-->
ಭತ್ತ ಬೆಳೆಯುವ ಗದ್ದೆಯಲ್ಲಿ ಒಂದು ದಿನ - ಬರಹ : ಅಭಿನವ್ ರಾಜ್ ಎನ್ ಪಟ್ಟೆ, 7ನೇ ತರಗತಿ

ಭತ್ತ ಬೆಳೆಯುವ ಗದ್ದೆಯಲ್ಲಿ ಒಂದು ದಿನ - ಬರಹ : ಅಭಿನವ್ ರಾಜ್ ಎನ್ ಪಟ್ಟೆ, 7ನೇ ತರಗತಿ

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 08
ಲೇಖನ : ಭತ್ತ ಬೆಳೆಯುವ ಗದ್ದೆಯಲ್ಲಿ ಒಂದು ದಿನ
ಬರಹ : ಅಭಿನವ್ ರಾಜ್ ಎನ್ ಪಟ್ಟೆ
7ನೇ ತರಗತಿ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


    

       ಕಳೆದ ಗುರುವಾರ ಸಂಜೆ ನಮ್ಮ ಶಾಲೆಯಿಂದ ಕುಳದ ಪಾರೆಯಲ್ಲಿರುವ ಭತ್ತದ ಗದ್ದೆಗೆ ಮುಂದಿನ ಬುಧವಾರ ಹೋಗಲಿಕ್ಕಿದೆ ಎಂದು ಹೇಳಿದ್ದರು.. ಆಗ ನಾನು ಹೋಗಬೇಕೆಂದು ತೀರ್ಮಾನಿಸಿದೆ. 
      ಬುಧವಾರ ಬಂತು. ಬೆಳಗ್ಗೆ ನಾನು ಐದು ಗಂಟೆಗೆ ಎದ್ದೆ. ಮತ್ತೆ ಯೋಗ ಮಾಡಿದೆ. ತಿಂಡಿ ತಿಂದು ಕೆಸರುಗದ್ದೆಗೆ ಹೋಗಲು ತಯಾರಾದೆ. ಬಸ್ಸು 15 ನಿಮಿಷ ಮೊದಲು ಬರುತ್ತದೆ ಎಂದು ಮೆಸೇಜ್ ಕಳುಹಿಸಿದ್ದರು. ಅದಕ್ಕೆ ನಾನು ಮಾಮೂಲು ಬರುವ ಸಮಯಕ್ಕಿಂತ 15 ನಿಮಿಷ ಮೊದಲೇ ಮನೆಯ ಕೆಳಗೆ ಇರುವ ರಸ್ತೆಯ ಪಕ್ಕ ಹೋದೆ. ಆದರೆ ಬಸ್ಸು ಬರುವಾಗ ಸ್ವಲ್ಪ ತಡವಾಯಿತು. ನಾನು ಬಸ್ಸು ಹೋಗಿರಬಹುದು ಎಂದು ಯೋಚಿಸಿ ಬೇಸರದಿಂದ ಮನೆಗೆ ಹೋಗಲು ತಯಾರಾದೆ. ಅಷ್ಟರಲ್ಲಿ ನಮ್ಮ ಶಾಲೆಯ ಬಸ್ಸು ಬಂತು. ನಾನು ಖುಷಿಯಿಂದ ಬಸ್ ಹತ್ತಿದೆ. ನನ್ನ ಗೆಳೆಯರು ಬಸ್ಸಿನಲ್ಲಿ ಕುಳಿತಿದ್ದರು. ನಾನು ಅವರ ಬಳಿ ಹೋಗಿ ಕುಳಿತು ಮಾತನಾಡಲು ಪ್ರಾರಂಭಿಸಿದೆ. ಬಸ್ಸು ಕುಳದ ಪಾರೆಗೆ ಹೋಗುವ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿತು. ಒಬ್ಬರು ಹೇಳಿದರು "ಇಲ್ಲಿ ಹೋಗಲು ಸಾಧ್ಯವಿಲ್ಲ ನೀವು ಇನ್ನೊಂದು ದಾರಿಯಲ್ಲಿ ಹೋಗಿ" ಎಂದು. ಅದಕ್ಕೆ ನಮ್ಮ ಡ್ರೈವರ್ ಇನ್ನೊಂದು ದಾರಿಯಲ್ಲಿ ಬಸ್ಸು ತೆಗೆದುಕೊಂಡು ಹೋದರು. ನಾವು ಕುಳದಪಾರೆಗೆ ತಲುಪಿದೆವು. 
