-->
ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 02

ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 02

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 02



    ನನ್ನ ನೆಚ್ಚಿನ ಪ್ರೀತಿಯ ಗುರುಗಳು, ಇವರ ಜ್ಞಾನ ಶಕ್ತಿಯನ್ನು ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಕಸ್ತೂರಿಯ ಕಂಪಿನ ಘಮಲಿನಂತೆ ಎಲ್ಲರನ್ನು ತನ್ನತ್ತ ಸೆಳೆಯುವ ಚಂದನ ಮೇಡಂ ಅವರ ವಿದ್ಯಾರ್ಥಿಯಾಗಿ ಹಾಗೂ ಅವರ ಬಗ್ಗೆ ಬರೆಯಲು ನನ್ನ ಭಾಗ್ಯವೇ ಸರಿ.
     ಚಂದನ ಮೇಡಂರವರು ನಮ್ಮ ಕಾಲೇಜಿನ ಕೇಸರಿ. ತಮ್ಮ ಸೂಕ್ಷ್ಮ ಮನಸ್ಸಿನಿಂದ ಎಲ್ಲರನ್ನೂ ಅರ್ಥ ಮಾಡಿಕೊಂಡು ವಿಷಯಗಳು ಅರ್ಥವಾಗುವಂತೆ ವಿವರಿಸಿ ಬದುಕಿನ ದಾರಿಗೆ ಸೂಕ್ತ ಮಾರ್ಗದರ್ಶನ ಕೊಡುವ ನನ್ನ ನೆಚ್ಚಿನ ಗುರುಗಳು ಆದ ಚಂದನ ಮೇಡಂರವರಿಗೆ ನನ್ನ ನಮನಗಳು.


  ಗುರುಗಳೇ ನಿಮ್ಮ ಜ್ಞಾನ ಶಕ್ತಿ ಅಪಾರ, ನಿಮ್ಮ ಮಾತುಗಳು ನಮಗೆ ಸೂರ್ತಿ, ನಿಮ್ಮ ಬಗ್ಗೆ ಬರೆಯಲು ಪುಟಗಳೆ ಸಾಲುವುದಿಲ್ಲ. ನಿಮ್ಮ ಬಗ್ಗೆ ಎಷ್ಟೇ ಮಾತನಾಡಿದರೂ ಮನಸ್ಸಿಗೆ ಸಮಾಧಾನವಿಲ್ಲ, ನೀವೆಂದರೆ ನನಗೆ ಅಷ್ಟು ಅಚ್ಚುಮೆಚ್ಚು, ನಿಜದ ಗುರುಗಳು ಅಂದ್ರೆ ನೀವು.
        "ಸಾವಿರ ದಿನ ಅಧ್ಯಯನದಲ್ಲಿ ತೊಡಗುವುದಕ್ಕಿಂತ ಒಂದು ದಿನ ಒಳ್ಳೆಯ ಗುರುವಿನ ಜೊತೆ ಇದ್ದರೆ ಸಾಕು''  ಎಂಬ ಜಪಾನಿ ಗಾದೆ ನಿಮ್ಮನ್ನೇ ನೋಡಿ ಬರೆದಿರಬೇಕು.  ನನ್ನ ಜೀವನದಲ್ಲಿ  ಶ್ರೇಷ್ಠ ಶಿಕ್ಷಕರಲ್ಲಿ ನೀವು ಮೊದಲಿಗರು. ನೀವು ಜೊತೆ ಇದ್ದರೆ ಅದು ಶುಭದಿನ, ಆ ಶುಭದಿನ ದಿನ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇದು ನನ್ನ ಅನುಭವದ ಮಾತು ನಾನು ತುಂಬಾ ಸಾರಿ ಗಮನಿಸಿದ್ದೇನೆ.  ಜೀವನಕ್ಕೆ ಬೇಕಾದ ಶಿಸ್ತು, ಬದ್ಧತೆ, ಒಂದು ಗುರಿ ಕನಸು ಕಟ್ಟಲು ತಳಹದಿ ಹಾಕಿಕೊಟ್ಟಿದ್ದೀರಿ ಅಂದ್ರೆ ತಪ್ಪಿಲ್ಲ.
      "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ' ಎಂಬಂತೆ  ನನ್ನ ಮನದಲ್ಲಿ
ಸದಾ ಮಿನುಗುವ ಧ್ರುವತಾರೆಯಂತೆ, ನನ್ನ ಜೀವನಕ್ಕೆ ಜ್ಞಾನದ ಕಿರಣ ಚೆಲ್ಲಿ ಬಾಳಿಗೆ ಬೆಳಕು ಕೊಟ್ಟ ರವಿ ನೀವು. ಕಲಿಸಿದ ಅಕ್ಷರಗಳು ನನ್ನ ಮನದಲ್ಲಿ ಗಟ್ಟಿಯಾಗಿ ಬೇರೂರಿ ಬೆಳೆದಿದೆ. ಜ್ಞಾನದ ಸಿಹಿ ಮರವಾಗಿ ಮತ್ತೆ ಅದು ಎಂದಿಗೂ ಅಳಿಸಿ ಹೋಗುವ ಮಾತೆ ಇಲ್ಲದಂತೆ ಬೆಳೆಸಿದ್ದೀರಿ. ನೀವು ಕಲಿಸಿದ ಪಾಠಗಳು ಎಂದಿಗೂ ಈ ಮನಸಲ್ಲಿ ಮಾಸುವುದಿಲ್ಲ.  ಅಷ್ಟು ಅಚ್ಚಾಗಿ ಉಳಿದಿದೆ.  ನಿಮ್ಮಂತಹ ಗುರುಗಳು ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎನ್ನಬಹುದು. ಹಾಗೆ ನಿಮ್ಮ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ನಿಮ್ಮ ಮನಸ್ಸು ಅಪ್ಪಟ ಬಂಗಾರ, ಸದಾ ನಿಮಗೆ ಋಣಿಯಾಗಿರುವ ನಿಮ್ಮ ವಿದ್ಯಾರ್ಥಿನಿ.
................................... ಸ್ಪೂರ್ತಿ ಎಸ್ ಆರ್
ದ್ವಿತೀಯ ಪಿಯುಸಿ
ಸರಕಾರಿ ಹೆಣ್ಮಕ್ಕಳ ಪದವಿ ಪೂರ್ವ
ಕಾಲೇಜು , ಚನ್ನರಾಯಪಟ್ಟಣ
****************************************


