಾದರೂ ವರುಣದೇವನು ಪ್ರಸನ್ನರಾಗಲಿ ಎಂದು ಪ್ರಾರ್ಥಿಸುತ್ತೇನೆ....
ಧನ್ಯವಾದಗಳೊಂದಿಗೆ
ಪ್ರಥಮ ಪಿ.ಯು.ಸಿ (ವಿಜ್ಞಾನ ವಿಭಾಗ)
ಸರಕಾರಿ ಪದವಿ ಪೂರ್ವ ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬಾರೆಂದರೆ ಬಾರದೆ, ಹೋಗೆಂದರೆ ಹೋಗದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮೆಲ್ಲರನ್ನು ತರಾಟೆಗೆ ತೆಗೆದುಕೊಂಡಿರುವ ಮಳೆರಾಯನ ಆರ್ಭಟದ ಬಗ್ಗೆ ವರ್ಣಿಸುವುದಾದರೂ ಹೇಗೆ? ಕ್ಷಣ - ಕ್ಷಣವೂ ಕಿವಿಗಪ್ಪಳಿಸುವ, ಕಣ್ಣಿಗೆ ಗೋಚರಿಸುವ ಸಮಾಚಾರಗಳೆಲ್ಲವೂ ವರುಣನ ಅವಾಂತರಗಳ ಮಹಾಪೂರವನ್ನೇ ಧಾರೆಯೆರೆಯುವಂತೆ ಕಾಣುತ್ತಿದೆ.
ಅಷ್ಟೆಲ್ಲಾ ಅನಾಹುತಗಳ ನಡುವೆಯೂ, ಅಲ್ಲಲ್ಲಿ ಪಿಸುಗುಡುತ್ತಿರುವ ಮಾತುಗಳೆಂದರೆ "ಇಂದು ಶಾಲೆಗೆ ರಜೆ ಇದೆಯಾ?" ಹೌದು ನಾನೂ ಇದರಿಂದ ಹೊರತಾಗಿಲ್ಲ. ನನಗಂತೂ ನನ್ನ ಕಾಲೇಜು ತುಂಬಾನೇ ದೂರವಿರುವುದರಿಂದ ಮುಂಜಾನೆ 7.15 ರ ಸುಮಾರಿಗೆ ಪ್ರತೀದಿನ ಮನೆಯಿಂದ ಹೊರಡಬೇಕಾಗುತ್ತದೆ. ಈ ಕಾರಣಕ್ಕೆ ಬೆಳಗ್ಗೆ ಬೇಗನೇ ಏಳಬೇಕಾಗುತ್ತದೆ. ಮೊದ - ಮೊದಲು, ರಜೆ ಇರುವ ಸಂದೇಶಗಳು ಬೆಳಗ್ಗೆ ಬರುತ್ತಿದ್ದರಿಂದ ನನಗಂತೂ ತುಂಬಾನೇ ಕಷ್ಟ ಎನಿಸುತ್ತಿತ್ತು. ಬೆಳಗ್ಗೆ ಎದ್ದು, ತಯಾರಾಗಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ "ಇಂದು ರಜೆ" ಎಂಬ ಸಂದೇಶಗಳು ತಲುಪುತ್ತಿದ್ದವು. ಜಡಿಮಳೆಗೆ ಎದ್ದೇಳುವುದೇ ಕಷ್ಟ. ಅದರಲ್ಲೂ ಕಾಲೇಜಿಗೆ ಹೊರಟು, ರಜೆಯೆಂದಾಗ ಮತ್ತೆ ಯಥಾಸ್ಥಿತಿಗೆ ನಿರಾಶಭಾವದಿಂದ ಮರಳುವ ಸನ್ನಿವೇಶ ನಿಜಕ್ಕೂ "ಛೆ! ರಜೆಯೆಂಬ ಮಾಹಿತಿ ತುಸು ಬೇಗ ಬರಬಾರದಿತ್ತೆ?" ಎಂಬ ಉದ್ಗಾರವನ್ನು ಪದೇ ಪದೇ ಹೇಳಿಸುವಂತ್ತಿತ್ತು. ಇದೇನೋ ನನಗೆ ಹಾಗೂ ಇಂತಹ ಅನುಭವ ಪಡೆದ ಕೆಲವರಿಗೆ ಒಂದು ರೀತಿಯ ಫಜೀತಿಯಂತೆ ಕಾಣಬಹುದು. ಆದರೆ ರಜೆ ನೀಡುವ ಹಿಂದಿರುವ ಉದ್ದೇಶ ತುಂಬಾನೇ ಗಂಭೀರವಾದದ್ದು. ಅದರಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವವರ ಹೆಗಲ ಮೇಲಿರುವ ಕರ್ತವ್ಯ ತುಂಬಾನೇ ಭಾರವಾದದ್ದು.
ಪ್ರತಿದಿನ ಮಕ್ಕಳಿಗೆ ರಜೆ ಸಾರಿದರೆ, ಮಕ್ಕಳ ಕಲಿಕೆಯ ಮೇಲೆ ಬೀಳುವ ಪೆಟ್ಟು ಒಂದೆಡೆಯಾದರೆ, ಸದಾ ಸುರಿಯುತ್ತಿರುವ ರಣಮಳೆಯ ಅವಾಂತರಗಳ ನಡುವೆಯೂ ಮಕ್ಕಳನ್ನು ಮನೆಯಿಂದ ಹೊರ ಹೋಗಲು ಬಿಡುವುದು ಕ್ಷೇಮವಲ್ಲವೆಂಬ ಜಾಗೃತಿ ಮನೋಭಾವ ಹೊತ್ತಿರುವ ನಮ್ಮ ಅಧಿಕಾರಿಗಳು ತುಂಬಾನೇ ಯೋಚಿಸಿಕೊಂಡು, ಯೋಜಿಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ರಜೆ ಸಾರುತ್ತಿದ್ದಾರೆ. ಅವರ ಆದೇಶವನ್ನು ಸಮರ್ಥವಾಗಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಅದಕ್ಕಾಗಿ ನಾವೆಲ್ಲಾ ಮನೆಯಲ್ಲಿದ್ದುಕೊಂಡು ನಮ್ಮ ಸಮಯವನ್ನು ಆದಷ್ಟೂ ಸದ್ಬಳಕೆ ಮಾಡಿಕೊಳ್ಳುವವರಾಗೋಣ. ಸಕಲ ಕಡೆಗಳಲ್ಲೂ ಅಲ್ಲೋಲ - ಕಲ್ಲೋಲವಾಗಿ ಓಡಾಡುತ್ತಾ, ಅನಾಹುತಗಳ ಪಟ್ಟಿಯನ್ನು ಏರಿಸುತ್ತಿರುವ ಮಳೆರಾಯನಲ್ಲಿ, ಕೋಪವ ತೊರೆದು ಸಮಾಧಾನದಿಂದ ಇರುವಂತೆ ವಿನಮ್ರವಾಗಿ ಬೇಡಿಕೊಳ್ಳುವ ಮನಸ್ಸುಳ್ಳವರಾಗೋಣವೇ?
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
ಎಸ್. ಡಿ.ಎಮ್. ಪಿ.ಯು ಕಾಲೇಜು ಉಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿಯ ನನ್ನ ಬಂಧು ಬಳಗದವರು ಕ್ಷೇಮವೆಂದು ಭಾವಿಸುತ್ತೇನೆ. ನಾವೆಲ್ಲರೂ ಕ್ಷೇಮದಿಂದ ಇರುವೆವು.
