-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 22

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 22

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 22
ಲೇಖಕರು : ಪವಿತ್ರಾ, ಸಹಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಹಳ್ಳಿಂಗೇರಿ, ಕೊಕ್ಕಡ ಗ್ರಾಮ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                       
                
       ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ್ಕಳು ಶಾಲೆಗೆ ಬರುತ್ತಿದ್ದರೂ ನನ್ನ ಕಣ್ಣು ಹುಡುಕುತ್ತಿದೆ ಅವನನ್ನು.... ಅಷ್ಟೊಂದು ಉಲ್ಲಾಸದಿಂದ ಕಳೆದ ವರ್ಷ ನಲಿಕಲಿ ಪುಟಾಣಿಗಳಿಗೆ ವಿದ್ಯಾಪ್ರವೇಶ ಮಾಡಿದ್ದರೂ ಈ ವರ್ಷ 1ನೇ ತರಗತಿಗೆ ವಿದ್ಯಾಪ್ರವೇಶ ಮಾಡುವಾಗ ಏನನ್ನೋ ಕಳೆದುಕೊಂಡ ಭಾವ! ಅದೇಕೋ ಶಾಲೆಗೆ ಹೋದರೂ ಮನೆಗೆ ಬಂದರೂ ಅವನ ನೆನಪಾದಾಗಲೆಲ್ಲ ಶೂನ್ಯ ನೋಟ...! ಮರೆಯಬೇಕು ಎಂದರೂ ಮರೆಯಲಾಗದ ಸಂಕಟ. ನನ್ನನ್ನೇ ನಾ ಮರೆತು ಬಿಡುವಂತೆ ಮಾಡುತ್ತಿದೆ..... ಆ ಘಟನೆ.
        ಹೌದು ಮಿತ್ರರೇ, ನಾನು ಹೇಳುತ್ತಿರುವುದು ಕಟ್ಟುಕತೆಯಲ್ಲ. ಮನ ಕಲುಕಿದ ಒಂದು ದುಃಖದ ವಿಷಯ. ನಮ್ಮ ಶಾಲೆಯಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮಕ್ಕಳು ದಾಖಲಾಗಿ ಶಾಲೆಗೆ ಬರುವ ಸಂಭ್ರಮ... ಅದರಲ್ಲೂ ಒಂದನೇ ತರಗತಿಯ ಪುಟಾಣಿಗಳನ್ನು ಸ್ವಾಗತಿಸುವ ಶಿಕ್ಷಕರು. ಶಾಲೆಯಲ್ಲಿ ಮಕ್ಕಳ ದಾಖಲಾತಿ ಅರ್ಜಿ ಭರ್ತಿಗೊಳಿಸಿ, ಬೇಕಾದ ಮಾಹಿತಿಯನ್ನು ತಿಳಿಸಲು ಮುಖ್ಯ ಶಿಕ್ಷಕರು ನನಗೆ ಜವಾಬ್ದಾರಿ ನೀಡಿದ್ದರು. ಅಂತೆಯೇ ನಾನು ಮಕ್ಕಳ ದಾಖಲಾತಿ ಮಾಡಿಕೊಳ್ಳುತ್ತಾ ಅವರ ಪೋಷಕರ ಜೊತೆ ಸ್ವಲ್ಪ ಮನೆ ಪರಿಸರದ ಬಗ್ಗೆನೂ ವಿಚಾರಿಸಿಕೊಳ್ಳುತ್ತಿದ್ದೆ. ಏಕೆಂದರೆ ಮಗುವಿನ ಕಲಿಕೆಗೆ ಮನೆ ಪರಿಸರವೂ ಪೂರಕವಾಗಿದೆಯೋ ಅಥವಾ ನಾವೇನಾದರೂ ಪರಿಹಾರ ಕಂಡುಕೊಳ್ಳಬೇಕೋ ಏನೋ ಎಂದು ತಿಳಿಯುವ ಯೋಚನೆ... ಹಾಗೆಯೇ 1ನೇ ತರಗತಿಗೆ "ವಿಕಾಸ್"(ಹೆಸರು ಬದಲಿಸಲಾಗಿದೆ) ಎಂಬ ಮಗುವನ್ನು ದಾಖಲು ಮಾಡಲು ಅವನ ಅಪ್ಪ ಶಾಲೆಗೆ ಬಂದರು. ನನಗೆ ಅವರ ಪರಿಚಯ ಇರಲಿಲ್ಲ. ದಾಖಲು ಮಾಡಿಕೊಂಡ ನಂತರ ಅವರಲ್ಲೂ ಮನೆ ಪರಿಸರ ಬಗ್ಗೆ ವಿಚಾರಿಸಿದಾಗ ಅವರು ಕೂಲಿ ಕೆಲಸಕ್ಕೆ ಹೋಗಿ ಮನೆಯ ಹಾಗೂ ಮಗುವಿನ ಜವಾಬ್ದಾರಿ ನಿರ್ವಹಿಸುವ ಕುರಿತು ತಿಳಿಸಿದರು. ಅವರ ಹೆಂಡತಿ ಅಸೌಖ್ಯದಲ್ಲಿದ್ದು ನಡೆದಾಡುವುದು ಕಷ್ಟ, ಎಲ್ಲಾ ಕಡೆ ಮದ್ದು ಮಾಡಿ ಸಾಕಾಯ್ತು. ತುಂಬಾ ಕಷ್ಟ ಜೀವನ ಅಂತ ಬೇಸರ ವ್ಯಕ್ತ ಪಡಿಸಿದರು. ನಾನು ಕೆಲಸದಿಂದ ಬರುವಾಗ ಮಗುವೇ ಗಂಜಿ ಬೇಯಲು ಒಲೆಯಲ್ಲಿ ಇಡುತ್ತಾನೆ ಅಂದರು. ಒಬ್ಬರು ಕಷ್ಟದಲ್ಲಿದ್ದಾರೆ ಎಂದರೆ ಮರುಗುವ ನನ್ನ ಮನಸ್ಸಿಗೆ ಅದೇಕೋ ತುಂಬಾ ಬೇಸರವಾಯಿತು. ನಾನು ಒಂದು ಕಡೆ ವೈದ್ಯರ ಹತ್ರ ಮದ್ದು ಮಾಡಿ ಹೇಳಿ ವೈದ್ಯರ ನಂಬರ್ ಕೊಟ್ಟೆ. "ಮಗುವನ್ನು ಪ್ರತಿದಿನ ಕರೆದುಕೊಂಡು ಬರಲು ಕಷ್ಟ. ಆಟೋ ವ್ಯವಸ್ಥೆ ಇದ್ದರೆ ಒಳ್ಳೆಯದು,ಹಣ ಕೊಡುತ್ತೇನೆ" ಅಂದರು. ನಾನು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರ ಬಳಿ ಈ ವಿಷಯ ಹೇಳಿದೆ. ಅವರಿಬ್ಬರೂ ಆಟೋ ವ್ಯವಸ್ಥೆ ಮಾಡಿದರು. ಆ ಮುಗ್ಧ ಬಾಲಕ ನಲಿದಾಡುತ್ತ ಶಾಲೆಗೆ ಲವಲವಿಕೆಯಿಂದ ಬರಲು ಆರಂಭಿಸಿದ.
        ಎಲ್ಲ ಮಕ್ಕಳ ತರಹ ವರ್ತನೆ ಅವನದ್ದಾಗಿರಲಿಲ್ಲ. ಕುಳಿತಲ್ಲಿ ಕೂರದೆ ಅವನದೇ ಲೋಕದಲ್ಲಿ ವಿಹರಿಸುತ್ತಿದ್ದ... ಮನೆಯಲ್ಲಿ ಅಮ್ಮನ ಆರೈಕೆ ಸರಿ ಸಿಗದೇ ಇದ್ದಾಗ ಮಗುವಿನ ವರ್ತನೆ ಹೇಗೆ ಎಂಬುದು ನಮಗೆಲ್ಲರಿಗೂ ಗೊತ್ತಲ್ವೆ? ಅವನು ನಲಿಕಲಿ "ಎ" ವಿಭಾಗದಲ್ಲಿ ಇದ್ದು ನಾನು ಆ ತರಗತಿಯ ಕ್ಲಾಸ್ ಟೀಚರ್ ಆಗಿದ್ದೆ. ಕಳೆದ ವರ್ಷ 3ತಿಂಗಳು ನಲಿಕಲಿಗೆ ವಿದ್ಯಾ ಪ್ರವೇಶ ಸರ್ಕಾರದ ಆದೇಶ ಆಗಿತ್ತು. ಅದರನ್ವಯ ಚಟುವಟಿಕೆಮಿಳಿತ ಕಲಿಕೆಯಲ್ಲಿ ಮಕ್ಕಳು