-->
ತೀರ್ಪುಗಾರರ ಅನಿಸಿಕೆಗಳು - 2023

ತೀರ್ಪುಗಾರರ ಅನಿಸಿಕೆಗಳು - 2023

ತೀರ್ಪುಗಾರರ ಅನಿಸಿಕೆಗಳು - 2023
3ನೇ ವರ್ಷದ
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2023


         ಆತ್ಮೀಯ ಜಗಲಿಯ ಎಲ್ಲಾ ಬಂಧುಗಳೇ... ಮಕ್ಕಳ ಜಗಲಿ ಬಳಗದಿಂದ ಆಯೋಜಿಸಲಾಗಿರುವ 3ನೇ ವರ್ಷದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ದೇಶಾದ್ಯಂತ ಪ್ರೀತಿಯ ಸ್ಪಂದನೆ ಸಿಕ್ಕಿದೆ. ಸುಮಾರು 3,000 ದಷ್ಟು ಕಲಾಕೃತಿಗಳು ಸ್ಪರ್ಧೆಯಲ್ಲಿ ಪಾಲು ಪಡೆದಿವೆ. ಕರ್ನಾಟಕದ ನಾನಾ ಜಿಲ್ಲೆಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯ. ಆತ್ಮೀಯ ಮಕ್ಕಳು ಎಲ್ಲಾ ಆಯಾಮಗಳನ್ನು ಸಂತೋಷವಾಗಿ ಸ್ವೀಕರಿಸುವಿರಿ ಎಂಬುದು ನಮ್ಮ ನಂಬಿಕೆ... ತಾರಾನಾಥ್ ಕೈರಂಗಳ


     ಮಕ್ಕಳು ರಚಿಸಿದ ಚಿತ್ರ ನೋಡುವುದೆಂದರೆ ನಮಗೆ ಬಣ್ಣಗಳ ಹಬ್ಬ. ನಮ್ಮ ಮಿತ್ರರಾದ ತಾರಾನಾಥ್ ಕೈರಂಗಳ ಅವರ ಮಕ್ಕಳ ಜಗಲಿಯ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ಕೃತಿಗಳನ್ನು ನಮ್ಮ ಚಾವಡಿಯಲ್ಲಿ ಹರಡಿ ಮಕ್ಕಳ ಮನದೊಂದಿಗೆ ಬೆರೆತ ಸಂತಸ ಅನುಭವ. ನಮ್ಮನ್ನೂ ಮುಗ್ಧತೆಗೆ ಬಾಲ್ಯದ ನೆನಪಿಗೆ ಕೊಂಡೊಯ್ಯಿತು.
       ಮೊದಲ ಒಂದರಿಂದ ಮೂರನೇ ತರಗತಿ (ಐಚ್ಛಿಕ) ವಿಭಾಗದ ಮಕ್ಕಳ ಚಿತ್ರಗಳನ್ನು ಹರಡಿ ಗಮನಿಸಿದಾಗ ಬಿಡಿಸಿದ ರೇಖೆಗಳಲ್ಲಾಗಲಿ ಬಣ್ಣಗಳ ತುಂಬುವಿಕೆಯಲ್ಲಿ ಎಲ್ಲೋ ಮುಗ್ಧತೆಯನ್ನು ಕಳಕೊಂಡಂತೆ ಅನ್ನಿಸಿತು.  ಮಕ್ಕಳು ಸಹಜವಾಗಿ ಮೂಡಿಸಬೇಕಾಗಿದ್ದ ಅವರ ಒಳ ಮನಸ್ಸಿನ ಛಾಪುಗಳು ಅಥವಾ ಬಳಿಯಬೇಕಾಗಿದ್ದ ಬಣ್ಣಗಳನ್ನು ಕಟ್ಟಿ ಹಾಕಿದ ಸೂಚನೆಗಳು ಗೋಚರಿಸುತ್ತಿದ್ದವು. ಅಲ್ಲಿ ಮೂಡಿ ಬಂದ ಚಿತ್ರಗಳು ನಾಲ್ಕರಿಂದ ಆರನೇ ತರಗತಿಯ ಮಕ್ಕಳು ಬಿಡಿಸಿದಂತೆ ತೋರುತ್ತಿದ್ದವು. ಆದರೂ ಕೆಲವು ಚಿತ್ರಗಳಲ್ಲಿ ಮನುಷ್ಯ, ಮರ, ಗುಡ್ಡ ಗಳನ್ನು ಬಿಡಿಸಿದ ರೇಖೆಗಳು ಮುಗ್ಧತೆಯಿಂದ ಕೂಡಿದ್ದು ಚಿತ್ರಗಳನ್ನು ಆಯ್ದುಕೊಳ್ಳುವಲ್ಲಿ ತೀರ್ಪುಗಾರರಾಗಿ ನಮ್ಮ ಜೊತೆ ಸೇರಿದ ಸಂತೋಷ್ ಅಂದ್ರಾದೆ ಹಾಗೂ ರೇಷ್ಮರಿಗೂ ಸ್ವಲ್ಪ ಮಟ್ಟಿನ ಸಮಾಧಾನವೆನಿಸಿ ಆಯ್ದುಕೊಳ್ಳುವಲ್ಲಿ ಸಫಲವಾಯಿತು.
        ನಾಲ್ಕರಿಂದ ಆರನೇ ತರಗತಿಯ ವಿಭಾಗದಲ್ಲೂ ಇದೇ ತರಹದ ಅನುಭವ. ಕೆಲವರು ತರಬೇತಿ ಪಡೆದಂತೆ ಕಂಪೋಸಿಶನ್ ಹಾಗೂ ಬಣ್ಣಗಾರಿಕೆಯಲ್ಲಿ ದಟ್ಟತೆ, ತೀವ್ರತೆಯನ್ನು ತೋರಿಸುವಲ್ಲಿ ಬ್ರಷ್‌ಗಳ ಬೀಸುಗಳು ಟೆಕ್ಚರ್ ಕ್ರಿಯೇಟ್ ಮಾಡಿದ್ದು ಕಂಡು ಬಂದವು. ಕೆಲವು ವಿಷಯಾಧಾರಿತವಾಗಿದ್ದವು. ಈ ವಿಭಾಗದಲ್ಲಿ ಮಕ್ಕಳು ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದು ಕಂಡು ಆಯ್ಕೆಗೊಳ್ಳುವಲ್ಲಿ ಯಶಸ್ವಿಯಾಯಿತು.
     7 ರಿಂದ 9ನೇ ತರಗತಿಯ ಮಕ್ಕಳು 'ಹಳ್ಳಿ ಜೀವನ' ಶೀರ್ಷಿಕೆಯಲ್ಲಿ ರಚಿಸಿದ ಚಿತ್ರಗಳು ಹಳ್ಳಿಯ ಮನೆ, ಕೆರೆ ಕಟ್ಟೆ, ಗುಡ್ಡೆಗಳ ಹಿನ್ನೆಲೆಯೊಂದಿಗೆ ಜನರು ಕೆಲಸ ಮಾಡುತ್ತಿರುವ ಚಿತ್ರಗಳು ಕೆಲವು ಉತ್ತಮವಾಗಿ ಸಂಯೋಜನೆ ಮಾಡಿ ಜಲವರ್ಣವನ್ನು ಚೆನ್ನಾಗಿ ದುಡಿಸಿಕೊಂಡಿದ್ದರು. ಕೆಲವು ಚಿತ್ರಗಳಲ್ಲಿ ಹಳ್ಳಿಯ ವಿವಿಧ ಕಸುಬುಗಾರರನ್ನು ಒಟ್ಟಾಗಿ ತುಂಬಿಸಿ ಇಟ್ಟಂತೆಯೂ ಇತ್ತು. ಔಟ್ಲೈನಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಂತಿತ್ತು. ಆದರೆ ಜಲವರ್ಣ ಕೃತಿಗಳಲ್ಲಿ ಬಾಹ್ಯ ರೇಖೆಗಳನ್ನು ಕಡಿಮೆ ಮಾಡಿ ನೆರಳು ಬೆಳಕಿನ ಮೂಲಕವೇ ರಚಿಸುವುದು ಸೂಕ್ತವೆನಿಸುವುದು. ಮಕ್ಕಳು ತಾವೇ ಆಲೋಚಿಸಿ ಉತ್ತಮವಾಗಿ ರಚಿಸಿದ ಚಿತ್ರಗಳಿಗೆ ನಮ್ಮ ಆದ್ಯತೆ. ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಗೊಳಿಸಿದರೆ (ಕಲಾತಂತ್ರಗಾರಿಕೆಯನ್ನು ಬಳಸಿಕೊಂಡು) ಕಲಾಕೃತಿಯಾಗಿ ವಿಶಿಷ್ಟ ಸ್ಥಾನ ಪಡೆದುಕೊಳ್ಳುವುದು. 
      ಹತ್ತರಿಂದ ಹನ್ನೆರಡನೇ ತರಗತಿಯ ವಿಭಾಗದಲ್ಲಿ ರಚಿಸಿದ ಚಿತ್ರಗಳು ನಮ್ಮ ನಿರೀಕ್ಷೆಯಷ್ಟಿರಲಿಲ್ಲ. ಹತ್ತನೇ ಮತ್ತು ಪದವಿಪೂರ್ವ ಶಿಕ್ಷಣದ ಹೊತ್ತಿಗೆ ಅವರಿಗೆ ಮುಂದಿರುವ ಸವಾಲುಗಳು, ಒತ್ತಡಗಳು ಚಿತ್ರಕಲೆಯಿಂದ ದೂರ ಸರಿಯುವಂತೆ ಮಾಡಿದೆ. ಸಮಾಜವೂ ಇದಕ್ಕೆ ಹೊಣೆಯಾಗಿರುತ್ತದೆ. ಪೋಷಕರ ಅಸಹಾಯಕತೆಯು ಕಾಣುತ್ತದೆ. ಈ ಮಕ್ಕಳನ್ನು ಚಿತ್ರಕಲಾ ಸ್ಪರ್ಧೆಯ ಹೊರತಾಗಿ ಕಲಾಕಮ್ಮಟ, ಕಲಾಕಾರ್ಯಗಾರ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುವುದೊಳಿತು. ಅವರು ಸೃಜನಾತ್ಮಕವಾಗಿ ಮತ್ತು ಕ್ರಿಯಾಶೀಲರಾಗುವುದಕ್ಕೆ ಸಹಕಾರಿಯಾದೀತು. ಈ ವಿಭಾಗದ ಕೆಲವು ಚಿತ್ರಗಳು ಮೊಬೈಲ್ ನಿಂದ ತೆಗೆದ ಫೋಟೋದ ಚಿತ್ರ ಪ್ರತಿಯಾಗಿಯೂ ಜೀವಂತಿಕೆ ಪಡೆದುಕೊಳ್ಳುವಲ್ಲಿ ಸೋತಿತ್ತು. ಆದರೆ ಕೆಲವು ವಿದ್ಯಾರ್ಥಿಗಳು ಮನಸ್ಸಿನಲ್ಲಿ ಮೂಡಿದ್ದನ್ನು ಒಳ್ಳೆಯ ಚಿತ್ರವಾಗಿಸಿದ್ದರು. ಕಲೆಯಲ್ಲಿ ಆಸಕ್ತಿ ಉಳ್ಳವರು ಸಮಾಜದ ಆಗು ಹೋಗುಗಳನ್ನು ಗಮನಿಸುತ್ತಾ ಅದನ್ನು ವಿಷಯಾಧಾರಿತವಾಗಿ ಅರ್ಥ ಮಾಡಿಕೊಂಡಲ್ಲಿ ಅದನ್ನು ದೃಶ್ಯ ಮಾಧ್ಯಮದ ಮೂಲಕ ಅಭಿವ್ಯಕ್ತಗೊಳಿಸಲು ಸುಲಭ ಸಾಧ್ಯವೆನಿಸುವುದು. 
    ಮಕ್ಕಳ ಜಗಲಿಯ ಆಯೋಜಕರು ಹಾಗೂ ಒಟ್ಟು ತಂಡ ಮಾಡುವ ಕೆಲಸ ಮೆಚ್ಚುವಂಥದ್ದು. ಮುಂದೆಯೂ ಕ್ರಿಯಾಶೀಲವಾಗಿ ಆಲೋಚಿಸಿ ಮಕ್ಕಳನ್ನು ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ನಮ್ಮ ಸಹಕಾರವೂ ಇದೆ. ಒಟ್ಟು ಶಿಕ್ಷಕ ವೃಂದ ಹಾಗೂ ಮಕ್ಕಳ ಪೋಷಕರಿಗೂ ಧನ್ಯವಾದಗಳು.
...................................... ರಾಜೇಂದ್ರ ಕೇದಿಗೆ
Visual Artist
C/o. A.L. Ullal
Ramanivas, Barke
Mannagudde
Mangaluru - 575 003
Cell: +91 94800 14812
Email: artinkedige@gmail.com
*******************************************


