-->
ಜಗಲಿ ಕಟ್ಟೆ : ಸಂಚಿಕೆ - 36

ಜಗಲಿ ಕಟ್ಟೆ : ಸಂಚಿಕೆ - 36

ಜಗಲಿ ಕಟ್ಟೆ : ಸಂಚಿಕೆ - 36
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

  
     ಮೊನ್ನೆಯಷ್ಟೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ನೋಡಿದ್ದೀರಿ. ಅಂದಾಜು 3000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಿತ್ರಗಳನ್ನು ಕಳುಹಿಸುವಾಗ ಪ್ರತಿಯೊಬ್ಬ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ನಿರೀಕ್ಷೆಯನ್ನಿಟ್ಟುಕೊಂಡಿರುವುದು ಸರ್ವೇಸಾಮಾನ್ಯ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುವುದೇ ಮುಖ್ಯ ಆ ಮೂಲಕ ಇನ್ನೂ ಹೆಚ್ಚಿನ ಅನುಭವವಾಗಬೇಕು ಎನ್ನುವ ನಿಲುವನ್ನು ಹೊಂದಿರುತ್ತಾರೆ. 
     "ನಿರೀಕ್ಷೆ" ಎನ್ನುವುದೇ ಅಪಾಯಕಾರಿ ಎನ್ನುವ ಆತಂಕವನ್ನು ಗೋಪಾಡ್ಕರ್ ಸರ್ ಆರಂಭದಿಂದಲೂ ಹೇಳುತ್ತಾ ಬಂದವರು. ಪ್ರಯತ್ನಕ್ಕೆ ತಕ್ಕ ಫಲ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಅಚಲವಾಗಿರಬೇಕು. ಸೋಲನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಯಬೇಕು. ಆ ಮೂಲಕ ಇನ್ನಷ್ಟು ಬೆಳೆಯುವ ಛಲವನ್ನು ಹೊಂದಬೇಕು.
      ಪ್ರಶಸ್ತಿ ಬರಲಿಲ್ಲ ಅನ್ನುವ ಕಾರಣಕ್ಕೆ ಇನ್ನು ಮುಂದೆ ಯಾವ ಕಾರ್ಯಕ್ರಮಗಳಿಗೂ ಹೋಗುವುದೇ ಬೇಡ ಎನ್ನುವ ಮೊದಲ ಆಲೋಚನೆಗೆ ಬಂದುಬಿಡುವುದು ಮೊದಲ ತಪ್ಪು. ವಿದ್ಯಾರ್ಥಿಗಳಿಗೆ ಉತ್ತೇಜಿಸುವ ಪ್ರೋತ್ಸಾಹಿಸುವ ಕೆಲಸ ಹೆತ್ತವರಿಂದ, ಶಿಕ್ಷಕರಿಂದ ಆಗಲೇಬೇಕಾಗಿದೆ. ಕೆಲ ವಿದ್ಯಾರ್ಥಿಗಳು ವೇಗವಾಗಿ ಒಂದು ವಿಷಯದಲ್ಲಿ ಪಕ್ವವಾದರೆ ಕೆಲ ವಿದ್ಯಾರ್ಥಿಗಳು ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳುತ್ತಾರೆ. ಪ್ರತಿಯೊಬ್ಬರ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. ಮಕ್ಕಳ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಅರ್ಥೈಸಿಕೊಂಡು ಬೆಳೆಯಲು ಪೂರಕವಾದ ವಾತಾವರಣವನ್ನು ಪೂರೈಸಿದರೆ ಪ್ರತಿಯೊಬ್ಬ ಮಗು ಕೂಡ ಶ್ರೇಷ್ಠ ವಾಗುತ್ತದೆ.
