ಪಯಣ : ಸಂಚಿಕೆ - 45 (ಬನ್ನಿ ಪ್ರವಾಸ ಹೋಗೋಣ)
Friday, May 30, 2025
Edit
ಪಯಣ : ಸಂಚಿಕೆ - 45 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಉಡುಪಿ ಜಿಲ್ಲೆಯ ಪ್ರಕೃತಿ ಸೌಂದರ್ಯದ "ವಾಲಿಕುಂಜ ಸಸ್ಯಕಾಶಿ" ಗೆ ಪಯಣ ಮಾಡೋಣ ಬನ್ನಿ....
ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ ವಾಲಿಕುಂಜ ಎಂಬ ಮನಮೋಹಕ ತಾಣ ಇದೆ. ಇಲ್ಲಿ ಚಾರಣ ಮಾಡಬೇಕಾದರೆ, ಒಂದು ಕಡೆಯಿಂದ ಕಾರ್ಕಳ ರೇಂಜ್, ಇನ್ನೊಂದು ಕಡೆಯಿಂದ ಚಿಕ್ಕಮಗಳೂರು ರೇಂಜ್ ಸಿಗುತ್ತದೆ. ಯಾವುದೇ ಕಡೆಯಿಂದ ಚಾರಣ ಮಾಡಬಹುದು.
ಚಾರಣ ಮಾಡುವ ಮೊದಲು ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ದುಡ್ಡು ಕೊಟ್ಟು ಅನುಮತಿ ಪಡೆಯಬೇಕು. ಬೇಕಾದ್ರೆ ಗೈಡ್ ಕೂಡ ಸಿಗುತ್ತಾರೆ. ಇಲ್ಲಿ ಚಾರಣ ಮಾಡುವಾಗ ಖುಷಿ ಕೊಡೋದು ಅಗಾಧ ಸಸ್ಯಕಾಶಿ. ನಡಿಗೆಯುದ್ದಕ್ಕೂ ಹಕ್ಕಿಗಳ ಚಿಲಿಪಿಲಿ, ನೂರಾರು ಸಸ್ಯಪ್ರಭೇದಗಳಿಗೆ ಆಸರೆ ನೀಡಿದ ಅಪರೂಪದ ಘಟ್ಟವಿದು.
ಬೆಟ್ಟ ಹತ್ತುವಾಗ ದಾರಿ ಮಧ್ಯೆ ಸ್ವರ್ಣಾ ನದಿ ಸೇರುವ ಪುಟ್ಟದೊಂದು ಝರಿ ಸಿಗುತ್ತದೆ. ಸುಸ್ತಾದರೆ ಅಲ್ಲೇ ಬಾಯಾರಿಸಿಕೊಳ್ಳಬಹುದು. ಬೆಟ್ಟ ಹತ್ತೋಕೆ ಕನಿಷ್ಠ ನಾಲ್ಕು ಗಂಟೆಗಳು ಬೇಕಾಗುತ್ತದೆ. ಆದರೆ ಸಸ್ಯಕಾಶಿಯನ್ನು ನೋಡಿ ಖುಷಿಪಡುತ್ತಾ ಟ್ರೆಕ್ಕಿಂಗ್ ಮಾಡುವುದು ಕಷ್ಟದ ಕೆಲಸವಲ್ಲ. ವಾತಾವರಣವೂ ತಂಪಾಗಿರುತ್ತದೆ. ಬೆಂಗಳೂರಿನಂಥ ಕಾಂಕ್ರಿಟ್ ಊರಲ್ಲಿದ್ದವರಿಗೆ ಅಲ್ಲಿನ ವನ್ಯರಾಶಿ, ಹಸಿರು, ವಾತಾವರಣ, ಪಕ್ಷಿ ಪ್ರಪಂಚ ಎಲ್ಲವೂ ಮುದ ನೀಡುವುದಂತೂ ಖಂಡಿತ.
ವಾಲಿ ಮೂರು ಸಮುದ್ರಗಳಲ್ಲಿ ಮೂರು ಹೊತ್ತು ಸೂರ್ಯದೇವನಿಗೆ ಅರ್ಘ್ಯ ನೀಡುತ್ತಿದ್ದನಂತೆ. ಹಾಗೇ ಆತ ಇದೇ ಬೆಟ್ಟದ ತುದಿಯಿಂದ ಸಮುದ್ರಕ್ಕೆ ಹಾರುತ್ತಿದ್ದನಂತೆ, ಹಾಗಾಗಿ, ಈ ಹೆಸರು ಬಂತು ಎನ್ನುತಾರೆ ಸ್ಥಳೀಯರು. ಬೆಟ್ಟದ ಮೇಲೆ ಬೃಹತ್ ಆಕಾರದಲ್ಲಿ ಪಾದಗಳನ್ನು ಹೋಲುವ ಎರಡು ಕೆತ್ತನೆಗಳಿವೆ. ಅದಕ್ಕೆ ವಾಲಿಪಾದ ಎನ್ನುತ್ತಾರೆ. ಈ ಸ್ಥಳದ ಸಮೀಪ ನಿಮಗೆ ಸೂಜಿಗುಡ್ಡ, ನಾಯಿಬೇರು ಗುಡ್ಡ, ರಕ್ಕಸಪಾದೆ, ಬಂಗಾರಗುಡ್ಡ, ಪೆದಿಕಲ್ಲು, ಸಿರಿಗುಂಡಿ, ಶಿರ್ಲಾಲು ಹಳ್ಳ ಮುಂತಾದ ಪ್ರೇಕ್ಷಣೀಯ ಹಾಗೂ ವೀಕ್ಷಣೀಯ ಸ್ಥಳಗಳಿವೆ.
ಮಾರ್ಗ : ಕಾರ್ಕಳದ ಅಜೆಕಾರಿನಿಂದ ಹೆಬ್ರಿ ನಡುವೆ ಮುನಿಯಾಲಿನಿಂದ ಬಲಬದಿಗೆ ಹೋದರೆ ಮುಟ್ಟುಪಾಡಿ ಸಿಗುತ್ತದೆ. ಕಾರ್ಕಳದಿಂದ ಮುಟ್ಟುಪಾಡಿಗೆ 25 ಕಿ.ಮೀ., ಹೆಬ್ರಿಯಿಂದ 25 ಕಿ.ಮೀ. ಇದೆ. ಮುಟ್ಟುಪಾಡಿಯಲ್ಲಿರುವ ಅರ್ಧನಾರೀಶ್ವರ ದೇವಾಲಯದಿಂದ ಮೂರು ಕಿ.ಮೀ. ದೂರದಲ್ಲಿರುವ ಬೃಹತ್ ಬೆಟ್ಟವೇ ವಾಲಿಕುಂಜ.
"ಬೆಟ್ಟಗಳ ಸಾಲು, ಹಸಿರ ಮಡಿಲು, ಜಲಧಾರೆಯ ಕಲರವ, ಪ್ರಾಣಿ - ಪಕ್ಷಿಗಳ ನಡೆದಾಟ, ಚಾರಣಿಗರ ಸ್ವರ್ಗದಂತಿರುವ ವಾಲಿಕುಂಜ ಒಂದು ಅದ್ಭುತ ಸಸ್ಯಕಾಶಿಯೇ ಆಗಿದೆ" ಬನ್ನಿ ಒಮ್ಮೆ....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************