-->
ಪ್ರೀತಿಯ ಪುಸ್ತಕ : ಸಂಚಿಕೆ - 26

ಪ್ರೀತಿಯ ಪುಸ್ತಕ : ಸಂಚಿಕೆ - 26

ಪ್ರೀತಿಯ ಪುಸ್ತಕ
ಸಂಚಿಕೆ - 26

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                             ಮಕ್ಕಳಿಗಾಗಿ ಮಹಾತ್ಮ  
          ಪ್ರೀತಿಯ ಮಕ್ಕಳೇ...... ನನಗೆ ಗಾಂಧೀಜಿ ಯಾಕೆ ಇಷ್ಟ ಗೊತ್ತೇ...? ಅವರು ಯಾವತ್ತೂ ಯಾರಿಗೂ ಬಿಟ್ಟಿ ಉಪದೇಶ ಕೊಡುತ್ತಿರಲಿಲ್ಲ. ತಾನು ಮಾಡಿಯೇ ಇತರರಿಗೆ ತೋರಿಸಿಕೊಡುತ್ತಿದ್ದರು. ಅದಕ್ಕಾಗಿ ಗಾಂಧೀಜಿಯವರ ಬದುಕೇ ಒಂದು ಸಂದೇಶ. ಹಾಗೆ ಮಾಡಬೇಕು ಹೀಗೆ ಮಾಡಬೇಕು, ಅಂತ ಹೇಳುವುದು ಸುಲಭ. ಆದರೆ ಹಟಹಿಡಿದು ಅದನ್ನು ತಾನೇ ಮಾಡುವುದು ಇದೆಯಲ್ಲಾ ಅದು ನಿಜಕ್ಕೂ ದೊಡ್ಡ ವಿಷಯ. ಅವರ ಬದುಕನ್ನು ಓದಿದಷ್ಟೂ ಮುಗಿಯುವುದಿಲ್ಲ. ಒಂದೊಂದು ವಯಸ್ಸಿನಲ್ಲೂ ಒಂದಷ್ಟು ಓದುವುದು ಇದ್ದೇ ಇರುತ್ತದೆ. ಆ ನಿಟ್ಟಿನಲ್ಲಿ, ಈ ಪುಸ್ತಕ ಒಂದು ಬಹಳ ಮುಖ್ಯ ಹೆಜ್ಜೆ. ನಿಮಗೆ ಗಾಂಧೀಜಿಯವರ ಬದುಕಿನ ಒಂದು ನೋಟ ಸಿಗುತ್ತದೆ. ಸರಳವಾದ ನಿರೂಪಣೆ ಇದೆ. ಉದಯ ಗಾಂವಕರ ಅವರೇ ಬಿಡಿಸಿದ ರೇಖಾಚಿತ್ರಗಳು ಬಹಳ ಸೊಗಸಾಗಿವೆ. ಮನಸ್ಸಿನಲ್ಲಿ ಉಳಿಯುವಂತೆ ಇವೆ. ನಿಮಗಾಗಿ ಈ ಪುಸ್ತಕ ಓದಿದೆ, ನನಗೆ ಇಷ್ಟವಾಯಿತು. ನೀವೂ ಓದಿ. ನಮ್ಮ ಬದುಕಿಗೆ ದೊಡ್ಡ ಪ್ರೇರಣೆ ಸಿಗುತ್ತದೆ. ದೊಡ್ಡವರಾಗುತ್ತಾ ಇನ್ನೂ ಹೆಚ್ಚು ಹೆಚ್ಚು ಇವರ ಬಗ್ಗೆ ಓದುವ ಆಸಕ್ತಿ ನಿಮ್ಮಲ್ಲಿ ಮೂಡಲಿ. ಅಂದ ಹಾಗೆ ಓದುವುದು ಮಾತ್ರವಲ್ಲ, ನಮ್ಮ ಬದುಕಿಗೆ, ಪರಿಸರಕ್ಕೆ, ಆಸುಪಾಸಿನ ಮಂದಿಗೆ ಒಳಿತಾಗಬಹುದಾದಂತಹ ಒಂದು ಪುಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಹಟಹಿಡಿದು ಪಾಲಿಸುವ ಬಗ್ಗೆಯೂ ಯೋಚಿಸುವಿರಾಗಿ ನಂಬುತ್ತೇನೆ.  
ಲೇಖಕರು: ಉದಯ ಗಾಂವಕರ 
ಚಿತ್ರಗಳು: ಉದಯ ಗಾಂವಕರ 
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ - ಕರ್ನಾಟಕ
ಬೆಲೆ: ರೂ.20
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ಚಿಕ್ಕ ಮಕ್ಕಳಿಗೆ ದೊಡ್ಡವರು ಓದಿ ಹೇಳಬಹುದು
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article