    ಮೊತ್ತ ಮೊದಲನೆಯದಾಗಿ ನಾನು ಮಕ್ಕಳ ಜಗಲಿಯ ಬಳಗದವರಿಗೆ ಅಭಿನಂದನೆಗಳನ್ನು ಹೇಳಲು ಇಷ್ಟ ಇಷ್ಟಪಡುತ್ತೇನೆ. ಯಾಕೆಂದರೆ ಮಕ್ಕಳಿಗೆ ಈ ರೀತಿಯ ಚಟುವಟಿಕೆಗಳನ್ನು ನೀಡಿ ಚಿತ್ರಕಲೆಯತ್ತ ಗಮನ ಸೆಳೆಯುವ ಮೂಲಕ ಹಾಗೂ ಚಿತ್ರಕಲೆಗೆ ಈ ರೀತಿಯಾಗಿ ಪ್ರೋತ್ಸಾಹಿಸುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸುತ್ತೇನೆ.
     ಮಕ್ಕಳಿಗೆ ನನ್ನ ಸಲಹೆಗಳೇನೆಂದರೆ ನಾವು ಯಾವುದೇ ಒಂದು ಚಿತ್ರ ಬಿಡಿಸುವಾಗ ಮೊದಲು ಚಿತ್ರ ಸಂಯೋಜನೆ, ನಂತರ ಬಣ್ಣಗಳ ಬಳಕೆ, ಕಲರ್ ಬ್ಯಾಲೆನ್ಸ್, ಸೃಜನಶೀಲತೆ ಹಾಗು ಕೌಶಲ್ಯ ಇಷ್ಟು ಅಂಶಗಳು ಮುಖ್ಯವಾಗಿರುತ್ತದೆ. ಇಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರ ರಚಿಸಿದರೆ ಚಿತ್ರಕಲೆಯು ಅತ್ಯುತ್ತಮವಾಗಿ ಮೂಡಿಬರಬಹುದು. 
     ಸ್ಪರ್ಧೆಗೆ ಬಂದಿರುವ ಪ್ರತಿಯೊಂದು ಚಿತ್ರಗಳು ಅತ್ಯುತ್ತಮವಾಗಿದ್ದವು. ಅದರಲ್ಲಿ ಅತ್ಯುತ್ತಮ ಕಲಾಕೃತಿಗಳನ್ನು ಹೆಕ್ಕಿ ತೆಗೆಯಲು ತುಂಬಾ ಕಷ್ಟವಾಯಿತು. ಅನೇಕ ಚರ್ಚೆಗಳ ನಂತರ ನಾವು 3 ಜನ ತೀರ್ಪುಗಾರರು ಸೇರಿ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ' ಗಾಗಿ ಸಮಾನ 3 ಅತ್ಯುತ್ತಮ ನಗದು ಬಹುಮಾನ ಪ್ರಶಸ್ತಿ ಹಾಗು ಮೆಚ್ಚಗೆಯ ಪ್ರಶಸ್ತಿಗಾಗಿ ಅತ್ಯುತ್ತಮ ಕಲಾಕೃತಿಗಳಿಗೆ ಆಯ್ಕೆ ಮಾಡಲಾಯಿತು. ಸ್ಪರ್ಧೆಗೆ ಬಂದ ಕಲಾಕೃತಿಗಳಲ್ಲಿ ಹೆಚ್ಚಿನ ಕಲಾಕೃತಿಗಳು ಗಾಢವಾದ ಬಣ್ಣದಿಂದ ಕೂಡಿದ್ದವು. ಇನ್ನು ಕೆಲವೊಂದು ಕಲಾಕೃತಿಗಳು ತುಂಬ ಕ್ರೌಡ್ ಅಂತ ಅನಿಸಿತು. ಚಿತ್ರ ರಚಿಸುವಾಗ ಮುಖ್ಯ ವಿಷಯಕ್ಕೆ ಗಮನ ಕೊಟ್ಟು ಉಳಿದವುಗಳನ್ನು ಹಿನ್ನೆಲೆಯಾಗಿ ಸಂಯೋಜಿಸಿದರೆ ಚಿತ್ರವು ಇನ್ನೂ ಚೆನ್ನಾಗಿ ಮೂಡಿಬರಬಹುದು ಎಂದು ಹೇಳಲು ಇಷ್ಟಪಡುತ್ತೇನೆ. 
      ಹಾಗೂ ಈ ಕಾರ್ಯಕ್ರಮದಲ್ಲಿ ನಾನು ತೀರ್ಪುಗಾರರಾಗಿ ಭಾಗಿಯಾಗಲು ಅವಕಾಶ ನೀಡಿದ ಮಕ್ಕಳ ಜಗಲಿಯ ಬಳಗಕ್ಕೆ ಧನ್ಯವಾದಗಳು.  
..................................... ಸಂತೋಷ್ ಅಂದ್ರಾದೆ
Contemporary Artist 
Urwa chilimbi
Mangalore - 6
Mobile : +91 90364 21815
*******************************************




