
ಸಂಚಾರಿಯ ಡೈರಿ : ಸಂಚಿಕೆ - 17
Friday, November 4, 2022
Edit
ಸಂಚಾರಿಯ ಡೈರಿ : ಸಂಚಿಕೆ - 17
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಕೆಲವೊಂದು ಪ್ರವಾಸಗಳು ಮರೆಯಲಾಗದ ಅನುಭವ ನೀಡುತ್ತವೆ. ಪ್ರವಾಸದ ನೆನಪುಗಳನ್ನ ಮೆಲುಕು ಹಾಕುತ್ತ ಹೋಗುವಾಗ ಮನಸ್ಸಿಗೂ ಏನೋ ಖುಷಿ! ಅದರಲ್ಲೂ ಕೆಲವು ವಿಚಾಗಳಂತೂ ಪದೇ ಪದೇ ನಮ್ಮ ಸ್ಮೃತಿ ಪಟಲದಲ್ಲಿ ಹಾದು ಹೋಗುವಾಗ, ಕಣ್ಣಂಚಲಿ ಪುಟ್ಟ ಹನಿಗಳ ಸಂಚಾರ!
ಅಂದ ಹಾಗೆ ನಮ್ಮ ವಿಭಾಗದಿಂದ ತೆರಳಿದ್ದ ಉತ್ತರ ಭಾರತದ ಪ್ರವಾಸ ನಿಜವಾಗಿಯೂ ಅಮೋಘ ಎಂದರೆ ತಪ್ಪಾಗದು. ಚಿಕ್ಕ ವಯಸ್ಸಿನಲ್ಲಿ ಪ್ರವಾಸ ಹೋದಾಗಲೆಲ್ಲಾ 'ಮಕ್ಕಳೇ ! ಅಲ್ಲಿ ಹೋಗಬೇಡಿ, ನಮ್ಮ ಕೈಬಿಡಬೇಡಿ ಎಂಬೆಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿರಬೇಕಾಗಿತ್ತು. ಆವತ್ತು ನಮ್ಮ immaturity ಕಾರಣಕ್ಕಾಗಿ ಕಾಳಜಿ ಅಗತ್ಯವಾಗಿತ್ತು. ಆದರೆ ಬೆಳೆದು ನಿಂತ ಎಳೆಯರ ಬಳಗದ ಪರ್ಯಟನೆಯಲ್ಲಿ ಸಿಗೋ ಮಜಾನೇ ಬೇರೆ.
ನಮ್ಮ ಸುದೀರ್ಘ ಪ್ರವಾಸ ನಿಕ್ಕಿ ಆಗಿದ್ದು ಮಾತ್ರ ದೇವಭೂಮಿ ಉತ್ತರಾಖಂಡ್, ಉತ್ತರಪ್ರದೇಶ್ ಹಾಗೂ ರಾಜಧಾನಿ ದೆಹಲಿಗೆ. ಐವತ್ತು ಜನ ವಿದ್ಯಾರ್ಥಿಗಳ ತಂಡ, ಉಪನ್ಯಾಸಕರ ಜತೆ ಮಂಗಳೂರಿನಿಂದ 'ಡೆಹ್ರಾಡೂನ್ ಎಕ್ಸ್ಪ್ರೆಸ್' ಮೂಲಕ ಡೆಹ್ರಾಡೂನ್ ತಲುಪಿದ್ದೆವು. ಸತತ ಮೂರು ದಿನಗಳ ಪ್ರಯಾಣ ಆಯಾಸ ತಂದಿತ್ತು. ಬಿಸಿ ನೀರಿನ ಸ್ನಾನ, ಹೊರಗಿನ ತೀವ್ರ ಚಳಿಗೆ ಸ್ಪರ್ಧೆ ಒಡ್ಡಿತ್ತು.
ಅಂದು ರಾತ್ರಿ ಊಟ ಮಾಡೋವಾಗ ಎಂಟೂವರೆ. ನಾವೇನೋ ಉತ್ತರಾಖಂಡ್ ಶೈಲಿಯ ಊಟ ಇರಬಹುದು, ಎಲ್ಲಿ ಹೊಸ ಊಟ ಮಾಡಿ ಆರೋಗ್ಯ ಕೆಟ್ಟು ಹೋಗಬಹುದೋ ಅನ್ನುವ ಅಳುಕಿನಲ್ಲೆ ಊಟಕ್ಕೆ ಸಾಲು ನಿಂತಿದ್ದೆವು. ಘಮಘಮ ಕೋಳಿ ಸಾರು, ಜೀರಾ ರೈಸ್, ಕೋಸಂಬರಿ ; ವ್ಹಾ! ರುಚಿ ಮಾತ್ರ ಅಪ್ಪಟ ನಮ್ಮೂರು, ನಮ್ಮನೆ ತರಾನೇ.. ಅದೇನೋ ಉತ್ತರ ಭಾರತದ ತರಾ ಮಾಡ್ತಾರೇನೋ ಅಂತಂದುಕೊಂಡಿದ್ದ ನಿರೀಕ್ಷೆ ಸುಳ್ಳಾಗಿತ್ತು. First expression is best expression ಅಂತಾರಲ್ಲ ಹಂಗೇ ದಣಿದಿದ್ದ ಮನಸ್ಸೂ, ದೇಹ ಪ್ರಫುಲ್ಲ ಭಾವ ಪಡೆದಿತ್ತು..