    ಅಲ್ಲಿ ನಮ್ಮನ್ನು ಕುಳಿತುಕೊಳ್ಳಲು ಹೇಳಿದರು. ತೆಂಗಿನ ಸಿಂಗಾರ ಅರಳಿಸಿ ಉದ್ಘಾಟಿಸಿದರು. ಅಲ್ಲಿ ಆ ಮನೆಯ ಯಜಮಾನರು ಮಾತನಾಡಿದರು. ಇನ್ನೊಬ್ಬ ಅತಿಥಿಗಳು ಆಟಿ ತಿಂಗಳ ಬಗ್ಗೆ ಮಾತನಾಡಿ, ಆ ತಿಂಗಳ ಮಹತ್ವದ ಬಗ್ಗೆ ನಮಗೆ ತಿಳಿಸಿದರು. ಹಾಗೂ ಒಬ್ಬ ಅಜ್ಜಿ ನಮಗೆ ಓಬೇಲೆ ಹಾಡನ್ನು ಹೇಳಿಕೊಟ್ಟರು. ನನಗೆ ತುಂಬಾ ಖುಷಿಯಾಯಿತು. ಭತ್ತದ ಗದ್ದೆಗೆ ಹಾಲು ಎರೆಯುವ ಮೂಲಕ ಪೂಜೆ ಸಲ್ಲಿಸಿದರು. 
   ಭತ್ತದ ಗದ್ದೆಗೆ ಇಳಿಯುವಾಗ ನಮಗೆ ಆ ಮನೆಯ ಯಜಮಾನರು ಗದ್ದೆಯೊಳಗೆ ಒಂದು ಸುತ್ತು ಓಡಲು ಹೇಳಿದರು. ನಾವೆಲ್ಲರೂ ಅವರ ಆಣತಿಯಂತೆ ಓಡುತ್ತಾ ಬೀಳುತ್ತಾ ಬೇರೆಯವರನ್ನು ಬೀಳಿಸುತ್ತಾ ಓಡಿದೆವು. ಅದನ್ನು ನಾನೆಂದೂ ಮರೆಯಲಾರೆ. ನಂತರ ನಾವು ಕೆಸರು ಗದ್ದೆಗೆ ಆಡಲು ಹೋದೆವು. ಅಲ್ಲಿ ನಮಗೆ ಹಲವಾರು ಆಟಗಳಿದ್ದವು.  
     ಹಗ್ಗ ಜಗ್ಗಾಟ, ಓಟ ಮುಂತಾದ ಸ್ಪರ್ಧೆಗಳಿದ್ದವು. ನಾವೆಲ್ಲರೂ ಶಿಕ್ಷಕರ ಮೇಲೆ ಕೆಸರು ನೀರು ಹಾಕುತ್ತಿದ್ದೆವು. ಶಿಕ್ಷಕರು ಕೂಡ ನಮ್ಮ ಮೇಲೆ ಕೆಸರು ನೀರು ಹಾಕುತ್ತಿದ್ದರು. ಒಬ್ಬ ಶಿಕ್ಷಕರು ನನ್ನನ್ನು ಓಡಿಸಿ ನನ್ನ ಮೇಲೆ ಮಣ್ಣು ಹಾಕಿದ್ದಾರೆ. ನಾನು ಕೂಡ ಅವರ ಮೇಲೆ ಹಾಕಿದ್ದೇನೆ. ನನಗೆ ತುಂಬಾ ಮಜಾ ಬಂತು. ನಾವೆಲ್ಲರೂ ಶಿಕ್ಷಕರನ್ನು ಓಡಿಸುತ್ತಾ ಬೀಳಿಸುತ್ತಾ ಮಣ್ಣು ಹಾಕುತ್ತಾ ಆಡಿದೆವು. ಹಾಗೂ ಕೆಲವು ಶಿಕ್ಷಕರನ್ನು ಬೀಳಿಸಲು ಹೋಗಿ ಅವರು ನಮ್ಮನ್ನು ಬೀಳಿಸಿದರು. ಶಿಕ್ಷಕರು ಕೆಸರೆರಚಬೇಡಿ ಎಂದು ಹೇಳಿದರೂ ನಾವು ಬಿಡಲಿಲ್ಲ. ಕೆಸರು ನೀರು ಎರಚುತ್ತಿದ್ದೆವು. ಆದರೆ ಈ ಕೆಸರೆರಚಾಟ ಯಾರಿಗೂ ಕೋಪ ತರಿಸಲಿಲ್ಲ ನಗು ನಗುತ್ತಲೇ ಸ್ವೀಕರಿಸಿದೆವು.