     ಶಿಕ್ಷಕರಿಗೆ ಕೃತಜ್ಞತೆ ಮತ್ತು ಗೌರವನ್ನು ತೋರಿಸಲು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ.....  ನನ್ನ ನೆಚ್ಚಿನ ಶಿಕ್ಷಕರ ಹೆಸರು ರಾಮಚಂದ್ರ ಸರ್. ಇವರು ಆದರ್ಶ ಶಿಕ್ಷಕರು ಹಾಗೂ ಅವರು ಚೆನ್ನಾಗಿ ಪಾಠವನ್ನು ಕಲಿಸುತ್ತಿದ್ದರು. ಇವರು ಯಾವುದನ್ನಾದರೂ
ಅತ್ಯುತ್ತಮ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರು. ಇವರ ಭೋದನಾ ವಿಧಾನವು ಸರಳ ಮತ್ತು ಅರ್ಥಮಾಡಿಕೊಳ್ಳಲು ತುಂಬಾ ಸುಲಭವಾಗುತ್ತಿತ್ತು. ನಮಗೆ ಒಳ್ಳೆಯ ಅಭ್ಯಾಸಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತಿದ್ದರು ಹಾಗೂ ಯಾವಾಗಲೂ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಗಮನ ನೀಡುತ್ತಿದ್ದರು. ಇವರು ಇಡೀ ಶಾಲೆಯಲ್ಲಿ ಒಂದು ಉತ್ತಮ ಶಿಕ್ಷಕರು ಎಂದು ಹೇಳಲು ಇಚ್ಚಿಸುತ್ತೇನೆ. ಇವರು ನಮಗೆ ಉತ್ತಮ ರೀತಿಯ ಸ್ಫೂರ್ತಿ ನೀಡುತ್ತಿದ್ದರು. ವಿದ್ಯಾಭ್ಯಾಸಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಇವರು ಮಕ್ಕಳಿಗೆ ಬೇಕಾದ ಪುಸ್ತಕವನ್ನು ದಾನವಾಗಿ ಕೊಡುತ್ತಿದ್ದರು. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ.
................................. ಫಾತಿಮಾತ್ ಸಾಲಿಯ
10ನೇ ತರಗತಿ
ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