ತೊಡಗಿದ್ದರು. ಸಣ್ಣ ಮಕ್ಕಳೆಂದರೆ ನನ್ನ ಜೀವ. ಎಲ್ಲರನ್ನೂ ಮುದ್ದಿಸುತ್ತಿದ್ದೆ. ಆದರೂ ಅವನು ಎಂದರೆ ಅದೇಕೋ ವಿಶೇಷ ಕಾಳಜಿ. ನಾನು ಹಾಜರಿ ಕರೆಯುವಾಗ ಸರಿಯಾಗಿ ಉಚ್ಛಾರ ಬಾರದ ಅವನು "ಯಚ್ಚಿ ಟೀಚರ್" ಅಂತಿದ್ದ. ಅವನ ಉಚ್ಛಾರ ಸರಿಯಾಗಲಿ ಎಂದು ಹಾಗೆಯೇ ಮುದ್ದಿನಿಂದ ಐದಾರು ಬಾರಿ ಅವನ ಹೆಸರು ಕರೆಯುತ್ತಿದ್ದೆ. ಖುಷಿಯಿಂದ ಯಚ್ಚಿ ಟೀಚರ್ ಅಂತಿದ್ದ. ಹಾಗೆಯೇ ಅವನ ಪಾದಗಳ ಅಡಿಯಲ್ಲಿ ಆಗಾಗ ಅಲರ್ಜಿ ತರಹ ನೋವುಗಳು ಕಾಣಿಸಿಕೊಳ್ಳುವುದನ್ನು ಗಮನಿಸಿದೆ. ತುಂಬಾ ಬೇಸರವಾಯಿತು. ಅವನ ಅಪ್ಪನಿಗೆ ಫೋನ್ ಮಾಡಿದೆ. "ಅದು ಮಾಮೂಲು ಟೀಚರ್, ಮನೆಯಲ್ಲಿ ಕೆಸರಲ್ಲಿ ಆಡ್ತಾನೆ. ಕೆಸರು ಮುಟ್ಟಿದಾಗ ಜೋರಾಗುತ್ತೆ" ಅಂದ್ರು. ಆದ್ರೂ ನಾನು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹಠ ಮಾಡಿದೆ. ಕೆಲಸಕ್ಕೆ ಹೋದವರು ಶಾಲೆಗೆ ಬಂದರು. ಅವನ ನೋವು ಸರಿ ಕಮ್ಮಿಯಾದ ಮೇಲೆ ಶಾಲೆಗೆ ಬರಲಿ ಎಂದೆ. ನಮ್ಮ ಶಾಲೆಯ ಶಿಕ್ಷಕರೆಲ್ಲರಿಗೂ ಅವನ ಬಗ್ಗೆ ಹೇಳುತ್ತಿದ್ದೆ. ಅವರೆಲ್ಲರಿಗೂ ಅವನ ಮೇಲೆ ಅಪ್ಪಟ ಪ್ರೀತಿ, ಕಾಳಜಿ ಇತ್ತು. ಎಲ್ಲರೂ ಪ್ರತಿನಿತ್ಯ ಅವನನ್ನೊಮ್ಮೆ ಗಮನಿಸುತ್ತಿದ್ದರು. ತರಗತಿಯಲ್ಲಿ ಚೆನ್ನಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಆದರೆ ಅವನು ಹೇಳಿದ ಹಾಗೆ ನಾನು ಕೇಳಬೇಕಿತ್ತು! ಅವನು ಹೇಳಿದ ಆಟದ ಸಾಮಾನು ಕೊಡಬೇಕಿತ್ತು. ಪಾಪ ಮಗು, ಅಮ್ಮನಿಗೂ ಹುಷಾರಿಲ್ಲ, ಮನೆಯಲ್ಲಿ ಇವನೂ ಕೆಲಸ ಮಾಡುತ್ತಾನೆ ಅಂತೆ ಎಂದು ಮನದಲ್ಲಿ ಭಾವಿಸಿಕೊಂಡು ಶಾಲೆಯಲ್ಲಾದ್ರು ಸಂತಸದಲ್ಲಿರಲಿ ಎಂದು ಯೋಚಿಸುತ್ತಿದ್ದೆ. ಅವನ ಅಪ್ಪ ತುಂಬಾ ಚೆನ್ನಾಗಿ ಅವನನ್ನು ನೋಡಿಕೊಳ್ಳುತ್ತಿದ್ದರು. ಎರಡು ದಿನ ಅವನು ಶಾಲೆಗೆ ಬರಲಿಲ್ಲ. ನನಗೇಕೋ ತಳಮಳ. ಫೋನ್ ಮಾಡಿದೆ. ಅವನ ಅಮ್ಮ ಮಾತಾಡಿ ಜ್ವರ ಮೇಡಂ ಅಂದ್ರು. ನಿಮ್ಮ ಸುದ್ದಿ ಹೇಳುತ್ತಿರುತ್ತಾನೆ ಮಗು