ನಮ್ಮ ಮನೆಯ ಮುಂಬಾಗದಲ್ಲಿ ಒಂದು ತೋಡು ಇದೆ. ಅದರ ಆಚೆ ಬದಿ ಗದ್ದೆಗಳು, ತೋಟಗಳು ಇವೆ. ನಮ್ಮ ಮನೆಯ ಪಕ್ಕದ ಮನೆಯ ಎದುರಲ್ಲಿ ತೋಡು ದಾಟಲು ಮರದ್ದು ಅಂದರೆ ಅಡಿಕೆ ಮರದ ಕಾಲು ಸಂಕವು ಇದ್ದಿತು. ಈಗ ಒಂದು ವರ್ಷದ ಹಿಂದೆ ಅದಕ್ಕೆ ಸಿಮೆಂಟ್ ನಿಂದ ಮೋರಿಯನ್ನು ಅಳವಡಿಸಿ ಸಂಕವು ಆಗಿತ್ತು. ಆದರೆ ಅಲ್ಲಿ ಮೊನ್ನೆಯ ಜೋರು ಮಳೆಯಿಂದಾಗಿ ತೋಡಿನ ಮೋರಿ ಚಿಕ್ಕದ್ದಿದ್ದ ಕಾರಣ ನೀರು ಹೋಗಲು ಸಾಧ್ಯವಾಗದೇ ನೀರೆಲ್ಲ ತೋಟ ಗದ್ದೆಗಳಲ್ಲಿ ತುಂಬಿ ಬೆಳಗ್ಗೆ ಎದ್ದು ನೋಡುವಾಗ ಚಿಕ್ಕದಾದ ಹೊಳೆಯಂತೆ ಕಾಣುತ್ತಿತ್ತು. ಕೊನೆಗೆ ನೀರು ತಗ್ಗದೇ ಜೆ ಸಿ ಬಿ ಯನ್ನು ತಂದು ಆ ಸಂಕವನ್ನು ಒಡೆದು ತೆಗೆದರು. ಒಡೆದು ಹಾಕುವ ಕೆಲಸ ಕ್ಷಣ ಮಾತ್ರದಲ್ಲಿ ಮಾಡಿದರು. ಆದರೆ ಸಂಕವನ್ನು ಮಾಡಲು ಅವರಿಗೆ ತುಂಬಾ ಸಮಯ ಬೇಕಾಗಿತ್ತು. ಅದನ್ನು ನೋಡಿ ತುಂಬಾ ಬೇಸರವಾಯ್ತು. ತೋಟಕ್ಕೆ ಹಾಕಿದ ಗೊಬ್ಬರ, ಗದ್ದೆಯಲ್ಲಿ ನೆಟ್ಟ ನೇಜಿ ಎಲ್ಲ ಕೊಚ್ಚಿ ಹೋಯ್ತು. ಸಂಜೆಯ ಹೊತ್ತಿಗೆ ನೀರು ಕಡಿಮೆ ಆಯಿತು.
ನನಗೆ ಅದನ್ನು ನೋಡಿದಾಗ ಅನಿಸಿದ್ದೇನೆಂದರೆ ಮೊದಲೇ ಯೋಚಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದರೆ ಇಂದು ಈ ಪರಿಸ್ಥಿತಿಯು ಬರುತ್ತಿರಲಿಲ್ಲ....
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ನನ್ನ ಹೆಸರು ಅಕ್ಷರ ಪಟವಾಲ್. ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು ಇಲ್ಲಿ ಎಂಟನೇ ತರಗತಿ ಕಲಿಯುತ್ತಿದ್ದೇನೆ. ಈ ವರ್ಷದ ಮಳೆಗಾಲದಲ್ಲಿ ನನ್ನ ಜೀವನದಲ್ಲಿ ನಡೆದ ಮಳೆಯ ಫಜೀತಿಯ ಪ್ರಸಂಗವನ್ನು ಹಂಚಿಕೊಳ್ಳುತ್ತೇನೆ.
ಹೊಸದಾಗಿ 8ನೇ ತರಗತಿಗೆ ಸೇರಿದ ನನಗೆ ತುಂಬಾ ಖುಷಿಯಾಗಿತ್ತು. ಜೂನ್ ತಿಂಗಳಲ್ಲಿ ಮಳೆ ಪ್ರಾರಂಭವಾದರೂ ಒಳ್ಳೆಯ ವಾತಾವರಣವಿತ್ತು. ಜುಲೈ ತಿಂಗಳ ಪ್ರಾರಂಭದಲ್ಲಿ ಮಳೆಯ ಆರ್ಭಟ ಪ್ರಾರಂಭವಾಯಿತು. ಮಳೆ ರಜೆಯಲ್ಲಿಯೇ ಜುಲೈ ತಿಂಗಳು ಮುಗಿದು ಹೋಯಿತು. ಅಬ್ಬಬ್ಬ ಈ ಮಳೆಯಲ್ಲಿ ಎಂತೆಂಥ ಘಟನೆಗಳು ನಡೆದವು. ಈ ಮಳೆಯಲ್ಲಿ ನಮ್ಮ ಊರಲ್ಲಿ ಬಾವಿಯಲ್ಲಿ ದೊಡ್ಡ ಮೊಸಳೆಗಳು ಕಾಣಿಸಿ ಕೊಂಡಿತು. ಅದನ್ನು ಅರಣ್ಯ ಇಲಾಖೆಯವರು ಹರಸಾಹಸ ಮಾಡಿ ಹಿಡಿದರು. ಅಲ್ಲಲ್ಲಿ ಕೆಲವು ಕಡೆ ಗುಡ್ಡ ಕುಸಿದವು. ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ಮೇಲೆ ಬರಲಾಗದೆ ನೀರಿನಲ್ಲಿ ಕೊಳೆತು ಹೋಯಿತು. ಮನೆ, ಶಾಲೆ, ದೇವಾಲಯ ಹಾಗೂ ಇತರೆ ಕಟ್ಟಡಗಳ ಮೇಲ್ಚಾವಣಿಗಳು ಹಾರಿ ಹೋದವು.
ದಿನಾಂಕ 23/07/2024 ಮಂಗಳವಾರದಂದು ನಮಗೆ ಶಾಲೆ ರಜೆ ಇರಲಿಲ್ಲ. ಮುಂಜಾನೆಯ ವಾತಾವರಣ ತುಂಬಾ ಚೆನ್ನಾಗಿತ್ತು. ಬೆಳಿಗ್ಗೆಯಿಂದ ನಾಲ್ಕು ಗಂಟೆಯವರೆಗೆ ಬಿಸಿಲು ಇತ್ತು. 4: 15 ಶಾಲೆ ಬಿಟ್ಟ ತಕ್ಷಣ ಜೋರಾದ ಬಿರುಗಾಳಿ, ಮಳೆ ಪ್ರಾರಂಭವಾಯಿತು. ನಾನೊಬ್ಬಳೇ ರಸ್ತೆಯಲ್ಲಿ ಕೊಡೆ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದೆ. ಗುಡುಗು, ಮಿಂಚು, ಗಾಳಿ ಅಬ್ಬಾ! ನನಗಂತೂ ತುಂಬಾ ಭಯವಾಯಿತು. ರಸ್ತೆಯ ಬದಿಯಲ್ಲಿ ಸಾಲುಮರಗಳು. ಎಲ್ಲಿ ಮರ ಬೀಳುತ್ತೋ ಎನ್ನುವ ಭಯ, ಭಯದಲ್ಲಿಯೇ ಮುಂದೆ ನಡೆದು ಹೋದೆನು. ಹೀಗೆ ಹೋಗುವಾಗ ಜೋರಾಗಿ ಗಾಳಿ ಬೀಸಲು ಪ್ರಾರಂಭಿಸಿತು. ಗಾಳಿಯ ರಭಸಕ್ಕೆ ನನ್ನ ಕೈಯಲ್ಲಿದ್ದ ಸುಂದರವಾದ ಕೊಡೆ ಹಾರಿ ಹೋಗಿ ಪೊದೆ ಯಲ್ಲಿ ಸಿಕ್ಕಿಕೊಂಡಿತು. ನನ್ನ ಬ್ಯಾಗ್ ಡ್ರೆಸ್ ಒದ್ದೆಯಾಯಿತು. ನನ್ನ ಕೊಡೆಯನ್ನು ತೆಗೆದುಕೊಂಡು ಬಂದೆ. ಗಾಳಿಯಲ್ಲಿ ಒಂದು ಹೆಜ್ಜೆ ಮುಂದೆ ಇಡಲು ಸಾಧ್ಯವಾಗಲಿಲ್ಲ. ಅಂತೂ ಇಂತೂ ಹೇಗೋ ಮಾಡಿ ಮನೆ ತಲುಪಿದೆ. ಗಾಳಿ ಮಳೆ ಬಂದಿದೆ ಮಗಳು ಬರಲು ತಡವಾಯಿತು ಎಂದು ಅಮ್ಮ ಬಾಗಿಲಲ್ಲಿ ಕಾಯುತ್ತಿದ್ದಳು. ಮನೆ ಮತ್ತು ಅಮ್ಮನನ್ನು ನೋಡಿದ ನಂತರ ಸ್ವಲ್ಪ ಭಯ ಕಡಿಮೆಯಾಯಿತು. ಸಂಜೆ ಚಳಿ ಜ್ವರ ಬಂದಿತು. ಇದು ನನ್ನ ಜೀವನದಲ್ಲಿ ನಡೆದ ಮಳೆಗಾಲದ ಮರೆಯಲಾಗದ ಫಜಿತೀಯ ಪ್ರಸಂಗ.
8ನೇತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************
ಮಕ್ಕಳ ಜಗಲಿಯ ಬಳಗಕ್ಕೆ ಜನನಿ ಮಾಡುವ ನಮಸ್ಕಾರಗಳು. ವಿಪರೀತ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮನೆಯಲ್ಲೇ ಇರುವುದರಿಂದ ನನ್ನ ಮಳೆಯ ಅನುಭವಗಳನ್ನು ಮಕ್ಕಳ ಜಗಲಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲ ಒಂದು ವಾರ ಮಳೆಗೆ ರಜೆ ಸಿಕ್ಕಿದಾಗ ಸಂತೋಷವಾಯಿತು. ಆದರೆ ಇನ್ನೂ ಹೆಚ್ಚು ರಜೆಗಳನ್ನು ನೋಡಿದಾಗ ಚಿಂತೆ ಪ್ರಾರಂಭವಾಗಿದೆ. ಒಂದು ರೀತಿಯಲ್ಲಿ ಮಳೆಯೆಂದರೆ ಸಂತೋಷವೂ ಹೌದು. ಏಕೆಂದರೆ, "ದಕ್ಷಿಣ ಕಾಶಿ" ಎಂದೇ ಪ್ರಸದ್ಧಿಯಾದ ನಮ್ಮ ನೆರೆಯ ಊರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿದಿಯಲ್ಲಿ ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಸಂಗಮವಾಯಿತು. ಆ ದಿನದಂದು ದೇವರಿಗೆ ವಿಶೇಷ ಪೂಜೆಯು ನಡೆಯಿತು. ಇನ್ನೊಂದು ರೀತಿಯಲ್ಲಿ ಬೇಸರವೂ ಹೌದು. ಏಕೆಂದರೆ ದೂರದರ್ಶನದಲ್ಲಿ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು, ಮಕ್ಕಳು, ವೃದ್ಧರು, ವಯಸ್ಕರು ಇಂತಹ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಇವುಗಳನ್ನೆಲ್ಲಾ ವೀಕ್ಷಿಸಿದಾಗ ಬೇಸರವಾಗುತ್ತದೆ. ಪಕ್ಷಿಗಳಿಗೆ ಕಾಳುಗಳನ್ನು ಹುಡುಕಲು ಗೂಡಿನಿಂದ ಹೊರಗೆ ಹೋಗಲು ಸಾಧ್ಯಗಾಗುತ್ತಿಲ್ಲ. ಹಳ್ಳಗಳು, ನದಿಗಳೆಲ್ಲಾ ತುಂಬಿ ಹರಿಯುತ್ತಿದೆ.
ನಮ್ಮ ಮನೆಯ ತೋಟದಲ್ಲಿ ಅಣಬೆಗಳು ಸಿಕ್ಕಿತ್ತು. ನಮ್ಮ ಮನೆಯ ಪಕ್ಕದಲ್ಲಿರುವ ಕುಮಾರಧಾರ ನದಿಯು ನೀರಿನಿಂದ ತುಂಬಿ ಹರಿಯುತ್ತಿದೆ. ನೀರಿನಿಂದ ತುಂಬಿ ಹರಿಯುವ ನದಿಯ ಝುಳು-ಝುಳು ಶಬ್ದವು ಆಲಿಸಲು ಇಂಪಾಗಿದೆ. ಒಂದು ಕ್ಷಣವೂ ಬಿಡದೇ ಸುರಿಯುತ್ತಿರುವ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದು ಒಂದು ರೀತಿ ಉತ್ತಮ ಎನಿಸುತ್ತದೆ. ಮಳೆಯಿಂದಾಗಿ ಪ್ರಕೃತಿಗೆ, ಪ್ರಾಣಿ-ಪಕ್ಷಿಗಳಿಗೆ, ಮನುಷ್ಯರಿಗೆ ಯಾವುದೇ ರೀತಿಯ ಹಾನಿಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮೊದಲೆಲ್ಲಾ ಮಳೆ ಬರುವಾಗ ಎಷ್ಟೊಂದು ಖುಷಿಯಿಂದ ಇರುತ್ತಿದ್ದೆವು. ಮಳೆ ಬರೋದಕ್ಕಿಂತ ಮೊದಲು ಎಲ್ಲರು ಹಪ್ಪಳ, ಶಾಂತಾನಿ, ಮುಂತಾದವುಗಳನ್ನು ತಯಾರಿಸುತ್ತಿದ್ದರು. ಮಳೆಗಾಲ ಶುರುವಾಗುವಾಗ ಎಲ್ಲರಿಗೂ ಹಬ್ಬವೇ ಹಬ್ಬ. ಎಲ್ಲರು ಮನೆಯಲ್ಲಿ ಕುಳಿತು ಮಳೆ ಬರುವಾಗ ಹಪ್ಪಳ, ಶಾಂತಾನಿ, ಮುಂತಾದವುಗಳನ್ನು ತಿನ್ನುವುದು. ಮಳೆಯ ನೀರು ಹೋಗುವಾಗ ಕಾಗದದೋಣಿ ಮಾಡಿಬಿಡುವುದು. ನೀರಿನಲ್ಲಿ ಆಟ ಆಡುವುದು ಮೀನು ಹಿಡಿಯುವುದು ಹೀಗೆ ಮಜಾ ಮಾಡುತ್ತಿದ್ದೆವು. ಶಾಲೆಗಳಿಗೆ ಹೋಗುವಾಗ ಕೊಡೆ ಹಿಡಿದುಕೊಂಡು ಹೋಗುವುದು ಅದು ಗಾಳಿಗೆ ಹಾರುವುದು ಅದನ್ನು ಸರಿಪಡಿಸುವಾಗ ಚಂಡಿ ಯಾಗುವುದು ಆಹಾ! ಏನೋ ಖುಷಿ. ನೀರಿನಲ್ಲಿ ಆಟ ಆಡುತ್ತಾ ಮನೆಗೆ ಬರುವುದು. ಮಳೆಗಾಲದ ಖುಷಿಗಳನ್ನು ಪದಗಳಲ್ಲಿ ವರ್ಣಿಸಲಾಗದು. ಆದರೆ ಈಗ ಮನುಷ್ಯನಿಂದಾಗಿ ಪ್ರಕೃತಿಯೇ ವಿಕೋಪಕೊಳಗಾಗಿದೆ. ಬೇಸಿಗೆ ಕಾಲದಲ್ಲಿ ಬಿಸಿಲು ತಡೆಯಲಾಗದೆ ಮಳೆ ಗೋಸ್ಕರ ಎಷ್ಟೋ ಜನರು ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಮಳೆರಾಯ ಬಂದೇ ಬಿಟ್ಟ. ಎಲ್ಲಾ ಜನರಿಗೆ ಏನೋ ಒಂದು ಖುಷಿ. ರೈತರಿಗೆ ಬೆಳೆಯು ಬೆಳೆಯಬಹುದು ಎಂದು ಖುಷಿ. ಹೀಗೆ ಖುಷಿಯಲ್ಲಿದ್ದಾಗ ಆದ ಘಟನೆಯೇ ಬೇರೆ. ಮನುಷ್ಯನು ಮಾಡಿದಂತಹ ಪರಿಸರದ ದುರುಪಯೋಗದಿಂದ ಪ್ರಕೃತಿ ವಿಕೋಪಕ್ಕೊಳಗಾಗಿ ಎಷ್ಟೊಂದು ದುರಂತಗಳು ನಮ್ಮ ಕಣ್ಮುಂದೆ ಕಾಣುತ್ತಿದೆ. ಎಷ್ಟು ಮನೆಗಳು, ಕಟ್ಟಡಗಳು, ಬೆಟ್ಟ, ಗುಡ್ಡಗಳು, ಪ್ರಾಣಿ, ಪಕ್ಷಿ, ಮನುಷ್ಯ ಜೀವಿಗಳು ಮಣ್ಣಲ್ಲಿ ಮಣ್ಣಾಗಿದ್ದಾರೆ. ಎಷ್ಟೋ ಮನೆಗಳು ಕುಸಿದು ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಮೊದಲನೇ ಖುಷಿಗಳು ಈಗ ಇಲ್ಲ. ಈಗ ಮಳೆ ಬಂದರೆ ಏನೋ ಹೆದರಿಕೆ. ಎಲ್ಲಿ ಯಾವಾಗ ಭೂಕುಸಿತ ವಾಗುತ್ತೆ ಎಲ್ಲಿ ಗುಡ್ಡಗಳು ಬೀಳುತ್ತೆ ಎಲ್ಲಿ ಏನೆಲ್ಲಾ ಅನಾಹುತಗಳಾಗುತ್ತೆ ಎಂಬ ಭಯದಿಂದ ಬದುಕಬೇಕಾಗಿದೆ. ಇಂತಹ ಅನಾಹುತಗಳಿಂದ ತಪ್ಪಿಸಲು ಮುಂಜಾಗ್ರತೆ ವಹಿಸಿಕೊಂಡು ನಮ್ಮ ಮಾನ್ಯ ಡಿಸಿ ಯವರು ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟಿರುತ್ತಾರೆ. ಆದರೆ ಮಕ್ಕಳಾದ ನಾವು ಶಾಲಾ ಕಾಲೇಜುಗಳಿಗೆ ರಜೆ ಸಿಕ್ಕಿದೆ ಎಂಬ ಸಂತೋಷ ಪಡುವುದರ ಬದಲು ಈ ಮಳೆಯಿಂದ ಪ್ರಕೃತಿ ವಿಕೋಪ ಕ್ಕೊಳಗಾಗದೆ ಯಾವುದೇ ತೊಂದರೆಗಳಾಗದಂತಹ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ..........
