-->
ಹೃದಯದ ಮಾತು : ಸಂಚಿಕೆ - 13

ಹೃದಯದ ಮಾತು : ಸಂಚಿಕೆ - 13

ಹೃದಯದ ಮಾತು : ಸಂಚಿಕೆ - 13
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

                           

        ಶಾಂತಿ ಟೀಚರ್ ಮನಸ್ಸು , ಹೃದಯ ಸಂಪೂರ್ಣ ಭಾರವಾಗಿದೆ. ಕಲಿತ ಅಥವಾ ಕಲಿಸಿದ ಸಿದ್ದಾಂತಗಳ್ಯಾವುದೂ ಪರಿಹಾರ ಸೂಚಿಸುತ್ತಿಲ್ಲ. ಅತ್ತು ಬಿಡಲು ಕಣ್ಣಲ್ಲಿ ಕಣ್ಣೀರೇ ಬತ್ತಿ ಹೋಗಿದೆ. ದಿಕ್ಕು ಕಾಣದೆ  ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಪರಿಚಯಸ್ಥರು ಇಲ್ಲದ ಊರಿನಲ್ಲಿ ಹೆಜ್ಜೆ ಹಾಕುತ್ತಿರುವ ಶಾಂತಿ ಟೀಚರ್ ಬಸ್ಸು ನಿಲ್ದಾಣದತ್ತ ಸಾಗುತ್ತಿದ್ದಾರೆ. ಬಸ್ಸು ಹೊರಡಲು ಹತ್ತು ನಿಮಿಷ ಉಳಿದಿದೆ. ಅಷ್ಟರೊಳಗೆ ನಿಲ್ದಾಣ ತಲುಪಬೇಕಿತ್ತು. ಇದಕ್ಕಿದ್ದಂತೆ ಪಕ್ಕದಲ್ಲಿ ಹಾದು ಹೋದ ಕಾರೊಂದು ಒಮ್ಮೆಲೇ ನಿಂತಿತು. ಬೆಲೆಬಾಳುವ ಕಾರಿನೊಳಗೆ ತಂಪು ಕನ್ನಡಕ ಧರಿಸಿದ ವ್ಯಕ್ತಿಯೊಬ್ಬ ಕುಳಿತಿದ್ದ. ಟೀಚರ್ ಮತ್ತಷ್ಟು ಭಯಗೊಂಡರು. ಈಗಾಗಲೇ ಗೊಂದಲದಲ್ಲಿದ್ದ ಶಾಂತಿ ಟೀಚರ್ ಏನನ್ನೂ ಯೋಚಿಸದಾದರು. ಕಾರಿನಿಂದ ಇಳಿದ ವ್ಯಕ್ತಿ ಶಾಂತಿ ಟೀಚರ್ ಬಳಿ ಹೆಜ್ಜೆ ಇಡುತ್ತಿದ್ದ. ಜೋರಾಗಿ ಕಿರುಚಿಕೊಳ್ಳೋಣವೆಂದರೆ ಗಂಟಲಿನಿಂದ ಶಬ್ಧವೇ ಹೊರಡುತ್ತಿಲ್ಲ. ಬಳಿ ಬಂದ ಆ ವ್ಯಕ್ತಿ ಶಾಂತಿ ಟೀಚರ್ ಕಾಲು ಮುಟ್ಟಿ ನಮಸ್ಕರಿಸುತ್ತಾನೆ. 'ಮೇಡಂ ನನ್ನ ಗುರುತು ಸಿಗಲಿಲ್ವಾ?' ಎಂದು ಪ್ರಶ್ನಿಸಿದ. ಶಾಂತಿ ಟೀಚರಿಗೆ ಒಮ್ಮೆಲೇ ಇಪ್ಪತ್ತು ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿದ್ದ ಸಚಿನ್ ನೆನಪಾದ. ಹೌದು ಇದು ಆತನೇ ಇರಬಹುದೆಂದು ದೃಢವಾಯಿತು. 'ನೀನು ಸಚಿನ್ ಅಲ್ವಾ?' ಅಂದರು. "ಹೌದು ಮೇಡಂ, ನೀವೇನು ಇಲ್ಲಿ?" ಅಂದಾಗ ಟೀಚರ್ ನಿಜಕ್ಕೂ ಆಶ್ಚರ್ಯಗೊಂಡಿದ್ದರು. ಶಾಂತಿ ಟೀಚರ್ "ಏನಿಲ್ಲಾ, ಹೀಗೆ ಬಂದಿದ್ದೆ, ಈಗ ಬಸ್ಸಿಗೆ ಹೋಗಬೇಕಿದೆ, ಎಂದವರೇ ಹೊರಡಲು ಅಣಿಯಾದರು. ಆದರೆ ಸಚಿನ್ ಮನೆಗೆ ಬಂದು ಹೋಗುವಂತೆ ಹಟ ಮಾಡಿದ. ಊರಿಗೆ ನಾನೇ ಕಾರಿನಲ್ಲಿ ಬಿಡುವುದಾಗಿ ಮಾತುಕೊಟ್ಟ. ಶಾಂತಿ ಟೀಚರ್ ಕಾರಿನ ಮುಂದಿನ ಸೀಟಿಗೆ ಕುಳಿತರು. ಕಾರಿನ ಒಳಗೆ ತುಂಬಾನೇ ನೀಟಾಗಿತ್ತು. ಟೀಚರ್ ನೆನಪು ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಹೊರಳಿತು. ಶಾಂತಿ ಟೀಚರ್ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿದ್ದರು. ಎಲ್ಲಾ ಶಿಕ್ಷಕರು ಅನುಭವಿಸುವ ಗೋಳೇ ಇವರದ್ದೂ ಆಗಿತ್ತು. ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಸಚಿನ್, ಅವರಿಗೊಂದು ತಲೆನೋವಾಗಿದ್ದ. ಶಿಸ್ತು ಎಂಬುವುದು ಅವನಿಗಿಂತ ಮಾರು ದೂರವಿತ್ತು. ಶಾಲೆಯ ಯಾವ ಕೆಲಸವೂ ಮಾಡುತ್ತಿರಲಿಲ್ಲ. ವಿಶೇಷ ವಿನ್ಯಾಸದ ಹೇರ್ ಸ್ಟೈಲ್. ಒರಟಾದ ಮಾತು. ಇಷ್ಟಬಂದಾಗ ರಜೆ. ಹೀಗೆ ಇದ್ದ ಸಚಿನ್, ಟೀಚರ್ ಮಾತು ಕೇಳಿದ್ದೇ ಇಲ್ಲ. ಎಲ್ಲರೂ ಅವನನ್ನು ಅವನಷ್ಟಕ್ಕೇ ಬಿಟ್ಟಿದ್ದರು. ಪೂರ್ತಿ ಶಾಲೆಗೆ ಆತ ತಲೆನೋವಾಗಿದ್ದ. ಶಾಂತಿ ಟೀಚರ್ ಆತನಲ್ಲಿ ಮಾತೇ ಆಡುತ್ತಿರಲಿಲ್ಲ. "ಆತ ಮುಂದೆ ಒಬ್ಬ ದೊಡ್ಡ ರೌಡಿ ಆಗುತ್ತಾನೆ" ಎಂದು ಎಲ್ಲಾ ಶಿಕ್ಷಕರ ಅಭಿಪ್ರಾಯವಾಗಿತ್ತು. ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷೆಯಲ್ಲಿ ಪಕ್ಕ ಕುಳಿತದ್ದು ಸಂಜನಾ. ಆಕೆಯನ್ನು ಹೆದರಿಸಿ, ಅವಳ ಪೇಪರ್ ನಕಲು ಹೊಡೆದು, ಹತ್ತನೇ ಪಾಸು ಆಗಿದ್ದ. ಅಂದು ಶಾಂತಿ ಟೀಚರ್ ಮುಂದೆ ಟಿಸಿ ಪಡೆದು ತೆರಳುವಾಗ ಕುಹಕ ನಗೆ ಬೀರಿದ್ದ. ಅದೇ ತರಗತಿಯ ಪ್ರಶಾಂತ ತಾಲೂಕಿಗೆ ಪ್ರಥಮ ಬಂದಿದ್ದ. ಆತ ಬಹಳನೇ ಬುದ್ಧಿವಂತ. ಎಲ್ಲರಿಗೂ ಅಚ್ಚುಮೆಚ್ಚು. ಶಿಕ್ಷಕರು ಆತನನ್ನು ಹೊಗಳದ ದಿನಗಳೇ ವಿರಳ. ಎಲ್ಲಾ ವಿಷಯಕ್ಕೂ ಪ್ರಶಾಂತನೇ ಮುಂಚೂಣಿ. ಇಂದು ಅದೇ ಸಚಿನ್ ತನ್ನ ಕಾರಿನಲ್ಲಿ ಶಾಂತಿ ಟೀಚರನ್ನು ಕುಳ್ಳಿರಿಸಿ ಡ್ರೈವ್ ಮಾಡ್ತಿದ್ದಾನೆ. ಅಂದಿನ ಯಾವ ಸ್ವಭಾವವೂ ಇಲ್ಲ. ಸಂಪೂರ್ಣ ಬದಲಾದ ವ್ಯಕ್ತಿತ್ವ. ಇದು ಹೇಗೆ ಸಾಧ್ಯ?.. ಯಾವುದೋ ರೌಡಿಯಾಗಿ ಬೀದಿಯ ಹೆಣವಾಗಬಹುದೆಂದು ಅಂದುಕೊಂಡಿದ್ದ ಸಚಿನ್, ಈ ರೀತಿ ಬದಲಾಗಬಹುದೇ?... ಅಥವಾ ಶಿಕ್ಷಕರಾಗಿ ನಾವು ಅವನನ್ನು ತಪ್ಪಾಗಿ ನಡೆಸಿಕೊಂಡಿದ್ದೇವೆಯೇ?.... ಹೀಗೇ ನೂರಾರು ಯೋಚನೆಗಳು ಅರೆಕ್ಷಣದಲ್ಲಿ ಟೀಚರ್ ಮನದಲ್ಲಿ ಹಾದುಹೋದವು. 