        ಈ ಮೊದಲು ತಿಳಿಸಿದ ಹಾಗೆ ಮಕ್ಕಳ ಜಗಲಿಯಲ್ಲಿ 'ಸ್ಪರ್ಧೆ' ಯನ್ನು ಏರ್ಪಡಿಸುತ್ತಿರುವುದು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಕಲಿಕೆಯ ಜೊತೆಗೆ ಕಲೆ ಮತ್ತು ಸಾಹಿತ್ಯದ ನಂಟನ್ನು ಬೆಳೆಸಿಕೊಳ್ಳಬೇಕೆನ್ನುವ ದೃಷ್ಟಿಯಿಂದ. ಅದಕ್ಕಾಗಿಯೇ ನಾವು ಕೆಲವಷ್ಟು ನಿಯಮಗಳನ್ನು ರೂಪಿಸಿಕೊಂಡಿದ್ದೇವೆ. ಭಾಗವಹಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಆನ್ಲೈನ್ ಮೂಲಕ ಪ್ರಮಾಣ ಪತ್ರವನ್ನು ಕಳುಹಿಸುತ್ತೇವೆ. ಅತ್ಯುತ್ತಮವಾಗಿ ರಚನೆ ಮಾಡಿರುವ ವಿದ್ಯಾರ್ಥಿಗಳಿಗೆ ಮೆಚ್ಚುಗೆ ಬಹುಮಾನವನ್ನು ನೀಡುತ್ತೇವೆ. ಮಕ್ಕಳ ಜಗಲಿಯಲ್ಲಿ "ಮಕ್ಕಳ ಜಗಲಿ ಕಲಾ ಪ್ರಶಸ್ತಿ" ಯನ್ನು ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿರುವುದು. ಇನ್ನೊಂದು ಬಾರಿ ಅಂತಹ ಅವಕಾಶವನ್ನು ಪಡೆಯಬೇಕಾದರೆ ಐದು ವರ್ಷಗಳ ಕಾಲಾವಕಾಶ ಇದೆ. ಈ ಕಾಲಾವಧಿಯಲಿ ನಿರಂತರ ಪರಿಶ್ರಮವಿರಬೇಕು. ಕಲಾಕೃತಿಯ ರಚನೆಯಲ್ಲಿ ಅದ್ಭುತ ಸಾಧನೆಯನ್ನು ಗಳಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಈ ಕಾರಣದಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ಪ್ರತಿಭಾ ಶಾಲಿ ವಿದ್ಯಾರ್ಥಿಗಳು ಬೆಳಕಿಗೆ ಬರಲು ಅವಕಾಶ ನೀಡಿದಂತಾಗಿದೆ.
      ಮಕ್ಕಳ ಜಗಲಿಯಲ್ಲಿ ನಿತ್ಯ ನಿರಂತರವಾಗಿ ಭಾಗವಹಿಸುವುದರ ಜೊತೆಗೆ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆ ಮಾತ್ರ ಗುರಿಯಾಗಬಾರದು. ನಿರಂತರ ಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿದ್ಯಾರ್ಥಿಗಳಿಂದ ಕಥೆ ಕವನ ಲೇಖನಗಳ ಸ್ವ ರಚನೆಯ ಬರಹಗಳನ್ನು ಸಿದ್ಧಗೊಳಿಸಿ ನಮಗೆ ಕಳುಹಿಸುವ ಪ್ರಯತ್ನವನ್ನು ಪೋಷಕರಿಂದ ಸಾಧ್ಯವಾದರೆ ವಿದ್ಯಾರ್ಥಿಗಳು ಖಂಡಿತವಾಗಲೂ ಸಾಹಿತ್ಯದಲ್ಲಿಯೂ ಬೆಳೆಯುತ್ತಾರೆ ಎನ್ನುವುದು ನಮ್ಮ ನಂಬಿಕೆ. "ಮಕ್ಕಳ ಜಗಲಿ ನಿಮ್ಮ ಮನೆ ಮಕ್ಕಳ.... ಜಗಲಿ"..... ಧನ್ಯವಾದಗಳು.....