   ಮಕ್ಕಳ ಜಗಲಿ ರಾಜ್ಯಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ನನ್ನ ಅನಿಸಿಕೆ ಮತ್ತು ಸಲಹೆಗಳು....
     ವಿದ್ಯಾರ್ಥಿಗಳು ರಚಿಸಿ ಕಳುಹಿಸಿದ ಪ್ರತಿಯೊಂದು ಚಿತ್ರಗಳು ಉತ್ತಮವಾಗಿತ್ತು. ಅವುಗಳಲ್ಲಿ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಅತ್ಯಂತ ಕಷ್ಟಕರವಾಗಿತ್ತು.
   ನಾನು ಒಬ್ಬ ಚಿತ್ರ ಕಲಾವಿದೆಯಾಗಿ ಚಿತ್ರಗಳ ಆಯ್ಕೆ ಸಂದರ್ಭದಲ್ಲಿ ಗಮನಿಸಿದ ಕೆಲವು ವಿಷಯಗಳು.... ಹೆಚ್ಚಿನ ವಿದ್ಯಾರ್ಥಿಗಳು ಚಿತ್ರ ರಚಿಸಲು ಪೋಸ್ಟರ್, ಇಂಟರ್ನೆಟ್ ಹಾಗೂ ಇನ್ನೊಬ್ಬ ಕಲಾವಿದರ ಚಿತ್ರವನ್ನು ನಕಲು ಮಾಡಿದ್ದು ಕಾಣಿಸಿತು. ವಿದ್ಯಾರ್ಥಿಗಳು ಕಲಿಯಲು ಅಥವಾ ವಿಷಯ ತಿಳಿಯಲು ಇಂತಹ ಮಾಧ್ಯಮಗಳ ಬಳಕೆ ಸಹಾಯಕವಾದರೂ ಅಲ್ಲಿರುವ ಚಿತ್ರಗಳನ್ನು ನೇರ ನಕಲು ಮಾಡುವುದು ಉತ್ತಮ ಬೆಳವಣಿಗೆ ಅಲ್ಲ. ಹೀಗೆ ಮಾಡುವ ಬದಲು ತಮ್ಮ ಕಲ್ಪನೆ ಹಾಗೆಯೇ ತಾವು ನೋಡಿದ ದೃಶ್ಯವನ್ನು ತಮ್ಮ ಸುತ್ತಮುತ್ತಲಿರುವ ವಿಷಯಗಳನ್ನು ತಮ್ಮದೇ ಶೈಲಿಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದರೆ ತಮ್ಮ ವಿಷಯಗಳನ್ನು ಗ್ರಹಿಸುವ ಗುಣ, ಸೃಜನಶೀಲತೆ ಬಣ್ಣಗಳ ವ್ಯತ್ಯಾಸ, ಅಳವಡಿಕೆ, ಕ್ರಿಯಾಶೀಲತೆ ಹೆಚ್ಚಾಗಲು ಸಹಾಯವಾಗುವುದು. ಇದರಿಂದಾಗಿ ಹೊಸತಾದ ತಮ್ಮದೇ ಸ್ವಂತ ಶೈಲಿ ರೂಪಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಕಲಿಕೆ ಅಥವಾ ಉದ್ಯೋಗ ಕ್ಷೇತ್ರಗಳಲ್ಲೂ ನಿಮ್ಮ ಸ್ವಂತಿಕೆ ಹಾಗೂ ಹೊಸತನ ಕಾಣಸಿಗುತ್ತದೆ. ಕಳುಹಿಸಿರುವ ಎಲ್ಲಾ ಚಿತ್ರಗಳು ಉತ್ತಮವಾಗಿತ್ತು. ಬಹುಮಾನದ ದೃಷ್ಟಿಯಿಂದ ಕೆಲವು ಚಿತ್ರಗಳ ಆಯ್ಕೆ ಅನಿವಾರ್ಯ. ತಮ್ಮ ಕಲಾ ಪಯಣವು ಹೀಗೆ ಮುಂದುವರಿಯಲಿ. ಜೀವನದಲ್ಲಿ ಎಲ್ಲರೂ ಉತ್ತಮ ಕಲಾವಿದರಾಗಿ ಮೂಡಿ ಬರಬೇಕೆಂದು ಆಶಿಸುತ್ತೇನೆ.... 
......................................... ರೇಶ್ಮಾ ಎಸ್ ಶೆಟ್ಟಿ
D no 1-142/2
Thenka majal house
Muduperar post
Mangalore 574151
Mobile No : 81054 73666
E.mail : reshmasshetty11@gmail.com
*******************************************