       "ಸಚಿನ್ ನೀನೇನು ಮಾಡುತ್ತಿರುವೆ?... ಇಲ್ಲಿಗೆ ಹೇಗೆ ಬಂದೆ?..." ಎಂದು ಶಾಂತಿ ಟೀಚರ್ ಕೇಳತೊಡಗಿದರು. ಎಲ್ಲವನ್ನೂ ಹೇಳುತ್ತೇನೆ ಮೇಡಂ. ಮೊದಲು ಮನೆಗೆ ಹೋಗೋಣ.... ಎಂದು ಹೇಳುತ್ತಲೇ ಒಂದು ಮನೆಯ ಗೇಟಿನ ಮುಂದೆ ಕಾರು ನಿಂತಿತು. ಭವ್ಯವಾದ ಮನೆ. ಗೇಟ್ ತೆಗೆಯಲು ಆಳು ಇದ್ದ. ಕಾರು ನಿಲ್ಲಿಸಿ, ಇಬ್ಬರೂ ಮನೆಯೊಳಗೆ ಬಂದರು. ಮನೆಯಲ್ಲಿ ಸಚಿನ್ ಪತ್ನಿ ರೇಖಾಗೆ ಶಾಂತಿ ಟೀಚರ್ ಪರಿಚಯ ಮಾಡಿಸಿದ. ಆಕೆಯೂ ಟೀಚರ್ ಕಾಲಿಗೆ ನಮಸ್ಕರಿಸಿ, ಬಹಳನೇ ಪ್ರೀತಿಯಿಂದ ಬರಮಾಡಿಕೊಂಡಳು. ಮುಖ ತೊಳೆದು ಸೋಪಾದಲ್ಲಿ ಕುಳಿತ ಶಾಂತಿ ಟೀಚರ್ ಗೆ ತಣ್ಣನೆ ಜ್ಯೂಸ್ ತಂದುಕೊಟ್ಟ ರೇಖಾಳ ಸ್ವಭಾವ ಟೀಚರಿಗೆ ತುಂಬಾನೇ ಇಷ್ಟವಾಯಿತು. ಸಚಿನ್ ಮತ್ತು ರೇಖಾ ದಂಪತಿಗಳು ಆದರದಿಂದ ಸತ್ಕರಿಸಿ ಮಾತಿಗಿಳಿದು, ಇಲ್ಲಿಗೆ ಬಂದ ಬಗ್ಗೆ ಪ್ರಶ್ನಿಸಿದರು. ಶಾಂತಿ ಟೀಚರ್ ಕಣ್ಣುಗಳಲ್ಲಿ ಕಣ್ಣೀರು ಜಾರಿ ಬೀಳುತ್ತಿತ್ತು. ಅವರಿಬ್ಬರೂ ಸಮಾಧಾನ ಮಾಡಿ, ವಿಷಯ ತಿಳಿಸುವಂತೆ, ಸಾಧ್ಯವಾದರೆ ಸಹಾಯ ಮಾಡುವುದಾಗಿ ತಿಳಿಸಿದರು. ಒಂದು ವರ್ಷದ ಹಿಂದೆ ಶಾಂತಿ ಟೀಚರ್ ಗಂಡ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಟೀಚರಿಗೆ ಒಬ್ಬನೇ ಮಗ ಮದುವೆಯಾಗಿ ಹೆಂಡತಿ ಜೊತೆ ಪುಣೆಯಲ್ಲಿ ವಾಸವಿದ್ದ. ಶಾಂತಿ ಟೀಚರ್ ತನ್ನ ಶಕ್ತಿಮೀರಿ ಗಂಡನ ಸೇವೆ ಮಾಡಿದ್ದರು. ಆಸ್ಪತ್ರೆ ಖರ್ಚು ಭರಿಸಲು ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ಮಾರಿಯಾಗಿತ್ತು. ಮಗ ಆರಂಭದಲ್ಲಿ ಸ್ವಲ್ಪ ಸಹಾಯ ಮಾಡಿದ್ದ. ಆದರೆ ನಂತರ ಮಾತೇ ಬಿಟ್ಟು ಬಿಟ್ಟ. ಶಾಂತಿ ಟೀಚರಿಗೆ ಖರ್ಚಿನ ಭಾರ ಹೊತ್ತುಕೊಳ್ಳೋದು ಕಷ್ಟವಾಯಿತು. ಬಂದ ಸಹಾಯಗಳು ಸಾಲದಾಯಿತು. ಬೆಟ್ಟದಷ್ಟು ಸಾಲವಾಯಿತು. ಆದರೂ ಗಂಡನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಲವನ್ನು ತೀರಿಸಲು ದಾರಿ ಕಾಣಲಿಲ್ಲ. ಸ್ವಯಂ ನಿವೃತ್ತಿ ಪಡೆದು ಬಂದ ಹಣದಿಂದ ಸಾಲ ತೀರಿಸುವ ತೀರ್ಮಾನ ಮಾಡಿದರು. ಬಂದ ಹಣದಲ್ಲಿ ಸಾಲ ತೀರಿಸಲಾಗಲಿಲ್ಲ. ತನ್ನ ಅತ್ಯಂತ ಪ್ರೀತಿಯ ಮನೆಯನ್ನು ಅಡವಿಟ್ಟು ಸಾಲ ತೀರಿಸಿದ್ದರು. ಆದರೆ ಮನೆಯ ಸಾಲ ಹಾಗೇ ಬೆಳೆಯುತ್ತಿತ್ತು. ಮಗ ಅಲ್ಪಸ್ವಲ್ಪ ಕಳುಹಿಸುತ್ತಿದ್ದ. ಹಾಗೂ ಪಿಂಚಣಿಯಿಂದ ಟೀಚರ್ ಜೀವನ ಸಾಗುತ್ತಿತ್ತು. ಇದೀಗ ಮನೆಯನ್ನು ಏಲಂ ಮಾಡುವ ನೋಟೀಸು ಬಂದಿತ್ತು. ಮಗ ತನ್ನ ಅಸಹಾಯಕತೆ ಪ್ರಕಟಿಸಿದ್ದ. ಮನೆ ಹೋಗಲಿ ಯಾವುದಾದರೂ ಬಾಡಿಗೆ ಮನೆ ಮಾಡು ಅಂದಿದ್ದ. ಆದರೆ ತನ್ನ ಗಂಡ ಸತ್ತ ನಂತರ ತಾನು ಪ್ರೀತಿಸುತ್ತಿದ್ದ ಮನೆಯೂ ಕಳೆದುಕೊಳ್ಳುವುದು ಶಾಂತಿ ಟೀಚರಿಗೆ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ. ರಾತ್ರಿ ಪೂರ್ತಿ ಯೋಚನೆ. ಏಲಂಗೆ ಮೂರು ದಿನ ಉಳಿದಿದೆ. ದಿಕ್ಕು ಕಾಣದ ಶಾಂತಿ ಮನೆ ಏಲಂಗೆ ಮುಂಚೆನೇ ತಾನು ಸಾಯಬೇಕೆಂದು ನಿರ್ಧರಿಸುತ್ತಾರೆ. ತನ್ನ ಹಳೆಯ ಸೀರೆಯನ್ನು ಬಳಸಿ ಪ್ಯಾನ್ ಗೆ ನೇಣು ಹಾಕಿಕೊಳ್ಳಲು