-->
ಅಕ್ಕನ ಪತ್ರಕ್ಕೆ ಮಕ್ಕಳ  ಉತ್ತರ :  ಸಂಚಿಕೆ - 1

ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 19ಕ್ಕೆ 
ಮಕ್ಕಳ ಉತ್ತರ 
ಸಂಚಿಕೆ - 1 

            ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ  ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ  ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ  ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ  ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಮಕ್ಕಳ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........  



       ನಮಸ್ತೆ ಅಕ್ಕ, ನಾನು ಶ್ರಾವ್ಯ..... ಈ ಬಾರಿ ನಿಮ್ಮ ಕಿವಿ ಮಾತು ಸರಿಯಾದ ಸಮಯಕ್ಕೆ ಸರಿಯಾಗಿ ನಮ್ಮನ್ನು ತಲುಪಿದೆ. ಎಲ್ಲರೂ ಶೈಕ್ಷಣಿಕ ಪರೀಕ್ಷೆಯ ಅಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲ, ಪರಿಶ್ರಮ, ಶ್ರದ್ಧೆ ಇವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವ ಮುನೀಬಾಳ ಜೀವನದ ಕಥೆಯ ಮೂಲಕ , ನಮಗೆ ನೀವು ನೀಡಿರುವ ಕಿವಿಮಾತು ಸ್ಫೂರ್ತಿದಾಯಕವಾಗಿದೆ. ಅನಾರೋಗ್ಯ ಪೀಡಿತರಾಗಿದ್ದ ಮುನಿಬಾಳಂತಹ ಎಷ್ಟೋ ವ್ಯಕ್ತಿಗಳು ಎಂತೆಂಥ ಸಾಧನೆ ಮಾಡಿರುವಾಗ, ನಾವು ಎಲ್ಲಾ ಸರಿ ಇದ್ದು ನಾವೇಕೆ ಏನಾದರೂ ಸಾಧಿಸ ಬಾರದು ಎನ್ನುವ ಹುರುಪು ನಮ್ಮಲ್ಲಿ ಮೂಡಿಸುತ್ತದೆ. ಸದ್ಯಕ್ಕೆ ನಮ್ಮ ಮುಂದಿರುವ ಗುರಿ ಶೈಕ್ಷಣಿಕ ಪರೀಕ್ಷೆಯನ್ನು ಎದುರಿಸುವುದು. ಈ ಬಾರಿ ಧೈರ್ಯದಿಂದ ಪರೀಕ್ಷೆ ಎದುರಿಸುವ ಬಗ್ಗೆ ಗಮನಹರಿಸೋಣ. ಸೋಲು ಶಾಶ್ವತವಲ್ಲ , ಗೆಲುವು ಸುಲಭವಲ್ಲ , ಎಂಬ ನಿಮ್ಮ ಕಿವಿಮಾತು ಸದಾನೆನಪಲ್ಲಿ ಇಟ್ಟುಕೊಳ್ಳುತ್ತೇವೆ. ಶೈಕ್ಷಣಿಕ ಪರೀಕ್ಷೆ ಎದುರಿಸುತ್ತಿರುವ ಎಲ್ಲರಿಗೂ ಶುಭಾಶಯ ತಿಳಿಸುತ್ತಿದ್ದೇನೆ. ಧನ್ಯವಾದ ಅಕ್ಕ ನಿಮ್ಮ ಸ್ಪೂರ್ತಿಯ ಮಾತುಗಳಿಗೆ. ನಿಮ್ಮ ಹಾರೈಕೆ ಸದಾ ನಮ್ಮ ಜೊತೆಗಿರಲಿ.... 
................................................. ಶ್ರಾವ್ಯ 
ಪ್ರಥಮ ಪಿ.ಯು.ಸಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