ಆನ್ ಲೈನ್ ಪ್ರಮಾಣ ಪತ್ರ ಕಳುಹಿಸಲಾಗಿದೆ....
      ಸ್ಪರ್ಧೆಗೆ ಬಂದಿರುವ ಎಲ್ಲಾ ಕಲಾಕೃತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಆನ್ ಲೈನ್ ಮೂಲಕ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ಆಯಾ ವಾಟ್ಸಪ್ ನಂಬರ್ ಗಳಿಗೆ ಕಳುಹಿಸಿ ಕೊಡಲಾಗಿದೆ. ಈ ಕಾರ್ಯವನ್ನು ಮಕ್ಕಳ ಜಗಲಿಯ ತುಳಸಿ ಕೈರಂಗಳ, ನವ್ಯಾ, ಹಾಗೂ ಅಶ್ವಿತಾ ಇವರು ನಿರ್ವಹಿಸಿದ್ದಾರೆ. 
     ಸರಿಯಾಗಿ ನಮೂದಿಸದ ವಾಟ್ಸಪ್ ನಂಬರ್, ಹೆಸರು ಬರೆಯದೆ ಕಳಿಸಿರುವುದು ಹಾಗೂ ಇನ್ನಿತರ ಕಾರಣಗಳಿಗೆ ಕೆಲವು ವಿದ್ಯಾರ್ಥಿಗಳಿಗೆ ತಲುಪದೆ ಇದ್ದಲ್ಲಿ ತಿಳಿಸಬಹುದು.
..............................ತುಳಸಿ ಕೈರಂಗಳ, ಸಹ ಶಿಕ್ಷಕಿ
ಮಕ್ಕಳ ಜಗಲಿ,  ದಕ್ಷಿಣ ಕನ್ನಡ ಜಿಲ್ಲೆ
Mob : 9480288214
********************************************


ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಇದರ ಪ್ರೋತ್ಸಾಹಕರು.....