ತೀರ್ಮಾನಿಸುತ್ತಾರೆ. ಹಾಗೇ ಕಪಾಟಿನಿಂದ ಸೀರೆ ಎಳೆದಾಗ ಒಂದು ಫೋಟೋ ಕೆಳಗೆ ಬಿತ್ತು. ನೋಡಿದರೆ ಅದು ಸಚಿನ್ ಸಹಪಾಠಿ ಪ್ರಶಾಂತ್. ಕೆಲವು ವರ್ಷಗಳ ಹಿಂದೆ ಒಮ್ಮೆ ಟೀಚರ್ ಮನೆಗೆ ಬಂದಾಗ ಕೊಟ್ಟಿದ್ದ. ಈಗ ಆತ ದೊಡ್ಡ ಕಂಪೆನಿಯೊಂದರ  ಸಿಇಒ ಆಗಿದ್ದ. ಟೀಚರಿಗೆ ಆತನ ಬಗ್ಗೆ ಬಹಳನೇ ಅಭಿಮಾನ. ಅವರ ಮನಸ್ಸಿನಲ್ಲಿ ಒಂದು ಸಣ್ಣ ಬೆಳಕು ಕಂಡಂತಾಯಿತು. ಪ್ರಶಾಂತ್ ಖಂಡಿತಾ ನನಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಅವರಿಗಿತ್ತು. ಹೇಗೋ ಮಾಡಿ ಆತನನ್ನು ನಾಳೆ ಭೇಟಿ ಮಾಡಬೇಕೆಂದು ತೀರ್ಮಾನಿಸಿ ಸಾಯುವ ನಿರ್ಧಾರ ಕೈ ಬಿಟ್ಟರು. ಅದ್ಹೇಗೋ ಪ್ರಶಾಂತನ ವಿಳಾಸ ಪಡೆದು ಅವನಿರುವ ಊರಿಗೆ ಬಂದಿದ್ದರು. ಆತನ ತಲುಪುವಾಗ ಮಧ್ಯಾಹ್ನ ದಾಟಿತ್ತು. ಅಂದು ಆದಿತ್ಯವಾರವಾಗಿತ್ತು. ಮನೆಗೆ ಬಂದ ಟೀಚರನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಬರಮಾಡಿಕೊಂಡ ಪ್ರಶಾಂತನ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು. ಟೀಚರ್ ಯಾಕೆ ಬಂದಿರಬಹುದು...? ಏನಾದರೂ ಕೇಳಬಹುದೇ?.... ಹೀಗೆ ಅವನ ಯೋಚನೆ ಮುಂದುವರಿದಿತ್ತು. ಟೀಚರ್ ತುಂಬಾ ಹಸಿದಿದ್ದರು. ಸೌಜನ್ಯಕ್ಕೂ ಊಟ ಮಾಡುತ್ತೀರಾ.....? ಎಂದು ಕೇಳುವ ಮನಸ್ಸು ಪ್ರಶಾಂತನಿಗಿರಲಿಲ್ಲ. ಆತನ ಪತ್ನಿ ಒಳಗಿನಿಂದಲೇ "ಯಾರ್ರಿ ಬಂದದ್ದು?, ಶಾಪಿಂಗ್ ಹೋಗಲು ಟೈಂ ಆಯಿತು. ಅವರನ್ನು ಬೇಗ ಕಳುಹಿಸಿ ರೆಡಿಯಾಗಿ" ಎಂಬ ಕೂಗು ಒಳಗಿಂದ. ಪ್ರಶಾಂತ್ ಶಾಂತಿ ಟೀಚರ್ ಬಳಿ ಬಂದು "ನೋಡಿ ಟೀಚರ್, ಏನು ಬಂದದ್ದು ಹೇಳಿ, ನನಗೆ ಸ್ವಲ್ಪ ಕೆಲಸ ಇದೆ." ಅಂದಾಗ ಟೀಚರ್ ಗೆ ಹೇಳಬೇಕೋ ಬೇಡವೋ? ಗೊತ್ತಾಗುತ್ತಿರಲಿಲ್ಲ. ಕಟ್ಟಕಡೆಗೆ ಅಂತೂ ಸಾಯುವ ನಿರ್ಧಾರ ಮಾಡಿ ಆಗಿದೆ. ಇನ್ನು ಪ್ರತಿಷ್ಠೆ ಏಕೆ?... ಎಂದು ಭಾವಿಸಿ, ಒಂದೇ ಉಸಿರಿನಲ್ಲಿ ವಿಷಯ ತಿಳಿಸಿ, ಸಹಾಯ ಯಾಚಿಸಿದರು. ಈ ಮಧ್ಯೆ ಒಳಗಡೆ ಗೊಣಗುವಿಕೆ ಕೇಳುತ್ತಾನೇ ಇತ್ತು. ಒಳಗೆ ಹೋದ ಪ್ರಶಾಂತ್ ಐದು ಸಾವಿರ ರೂಪಾಯಿ ತಂದು ಟೀಚರ್ ಕೈಗಿತ್ತು, ಆಶೀರ್ವಾದ ಬೇಡಿದ. ಅದೇ ದಿನ ಬೆಳಿಗ್ಗೆ ತನ್ನ ಪ್ರೀತಿಯ ನಾಯಿಗೆ ಒಂದು ಲಕ್ಷದ ಗೂಡು ತಂದಿದ್ದ, ಇಂದು ಹೆಂಡತಿಗೆ ಡೈಮಂಡ್ ಖರೀದಿಸಲು ಹೊರಟಿದ್ದ. ಅದೂ ಹೆಂಡತಿಯ ಸ್ನೇಹಿತೆಗೆ ಗಿಪ್ಟ್ ನೀಡಲು. ಮನೆಯಂತೂ ಅರಮನೆಯಂತೆ ಕಾಣುತ್ತಿತ್ತು. ಆಶೀರ್ವಾದ ಪಡೆದ ಪ್ರಶಾಂತ್ "ನನಗೆ ಅರ್ಜಂಟ್ ಹೊರಡಬೇಕು ಟೀಚರ್ ನೀವಿನ್ನು ಹೊರಡಿ" ಎಂದವನೇ ಟೀಚರ್ ಉತ್ತರಕ್ಕೂ ಕಾಯದೆ ಒಳ ಹೊಕ್ಕ. ಶಾಂತಿ ಟೀಚರ್ ಭಾರವಾದ ಹೆಜ್ಜೆಯೊಂದಿಗೆ ಅಲ್ಲಿಂದ ಹೊರಟಿದ್ದರು. ಹೊರಬಂದ ಪ್ರಶಾಂತ್ ಗೆ ಸೋಫಾದ ಮೇಲೆ ತಾನು ಕೊಟ್ಟಿರುವ ಹಣ ಟೀಚರ್ ಅಲ್ಲೇ ಇಟ್ಟಿರುವುದು ಕಾಣಿಸಿತು. ಹಣದ ಕೆಳಗಡೆ ಒಂದು ಫೋಟೋ. ಅದು ತಾನು ಅಂದು ಟೀಚರಿಗೆ ಕೊಟ್ಟಿದ್ದ ಅದೇ ಫೋಟೋ.. ಗತಿಯಿಲ್ಲದಿದ್ದರೂ "ಅಹಂಕಾರಕ್ಕೇನೂ ಕಡಿಮೆಯಿಲ್ಲ" ಎಂದವನೇ ಶಾಪಿಂಗ್ ಗೆ ಹೊರಟಿದ್ದ. ಇದಿಷ್ಟು ಟೀಚರ್ ಕತೆಯಾಗಿತ್ತು. 