ಅಂದ್ರು. "ಅವನನ್ನು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಿ. ಹುಷಾರಾದಾಗ ಬರಲಿ" ಎಂದೆ. ಶಾಲೆಯಲ್ಲಿ ವಿದ್ಯಾಪ್ರವೇಶದ ಚಟುವಟಿಕೆಯಲ್ಲಿ ಅವನಿಗೆ ನನ್ನ ಸಮಯ, ಕ್ರಾಫ್ಟ್ ವರ್ಕ್, ಶುಭಾಶಯ ವಿನಿಮಯ ತುಂಬಾ ಇಷ್ಟ. ಅದ್ಭುತ ಪ್ರತಿಕ್ರಿಯೆ. ನಾನು ಕನ್ನಡ ಅಕ್ಷರ ಬರೆದುಕೊಟ್ಟರು ಸಹ A, A ಅಂತ ಬರಿತಿದ್ದ. ಅವನಿಗೆ ಇಂಗ್ಲೀಷ್ ತುಂಬಾ ಇಷ್ಟ. ಒಂದಿನ ಮಕ್ಕಳಿಗೆ ಪ್ರಾಣಿಗಳ ಕೂಗು ಎಂಬ ಚಟುವಟಿಕೆ ಶುಭಾಶಯ ವಿನಿಮಯದಲ್ಲಿ ಬಂದಿತ್ತು. ಮಕ್ಕಳಿಗೆ ಹೇಳಿಕೊಟ್ಟು ಪ್ರತಿಯೊಬ್ಬರಿಗೆ ಅವಕಾಶ ನೀಡಿದೆ.3ನೇ ತರಗತಿ ಮಕ್ಕಳನ್ನು ಮೀರಿಸಿ ಅದ್ಭುತವಾಗಿ ಕೆಲವೊಂದು ಪ್ರಾಣಿಗಳ ಕೂಗನ್ನು ಹೊರಡಿಸಿದ. ಎಲ್ಲ ಶಿಕ್ಷಕರನ್ನು ನೋಡಲು ಕರೆದೆ. ಎಲ್ಲರೂ ಖುಷಿಪಟ್ಟರು. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬಂತೆ ಈ ಮಗುವನ್ನು ಪ್ರತಿಭಾ ಕಾರಂಜಿಗೆ, ಸಹಪಠ್ಯ ಚಟುವಟಿಕೆಗಳಿಗೆ ಸಿದ್ಧಗೊಳಿಸಿ ಅದ್ಭುತ ಮಿಮಿಕ್ರಿಗಾರನಾಗಿ ಮಾಡಬೇಕು ಎಂದು ಹೇಳಿದೆ. ಹಾಗೆಯೇ ಅವನ ವಿದ್ಯಾಪ್ರವೇಶ ದ ದಾಖಲೆಯಲ್ಲಿ ಮಿಮಿಕ್ರಿ ಮಾಡುವ ಪ್ರತಿಭೆ ಇದೆ ಎಂದು ನಮೂದಿಸಿದೆ.
            ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆದಿದ್ದು, ಸಣ್ಣ ಮಕ್ಕಳಿಗೆ ರಜೆ ಕೊಡುವ ಬದಲು ಪೋಷಕರ ಜೊತೆ ಬರಬೇಕು ಎಂದು ಹೇಳಿದ್ದೆವು. ಅವನನ್ನು ಅವನ ಅಪ್ಪ ಕೆಲಸ ಇದೆಯೆಂದು ಕರೆದುಕೊಂಡು ಬಾರದಿದ್ರೆ ಎಂದು ಯೋಚಿಸಿ ಫೋನ್ ಮಾಡಿ, "ಮಗುವಿಗೆ ಆಟ ಎಂದರೆ ತುಂಬಾ ಇಷ್ಟ. ಅದಲ್ಲದೆ ಊಟಕ್ಕೂ ಗಮ್ಮತ್ತಿದೆ. ಅವನನ್ನು ಕರೆದುಕೊಂಡು ಬರಲೇಬೇಕು" ಎಂದು ಹೇಳಿದೆ. ಅಂತೆಯೇ ಅವನಪ್ಪ ಕರೆದುಕೊಂಡು ಬಂದರು. "ನೀವು ತುಂಬಾ ಚೆನ್ನಾಗಿ ಮಗನನ್ನು ನೋಡಿಕೊಳ್ಳುತ್ತೀರಿ ಮೇಡಂ. ಅವನಿಗೆ ನಿಮ್ಮದೇ ಸುದ್ದಿ ಮನೆಯಲ್ಲಿ.... ಖುಷಿಯಿಂದ ಶಾಲೆಗೆ ಬರ್ತಾನೆ" ಅಂದ್ರು. "ನೀವೇನು ಚಿಂತೆ ಮಾಡಬೇಡಿ. ಚೆನ್ನಾಗಿ ನೋಡಿಕೊಳ್ಳುತ್ತೇವೆ" ಅಂದೆ.
