-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 24

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 24

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 24



            ನಮಸ್ತೆ ನನ್ನ ಪ್ರೀತಿಯ ಗೆಳೆಯ ಗೆಳತಿಯರಿಗೆ.... ನಾನು ಚೆನ್ನಾಗಿದ್ದೇನೆ. ಶಾಲಾರಂಭದ ಸಂಭ್ರಮ ಹೇಗಿತ್ತು.....? ಇದು 24 ನೆಯ ಪತ್ರ ಸಂಚಿಕೆ.. ಬರೆಸುತ್ತಿರುವುದು ನಿಮ್ಮ ಪ್ರೀತಿ..... ಮೊನ್ನೆಯ ಪತ್ರಕ್ಕೆ ಶ್ರಾವ್ಯ, ಶಿಶಿರ್, ಲಹರಿ, ಧೃತಿ, ಸ್ರಾನ್ವಿ, ಸ್ವರ,
ಉಮಾವತಿ, ಸಾತ್ವಿಕ್ ಗಣೇಶ್, ಶುಭಿಕ್ಷಾ, ಶೌರ್ಯ ಹಾಗೂ, ಹಿತಶ್ರೀ ಆಪ್ತವಾದ ನುಡಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆಯೂ ಎಲ್ಲರ ಮರುಪತ್ರಗಳು ನನ್ನಲ್ಲಿ ಭರವಸೆ.. ಸ್ಫೂರ್ತಿಯನ್ನು ತುಂಬಿವೆ. ಬರೆಯುತ್ತಿರುವ... ಓದುತ್ತಾ ಮನಸ್ಸಿನಲ್ಲಿಯೇ ಸ್ಪಂದಿಸುತ್ತಿರುವ ನನ್ನ ಬಳಗಕ್ಕೆ ವಿಶೇಷ ನಮನಗಳು.
      ಕೊರೋನಾ ಸಾಂಕ್ರಾಮಿಕದ ಬಳಿಕ ಮೊದಲಿನಂತೆಯೇ, ಗೊಂದಲಗಳಿಲ್ಲದೆ ಬೇಗನೆ ಶಾಲೆ ಆರಂಭದವಾಗಿದೆ. ಆನ್ ಲೈನ್ ಗೋಳು ಇನ್ನಿಲ್ಲ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಗುತ್ತಿರುವುದು ನಮ್ಮ ಸೌಭಾಗ್ಯ!
     ಆನ್ ಲೈನ್ ಇಲ್ಲದ ಮಾತ್ರಕ್ಕೆ ಮೊಬೈಲ್ ಫೋನ್ ಬದಿಗಿಟ್ಟಿದ್ದೇವೆಯೇ...? ಇಲ್ಲ ಅಲ್ವಾ...?ಕೆಲವರು ಉಪಯೋಗಿವುದಿಲ್ಲ. ಇನ್ನು ಕೆಲವರು ಅದರೊಳಗಿನಿಂದ ಹೊರಬರಲಾರದೆ ಒದ್ದಾಡುತ್ತಿದ್ದಾರೆ....!
       ಅವನು ವಿದ್ಯಾವಂತ ದಂಪತಿಗಳ ಪ್ರತಿಭಾನ್ವಿತ ಮಗ... ಆರಂಭದಲ್ಲಿ ಆನ್ ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಫೋನ್ ಹಿಡಿದ.... ಮಾತು ಮರೆತ... ಮೌನಕ್ಕೆ ಜಾರಿದ ಈಗ ಅವನು ಸಮಸ್ಯಾತ್ಮಕ ಮಗು....! ಅವನನ್ನು ಮೊದಲಿನಂತಾಗಿಸಲು ಅಪ್ಪ ಅಮ್ಮ ತುಂಬಾ ಕಷ್ಟ ಪಡುತ್ತಿದ್ದಾರೆ. ಯಾಕೆ ಇಷ್ಟೊಂದು ಆಳಕ್ಕೆ ಫೋನ್ ಆಕ್ರಮಿಸಿಕೊಂಡಿದೆ. ಒಬ್ಬ ಮರವನ್ನು ಗಟ್ಟಿಯಾಗಿ ಅಪ್ಪಿಕೊಂಡು, ಯಾರಾದರೂ ನನ್ನನ್ನು ಕಾಪಾಡಿ.. ಮರ‌ ನನ್ನನ್ನು ಬಿಡುತ್ತಿಲ್ಲ‌ ಎಂದು ಅಸಹಾಯಕನಂತೆ ಕೂಗುತ್ತಿದ್ದನಂತೆ... ಆಗ ಆ ದಾರಿಯಲ್ಲಿ ಹೋಗುತ್ತಿದ್ದ ಮಹನೀಯರೊಬ್ಬರು ಅವನ‌ ಮೂರ್ಖತನಕ್ಕೆ ನಕ್ಕು... ಮರವನ್ನು ನೀನೇ ಬಿಡಬೇಕು ತಾನೇ....? ಎಂದಷ್ಟೇ ನುಡಿದು ಮುಂದೆ ಸಾಗಿದರು....!