        ಪ್ರಶಾಂತ್ ಮನೆಯಿಂದ ಹೊರಟ ಶಾಂತಿ ಟೀಚರ್ ಮತ್ತೆ ಎರಡನೇ ಬಾರಿ ಸಾಯುವ ನಿರ್ಧಾರ ಮಾಡಿ ನಿಲ್ದಾಣದತ್ತ ನಡೆಯುತ್ತಿದ್ದರು. ಅದೇ ಸಮಯಕ್ಕೆ ಸಚಿನ್ ಕಾರಿನಲ್ಲಿ ಬಂದಿದ್ದ. ಸಚಿನ್ ಅದೇ ಊರಿನ ಒಂದು ಪ್ರತಿಷ್ಠಿತ ಕಂಪೆನಿಯ ಮಾಲಕನಾಗಿದ್ದ. ಹೆಂಡತಿಯೂ ಅದೇ ಕಂಪೆನಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಳು. ಮದುವೆಯಾದ ನಂತರ ಸಚಿನ್ ಸಂಪೂರ್ಣ ಬದಲಾಗಿದ್ದ. ಅದಕ್ಕೆ ಪತ್ನಿ ರೇಖಾ ಕಾರಣವಾಗಿದ್ದಳು. ಎಂಬಿಎ ಪದವೀದರೆಯಾಗಿದ್ದ ಆಕೆ, ತನ್ನ ತಂದೆಯ ಕಂಪೆನಿಯನ್ನು ನೋಡಿಕೊಳ್ಳುತ್ತಿದ್ದಳು.
ಸಚಿನ್ ಕೂಡಾ ಪದವಿ ಪಡೆದಿದ್ದು, ಹೇಗೋ ಅವರಿಬ್ಬರ ಮಧ್ಯೆ ಪರಿಚಯ ಉಂಟಾಯಿತು. ಮನೆಯವರ ಒಪ್ಪಿಗೆ ಪಡೆದು ಅವರಿಬ್ಬರು ಮದುವೆಯಾಗಿದ್ದರು. ತಂದೆ ತನ್ನ ಕಂಪೆನಿಯನ್ನು ಮಗಳಿಗೇ ಬಿಟ್ಟುಕೊಟ್ಟಿದ್ದ. ಸಚಿನ್ ಮತ್ತು ರೇಖಾ ಕಠಿನ ಶ್ರಮ ಪಟ್ಟು ಕಂಪೆನಿಯನ್ನು ಬೆಳೆಸಿದ್ದರು. ಇಂದು ಅದೇ ಸಚಿನ್ ಮುಂದೆ ಶಾಂತಿ ಟೀಚರ್ ಕಣ್ಣೀರಿಡುತ್ತಿದ್ದರು. ಸಚಿನ್ ದಂಪತಿಗಳು ಇಂದು ಇಲ್ಲೇ ಇದ್ದು ಆತಿಥ್ಯ ಸ್ವೀಕರಿಸುವಂತೆ ಒತ್ತಾಯಿಸಿದರು. ಟೀಚರನ್ನು ಮಾಲ್ ಗೆ ಕರೆದೊಯ್ದು, ಹೋಟೇಲ್ ನಲ್ಲಿ  ಭರ್ಜರಿ ಪಾರ್ಟಿ ನೀಡಿದರು. ಅವರಿಬ್ಬರು ಅಲ್ಲೇ ಮಾಲ್ ನಲ್ಲಿ ಖರೀದಿ ಮಾಡಿ ಮೂವರೂ ಮನೆಗೆ ಹಿಂತಿರುಗಿದರು. ಶಾಂತಿ ಟೀಚರ್ ಕಾರನ್ನು ಹತ್ತಿ ಕುಳಿತು ಪಕ್ಕಕ್ಕೆ ತಿರುಗಿ ಹೊರಗಡೆ ಕಣ್ಣಾಯಿಸಿದಾಗ ಪ್ರಶಾಂತ್ ತನ್ನ ಕಾರಿನ ಡೋರ್ ಓಪನ್ ಮಾಡುತ್ತಿದ್ದ. ಇತ್ತ ರಾತ್ರಿ ಸಚಿನ್ ಮನೆಯಲ್ಲಿ ತಂಗಿದ್ದ ಶಾಂತಿ ಟೀಚರ್ ಗೆ ಯಾವುದೇ ಕೊರತೆ ಉಂಟಾಗದಂತೆ ಇಬ್ಬರೂ ನೋಡಿಕೊಂಡರು. ಆದರೆ ಶಾಂತಿ ಟೀಚರ್ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅವಳ ಸಮಸ್ಯೆ ಇನ್ನೂ ಪರಿಹಾರವಾಗಿರಲಿಲ್ಲ. ಮೆತ್ತಗೆಯ ಹಾಸಿಗೆಯಲ್ಲೂ ಆಕೆಗೆ ನಿದ್ರೆ ಸುಳಿಯಲಿಲ್ಲ. ತಂಪಾದ ಗಾಳಿ ಇದ್ದರೂ ಬೆವರು ನಿಂತಿರಲಿಲ್ಲ. ಬೆಳಿಗ್ಗೆ ಎದ್ದು ತಿಂಡಿ ಮುಗಿಸಿ ಟೀಚರ್ ಹೊರಡಲು ಸಿದ್ಧರಾದರು. ಸಚಿನ್ ಮತ್ತು ರೇಖಾ ಒಂದು ಕುರ್ಚಿ ನೀಡಿ ಟೀಚರನ್ನು ಕುಳ್ಳಿರಿಸಿದರು. ತಟ್ಟೆಯಲ್ಲಿ ಹಣ್ಣು ಹಂಪಲು ನೀಡಿ ಸತ್ಕರಿಸಿದರು. ರೇಖಾ ಒಂದು ಡೈಮಂಡ್ ಸರವನ್ನು ಎರಡು ಬೆಲೆಬಾಳುವ ಸೀರೆಯನ್ನು