     ಶಿಕ್ಷಕರು ಪಾಠಗಳನ್ನು ಮಾತ್ರ ಕಲಿಸುವುದಿಲ್ಲ, ನಾವು ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಕಲಿಸುತ್ತಾರೆ. ನನಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿದೆ. ನನ್ನ ಸಂಗೀತ ಶಿಕ್ಷಕಿ ನನ್ನ ಅತ್ತೆ, ಅಶ್ವಿನಿ. ಇವರು ನನಗೆ ದೇವರನಾಮಗಳನ್ನು ಕಲಿಸುತ್ತಾರೆ.  ನನಗೆ ಚಿಕ್ಕ ವಯಸ್ಸಿನಿಂದ ಸಂಗೀತ ಕಲಿಯಬೇಕೆಂದು ಆಸೆಯಿತ್ತು. ಹಾಗಾಗಿ ನಾನು ಲಕ್ಷ್ಮಿ ವರುಣ್ ಅವರ ಸಂಗೀತ ತರಗತಿಗೆ ಸೇರಿದೆ. ನನ್ನ ಸ್ವರ ತುಂಬಾ ಚೆನ್ನಾಗಿದೆ ಎಂದು ನನ್ನ ಮನೆಯವರು ಮತ್ತು ಸ್ನೇಹಿತರು ಹೇಳುತ್ತಿದ್ದರು. ಸ್ವಲ್ಪ ದಿನಗಳ ನಂತರ ನಾನು ಅಶ್ವಿನಿ ಅವರಿಂದ ದೇವರನಾಮಗಳನ್ನು ಕಲಿಯತೊಡಗಿದೆ. ಅವರು ನನ್ನ ಸ್ವರವನ್ನು ಮತ್ತಷ್ಟು ಮಧುರವಾಗಿಸಲು ಕೆಲವು ಸ್ವರಾಭ್ಯಾಸಗಳನ್ನು ಕಲಿಸಿದರು. ಅದರೊಂದಿಗೆ ನನಗೆ ಹಲವಾರು ದೇವರನಾಮಗಳನ್ನೂ ಕಲಿಸಿದರು. ಅಶ್ವಿನಿ ಅವರ ಹತ್ತಿರ ನಾನು ಸಂಗೀತವನ್ನು ಅಭ್ಯಾಸ ಮಾಡಲು ಶುರುಮಾಡಿದ ನಂತರ ನನ್ನ ಹಾಡುಗಾರಿಕೆಯು ಇನ್ನಷ್ಟು ಉತ್ತಮವಾಯಿತು. ಸಂಗೀತದಿಂದ ನನಗೆ ಹಲವಾರು ಉಪಕಾರಗಳು ಆಗಿವೆ. ನನ್ನ ಮನಸ್ಸಿಗೆ ಬೇಸರವಾದಾಗ ಅಥವಾ ಯಾರ ಮೇಲಾದರೂ ಕೋಪವಿದ್ದರೆ ಒಂದು ಹಾಡು ಹಾಡಿದಾಗ ಮತ್ತೆ ಖುಷಿಯಾಗುತ್ತದೆ. ನನಗೆ ಸಂಗೀತವನ್ನು ಅಭ್ಯಾಸ ಮಾಡಿದಾಗ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗುತ್ತದೆ. ನಾನು ನನ್ನ ಅಕ್ಕ ತಂಗಿಯರಿಗೆ ಹಾಡುಗಳನ್ನು ಕಲಿಸಿ, ಅವರಿಗೂ ತುಂಬಾ ಸಂತೋಷವಾಗಿದೆ.  ನಾನು ಅಶ್ವಿನಿ ಅವರ ಹತ್ತಿರ ಸಂಗೀತವನ್ನು ಕಲಿಯಲು ಶುರುಮಾಡಿದ ನಂತರ ನನಗೂ ಸಂಗೀತದಲ್ಲಿ ಮತ್ತಷ್ಟು ಆಸಕ್ತಿ ಮೂಡಿತು. ಅವರು ಪಾಠ ಮಾಡುವ ಶೈಲಿ, ಅವರು ಕಲಿಸುವ ಹಾಡುಗಳು, ಎಲ್ಲಾ ನನಗೆ ಇಷ್ಟವಾದವು. ಅವರ ತರಗತಿಗೆ ನಾನು ಶನಿವಾರ ಹೋಗುತ್ತೇನೆ, ಹಾಗಾಗಿ ನಾನು ಯಾವಾಗಲೂ ಶನಿವಾರಕ್ಕಾಗಿ ಕಾಯುತ್ತಿರುತ್ತೇನೆ.  ಆಶ್ವಿನಿ ಅವರು ನನಗೆ ಸಂಗೀತ ಮಾತ್ರ ಅಲ್ಲ, ‘ಏನೇ ಸಾಧಿಸಬೇಕಾದರೂ ಅಭ್ಯಾಸ ಮಾಡಬೇಕು’ ಎಂಬ ಪಾಠವನ್ನು ಕೂಡ ಕಲಿಸಿದ್ದಾರೆ.

........................................ ಧೃತಿ ಚೆಂಬಾರ್ಪು
5ನೇ ತರಗತಿ
ದೇವ್-ಇನ್ ನ್ಯಾಷನಲ್ ಶಾಲೆ,
ಸಹಕಾರ ನಗರ, ಬೆಂಗಳೂರು
*****************************************