      ಎಲ್ಲ ಅಪ್ಪ ಅಮ್ಮಂದಿರೂ ನಿಸ್ಸಹಾಯಕರು..! ನಮ್ಮದೇ ಅಂತಿರುವ ದಿನದ ಹಲವು ಗಂಟೆಗಳನ್ನು ಮೊಬೈಲ್ ಫೋನ್ ಆಕ್ರಮಿಸಿಕೊಂಡಿದೆ.....! ಅಗತ್ಯವೇ ಇಲ್ಲದಿದ್ದರೂ ಈ ಭ್ರಮೆಯೊಳಗೆ ಬಂಧಿಸಿಕೊಂಡಿದ್ದೇವೆ....! ಅನಿವಾರ್ಯವೆನಿಸುವ ಮಾಹಿತಿಯನ್ನು ಪಡೆದುಕೊಳ್ಳಲು ಮಾತ್ರ ಮಕ್ಕಳಿಗೆ ಮೊಬೈಲ್ ಫೋನ್ ಬೇಕಾದ್ದು....! ಆದರೆ ಎಷ್ಟೋ ಗೆಳೆಯ ಗೆಳತಿಯರು ಬೇಕು ಬೇಡಗಳೆಲ್ಲವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ನಮಗರಿವಿಲ್ಲದಂತೆ ವ್ಯವಸ್ಥೆಯೊಳಗಿನಿಂದ ದೂರ ಸರಿಯುತ್ತಿದ್ದೇವೆ...! ಬದುಕು ಬಹಳ‌ ಬೇಗ ಮುಗಿಯುತ್ತಿದೆ ಎಂದೆನಿಸುತ್ತಿದೆ...!ಬೇಕಾದಾಗಲೆಲ್ಲಾ ಮೊಬೈಲ್ ಫೋನ್ ಸಿಗಬಹುದು...! ದೂರ ಎಂದೆನಿಸಿದ ಪ್ರಪಂಚ ಅಂಗೈಗೆ ಬರಬಹುದು...! ಆದರೆ ಹತ್ತಿರವೆನಿಸಿಕೊಂಡ ನಮ್ಮವರು, ನಮ್ಮನ್ನೇ ಪ್ರಪಂಚ ಎಂದೆನಿಸಿಕೊಂಡ ಜೀವಗಳು... ದೂರ ಸರಿದಿರುತ್ತವೆ....! ಮರಳಿ ಬಾರದಷ್ಟು....!
          ಹೌದು...! ಯಾರದೋ ಉಪದೇಶದಿಂದ ಬದಲಾಯಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ... ಬದಲಾಗಬೇಕಾದರೆ ನಿನ್ನೊಳಗೆ ಆ ಅರಿವು ವಿಸ್ತಾರವಾಗಬೇಕು...! ಯೋಚನೆಗಳು ಪ್ರಬುದ್ಧವಾಗಿರಬೇಕು.
        ಸುಲಭ ಇದೆ. ಸಾಮಾನ್ಯವಾಗಿ ನಾವು ಸಮಯದ ಪರಿವೆಯೇ ಇಲ್ಲದೆ ಪೋನ್ ಕೈಗೆತ್ತಿಕೊಳ್ಳುತ್ತೇವೆ. ಆಗಾಗ online ಗೆ ಹೋಗ್ತಿರ್ತೇವೆ! ಹೀಗೊಂದು challenge ನಮಗೇ ಮಾಡಿಕೊಳ್ಳೋಣ. ದಿನದ ಇಷ್ಟು ಸಮಯ ಮಾತ್ರ ನಾನು ಫೋನ್ ಬಳಸುತ್ತೇನೆ ಅಥವಾ ಇಷ್ಟು ಗಂಟೆಯವರೆಗೆ ಫೋನ್ ನೋಡುವುದಿಲ್ಲ ಎಂದು ನಿರ್ಧರಿಸಿ. ಮುಂದಿನ ದಿನಗಳಲ್ಲಿ ಈ ಅವಧಿಗಳನ್ನು ಇನ್ನಷ್ಟು ದೀರ್ಘಗೊಳಿಸಿ. ಕ್ರಮೇಣ ಫೋನ್ ನಿಂದ ಹೊರಗಡೆ ಇದ್ದ ಸಮಯ ಆಪ್ತವಾಗುತ್ತಾ ಹೋಗ್ತದೆ.
    ನಿಮ್ಮಲ್ಲಿಯೂ ಯಾರಾದರೂ ಇಂತಹ ಗೀಳಿಗೆ ಪರಿಹಾರ ಕಂಡುಕೊಂಡಿರಲೂಬಹುದು. ಮನದ ಮಾತುಗಳನ್ನು ಪತ್ರ ರೂಪದಲ್ಲಿ ಹಂಚಿಕೊಳ್ತೀರಿ ಅಲ್ವಾ.....? 
      ಮೊನ್ನೆ ತಂಗಿ ಲಹರಿ, ಮರು ಬಳಕೆಯಾಗದ ಪೆನ್ನುಗಳನ್ನು ಏನು ಮಾಡಬಹುದು? ಎಂದು ಕೇಳಿದ ಪ್ರಶ್ನೆಗೆ ಜಗಲಿಯ ಗೆಳೆಯರ ಪತ್ರಗಳಲ್ಲಿಯೇ ಉತ್ತರವಿದೆ. craft ಮಾಡುವ ಮೂಲಕ ಅಲಂಕಾರಿಕವಾಗಿ ಬಳಸಿಕೊಂಡರೆ ಫೋನ್ ನಿಂದಲೂ ಹೊರಗಿರಬಹುದು ಅಲ್ವಾ?ಯೋಚನೆಗಳನ್ನು ಹಂಚಿಕೊಳ್ಳಿ.
     ಮುಂದಿನ‌ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article