ದ್ವಿತಿಯ ಪಿಯುಸಿ
ಅನುಗ್ರಹ ವುಮೆನ್ಸ್ ಕಾಲೇಜ್ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಇವತ್ತಿನ ಹವಾಮಾನ ವು ಎಲ್ಲರ ಮನದಲ್ಲೂ ಬೆಚ್ಚಿಬೀಳಿಸುವ ಹಂತದಲ್ಲಿದೆ. ಯಾಕೆಂದ್ರೆ ಯಾವ ಕಡೆ ನೋಡಿದರು ಮಳೆಯದ್ದೇ ಸದ್ದು. ಒಮ್ಮಿಂದೊಮ್ಮೆಗೆ ಜೋರಾದ ಮಳೆ ಬರುವುದು ಇಂದಿನ ಸ್ಥಿತಿಗತಿ. ನಮ್ಮ ಸುತ್ತ ಮುತ್ತ ನೀರಿನ ಅಪಾಯ ಅಷ್ಟಿಲ್ಲದಿದರೂ ಅದು ಹಳ್ಳ ತೋಡು ಅಂತ ಸೇರಿ ತನ್ನಷ್ಟಕ್ಕೆ ನೀರು ಸಾಗುತ್ತಿದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಮಣ್ಣು ಜರಿದು, ಜನರಿಗೆ ಅಪಾಯದ ಸೂಚನೆ ನೀಡಿದೆ. ಜನಜೀವನ ಅಸ್ತವ್ಯಸ್ತ ವಾಗಿದೆ.
ಮೊನ್ನೆ ಸೋಮವಾರ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಯಲ್ಲಿ ಭಾಗವಹಿಸಲು ಅಂತ ನಾನು, ನಮ್ಮ ಹೆಮ್ಮೆಯ ಶಾಲೆಯ ಮಮತಾ ಮೇಡಂ ಮತ್ತು ವಿದ್ಯಾರ್ಥಿ ಯೊಬ್ಬನೊಂದಿಗೆ ಮುಡಿಪು ನವೋದಯ ಶಾಲೆಗೆ ಅಂತಾ ಬಸ್ ನಲ್ಲಿ ಪ್ರಯಾಣಿಸಿದೆವು. ಹೋಗುವಾಗ ವಿಪರೀತವಾಗಿ ಮಳೆ ಬರುತ್ತಿತ್ತು. ಆದರೆ ಅದಾವುದೂ ನಮ್ಮ ಲೆಕ್ಕಕ್ಕೆ ಬರಲಿಲ್ಲ. ಯಾಕಂದ್ರೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಒಂದೇ ನನ್ನ ಮನದಲ್ಲಿ ಇತ್ತು. ಆ ಶಾಲೆ ಗೆ ತಲುಪಿ, ಅಂತೂ ಇಂತೂ ಕಾರ್ಯಕ್ರಮ ಮುಗಿಸಿ ಮರಳಿ ಮನೆಗೆ ಬರಬೇಕಲ್ಲ ಅಂತಾ ಬಸ್ ಗಾಗಿ ಕಾಯುತ್ತಾ ಇದ್ದೆವು. ಹೆಚ್ಚು ಮಳೆ ಇದ್ದುದರಿಂದ ಬಸ್ ನ ಸಂಖ್ಯೆಯೂ ಕಡಿಮೆ ಇತ್ತು. ಮದ್ಯಾಹ್ನ 3ಗಂಟೆ.... ಸಂಜೆಯಾದ ಅನುಭವ. ಇನ್ನು ಮನೆ ತಲುಪಿದಾಗ ಎಷ್ಟು ಹೊತ್ತು ಆಗಬಹುದು ಅನ್ನುವಾಗಲೇ ಬಸ್ ಬಂತು. ಬಸ್ ನಲ್ಲಿ ಕುಳಿತು ಬರುವಾಗ, ಒಂದು ಕಡೆ ರಭಸವಾದ ಮಳೆ, ಗಾಳಿ, ಚಳಿಯನ್ನು ಅನುಭವಿಸಿದೆವು. ಅರ್ಧ ತಲುಪುವಾಗ ವಾಹನದ ದೊಡ್ಡ ಸಾಲು ಕಾಣುತ್ತಿದೆ. ಅಯ್ಯೋ ದೇವ್ರೆ ಇದೇನಾಯ್ತು ಅನಿಸಿತು. ವಿಷಯ ತಿಳಿದಾಗ ಅಲ್ಲೊಂದು ಕಿರು ಸೇತುವೆ, ಆ ಸೇತುವೆ ಮೇಲ್ಗಡೆ ನೀರು ಹೋಗುವ ಕಾರಣಕ್ಕೆ ಎಲ್ಲಾ ವಾಹನಗಳು ಬಾಕಿಯಾಗಿ ಉಳಿದಿರುವುದು ತಿಳಿಯಿತು. ಯಾವುದೇ ವಾಹನ ಗಳು ಇನ್ನು ಹೋಗುವುದಿಲ್ಲ ಅನ್ನುವ ಜನರ ಮಾತುಗಳು ಇನ್ನಷ್ಟು ನಮ್ಮನ್ನು ಹೆದರಿಸಿಬಿಟ್ಟವು. ಇನ್ನೆಷ್ಟು ಹೊತ್ತು ಆಗಬಹುದು ಅಂತ ಆಲೋಚನೆ ಮಾಡಿದಾಗಲೇ ನಮ್ಮ ಬಸ್ ನ ದೈರ್ಯಸ್ಥ ಚಾಲಕ ನೇರವಾಗಿ ಬಸ್ ಹಿಡಿದು ಮುಂದೆ ಸಾಗಿಯೇ ಬಿಟ್ಟರು. ದೇವರ ದಯೆಯಿಂದ ನಮಗೆ ಏನೂ ಆಗಿಲ್ಲ. ಆದರೆ ಹಲವಾರು ವಾಹನಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಅಲ್ಲಿ ಆಗಿದೆ. ಏನೇನೋ ಕೆಲಸಕಾರ್ಯಗಳಲ್ಲಿ ಹೋದವರು ಹೀಗೆ ಬರಲಾಗದೆ ನಿಲ್ಲುವ ಪರಿಸ್ಥಿತಿ ಯಾರಿಗೂ ಬರಬಾರದು. ಇಂತಹಾ ಸೇತುವೆಗಳು ಎಲ್ಲೆಲ್ಲಿ ಇರುತ್ತದೆಯೋ ಅವೆಲ್ಲವನ್ನೂ ಮಾನ್ಯ ಘನ ಸರ್ಕಾರ ವು ಆದಷ್ಟು ಬೇಗ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬುದೇ ನಮ್ಮ ಆಶಯವಾಗಿದೆ.
ಅಂತೂ ಇಂತೂ ಅಲ್ಲಿಂದ ಪುನಃ ಬೇರೊಂದು ಬಸ್ ಹಿಡಿದು ನಮ್ಮೂರಿಗೆ ಸಂಜೆ ಯ ಹೊತ್ತು ತಲುಪಿದೆನು. ಈ ಅನುಭವ ಯಾವತ್ತೂ ಮರೆಯದ ಅನುಭವವಾಗಿದೆ ನನ್ನಲ್ಲಿ. ಇತ್ತೀಚಿನ ದಿನಗಳಲ್ಲಿ ಎಡೆಬಿಡದೆ ಬರುವ ಮಳೆ ಯಾವಾಗ ನಿಲ್ಲುತ್ತದೆ ಅನ್ನುವುದನ್ನು ಊಹಿಸುವುದು ಕಷ್ಟ. ಆದುದರಿಂದ ಈ ಭೀಕರ ಮಳೆ ಗೆ ಇನ್ನು ಮುಂದಕ್ಕೆ ಯಾರಿಗೂ ಯಾವುದೇ ಅನಾಹುತ ಆಗದಿರಲಿ. ಮಳೆ ಬೇಕು ಆದರೆ ಭೀಕರ ಮಳೆ ಖಂಡಿತಾ ಬೇಡ.