ಕಳೆದ ಸಂಚಿಕೆಯ ಜಗಲಿಕಟ್ಟೆ - 35 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಪ್ರಮೀಳ ಶಿಕ್ಷಣ ಸಂಯೋಜಕಿ .... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರಗಳು,
     ದೇಹ ಸಶಕ್ತವಾಗಿದ್ದಾಗ ದುಡಿದು ತಿನ್ನಬೇಕೇ ಹೊರತು ಕೈ ಚಾಚಿ ಬೇಡಿ ತಿನ್ನುವುದು ಉಚಿತವಲ್ಲ ಎನ್ನುವ ಸಂದೇಶವನ್ನು ಸಾರುವ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರ ಸುಂದರ ಕಥೆಯು ತುಂಬಾ ಇಷ್ಟವಾಯಿತು. ಧನ್ಯವಾದಗಳು ಸರ್.
    'ಆಧುನಿಕ ಯುಗದಲ್ಲಿ ಯಂತ್ರಗಳ ಮಹತ್ವ' ಯಂತ್ರಗಳು ಮಾನವ ಜೀವನವನ್ನು ಹೇಗೆ ಸರಳೀಕರಿಸಿವೆ ಹಾಗೂ ಯಂತ್ರಗಳ ಬಳಕೆ ಅತಿಯಾಗದಿರಲಿ ಎನ್ನುವ ಕಿವಿಮಾತಿನೊಂದಿಗೆ ಸುಂದರ ಲೇಖನ ರಮೇಶ್ ಸರ್ ರವರಿಂದ ಧನ್ಯವಾದಗಳು ಸರ್.
    ಭೂಮಿಯು ಹುಟ್ಟಿದ ಕ್ಷಣದಲ್ಲಿ ಹೇಗಿತ್ತು ಯಾವ ಅನಿಲಗಳಿಂದ ಕೂಡಿತ್ತು ಹಾಗೂ ಸರಳ ಜೀವಕೋಶಗಳಿಂದ ಸಂಕೀರ್ಣ ಜೀವಕೋಶದ ರಚನೆ ಹೇಗಾಯಿತು ಎನ್ನುವುದನ್ನು ಸುಂದರವಾಗಿ ವಿವರಿಸಿದ್ದಾರೆ ದಿವಾಕರ ಸರ್ ರವರು.
    ಅರವಿಂದರವರ ಹಕ್ಕಿ ಕಥೆಯಲ್ಲಿ ಒಗಟಿನೊಂದಿಗೆ ಬಿಳಿ ಕೆನ್ನೆ ಕುಟ್ರ ಹಕ್ಕಿಯ ಪರಿಚಯ ತುಂಬಾ ಸೊಗಸಾಗಿತ್ತು.
     ವಿಜಯಾ ಮೇಡಂರವರಿಂದ ದಿನ ನಿತ್ಯ ಬೇಕಾಗುವ ಅತ್ಯುಪಯುಕ್ತ ಸಸ್ಯ ಕರಿಬೇವಿನ ಗಿಡದ ಕುರಿತಾದ ಸೊಗಸಾದ ಮಾಹಿತಿ ಬಹಳ ಇಷ್ಟವಾಯಿತು.
    ಗಣಿತ ಸುಲಭದ ವಿಷಯವಾದರೂ ಹಲವು ಮಕ್ಕಳಿಗೆ ಅದು ಕಬ್ಬಿಣದ ಕಡಲೆಯೇ. SSLC ಯಲ್ಲಿ ಗಣಿತದಲ್ಲಿ ಸುಲಭವಾಗಿ ಉತ್ತೀರ್ಣನಾಗಲು ಅನುಸರಿಸಬೇಕಾದ ಪಠ್ಯಾಂಶಗಳ ಕುರಿತಾದ ಉತ್ತಮ ಮಾಹಿತಿ ಯಾಕುಬ್ ಸರ್ ರವರಿಂದ.
    ಈ ಸಲ ಆರ್ಟ್ ಗ್ಯಾಲರಿಯಲ್ಲಿ ಸಂದೀಪ್ ಕುಂದಾಪುರರವರ ಕಲಾಕೃತಿಗಳ ಪರಿಚಯ ಚೆನ್ನಾಗಿ ಮೂಡಿಬಂದಿದೆ.
     ಮಕ್ಕಳ ಜಗಲಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರ ಹೆಸರು ಪ್ರಕಟಿಸಲಾಗಿದೆ. ಉತ್ತಮ ಕಲಾಕೃತಿಗಳ ರಚನೆಯಾಗಿದೆ. ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಧನ್ಯವಾದಗಳು.
    ವಾಣಿಯಕ್ಕನವರಿಂದ ಈ ವಾರ ರೋಹಂತ ಮತ್ತು ನಂದ್ರಿಯ ಎನ್ನುವ ಪುಸ್ತಕದ ಪರಿಚಯ ತುಂಬಾ ಚೆನ್ನಾಗಿತ್ತು.
    ವಿಶ್ವಾಸದಿಂದ ಮತ್ತು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಎನ್ನುವ ಕಿವಿಮಾತಿನೊಂದಿಗೆ ಮಕ್ಕಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸುವ ಕುರಿತಾದ ಗೀತಾ ಶೆಟ್ಟ ಮೇಡಂರವರ ವಿಶೇಷ ಲೇಖನ ಸೊಗಸಾಗಿತ್ತು.
    ರಮೇಶ್ ಉಪ್ಪಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬಂದಿದೆ. 
     ಮಕ್ಕಳ ಕವನದಲ್ಲಿ ವಿದ್ಯಾರ್ಥಿನಿ ಪ್ರತೀಕ್ಷ ತಂಟೆಕ್ಕು ರವರ ಕವನ ತುಂಬಾ ಸೊಗಸಾಗಿದೆ. ಈ ವಾರದ ಜಗಲಿ ಉತ್ತಮವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

     ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article