ಮನುಷ್ಯತ್ವ - ಕಥೆ
Friday, November 13, 2020
Edit
ಮನುಷ್ಯತ್ವ
ನನ್ನೊಳಗಿನ ನೈಜಕತೆ
ಇದು ಒಂದು ವರ್ಷದ ಹಿಂದಿನ ಘಟನೆ .ನಾನು ನನ್ನ ತಾಯಿ, ನನ್ನ ಅಜ್ಜಿ ಜೊತೆಗೆ ಮಂಗಳೂರಿನ ನನ್ನ ಚಿಕ್ಕಪ್ಪನ ಮಗುವಿನ ನಾಮಕರಣಕ್ಕೆ ಹೋಗಿದ್ದೇವು. ನಾವು ಹಿಂತಿರುಗಿ ಬರುವಾಗ , ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಾ ನಿಂತಿದ್ದೆವು. ಅಲ್ಲಿ ಬಸ್ಸಿನ ಬಗ್ಗೆ ವಿಚಾರಿಸಿದಾಗ ಇನ್ನೂ ಒಂದು ಗಂಟೆ ಲೇಟ್ ಆಗುತ್ತೆ ಎಂದರು .ನಾವು ಹಾಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಾ ನಿಂತಿದ್ದಾಗ, ಅಲ್ಲಿಗೆ ಐದಾರು ಕಾಲೇಜು ಹುಡುಗರು ಬಂದು ತಮಾಷೆ ಮಾಡುತ್ತಾ, ಹರಟೆ ಹೊಡೆಯುತ್ತಾ , ತಿಂಡಿ ತಿಂದು ಅಲ್ಲಿಯೇ ಕಸ ಹಾಕಿ,ಕಸದ ಬುಟ್ಟಿಯಲ್ಲಿ ಇದ್ದ ಕಸವನ್ನು ಚೆಲ್ಲಿ , ತುಂಬಾ ತುಂಟತನ ಮಾಡುತ್ತಿದ್ದರು. ನಾವು ಅವರನ್ನೇ ನೋಡುತ್ತಿದ್ದೆವು. ಅವರಲ್ಲಿ ಒಬ್ಬ ಹುಡುಗ ಹೇಳಿದ "ನೋಡಿ ಅಲ್ಲಿ ಒಬ್ಬ ಭಿಕ್ಷುಕ ಇದ್ದಾನೆ. ಅವನಿಗೆ ತಮಾಷೆ ಮಾಡೋಣ" . ಎಂದನು. ಅದಕ್ಕೆ ಉಳಿದವರು ಒಪ್ಪಿದರು . ಆ ಹುಡುಗ ಭಿಕ್ಷುಕನ ಬಳಿಗೆ ಹೋದನು. ಉಳಿದವರು ಬಸ್ ನಿಲ್ದಾಣದಲ್ಲಿ ನಿಂತು ಮೊಬೈಲ್ ಫೋನಿನಿಂದ ವೀಡಿಯೋ ಮಾಡುತ್ತಿದ್ದರು. ಆ ಹುಡುಗ ಭಿಕ್ಷುಕನ ಹತ್ತಿರ " ನನಗೆ ನೀರು ಬೇಕು, ನನಗೆ ತಲೆ ಸುತ್ತುತ್ತಿದೆ " ಎಂದನು. ಅದಕ್ಕೆ ಭಿಕ್ಷುಕ " ತಮ್ಮ ಇಲ್ಲಿ ಪಕ್ಕದಲ್ಲೇ ಒಂದು ಅಂಗಡಿ ಇದೆ.ಅಲ್ಲಿ ನೀರು ಸಿಗುತ್ತದೆ.