
ಧೃತಿ ರಚಿಸಿರುವ ಕವನಗಳು
Saturday, July 23, 2022
Edit
ಮಕ್ಕಳ ಜಗಲಿಯಲ್ಲಿ
ಧೃತಿ ರಚಿಸಿರುವ
ಕವನಗಳು
ಜಲ
----------
ಸಕಲ ಜೀವರಾಶಿಗಳಿಗೂ ಬೇಕು ನೀರು
ನೀರಿಲ್ಲದೆ ಇರಲಾರರು ಯಾರೂ
ಒಂದೊಂದು ಹನಿಗೂ ಕಟ್ಟಲಾಗದು ಬೆಲೆ
ನೀರಿಲ್ಲದೆ ಇಲ್ಲ ನಮ್ಮ ನೆಲೆ
ವಿಶ್ವದೆಲ್ಲೆಡೆ ಎದ್ದಿದೆ ನೀರಿಗಾಗಿ ಹಾಹಾಕಾರ
ಇನ್ನಾದರೂ ಇರಲಿ ನೀರಿನ ಮೇಲೆ ಮಮಕಾರ
ಜಲವು ಜೀವನದ ಒಂದು ಅಂಗ
ತರಬೇಡಿ ಎಂದೂ ಅಂತರ್ಜಲಕ್ಕೆ ಭಂಗ
ಪೋಲು ಮಾಡದೆ ನೀರನ್ನು ಉಳಿಸಿ
ಅವಶ್ಯಕತೆಗೆ ತಕ್ಕಂತೆ ನೀರನ್ನು ಬಳಸಿ
ಮುಂದಿನ ಪೀಳಿಗೆಗಾಗಿ ಶೇಖರಿಸಿ ಇಡಿ
ವೃಕ್ಷಗಳನ್ನು ಕಡಿಯದೆ ಬೆಳೆಯಲು ಬಿಡಿ
ಬಾಯಾರಿದ ಜೀವಕ್ಕೆ ದಾಹವ ನೀಗಿಸೋಣ
ಅಂತರ್ಜಲವನ್ನು ಕಾಪಾಡೋಣ
ಮಳೆಯ ನೀರನ್ನು ಇಂಗಿಸೋಣ
ಅಂತರ್ಜಲದ ಮಟ್ಟ ಹೆಚ್ಚಿಸೋಣ
ಹಸಿರು ಬೇಕು ಉಸಿರಿಗಾಗಿ
ನೀರು ಬೇಕು ಬದುಕಿಗಾಗಿ
ಎಲ್ಲೆಡೆ ಚಿಮ್ಮುತಿರಲಿ ಕಾರಂಜಿಯ ಒರತೆ
ವಿಶ್ವಕ್ಕೆ ಬಾರದಿರಲಿ ನೀರಿನ ಕೊರತೆ
....................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಯೋಧರು
----------------
ವೀರ-ಧೀರ ಶೂರರು
ನಮ್ಮ ನಾಡ ಯೋಧರು
ದೇಶವನ್ನು ಪೊರೆವರು
ಸ್ವಹಿತವನ್ನು ನೋಡರು
ಗಡಿಯ ಮಂಜಿನಲ್ಲಿ
ದೇಶ-ಭಾಗವ ಕಾಯುವರು
ಇವರೇ ನೋಡಿ ನಮ್ಮ
ನಿಮ್ಮೆಲ್ಲರ ಪಾಲಿನ ರಕ್ಷಕರು
ಬೆಟ್ಟಗುಡ್ಡ ಕಲ್ಲುಮುಳ್ಳು
ಎನ್ನದೆ ಮುನ್ನುಗ್ಗುವರು
ಬಿಸಿಲು ಮಳೆ ಚಳಿ ಎನ್ನದೆ
ದಿನವಿಡೀ ಕಾಯುವರು
ಪ್ರಾಣವನ್ನೇ ಪಣಕಿಟ್ಟು
ವೈರಿ ಪಡೆಯ ಸದೆಬಡಿಯುವರು
ದೇಶಕ್ಕಾಗಿ ತಮ್ಮ ಪ್ರಾಣವ
ಲೆಕ್ಕಿಸದೆ ಮಡಿಯುವರು
ತಂದೆ ತಾಯಿ ಬಂಧು ಬಳಗ