       ನಮಸ್ತೆ ಅಕ್ಕ , ನಾನು ಸಪ್ತಮಿ...... ನೀವು ಬರೆದ ಪತ್ರ ನನ್ನ ಮನಸನ್ನು ತಟ್ಟಿದೆ. ನಿಮ್ಮ ಪತ್ರವನ್ನು ಓದಿದ ನಂತರ ನನಗೆ ಅನಿಸುವುದೇನೆಂದರೆ, ದೇಶ, ಭಾಷೆ, ಪಂಗಡ,ಜಾತಿ ಇದನ್ನೆಲ್ಲ ಲೆಕ್ಕಿಸದೆ ನಾವು ಯೋಚನೆ ಮಾಡಬೇಕಾದ ವಿಷಯ "IRON LADY OF PAKISTAN" ಮುನೀಬಾ ಮಝಾರಿ ಅವರನ್ನು ನೋಡಿ ನಾವು ಇನ್ನಷ್ಟು ಕಲಿಯಬೇಕು. ಇವರ ಸಾಧನೆ ಎಲ್ಲಾ ಮಕ್ಕಳಿಗೂ ಸ್ಫೂರ್ತಿಯಾಗಬೇಕು. ಯಾವುದೇ ಸಂದರ್ಭದಲ್ಲೂ ಕಷ್ಟ ಬಂದಾಗ ಧೃತಿಗೆಡಬಾರದು. ಅದನ್ನು ಎದುರಿಸುವ ತಾಳ್ಮೆ ನಮ್ಮಲ್ಲಿರಬೇಕು. ಬೆನ್ನು ಮೂಳೆ, ಕಾಲುಗಳು ಹಾಗೂ ದೇಹದ ಇನ್ನೂ ಕೆಲವು ಅಂಗಗಳು ಸರಿಪಡಿಸಲಾಗದ ಗಂಭೀರ ಸ್ಥಿತಿಗೆ ತಲುಪಿ, ಜೀವನ ಪೂರ್ತಿ ಹಾಸಿಗೆಯಲ್ಲಿ ಮಲಗಿಕೊಂಡೆ ಕಳೆಯಬೇಕಾಗಿರುವ ಸಂದರ್ಭದಲ್ಲೂ ಸಹ ಛಲ ಬಿಡದೆ ಸಾಧನೆ ಮಾಡಿದ ಶ್ರೇಷ್ಠ ಮಹಿಳೆ ಇವರು. ಗಂಡನಿಗೆ ವಿಚ್ಛೇದನ ನೀಡಿ ಸಹ ಒಬ್ಬಂಟಿಯಾಗಿ ಯಾರ ಸಹಾಯವೂ ಇಲ್ಲದೆ ಜೀವನದಲ್ಲಿ ಹೋರಾಡಿದ ನಾರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್. ಸಾಧನೆ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ನಾವೇ ಆ ಸಾಧನೆ ಅನ್ನು ಹುಡುಕಿಕೊಂಡು ಹೋಗಬೇಕು, ಎಲ್ಲ ಮನುಷ್ಯರಿಗೂ ಅವರದೇ ಆದ ಟ್ಯಾಲೆಂಟ್ ಇದ್ದೆ ಇರುತ್ತೆ , ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. "ಮುನೀಬಾ ಮಝಾರು" ಇವರ ಕಿರು ಪರಿಚಯದಿಂದ ನಾನು "ಸಾಧಕರಿಗೆ ಅಸಾದ್ಯವೆಂಬುವುದು ಯಾವುದು ಇಲ್ಲ ಅದರೆ ಸಾಧಿಸುವ ಛಲ ಇರಬೇಕು" ಎಂಬುವುದನ್ನು ಅರಿತುಕೊಂಡಿದ್ದೇನೆ.
.......................... ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ 
ಬೈಂದೂರು ತಾಲೂಕು , ಉಡುಪಿ ಜಿಲ್ಲೆ
****************************************



