-->
ಸಂಚಾರಿಯ ಡೈರಿ : ಸಂಚಿಕೆ - 25

ಸಂಚಾರಿಯ ಡೈರಿ : ಸಂಚಿಕೆ - 25

ಸಂಚಾರಿಯ ಡೈರಿ : ಸಂಚಿಕೆ - 25

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ  ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
             

         ಉತ್ತರ ಭಾರತದ ಪ್ರಮುಖ ರಾಜ್ಯ ಹರ್ಯಾಣ. ಹರ್ಯಾಣದ ಪ್ರಸಿದ್ಧ ಪ್ರವಾಸೀ ತಾಣಗಳಿಗೆ ಭೇಟಿ ನೀಡದಿದ್ದರೂ ಅಲ್ಲಿಯ ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಹರ್ಯಾಣದ ಭಿವಾಣಿ ಅನ್ನೋ ಸಣ್ಣ ಪೇಟೆ. ಪೇಟೆ ಸಣ್ಣದಾದರೂ ರಸ್ತೆಗಳೆಲ್ಲಾ ಏಕ್‌ದಮ್ ಪಕ್ಕಾ! ಭಿವಾಣಿಯಿಂದ ಸುಮಾರು 10 ಕಿಮೀ ದೂರದ ಖರಕ್ ಎಂಬ ಹಳ್ಳಿ.. ಪ್ರಯಾಣದುದ್ದಕ್ಕೂ ರಸ್ತೆಯಂಚಿನಲ್ಲೆಲ್ಲಾ ಕಬ್ಬು, ಗೋಧಿ, ಸಜ್ಜೆ, ಅಕ್ಕಿ, ಹತ್ತಿ ಬೆಳೆಯ ಗದ್ದೆಗಳಿದ್ದವು..        ಹರ್ಯಾಣದ ಪ್ರತೀ ಮನೆಯಲ್ಲಿ ಕನಿಷ್ಠ ಪಕ್ಷ ಒಬ್ಬ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿರತ್ತಾನೆ. ಎಷ್ಟೇ ದೊಡ್ಡ ನೌಕರಿ ಇದ್ದರೂ ಅವರ ಹೊಲ-ಗದ್ದೆಗಳಲ್ಲಿ ದವಸ ಧಾನ್ಯ ಬೆಳೆಯೋದನ್ನ ಮರೆಯಲ್ಲ. ಹರ್ಯಾಣದ ಜನ ಆಹಾರದಲ್ಲಿ ಬಳಸೋದು ಗೋಧಿಯನ್ನು. ಮೂರು ಹೊತ್ತು ಗೋಧಿ ಚಪಾತಿ ಸೇವಿಸುತ್ತಾರೆ. ನಮ್ಮ ಕರ್ನಾಟಕದ ಬಯಲುಸೀಮೆಯಲ್ಲಿ ಜೋಳದ ರೊಟ್ಟಿ ಹೇಗೆ ಪ್ರಸಿದ್ಧವೋ ಹಾಗೆಯೇ ಅಲ್ಲೂ ಕೂಡಾ ಜನ ರೊಟ್ಟಿ ತಟ್ಟಿ, ತುಪ್ಪ‌ ಸವರಿ ಸೇವಿಸುತ್ತಾರೆ. ಚಪಾತಿಯ ಜತೆ ಎಮ್ಮೆ ಹಾಲು/ಮಜ್ಜಿಗೆ, ಖಾರ ಪಲ್ಯ ನೆಂಚಿಕೊಂಡು ತಿನ್ನುತ್ತಾರೆ. 'ನಮ್ಮ ಶಕ್ತಿಯ ಮೂಲ ಇದೇ ನೋಡು' ಅನ್ನುತ್ತಾರೆ. ಅಂದ ಹಾಗೆ ಹರ್ಯಾಣ/ಪಂಜಾಬ್ ರಾಜ್ಯಗಳು ವಿಶ್ವವಿಖ್ಯಾತ ಕುಸ್ತಿಪಟುಗಳನ್ನ ನೀಡಿದ ರಾಜ್ಯ.. 'ಅರೇ ಠಂಡಾ ಲಸ್ಸಿ ಪೀಣಾ' (ಇಲ್ಲಿ ಲಸ್ಸಿ ಎಂದರೆ ಶುದ್ಧ ಮಜ್ಜಿಗೆ ಎಂದರ್ಥ, ನಮ್ಮಲ್ಲಿ ಮಜ್ಜಿಗೆಗೆ ಸಕ್ಕರೆ ಬೆರೆಸಿ, ಕಲಸಿ ಕೊಡುವ ಕ್ರಮವಿದೆ)       ಚಿಕ್ಕ ಇಟ್ಟಿಗೆಯ ಮನೆಗಳು, ಜಾಸ್ತಿ ದೂರವೂ ಇಲ್ಲದೇ ಮನೆಗಳು ಅಕ್ಕಪಕ್ಕ ಇರುತ್ತವೆ. ನಾನು ತೆರಳಿದ್ದ ಭಿವಾಣಿ, ಹಿಸಾರ್ ಪ್ರದೇಶಗಳಲ್ಲಿ ಹೆಚ್ಚಾಗಿ ಹತ್ತಿ ಬೆಳೆದಿದ್ದರು. ಬೆಳ್ಳಂಬೆಳಗ್ಗೆ ಒಂದು ಲೋಟ ಚಹಾ ಕುಡಿದು, ಎಂಟು ಗಂಟೆಯ ಹೊತ್ತಿಗೆ ಹತ್ತಿ ಎಸಳು ಕೊಯ್ದು ಆಗಬೇಕಾಗಿರುತ್ತಿತ್ತು. ನಂತರ ಅದನ್ನು ಬಿಡಿಸಿ, ರಾಶಿ ಹಾಕಿ, ಮಾರುವ ಕ್ರಮ ನೋಡಿದ್ದೆ. ಹರ್ಯಾಣದ ಯುವಕರು, ಮುದುಕರು  ಎಷ್ಟೇ ಪರಿಮಾಣದಲ್ಲಿ ಆಹಾರ ಸೇವಿಸಿದರೂ ಸಹ, ಹುಕ್ಕಾ ಎಳಿಯೋದನ್ನ ಬಿಡೋದಿಲ್ಲ. ಇಲ್ಲಿಯ ವಿಶಿಷ್ಟ ಸಂಪ್ರದಾಯ ಎಂಬಂತೆ ಪ್ರತೀ ಮನೆ, ಅಂಗಡಿಗಳಲ್ಲೂ ಸಹ ಈ ತರಹದ ಹುಕ್ಕಾ ಸೇದೋ ಸಾಧನಗಳನ್ನ ಇಟ್ಟಿರುತ್ತಾರೆ. ದೂರದಿಂದ ಕಂಡಾಗ ನೀಳ ಪೀಪಿಯಂತೆ ಕಾಣಿಸುತ್ತದೆ. ಇದಕ್ಕೆ ತಂಬಾಕು ಬೆರೆಸಿ, ಕೆಂಡ ಹಾಕಿ ಸೇದುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರವಾದರೂ, ಅಲ್ಲಿಯ ಜನರಿಗೆ ಸಾಮಾನ್ಯವೆನಿಸಿದೆ.         ನಾವೆಲ್ಲಾ ಉತ್ತರ ಭಾರತ ಅಂದಾಗ ಹಿಂದಿ ಅಲ್ವಾ ಅಂದುಕೊಳ್ಳುತ್ತೇವೆ. ಆದರೆ ಹರ್ಯಾಣದ ಹಳ್ಳಿಗಳಲ್ಲಿ ಹರ್ಯಾಣ್ವಿ ಅನ್ನೋ ಭಾಷೆ ಮಾತನಾಡುತ್ತಾರೆ. ಇದು ಅತ್ತ ಪರಿಪೂರ್ಣ ಹಿಂದಿಯೂ ಅಲ್ಲ, ಇತ್ತ ಪಂಜಾಬಿಯೂ ಅಲ್ಲ ಅನ್ನೋ ಭಾಷೆ. ಎಷ್ಟೋ ಸರ್ತಿ ನಾವು ಹಿಂದಿ ಮಾತನಾಡೋವಾಗ ಶಬ್ದಗಳ ಸ್ತ್ರೀ ಲಿಂಗ ಪುಲ್ಲಿಂಗದ ಬಗ್ಗೆ ಚಿಂತೆ ಮಾಡುತ್ತೇವೆ, ಆದರೆ ಹರ್ಯಾಣ್ವಿಯಲ್ಲಿ 'ತುಮ್ ಜಾವೊಗಿ' (ನೀನು ಹೋಗುತ್ತೀಯಾ) ಅನ್ನೋದು ಹುಡುಗ/ಹುಡುಗಿ ಇಬ್ಬರೀಗೂ ಅನ್ವಯಿಸುತ್ತದೆ. ಅಂದರೆ ಸ್ತ್ರೀ ವಾಚಕ ಹಿಂದಿಯಲ್ಲಿ ಜಾವೋಗಿ ಬಂದರೆ, ಹರ್ಯಾಣ್ವಿಯಲ್ಲಿ ಬೇರೆಯೇ!
      ಜಾತಿ ವ್ಯವಸ್ಥೆ ಅತ್ಯಂತ ಆಳವಾಗಿ ಬೆರೆತಿರುವ ಇಲ್ಲಿಯ ಜನಾಂಗಗಳಲ್ಲಿ ಬಹುತೇಕರು ಸಸ್ಯಾಹಾರಿಗಳಾಗಿದ್ದಾರೆ. ಒಟ್ಟಾರೆ ಹರ್ಯಾಣದ ಹಳ್ಳಿಯ ದರ್ಶನ ನವಾನುಭವ ನೀಡಿತ್ತು.

......................................... ಸುಭಾಸ್ ಮಂಚಿ
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube channel:
https://youtube.com/@thesilentsanchari4227

******************************************




Ads on article

Advertise in articles 1

advertising articles 2

Advertise under the article