9ನೇ ತರಗತಿ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ,
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಳೆಗಾಲ ಎಂದರೆ ಹಿರಿಯರಿಗಿಂತ ಮಕ್ಕಳಿಗೆ ಬಹು ಪ್ರಿಯವಾದ ಕಾಲ. ಏಕೆಂದರೆ, ಜೋರು ಮಳೆಗೆ ಶಾಲೆಗೆ ರಜೆ ಸಿಗುವಾಗ ಎಲ್ಲ ಮಕ್ಕಳ ಮನೆಯಲ್ಲಿಯೂ ಸಂಭ್ರಮದ ಅಲೆ. ಆದರೆ ಮಳೆಗಾಲದಲ್ಲಿ ಖುಷಿ ಇದ್ದಷ್ಟೇ ತೊಂದರೆ, ಫಜೀತಿಗಳು ಹೆಚ್ಚು. ರಜೆಯ ದಿನ ಮಕ್ಕಳು ಮನೆಯಲ್ಲಿದ್ದರಂತು ಅವಾಂತರಗಳು ಇನ್ನೂ ಹೆಚ್ಚು. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತ ಹೆತ್ತವರಿಗೆ ಮಳೆಗಾಲ ಎಂದರೆ ಸಮಸ್ಯೆಯ ಕಾಲವು ಹೌದು.
ಮಳೆಗಾಲ ಬಂದರೆ ಎಲ್ಲರ ಮನೆಯ ಅಂಗಳದಲ್ಲಿಯೂ ಪಾಚಿ ಹಿಡಿಯುವುದು ಸಾಮಾನ್ಯ. ಕಾಲಿಟ್ಟ ತಕ್ಷಣ ಜಾರುವ ನೆಲ. ನಡೆಯಲೇ ಸಾಹಸ ಪಡುವ ನೆಲದಲ್ಲಿ ಓಡಿದರೆ ಹೇಗಾಗಬಹುದು. ಅಂತೆಯೇ ನಮ್ಮ ಮನೆಯಲ್ಲಿ ಶಾಲೆಗೆ ರಜೆ ಎಂದು ನನ್ನ ತಮ್ಮಂದಿರು ಓಡಿದ್ದೇ ಓಡಿದ್ದು, ಅಂಗಳದಲ್ಲಿ ಜಾರಿ ಬಿದ್ದು ರಜೆಯ ಖುಷಿ ಎಲ್ಲವೂ ಮಾಯ. ಈ ಕಾಲದಲ್ಲಿ ನಮ್ಮ ಶಾಲೆಯ ಸಮವಸ್ತ್ರಗಳು ಒಣಗದೆ ಒದ್ದೆ ಸಮವಸ್ತ್ರವನ್ನೇ ಹಾಕಿಕೊಂಡು ಹೋಗುವ ಪರಿಸ್ಥಿತಿ. ದಿನವಿಡೀ ಕರೆಂಟಿಲ್ಲದೆ ಫ್ಯಾನ್ ಹಾಕಿಯೂ ಒಣಗಿಸಲಾಗದು. ದಿನವಿಡೀ ಮಳೆ ಸುರಿದು ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿ ತುಳುಕಿದರೂ ಕರೆಂಟಿಲ್ಲದೆ ಮನೆಯಲ್ಲಿ ನೀರಿಗಾಗಿ ಪರದಾಟ. ಅಷ್ಟೇ ಅಲ್ಲದೆ ಹಿಟ್ಟು ರುಬ್ಬಲು ಕರೆಂಟಿಲ್ಲದೇ ಬೆಳಿಗ್ಗೆ ತಿನ್ನಲು ಅವಲಕ್ಕಿ-ಸಜ್ಜಿಗೆ. ಆದರೂ ಮಳೆಗಾಲದಲ್ಲಿ ಅಮ್ಮ ಮಾಡುವ ಬಿಸಿ ಬಿಸಿ ಕಾಫಿ, ಕರಿದ ಹಲಸಿನ ಹಪ್ಪಳ ತಿನ್ನುವುದೆಂದರೆ ಬಹಳ ಖುಷಿ. ಅದೊಂದು ವರ್ಣಿಸಲಾಗದ ಮಧುರ ಅನುಭವ. ನಾವು ಸುಖವಾಗಿ ಕಾಲ ಕಳೆಯಬಹುದು ಆದರೆ ದಿನನಿತ್ಯವೂ ಭೂಕುಸಿತ, ಪ್ರವಾಹದಿಂದಾಗಿ ಹಲವಾರು ಜನರ ಸಾವು - ನೋವುಗಳ ವಾರ್ತೆ ಕೇಳಿದಾಗ ಹೃದಯ ಹಿಂಡಿದಂತಹ ಅನುಭವ. ಒಮ್ಮೆ ಯೋಚಿಸಿ ನೋಡಿ, ಬೇಸಿಗೆಯಲ್ಲಿ ಗಿಡ ಮರಗಳ ಕಡಿದು ಧರೆಗೆ ಅಪಚಾರವೆಸಗಿದ ಮಾನವನಿಗೆ ಪ್ರಕೃತಿಯೇ ಪಾಠ ಕಲಿಸುತ್ತಿದೆ ಎಂದು ಅನಿಸುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಧರೆಯನ್ನು ಉಳಿಸಲು ಎಲ್ಲರೂ ಸಜ್ಜಾಗಿ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ.
8ನೇ ತರಗತಿ
ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಳೆಯ ಪಜೀತಿ ಪ್ರಸಂಗದಲ್ಲಿ ನನಗಾದ ಅನುಭವ ಹಾಗೂ ನಾ ಕೇಳಿ ತಿಳಿದುಕೊಂಡಿರುವ ಬಗ್ಗೆ ವಿವರಿಸಿರುತ್ತೇನೆ....
ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವರಾಶಿ ಕೂಡ ಒಂದನ್ನೊಂದು ಅವಲಂಬಿಸಿರುತ್ತದೆ. ಪ್ರಕೃತಿ ಮತ್ತು ಜೀವರಾಶಿಗೆ ಅವಿನಾಭಾವ ಸಂಬಂಧವಿರುತ್ತದೆ. ನೀರು ಗಾಳಿ ಮಳೆ ಪ್ರಕೃತಿಯಲ್ಲಿನ ಕೊಡುಗೆಯಾಗಿರುತ್ತದೆ. ಮಳೆ ಬಾರದೆ ಇದ್ದರೆ ನಾವು ಭೂಮಿಯ ಮೇಲೆ ಜೀವಿಸಲು ಸಾಧ್ಯವಿಲ್ಲ. ಹಾಗಾಗಿ ಮಳೆಯೂ ನಮಗೆ ಅಗತ್ಯವಿದೆ. ಆದರೆ ಈ ಬಾರಿಯ ಮಳೆಯು ಸ್ವಲ್ಪ ಜಾಸ್ತಿಯಾಗಿದೆ. ನಮ್ಮ ಅಜ್ಜಿ ತಾತ ಹೇಳುವ ಪ್ರಕಾರ ಹೋಲಿಸಿ ನೋಡಿದರೆ ಈ ಮಳೆ ಬಹಳ ಕಡಿಮೆಯಂತೆ. ನಾನು ಅವರಿಂದ ತಿಳಿದುಕೊಂಡ ಪ್ರಕಾರ ಇದು ಮಳೆ ಹೆಚ್ಚಾಗಿ ಅವಾಂತರವಲ್ಲ ಮಿಗಿಲಾಗಿ ಬುದ್ಧಿವಂತ ಮನುಷ್ಯರಾದ ನಾವುಗಳು ಸುಂದರ ಪ್ರಕೃತಿಯ ನಾಶ ಮಾಡಿ ನೀರು ಹಾದು ಹೋಗಬೇಕಾದಂತ ಜಾಗವನ್ನು ಕಸಿದು ಕೊಂಡ ಪರಿಣಾಮ ಅಲ್ಲಲ್ಲಿ ಅನಾಹುತವಾಗಿದೆ ಎಂದು. ಕಾರಣಗಳೇನೇ ಇರಲಿ, ಆದರೆ ಇದರಿಂದಾಗಿ ಅನಾಹುತ ಕೂಡ ಆಗಿದೆ. ಮಳೆಯಿಂದಾಗಿ ಬೆಳೆಗಳಿಗೆ ಹಾನಿ ಹಲವಾರು ಕಷ್ಟಗಳು ಬಂದೊದಗಿದೆ. ಶಾಲೆಗೆ ರಜೆಯೂ ಇದೆ. ಆದರೆ ಕಳೆದ ಬಾರಿ ರಜೆ ಸಿಕ್ಕಾಗಲೆಲ್ಲಾ ಮಳೆ ಕಡಿಮೆಯಾಗುತ್ತಿತ್ತು ಈ ವರ್ಷ ಅದೂ ಇಲ್ಲ. ಈ ಮಳೆಯಿಂದಾಗಿ ಮೊನ್ನೆ ನಾನು ಮತ್ತು ಅಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿಯು ದೊಡ್ಡ ಕಾರಿನಲ್ಲಿ ಬಂದಾಗ ಮೈಮೇಲೆಲ್ಲ ಕೆಸರು ನೀರು ರಟ್ಟಿಸಿಕೊಂಡು ಹೋಗಿದ್ದಾರೆ. ಅವರ ತಪ್ಪ್ಪೋ ಅಥವಾ ಮಾರ್ಗದಲ್ಲಿನ ಗುಂಡಿಗಳ ತಪ್ಪೋ.. ಯಾವುದೆಂದು ಗೊತ್ತಾಗಿಲ್ಲ. ಆದರೆ ಅಲ್ಲಿ ಚಂಡಿಯಾಗಿರೋದು ನಾನು ಮತ್ತು ಅಮ್ಮಅದಂತೂ ಗೊತ್ತಾಯ್ತು..!!
