
ಲೇಖನ : ಸ್ವಾಭಿಮಾನ
Thursday, March 24, 2022
Edit
ಸ್ವಾಭಿಮಾನ
----------------------
ಸ್ವಾಭಿಮಾನ ಎನ್ನುವಂತದ್ದು ಒಬ್ಬ ವ್ಯಕ್ತಿಯ ಯಶಸ್ಸಿಗೆ ಕಾರಣವಾಗುವ ಪ್ರಮುಖ ಗುಣ. ಸ್ವಾಭಿಮಾನ ಎಂದರೆ ತನ್ನ ಮೇಲೆ ತನಗೇ ಅಭಿಮಾನ ಮೂಡಿಸುವುದು. ತನ್ನ ಮೇಲೆ ಅಭಿಮಾನ ಮೂಡಬೇಕಾದರೆ ಅಂತಹ ಹಲವಾರು ಗುಣಗಳನ್ನು ರೂಢಿಸಿಕೊಳ್ಳಬೇಕು. ಸಮಯಪಾಲನೆ, ಶಿಸ್ತು, ಶುಚಿತ್ವ, ಹಿರಿಯರಿಗೆ , ಶಿಕ್ಷಕರಿಗೆ ಗೌರವಿಸುವ ಗುಣ, ಕ್ಲಪ್ತ ಸಮಯಕ್ಕೆ ಕೆಲಸ ಪೂರೈಸುವುದು, ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಇತರರಿಗೆ ಸಹಾಯ ಮಾಡುವುದು, ಇತರರಿಂದ ಆದಷ್ಟು ಕಡಿಮೆ ಸಹಾಯ ನಿರೀಕ್ಷಿಸುವುದು, ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುವುದು, ರಾಷ್ಟ್ರ ಪ್ರೇಮ , ದಿನಕ್ಕೊಂದಾದರೂ ಒಳ್ಳೆಯ ಕೆಲಸ ಮಾಡುವುದು ಹೀಗೆ ಪಟ್ಟಿ ಮಾಡಬಹುದು.....
ಸ್ವಾಭಿಮಾನಕ್ಕೆ ಒಂದು ಉತ್ತಮ ಉದಾಹರಣೆ ಕೌಶಿಕ್. ಈತ ಬಂಟ್ವಾಳದ ಎಸ್.ವಿ.ಎಸ್ ಪ್ರೌಢಶಾಲೆಯಲ್ಲಿ ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಪಾಸಾಗಿದ್ದಾನೆ. ವಿಶೇಷ ಎಂದರೆ ಈತನಿಗೆ ಊನದಿಂದಾಗಿ ಕೈಗಳಲ್ಲಿ ಬರೆಯಲು ಸಾದ್ಯವೇ ಇಲ್ಲ. ಸ್ವಾಭಿಮಾನದಿಂದಾಗಿ ಕೊರಗಲಿಲ್ಲ. ಕಾಲಿನಿಂದ ಬರೆಯಲು ಪ್ರಯತ್ನಿಸಿ ಯಶಸ್ಸು ಕಂಡ. ಕೈಯಲ್ಲಿ ಬರೆದಷ್ಟೇ ಸುಂದರವಾಗಿದೆ ಅಕ್ಷರಗಳು. ಇದಷ್ಷೇ ಅಲ್ಲ, ಕರಕುಶಲ ವಸ್ತುಗಳ ತಯಾರಿ, ಚಿತ್ರಕಲೆ ಎಲ್ಲವೂ ಕಾಲಿನಿಂದಲೇ. ಸ್ವಾಭಿಮಾನಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೇನಿದೆ....?
ಕೊರೋನಾದ ಒಂದು ದೊಡ್ಡ ದುಷ್ಪರಿಣಾಮ ಎಂದರೆ ವಿದ್ಯಾರ್ಥಿಗಳಿಗೆ ಬರೆಯುವ ಕೌಶಲ್ಯದಿಂದ ವಂಚಿತರಾಗಿರುವುದು. ವಿದ್ಯಾರ್ಥಿಗಳು ಕೌಶಿಕ್ ನಿಂದ ಪ್ರೇರಣೆ ಪಡೆಯಬೇಕು.
ವಿದ್ಯಾರ್ಥಿಗಳೇ, ನಮಗೆ ಭಗವಂತ ಕೈ, ಕಾಲು, ಕಣ್ಣು, ಕಿವಿ ಮೂಗು ಇತ್ಯಾದಿ ಅವಯವಗಳನ್ನು ಸರಿಯಾಗಿಯೇ ನೀಡಿದ್ದಾನೆ.ಇವನ್ನೆಲ್ಲಾ ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡುವುದು ಕಷ್ಟವೇನಲ್ಲ. ನಾವೆಲ್ಲಾ ಸ್ವಾಭಿಮಾನದ ಸಂಕಲ್ಪ ಮಾಡಿ ಗುರಿ ಸಾಧಿಸೋಣ...
ಸತತ ಅಧ್ಯಯನ , ಅಭ್ಯಾಸಗಳಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡವ ಛಲ ಹೊಂದಿರಬೇಕು. ಪೋಷಕರು, ಶಿಕ್ಷಕರು ತಮ್ಮ ಮೇಲೆ ಇಟ್ಟಿರುವ ಅಭಿಲಾಷೆಗಳಿಗೆ ಮಾರ್ಕ್ಸು ಗಳಿಸಿ ತೋರಿಸಬೇಕು. ಆಗ ಸ್ವಾಭಿಮಾನದ ಅರ್ಥ ಈಡೇರುತ್ತದೆ. ಸಮುದಾಯ ನಮ್ಮನ್ನು ಗೌರವಿಸುತ್ತದೆ.
ಮಕ್ಕಳೇ, ಸತತ ಪರಿಶ್ರಮ ಹಾಗೂ ಪ್ರಯತ್ನಗಳಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ. ನಿಮ್ಮ ಹೆತ್ತವರ ಮುಖದಲ್ಲಿ ಸಂತೃಪ್ತಿಯ ನಗೆಯನ್ನು ಹರಿಸಿ. ನಿಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸ್ವಾಭಿಮಾನ ಗೆಲ್ಗೆ..!!
........................................... ರಾಧಾಕೃಷ್ಣ ಭಟ್
ಮುಖ್ಯೋಪಾಧ್ಯಾಯರು
ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ
ಪೊಳಲಿ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************