    ನನ್ನ ಹೆಸರು ರಿತೇಶ್. ನಾನು ಈ ಶಾಲೆಯಲ್ಲಿ ಐದನೇ ತರಗತಿಯಿಂದ ಓದುತ್ತಿದ್ದೇನೆ. ಈ ಶಾಲೆಯಲ್ಲಿ 10 ಜನ ಶಿಕ್ಷಕರು ಇದ್ದಾರೆ.  ನನಗೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ತುಂಬಾ ಇಷ್ಟ. ಏಕೆಂದರೆ ನಾನು ಎಷ್ಟೇ ಉಪದ್ರ ಮಾಡಿದರೂ, ಅವರು ನನಗೆ ತಿದ್ದಿ ಬುದ್ದಿವಾದ ಹೇಳುತ್ತಾರೆ. ನನ್ನ ಕ್ಲಾಸ್ ಟೀಚರ್ ಆದ ರಾಧಾ ಟೀಚರ್ ಇವರು ನಮಗೆ ಗಣಿತ ಹಾಗೂ ವಿಜ್ಞಾನವನ್ನು ತುಂಬಾ ಚೆನ್ನಾಗಿ ವಿವರಿಸುತ್ತಾರೆ. ಶ್ವೇತಾ ಟೀಚರ್ ಇವರು ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಮಕ್ಕಳಿಗೆ ಅರ್ಥವಾಗುವ ಹಾಗೆ ವಿವರಣೆ ನೀಡಿ ಆಟದ ಮುಖಾಂತರ ಕಲಿಸಿ ಕೊಡುತ್ತಾರೆ. ಮೋಕ್ಷಿತಾ ಟೀಚರ್ ಇವರು ನನಗೆ ಕನ್ನಡ ಹಾಗೂ ಸಮಾಜವನ್ನು ಅರ್ಥವಾಗುವ ರೀತಿಯಲ್ಲಿ ತಿಳಿಸಿ ಕೊಡುತ್ತಾರೆ. ಎಲ್ಲರಿಗೂ ತುಂಬಾ ಆತ್ಮೀಯರಾಗಿರುವ ನಮ್ಮ ಶಾಲೆಯ ದೈಹಿಕ ಶಿಕ್ಷಕರಾಗಿರುವ ಶಶಿಕಲಾ ಟೀಚರ್ ಇವರು ಎಲ್ಲಾ ಮಕ್ಕಳಿಗೆ ತುಂಬಾ ಇಷ್ಟ. ಏಕೆಂದರೆ ಇವರು ನಮಗೆ ಆಟದ ಬಗ್ಗೆ ವಿವರವನ್ನು ನೀಡುತ್ತಾರೆ ಹಾಗೂ ನಮ್ಮನ್ನು ತುಂಬಾ ಚೆನ್ನಾಗಿ ಆಡಿಸಿ ಇತರ ಶಾಲೆಗಳ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧೆಗೆ ತಯಾರು ನಡೆಸುತ್ತಾರೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳು ಸಲ್ಲಿಸುತ್ತಾ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

................................................. ರಿತೇಶ್
8ನೇ ತರಗತಿ
ದ.ಕ.ಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ಮುನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


    ನನ್ನ ಹೆಸರು ಆಯಿ ಫರ್ಹಾಣ. ನನ್ನ ನೆಚ್ಚಿನ ಶಿಕ್ಷಕಿ ಗೀತಾ ಟೀಚರ್. ಗೀತಾ ಟೀಚರ್ ನನಗೆ ನಲಿ-ಕಲಿಯಲ್ಲಿ ಪಾಠ ಮಾಡಿದ ಶಿಕ್ಷಕಿ. ಇವರು ತುಂಬಾ ಚೆನ್ನಾಗಿದೆ ಪಾಠ ಮಾಡುತ್ತಿದ್ದರು. ನಮಗೆ ಅರ್ಥವಾಗದ  ವಿಷಯಗಳು  ಇದ್ದರೆ ಅವರು ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಅದರಲ್ಲೂ ಗಣಿತ, ಕನ್ನಡ ಹಾಗೂ ಇಂಗ್ಲಿಷ್ ಪಾಠಗಳನ್ನು ತುಂಬಾ ಚೆನ್ನಾಗಿ ಹೇಳಿದ ಕಾರಣ ನಾನು ಈಗ ಎಂಟನೇ ತರಗತಿಯಲ್ಲಿ ವಿಷಯಗಳನ್ನು ಅರ್ಥ ಮಾಡಿಕೊಂಡು ಕಲಿಯಲು ಸಹಾಯವಾಗುತ್ತಿದೆ. ಗೀತಾ ಟೀಚರ್ ಕ್ಲಾಸಿಗೆ ಬಂದರು ಎನ್ನುವಾಗ, ನಾವು ಪುಸ್ತಕಗಳನ್ನು ತೆಗೆದು ಓದುತ್ತಾ ಬರೆಯುತ್ತಾ ಇದ್ದೆವು. ಅವರು ಮಕ್ಕಳನ್ನು ಕರೆದು ಬೋರ್ಡಿನಲ್ಲಿ ಲೆಕ್ಕ ಮಾಡಿಸುತ್ತಿದ್ದರು. ನಮಗೆ ಪ್ರತಿಸಲ ಕೆಟ್ಟ ಕೆಲಸವನ್ನು ಮಾಡಬಾರದು ಎಂದು ಬುದ್ಧಿವಾದವನ್ನು ಹೇಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡದೆ ಹಾಗೂ ಜಗಳವಾಡಿಕೊಂಡು ಇರಬಾರದು ಎಂದು ಹೇಳಿಕೊಡುತ್ತಿದ್ದರು. ಆದುದರಿಂದ ನನಗೆ ನನ್ನ ಚಿಕ್ಕಪ್ರಾಯದಲ್ಲಿ ಪಾಠವನ್ನು ಕಲಿಸಿಕೊಟ್ಟ ಗೀತಾ ಟೀಚರ್ ತುಂಬಾ ಇಷ್ಟ. ಇವರಿಗೆ ಧನ್ಯವಾದಗಳು ಹೇಳುತ್ತಾ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಹೇಳುತ್ತೇನೆ.