ಎಲ್ಲವನ್ನು ತ್ಯಾಗಮಾಡುವರು
ನನ್ನ ದೇಶ ನನ್ನ ಜನ
ಎಂಬ ಭಾವವ ತಾಳುವರು
ಜನತೆಯಲ್ಲ ನೆಮ್ಮದಿಯಿಂದ
ಬದುಕಲು ಕಾರಣರಾದರು
ಅಖಂಡ ದೇಶ ಪ್ರೇಮವ
ದೇಶಕ್ಕೆಲ್ಲ ಸಾರುವರು
ಕಾಶ್ಮೀರದ ಅತಿ ಎತ್ತರದ
ಕಣಿವೆಯಲ್ಲಿ ಹೋರಾಡುತಾ
ಮೈಯೆಲ್ಲಾ ಕೊರೆಯುತಿವೆ
ನಡುಗುವ ಚಳಿಯಲ್ಲಿ
ತ್ಯಾಗ ಬಲಿದಾನಗಳ ಸಂಕಲ್ಪ
ದೇಶ ರಕ್ಷಿಸುವ ಛಲದಲ್ಲಿ
ನಮ್ಮ ದೇಶ ಭರತ ದೇಶ
ತಡೆಯೋಣ ನಮಗಾಗುವ ವಿನಾಶವ
ಕೋಶ ಓದಿ ದೇಶ ಸುತ್ತಿ
ಕಾಯೋಣ ನಮ್ಮ ದೇಶವ
....................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಮರೆಯಲಾರದ ಕ್ಷಣಗಳು
---------------------------
ಹರಿದ ಸಮವಸ್ತ್ರ ಹೊಲಿದ ಜೇಬು
ಜೇಬಿನೊಳಗೊಂದು ನಾಣ್ಯದ ಹುಸಿ ನಗು
ದಣಿದಷ್ಟು ಆಟ ಅಮ್ಮನ ದಿಟ್ಟನೆಯ ನೋಟ
ಬೆಳಗಿನ ಗಂಜಿಯ ಊಟ....!
ಮರ ಹತ್ತಿತಿಂದ ಹುಣಸೆ ಹಣ್ಣು
ಜಾರಿ ಬಿದ್ದು ಅಂಗಿ ಪೂರಾ ಮಣ್ಣು
ಗೆಳತಿಯರೊಡನೆ ಗದ್ದೆಯ ಆಟ
ಅದರಿಂದ ಕಲಿತ ಜೀವನ ಪಾಠ...!
ಹೋಗುತ್ತಿದ್ದೆ ಹಿಂಬಾಲಿಸಿ ದಾರಿ
ಹಿಡಿಯುತ್ತಿದ್ದ ಕೋಳಿಯ ಮರಿ
ಗೆಳತಿಯರೊಡನೆ ಇದ್ದ ಮುನಿಸು ಕೋಪ
ರಾಜಿ ಹೇಳುವವರೆಗೂ ಆರದ ತಾಪ....!
ಕದ್ದು ತಿಂದ ಮಾವಿನ ಕಾಯಿ
ಓಡಿಸಿಕೊಂಡು ಬಂದ ನಾಯಿ
ಮಳೆಗಾಲದ ಹಲಸಿನ ಬೀಜ
ಸುಟ್ಟು ಹಾಕಿ ತಿನ್ನುವ ಮಜಾ...!
ಮಾವಿನ ಕಾಯಿಗೆ ಎಸೆದ ಕಲ್ಲು
ಹಣ್ಣು ಹೆಕ್ಕಲು ತಾಗಿದ ಮುಳ್ಳು
ಗೆಳತಿಯರೊಡನೆ ಮಾಡಿದ ಊಟ
ಅವರೊಂದಿಗೆ ಆಡಿದ ಆಟ..!
ಟೀಚರ್ ಕೊಟ್ಟ ಬೆತ್ತದ ಪೆಟ್ಟು
ನೋವಿನೊಳಗೆ ಕಲಿತ ಪಾಠಗಳೆಷ್ಟು..!
ಕೆಸರಿನ ಗದ್ದೆಯಲಿ ಆಟೋಟ
ನೆಲದ ಪ್ರೀತಿಗೆ ಜೀವನ ಪಾಠ....!
