-->
ಜಗಲಿ ಕಟ್ಟೆ : ಸಂಚಿಕೆ - 1

ಜಗಲಿ ಕಟ್ಟೆ : ಸಂಚಿಕೆ - 1

ಜಗಲಿ ಕಟ್ಟೆ : ಸಂಚಿಕೆ - 1
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ, ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ... ಅಂಕಣವನ್ನು ಆರಂಭಿಸುತ್ತಿದ್ದೇವೆ. ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ಈ ವಾರದ ಮೊದಲ ಸಂಚಿಕೆಯಲ್ಲಿ ಮಕ್ಕಳ ಜಗಲಿಯ ಒಟ್ಟು ನನ್ನ ಅನುಭವಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ... ತಾರಾನಾಥ್ ಕೈರಂಗಳ

     ಕೊರೋನಾ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ.
     ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು-ಪೇರು ಗಳಾಗಿ ಡಿಜಿಟಲ್ ಪದ್ಧತಿಯ ಸಾಧಕ-ಬಾಧಕಗಳ ನಡುವೆಯೇ ಪಾಠ ಬೋಧನೆ ಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ. 
     ನಾನು ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು ಆರಂಭಿಸುವ ಎಲ್ಲಾ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲೇ ಸಾಗಿತು.
          ಮಕ್ಕಳ ಜಗಲಿ ಇದು ಮಕ್ಕಳಿಗಾಗಿ ಮೀಸಲಾದ ಇ - ಪತ್ರಿಕೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ವೈವಿಧ್ಯ ಪ್ರಾಕಾರಗಳಲ್ಲಿ ಪ್ರಕಟಪಡಿಸಲು ಇರುವಂತಹ ವೇದಿಕೆ. ಮಕ್ಕಳ ಸ್ವರಚಿತ ಕಥೆ, ಕವನ, ಲೇಖನ, ಆರ್ಟ್ ಮತ್ತು ಕ್ರಾಫ್ಟ್ ಹೀಗೆ ಹಲವಾರು ಮಕ್ಕಳ ಸೃಜನಾತ್ಮಕ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಬಲ್ಲುದು.
     ಹಳೆ ಶೈಲಿ ಮನೆಗಳಲ್ಲಿ ಹೆಚ್ಚಾಗಿ ಮನೆ ಮುಂದೆ ಜಗಲಿ ಇರುತ್ತಿತ್ತು. ಮನೆ ಮಕ್ಕಳೆಲ್ಲಾ ಜಗಲಿ ಮೇಲೆ ಕುಳಿತು ಬರೆಯುವುದು, ಓದುವುದು, ಹಾಡುವುದು, ರಂಗೋಲಿ ಬಿಡಿಸುವುದು, ಕಲ್ಲಾಟವಾಡುವುದು ಹೀಗೆ ಹಲವು ಚಟುವಟಿಕೆಗಳಿಗೆ ಅದುವೇ ವೇದಿಕೆ. ನನ್ನಂತಹ ಅನೇಕರಿಗೆ ಜೀವನದ ಹಲವು ಮೈಲುಗಲ್ಲುಗಳನ್ನು ಯಶಸ್ವಿಯಾಗಿ ದಾಟಲು ಮನೆ-ಜಗಲಿ ಪ್ರೇರಣೆಯಾಗಿದೆ.. ಜಗಲಿ ಮಾಯವಾಗಬಾರದು ಅದನ್ನು ಮತ್ತೆ ಕಟ್ಟಬೇಕೆಂದು ನನ್ನ ಕನಸು.
    ನನ್ನ ಮಂಚಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ವಿಟ್ಲ , ವಿಜ್ಞಾನ ಶಿಕ್ಷಕರಾದ ಶ್ರೀ ವಿ.