...................................... ಆಯಿ ಫರ್ಹಾಣ
8ನೇ ತರಗತಿ
ದ.ಕ. ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ಮುನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


    ನನ್ನ ನೆಚ್ಚಿನ ಶಿಕ್ಷಕರ ಹೆಸರು ಪಲ್ಲವಿ ಟೀಚರ್ ಮತ್ತು ಸುಶ್ಮಿತಾ ಟೀಚರ್. ಅವರಿಬ್ಬರೂ ಆದರ್ಶ ಶಿಕ್ಷಕರು. ಅವರು ಚೆನ್ನಾಗಿ ಪಾಠ ಕಲಿಸುತ್ತಾರೆ. ಅವರು ವಿಷಯ ಕಲಿಸುವಾಗ ಉದಾಹರಣೆಗಳೊಂದಿಗೆ ವಿವರಿಸುತ್ತಾರೆ. ಅವರು ಶಿಸ್ತುಬದ್ಧ ಮತ್ತು ಸಮಯ ಪಾಲಕರು, ಅವರ ಬೋಧನಾ ವಿಧಾನವು ಸರಳ ಮತ್ತು ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಅವರು ನಮಗೆ ಒಳ್ಳೆಯ ಅಭ್ಯಾಸಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ಯಾವಾಗಲೂ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಗಮನ ನೀಡುತ್ತಾರೆ. ನನ್ನ ಎಲ್ಲಾ ಶಿಕ್ಷಕರ ಬಗ್ಗೆ ನನಗೆ ತುಂಬಾ ಗೌರವ ಮತ್ತು ಹೆಮ್ಮೆ ಇದೆ. ಶಾಲೆಯಲ್ಲಿ ಪಲ್ಲವಿ ಟೀಚರ್ ನನ್ನ ನೆಚ್ಚಿನ ಶಿಕ್ಷಕರು ಅವರು ನಮಗೆ ಇಂಗ್ಲಿಷ್ ಕಲಿಸುತ್ತಾರೆ. ಅವರು ಇಂಗ್ಲಿಷ್ ಗ್ರಾಮರ್ ನಮಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತಾರೆ. ಅವರು ನನಗೆ ಇಂಗ್ಲಿಷ್ ಮಾತನಾಡುವುದು ಮತ್ತು ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಅವರು ಇಡೀ ಶಾಲೆಯಲ್ಲಿ ಉತ್ತಮ ಶಿಕ್ಷಕರು. ಸುಶ್ಮಿತಾ ಟೀಚರ್ ಕೂಡ ನನ್ನ ನೆಚ್ಚಿನ ಟೀಚರ್. ಅವರು ನಮಗೆ ಗಣಿತ ವಿಷಯ ಕಲಿಸುತ್ತಾರೆ. ತುಂಬಾ ಚೆನ್ನಾಗಿ ಮಕ್ಕಳಿಗೆ ಅರ್ಥವಾಗುವಂತೆ ಲೆಕ್ಕ ಕಲಿಸುತ್ತಾರೆ. ಸುಶ್ಮಿತಾ ಟೀಚರ್ ಹಲವಾರು ಪ್ರತಿಭೆಗಳನ್ನು ಹೊಂದಿದ್ದಾರೆ. ಅವರು ನಿಜಕ್ಕೂ ಒಬ್ಬ ಉತ್ತಮ ಶಿಕ್ಷಕಿ. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ. ನನಗೆ ನನ್ನ ಕನ್ನಡ ಟೀಚರ್ ರಮಣಿ ಟೀಚರ್ ಅಂದರೆ ತುಂಬಾ ಅಭಿಮಾನ. ಅವರ ಭೋದನಾ ವಿಧಾನವು ಸರಳ ಮತ್ತು ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಅವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಅವರು ಕೂಡ ಶಾಲೆಯಲ್ಲಿ ನನ್ನ ನೆಚ್ಚಿನ ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರು.
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮ:
Happy Teachers Day All My Lovely Teachers Thank You For Everyone

........................................ ಸಿದ್ವಿಕ್ ಪೂಜಾರಿ 

6ನೇ ತರಗತಿ
ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ
ಕುಂದಾಪುರ, ಉಡುಪಿ ಜಿಲ್ಲೆ
*****************************************


