ಎರಡು ಗುಬ್ಬಿ ಹಕ್ಕಿಗಳು - ಕಥೆ ರಚನೆ : ಜನನಿ ಪಿ, 7ನೇ ತರಗತಿ
Wednesday, July 5, 2023
Edit
ಕಥೆ ರಚನೆ : ಜನನಿ ಪಿ
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ
ಕೊಯಿಲ, ಕೆ.ಸಿ.ಫಾರ್ಮ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಒಂದು ಹಳ್ಳಿಯಲ್ಲಿ ಒಂದು ಮನೆಯಿತ್ತು. ಆ ಮನೆಯ ಮುಂದೆ ಒಂದು ಮರವಿತ್ತು. ಮರದಲ್ಲಿ ಎರಡು ಗುಬ್ಬಿ ಹಕ್ಕಿಗಳು ಗೂಡು ಕಟ್ಟಿದ್ದವು. ಆ ಎರಡು ಹಕ್ಕಿಗಳು ಮರದ ಮುಂದೆ ಇರುವ ಮನೆಯ ಕೋಣೆಯ ಕಿಟಕಿಯ ಗಾಜನ್ನು ತನ್ನ ಕೊಕ್ಕಿನಿಂದ ಟಕ್ ಟಕ್ ಎಂದು ಶಬ್ದಮಾಡಿ ಮನೆಮಂದಿಯನ್ನು ಬೆಳಗ್ಗೆ ಬೇಗ ಎಬ್ಬಿಸಿ ಅದು ಆಹಾರ ಹುಡುಕಲು ಹೊರಗಡೆ ಹೋಗುತ್ತಿತ್ತು. ಆ ಮನೆಯ ಜನರು ಹಕ್ಕಿಯ ಧ್ವನಿಗೆ ಬೇಗ ಎದ್ದು ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗತ್ತಿದ್ದರು. ಗಾಜಿನಲ್ಲಿ ತನ್ನ ಪ್ರತಿಬಿಂಬ ಕಂಡು ತನ್ನಂತೆಯೇ ಬೇರೊಂದು ಹಕ್ಕಿ ಇರಬಹುದೆಂದು ಗ್ರಹಿಸಿ ಗಾಜಿಗೆ ಹೊಡೆಯುತ್ತಿದ್ದವು. ಹೀಗೆಯೇ ಪ್ರತಿದಿನವು ನಡೆಯುತ್ತಿತ್ತು.
ಒಂದು ದಿನ ಎರಡು ಹಕ್ಕಿಗಳು ಗಾಜಿಗೆ ಕೊಕ್ಕಿನಿಂದ ಹೊಡೆಯುತ್ತಿರುವಾಗ ಅದರಲ್ಲಿ ಒಂದು ಹಕ್ಕಿ ಕಿಟಕಿಯ ಗಾಜಿಗೆ ಕಾಲು ಜಾರಿ ದೊಪ್ಪನೆ ನೆಲಕ್ಕೆ ಬಿತ್ತು. ಆ ಮನೆಯ ಮಕ್ಕಳು ಹಕ್ಕಿಯನ್ನು ಪಾಪ ಎಂದು ಕೈಯಲ್ಲಿ ಹಿಡಿಯಲು ಹೋದಾಗ ಅದು ಹೆದರಿ ಹಾರಿ ಹೋಯಿತು. ಆ ಎರಡು ಹಕ್ಕಿಗಳು ತುಂಬಾ ಸ್ನೇಹದಿಂದ ಗೆಳೆಯರಾಗಿದ್ದರು. ಒಂದನ್ನೊಂದು ಅರ್ಥ ಮಾಡಿಕೊಂಡು ಸಂತೋಷವಾಗಿ ಬಾಳುತ್ತಿದ್ದವು.