           ಒಂದಿನ ನಾನು ಮಧ್ಯಾಹ್ನ ನಮ್ಮ ಸಂಬಂಧಿಕರ ಮನೆ ಕಾರ್ಯಕ್ರಮ ಎಂದು ರಜೆ ಹಾಕಿ ಹೊರಟೆ. ಕಾರು ಹತ್ರ ನಾನು ಬರುವಾಗ ತರಗತಿಯಿಂದ ಹೊರಗೆ ಬಂದ ಅವನು ಸ್ವಂತ ತಾಯಿ ಮಗುವನ್ನು ಬಿಟ್ಟು ಹೋಗುವಾಗ ಕಣ್ಣೀರು ಹಾಕಿದಂತೆ, ಕಣ್ಣೀರು ಸುರಿಸಿದಾಗ ನಮ್ಮ ಶಾಲಾ ಶಿಕ್ಷಕಿ ಸೆವರಿನ್ ಮೇಡಂ.. ನನ್ನನ್ನು ಕರೆದು ಇವನು ಅಳುತ್ತಿದ್ದಾನೆ ಟೀಚರ್ ಅಂತ ಹೇಳಿಕೊಂಡು ಮುದ್ದು ಮಾಡಲಾರಂಭಿಸಿದರು. ನನಗೂ ಅಳು ಬಂತು. ನಾನೀಗ ಬೇಗ ಹೋಗಿ ಬರುತ್ತೇನೆ ಅಂತ ಅವನಿಗೆ ಸಮಾಧಾನ ಹೇಳಿ ಹೊರಟೆ. ಆ ಮಗು ಅಷ್ಟೊಂದು ನನ್ನನ್ನು ಹಚ್ಚಿಕೊಂಡಿದೆ ಎಂದು ತಿಳಿದು ಇನ್ನೂ ಬೇಸರವಾಯ್ತು. ಎಳೆಯ ಮಕ್ಕಳಿಗೂ ನಮ್ಮ ಪ್ರೀತಿ, ಕಾಳಜಿ ಅರ್ಥವಾಗುತ್ತದೆ...!
                ಇನ್ನೇನು ವಿದ್ಯಾಪ್ರವೇಶ ಎರಡು ಮೂರು ದಿನಗಳಲ್ಲಿ ಮುಗಿದು ಪಾಠ ಆರಂಭದ ದಿನಗಳು ಬರಲಿದ್ದು ನಾನು 1ನೇ ತರಗತಿಗೆ ಕನ್ನಡ ಅಕ್ಷರ ಕಲಿಸುವ ತವಕ, ಅವನಿಗೂ ಕನ್ನಡ ಅಕ್ಷರದ ಮೇಲೆ ಪ್ರೀತಿ ಬರುವ ಹಾಗೆ ಮಾಡಬೇಕು ಎಂದು ಕನಸು ಕಾಣುತ್ತಿದ್ದೆ. ಆ ದಿನ ಅವನು ಬಂದಿರಲಿಲ್ಲ. ನಾನು ಅವತ್ತು ತಲೆನೋವು ಎಂದು ಮಧ್ಯಾಹ್ನದ ನಂತರ ರಜೆ ಹಾಕಿ ಮನೆಗೆ ಬಂದೆ. ಮನೆಗೆ ಬಂದು ಸ್ವಲ್ಪ ಹೊತ್ತಿಗೆ ನಮ್ಮ ಶಾಲಾ ಶಿಕ್ಷಕಿ ಸವಿತಾ ಮೇಡಂ ನನಗೆ ಫೋನ್ ಮಾಡಿ ಟೀಚರ್, ಒಂದು ವಿಷಯ ನೀವು ಟೆನ್ಷನ್ ಮಾಡಬಾರದು ಎಂದರು. ಭಯವಾಯ್ತು... ಆದರೂ ಹೇಳಿ ಏನು ಅಂದೆ. ಅದೂ.. ಅದೂ "ವಿಕಾಸ್" ನ ಅಮ್ಮ ಬೆಳಿಗ್ಗೆ ತೀರಿಕೊಂಡರಂತೆ... ಮಾಧ್ಯಮದವರು, ಪಂಚಾಯತ್ ನವರೆಲ್ಲಾ ಸೇರಿದ್ದಾರಂತೆ ಅಂದ್ರು. ನನಗೆ ತುಂಬಾ ದುಃಖವಾಯಿತು. ಅವನು ಶಾಲೆಗೆ ಸೇರಿ 3ತಿಂಗಳು ಆಗುತ್ತಿದೆಯಷ್ಟೇ. ನಾನು ಅವರ ಮನೆಗೆ ಹೋಗಬೇಕು, ಅವನಮ್ಮನನ್ನು ನೋಡಿ ಮಾತಾಡಿಸಬೇಕು ಅಂತೆಲ್ಲ ಮನಸಲ್ಲಿ ಮೊದಲೇ ಯೋಚಿಸಿದ್ದೆ. ಆದರೆ ವಿಧಿಯಾಟ ಬಲ್ಲವರಾರು? ಆದರೂ ಮಗುವಿಗೆ ಅಮ್ಮ ಇಲ್ಲವಾದರೂ ಅಪ್ಪ ಇದ್ದಾರೆಲ್ವಾ, ಶಾಲೆಯಲ್ಲಿ ನಾವೂ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಮನದಲ್ಲಿ ದೃಢ ಸಂಕಲ್ಪ ತೊಟ್ಟೆ. ಆದರೆ... ಆದರೆ... ಸಂಜೆಯ ಹೊತ್ತಿಗೆ ಮುಖ್ಯಶಿಕ್ಷಕರು ಅವರ ಮನೆಗೆ ತೆರಳಿ ಪರಿಸ್ಥಿತಿ ನೋಡಿ ಅದೂ ವಿಕಾಸ್ ನನ್ನು ನೋಡಿ ತುಂಬಾ ಬೇಸರವಾಯಿತು. ಮಗುವಿಗೆ ಅಮ್ಮ ತೀರಿದ್ದು ಗೊತ್ತೇ ಆಗ್ತಿಲ್ಲ, ಮಣ್ಣಲ್ಲಿ ಆಡಿಕೊಂಡಿದ್ದ ಅಂದ್ರು. ನಾನು ಅಂತೂ ಹೋಗುವ ಯೋಚನೆ ಮಾಡಿದರೂ ನನಗೆ ದುಃಖ ಸಹಿಸಲಾಗದು ಎಂದು ಮನೆಯಲ್ಲೇ ಮಗುವಿಗಾಗಿ ಪ್ರಾರ್ಥಿಸಿದೆ. 
          ಕತ್ತಲೆಯಾಗುತ್ತಿದ್ದಂತೆ ತಿಳಿಯಿತು ಅವನ ಅಪ್ಪನಿಂದ ಮಗು ದೂರವಾಗಬೇಕಾದ ಪರಿಸ್ಥಿತಿ, ಅವನಿಗೆ ಸಂಬಂಧಿಕರು ಇಲ್ಲವಾದುದರಿಂದ ಅವನನ್ನು ಮಂಗಳೂರು ಆಶ್ರಮಕ್ಕೆ ಸೇರಿಸುವುದು ಎಂದು. ಇದನ್ನು ತಿಳಿದ ನಾನು ಬಿಕ್ಕಿಬಿಕ್ಕಿ ಅಳತೊಡಗಿದೆ. ಆಕಾಶವೇ ಕಳಚಿ ಬಿದ್ದಂತಾಯಿತು. ಊಟನೂ ಮಾಡಲಿಲ್ಲ. ನನ್ನನ್ನು ನೋಡಿ ನನ್ನ ಮಗಳೂ ಅಳಲಾರಂಭಿಸಿದಲು. ಮುಖ್ಯಶಿಕ್ಷಕರು ಹಾಗೂ ಉಳಿದ ಶಿಕ್ಷಕರೆಲ್ಲರೂ ಅಳುತ್ತಿದ್ದರೂ ನನ್ನನ್ನು ಅವರೆಲ್ಲ ಫೋನ್ ಮಾಡಿ ಸಮಾಧಾನ ಮಾಡುತ್ತಿದ್ದರು. ಏಕೆಂದರೆ ಅವರೆಲ್ಲರಿಗೂ ನಾನು ಆ ಮಗುವನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವ ಪರಿ ಗೊತ್ತಿತ್ತು. ಇಡೀ ರಾತ್ರಿ ಅವನಿನ್ನೂ ಶಾಲೆಗೆ ಬರುವುದಿಲ್ಲ ಎಂದು ತಿಳಿದು ಕೂಗಿದೆ. ಆ ದಿನದ ನನ್ನ ದುಃಖ ಹೇಳತೀರದು. ಆಶ್ರಮದಲ್ಲಿ ಹೇಗೆ ಹೊಂದಿಕೊಳ್ಳುತ್ತಾನೋ, ಅವನ ಪಾದಗಳ ಗಾಯವನ್ನು ಅಲ್ಲಿ ಗಮನಿಸಿ ಚೆನ್ನಾಗಿ ನೋಡಿಕೊಳ್ಳುತ್ತಾರೆಯೋ ಏನೆಲ್ಲಾ ಗೊಂದಲಗಳು... ಸ್ವಂತ ಮಗುವಿನಷ್ಟೆ ಬೇಸರಪಟ್ಟೆ. ಮರುದಿನ ಶಾಲೆಗೆ ಒಲ್ಲದ ಮನಸ್ಸಿನಿಂದ ಹೋದೆ. ಅವನಿಲ್ಲ!.... ಏನೋ ಕಳೆದುಕೊಂಡ ಭಾವ. ಶಿಕ್ಷಕರೆಲ್ಲರ ಕಣ್ಣಲ್ಲಿ ನೀರು... ನಾನಂತೂ ಕೂಗಿ ಕೂಗಿ ಬಸವಳಿದಿದ್ದೆ. "ಅವನು" ಇಲ್ಲದ ಆ ತರಗತಿ!..... ಮಕ್ಕಳಿಗೂ ಶಾಲೆಯಲ್ಲಿ ಬೇಸರ...
          ಯಾವ ಜನ್ಮದ ಪುಣ್ಯವೋ ಏನೋ... ಅವನ ಆಶ್ರಮದಲ್ಲಿರುವ ಒಬ್ಬರು ಸ್ಟಾಫ್ ನಮ್ಮ ಶಾಲೆಯ ಅತಿಥಿ ಶಿಕ್ಷಕಿ ನವ್ಯ ಮೇಡಂ ರವರ ಹಳೆವಿದ್ಯಾರ್ಥಿ ಎಂದು ತಿಳಿಯಿತು. ಟೀಚರ್ ಅವರಲ್ಲಿ ಇವನನ್ನು ಚೆನ್ನಾಗಿ ನೋಡಿಕೊಳ್ಳಲು ವಿನಂತಿ ಮಾಡಿಕೊಂಡರು. ನಾನು ಕೂಡಾ ಅವರಿಗೆ ಫೋನ್ ಮಾಡಿ ಅವನ ಎಲ್ಲ ವಿಷಯ ಹೇಳಿ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಪುಣ್ಯ ಸಿಗಬಹುದು ಎಂದು ಬೇಡಿಕೊಂಡೆ. ಅವನಿಗೆ ವೀಡಿಯೋ ಕಾಲ್ ಮಾಡಿದಾಗ ನನ್ನನ್ನು ನೋಡಿ ಜೋರು ಅಳಲಾರಂಭಿಸಿದ. ನಾನು ಬರ್ತೀನಿ... ಏನು ಬೇಕು ಕೇಳಿದೆ. ಚಾಕ್ಲೇಟ್ ಬೇಕು ಅಂದ. ನಾನು ಬರುವಾಗ ಚಾಕಲೇಟು ತರ್ತೀನಿ ಅಂದೆ. ಅವನಿಗೆ 3ಜೊತೆ ಡ್ರೆಸ್ ತೆಗೆದು ಅಲ್ಲಿಗೆ ಕೊಟ್ಟು ಕಳುಹಿಸಿದೆ. ನೆನಪಾದಾಗ ಫೋನ್ ಮಾಡಿ ಮಾತಾಡುತ್ತಿದ್ದೆ. ಆದರೆ ಅವನಿಗೆ ಬೇಸರವಾಗುತ್ತಿತ್ತು.