ಊಟಕ್ಕೆ ನಿಂತರೆ ಸಾಲು
ನೋಯುತ್ತಿತ್ತೆನ್ನ ಕಾಲು
ತರಕಾರಿ ಬೇಳೆಯ ಸಾರು
ತಿನ್ನುವುದೆಂದರೆ ಬೋರು
ಅಂಗಳಕ್ಕೆ ಬಂದರೆ ಕಾರು
ಗ್ಯಾರೆಂಟಿ ಅದು ಡಾಕ್ಟರು
ಹೆದರುತ್ತಿದ್ದೆವು ಇಂಜೆಕ್ಷನಿಗೆ
ಭಯವು ಎಮಗೆ ನೋವಿಗೆ
ಶಾಲೆಯಲ್ಲಿ ವಾರ್ಷಿಕೋತ್ಸವ
ನೆರದ ಜನರಿಗೆಲ್ಲ ಸಂಭ್ರಮವ
ಶಾಲೆಯಿಂದ ಹೊರಟ ಪ್ರವಾಸ
ಮಜಾ ನೀಡಿತ್ತು ಆ ದಿವಸ....!
ಎಲ್ಲವೂ ಸಿಹಿ ಸಿಹಿಯಾದ ಸುಂದರ ಕ್ಷಣಗಳು
ಮುದ್ದು ಮುದ್ದಾಗಿದ್ದ ಪುಟ್ಟ ಮನಸ್ಸುಗಳು
ಬಾಲ್ಯದ ಆ ದಿನಗಳು ಕ್ಷಣಿಕ
ಆದರೆ ಅದೀಗ ಕ್ಷಣ-ಕ್ಷಣಗಳ ಮಾಣಿಕ್ಯ...!
....................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ವರುಣ
----------------
ಓ ವರುಣ ಸಾಕು ನಿಲ್ಲಿಸು
ನಮ್ಮ ಮೇಲಿನ ಆಕ್ರಮಣ
ಕಾಲಕ್ಕೆ ಸರಿಯಾಗಿ ಆಗಲಿಲ್ಲ
ನಿನ್ನ ಆಗಮನ
ಈಗ ಯಾರು ಕೋರುವರು
ನಮ್ಮ ಮೇಲೆ ಸಾಂತ್ವಾನ
ಹೀಗೇಕೆ ಕಾಡುತ್ತಿರುವೆ ನಿನ್ನ ಮಕ್ಕಳನ್ನ
ಹೋಯಿತು ಎಲ್ಲಾ ಬೆಳೆ
ತುಂಬಿ ತೋಟಕ್ಕೆಲ್ಲ ಹರಿದು ನೀರಮಳೆ
ರೈತನ ಬಾಳಾಯಿತು ಕೊಳೆ
ಹೊರಟು ಹೋಯಿತು ಜೀವನದ ಕಳೆ
ನೀ ನೀಡಿದ ಪಾಠ ಅರ್ಥವಾಯಿತು
ನಮಗಿಲ್ಲ ಯಾವುದೇ ಸ್ವಾಭಿಮಾನ
ಇಂದು ಕಂಡೆವು ಬೇದ ಭಾವವಿಲ್ಲದ ಜೀವನ
ಸಾಕು ನಿಲ್ಲಿಸು ನಮ್ಮ ಮೇಲಿನ ಮುನಿಸನ್ನ
ಅಂದು ಇದ್ದಂತಹ ಕೊರೊನಾ ರೋಗ
ಇಂದು ಮುಂದುವರೆದಿದೆ ವರುಣನ ಭಾಗ
ಕಳಚಿ ಬಿತ್ತು ಎಲ್ಲರ ವೈಭೋಗ
ಪ್ರವಾಹದಿಂದ ಮುಳುಗುತ್ತಿದೆ ಜಗ
ನಿನ್ನ ಕೃಪೆಯಿಂದ ನಾವು
ಮಾಡುತ್ತಿಹೆವು ಅನ್ನದಾನ
ನೀನೇ ಕಾಡಿದರೆ ನಮಗಾರು
ಮಾಡುವರು ಸಮಾಧಾನ
ಸಾಕು ಮಾಡು ನಿನ್ನ ರೌದ್ರ ನರ್ತನ
ನಾನು ನನ್ನದು ಎಂದು ಕಾಣಲಿಲ್ಲ ಈ ಜನ