ಉಡುಗೊರೆ ನೀಡಿ ಆಶೀರ್ವಾದ ಬೇಡಿ ಕಾಲಿಗೆರಗಿದಳು. ಸಚಿನ್ ಒಂದು ಬೆಲೆಬಾಳುವ ವಾಚ್ ತೊಡಿಸಿ, ಸಹಿ ಮಾಡಿದ ಬ್ಲಾಂಕ್ ಚೆಕ್ ನೀಡಿ, "ಟೀಚರ್ ಕ್ಷಮಿಸಿ, ಎಷ್ಟು ಮೊತ್ತ ಬರೆದರೂ ಕಡಿಮೆಯೇ. ಅದಕ್ಕಾಗಿ ಖಾಲಿ ಚೆಕ್ ನೀಡುತ್ತಿದ್ದೇನೆ. ನಿಮಗೆ ಎಷ್ಟು ಅಗತ್ಯ ಇದೆಯೋ ಅಷ್ಟು ಬರೆಯಿರಿ. ಮುಂದೆ ಸಹಾಯ ಬೇಕಿದ್ದರೆ ಮುಲಾಜಿಲ್ಲದೆ ಕೇಳಿ. ಆತಿಥ್ಯದಲ್ಲಿ ಕೊರತೆಯಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದು ಕಾಲಿಗೆರಗಿ ಆಶೀರ್ವಾದ ಬೇಡಿದ. ಶಾಂತಿ ಟೀಚರ್ ಮೌನಿಯಾಗಿದ್ದರು. ಅವರಲ್ಲಿ ಶಬ್ಧವೇ ಇರಲಿಲ್ಲ. ಕಾಣುತ್ತಿರುವುದು ಕನಸೋ ಅಥವಾ ನನಸೋ ಗೊತ್ತಾಗುತ್ತಿರಲಿಲ್ಲ. ಅವರಿಬ್ಬರೂ ಟೀಚರನ್ನು ಮನೆಗೆ ಬಿಟ್ಟು ಬರಲು ಕಾರಲ್ಲಿ ಹೊರಟರು. ಸ್ವಲ್ಪ ಮುಂದೆ ಹೊರಟಾಗ ಆಂಬುಲೆನ್ಸ್ ಶಬ್ಧ ಮಾಡುತ್ತಾ ವೇಗವಾಗಿ ಹಾದು ಹೋಗುತ್ತಿದ್ದಂತೆ ಸಚಿನ್ ಫೋನ್ ರಿಂಗಾಯಿತು. ಗೆಳೆಯ ಕರೆ ಮಾಡಿ ಪ್ರಶಾಂತ್ ಕಾರು ಆಕ್ಸಿಡೆಂಟಾಗಿ ಗಂಡ ಹೆಂಡತಿ ಇಬ್ಬರಿಗೂ ತೀವ್ರ ಗಾಯವಾಗಿದೆ ಎಂಬ ಸುದ್ದಿ ಮುಟ್ಟಿಸಿದ. ಹಿಂತಿರುಗಿ ನೋಡಿದರೆ ಶಾಂತಿ ಟೀಚರ್ ಸೀಟಿಗೊರಗಿ ಹಾಯಾಗಿ ಹೊರಗಡೆ ನೋಡುತ್ತಿದ್ದಾರೆ. ಸಚಿನ್ ವಿಷಯ ಶಾಂತಿ ಟೀಚರ್ ಗೆ ತಿಳಿಸಲಿಲ್ಲ.  "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ! ಗುರು ಸಾಕ್ಷಾತ್ ಪರಬ್ರಹ್ಮ! ತಸ್ಮೈ ಶ್ರೀ ಗುರುವೇ ನಮಃ" ಎಂದು ಶಾಲೆಯ ಪ್ರಾರ್ಥನೆ ಕಿವಿಗೆ ಅಪ್ಪಳಿಸಿದಂತಾಯಿತು. ಕಾರು ವೇಗವಾಗಿ ಶಾಂತಿ ಟೀಚರ್ ಮನೆಯತ್ತ ಸಾಗುತ್ತಿತ್ತು.

...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************



     ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... 

ಯಾಕೂಬ್ ಎಸ್ ಕೊಯ್ಯೂರು, 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, 

ಸರಕಾರಿ ಪ್ರೌಢಶಾಲೆ, ನಡ 

ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

Mob : +91 90089 83286

******************************************




Ads on article

Advertise in articles 1

advertising articles 2

Advertise under the article