ರಾಮ ಮೂರ್ತಿ, ಸಹೋದ್ಯೋಗಿ ಬಂಧುಗಳು, ಶಾಲಾ ಎಸ್ಡಿಎಂಸಿ, ಶಾಲಾ ಮಕ್ಕಳು, ಚಿತ್ರಕಲಾ ಶಿಕ್ಷಕ ಸಮುದಾಯ, ಸಮಾನ ಮನಸ್ಕರು ಮತ್ತು ನನ್ನ ಮನೆಯವರು ಜಗಲಿಯ ಕನಸಿಗೆ ಸಾಕ್ಷಿಗಳು, ಜನ ಶಿಕ್ಷಣ ಟ್ರಸ್ಟಿನ ಶೀನ ಶೆಟ್ಟಿ ಹಾಗೂ ಕೃಷ್ಣಮೂಲ್ಯ, ನನ್ನ ಸೃಜನಶೀಲ ಚಿಂತನೆಗಳಿಗೆ ರೂಪ ಕೊಟ್ಟಂತಹ ಕಲಾವಿದ , ಶಿಕ್ಷಣ ಚಿಂತಕ ಗೋಪಾಡ್ಕರ್, ನನಗೆ ಯಾವತ್ತೂ ಸ್ಫೂರ್ತಿಯಾಗಿರುವ ರಂಗ ನಿರ್ದೇಶಕ ಜೀವನ ರಾಮ್ ಸುಳ್ಯ ಮತ್ತು ಪ್ರೇರಣೆಯನ್ನು ನೀಡುತ್ತಾ ಬಂದಿರುವ ಕಲಾವಿದ, ಸಾಹಿತಿ, ಪರಿಸರ ಪ್ರೇಮಿ ದಿನೇಶ್ ಹೊಳ್ಳ , ತಾಂತ್ರಿಕ ಸಹಕಾರ ನೀಡಿದ ಪತ್ರಕರ್ತ ಮಿತ್ರರಾದ ವಿನೋದ್ ಪುದು , ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ದಯಾನಂದ ನಾಯಕ್, ಶ್ರೀ ಮಲ್ಲೇಸ್ವಾಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಎಂ.ಪಿ, ನನ್ನ ಮಾರ್ಗದರ್ಶಕರಾದ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಶ್ರೀ ವೈ ಶಿವರಾಮಯ್ಯ. ಉಪನ್ಯಾಸಕರಾಗಿರುವ ಡಾ. ಶಿವಪ್ರಕಾಶ್. ಎನ್ ಇವರೆಲ್ಲಾ ನನ್ನ ಕನಸಿನ ಜಗಲಿಯ ಪಾಲುದಾರರು.
        ಮಕ್ಕಳ ಜಗಲಿಯನ್ನು ಎಲ್ಲರ ಮನ ಮನೆಗಳಿಗೂ ತಲುಪಿಸಬೇಕೆಂದು ನಮ್ಮ ಗುರಿಯಾಗಿತ್ತು. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯನ್ನು ನಿರ್ಮಿಸಿ ಪ್ರಸಾರಮಾಡುವ ಆಲೋಚನೆಯನ್ನು ಅರವಿಂದ ಕುಡ್ಲ ಇವರು ನೀಡಿದರು. ಸಾಹಿತಿ ಚಂದ್ರಶೇಖರ್ ಪಾತೂರು ಬರೆದ ಸಾಹಿತ್ಯಕ್ಕೆ ಮಂಗಳೂರಿನ ಕೊಣಾಜೆ ವಿಶ್ವಮಂಗಳ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಶ್ರೀ ರಕ್ಷಾ ಎಸ್ ಹೆಚ್ ಪೂಜಾರಿ ಅದ್ಭುತವಾಗಿ ಹಾಡಿದರು. ಪುತ್ತೂರಿನ ಮಕ್ಕಳ ಮಂಟಪದ ಅನೇಕ ಪುಟಾಣಿಗಳು ಕಲಾವಿದ ಕೃಷ್ಣಪ್ಪ ಬಂಬಿಲ ಇವರ ಸಹಕಾರದಲ್ಲಿ ಹಾಡಿನಲಿದರು. ಮಕ್ಕಳ ಜಗಲಿಯ ಹಾಡು ಎಲ್ಲರನ್ನು ತಲುಪುವ ಮೂಲಕ ಜಗಲಿಗೆ ಬರೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿತು.
       ಮಕ್ಕಳ ಜಗಲಿ ಅದು ನಿಮ್ಮ ಮನೆಯ ಮಕ್ಕಳ ಜಗಲಿ. ಇಲ್ಲಿ ಸಣ್ಣ ಮಕ್ಕಳಿಂದ ಪಿಯುಸಿ ವರೆಗೆ ಕಲಿಯುತ್ತಿರುವ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಮನೆಯ ಎಲ್ಲಾ ಮಕ್ಕಳೂ ಶ್ರೇಷ್ಠರೆ. ಅವರಿಗೆ ಅವಕಾಶ ಕೊಡಬೇಕಾದದ್ದು ಹಿರಿಯರಾದ ನಮ್ಮ ಕರ್ತವ್ಯ. ಆ ಮೂಲಕ ಪ್ರತಿಯೊಂದು ಮನೆಯ ಮಕ್ಕಳನ್ನು ಜಗಲಿಯಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡಿ ಎಂಬುವುದು ನಮ್ಮ ಬೇಡಿಕೆ.    