ದೇವರು ನಮಗೆ ಕರುಣಿಸಿರುವ ಪ್ರತಿಭೆಗಳನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಬಳಸಿದರೆ ಮಾತ್ರ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಜನಿಸಿರುವ ಪ್ರತಿಯೊಂದು ಮಗು ಕೂಡ ವೈವಿಧ್ಯಮಯ ಕೌಶಲ್ಯವನ್ನು ಹೊಂದಿರುವವರು. ಇಂತಹ ಪ್ರತಿಭಾನ್ವಿತ ಮಕ್ಕಳ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮಕ್ಕಳ ಜಗಲಿ ಆನ್ಲೈನ್ ಪತ್ರಿಕೆಯೊಂದು ಸಾಧನವಾಗಿದೆ... ಈ ತರಹದ ವೇದಿಕೆಯ ಜೊತೆ ನಾವೂ ಭಾಗವಾಗಿರುವುದು ಖುಷಿಯ ವಿಚಾರ.
....................................ಅಲ್ಫೀಸ್ ಡಿ ಸೋಜ
NATTIHITHLU CONSTRUCTIONS
MUDIPU , BANTWALA
Mob ; +91 6366 189 549
*******************************************



    ಮಕ್ಕಳ ಜಗಲಿ ಮೂಲಕ ನಡೆಯುವ ಕವನ, ಕಥೆ, ಚಿತ್ರಕಲಾ ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆ. ಇದನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವ ಮಕ್ಕಳ ಜಗಲಿ ಬಳಗದವರೊಂದಿಗೆ ಹೈಸ್ಕೂಲ್ ಸಹಪಾಠಿಗಳಾದ ನಮಗೂ ಅವಕಾಶ ನೀಡಿರುವುದು ತುಂಬಾ ಖುಷಿಯನ್ನು ನೀಡಿದೆ. ಧನ್ಯವಾದಗಳು
.................................... ಶಿವಪ್ರಕಾಶ್ ಕೆ ಟಿ
 SMK DEVELOPERS
KONAJE MANGALORE
Mob ; +91 98449 93975
*******************************************


      ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದಾಯಕ ಕೆಲಸ ಮಾಡುತ್ತಿರುವ ಮಕ್ಕಳ ಜಗಲಿಯಲ್ಲಿ ದೇಶದ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ. ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಜಾಗೃತಿ ಮನಸ್ಸು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಾಜದಲ್ಲಿ ಉತ್ತಮ ಕಾರ್ಯಗಳು ನೆರವೇರುತ್ತದೆ.
.................................... ಅಬ್ದುಲ್ ಜಲೀಲ್
BRIGHT CONSTRUCTIONS
MUDIPU BANTWALA
Mob ; +91 98864 95252
*******************************************




   ಬಾಲ್ಯದಲ್ಲಿ ನಾವು ಕಳೆದುಕೊಂಡಿರುವ ಅವಕಾಶಗಳನ್ನು ಇಂದಿನ ಮಕ್ಕಳಿಗೆ ನೀಡಬೇಕಾದುದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ. ಮಗುವಿಗೆ ಐಷಾರಾಮ ದ ವಸ್ತುಗಳನ್ನು ಕೊಡುವುದಕ್ಕಿಂತ ಬದುಕಿನಲ್ಲಿ ಸಂತಸ ಪಡುವ ಕಲೆಗಳನ್ನು ಮೈಗೂಡಿಸಲು ಅವಕಾಶ ಒದಗಿಸಬೇಕು. ಪ್ರತಿಯೊಬ್ಬ ತಂದೆ ತಾಯಿ ಈ ನಿಟ್ಟಿನಲ್ಲಿ ಆಲೋಚಿಸಿದರೆ, ಎಲ್ಲಾ ಮಕ್ಕಳು ಪ್ರತಿಭಾ ಸಂಪನ್ನರಾಗಿ ಈ ದೇಶಕ್ಕೆ ಕೊಡುಗೆಯಾಗಬಲ್ಲರು. ಮಕ್ಕಳ ಜಗಲಿಯ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇದೆ.
.................................... ವಸಂತ್ ಬೆರ್ಮದೆ
SRI VASU SHYAM VENTURE
BALMATA MANGALORE
Mob ; +91 99647 58023
*******************************************



ಮಕ್ಕಳ ಜಗಲಿ ಕಲಾ ಪ್ರಶಸ್ತಿ 2023
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಹಕಾರ

ನಿನಾದ್ ಕೈರಂಗಳ

ನಿಧಿ ಕೈರಂಗಳ 

ತುಳಸಿ ಕೈರಂಗಳ

ನವ್ಯ ಮತ್ತು ಅಶ್ವಿತಾ


◾ ಸ್ಪರ್ಧೆಯ ಕುರಿತು ಸಕಾಲಕ್ಕೆ ಮಾಹಿತಿಯನ್ನು ನೀಡಿ ಸಹಕರಿಸಿದ ಆತ್ಮೀಯರು :
◾ತುಳಸಿ ಕೈರಂಗಳ್
MOB : 9480288214



◾ಪ್ರಸನ್ನ ಐವರ್ನಾಡು
MOB : 9449331609


 
◾ಝುಬೈರ್ ಖಾನ್ ಕುಡ್ಲ
MOB : 6363417394



◾ಶ್ರೀಮತಿ ಜಯಶ್ರೀ
MOB : 94804 87241



◾ಜಗದೀಶ ಪಾಟೀಲ
MOB : 9901502224



◾ಪ್ರಕಾಶ್ ವಿಟ್ಲ
MOB : 9901325219




◾ಬಾಲಕೃಷ್ಣ ಶೆಟ್ಟಿ
MOB : 9902196309


◾ಅನಿಲ್‌ ಕುಮಾರ್ ಎಚ್‌. ಪಿ.
MOB : 9964912411




ಸಹಕಾರ : ಮಕ್ಕಳ ಜಗಲಿ ಬಳಗ ಮತ್ತು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ, ಬೆಂಗಳೂರು ಹಾಗೂ ದ. ಕ. ಜಿಲ್ಲಾ ಘಟಕ