ಪ್ರೀತಿಯ ಅಕ್ಕನಿಗೆ ಸ್ರಾನ್ವಿಯ ನಮಸ್ಕಾರ, 
        ನಾವು ಕ್ಷೇಮ ಅಕ್ಕ , ಪರೀಕ್ಷೆಯ ತಯಾರಿ ಚೆನ್ನಾಗಿ ನಡೆಯುತ್ತಿದೆ, ಆದರೆ ಕೊರೊನಾದಿಂದಾಗಿ ಪಾಠಗಳು ತಡವಾಗಿ ಪ್ರಾರಂಭವಾದುದರಿಂದ ಸ್ವಲ್ಪ ಕಷ್ಟವಾಯಿತು, ಅಕ್ಕ ನಿಮ್ಮ ಪತ್ರ ಓದಿದೆ, ಅಕ್ಕ ನೀವು ಹೇಳಿದ್ದು ಸರಿ, ನಮಗೂ ದೊಡ್ಡವರನ್ನು ನೋಡುವಾಗ ನಾವು ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸ ಸಿಕ್ಕಿ ಸ್ವತಂತ್ರವಾಗಿ ಬದುಕಬೇಕೆಂದಿನಿಸುತ್ತದೆ,
ಆದರೆ ಐರನ್ ಲೇಡಿ ಆಪ್ ಪಾಕಿಸ್ತಾನ ಎಂದು ಕರೆಸಿಕೊಳ್ಳುವ ಮುನೀಬಾ ಮಝಾರಿಯ ಅವರ ಕಥೆ ಓದಿ ಏನನಿಸಿತೆಂದರೆ ಅವರ ಜಾಗದಲ್ಲಿ ಬೇರಾರದರೂ ಇದ್ದರೆ ಹಣೆಬರಹ ಇಷ್ಟೇ ಎಂದು ಸುಮ್ಮನಾಗುತ್ತಿದ್ದರು. ಆದರೆ ಅವರು ಛಲ ಬಿಡದ ತ್ರಿವಿಕ್ರಮನಂತೆ ಚಿತ್ರ ಕಲಾವಿದೆ ಯಾಗಬೇಕೆಂಬ ಕನಸನ್ನು ಮಲಗಿದಲ್ಲಿಯೇ ಮುಂದುವರಿಸಿದರು. ಚಿತ್ರಗಳಿಗೆ ಮಾತ್ರವಲ್ಲದೆ ಅವರ ಬದುಕಿಗೂ ಬಣ್ಣ ತುಂಬಿದರು, ಬೇರಾರದರೂ ಆಗಿದ್ದರೆ ನನ್ನಿಂದ ಇನ್ನು ಏನು ಮಾಡಲಿಕ್ಕೂ ಆಗದು ಎಂದು ಸುಮ್ಮನಾಗುತ್ತಿದ್ದರು, ವ್ಹೀಲ್ ಚೇರಲ್ಲೇ ಕುಳಿತುಕೊಂಡೇ ಪ್ರಪಂಚಾನೇ ಸುತ್ತಿದ್ದಾರೆ, ಟಿವಿ ಶೋಗಳನ್ನು ನಡೆಸಿಕೊಟ್ಟದ್ದಾರೆ, ಇವೆಲ್ಲಾ ಕೇಳುವಾಗ ಇದೆಲ್ಲಾ ಸಾಧ್ಯಾನಾ ಅನಿಸುತ್ತೆ. ಆದರೆ ಮುನೀಬಾ ಅವರು ಒಂದು ಸೋಲಿನಿಂದ ಹತಾಶರಾಗದೆ ಛಲದಿಂದ ಬದುಕುವ ಪಣ ತೊಟ್ಟರು, ಅಕ್ಕ ನೀವು ಹೇಳಿದಂತೆ ನಾವು ಕೂಡ  ಯಾವುದೇ ಸೋಲಿಗೆ ಧ್ಯೆರ್ಯಗೆಡದೆ ಯಾವ ಸೋಲು ಶಾಶ್ವತ ಅಲ್ಲ, ಅಂತ ಭಾವಿಸಿ ಛಲದಿಂದ ಮುಂದೆ ಹೆಜ್ಜೆಯಿಡುತ್ತೇವೆ. ಇಷ್ಟೆಲ್ಲಾ ಒಳ್ಳೆಯ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ಅಕ್ಕ....
.............................................. ಸ್ರಾನ್ವಿ ಶೆಟ್ಟಿ 
8 ನೇ ತರಗತಿ 
ಓಂ ಜನ ಹಿತಾಯ ಇಂಗ್ಲೀಷ್ 
ಮೀಡಿಯಂ ಶಾಲೆ, ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