       ನನಗೆ ತುಂಬಾ ಇಷ್ಟವಾದ ನೆಚ್ಚಿನ ಶಿಕ್ಷಕಿ ಎಂದರೆ ಶ್ವೇತಾ ಟೀಚರ್. ಅವರು ನನಗೆ ನಾಲ್ಕನೇ ತರಗತಿಯಲ್ಲಿ ಇಂಗ್ಲೀಷ್ ಪಾಠವನ್ನು ಮಾಡಿದ್ದರು. ತರಗತಿ 5 ಮತ್ತೆ 4ಕ್ಕೆ ಅವರು ಒಟ್ಟಿಗೆ ಪಾಠವನ್ನು ಮಾಡುವಾಗ ನಮಗೆ ಕೂಡ ಅರ್ಥವಾಗುವ ರೀತಿಯಲ್ಲಿ ಅವರು ನಮಗೆ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ನಾನು ಇಂಗ್ಲಿಷ್ ಪಾಠವನ್ನು ಇಷ್ಟ ಪಟ್ಟದ್ದೇ ಅವರಿಂದಾಗಿ. ನಮಗೆ ಅವರು ಪಾಠವನ್ನು ತರಗತಿಯಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಮುಖಾಂತರ ತೋರಿಸಿ ಆಟದ ಸಹಾಯದ ಜೊತೆಗೆ ಪಾಠವನ್ನು ಅರ್ಥ ಮಾಡಿಸುತ್ತಾ ಇದ್ದರು. ಇಂಗ್ಲಿಷ್ ಅನ್ನು ನಾನು ಆಟದ ಮುಖಾಂತರ ಕಲಿಯಬಹುದು ಎಂದು ನನಗೆ ತಿಳಿದದ್ದೇ ಶ್ವೇತಾ ಟೀಚರ್ ಅವರಿಂದಾಗಿ. ನಮಗೆ ಗೊತ್ತಿಲ್ಲದ ಹಾಗೆ ಅವರು ಇಂಗ್ಲೀಷ್ ಪಾಠವನ್ನು ಕಲಿಸಿಕೊಡುತ್ತಾ ಇದ್ದರು. ಬೇಕಾದಾಗ ಜೋರು ಮಾಡಿಕೊಂಡು ಉಳಿದ ಸಮಯದಲ್ಲೇ ನಗುನಗುತಾ ಪಾಠ ಮಾಡುತ್ತಾ ಇರುವ ನೆಚ್ಚಿನ ಶಿಕ್ಷಕಿ ಶ್ವೇತಾ ಟೀಚರ್ ಇವರಿಗೆ ಹಾಗೂ ಉಳಿದ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

.................................................. ಸಾವಿತ್ರಿ
5ನೇ ತರಗತಿ
ದ.ಕ. ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ಮುನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



      ನನ್ನ ಮೆಚ್ಚಿನ ಶಿಕ್ಷಕಿಯ ಹೆಸರು ಭಾರತಿ ಟೀಚರ್. ಇವರು ನಮ್ಮ ನಲಿಕಲಿಯ ಶಿಕ್ಷಕಿಯಾಗಿದ್ದಾರೆ. ಅವರು ನನಗೆ ಒಂದನೇ ತರಗತಿಯ ವಿದ್ಯೆ ಬುದ್ದಿ ನೀಡಿದ್ದಾರೆ. ಪ್ರತಿದಿನ ಅಮ್ಮನ ತರಹ ಪ್ರೀತಿ ಕೊಟ್ಟು ಶಾಲೆಯಲ್ಲಿ ನಮ್ಮನ್ನು ನಡೆಸಿದ್ದಾರೆ. ಯಾವ ಟೀಚರ್ ಬಂದರೂ ಗೌರವಿಸಬೇಕು ಎಂದು ಹೇಳಿಕೊಟ್ಟಿದ್ದಾರೆ. ನಾವು ತಪ್ಪು ಮಾಡಿದರೆ ತಿದ್ದಿ ಹೇಳುತ್ತಾರೆ. ನಮಗೆ ಆಟದ ಜೊತೆಗೆ ಪಾಠವನ್ನು ಮಾಡುತ್ತಾರೆ. ನಮಗೆ ಕನ್ನಡ ಗಣಿತ ಪರಿಸರ ಹಾಗೂ ಇಂಗ್ಲಿಷ್ ಪಾಠವನ್ನು ಪ್ರೀತಿಯಿಂದ ನಿಧಾನವಾಗಿ ಅರ್ಥ ಮಾಡಿಸುತ್ತಾರೆ. ಬೇರೆ ಬೇರೆ ಪದ್ಯ ಹಾಡು ಗಳನ್ನು ಕಲಿಸುತ್ತಾ ನಮಗೆ ಮನರಂಜನೆಯ ಮುಖಾಂತರ ಪಾಠವನ್ನು ಕಲಿಸಿಕೊಡುತ್ತಾರೆ. ಬೇರೆಯವರ ವಸ್ತುಗಳನ್ನು ಹಾಳು ಮಾಡಬಾರದು. ದೊಡ್ಡವರು ಹೇಳಿದ ಮಾತನ್ನು ಕೇಳಬೇಕು, ಯಾರಿಗೂ ಉಪದ್ರ ಹಾಗೂ ನೋವು ಕೊಡಬಾರದು ಎಂದು ನಮಗೆ ಪ್ರತಿದಿನ ಬುದ್ಧಿವಾದ ಹೇಳುತ್ತಾರೆ. ನಮಗೆ ಎಲ್ಲಾ  ಪಾಠಗಳನ್ನು ಚಿತ್ರಗಳ ಮುಖಾಂತರ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಾರೆ. ಅಕ್ಷರಗಳ ಪರಿಚಯವಾಗುವುದೆ ನಮ್ಮ ಚಿಕ್ಕ ತರಗತಿಯ ಶಿಕ್ಷಕರಿಂದ. ಈ ಅಕ್ಷರಗಳನ್ನು ಯಾವತ್ತೂ ಮರೆಯದ ಹಾಗೆ ನಮಗೆ ತಿಳಿಸಿಕೊಟ್ಟಿದ್ದಾರೆ ನಮ್ಮ ಭಾರತೀ ಟೀಚರ್.