ಧನ್ಯವಾದಗಳೊಂದಿಗೆ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಚ್ಚಿನ
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ಮಳೆ ನಮ್ಮ ಭೂಮಿಗೆ ಬೀಳುವ ಒಂದು ಅಮೂಲ್ಯವಾದ ಸಂಪತ್ತು ಎಂದು ಹೇಳಬಹುದು. ಆದರೆ ಅದೇ ಮಳೆ ಹೆಚ್ಚಾದರೆ ಪ್ರವಾಹ, ಗುಡ್ಡಕುಸಿತ ಮುಂತಾದ ವಿಕೋಪಗಳು ಆಗಬಹುದು. ನನ್ನ ಮಳೆಯ ಅನುಭವ ಹೇಳುವುದಾದರೆ ಇದೆ ವಾರದ ಮಂಗಳವಾರದಂದು ನಮಗೆ ಮೊದಲ ರೂಪಣಾತ್ಮಕ ಪರೀಕ್ಷೆ ನಡೆಯಲಿತ್ತು. ನಾನು ಶಾಲೆಗೆ ಹೊರಡಲು ಕೆಲವೇ ನಿಮಿಷಗಳಿರುವಾಗ ಶಾಲೆಗೆ ರಜೆ ಎಂದು ಸಂದೇಶ ಕಳುಹಿಸಿದರು. ಆಗ ನನಗೆ ತುಂಬಾ ಸಂತೋಷವಾಯಿತು. ಏಕೆಂದರೆ, ಇನ್ನೂ ಚೆನ್ನಾಗಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದೆಂದು. ಆಗಲೇ ನಾನು ನನ್ನ ಭುಜದಲ್ಲಿ ಇದ್ದ ಬ್ಯಾಗ್ ಅನ್ನು ತೆಗೆದು ಓದಲು ಕುಳಿತೆನು. ಓದುವುದರ ಮೂಲಕ ಒಂದು ದಿನವನ್ನು ಕಳೆದು ಬಿಟ್ಟೆನು. ಅಂದು ಸಂಜೆ ವಿಪರೀತ ಮಳೆಯಾಗುತ್ತಿದ್ದು. ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಹರಿಯುತ್ತಿರುವ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮವಾಯಿತು. ಈ ವಿಷಯ ನನಗೆ ತುಂಬಾ ಸಂತೋಷವನ್ನು ನೀಡಿತು. ಮರುದಿವಸ ಅಂದರೆ ಬುಧವಾರ ಸಹ ನಮಗೆ ಜಿಲ್ಲಾಧಿಕಾರಿ ರಜೆಯನ್ನು ನೀಡಿದ್ದರು. ಮುಂಜಾನೆ ಹೆಚ್ಚಿನ ಮಳೆಯಾಗುತ್ತಿರಲಿಲ್ಲ ಆದರೆ ಸಂಜೆ ಶುರುವಾಗಿದ್ದ ಮಳೆ ರಾತ್ರಿಯಾದರೂ ನಿಂತಿರಲಿಲ್ಲ. ನಾನು ಪರೀಕ್ಷೆಯ ವಿಷಯಗಳನ್ನು ಓದುತ್ತಿರುವಾಗ ರಜೆ ಎಂದು ಸಂದೇಶ ಕಳುಹಿಸಿದರು. ಪುಸ್ತಕ ಮಡಚಿ ಮಲಗಲು ಹೋದೆನು. ಮರುದಿವಸ ಅಂದರೆ ಗುರುವಾರ ನನ್ನ ಪರೀಕ್ಷೆಯ ತಯಾರಿ ಎಲ್ಲಾ ಮುಗಿದಿತ್ತು. ಹಾಗಾಗಿ ನಾನು ಆಡುವ ಎಂದು ಅಂಗಳಕ್ಕೆ ಇಳಿದಾಗ ಜೋರಾಗಿ ಮಳೆ ಸುರಿಯಲು ಪ್ರಾರಂಭಿಸಿತು ಮತ್ತು ವಿಪರೀತ ಗಾಳಿಯು ಬರುತಿತ್ತು. ಸಂಜೆ ಆಗುವಾಗ ಸ್ವಲ್ಪ ಮಳೆ ನಿಂತಿತ್ತು. ನಾನು ಅಂಗಳಕೆ ಹೋಗಿ ಆಟವಾಡುತ್ತಿದ್ದೆನು. ನನಗೆ ಮನೆಯಲ್ಲಿ ಒಬ್ಬಳೇ ಆಟವಾಡಿ ಅಭ್ಯಾಸ ಏಕೆಂದರೆ, ನಮ್ಮ ಮನೆಯ ಅಕ್ಕಪಕ್ಕ ಅಕ್ಕಂದಿರು ಆಗಲಿ ತಂಗಿಯದಿರು ಆಗಲಿ ಯಾರು ಕೂಡ ಇಲ್ಲ. ನಾನು ಆಟವಾಡಿದ ನಂತರ ಕೈ ಕಾಲು ಮುಖ ತೊಳೆದು ಮನೆಯೊಳಗೇ ಬಂದೆನು. ನಂತರ ಪರೀಕ್ಷೆಗೆ ಇರುವ ವಿಷಯಗಳನ್ನು ಪುನರಾವರ್ತನೆ ಮಾಡಿ ಮೊಬೈಲ್ ನೋಡುತ್ತಿರುವಾಗ ರಜೆ ಎಂದು ಸಂದೇಶ ಕಳುಹಿಸಿದರು. ನಾನು ಅಂದುಕೊಂಡೆ ಮಂಗಳವಾರ ಮುಗಿಯುತಿದ್ದ ಪರೀಕ್ಷೆ ಇನ್ನೂ ಯಾವಾಗ ಮುಗಿಯುತ್ತೋ ಎಂದು ಯೋಚಿಸಿ ಮಲಗಲು ಹೋದೆನು. ಮರುದಿವಸ ಮುಂಜಾನೆ ಜೋರಾದ ಮಳೆಯ ಜೊತೆಗೆ ಸಿಡಿಲು ಕೂಡ ಬರುತಿದ್ದು. ಎದ್ದು ನೋಡುವಾಗ ನನಗೆ ಇಷ್ಟವಾದ ಶ್ವಾನ ನನಗೋಸ್ಕರ ಮನೆಯ ಮುಂದೆ ಕಾಯುತಿತ್ತು. ಆದರೆ ಅದು ನಾವು ಸಾಕಿದ ಶ್ವಾನ ಆಗಿರಲಿಲ್ಲ. ಆದರೂ ನಾನು ಅದರ ಜೊತೆ ಆಟ ವಾಡಿದೆನು. ನಂತರ ಅದನ್ನು ಅದರ ಮನೆಯವರು ಕರೆದುಕೊಂಡು ಹೋದರು. ಈ ಮಳೆಯಿಂದಾಗಿ ನಮ್ಮ ಊರಿಗೆ ಏನು ಹಾನಿ ಉಂಟಾಗಲಿಲ್ಲ ಎಂಬುದೇ ಸಂತೋಷ.