ದಿನಾಲು ಆ ಮನೆಯವರು ಎರಡು ಹಕ್ಕಿಗಳಿಗೆ ಕಾಳುಗಳನ್ನು ಹಾಕುತ್ತಿದ್ದರು. ಅದನ್ನು ಎರಡು ಹಕ್ಕಿಗಳು ತುಂಬಾ ಸಂತೋಷದಿಂದ ತಿನ್ನುತ್ತಿದ್ದವು. ಹಾಗೆಯೇ ಒಂದು ದಿನ ಒಂದು ಹಕ್ಕಿಗೆ ಕೆಟ್ಟ ಯೋಚನೆ ಬಂತು. ಯಾವಾಗಲೂ ನಾವು ಎರಡು ಜನ ಹಂಚಿ ತಿಂದರೆ ನನಗೆ ಆಹಾರ ಕಡಿಮೆಯಾಗುತ್ತದೆ. ಆದ್ದರಿಂದ ಈ ಹಕ್ಕಿಯನ್ನು ಹೇಗಾದರೂ ಮಾಡಿ ಸಾಯಿಸಬೇಕು. ಇದನ್ನು ಸಾಯಿಸಿದರೆ ಎಲ್ಲಾ ಆಹಾರವು ನನಗೆ ಸಿಗುತ್ತದೆ ಎಂದು ಯೋಚಿಸಿತು. ಎಂದಿನಂತೆ ಎರಡು ಹಕ್ಕಿಗಳು ಗೂಡಿನಲ್ಲಿ ಇದ್ದಾಗ ಆ ಹಕ್ಕಿ ಮತ್ತೊಂದು ಹಕ್ಕಿಯನ್ನು ಗೂಡಿನಿಂದ ಕೆಳಕ್ಕೆ ಬೀಳಿಸುತ್ತದೆ. ಆ ಹಕ್ಕಿಯು ಹುಲ್ಲಿನ ಮೇಲೆ ಬಿದ್ದುದರಿಂದ ಅದಕ್ಕೆ ಗಾಯಗಳಾಗದೆ ಬದುಕಿ ಉಳಿಯುತ್ತದೆ. ಬಿದ್ದ ಹಕ್ಕಿಯು ಸತ್ತಂತೆ ನಟನೆ ಮಾಡುತ್ತದೆ. ಮತ್ತೊಂದು ಹಕ್ಕಿ ಇದು ಸತ್ತಿದೆ ಎಂದು ತಿಳಿಯುತ್ತದೆ. ಬಿದ್ದ ಹಕ್ಕಿಯು ಇದರ ಸಹವಾಸ ಬೇಡವೆಂದು ದೂರದಲ್ಲಿದ್ದ ಮರದಲ್ಲಿ ಗೂಡುಕಟ್ಟಿ ವಾಸಮಾಡಿತು.
ಒಂದು ದಿನ ಹದ್ದು ಒಂದೇ ಹಕ್ಕಿ ಇರುವುದನ್ನು ಕಂಡು ಆ ಹಕ್ಕಿಯನ್ನು ಕೊಲ್ಲಲು ಹೊಂಚು ಹಾಕಿತು. ಆಗ ಹಕ್ಕಿ ಹೆದರಿ ಕಾಪಾಡಿ ಕಾಪಾಡಿ ಎಂದು ಕಿರುಚುತ್ತಾ ಗೆಳೆಯನ ಬಳಿಗೆ ಓಡಿತು. ಸತ್ತಂತೆ ನಟನೆ ಮಾಡಿದ ಹಕ್ಕಿ ಗೆಳೆಯನ ಕೂಗು ಕೇಳಿ ಸಹಾಯ ಮಾಡಲು ಹೊರಟಿತು. ಈ ಎರಡು ಹಕ್ಕಿಗಳು ಸೇರಿ ಹದ್ದಿನ ಜೊತೆ ಹೋರಾಟ ಮಾಡಿದವು. ಇವರಿಬ್ಬರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹದ್ದು ಅಲ್ಲಿಂದ ಹಾರಿ ಹೋಯಿತು. ನಂತರ ಆ ಹಕ್ಕಿ ತಾನು ಮಾಡಿದ ತಪ್ಪಿಗೆ ಕ್ಷಮೆ ಬೇಡಿತು. ನನ್ನನ್ನು ಕ್ಷಮಿಸು ಗೆಳೆಯ ಎಂದಿತು. ನಾವು ಇಬ್ಬರು ಒಗ್ಗಟ್ಟಾಗಿದ್ದರೆ ಯಾವ ಕಷ್ಟವನ್ನೂ ಎದುರಿಸಬಹುದು. ಯಾರನ್ನು ಬೇಕಾದರೂ ಸೋಲಿಸಬಹುದು. ಆದ್ದರಿಂದ ನಾವಿಬ್ಬರೂ ಗೆಳೆಯರಾಗಿರೋಣ ಎಂದಿತು.
7ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆ
ಕೊಯಿಲ, ಕೆ.ಸಿ.ಫಾರ್ಮ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************