         ನಮಸ್ತೇ ಅಕ್ಕ. ನಾನು ಬಿಂದು ಶ್ರೀ ..... ನಮ್ಮ ಪರೀಕ್ಷೆಗಳಿಗೆ ಇನ್ನು ಸ್ವಲ್ಪ ದಿನಗಳು ಬಾಕಿ ಇವೆ. ಆ ದಿನ, ಸಮಯವನ್ನು ಹಾಳು ಮಾಡದೇ ಕಲಿಯಬೇಕು. ಪರೀಕ್ಷೆಯ ತಯಾರಿಗಳು ಆಗುತ್ತಿದೆ ಅಕ್ಕ. ನೀವು ಹೇಳಿದ ಆ ಮುನಿಬಾ ರ ಕಥೆ ಕೇಳಿ ಏನೋ ನನ್ನಲಿ ಕೂಡ ಅಂತಹ ಛಲ, ಏನೋ ಸಾಧನೆ ಮಾಡಬೇಕು ಎನ್ನುವ ಆಸೆ. ಅವರ ಛಲ ನನಗೆ ತುಂಬಾ ಇಷ್ಟ ಆಯಿತು. ಅವರ ಆಸೆ ನೆರವೇರಿತು. ಆದರೆ ಅವರಿಗೆ ತುಂಬಾ ಕಷ್ಟ ಆಗಿರಬಹುದು ಆದರೂ ಅದನ್ನು ಲೆಕ್ಕಿಸದೆ ಅವರ ಪ್ರಯತ್ನ ನನಗೆ ತುಂಬಾ ಖುಷಿ ತಂದಿತು. ನೀವು ಹೇಳಿದ ಹಾಗೆ ನಮಗೂ ಶ್ರಮ ಅನ್ನುವುದು ಇರಬೇಕು. ಧನ್ಯವಾದಗಳು ಅಕ್ಕ.                           
................................................ ಕೆ ಬಿಂದುಶ್ರೀ
10ನೇ ತರಗತಿ
ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ , 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



     Hi ಅಕ್ಕ ನಾನು ನಿಮ್ಮೆಲ್ಲರ ಪ್ರೀತಿಯ ಮಕ್ಕಳ ಜಗಲಿಯ ಬರಹಗಾರ್ತಿ ಶೌರ್ಯ.ಎಸ್.ವಿ.
ನೀವು ಪ್ರತೀ ಸಂಚಿಕೆಯಲ್ಲೂ ಒಳ್ಳೊಳ್ಳೆ ವಿಷಯ ತಿಳಿಸಿದ್ದೀರಿ. ಈ ಸಂಚಿಕೆಯಲ್ಲಿ ಕೂಡ ಒಳ್ಳೆಯ ವಿಷಯ ತಿಳಿಸಿದ್ದೀರಿ. ಈ ಸಂಚಿಕೆಯಲ್ಲಿ ನಮಿಗೆ ಅಂದರೆ, ಪರೀಕ್ಷೆ ಬರೆವ ಎಲ್ಲಾ ಮಕ್ಕಳಿಗೆ ಒಳ್ಳೆಯ ವಿಷಯ ತಿಳಿಸಿದ್ದೀರಿ. ಪರೀಕ್ಷೆ ಅಂದಾಗ ಎಲ್ಲಾ ಮಕ್ಕಳು ಭಯಪಡುತ್ತಾರೆ. ಅದ್ರಲ್ಲೂ sa 2 ಪರೀಕ್ಷೆ ಅಂದಾಗ ಎಲ್ಲಾ ಮಕ್ಕಳು ಭಯಪಡುತ್ತಾರೆ. ನಾವು ಕಷ್ಟ ಪಟ್ಟು ಓದಿದರೆ, ಫಲ ಸಿಕ್ಕೇ ಸಿಗುತ್ತೆ. ನಾವು ಪ್ರಪಂಚದಲ್ಲಿ ಏನು ಬೇಕಾದ್ರೂ ಆಗಬಹುದು, ಹೇಳಕ್ಕಾಗಲ್ಲ. ಪ್ರಯತ್ನ ನಮ್ಮದು, ಫಲ ದೇವರದ್ದು. ಎನ್ನುತ್ತಾ ನನ್ನ ಪುಟ್ಟ ಅನಿಸಿಕೆಗೆ ಪೂರ್ಣವಿರಾಮ ವಿಡುತಿದ್ದೇನೆ. ಒಳ್ಳೆಯ ವಿಷಯ ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು ಅಕ್ಕಾ..
........................................ಶೌರ್ಯ .ಎಸ್ . ವಿ.  
7 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕನ್ಯಾಡಿ - 2 ಧರ್ಮಸ್ಥಳ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************