ಅಲ್ಲಿ ಹೋಗಿ ನೀರು ತೆಗೆದುಕೊಂಡು ನಿನ್ನ ಆಯಾಸವನ್ನು ನೀಗಿಸಿಕೋ " ಎಂದನು..ಅದಕ್ಕೆ ಹುಡುಗ " ಇಲ್ಲ ನನ್ನಿಂದ ಸಾಧ್ಯವಿಲ್ಲ" ಎಂದು ಹೇಳಿ ಅಲ್ಲಿಯೇ ಬಿದ್ದು ಬಿಟ್ಟ. ಆಗ ಭಿಕ್ಷುಕ ಹುಡುಗನನ್ನು ಎತ್ತಿ ನಿಲ್ಲಿಸಿ, ತನ್ನ ಭುಜದ ಮೇಲೆ ಆತನ ಕೈಯನ್ನು ಹಾಕಿ, ಆತನನ್ನು ಅಂಗಡಿಯವರೆಗೆ ಕರೆದುಕೊಂಡು ಹೋಗಿ, ತನ್ನ ಹಣದಲ್ಲೇ ಆತನಿಗೆ ನೀರು ಮತ್ತು ಹಣ್ಣುಗಳನ್ನು ಕೊಡಿಸಿದ.ಆಗ ಆ ಹುಡುಗ ಆಶ್ಚರ್ಯಪಟ್ಟು ಭಿಕ್ಷುಕನ ಹತ್ತಿರ " ಕ್ಷಮಿಸಿ ಸರ್. ನಿಮ್ಮನ್ನು ತಮಾಷೆಗಾಗಿ ಈ ರೀತಿ ನಾಟಕ ಮಾಡಿದೆ .ಆದರೆ ನೀವು ನಿಮ್ಮ ನಿಜವಾದ ಮನುಷ್ಯತ್ವ ಗುಣವನ್ನು ತೋರಿಸಿದ್ದೀರಿ ! .ದಯವಿಟ್ಟು ನನ್ನನು ಕ್ಷಮಿಸಿ ಬಿಡಿ" ಎಂದನು. ಅದಕ್ಕೆ ಭಿಕ್ಷುಕ " ಪರವಾಗಿಲ್ಲ ತಮ್ಮ, ನೀನು ಈಗ ಸಂತೋಷದಿಂದ ಹೋಗು. ಆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ " ಎಂದು ಹರಸಿದರು. ನಂತರ ಹುಡುಗ ಮತ್ತು ಆತನ ಸ್ನೇಹಿತರು ಬಿಕ್ಷುಕನಲ್ಲಿ ಕ್ಷಮೆ ಕೇಳಿ, ತಾವು ಅಲ್ಲಿ ಚೆಲ್ಲಿದ ಕಸವನ್ನು ಕಸದ ಬುಟ್ಟಿಗೆ ಹಾಕಿ, ತಾವು ಮಾಡಿದ ತಪ್ಪಿಗೆ ತಲೆಬಾಗಿ ತಮ್ಮ ತಮ್ಮ ಮನೆಗೆ ಹೋದರು. ನನಗೆ ಆ ಘಟನೆ ಎಂದೂ ಮರೆಯಲಾಗದು . ಎಲ್ಲರೂ ಹೀಗೆ ತಪ್ಪನ್ನು ತಿದ್ದಿ ನಡೆದರೆ ಒಳ್ಳೆಯದಲ್ಲವೇ?.
ನೀತಿ:-ಅಂತರಂಗದಲ್ಲಿ ಮನುಷ್ಯತ್ವ ಇಲ್ಲದಿದ್ದಾಗ ಯಾವ ಸಂಪತ್ತು, ಶ್ರೀಮಂತಿಕೆಯಿಂದಲೂ ನಿಜವಾದ ಮನುಷ್ಯರಾಗಲು ಸಾಧ್ಯವಿಲ್ಲ .
ಬರಹ:: ಪ್ಲವಿನ ಮಿನೇಜಸ್
9 ನೇ ತರಗತಿ
ಸರಕಾರಿ ಪ್ರೌಢ ಶಾಲೆ, ದರೆಗುಡ್ಡೆ. ತಾ// ಮೂಡಬಿದ್ರೆ,ದ. ಕನ್ನಡ