
ಪಾರಿವಾಳ ಹೇಳಿದ ಕಥೆ
Thursday, May 5, 2022
Edit
ಮಲ್ಲೇಶಯ್ಯ ಹೆಚ್.ಎಂ.
ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು ಮಸೀದಿಗೆ ಸುಣ್ಣ ಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್ ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು..
ಒಂದು ದಿನ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪಾರಿವಾಳವನ್ನು ಕೇಳಿತು. "ಯಾರು ಅವರು ಬಡಿದಾಡಿಕೊಳ್ಳುತ್ತಿರುವುದು..?" ತಾಯಿ ಪಾರಿವಾಳ ಹೇಳಿತು... "ಅವರು ಮನುಷ್ಯರು ಮಗು." ಮರಿ ಪಾರಿವಾಳ , "ಯಾಕೆ ಅವರು ಜಗಳವಾಡುತ್ತಿದ್ದಾರೆ.?"
ಮಸೀದಿಗೆ ಹೋಗುವವರು ಮುಸ್ಲಿಮರಂತೆ.
ಗುಡಿಗೆ ಹೋಗುವವರು ಹಿಂದುಗಳಂತೆ.
ಚರ್ಚ್ ಗೆ ಹೋಗುವವರು ಕ್ರೈಸ್ತರಂತೆ.
ಇದು ಅವರೊಳಗಿನ ಮತ - ಮತಗಳ ಸಂಘರ್ಷಣೆ. ವೈಯಕ್ತಿಕ ವೈಷಮ್ಯ, ಅಧಿಕಾರದ ಆಸೆ, ಸ್ವಾರ್ಥ ಮನೋಭಾವನೆ, ಮೇಲು - ಕೀಳು, ದುರಾಸೆ, ಅಂತಾ ತಾಯಿ ಪರಿವಾಳ ಹೇಳಿತು. ಮರಿ ಪಾರಿವಾಳಕ್ಕೆ ಆಶ್ಚರ್ಯವಾಯಿತು.!
ನಾವು ಕೂಡ ಮಸೀದಿ ಮೇಲೆ ವಾಸಿಸುತ್ತೇವೆ.
ಗುಡಿ ಗುಂಡಾರಗಳ ಮೇಲೆ ವಾಸಿಸುತ್ತೆವೆ..
ಚರ್ಚ್ ಮೇಲೆ ವಾಸಿಸುತ್ತೇವೆ.....!
ನಾವು ಎಲ್ಲಿಗೆ ಹೋದರೂ ಕೂಡ ಪಾರಿವಾಳಗಳೇ ಆಗಿದ್ದೇವೆ. ಆದರೆ ಈ ಮನುಷ್ಯರು ಯಾಕೆ ಹೀಗೆ.? ಅವರು ಮನುಷ್ಯರು, ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ.?
ತಾಯಿ ಪಾರಿವಾಳ ನಕ್ಕು ಹೇಳಿತು..... "ಮಗು ನಾವು ಅವರಿಗಿಂತ ಎತ್ತರದಲ್ಲಿದ್ದೇವೆ. ವಿಶಾಲವಾದ ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ನಮ್ಮದು ನಿಷ್ಕಲ್ಮಶ ಸ್ವೇಚ್ಛಾ ಜಗತ್ತು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕಣ್ಣಿಗೆ ಕಾಣದ ಅಮಾನವೀಯ ಕುಲ , ಮತ , ಜಾತಿ , ಲಿಂಗ , ವರ್ಗ, ಸ್ವಾರ್ಥ, ದುರಾಸೆಗಳ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ. ಹಾಗಾಗಿ ಅವರು ಮನುಷ್ಯರು. ಎಲ್ಲವನ್ನೂ ಬಿಟ್ಟರೆ ಮಾತ್ರ ಅವರು ನಮ್ಮ 'ಎತ್ತರ' ಕ್ಕೆ ಬರುತ್ತಾರೆ, ನಮ್ಮಂತೆ ಹಾರುತ್ತಾರೆ, ಬುದ್ದಿಮಟ್ಟ ಕಡಿಮೆ ಇರುವವರೆಗೂ, ಮನುಷ್ಯರಲ್ಲಿ ಗಲಭೆಗಳು ಸದಾ ಇರುತ್ತವೆ". ಅಂತಾ ತಾಯಿ ಪರಿವಾಳ ಹೇಳಿತು.
.................................ಮಲ್ಲೇಶಯ್ಯ ಹೆಚ್.ಎಂ.
ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
******************************************