ಇದು ನಿಮ್ಮ ಮನೆಯ
ಮಕ್ಕಳ ಜಗಲಿ
www.makkalajagali.com

ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ.
      ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ.
       ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು ಆರಂಭಿಸುವ ಎಲ್ಲಾ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲೇ ಸಾಗಿತು.
       ಮಕ್ಕಳ ಜಗಲಿ ಇದು ಮಕ್ಕಳಿಗಾಗಿ ಮೀಸಲಾದ ಇ-ಪತ್ರಿಕೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ವೈವಿಧ್ಯ ಪ್ರಾಕಾರಗಳಲ್ಲಿ ಪ್ರಕಟ ಪಡಿಸಲು ಇರುವಂತಹ ವೇದಿಕೆ. ಮಕ್ಕಳ ಸ್ವರಚಿತ ಕಥೆ, ಲೇಖನ, ಕವನ, ಆರ್ಟ್ ಮತ್ತು ಕ್ರಾಪ್ಟ್ ಹೀಗೆ ಹಲವಾರು ಮಕ್ಕಳ ಸೃಜನಾತ್ಮಕ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಬಲ್ಲುದು. 
       ಹಳೆ ಶೈಲಿ ಮನೆಗಳಲ್ಲಿ ಹೆಚ್ಚಾಗಿ ಮನೆ ಮುಂದೆ ಜಗಲಿ ಇರುತ್ತಿತ್ತು. ಮನೆಮಕ್ಕಳೆಲ್ಲಾ ಜಗಲಿ ಮೇಲೆ ಕುಳಿತು ಬರೆಯುವುದು, ಓದುವುದು, ಹಾಡುವುದು, ರಂಗೋಲಿ ಬಿಡಿಸುವುದು, ಕಲ್ಲಾಟವಾಡುವುದು ಹೀಗೆ ಹಲವು ಚಟುವಟಿಕೆಗಳಿಗೆ ಅದುವೇ ವೇದಿಕೆ. ನನ್ನಂತಹ ಅನೇಕರಿಗೆ ಜೀವನದ ಹಲವು ಮೈಲುಗಲ್ಲುಗಳನ್ನು ಯಶಸ್ವಿಯಾಗಿ ದಾಟಲು ಮನೆ ಜಗಲಿ ಪ್ರೇರಣೆ ನೀಡಿದೆ. ಜಗಲಿ ಮಾಯವಾಗಬಾರದು, ಅದನ್ನು ಮತ್ತೆ ಕಟ್ಟಬೇಕೆಂದು ಕನಸು.
        ಮಂಚಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ವಿಟ್ಲ, ವಿಜ್ಞಾನ ಶಿಕ್ಷಕರಾದ ಶ್ರೀ ವಿ. ಶ್ರೀರಾಮಮೂರ್ತಿ, ಸಹೋದ್ಯೋಗಿ ಬಂಧುಗಳು, ಶಾಲಾ ಎಸ್.ಡಿ.ಎಂ.ಸಿ, ಶಾಲಾ ಮಕ್ಕಳು, ಜಗಲಿಯ ಕನಸಿಗೆ ಸಾಕ್ಷಿಗಳು. ಸೃಜನಶೀಲ ಚಿಂತನೆಗಳಿಗೆ ರೂಪ ಕೊಟ್ಟಂತಹ ಶಿಕ್ಷಣ ಚಿಂತಕ ಗೋಪಾಡ್ಕರ್, ಸ್ಪೂರ್ತಿಯಾಗಿರುವ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಪ್ರೇರಣೆಯನ್ನು ನೀಡುತ್ತಾ ಬಂದಿರುವ ಕಲಾವಿದ, ಸಾಹಿತಿ ದಿನೇಶ ಹೊಳ್ಳ, ತಾಂತ್ರಿಕ ಸಹಕಾರ ನೀಡುತ್ತಿರುವ ಪತ್ರಕರ್ತ ಮಿತ್ರರಾದ ವಿನೋದ್ ಪುದು, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಜ್ಞಾನೇಶ್, ಮಾರ್ಗದರ್ಶಕರಾದ ಶ್ರೀ ವೈ ಶಿವರಾಮಯ್ಯ, ಶಿವಪ್ರಕಾಶ ಎನ್, ಮಕ್ಕಳ ಜಗಲಿಯಲ್ಲಿ ಬರೆಯುತ್ತಿರುವ ಎಲ್ಲಾ ಅಂಕಣಕಾರರು ಹಾಗೂ ನಿರಂತರವಾಗಿ ಪಾಲ್ಗೊಳ್ಳುವ ಮಕ್ಕಳು, ಓದುಗರು ಇವರೆಲ್ಲ ಕನಸಿನ ಜಗಲಿಯ ಪಾಲುದಾರರು. 
        ಮಕ್ಕಳ ಜಗಲಿಯನ್ನು ಎಲ್ಲರ ಮನ ಮನೆಗಳಿಗೆ ತಲುಪಿಸಬೇಕೆಂದು ನಮ್ಮ ಗುರಿಯಾಗಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯನ್ನು ನಿರ್ಮಿಸಿ ಪ್ರಸಾರ ಮಾಡುವ ಆಲೋಚನೆ ಮೂಡಿತು. ಸಾಹಿತಿ ಚಂದ್ರಶೇಖರ ಪಾತೂರು ಬರೆದ ಸಾಹಿತ್ಯಕ್ಕೆ ಮಂಗಳೂರಿನ ಕೋಣಾಜೆ ವಿಶ್ವ ಮಂಗಳ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಅದ್ಭುತವಾಗಿ ಹಾಡಿದಳು. ಪುತ್ತೂರಿನ ಮಕ್ಕಳ ಮಂಟಪದ ಅನೇಕ ಪುಟಾಣಿಗಳು ಈ ದೃಶ್ಯ ಸಂಯೋಜನೆಯಲ್ಲಿ ಹಾಡಿ ನಲಿದರು. ಮಕ್ಕಳ ಜಗಲಿಯ ಹಾಡು ಎಲ್ಲರನ್ನು ತಲುಪುವ ಮೂಲಕ ಜಗಲಿಗೆ ಬರೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿತು.
       ಮಕ್ಕಳ ಜಗಲಿ ಅದು ನಿಮ್ಮ ಮನೆಯ ಮಕ್ಕಳ ಜಗಲಿ. ಇಲ್ಲಿ ಸಣ್ಣ ಮಕ್ಕಳಿಂದ ಪಿ.ಯು.ಸಿವರೇಗೆ ಕಲಿಯುತ್ತಿರುವ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಮನೆಯ ಮಕ್ಕಳೂ ಶ್ರೇಷ್ಠರೇ. ಅವರಿಗೆ ಅವಕಾಶ ಕೊಡಬೇಕಾಧದ್ದು ಹಿರಿಯರಾದ ನಮ್ಮ ಕರ್ತವ್ಯ. ಆ ಮೂಲಕ ಪ್ರತಿಯೊಂದು ಮನೆಯ ಮಕ್ಕಳನ್ನು ಜಗಲಿಯಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡಿ ಎಂದು ನಮ್ಮ ಬೇಡಿಕೆ.
       2020ನೇಯ ನವೆಂಬರ್ 14ರ ಮಕ್ಕಳದಿನಾಚರಣೆಯಂದು ಉದ್ಘಾಟನೆಗೊಂಡು ಮಕ್ಕಳ ಪ್ರತಿಭಾ ವೇದಿಕೆಯಾಗಿ ಗುರುತಿಸಿಕೊಂಡಿತು. ದ.ಕ. ಜಿಲ್ಲೆಗೆ ಮಾತ್ರ ಮೀಸಲಿದ್ದ ಈ ವೇದಿಕೆ ಈಗ ವಿಸ್ತಾರಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಹೊರ ರಾಷ್ಟದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳೂ ಮಕ್ಕಳ ಜಗಲಿಗೆ ಬೆರೆಯುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪ್ರತಿಭಾನ್ವಿತ ಮಕ್ಕಳು ಬೆಳೆಯಬೇಕೆಂದು ನಮ್ಮ ಉದ್ದೇಶ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂದು ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಸದಾ ಸಿದ್ದವಾಗಿದೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article