.................................................. ಸಂಜನಾ.
3ನೇ ತರಗತಿ
ದ.ಕ. ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ಮುನ್ನೂರುಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



      ನನ್ನ ನೆಚ್ಚಿನ ಶಿಕ್ಷಕಿ ಭಾರತೀ ಟೀಚರ್ ಅವರು ನನಗೆ ವಿದ್ಯೆ ಬುದ್ಧಿ ಕೊಟ್ಟು ಅಮ್ಮನ ತರಹ ಕಲಿಸುತ್ತಾ ಇದ್ದಾರೆ. ಪ್ರತಿದಿನ ನಮಗೆ ಆಟ ಹಾಗೂ ಚಿತ್ರಗಳ ಮುಖಾಂತರ ಗಣಿತ ಕನ್ನಡ ಇಂಗ್ಲಿಷ್ ಹಾಗು ಪರಿಸರ ಅಧ್ಯಯನವನ್ನು ತಿಳಿಸಿಕೊಡುತ್ತಾರೆ. ಹಾಡು ಹಾಗೂ ಕುಣಿತದ ಮುಖಾಂತರ ನಮಗೆ ಪಾಠವನ್ನು  ಹೇಳಿಕೊಡುತ್ತಿದ್ದಾರೆ. ಬೇರೆಯವರ ವಸ್ತುಗಳನ್ನು ಹಾಳು ಮಾಡಬಾರದು, ಇತರರ ಜೊತೆ ಜಗಳವಾಡಬಾರದು, ಹಿರಿಯರಿಗೆ ಗೌರವ ನೀಡಬೇಕು, ಯಾವುದೇ ಶಿಕ್ಷಕರು ತರಗತಿಗೆ ಬಂದಾಗ ಎದ್ದು ನಿಂತು ಗೌರವಿಸಬೇಕು, ಮನೆಯಲ್ಲಿ ನಮ್ಮ ಹೆತ್ತವರಿಗೆ ಸಹಾಯ ಮಾಡಬೇಕು, ದಿನನಿತ್ಯದ ಕೆಲಸಗಳನ್ನು ಪ್ರತಿದಿನ ತಪ್ಪದೆ ಮಾಡಬೇಕು, ಪ್ರತಿನಿತ್ಯ ಸ್ವಚ್ಛವಾಗಿರಬೇಕು ಎಂದು ಎಲ್ಲಾ ವಿಷಯಗಳನ್ನು ಪ್ರೀತಿಯಿಂದ ಹೇಳಿಕೊಡುತ್ತಿದ್ದಾರೆ.
ಎಲ್ಲರಿಗೂ  ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

......................................  ಮೇಘರಾಜ್
3ನೇ ತರಗತಿ
ದ.ಕ. ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ಮುನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

 

     ನಮ್ಮ ಶಾಲೆಯಲ್ಲಿ ಹತ್ತು ಶಿಕ್ಷಕರು ಇದ್ದಾರೆ. ಇವರೆಲ್ಲರೂ ನನಗೆ ತುಂಬಾ ಇಷ್ಟ ಅದರಲ್ಲೂ ನನಗೆ ನಮ್ಮ ಶಾಲೆಯ ದೈಹಿಕ ಶಿಕ್ಷಕಿಯಾದ ಶಶಿಕಲಾ ಟೀಚರ್ , ಜಯಂತಿ ಟೀಚರ್ , ಇಂಗ್ಲಿಷ್ ಟೀಚರ್ ಆದ ಶ್ವೇತ ಟೀಚರ್ ಹಾಗೂ ತರಗತಿ ಶಿಕ್ಷಕಿಯಾದ ರಾಧಾ ಟೀಚರ್ ಬಹಳ ಆತ್ಮೀಯವಾಗಿ ಇಷ್ಟ.  ನನಗೆ ಇಂಗ್ಲಿಷ್ ಓದಲು ಮತ್ತು ಬರೆಯಲು ಹಾಗೂ ಇಂಗ್ಲಿಷನ್ನು ಪ್ರೀತಿ ಮಾಡಲು ಕಲಿಸಿದ ಶಿಕ್ಷಕಿಯೇ ಶ್ವೇತಾ ಟೀಚರ್. ನನ್ನ ಅಕ್ಷರವನ್ನು ಸುಂದರ ಮಾಡಲು ಅವರು ಪ್ರತಿ ಸಲ ಪ್ರಯತ್ನ ಪಡುತ್ತಿದ್ದಾರೆ. ಇಂಗ್ಲಿಷಿನ ಜೊತೆಗೆ ಅವರು ಹಿಂದಿಯನ್ನು ಕೂಡ ತಿಳಿಸಿಕೊಡುತ್ತಾರೆ. ನಾನು ಚೆನ್ನಾಗಿ ಹಾಡುತ್ತೇನೆ ಎಂದು ಎಲ್ಲರಿಗೂ ಪರಿಚಯ ಮಾಡಿಕೊಟ್ಟವರೇ ಶ್ವೇತಾ ಟೀಚರ್. ಪ್ರತಿಭಾ ಕಾರಂಜಿಯಲ್ಲಿ ನನಗೆ ಚಿಕ್ಕಂದಿನಿಂದ ಸಲ್ಲದ ಅವಕಾಶವನ್ನು 7ನೇ ತರಗತಿಯಲ್ಲಿ ಕಲಿಯುವಾಗ ನನಗೆ ನಮ್ಮ ತರಗತಿಯ ಶಿಕ್ಷಕಿ ಶ್ವೇತಾ ಟೀಚರ್ ಮಾಡಿಕೊಟ್ಟರು. ಅದರಿಂದ ನಾನು ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದೆ. ಪ್ರತಿಸಲನೂ ಅವರು ತರಗತಿಯಲ್ಲಿ ಹೊಸ ಹೊಸ ಹಾಡನ್ನು ಕಲಿಸುತ್ತಿದ್ದರು. ಅದರಲ್ಲಿ ಇಂಗ್ಲಿಷ್ ಹಿಂದಿ ಕನ್ನಡದ ಹಾಡುಗಳ ಜೊತೆಗೆ ಶಾಲಾ ಕಾರ್ಯಕ್ರಮಕ್ಕೆ ಅನುಕೂಲವಾಗುವ ಪ್ರಾರ್ಥನಾ ಗೀತೆಗಳನ್ನು ಹಲವಾರು ಬಾರಿ ಕಲಿಸಿ ಕೊಟ್ಟಿದ್ದಾರೆ. ಇಂಗ್ಲಿಷ್ ಪಾಠವನ್ನು ಪ್ರತಿ ಸಲ ಅವರು ಆಟದ ಮುಖಾಂತರ ಕಲಿಸಿಕೊಟ್ಟ ಕಾರಣ ಹಾಗೂ ವಿವಿಧ ಚಟುವಟಿಕೆಯ ಮುಖಾಂತರ ನಾವು ಕಲಿತ ಕಾರಣ ಇಂದಿಗೂ ನಾನು ನೆನಪಿಡುವ ಹಾಗೆ ಆಗಿದೆ. ಕಂಪ್ಯೂಟರ್ ರೂಮಿನಲ್ಲಿ ನಮಗೆ ತರಗತಿಯಲ್ಲಿ ಪಾಠ ಮಾಡಿದ ನಂತರ ಆ ಪಾಠಕ್ಕೆ ಸಂಬಂಧಿಸಿದ ವಿಡಿಯೋವನ್ನು ತೋರಿಸುವ ಕಾರಣದಿಂದಾಗಿ ನಾವು ಎರಡೆರಡು ಸಲ ಪಾಠವನ್ನು ಅರ್ಥವಾಗುವ ಹಾಗೆ ಆಗುತ್ತಿತ್ತು. ನಮ್ಮ ಶಾಲೆಯ ಚಿಕ್ಕ ಮಕ್ಕಳು ಅವರನ್ನು ಕಂಪ್ಯೂಟರ್ ಟೀಚರ್ ಎಂದು ಕರೆಯುವಾಗ ನಮಗೆ ಪ್ರತಿ ಸಲ ನಗು ಬರುತ್ತದೆ. ತಪ್ಪು ಮಾಡಿದಾಗ ಹಿಟ್ಲರ್ಗಿಂತಲೂ ಜೋರು, ಉಳಿದ ಸಮಯದಲ್ಲಿ ಅಮ್ಮನಿಗಿಂತಲೂ ಮುದ್ದು , ಇದು ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಲಕ್ಷಣ. ಕೆಲವೊಮ್ಮೆ ನಾವು ಏನಾದರೂ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಾಗ ಪಾಠವನ್ನು ಕಲಿಯದೇ ಇದ್ದಾಗ ಅವರು ಬೊಬ್ಬೆ ಹಾಕುವ ರೀತಿಯಲ್ಲಿ ನಮಗೆ ಅವರ ಮೇಲೆ ತುಂಬಾ ಕೋಪ ಬರುತ್ತದೆ. ಆದರೆ ಅವರು ನಂತರ ನಮಗೆ ಹೇಳಿದ್ದು ಒಳ್ಳೆಯದಕ್ಕೆ ಅಂತ ಅರ್ಥವಾಗುವಾಗ ನಾವು ಅವರನ್ನು ತುಂಬಾ ಗೌರವಿಸುತ್ತೇವೆ. ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಮ್ಮ ಜೀವನದಲ್ಲಿ ನಮಗೆ ವಿದ್ಯೆ ಬುದ್ಧಿಯನ್ನು ಕೊಟ್ಟು, ನಮ್ಮನ್ನು ಒಳ್ಳೆಯ ದಾರಿಯಲ್ಲೇ ನಡೆಸುವ ಶಿಕ್ಷಕರಿಗೆ ಪ್ರೀತಿಯ ನಮನಗಳು. ದೇವರು ಅವರನ್ನು ಎಂದಿಗೂ ಚೆನ್ನಾಗಿಟ್ಟಿರಲಿ.      

.................................................. ಗಣೇಶ್
8ನೇ ತರಗತಿ
ದ.ಕ. ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ಮುನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



Ads on article

Advertise in articles 1

advertising articles 2

Advertise under the article