         ಈ ವರ್ಷ ಶಾಲೆ ಆರಂಭವಾದಾಗ ಅಯ್ಯೋ... ಅವನದೇ ನೆನಪಲ್ಲಿ ಮನಸ್ಸು ಭಾರ.... ಅಲ್ಲಿಯ ಸ್ಟಾಫ್ ಗೆ ಫೋನ್ ಮಾಡಿ ವೀಡಿಯೋ ಕಾಲ್ ನಲ್ಲಿ ಅವನನ್ನು ತೋರಿಸಿ ಎಂದೆ. ಅವನು ನನ್ನನ್ನು ನೋಡಿ ಏನು ಮಾತಾಡದೆ ಕಣ್ಣೀರು ಸುರಿಸಲಾರಂಭಿಸಿದಾಗ ನನಗೂ ದುಃಖ. ಅವನು ನನ್ನನ್ನು ಮರೆತಿಲ್ಲ. ಹೆತ್ತಮ್ಮನನ್ನು ಎಳವೆಯಲ್ಲಿಯೇ ಕಳೆದುಕೊಂಡು ಅಪ್ಪನಿಂದ ದೂರ ಇದ್ದು ಅನಾಥವಾಗಿದೆ ಈ ಮಗು!... ಆದರೆ ಆ ಮಗು ಸಂತಸದಲ್ಲಿ ಇರಲಿ ಎಂದು ನಗುತ್ತಾ ಮಾತಾಡಿಸಲು ಆರಂಭಿಸಿದೆ. ಅಲ್ಲಿ ಖುಷಿ ಆಗುತ್ತಿದೆಯಾ ಕೇಳಿದೆ. ಹೂಂ ಅಂದ. ನಮ್ಮ ಶಾಲೆಗೆ ಬರ್ತೀಯ ಅಥವಾ ಅಲ್ಲೇ ಶಾಲೆಗೆ ಹೋಗ್ತೀಯ ಅಂದೆ. ನಿಮ್ಮ ಶಾಲೆಗೆ ಬರುತ್ತೇನೆ ಅಂದ. ದುಃಖ ಉಮ್ಮಳಿಸಿ ಬಂತು. ನೀವು ಬನ್ನಿ ಅಂದ. ಏನು ತರಬೇಕು ಕೇಳಿದೆ. ಚಾಕೋಲೇಟ್ ಅಂದ! ಯಾರೆಲ್ಲ ಬರಬೇಕು ಅಂದೆ. ನೀವು, ನಿಮ್ಮ ಮಗಳು, ನಿಮ್ಮ ಮಗು ಅಂದ. ಓಕೆ ಪುಟ್ಟ, ಬರ್ತೀವಿ ಅಂದೆ. ತುಂಬಾ ಬೇಸರ..... ಪ್ರತಿದಿನವೂ.....!!
         ಎಲ್ಲೇ ಇರಲಿ..ಮುಗ್ಧ ಕಂದನಾದ
ಅವನನ್ನು ದೇವರು ಕಾಪಾಡಲಿ.... ಅವನ ಭವಿಷ್ಯ ಉಜ್ವಲವಾಗಲಿ ಎಂದೇ ಬೇಡುತ್ತೇನೆ.
     ಸ್ನೇಹಿತರೇ, ಅವನು 7ನೇ ತರಗತಿ ಆಗುವುದರ ಒಳಗೆ ಅವನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಕೀರ್ತಿಶಾಲಿಯನ್ನಾಗಿ ಮಾಡಬೇಕು ಅಂದುಕೊಂಡಿದ್ದೆ. ನನ್ನ ಕನಸೆಲ್ಲ ನುಚ್ಚುನೂರಾಯಿತು. ಅಂದುಕೊಂಡಂತೆ ಜೀವನ ಸಾಗದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ. ಅವನನ್ನು ಶಾಲೆಯಲ್ಲಿ ಬಿಟ್ಟು ಇರಲು ಅಸಾಧ್ಯವಾದರೂ ಅನಿವಾರ್ಯತೆ..... ಆದರೇನು ಮಾಡುವುದು? ನಮ್ಮಿಂದಾದ ಸಹಾಯ, ಮಾರ್ಗದರ್ಶನ ನೀಡುತ್ತಾ ಆ ಮಗುವಿನ ಭವಿಷ್ಯ ಉಜ್ವಲವಾಗಲು ಸಹಕರಿಸುವುದು ಎಂದು ಮನದಲ್ಲೇ ಸಮಾಧಾನ ಪಡುವುದು. 
      ಜೀವನವೆಂಬ ಪಯಣ ಹೀಗೆಯೇ...... ಬಂದಂತೆ ಸ್ವೀಕರಿಸಲೇಬೇಕು...!
......................... ........ ಪವಿತ್ರಾ, ಸಹಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಹಳ್ಳಿಂಗೇರಿ, ಕೊಕ್ಕಡ ಗ್ರಾಮ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99724 13072
*******************************************



Ads on article

Advertise in articles 1

advertising articles 2

Advertise under the article