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕರಾಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಪ್ರಕೃತಿಯನ್ನು ವರ್ಣಿಸಲು ಪದಗಳೇ ಸಾಲಲ್ಲ. ಪ್ರಕೃತಿಯಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಮನುಷ್ಯ ತನ್ನ ಜನನದಿಂದ ಮರಣದವರೆಗೆ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಎದುರಿಸುತ್ತಾ ಜೀವಿಸಬೇಕು. ಪ್ರಕೃತಿಯೆಂದ ಕ್ಷಣ ನೆನಪಾಗುವುದೆ ಹಸಿರು ಬಣ್ಣ. ಇಡೀ ಪ್ರಕೃತಿಯೇ ಹಸಿರು ಹಸಿರಾಗಿ ಈ ವರ್ಷ ತುಂಬಿ ಹರಿಯುತ್ತಿದೆ. ಎಲ್ಲಿ ಕಂಡರೂ ನೀರು. ನೀರು ಅತ್ಯಮೂಲ್ಯ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೆಚ್ಚಾದರೆ ಅಮೃತವು ವಿಷ ಎಂದಂತೆ ಮಳೆ ಹೆಚ್ಚಾದರೆ ಇಡೀ ಪ್ರಕೃತಿಯನ್ನೆ ನಾಶ ಮಾಡಿ ಬಿಡುತ್ತದೆ ಎಂದು ಈ ವರ್ಷ ಸಾಬಿತ್ತು ಪಡಿಸಿದೆ. ಎಲ್ಲಿ ಕಂಡರೂ ಹಸಿರು ಎಂದು ಖುಷಿ ಪಡಲಾ ಇಲ್ಲಾ ಎಲ್ಲ ಕೊಚ್ಚಿ ಹೋಗುತ್ತಿದೆ ಎಂದು ದು:ಖ ಪಡಲಾ. ಈ ಮಳೆಯಿಂದ ಗದ್ದೆ ಗದ್ದೆ ಒಂದಾಗಿ ಬೆಳೆ ಎಲ್ಲ ನಾಶವಾಗುತ್ತಿದೆ. ದೊಡ್ಡ ದೊಡ್ಡ ಮರಗಳು ವಿದ್ಯುತ್ ಕಂಬದ ಮೇಲೆ, ಮನೆಯ ಮೇಲೆ ಬಿದ್ದು ಹಾನಿ ಉಂಟು ಮಾಡುತ್ತಿದೆ. ತಾನು ತನ್ನಿಂದ ಎಂದು ಅಹಂ ತೋರಿಸುವ ಜನರಿಗೆ ಸರಿಯಾಗಿ ಪಾಠ ಕಲಿಸಲು ಪ್ರಕೃತಿ ಸಿದ್ಧವಾಗಿದೆ ಎಂದು ಅನಿಸುತ್ತಿದೆ. ಪ್ರಕೃತಿ ಮುನಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು ಅಳಿಯೂರು
ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ದಿನ ಬೆಳಗ್ಗೆ ಹನಿ ಹನಿ ಮಳೆ ಬರುತ್ತಿತ್ತು. ಸ್ನಾನ ಮಾಡಿ ತಿಂಡಿ ತಿಂದು, ಶಾಲೆಯ ಚೀಲ, ಬುತ್ತಿ ಹಿಡಿದು ಶಾಲೆಯ ಬಸ್ಸನ್ನು ಹತ್ತಿ ಶಾಲೆಗೆ ತಲುಪಿದೆನು. ಒಂದನೇ ಅವಧಿಯ ತರಗತಿ ಮುಗಿಯುವಾಗ ಜೋರಾದ ಮಳೆ ಶುರು. ಕಿಟಕಿಯಿಂದ ಹೊರಗಡೆ ನೋಡಿದರೆ ಎಲ್ಲ ಕತ್ತಲು. ಜೋರು ಮಳೆ ನಿಲ್ಲಲೇ ಇಲ್ಲ. ಉಪ್ಪಿನಂಗಡಿಯಲ್ಲಿ ಇರುವ ಇಂದ್ರಪ್ರಸ್ಥ ವಿದ್ಯಾಲಯವೇ ನನ್ನ ಶಾಲೆ. ಶಾಲೆಯ ಹಿಂದಿನ ರಸ್ತೆಯ ಆಚೆ ದೂರಕ್ಕೆ ಹೋದರೆ ಅಲ್ಲಿ ನೇತ್ರಾವತಿ ನದಿ ಇದೆ. ದಿನಾ ಶಾಲೆಯ ಬಸ್ಸಿನಲ್ಲಿ ಹೋಗಿ ಬರುವಾಗ ನದಿಯ ನೀರು ಎಷ್ಟು ಇದೆ ಅಂತ ನೋಡುವ ಖುಷಿ ನನಗೆ. ನೇತ್ರಾವತಿ ನದಿ ದಡದಲ್ಲಿ ಮಹಾಕಾಳಿ ಮತ್ತು ಸಹಸ್ರಲಿಂಗೇಶ್ವರ ದೇವಸ್ಥಾನ ಇದೆ. ದೇವಸ್ಥಾನದ ಎಡಗಡೆಯಿಂದ ಇನ್ನೊಂದು ನದಿ ಹರಿದು ಬರುತ್ತದೆ. ಅದರ ಹೆಸರೇ ಕುಮಾರಧಾರ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರು ಒಟ್ಟುಸೇರಿ ದೇವಸ್ಥಾನದ ಮುಂದಿನ ಭಾಗಕ್ಕೆ ಬಂದರೆ ಸಂಗಮ ಅಂತ ಕರೆಯುವರು. ಆ ದಿನ ಜೋರು ಮಳೆಗೆ ಸಂಗಮ ಖಂಡಿತವೆಂದು ಶಾಲೆಗೆ ರಜೆ ಕೊಟ್ಟರು. ಶಾಲೆಯಿಂದ ಹೊರಟು ಶಾಲೆಯ ಬಸ್ಸಿನಲ್ಲಿ ಬಂದು ನಾನು ಇಳಿಯುವ ಜಾಗದಲ್ಲಿ ಇಳಿದೆ. ಅಲ್ಲಿಂದ ನಮ್ಮ ಮನೆಗೆ ಹೋಗುವಾಗ ದಾರಿ ಮಧ್ಯೆ ಒಂದು ಸಣ್ಣ ತೋಡು ಇದೆ. ಆದರೆ ಮಳೆಯ ನೀರಿಗೆ ಆ ಸಣ್ಣ ತೋಡು ದೊಡ್ಡದಾಗಿ ಕಾಣಿಸುತ್ತಿತ್ತು. ಹರಿಯುವ ನೀರು ನೋಡುವುದು ನನಗೆ ಬಹಳ ಇಷ್ಟ. ಆದರೆ ಆ ದಿನ ತೋಡಿನಲ್ಲಿ ಜಾಸ್ತಿ ನೀರು, ಅದರ ರಭಸ ನೋಡಿ ಸಣ್ಣ ಹೆದರಿಕೆ ಆಯಿತು. ಮನೆಗೆ ಬೇಗ ಹೋಗಿ ಮುಟ್ಟುವೆ ಎಂದು ಬೇಗ ಬೇಗ ನಡೆದೆನು. ನಡೆಯಲು ಸಾಧ್ಯ ಆಗಲಿಲ್ಲ. ನೋಡಿದರೆ ನನ್ನ ಒಂದು ಕಾಲು ಕೆಸರಿನಲ್ಲಿ ಹೂತು ಹೋಗಿತ್ತು. ಒಂದು ಕೈಯ್ಯಲ್ಲಿ ಆ ಕಾಲನ್ನು ಕೆಸರಿನಿಂದ ಜೋರಾಗಿ ಎಳೆದೆ. ಕಾಲು ಕೆಸರಿನಿಂದ ಹೊರಗೆ ಬಂತು. ಇನ್ನು ನಡೆಯುವೆ ಅಂತ ನಡೆದಾಗ ನಡೆಯಲು ಆಗಲಿಲ್ಲ. ಏನಾಯಿತು ಅಂತ ನೋಡಿದಾಗ ಒಂದು ಕಾಲು ಎಳೆದ ರಭಸಕ್ಕೆ ಇನ್ನೊಂದು ಕಾಲು ಕೆಸರಿನಲ್ಲಿ ಮುಳುಗಿತ್ತು. ಯಾವಾಗಲು ಖುಷಿ ಕೊಡುತ್ತಿದ್ದ ಮಳೆಗೆ ಬೇಸರದಿಂದ ಬೈಗುಳ ಕೊಟ್ಟೆ. ನನ್ನ ಅವಸ್ಥೆಗೆ ನನಗೆ ನಗು ಬಂತು. ಜೋರು ಗಾಳಿಗೆ ನನ್ನ ಕೊಡೆಯು ಅಡಿಮೇಲು ಆಗಿ ತಾವರೆ ಹೂವಿನ ಹಾಗೆ ಆಯಿತು. ಇನ್ನು ಏನು ಮಾಡುವುದು ಅಂತ ಯೋಚನೆ ನನಗೆ. ಆಗಲೇ ಅಲ್ಲಿಗೆ ಬಂದ ನನ್ನ ಅಪ್ಪನನ್ನು ನೋಡಿ ಹೆದರಿಕೆ ಬೇಸರ ಮಾಯ ಆಯಿತು. ನನ್ನ ಪಜೀತಿ ನೋಡಿ ಅಮ್ಮ ಬಯ್ಯುವಳು ಅಂತ ಯೋಚಿಸುತ್ತ ಮನೆಗೆ ತಲುಪಿದೆ. 'ಹಂಡೆಯಲ್ಲಿ ಬಿಸಿ ನೀರಿದೆ, ಸ್ನಾನ ಮಾಡಿ ಬಾ, ಆಮೇಲೆ ಊಟ ಮಾಡು' ಅಂತ ಅಮ್ಮ ಹೇಳಿದಾಗ ನನಗೆ ಅಮ್ಮ ಬಯ್ಯಲಿಲ್ಲವಲ್ಲ ಅಂತ ಸಮಾಧಾನ ಆಯಿತು. ಬಿಸಿನೀರು ಸ್ನಾನ ಮುಗಿಸಿ ಬಿಸಿ ಬಿಸಿ ಊಟ ಮುಗಿಸಿದೆ.ಹೊದಿಕೆ ಹಾಕಿ ಮಲಗಿ ನಿದ್ದೆ ಮಾಡಿದೆ. ಮತ್ತೆ ಎದ್ದು ಬಿಸಿ ಹಾಲು ಕುಡಿದು ಮನೆಯ ಒಳಗಡೆಯೆ ಕುಳಿತು ಮಳೆಯ ನೋಡುತ್ತಾ ಖುಷಿಪಟ್ಟೆ.
9ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಾನು ಲಕ್ಷಣ್ಯ ಜಿ.ಕೆ. ಗೆಳೆಯರೇ.... ಮಳೆಯ ಅವಾಂತರ ನಾವು ದಿನಾಲೂ ನೋಡುತ್ತಾ ಇದ್ದೇವೆ. ರಭಸವಾಗಿ ಬೀಸುವ ಗಾಳಿಯ ಜೊತೆ... ಮಳೆ ಬಂದಾಗ ಒಮ್ಮೆ ಎದೆ ಧಸಕ್... ಎನ್ನುತ್ತದೆ ಅಲ್ಲವೇ...? ಎಲ್ಲಿ ಮರ ಬೀಳುವುದೋ... ಎಲ್ಲಿ ವಿದ್ಯುತ್ ಕಂಬ ಮುರಿಯುವುದೋ.... ಎಲ್ಲಿ ಏನು ಅನಾಹುತವಾಗುವುದೋ ಎನ್ನುವ ಆತಂಕವೋ.... ಆತಂಕ...!!. ಈ ಮಧ್ಯೆ ಶಾಲೆಗೆ ತಲುಪಿದ ಮೇಲೆ ಜೋರಾಗಿ ಮಳೆ ಪ್ರಾರಂಭವಾದ ದಿನ ಅಂದು. ಒಮ್ಮೆ ಜೋರು ಮಳೆ... ಮತ್ತೊಮ್ಮೆ ಮೌನ.... ಮತ್ತೆ ಜೋರು ಮಳೆ.... ಹೀಗೆ ಮಳೆಯ ಕಣ್ಣುಮುಚ್ಚಾಲೆ ಆಟಕ್ಕೆ ಸುಸ್ತಾಗಿ ಆ ದಿನ ಸಂಜೆ ತನಕ ಶಾಲೆಯಲ್ಲಿ ಹೇಗೂ ಕಳೆದೆವು. ಸಂಜೆ ಮನೆಗೆ ವಾಪಸ್ ಆಗುವಾಗ ಬಸ್ ಇಳಿದು ನನ್ನ ಅಕ್ಕ ಮತ್ತು ಗೆಳತಿಯೊಂದಿಗೆ ರಸ್ತೆ ದಾಟುವ ಸಂದರ್ಭ ಒಂದಿತ್ತು. ನಡು ರಸ್ತೆಯಲ್ಲಿ ಬರುವಾಗಲೇ ಒಮ್ಮೆಲೇ ಜೋರಾದ ಮಳೆ ಮತ್ತು ಗಾಳಿ ಪ್ರಾರಂಭವಾಯಿತು.... ನೋಡು ನೋಡುತ್ತಿದ್ದಂತೆ ನಾನು ಹಿಡಿದುಕೊಂಡಿದ್ದ ಕೊಡೆಯು ಪೂರ್ತಿಯಾಗಿ ಮೇಲ್ಮುಖವಾಗಿ ಹಾರಿತು...!! ಸರಿ ಮಾಡಲೆತ್ನಿಸಿದರೂ ಸರಿಯಾಗದೆ ಇದ್ದಾಗ... ನಾನು ಅತ್ತಿತ್ತ ನೋಡಿ ನನ್ನನ್ನು ನೋಡಿ ಎಷ್ಟು ಮಂದಿ ನಗಾಡುತ್ತಿದ್ದಾರೋ... ಎಂದು ಮನದಲ್ಲಿ ನಾಚಿಕೆ ಪಟ್ಟೆ. ಅರ್ಧ ಒದ್ದೆಯಾಗಿದ್ದವಳು ಈಗ ಪೂರ್ತಿಯಾಗಿ ಒದ್ದೆಯಾಗಿ ಮೈ ನಡುಗುತ್ತಿತ್ತು... ಪುಣ್ಯಕ್ಕೆ ಕೊನೆಗೂ ಕೊಡೆ ಸರಿಯಾಯಿತು.... ನಾನು ತಲೆತಗ್ಗಿಸಿ ಎಲ್ಲೂ ತಲೆ ಮೇಲೆತ್ತದೆ ಸೀದಾ ಸರಸರನೆ ರಸ್ತೆಯಲ್ಲಿ ನಡೆದುಕೊಂಡು ಬಂದು ಮನೆ ಸೇರಿದೆ. ಅಬ್ಬಾ....!! ಈ ಸಲದ ಮಳೆ ಎಂದರೆ ಮಳೆಯೇ.... ಅಲ್ಲವೇ ಗೆಳೆಯರೇ....!
8ನೇ ತರಗತಿ
ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************** **
ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಆಶಿತಾ. 29ನೇ ಸೋಮವಾರ ರಾತ್ರಿ ಎಲ್ಲಾ ಶಾಲೆ ಕೆಲಸಗಳನ್ನು ಮಾಡಿ ಮಲಗಿದೆವು. ಮರುದಿನ ಬೆಳಗ್ಗೆ ಎದ್ದಾಗ ಜೋರಾದ ಮಳೆಯು ಆರಂಭವಾಗಿತ್ತು. ಇವತ್ತು ಹೇಗೆ ಶಾಲೆಗೆ ಹೋಗುವುದು ಎಂದು ಚಿಂತಿಸುತ್ತಿರುವ ಸಮಯದಲ್ಲಿ ಶ್ರೀಯುತ ಇಂಪಶೇಕರ್ ಅವರು ರಜೆ ಘೋಷಣೆ ಮಾಡಿದ್ದಾರೆ ಎಂಬ ಸುದ್ದಿಯು ತಿಳಿಯಿತು. ನಮಗೆ ಖುಷಿಯೋ ಖುಷಿ. ಹಾಗೆ ಸ್ವಲ್ಪ ವಿರಾಮಗೊಂಡ ಮಳೆಯು ಮತ್ತೆ ಗಾಳಿ ಸಮೇತ ಬಂತು. ಗಿಡ ಮರಗಳು ನೃತ್ಯವಾಡಲು ತೊಡಗಿದವು. ಹಕ್ಕಿಗಳೆಲ್ಲ ಗೂಡಿಗೆ ಸೇರಿದವು. ಊರಿನ ನದಿಗಳೆಲ್ಲ ಉಕ್ಕಿ ಹರಿದವು. ಮಳೆಯು ಬಹಳ ಜೋರಾಗಿ ಬರುತ್ತಿದ್ದ ಆ ಸಮಯದಲ್ಲಿ ವಯನಾಡಿನಲ್ಲಿ ನಡೆದ ದುರಂತದ ಸುದ್ದಿಯು ತಿಳಿಯಿತು. ಇದರಿಂದ ಮನಸ್ಸಿಗೆ ಬಹಳ ಬೇಸರವಾಯಿತು. ಅಲ್ಲಿಯ ಜನರ ಪರಿಸ್ಥಿತಿಯನ್ನು ಆಲೋಚಿಸುವಾಗ ಮನಸ್ಸಿಗೆ ಹಾನಿಯಾಗುವಂತಾಗಿತ್ತು. ಆ ದಿನ ಎಡೆಬಿಡದೆ ಮಳೆಯು ಸುರಿಯುತ್ತಿದ್ದ ಕಾರಣ ಕಾಸರಗೋಡಿಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಆದಕಾರಣ ಮಧ್ಯಾಹ್ನವೇ ನಮಗೆ ನಾಳೆಯೂ ರಜೆ ಎಂಬ ಸುದ್ದಿಯು ತಿಳಿದಿತ್ತು.
ಹಾಗೆ ಒಟ್ಟಾಗಿ ನಮಗೆ ನಾಲ್ಕು ದಿನ ರಜೆ ಘೋಷಣೆ ಮಾಡಲಾಗಿತ್ತು. ಮೊದಲ ದಿನ ಖುಷಿಯಾಗಿದ್ದೆವು. ಬಾಕಿ ದಿನ ಶಾಲೆಯ ನೆನಪು ಮರುಕಳಿಸುತ್ತಿತ್ತು. ಮಳೆಯಾದ ಕಾರಣ ಹೊರಗೆ ಹೋಗಲು ಆಗುತ್ತಿರಲಿಲ್ಲ. ಇದರಿಂದ ಮನವು ಶಾಲೆಗಾಗಿ ಹಂಬಲಿಸುತ್ತಿತ್ತು.
9ನೇ ತರಗತಿ
ಸರಕಾರಿ ಹಿರಿಯ ಪ್ರೌಢಶಾಲೆ ಬೇಕೂರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
******************************************