ನೀ ಬದಲಾಯಿಸಿರುವೆ ಮಾನವನ ಗುಣ
ನಿನಗಿದೋ ನನ್ನ ನಮನ
.................................................... ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಗುರುಗಳು
--------------
ನಿತ್ಯ ನಮಿಸುವೆ ನಾ
ನಿನ್ನ ಕಮಲ ಚರಣಗಳಿಗೆ
ನಿಮ್ಮ ನೋವ ಚೈತನ್ಯದ ಶಕ್ತಿಯ
ಸ್ಪೂರ್ತಿಯ ಕಿರಣಗಳಿಗೆ
ಅಜ್ಞಾನದಿಂದ ಸುಜ್ಞಾನದ ಕಡೆಗೆ
ಬೆಳಗುವ ನಿಮ್ಮ ಮನಗಳಿಗೆ
ಅಕ್ಕರೆಯಿಂದ ಅಕ್ಷರ ಕಲಿಸಿ
ಸಂತಸದಿಂದ ತಿದ್ದಿದ ಕರಗಳಿಗೆ
ಸಕಲ ಕೋಟಿ ಜ್ಞಾನದಸಿವು
ನೀಗಿಸಿದ ಗುರುಗಳಿಗೆ
ಪ್ರೀತಿ ಸಹನೆಯಿಂದ ಸಲಹಿದ
ಚೆಲುವಿನ ಕಣ್ಮಣಿಗಳಿಗೆ
ರವಿಯಂತೆ ಬೆಳಗಿ ಜಗವ
ಬೆಳಗಿಸುವ ದೀಪಗಳಿಗೆ
ಬಚ್ಚಿಟ್ಟ ಪ್ರತಿಭೆಯ ಬಿಚ್ಚಿಟ್ಟು
ಹೊರ ತರುವ ಸುಜ್ಞಾನಿಗಳಿಗೆ
ಚಂದ್ರನಂತೆ ಕತ್ತಲ ಓಡಿಸಿ
ನಕ್ಷತ್ರಗಳಂತೆ ಬೆಳಕ ನೀಡಿ
ಕನಸುಗಳನ್ನು ಬಿತ್ತುತ್ತಾ
ಬುನಾದಿಗೆ ನಾಂದಿ ಹಾಡಿ
ತಪ್ಪು ಮಾಡಿದ ತಿದ್ದಿ ತೀಡಿ
ಜಗದ ಶ್ರೇಷ್ಠರ ವಿಚಾರ ತಿಳಿಸಿ
ಪೋಷಕರಂತೆ ತಿದ್ದಿ ಸಲಹಿ
ಉತ್ತಮ ಮೌಲ್ಯಗಳನ್ನು ಪರಿಚಯಿಸಿ
ಅಂಧಕಾರದ ಕತ್ತಲನ್ನು ಹೋಗಲಾಡಿಸಿ
ಜ್ಞಾನದ ಭಂಡಾರವ ನೀಡಿ
ಉತ್ತಮ ಪ್ರಜೆಯಾಗಲು ಸಹಕರಿಸಿ
ಒಳ್ಳೆಯ ಮಾರ್ಗದಿ ಬಾಳನು ನಡೆಸಿ
ನವ ಉಲ್ಲಾಸದಿ ಸನ್ನಡತೆಯೆಡೆಗೆ
ತೋರುವಿರಿ ನಿಸ್ವಾರ್ಥರಿಗೆ
ನಿಮ್ಮ ಬಾಳ ಬಂಡಿ ಸವಿಸಿ
ನಮ್ಮ ಬಾಳ ದೋಣಿಯ ಕಲಿಸಿ
ಕೋಟಿ ಕೋಟಿ ನಮನ
ಕಲಿಸಿದ ನನ್ನೆಲ್ಲ ಗುರುಗಳಿಗೆ
ನಿಮಗಾಗಿ ನಾ ಬರೆದ ಕವನ
ಎಷ್ಟು ಬರೆದರು ಮುಗಿಯದ ಕಥನ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************