  

        ಹಾಯ್... ಅಕ್ಕ ನಾನು ಧನ್ಯಶ್ರೀ. ನೀವು ಎಲ್ಲಾ ಸಂಚಿಕೆಯಲ್ಲೂ ನಮಗೆ ಒಳ್ಳೆಯ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದೀರಿ. ಇವತ್ತು ನೀವು ಪರೀಕ್ಷೆಯ ಬಗ್ಗೆ ತಿಳಿಸಿದ್ದೀರಿ. ಪರೀಕ್ಷೆ ಎಂದರೆ ಎಲ್ಲರಿಗೂ ಭಯ. ನಾವು ಕಷ್ಟ ಪಟ್ಟು ಓದಿದರೆ ಅದರ ಪ್ರತಿಫಲ ನಮಗೆ ಸಿಗುತ್ತದೆ. ಪರೀಕ್ಷೆ ಚೆನ್ನಾಗಿ ಬರೆಯಬೇಕೆಂದರೆ ಟೀಚರ್ ನವರು ಪಾಠ ಮಾಡುವಾಗ ಗಮನವಿಟ್ಟು ಕೇಳಿಕೊಳ್ಳಬೇಕು. ನಾವು ಎಷ್ಟು ಕಷ್ಟ ಪಟ್ಟು ಓದಿರುತ್ತೇವೆಯೋ ಅಷ್ಟು ನಮಗೆ ಚೆನ್ನಾಗಿ ಮಾರ್ಕ್ ಸಿಗುತ್ತದೆ. ಪ್ರಯತ್ನ ಪಟ್ಟರೂ ಫಲ ಸಿಕ್ಕೇ ಸಿಗುತ್ತದೆ ಅಂತ ಹೇಳುತ್ತ... ನನ್ನ ಈ ಪುಟ್ಟ ಅನಿಸಿಕೆಯನ್ನು ಬರೆಯುತ್ತಿದ್ದೇನೆ. ಈ ವಿಷಯವನ್ನು ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ...
................................................... ಧನ್ಯಶ್ರೀ 
 7 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕನ್ಯಾಡಿ - 2 , ಧರ್ಮಸ್ಥಳ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



      ನಮಸ್ತೇ........ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
        ನಿಮ್ಮ ಪತ್ರವನ್ನು ಓದಿದೆನು. "ಮುನೀಬಾ" ಅವರ ಕಥೆ ಯನ್ನು ಓದಿದಾಗ ಸೋಲು ಯಾವಾಗಲೂ ಶಾಶ್ವತವಲ್ಲ. ಅವರು ಅಷ್ಟು ಕಷ್ಟ ಬಂದರೂ ಧೈರ್ಯ ಮತ್ತು ಛಲವನ್ನು ಬಿಡದೆ ಅವರು ಬುದ್ಧಿಯನ್ನು ಉಪಯೋಗಿಸಿ ಒಳ್ಳೆಯ ಕಲಾವಿದರು ಆದರು. ಹಾಗೆಯೇ ನಾವು ಕೂಡ ಚಿಕ್ಕಚಿಕ್ಕ ಪರೀಕ್ಷೆಗಳಲ್ಲಿ ಸೋತರೂ ನಾವು ಬೇಸರಪಡದೆ ಶ್ರಮಪಟ್ಟು ಸಾಧನೆ ಮಾಡಬೇಕು ಆಗ ನಮಗೂ ಕೂಡ ಗೆಲುವು ಖಂಡಿತ ಎಂಬುದನ್ನು ತಿಳಿದುಕೊಳ್ಳಬಹುದು.
     ಧನ್ಯವಾದಗಳು ಅಕ್ಕಾ,
.........................................ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



       ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ಈ ಪತ್ರವನ್ನು ಓದುವಾಗ ನನಗೆ ತುಂಬಾ ಅದ್ಭುತವೆನಿಸಿತು. ಮುನೀಬಾ ಅವರು ನೋವನ್ನು ಹಿಂದೆ ಮಾಡಿ ಮುನ್ನುಗ್ಗುವ ಛಲ ನನಗೆ ತುಂಬಾ ಇಷ್ಟವಾಯಿತು. ಇಷ್ಟು ನೋವನ್ನು ತಡೆದುಕೊಂಡು ಗುರಿಯನ್ನು ಸಾಧಿಸುವುದು ತುಂಬಾ ಕಷ್ಟದ ಕೆಲಸ. ದೇವರು ನಮಗೆ ಒಳ್ಳೆಯ ಆರೋಗ್ಯ ನೀಡಿರುವಾಗ ನಾವು ಹೀಗೆ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬಹುದು. ಇದನ್ನು ಓದುವಾಗ ನನಗೆ ' ಮನಸ್ಸಿದ್ದರೆ ಮಾರ್ಗ ' ಎಂಬ ಮಾತು ನೆನಪಾಗುತ್ತದೆ. ಈಗ ವಿದ್ಯಾರ್ಥಿಗಳಾದ ನಮ್ಮ ಗುರಿ ಚೆನ್ನಾಗಿ ಕಲಿಯುವುದು. ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಮುಂದೆ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ನನ್ನದಾಗಿದೆ. ಈ ವಿಷಯವನ್ನು ತಿಳಿಸಿ ಕೊಟ್ಟ ಅಕ್ಕನಿಗೆ ಧನ್ಯವಾದಗಳು.
........................................... ಸಾನ್ವಿ ಸಿ.ಎಸ್
ನಾಲ್ಕನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


      ಮಕ್ಕಳ ಜಗಲಿ ಅಕ್ಕನ ಪತ್ರ ಸಂಚಿಕೆ--- 19:
ಪ್ರೀತಿಯ ಅಕ್ಕನಿಗೆ ಲಹರಿ ಮಾಡುವ ನಮಸ್ಕಾರಗಳು.... ನೀವು ಹೇಳಿದ ಸ್ಫೂರ್ತಿದಾಯಕವಾದ ಕಥೆ ತುಂಬಾ ಚೆನ್ನಾಗಿತ್ತು.... ನಿಜವಾಗಿಯೂ ಮುನಿಬಾಳ ಕಥೆಯು ಅತ್ಯಂತ ರೋಚಕವಾದದ್ದು.... ಅಷ್ಟೊಂದು ದೇಹಾರೋಗ್ಯ ಸಮಸ್ಯೆಗಳಿದ್ದರೂ ಕೂಡ ತನ್ನಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ತನ್ನದೇ ದಾರಿಯಲ್ಲಿ ಸಾಧನೆಗೈಯುತ್ತಾ ಸಮಾಜಕ್ಕೆ ಮಾದರಿ ಆದಂತಹ ಮಹಿಳೆಯರ ಸಾಲಿಗೆ ಸೇರಿದರು. ಅದ್ಭುತ ಜೀವನಗಾಥೆ ಅವರದು. ಇಷ್ಟೊಂದು ಸ್ಪೂರ್ತಿದಾಯಕ ವಾದಂತಹ ಕಥೆಯನ್ನು ಹೇಳಿದ ನಿಮಗೆ ಧನ್ಯವಾದಗಳು ಅಕ್ಕ.... ನಿಜವಾಗಿಯೂ ನೀವು ಹೇಳುವಂತಹ ಕಥೆಗಳು ನಮಗೆ ತುಂಬಾ ಇಷ್ಟವಾಗುತ್ತವೆ ಅಕ್ಕ.... ನಮ್ಮಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿಸುತ್ತದೆ..... ನೀವಂದಂತೆ ಇಂತಹ ಕಥೆಗಳು ನಮಗೆ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಹಾಯಮಾಡುತ್ತವೆ. ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ..... ಧನ್ಯವಾದಗಳು ಅಕ್ಕ.
.............................................. ಲಹರಿ ಜಿ.ಕೆ.
ಏಳನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