ಮರುದಿನ ಮಸ್ಸೂರಿಯ ಕೆಂಪ್ಟಿ ಜಲಪಾತ ನೋಡಲು ತೆರಳಿದ್ದೆವು, ಅಲ್ಲಿಯ ರಕ್ತ ಹೆಪ್ಪುಗಟ್ಟಬಲ್ಲ ನೀರಲ್ಲಿ ಸ್ವಲ್ಪ ನೀರಾಟವಾಡಿ, ಕೆಂಪ್ಟಿ ಸರೋವರದಲ್ಲಿ ದೋಣಿ ವಿಹಾರ ನಡೆಸಿ, ಹತ್ತಿರದ ಪ್ರಕಾಶೇಶ್ವರ ಮಂದಿರಕ್ಕೂ ಭೇಟಿ ನೀಡಿದೆವು. ಅಲ್ಲಿಗೆ ಅಂದಿನ ಪ್ರವಾಸ ಮುಗಿಸಿ, ಮರುದಿನ ನಾವು ತೆರಳಿದ್ದು ಡೆಹ್ರಾಡೂನ್ನ ಅರಣ್ಯ ಸಂಶೋಧನಾ ಕೇಂದ್ರಕ್ಕೆ, ಅಲ್ಲಿಯ ವೈವಿಧ್ಯ ನೋಡಿದ ಮೇಲೆ, ನಮ್ಮ ಪಯಣ ತೆರಳಿದ್ದು ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಮಾಡಲು. ಅಲ್ಲಿ ರಿವರ್ ರಾಫ್ಟಿಂಗ್ ಮಜಾ ತಗೊಂಡು, ರಾಮ್ ಝೂಲಾ, ಲಕ್ಷ್ಮಣ್ ಝೂಲಾದ ಸೌಂದರ್ಯ ಕಣ್ತುಂಬಿಕೊಂಡೆವು. ಅಂದು ಸಂಜೆ ಅಲ್ಲಿ ಗಂಗಾರತಿಯ ಭಕ್ತಿ ಪರವಶತೆಯಲ್ಲಿ ಮಿಂದೆದ್ದಿತ್ತು.... 'ಜೈ ಗಂಗೇ ಮಾತಾ' ಹಾಡು ಈಗಲೂ ಗುನುಗುನಿಸುತ್ತಿದೆ. ನಿರ್ಲಿಪ್ತವಾಗಿ.... ಅಲ್ಲಿಂದ ಹೋಟೆಲ್ಗೆ ತೆರಳಿ, ಮರುದಿನ ಜಿಮ್ಕಾರ್ಬೆಟ್ಗೆ ತೆರಳಿದೆವು. ಐದು ಗಂಟೆಗಳ ಧೀರ್ಘ ಪಯಣದ ನಂತರ, ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪಿದ್ದೆವು. ಅಲ್ಲಿ ಜೀಪ್ ಸಫಾರಿಯ ಮಜಾ ತಗೊಂಡು, ಕಾರ್ಬೆಟ್ನ ಕಾಡಿನಲ್ಲಿ ಸುತ್ತಾಟ ನಡೆಸಿದೆವು. ಅಂದು ರಾತ್ರಿ ನಮ್ಮ ಪಯಣ ಆಗ್ರಾಕ್ಕೆ ಸಾಗಿತ್ತು.
ಬೆಳಗ್ಗಿನ ಜಾವ ಹತ್ತು ಗಂಟೆಗೆ ಹೊರಟು, ಆಗ್ರಾ ಕೋಟೆಯನ್ನು ಕಾಣಲು ತೆರಳಿದೆವು. ಕೋಟೆಯ ಇನ್ನೊಂದು ಮಗ್ಗುಲಿನಿಂದ ತಾಜ್ಮಹಲ್ ಚಿಕ್ಕದಾಗಿ ತೋರುತ್ತಿತ್ತು. ಅಲ್ಲಿಂದ ವಿಶ್ವದ ಅದ್ಭುತಗಳಲ್ಲಿ ಒಂದಾದ ಅಮರ ಪ್ರೇಮ ಸೌಧ ತಾಜ್ಮಹಲ್ಗೆ ತೆರಳಿದೆವು. ಯಮುನಾ ತೀರದ ಅದ್ಭುತ ಅಮೃತಶಿಲೆಯ ಸೌಧ ಸಾವಿರಾರು ಪ್ರವಾಸಿಗರಿಂದ ಗಿಜಿಗಿಡುತ್ತಿತ್ತು.
ಅಲ್ಲಿ ಸುತ್ತಾಡಿ, ಸೆಲ್ಫಿ, ಫೋಟೋಶೂಟ್ ನಡೆಸಿ ರಾತ್ರಿ ಹೋಟೆಲ್ನಲ್ಲಿ ತಂಗಿದೆವು. ಮರುದಿನ ಮೊಘಲ್ ಚಕ್ರವರ್ತಿ ಅಕ್ಬರ್ನ ಸಮಾಧಿ ಸಿಕಂದರ್ಗೆ ತೆರಳಿದೆವು. ಅಲ್ಲಿ ಸ್ವಲ್ಪ ಹೊತ್ತು ಕಳೆದು, ನಮ್ಮ ಪಯಣ ಸಾಗಿದ್ದು ಕೃಷ್ಣ ಜನ್ಮಸ್ಥಳ ಮಥುರಾಗೆ.. 'ಮಥುರಾಪತಿ ಸದನ ಮಧುಸೂದನ ' ಅಂತಾ ಯೇಸುದಾಸ್ರ ಕಂಠದಲ್ಲಿ ಹಾಡು ಕೇಳಿದ್ದ ನಾವು ಮಥುರೆಯ ಬೆಡಗು ನೋಡುವ ಹುರುಪಿನಲ್ಲಿದ್ದೆವು. ನಾವು ತಲುಪೋ ಹೊತ್ತಿಗೆ ದೇವಾಲಯ ಮುಚ್ಚಿತ್ತು ..ಅಲ್ಲಿ ಸಿಹಿಯಾದ ರಸ್ಮಲಾಯಿ ಮತ್ತು ಪೇಡಾ ಕೊಂಡು ಹಿಂದಿರುಗಿದಾಗ, ನಮ್ಮ ಪಯಣ ದೆಹಲಿಗೆ ಸಾಗಿತ್ತು..
ರಾಜಧಾನಿ ದಿಲ್ಲಿಯಲ್ಲೆಲ್ಲಾ ಅಂದು ಅಮೇರಿಕಾದ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸುವ ಫಲಕಗಳು ಕಾಣಿಸುತ್ತಿದ್ದವು. ಕೂಲ್ ಕೂಲ್ ದಿಲ್ಲಿಯಲ್ಲಿ ಬೆಳಗಿನ ಜಾವ ನಾವು ಬಿರ್ಲಾ ಮಂದಿರ್, ಮುಘಲ್ ಗಾರ್ಡನ್ ಗೆ ಭೇಟಿ ನೀಡಿದೆವು. ಅಲ್ಲಿಂದ ಕೆಂಪು ಕೋಟೆಗೆ ಧಾವಿಸಿದೆವು. ಕೆಂಪು ಕಲ್ಲಿನ ಕೋಟೆ, ಭಾರತದ ಪ್ರಧಾನಿಗಳಿಗೆ ಘನ ಭಾಷಣ ಮಾಡುವ ತಾಣವೂ ಹೌದು. ಸುಮಾರು ಮಧ್ಯಾಹ್ನದ ಹೊತ್ತಿಗೆ ಗಾಂಧಿ ಸಮಾಧಿಯಾದ ರಾಜ್ಘಾಟ್ ಗೆ ಭೇಟಿ ನೀಡಿದೆವು. ಸಂಜೆಯ ವೇಳೆಗೆ ಅಕ್ಷರ ಧಾಮ ದೇವಳ ಸಂದರ್ಶಿಸಿದ್ದೆವು. ಅಲ್ಲಿ ಹೊತ್ತು ಕಳೆದಾಗ ಅಂದಿನ ಪ್ರವಾಸ ಮುಗಿದಿತ್ತು..
ನಮ್ಮ 14 ದಿನದ ಪ್ರವಾಸದ ಕೊನೆಯ ದಿನ ದಿಲ್ಲಿಯ ಕುತುಬ್ ಮಿನಾರ್, ಲೋಟಸ್ ಟೆಂಪಲ್, ಇಂಡಿಯಾ ಗೇಟ್ನ ವಿಹಂಗಮ ನೋಟ ಕಂಡೆವು. ದಿಲ್ಲಿಯಲ್ಲಿದ್ದ ಪ್ರತಿರಾತ್ರಿಯೂ ಕರೋಲ್ಬಾಗ್ನಲ್ಲಿ ತರಹೇವಾರಿ ಶಾಪಿಂಗ್ ಮಾಡಿದ್ದೆವು.
ಮರುದಿನ ನಮ್ಮ ಪಯಣ ದಿಲ್ಲಿಯಿಂದ ಮಂಗಳೂರಿಗೆ ಬರುವ ರೈಲಿಗೆ ನಿಗದಿಯಾಗಿತ್ತು.. ಸುಧೀರ್ಘ ಪ್ರವಾಸ ಕ್ರಮಬದ್ಧ ಯೋಜನೆಯಿಂದ ಮರೆಯಲಾಗದ ಅನುಭವ ನೀಡಿದ್ದಂತೂ ಸುಳ್ಳಲ್ಲ!
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************