        2020 ನೇ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯಂದು ಉದ್ಘಾಟನೆಗೊಂಡು ಮಕ್ಕಳ ಪ್ರತಿಭಾ ವೇದಿಕೆಯಾಗಿ ಗುರುತಿಸಿಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ವೇದಿಕೆ ವಿಸ್ತಾರಗೊಂಡು ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಹೊರರಾಷ್ಟ್ರದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳೂ ಮಕ್ಕಳ ಜಗಲಿಯಲ್ಲಿ ಬೆರೆಯುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪ್ರತಿಭಾನ್ವಿತ ಮಕ್ಕಳು ಬೆಳೆಯಬೇಕೆಂದು ನಮ್ಮ ಉದ್ದೇಶ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಸದಾ ಸಿದ್ಧವಾಗಿದೆ. 
     ಮಕ್ಕಳ ಜಗಲಿಯ ಬಳಗವೇ ವಿಶಿಷ್ಟವಾಗಿದೆ. ಇಲ್ಲಿರುವ ಅನೇಕ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಬಗೆಗೆ ಸದಾ ಹೊಸತನದ ಹುಡುಕಾಟದಲ್ಲಿದ್ದಾರೆ. ಜೀವನ ಸಂಭ್ರಮ ಬರೆಯುತ್ತಿರುವ - ಶಿಕ್ಷಣಾಧಿಕಾರಿ ಎಂ ಪಿ ಜ್ಞಾನೇಶ್, ಸ್ಪೂರ್ತಿಯ ಮಾತುಗಳು - ರಮೇಶ ಎಂ ಬಾಯಾರು, ಹಕ್ಕಿಯ ಕಥೆ - ಅರವಿಂದ ಕುಡ್ಲ, ಬದಲಾಗೋಣವೇ ಪ್ಲೀಸ್ - ಗೋಪಾಲಕೃಷ್ಣ ನೇರಳಕಟ್ಟೆ, ಓ ಮುದ್ದು ಮನಸೇ - ಡಾ. ಗುರುರಾಜ ಇಟಗಿ , ಸಂಚಾರಿಯ ಡೈರಿ - ಸುಭಾಷ್ ಮಂಚಿ, ಪ್ರೀತಿಯ ಪುಸ್ತಕ - ವಾಣಿ ಪೆರಿಯೋಡಿ, ಪದದಂಗಳ - ರಮೇಶ ನಾಯ್ಕ ಉಪ್ಪುಂದ , ಅಕ್ಕನ ಪತ್ರ - ತೇಜಸ್ವಿ ಅಂಬೆಕಲ್ಲು ಇದರ ಜೊತೆಗೆ ಆರ್ಟ್ ಗ್ಯಾಲರಿ ಅಂಕಣಗಳು , ಶಿಕ್ಷಕರ ಡೈರಿ ಮತ್ತು ಇನ್ನಿತರ ಅಂಕಣಗಳ ಮೂಲಕ ಎಲ್ಲರೂ ಬೆರೆಯುವಂಥ ಅವಕಾಶಗಳನ್ನು ಮುಕ್ತಗೊಳಿಸಲಾಗಿದೆ. ತುಳಸಿ ಕೈರಂಗಳ, ಕೃಷ್ಣಮೋಹನ ತಲೆಂಗಳ, ಹೇಮಚಂದ್ರ ಕೈರಂಗಳ, ನಾದಾ ಮಣಿನಾಲ್ಕೂರು, ವಿದ್ಯಾ ಕಾರ್ಕಳ, ವಿಜಯಾ ಶೆಟ್ಟಿ ಸಾಲೆತ್ತೂರು, ಹರಿಣಾಕ್ಷಿ ಕಕ್ಯಪದವು, ಜೆಸ್ಸಿ ಪಿ. ವಿ, ಪ್ರೇಮನಾಥ ಮರ್ಣೆ, ರೆಹ್ಮಾನ್ ಖಾನ್ ಕುಂಜತ್ತ ಬೈಲು, ವಿಮಲ್ ನೆಲ್ಯಾಡಿ , ರಾಜೇಶ್ ನೆಲ್ಯಾಡಿ ಮತ್ತು ತೆರೆಮರೆಯಲ್ಲಿರುವ ಇನ್ನೂ ಅನೇಕರ ಸಲಹೆ ಸಹಕಾರಗಳೊಂದಿಗೆ ಸಾಗುತ್ತಿದ್ದೇವೆ....
      ಮಕ್ಕಳ ಜಗಲಿ ಬಳಗದ ಮೂಲಕ ಮಕ್ಕಳ ವೈವಿಧ್ಯ ಚಟುವಟಿಕೆಗಳನ್ನು ಆಯೋಜನೆ ಗೊಳಿಸುತ್ತಾ ಗುಣಮಟ್ಟದ ಜೊತೆಜೊತೆಗೆ ಮಕ್ಕಳ ಬರವಣಿಗೆ ಮತ್ತು ಕಲಾ ಕೌಶಲ್ಯಕ್ಕೆ ಒತ್ತು ನೀಡುತ್ತಿದ್ದೇವೆ. ಶೈಕ್ಷಣಿಕವಾಗಿ ದಾಖಲಾತಿ ಗೊಳ್ಳುವ ಪ್ರತಿ ಮಗುವೂ ಕೂಡ ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸಾಮರ್ಥ್ಯ ಆಧಾರಿತ ವಿದ್ಯಾರ್ಥಿಯಾಗಿ ಸಮಾಜಕ್ಕೆ ಗುರುತಿಸಿಕೊಳ್ಳಬೇಕೆನ್ನುವುದು ನಮ್ಮ ಗುರಿ.        
      ನೀವೂ ನಮ್ಮ ಜೊತೆಯಾಗಿ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
********************************************

Ads on article

Advertise in articles 1

advertising articles 2

Advertise under the article