         ನಮಸ್ತೆ ನಾನು ಧೀರಜ್... ಅಕ್ಕಾ... ಈ ವಾರದ ನಿಮ್ಮ ಪತ್ರ ಓದಿ ಸಂತೋಷವಾಯಿತು. ಎಕ್ಸಾಮ್ ನಡೀತಾ ಇದೆ ಅಕ್ಕ. ಆದರೂ ನಿಮ್ಮ ಪತ್ರ ಓದಿ ನನ್ನೊಳಗೆ ಏನೋ ಚೈತನ್ಯ ಭರವಸೆಯ ಬೆಳಕು ಮೂಡಿದೆ. ಬದುಕುವ ಛಲವಿದ್ದರೆ ಯಾವುದೇ ಸಮಸ್ಯೆ ಇದ್ದರೂ ಜೀವನದಲ್ಲಿ ಗೆಲ್ಲಬಹುದು ಅನ್ನೋದಿಕ್ಕೆ ನಿಮ್ಮ ಕಥೆಯೇ ಸ್ಫೂರ್ತಿ. ಎಲ್ಲಾ ನನ್ನ ಸಹಪಾಠಿಗಳಿಗೆ ಹೇಳುವುದೇನೆಂದರೆ ಪರೀಕ್ಷೆ ಫಲಿತಾಂಶ ನಮ್ಮ ಪ್ರಯತ್ನದ ಫಲ ಅದೊಂದೇ ಬದುಕನ್ನು ನಿರ್ಧರಿಸುವುದಿಲ್ಲ. ನಮ್ಮಲ್ಲಿ ಕನಸುಗಳ ರಾಶಿ ಇದೆ. ಧೈರ್ಯದಿಂದ ಮುನ್ನುಗ್ಗೋಣ ಸ್ನೇಹಿತರೆ. ಬದುಕುವ ಕಲೆ ನಮ್ಮಲ್ಲೇ ರೂಪಿಸಿಕೊಳ್ಳೋಣ. ಎಲ್ಲಾ ನನ್ನ ವಿದ್ಯಾರ್ಥಿ ಮಿತ್ರರಿಗೂ ಪರೀಕ್ಷೆ ಚೆನ್ನಾಗಿ ಮಾಡಿ ಒಳ್ಳೆ ಅಂಕ ತಗೊಳ್ಳಿ ಅಂತ ಮನಪೂರ್ವಕವಾಗಿ ಶುಭ ಹಾರೈಸುತ್ತೇನೆ. ಅಕ್ಕನ ಮುಂದಿನ ಪತ್ರಕ್ಕೆ ಕಾಯುತ್ತೇನೆ. ಧನ್ಯವಾದಗಳು
......................................... ಧೀರಜ್ ಕೆ ಆರ್ 
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ  
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



       ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ವಂದನೆಗಳು. ನಮ್ಮ ಮುಂದೆ ಮುನಿಬಾರಂತಹ ಎಷ್ಟೋ ಜನ ಕಾಣಲು ಸಿಗುತ್ತಾರೆ. ಆದರೆ ಮುನಿಬಾರಂತಹ ಛಲ, ಧೈರ್ಯ, ಧೃಡತೆ ಇರುವಂತಹ ಕೆಲವೇ ಕೆಲವು ಜನ ಕಾಣಲು ಸಿಗಬಹುದು.
ಇಂತಹ ಛಲ, ಧೈರ್ಯ ಇದ್ದಾಗ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ, ಸಮಾಜದ ಆಗುಹೋಗುಗಳ ಮಧ್ಯೆ ಸಾಧಿಸಿ ತೋರಿಸಬಹುದು. ಇಂಥವರ ಬದುಕು ನಮಗೂ ಸ್ಪೂರ್ತಿಯಾಗಲಿ. "ಮುಳುಗುವವನಿಗೆ ಹುಲುಕಡ್ಡಿ ಆಸರೆ" ಎಂಬ ಮಾತಿನಂತೆ ಇಂತಹ ನಮ್ಮೊಂದಿಗಿರುವ ವ್ಯಕ್ತಿಗಳಿಗೆ ಇದೊಂದು ಬದುಕಿನ ಆಸರೆಯಾಗಲಿ. ಅಂತಹ ವ್ಯಕ್ತಿಗಳಿಗೆ ದೇವರು ಒಳಿತನ್ನುಂಟುಮಾಡಲಿ.
             ಧನ್ಯವಾದಗಳೊಂದಿಗೆ
......................................... ವೈಷ್ಣವಿ ಕಾಮತ್
5ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ,  ಕಲ್ಲಡ್ಕ.
ಬಂಟ್ವಾಳ ತಾಲ್ಲೂಕು ದ.ಕ ಜಿಲ್ಲೆ.
****************************************

Ads on article

Advertise in articles 1

advertising articles 2

Advertise under the article